ಮೀನಿಗೊಂದು ಮಿನಿ ಜಾತ್ರೆ
ಇನ್ನೇನು ತಿಂಗಳಲ್ಲಿ ಮಳೆಗಾಲ ಆರಂಭ. ಮಳೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಪ್ರಸಿದ್ಧ ಅಘನಾಶಿನ ನದಿ ಹಿನ್ನೀರಿನಲ್ಲಿ ಮೀನುಗಾರರ ಸಂಭ್ರಮ. ಎಲ್ಲೆಲ್ಲೂ ಹಬ್ಬದ ವಾತಾವರಣ. ಅದುವೇ ಮೀನಿನ ಹಬ್ಬ, ಇದೊಂದು ಮಿನಿ (ಸಣ್ಣ) ಜಾತ್ರೆಯಂತೆ ಗೋಚರಿಸುತ್ತದೆ. ರೈತರಿಗೆ ಗಜನಿ (ನದಿಯಂಚಿನ ಹೆಚ್ಚುವರಿ ಭೂಮಿ) ಬಿಟ್ಟುಕೊಡುವಾಗ ಮೀನು ಗುತ್ತಿಗೆದಾರರು ವರ್ಷಕ್ಕೊಮ್ಮೆ ನಡೆಸುವ ಸಾಮೂಹಿಕ ದಿನವಿದು. ಗೋವಾ ಮುಂತಾದ ರಾಜ್ಯಗಳಿಗೆ ವರ್ಷ ಪೂರ್ತಿ ರಫ್ತಾಗುವ ಅಘನಾಶಿನಿ ಹಿನ್ನೀರು ಪ್ರದೇಶದ ರುಚಿಕರ ಗಜನಿ ಮೀನು, ಸಿಗಡಿ, ಏಡಿಗಳ ಬೃಹತ್ ಪ್ರಮಾಣದ ಉತ್ಪಾದನೆಯ ಹಿಂದೆ ಸ್ವಾರಸ್ಯಕರ ಕತೆಯೇ ಇದೆ. ಶಿರಸಿ, ಸಿದ್ದಾಪುರ ಹಾಗೂ ಕುಮಟಾ ತಾಲ್ಲೂಕು ಸೇರಿ ಸುಮಾರು 60–70 ಕಿಲೋ ಮೀಟರ್ಗಳಷ್ಟು ದೂರ ಹರಿದು ಬಂದು ಅಘನಾಶಿನಿ ಎಂಬ ಊರಿನಲ್ಲಿ ಸಮುದ್ರ ಸೇರುವ ಅಘನಾಶಿನಿ ನದಿ ಹಿನ್ನೀರು ಪ್ರದೇಶ ಸೃಷ್ಟಿಸುತ್ತದೆ. ಅಘನಾಶಿನಿ ಹರಿದು ಬರುವ ಮಾರ್ಗ ದಟ್ಟ ಅರಣ್ಯ, ಕಣಿವೆ, ಜಲಪಾತ ಆಗಿರುವ ಕಾರಣ ಅದು ತನ್ನ ಜೊತೆ ತರುವ ತರಗೆಲೆ, ಕಸ, ಕಡ್ಡಿ ಮುಂತಾದವು 4 ಸಾವಿರ ಹೆಕ್ಟೇರ್ನಷ್ಟು ಹಿನ್ನೀರು ಪ್ರದೇಶದಲ್ಲಿ ಬೆಳೆಯುವ ಮತ್ಸ ಸಂಕುಲಕ್ಕೆ ಆಹಾರವಾಗುತ್ತದೆ. ಇಲ್ಲಿ ಬೆಳೆಯುವ ಕಗ್ಗ ಭತ್ತದ ಕೊಯಿಲು ಮುಗಿದ ನಂತರ ಹುಲ್ಲಿನ ಭಾಗ ಗಜನಿಯಲ್ಲಿಯೇ ಉಳಿಯುವುದರಿಂದ ಅವು ವಿಶೇಷವಾಗಿ ಸಿಗಡಿಗೆ ಆಹಾರವೂ ಹೌದು. ಮಳೆಗಾಲ ಆರಂಭವಾದ ನಂತರ ರೈತ...