ಜಾತಿ ಸಂವಾದ : ಜಾತಿ ಏಕೆ? ಜಾತಿ ಬೇಕೆ? ನಗರ ಸೇರಿ ಬೆಳೆದ ಜಾತಿ
ಡಾ. ಸಿ.ಜಿ. ಲಕ್ಷ್ಮೀಪತಿ ಡಾ. ಸಿ.ಜಿ. ಲಕ್ಷ್ಮೀಪತಿ ಸಮಾಜಶಾಸ್ತ್ಜ್ಞ ಜಾತಿ ಪದ್ದತಿಯು ನಗರಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕುತೂಹಲಕಾರಿಯಾದುದು. ಆಧುನಿಕೋತ್ತರ ಕಾಲಘಟ್ಟದಲ್ಲಿ ಭಾರತದ ಜಾತಿವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳದ ಹೊರತು ನಗರಗಳ ಜಾತಿಸ್ವರೂಪವನ್ನು ಗ್ರಹಿಸುವುದು ಕಷ್ಟ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣ ಹಾಗೆಯೇ 1990 ರ ನಂತರದ ಜಾಗತೀಕರಣ ಮತ್ತು ಖಾಸಗೀಕರಣ ಅಪಾರ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಿದೆ. ಭಾರತದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಜಾತಿಯ ಸ್ವರೂಪವನ್ನು ಮತ್ತಷ್ಟು ಸಂಕೀರ್ಣ ಗೊಳಿಸಿದೆ. ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ಹೋಗಲಾಡಿಸಿ ವಿಸ್ತಾರವಾದ ಏಕರೂಪಿಯಾದ ಧರ್ಮದ ಅಡಿಗೆ ಸಮಾಜವನ್ನು ತರುವ ಸಾಧ್ಯತೆ ಬೌದ್ಧ, ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮಗಳ ಪ್ರವೇಶದ ಸಂದರ್ಭದಲ್ಲಿ ಇದ್ದವು. ಆದರೆ ಬಹುತೇಕ ನಗರ ಹಿನ್ನೆಲೆಯಲ್ಲಿ ಉಳಿದು ಬೆಳೆದ ಈ ಧರ್ಮಗಳು ಜಾತಿ ವ್ಯವಸ್ಥೆಯನ್ನೇ ತನ್ನದಾಗಿಸಿಕೊಂಡು ತಾನೇ ಬಹುರೂಪಿ ಸ್ವರೂಪವನ್ನು ಪಡೆದುಕೊಂಡಿವೆ. ಜಾತಿಯನ್ನು ಕುರಿತು ಎಲ್ಲ ಪ್ರದೇಶಗಳಿಗೂ ಅಂದರೆ ನಗರ, ಗ್ರಾಮ, ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುವ ಸಾಮಾನ್ಯವಾದ ಒಂದು ವಿವರಣೆಯನ್ನು ನೀಡಲು ಸಾಧ್ಯವಿಲ್ಲ. ಅದರಲ್ಲೂ ಭಾರತದಲ್ಲಿ ನಗರ ಗ್ರಾಮಗಳ ಬದುಕಿನ ಕ್ರಮದಲ್ಲಿ ತೀವ್ರವಾದ ಅಂತರ ಬೆಳೆದಿದೆ....