ಸತ್ಯ, ವಿಶ್ವಾಸಾರ್ಹತೆ, ಧಿಮಾಕು… ಹೀಗೊಂದು ಪದ ಮೆಲುಕು !


ಇತ್ತೀಚೆಗೆ ಮಹಾತ್ಮ ಗಾಂಧಿಯವರು ತಾವೇ ಸಂಪಾದಿಸುತ್ತಿದ್ದ ‘ಯಂಗ್ ಇಂಡಿಯಾ’ ಪತ್ರಿಕೆಯ ಹಳೆಯ ಸಂಚಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದೆ. ನಿಮಗೆ ಗೊತ್ತಿರಬಹುದು, ಗಾಂಧೀಜಿ ಸಹ ಪತ್ರಕರ್ತರಾಗಿದ್ದರು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಅವರು ಆರು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು ಹಾಗೂ ಆ ಎಲ್ಲ ಪತ್ರಿಕೆಗಳಿಗೂ ಅವರು ತಪ್ಪದೇ ಬರೆಯುತ್ತಿದ್ದರು. ಯಂಗ್ ಇಂಡಿಯಾ, ಹರಿಜನ, ಇಂಡಿಯನ್ ಒಪಿನಿಯನ್, ಹರಿಜನ ಬಂಧು (ಗುಜರಾತಿ), ಹರಿಜನಸೇವಕ (ಹಿಂದಿ) ಹಾಗೂ ನವಜೀವನ ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದರು.
ಗಾಂಧೀಜಿಯವರು ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಬರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೀರ್ಘ ಕಾಲ ಪ್ರವಾಸ ಮಾಡಬೇಕಾಗುತ್ತಿತ್ತು. ಆದರೂ ಅವರು ಸಂಪಾದಿಸುತ್ತಿದ್ದ ಪತ್ರಿಕೆ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಪ್ರಯಾಣದ ಸಮಯದಲ್ಲಿ ತಾವು ಬರೆಯಬೇಕಾದ ಲೇಖನಗಳು, ಸಂಪಾದಕೀಯವನ್ನು ಅವರು ಡಿಕ್ಟೇಟ್ ಮಾಡುತ್ತಿದ್ದರು. ತಮ್ಮಿಂದಾಗಿ ಪತ್ರಿಕೆ ತಡವಾಗಿ ಪ್ರಕಟವಾಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ.
ಅದಿರಲಿ, ನಾನು ಹೇಳಬೇಕೆಂದಿದ್ದು ಇದಲ್ಲ. ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಅವರು ತಮಗೆ ಇಷ್ಟವಾದ ಎರಡು ಪದಗಳ ಕುರಿತು ಬರೆದ ಒಂದು ಪುಟ್ಟ ಲೇಖನ ನನ್ನ ಗಮನ ಸೆಳೆಯಿತು. ತೀರಾ ಸಹಜವಾದ, ಆದರೆ ಕುತೂಹಲ ಹುಟ್ಟಿಸುವ ಬರಹವದು. ಗಾಂಧೀಜಿಗೆ ಇಷ್ಟವಾದ ಆ ಎರಡು ಪದಗಳು ಯಾವವು? ಮೊದಲನೆಯದು Truth (ಸತ್ಯ) ಹಾಗೂ ಎರಡನೆಯದು Credibility (ವಿಶ್ವಾಸಾರ್ಹತೆ)
ಗಾಂಧೀಜಿ ಬರೆಯುತ್ತಾರೆ- ‘ಎಲ್ಲರಿಗೂ ಒಂದೊಂದು ಪದ ಇಷ್ಟವಾಗುತ್ತದೆ. ಅದಕ್ಕೆ ಕಾರಣವೂ ಇರುತ್ತದೆ. ಯಾರೇ ಆಗಲಿ, ಯಾವುದಾದರೂ ಒಂದು ಪದವನ್ನು ಕಾರಣವಿಲ್ಲದೇ, ಸುಮ್ಮನೆ ಇಷ್ಟಪಟ್ಟಿರುವುದಿಲ್ಲ. ಆ ಪದ ಅವರಲ್ಲಿ ಒಂದಷ್ಟು ಯೋಚನೆ, ಚಿಂತನೆಯನ್ನು ಮೂಡಿಸಿರುತ್ತದೆ. ಆ ಪದದಲ್ಲಿ ತಮ್ಮ ವ್ಯಕ್ತಿತ್ವದ ಒಂದಂಶವನ್ನು ಕಾಣಲು ಪ್ರಯತ್ನಿಸಿರುತ್ತಾರೆ. ಆ ಪದ ಅವರ ಮೇಲೆ ಗಾಢ ಪ್ರಭಾವ ಬೀರಿರುತ್ತದೆ. ಈ ಕಾರಣದಿಂದ ಆ ಪದವನ್ನು ಇಷ್ಟಪಡುತ್ತಾರೆ. ನನಗೆ ಬುದ್ಧಿ ಬಂದಾಗಿನಿಂದಲೂ ಈ ಎರಡು ಪದಗಳು ಅಷ್ಟಾಗಿ ಆಕರ್ಷಿಸಿರಲಿಲ್ಲ. ಆದರೆ ಇತ್ತೀಚೆಗೆ ಈ ಪದಗಳ ಸೆಳೆತ ವಿಪರೀತವಾಗಿದೆ. ನನ್ನ ಜೀವನ ಹಾಗೂ ಹೋರಾಟದಲ್ಲಿ ಈ ಪದಗಳ ಪ್ರಭಾವ ದಟ್ಟವಾಗಿ ನನ್ನನ್ನು ಆವರಿಸಿದೆಯೆಂದು ಮನವರಿಕೆಯಾಗಿದೆ.’
ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿಯವರು ಸಹ ಇತ್ತೀಚಿನ ಪತ್ರಿಕಾ ಸಂದರ್ಶನದಲ್ಲಿ ತಮಗೆ ಇಷ್ಟವಾಗುವ ಪದವೆಂದರೆ ಕ್ರೆಡಿಬಿಲಿಟಿ (ವಿಶ್ವಾಸಾರ್ಹತೆ) ಎಂದು ಹೇಳಿದ್ದು ನೆನಪಾಗುತ್ತಿದೆ.
ನಾನು ಯಾವತ್ತೂ ನಮ್ಮ ಸಂಪಾದಕ ಮಂಡಳಿ ಸಭೆಯಲ್ಲಿ, ಬ್ಯೂರೋ ಸಹೋದ್ಯೋಗಿಗಳ ಮೀಟಿಂಗ್‌ಗಳಲ್ಲಿ ಕಳೆದ ಹನ್ನೆರಡು ವರ್ಷಗಳಿಂದ, ಈ ‘ವಿಶ್ವಾಸಾರ್ಹತೆ’ ಪದದ ಪ್ರಸ್ತಾಪ ಮಾಡದೆ ಮೀಟಿಂಗ್ ಮುಗಿಸಿದ ನಿದರ್ಶನಗಳಿಲ್ಲ. ಪತ್ರಕರ್ತನಾದವನಿಗಂತೂ ಕ್ರೆಡಿಬಿಲಿಟಿ ಬಹಳ ಮುಖ್ಯ. ಅದೇ ಅವನ ಅಸಲಿಯತ್ತು. ಅದೊಂದು ಇರದೇ, ಆತ ಅದೆಷ್ಟೇ ಚೆನ್ನಾಗಿ ಬರೆಯಲಿ, ಆ ಬರಹಕ್ಕೆ ಕಿಮ್ಮತ್ತು ಇಲ್ಲ. ಜನ ನಂಬುವುದಿಲ್ಲ, ಮನ್ನಣೆ ಕೊಡುವುದಿಲ್ಲ. ಅದು ಅಕ್ಷರ ಹಾದರವಾದೀತು. ಕ್ರೆಡಿಬಿಲಿಟಿಯ ಪ್ರಸ್ತಾಪ ಬಂದಾಗಲೆಲ್ಲ ನೆನಪಿಗೆ ಬರುತ್ತಿದ್ದವರು ಗಾಂಧೀಜಿ. (ಅವರು ತಮ್ಮ ಆತ್ಮಕತೆಗೆ The story of my experiments with truth ಎಂದು ಹೆಸರಿಟ್ಟರು. ಅಲ್ಲಿಯೂ ಅವರಿಗೆ ಸತ್ಯಾನ್ವೇಷಣೆಯೇ ಮುಖ್ಯವಾಗಿತ್ತು.)
ನಾನು ನನ್ನ ಸಹೋದ್ಯೋಗಿ ಮಿತ್ರರಿಗೆ ಹೇಳುತ್ತಿದ್ದ ಮಾತು ಅದೇ. ಗಾಂಧೀಜಿಯವರು ಸಂಪಾದಕರಾಗಿದ್ದ ಆ ಎಲ್ಲ ಆರು ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ಒಟ್ಟು ಸೇರಿಸಿದರೆ ಹತ್ತು ಸಾವಿರ ಸಹ ಆಗುತ್ತಿರಲಿಲ್ಲ. ಈ ಆರು ಪತ್ರಿಕೆಗಳ ಪೈಕಿ ಜನಪ್ರಿಯವಾಗಿದ್ದ ‘ಯಂಗ್ ಇಂಡಿಯಾ’ ಹಾಗೂ ‘ಹರಿಜನ’ ಪ್ರಸಾರ ಸಂಖ್ಯೆ ತಲಾ ಎರಡೂವರೆ ಸಾವಿರಕ್ಕಿಂತ ಹೆಚ್ಚಿರಲಿಲ್ಲ. ಆದರೆ ಗಾಂಧೀಜಿ ಏನೇ ಬರೆಯಲಿ, ಇಡೀ ದೇಶಕ್ಕೆ ಗೊತ್ತಾಗುತ್ತಿತ್ತು. ಅವರ ಬರಹದ ಸಂದೇಶ ದೇಶವಾಸಿಗಳಿಗೆ ತಲುಪುತ್ತಿತ್ತು. ಅವರ ವಿಚಾರಗಳನ್ನು ಕೇಳಲು ಇಡೀ ದೇಶ ಕಾತರದಿಂದ ಕಾಯುತ್ತಿತ್ತು. ಗಾಂಧೀಜಿಗೆ ಪತ್ರಿಕೆಯ ಪ್ರಸಾರದ ಸಂಖ್ಯೆಗಿಂತ ಕ್ರೆಡಿಬಿಲಿಟಿ ಬಹಳ ಮುಖ್ಯವಾಗಿತ್ತು. ಪತ್ರಕರ್ತರಾದವರಿಗೆ ಈ ಪ್ರಜ್ಞೆ ಮನಸ್ಸಿನಲ್ಲಿ ಕಾಡುತ್ತಿದ್ದರೆ, ಬರಹವೊಂದೇ ಅಲ್ಲ, ವ್ಯಕ್ತಿತ್ವವೂ ನೇರವಾಗಿರುತ್ತದೆ.
ಗಾಂಧೀಜಿ ಆ ಬರಹವನ್ನು ಹೀಗೆ ಮುಗಿಸುತ್ತಾರೆ-ಪ್ರತಿ ಬರಹಗಾರನೂ ಕ್ರೆಡಿಬಿಲಿಟಿ ಬಹಳ ಮುಖ್ಯವೆಂದು ಭಾವಿಸಿ ಬರೆದರೆ ಅವನ ಬರಹ ಅವನಿಗರಿವಿಲ್ಲದಂತೆ ಮಹತ್ವ ಪಡೆಯುತ್ತದೆ. ಕ್ರೆಡಿಬಿಲಿಟಿ ಇಲ್ಲದೇ ನೀವೇನೇ ಮಾಡಿ ಅದಕ್ಕೆ ಸಮ್ಮತಿ ಇರುವುದಿಲ್ಲ. ವ್ಯಕ್ತಿಯಾಗಿಯೂ ನಾನು ನಿರಂತರ ಈ ಕ್ರೆಡಿಬಿಲಿಟಿಗಾಗಿ ಹೋರಾಡುತ್ತೇನೆ. ಈ ಎಚ್ಚರವೇ ನನ್ನನ್ನು ಸತ್ಯ (truth)ದ ಹುಡುಕಾಟದಲ್ಲಿ ತೊಡಗಿಸಿದೆ. ಅಷ್ಟಕ್ಕೂ ನಮ್ಮ ಹೋರಾಟ, ಅಸ್ತಿತ್ವವಿರುವುದೇ ಈ ವಿಶ್ವಾಸಾರ್ಹತೆಯನ್ನು ಗಿಟ್ಟಿಸುವ, ಕಾಪಾಡುವ ನಿರಂತರ ಪ್ರಯತ್ನದಲ್ಲಿ ಎಂಬುದು ನನಗೆ ಮನದಟ್ಟಾಗಿದೆ. ಈ ಕಾರಣದಿಂದ ನನಗೆ ಸತ್ಯ ಹಾಗೂ ವಿಶ್ವಾಸಾರ್ಹತೆ ಪದಗಳೆಂದರೆ ಇಷ್ಟ.’
ಗಾಂಧೀಜಿ ಇಷ್ಟಪಟ್ಟಂತೆ, ನಿಮಗೂ ಕೆಲವು ಪದಗಳು ಇಷ್ಟವಾಗಬಹುದು. ಸಹಜವಾಗಿ, ಉದ್ದೇಶಪೂರ್ವಕವಾಗಿ ಈ ಪದಗಳನ್ನು ನೀವು ಆಗಾಗ ಪದೇ ಪದೆ ಬಳಸಬಹುದು. ಇದು ಕ್ರಮೇಣ ಆ ಪದದೊಂದಿಗೆ ಒಂದು ರೀತಿಯ Obsession ಆಗಿ, ಮೋಹವಾಗಿ ಕಾಡಲಾರಂಭಿಸುತ್ತದೆ. ಆ ಪದದೊಂದಿಗೆ ನಿಮಗೆ ಗೊತ್ತಿಲ್ಲದ ಹಾಗೆ ಮೈತ್ರಿ ಬೆಳೆಯುತ್ತದೆ. ವಿನಾಕಾರಣ ನೀವು ಅದನ್ನು ಪ್ರೀತಿಸಲಾರಂಭಿಸುತ್ತೀರಿ, ಬಳಸಲಾರಂಭಿಸುತ್ತೀರಿ. ಅಷ್ಟಕ್ಕೂ ಪದಗಳೆಂದರೆ ಬರೀ ಅಕ್ಷರಗಳಲ್ಲ. ನಮ್ಮ ವಿಚಾರಗಳನ್ನು ಅವುಗಳ ಒಳಗೇ ಇಡಬೇಕು ತಾನೆ?
ನನಗೆ ಇತ್ತೀಚೆಗೆ ಆಸಕ್ತಿ ಮೂಡಿಸಿದ ಪದವೆಂದರೆ audacity ಈ ಪದದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಬಳಿಕ ಗೊತ್ತಾಗಿದ್ದೇನೆಂದರೆ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಗೂ ಈ ಪದವೆಂದರೆ ಇಷ್ಟ ಎಂಬುದು. ಒಬಾಮ ಈ ಪದವನ್ನು ಬಳಸಿ ಒಂದು ಪುಸ್ತಕವನ್ನು ಸಹ ಬರೆದಿದ್ದಾರೆ. The Audacity of Hope ಎಂಬುದು ಅದರ ಹೆಸರು. ಅವರು ಆಗಾಗ ಈ ಪದವನ್ನು ಬಳಸುತ್ತಾರೆ. ಇಸ್ರೇಲಿನ ಅಧ್ಯಕ್ಷ ಸೈಮನ್ ಪೆರೇಸ್ ಅವರಿಗೂ ಈ ಪದವೆಂದರೆ ಬಹಳ ಇಷ್ಟವಂತೆ. ‘ನನಗೆ ಈ ಪದ ಯಾಕೆ ಇಷ್ಟ ಅಂದ್ರೆ ನನಗೆ ಈ ಪದದಲ್ಲಿ ಅಪಾರ ನಂಬಿಕೆ. ಆ ಪದದಲ್ಲಿ ನನ್ನ ವ್ಯಕ್ತಿತ್ವದ ಒಂದು ಪ್ರಮುಖ ಅಂಶ ಸಹ ಸೇರಿದೆ. ಆ ಪದ ನನ್ನಲ್ಲಿದೆಯೋ, ನಾನು ಅದರಲ್ಲಿ ಇದ್ದೇನೋ ಎಂಬ ಪ್ರಶ್ನೆ ನನಗೆ ಕಾಡಿದ್ದುಂಟು. ಅಷ್ಟೇ ಅಲ್ಲ, ನನ್ನ ದೇಶವಾಸಿಗಳು ಈ ಪದದ ಅರ್ಥವನ್ನು ಗ್ರಹಿಸಿಕೊಂಡು, ತಮ್ಮಲ್ಲಿ ಆ ಗುಣವನ್ನು ಬೆಳೆಸಿಕೊಳ್ಳಬೇಕೆಂದು ನಾನು ಆಶಿಸುತ್ತೇನೆ.’ ಎಂದು ಸೈಮನ್ ಪೆರೇಸ್ ಅವರುaudacity ಪದದ ಬಗೆಗಿನ ತಮ್ಮ ಮೋಹ-ಮಮಕಾರವನ್ನು ಹೇಳಿದ್ದಾರೆ.
ವಾಜಪೇಯಿ ಸರಕಾರದಲ್ಲಿ ರಕ್ಷಣೆ, ವಿದೇಶಾಂಗ ಹಾಗೂ ಹಣಕಾಸು ಸಚಿವರಾಗಿದ್ದ, ಪ್ರಧಾನಿಯವರಿಗೆ ನಿಕಟವರ್ತಿಗಳಾಗಿದ್ದ ಜಸ್ವಂತ್‌ಸಿಂಗ್ ಇತ್ತೀಚೆಗೆ ಒಂದು ಪುಸ್ತಕ ಹೊರತಂದಿದ್ದಾರೆ. ಅದರ ಶೀರ್ಷಿಕೆ: Audacity of Opinion. . ತಮಗೂ ಈ audacity ಪದ ಯಾಕೆ ಇಷ್ಟವೆಂಬುದನ್ನು ಜಸ್ವಂತ್‌ಸಿಂಗ್ ವಿವರಿಸಿದ್ದಾರೆ.
ಖ್ಯಾತ ಲೇಖಕ ಅಲನ್ ಎಕ್ಸೆಲ್‌ರಾಡ್ ಎಂಬಾತ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು Profiles in Audacity: Great Decisions and How They were made. ಈ ಪುಸ್ತಕ ಓದಿದರೆ audacity ಅಂದ್ರೆ ಏನು ಎಂಬುದು ಗೊತ್ತಾಗುತ್ತದೆ. ಈಜಿಪ್ತ್ ರಕ್ಷಣೆಗೆ ಕ್ಲಿಯೋಪಾತ್ರ ಮುಂದಾಗುವ ನಿರ್ಧಾರ ತೆಗೆದುಕೊಂಡಿದ್ದೇಕೆ, ಅಹಿಂಸೆಯ ಮಾರ್ಗದಿಂದ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ಪಡೆಯಲು ಗಾಂಧಿ ನಿರ್ಧರಿಸಿದ್ದೇಕೆ, ಎರಡನೆ ಮಹಾಯುದ್ಧದ ಸಮಯದಲ್ಲಿ ಜಪಾನ್ ಮೇಲೆ ಅಣುಬಾಂಬ್ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ ತೀರ್ಮಾನಿಸಿದ್ದೇಕೆ ಎಂಬುದನ್ನು ಲೇಖಕ ಎಕ್ಸೆಲ್‌ರಾಡ್ ವಿವರಿಸುವಾಗ audacity ಪದದ ಪದರ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಅಷ್ಟಕ್ಕೂ audacity ಅಂದ್ರೆ ಏನು?
ಡಿಕ್ಷನರಿ ಡಾಟ್‌ಕಾಮ್‌ನಲ್ಲಿ ಈ ಪದಕ್ಕೆ ಈ ಅರ್ಥವನ್ನು ಕೊಟ್ಟಿದ್ದಾರೆ :
Boldness or daring especially with Confident or arrogant disregard for personal safety. ಧೈರ್ಯ ಅಥವಾ ಅದಮ್ಯ ವಿಶ್ವಾಸ ಅಥವಾ ಆತ್ಮರಕ್ಷಣೆಯನ್ನೂ ಲೆಕ್ಕಿಸದ ಗರ್ವ. ಮತ್ತೊಂದು ಅರ್ಥ Unusually harsh boldness with brashness ಈ ಪದವನ್ನು ವಾಕ್ಯದಲ್ಲಿ ಹೀಗೆ ಬಳಸಲಾಗಿದೆ Student’s audacity shocked the lecturer.. ಕನ್ನಡದಲ್ಲಿ ಈ ಪದಕ್ಕೆ ಎದೆಗಾರಿಕೆ, ಪೊಗರು, ಧಿಮಾಕು ಎಂದೆಲ್ಲ ಅರ್ಥೈಸಬಹುದು. ತುಸು ಒರಟಾಗಿ, Slan ಆಗಿ, ಸ್ವಲ್ಪ ಅಸಭ್ಯವಾಗಿ ‘ತಿಕಕೊಬ್ಬು’ ಎಂದೂ ಅರ್ಥೈಸಬಹುದು. ಎಲ್ಲರಿಗೂ ಈ audacity ಪದವನ್ನು ಬಳಸಲು ಆಗುವುದಿಲ್ಲ. ಚೆನ್ನಾಗಿ ಓದಿಕೊಂಡ, ತನ್ನ ವಿದ್ವತ್ತಿನ ಬಗ್ಗೆ ಹೆಮ್ಮೆಯ ಜಂಭವನ್ನು ಪ್ರದರ್ಶಿಸುವ, ತುಸು ಗರ್ವಿಷ್ಠನಿಗೆ ಈ ಪದವನ್ನು ಬಳಸಬಹುದು. ವಿದ್ವತ್ತಿನ ಬೆಂಬಲ, ಬುದ್ಧಿಯ ಒಲವು ಗಳಿಸಿಕೊಂಡವ ತುಸು ಜಂಭದಿಂದ ನಡೆದುಕೊಂಡರೆ ಅದೇನು ಅಪರಾಧವಲ್ಲ, ಅಸಹನೀಯವೂ ಅಲ್ಲ. ಅಂಥ ‘ಕೊಬ್ಬಿನ ವರ್ತನೆ’ಯನ್ನು ಅನೇಕರು ಮೆಚ್ಚುತ್ತಾರೆ.
ಈ ಗುಣ ಶಿವರಾಮ ಕಾರಂತರಲ್ಲಿತ್ತು. ಅಧ್ಯಯನ, ಅನುಭವದ ಸಮಪಾಕದಲ್ಲಿ ಬೆಂದು ರೂಪುಗೊಂಡ ಅವರ ವ್ಯಕ್ತಿತ್ವದಲ್ಲಿ ಈ audacity ಚೆನ್ನಾಗಿ ಮನೆಮಾಡಿತ್ತು. ಹಿರಿಯ ಕವಿಯೊಬ್ಬರು ಶಿವರಾಮ ಕಾರಂತರನ್ನು ಭೇಟಿ ಮಾಡಿ, ತಮ್ಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಕೋರಿದಾಗ, ‘ನಿಮ್ಮ ಕವನ ಓದುವುದು ಹಾಗೂ ಕೇಳುವುದೆಂದರೆ ದೊಡ್ಡ ಶಿಕ್ಷೆ. ಅಂಥ ಭಾಗ್ಯವನ್ನು ನನಗೆ ಕರುಣಿಸಬೇಡಿ. ನಿಮ್ಮ ಕಾರ್ಯಕ್ರಮಕ್ಕೆ ಬಂದು ಟೈಮ್ ವೇಸ್ಟ್ ಮಾಡಲು ನನಗೆ ಮನಸ್ಸಿಲ್ಲ’ ಎಂದು ಖಂಡುತುಂಡಾಗಿ ಹೇಳಿದ್ದರು.
ಕಾರಂತರ ಈ audacity ಯನ್ನು, ಧಿಮಾಕಿನ ನಡೆಯನ್ನು ಯಾರೂ ತಪ್ಪಾಗಿ ಭಾವಿಸುತ್ತಿರಲಿಲ್ಲ. ‘ಅವರೊಬ್ಬ ದುರಹಂಕಾರದ ಮೊಟ್ಟೆ’ ಎಂದು ಯಾರೂ ಹೀಗಳೆದಿದ್ದನ್ನು ಕೇಳಿದವರಿಲ್ಲ. ಕಾರಂತರ ಈ ಪೊಗರಿನ ನಡೆಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅವರಲ್ಲಿ ವಿದ್ವತ್ತು, ಆತ್ಮವಿಶ್ವಾಸ, ಅನುಭವದ ಒರತೆ ಜಿನುಗುತ್ತಿತ್ತು. ಅವರ ವ್ಯಕ್ತಿತ್ವಕ್ಕೆ ಗತ್ತು, ಗೈರತ್ತಿನ ಮೆರುಗನ್ನು ತಂದುಕೊಡುತ್ತಿತ್ತು. ಕಾರಂತರನ್ನು ಯಾರೂ ತಪ್ಪು ಭಾವಿಸುತ್ತಿರಲಿಲ್ಲ.
ಒಮ್ಮೆ ಧಾರವಾಡದಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮ. ಸಭಿಕರಲ್ಲೊಬ್ಬಾತ ಎದ್ದು ನಿಂತು ಕಾರಂತರಿಗೆ ಪ್ರಶ್ನೆ ಕೇಳಲು ಸಿದ್ಧನಾದ. ತಕ್ಷಣ ಕಾರಂತರು, ‘ನೀನು ನಾನು ಬರೆದಿದ್ದನ್ನು ಓದಿದ್ದೀಯಾ?’ ಎಂದು ಗತ್ತಿನಿಂದ ಕೇಳಿದರು. ಅದಕ್ಕೆ ಆತ, ‘ನಿಮ್ಮದೇನನ್ನೂ ಓದಿಲ್ಲ. ಆದರೆ…’ ಎಂದು ಹೇಳುತ್ತಿದ್ದಂತೆ ಅವನ ಮಾತನ್ನು ಅರ್ಧಕ್ಕೆ ತಡೆದ ಕಾರಂತರು, ‘ಹಾಗಾದರೆ ನಾನು ಹೇಳಿದ್ದು ಅರ್ಥವಾಗೊಲ್ಲ. ದಯವಿಟ್ಟು ಇಲ್ಲಿಂದ ತೊಲಗಿ ಉಳಿದ ಸಭಿಕರಿಗೆ ಉಪಕಾರ ಮಾಡಬೇಕೆಂದು ಪ್ರಾರ್ಥಿಸುತ್ತೇನೆ’ ಎಂದು ಖಾರವಾಗಿ ನುಡಿದರು. ಆತ ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ್ದ. ಕಾರಂತರಿಗೆ ಈ bಜbಡಿಣ ತೀರಾ ಸಹಜವಾಗಿ ಒಲಿದಿತ್ತು. ಅಲ್ಲದೇ ಅದು ಢಾಳಾಗಿ ವ್ಯಕ್ತವಾಗುತ್ತಿತ್ತು. ತಮಾಷೆಯೆಂದರೆ ಅವರ ಧಿಮಾಕನ್ನು ಎಲ್ಲರೂ ಇಷ್ಟಪಡುತ್ತಿದ್ದರು.
ಇಂದಿರಾಗಾಂಧಿಯವರಿಗೆ ಇಂಥದೇ ಧಿಮಾಕು ಇತ್ತು. ಅವರು ಕಣ್ಸನ್ನೆ, body language ನ ಮೂಲಕವೇ ಸಂದೇಶ ಕಳಿಸುತ್ತಿದ್ದರು. ಅವರ ಮಾತಿಗೆ ಯಾರಾದರೂ ಸಣ್ಣ ಪ್ರತಿರೋಧದ ಮಾತನ್ನಾಡಿದಾಗ ಅವರು ಕತ್ತು ಹೊರಳಿಸಿದರೆ ಸಾಕು, ಅವರ ಅನಿಸಿಕೆಯೇನೆಂಬುದು ಗೊತ್ತಾಗಿ ಹೋಗುತ್ತಿತ್ತು. ಅದನ್ನು ಬಾಯಿ ಬಿಟ್ಟು ಹೇಳಬೇಕಾಗಿರಲಿಲ್ಲ. ಸರಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಅವರ ಮಾತೇ ಅಂತಿಮವಾಗಿತ್ತು. ಅವರ ಪ್ರತಿ ನಡೆಯೂ ಮಾತಾಡುತ್ತಿತ್ತು. ಅಂಥ ಧಿಮಾಕಿನ ವ್ಯಕ್ತಿತ್ವ ಅವರದ್ದಾಗಿತ್ತು.
ಧಿಮಾಕನ್ನು ಸೊಕ್ಕು ಎಂದು ತಪ್ಪಾಗಿ ಭಾವಿಸುವವರು ಪಡಪೋಶಿಗಳು. ಸೊಕ್ಕೇ ಬೇರೆ, ಧಿಮಾಕೇ ಬೇರೆ. ಸೊಕ್ಕಿಗೆ ಅಧ್ಯಯನ, ಅನುಭವದ ಸಾಥ್ ಇಲ್ಲ. ಅದು ವರ್ತನೆಯಲ್ಲಾದ ಏರು-ಪೇರು, ವಕ್ರತೆ. ಸೊಕ್ಕು ಸ್ವಭಾವ ದೋಷ. ಧಿಮಾಕು ಹಾಗಲ್ಲ.
ಖ್ಯಾತ ನಾಟಕಕಾರ, ಕಾದಂಬರಿಕಾರ, ಸಾಹಿತಿ ಜಾರ್ಜ್ ಬರ್ನಾಡ್ ಷಾ bಜbಡಿಣ ಪದಕ್ಕೆ ಪ್ರತಿರೂಪದಂತಿದ್ದರಂತೆ. ಅವರ ಹಾವಭಾವ, ನಡೆ-ನುಡಿಯಲ್ಲಿ ಸೊಗಸಾದ ಪೊಗರು ಇತ್ತಂತೆ. ಹಿಂದಿನ ಶತಮಾನದ ಮಧ್ಯಭಾಗದಲ್ಲಿ ಲಂಡನ್‌ನಲ್ಲಿ ನಡೆದ ಒಂದು ಪ್ರಸಂಗವನ್ನು ಪ್ರಸ್ತಾಪಿಸುವುದಾದರೆ…
‘The Future of English language ಎಂಬ ವಿಷಯದ ಬಗ್ಗೆ ಗಹನವಾದ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಖ್ಯಾತ ಚಿಂತಕರು, ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ ಹಲವು ಗಣ್ಯಮಾನ್ಯರು ಭಾಗವಹಿಸಿದ ವಿಚಾರಗೋಷ್ಠಿ ಅದಾಗಿತ್ತು.
ಇವರೆಲ್ಲರೂ ತಮ್ಮ ಪ್ರಬಂಧ, ವಿಚಾರಧಾರೆಯನ್ನು ಮಂಡಿಸಿದ ಬಳಿಕ, ಕೊನೆಯಲ್ಲಿ ಜಾರ್ಜ್ ಬರ್ನಾರ್ಡ್ ಷಾ ಅವರ ಭಾಷಣ. ಈ ‘ಘಾಟಿ ಮನುಷ್ಯ’ನ ಮಾತು ಕೇಳಲು ಇಡೀ ಸಭಾಂಗಣ ಕಾಳು ಬಿದ್ದರೂ ಕೇಳಿಸುವಷ್ಟು ಶಾಂತವಾಗಿ ಕುಳಿತಿತ್ತು.
ಷಾ ಮೈಕ್ ಮುಂದೆ ಬಂದು ನಿಂತರು. ಮತ್ತಷ್ಟು ಮೌನ. ಇಂದಿನ ಗೋಷ್ಠಿಯ ವಿಷಯ ನೋಡಿಯೇ ನನಗೆ ಆತಂಕವಾಗುತ್ತಿದೆ.’The Future of English ಎಂದಷ್ಟೇ ಇದ್ದಿದ್ದರೆ ಸಾಕಾಗಿತ್ತು. ಅಲ್ಲಿ language ಎಂಬ ಪದ ಬೇಕಿರಲಿಲ್ಲ ಎಂದು ಮೊದಲ ಎಸೆತದಲ್ಲಿ ಗೂಗ್ಲಿ ಬಿಟ್ಟಾಗ ಸಭಿಕರಿಂದ ಕರತಾಡನ. ಅವರ ಧಿಮಾಕು ಅಲ್ಲಿಗೆ ನಿಲ್ಲಲಿಲ್ಲ. ಷಾ ಮಾತು ಮುಂದುವರಿಸಿದರು.
‘ಇಂದು ನಮ್ಮ ನಡುವೆ ವಿಲಿಯಂ ಶೇಕ್ಸ್‌ಪಿಯರ್ ಇಲ್ಲ. ಜಾನ್ ಕೀಟ್ಸ್ ನಿಧನರಾಗಿ ನೂರಕ್ಕೂ ಹೆಚ್ಚು ವರ್ಷಗಳಾದವು. ಲಾರ್ಡ್ ಬೈರಾನ್ ಸಹ ನಮ್ಮೊಂದಿಗೆ ಇಲ್ಲ. ಡಬ್ಲ್ಯು . ಬಿ. ಯೀಟ್ಸ್ ಸತ್ತು ದಶಕಗಳೇ ಗತಿಸಿ ಹೋದವು. ಇನ್ನು ನಾನು… ನನಗೆ ಈಗ ತೊಂಬತ್ತಮೂರು ವರ್ಷ. ನಾನು ಇಂದೋ, ನಾಳೆಯೋ ಎಂದು ಎಣಿಸುತ್ತಿದ್ದೇನೆ. ಇಂಗ್ಲಿಷ್ ಭವಿಷ್ಯ ನೆನೆದರೆ ನನಗೆ ಭಯ, ಆತಂಕವಾಗುತ್ತದೆ.’
ಅಬ್ಬಾ ಧಿಮಾಕೇ!?!
ಅಡಾಸಿಟಿ ಅಂದ್ರೆ ಇದು!
- ವಿಶ್ವೇಶ್ವರ ಭಟ್

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website