ಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!
ಭಾವತೀರಯಾನ - ಎ.ಆರ್.ಮಣಿಕಾಂತ್ ಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು, ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ಆನಂತರದ ದಿನಗಳಲ್ಲಿ ಸಂಭ್ರಮವೆಂಬುದು ನಮ್ಮ ಬದುಕಾಗುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಕ್ಕುತ್ತಾಳೆ. 'ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳು-ಸ್ನೇಹಿತರ ಸಂಖ್ಯೆ ಸಾವಿರವಾಗುತ್ತದೆ. ಅಲ್ಲಲ್ಲಿ, ಅಭಿಮಾನಿಗಳೂ ಹುಟ್ಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ; ಶ್ರೀಮಂತ ಅನ್ನಿಸಿಕೊಂಡವನನ್ನು, ಆತ ಮಧ್ಯವಯಸ್ಸು ತಲುಪಿದ ನಂತರವೂ ಪ್ರೀತಿಸುವ, ಆರಾಧಿಸುವ, ಆಸೆ ಪಡುವ, ಅವನ ಒಂದೇ ಒಂದು ಅಪ್ಪುಗೆಗಾಗಿ, ಆಲಿಂಗನಕ್ಕಾಗಿ ಕಾತರಿಸುವ ಹೆಣ್ಣುಗಳ ಹಿಂಡೇ ಇರುತ್ತದೆ. ಅದಕ್ಕೆ ಹೇಳೋದು: ಶ್ರೀಮಂತಿಕೆ ಎಂಬುದು ಜೊತೆಗಿದ್ದರೆ, ಸುಖದ ಬದುಕು ನಮ್ಮದಾಗುತ್ತದೆ!' ಇಂಥದೊಂದು ನಂಬಿಕೆ ಹಲವರಿಗಿದೆ. ಆದರೆ, ವಾಸ್ತವ ಏನೆಂದರೆ- ದುಡ್ಡಿದೆ ಎಂದ ಮಾತ್ರಕ್ಕೆ ಅದರಿಂದ ನೆಮ್ಮದಿಯನ್ನಾಗಲಿ, ಸಂತೋಷವನ್ನಾಗಲಿ, ಬಯಸಿದಂಥ ಹೆಂಡತಿಯನ್ನಾಗಲಿ (ಗಂಡನನ್ನಾಗಲಿ) ಪಡೆಯಲು ಸಾಧ್ಯವೇ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿ, ಆಲ್ಫ್ರೆಡ್ ನೊಬೆಲ್ನ ಬದುಕಿನ ಕಥೆಯಿದೆ. ತನ್ನ ಜೀವಿತಾವಧಿಯ ಸಾಧನೆಗಾಗಿ ವ್ಯಕ್ತಿಯೊಬ್ಬ ಪಡೆಯಬಹುದಾದ ಸರ್ವಶ್ರೇಷ್ಠ ಪ್ರಶಸ...