ಇಂಥದೊಂದು ನಂಬಿಕೆ ಹಲವರಿಗಿದೆ. ಆದರೆ, ವಾಸ್ತವ ಏನೆಂದರೆ- ದುಡ್ಡಿದೆ ಎಂದ ಮಾತ್ರಕ್ಕೆ ಅದರಿಂದ ನೆಮ್ಮದಿಯನ್ನಾಗಲಿ, ಸಂತೋಷವನ್ನಾಗಲಿ, ಬಯಸಿದಂಥ ಹೆಂಡತಿಯನ್ನಾಗಲಿ (ಗಂಡನನ್ನಾಗಲಿ) ಪಡೆಯಲು ಸಾಧ್ಯವೇ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿ, ಆಲ್ಫ್ರೆಡ್ ನೊಬೆಲ್ನ ಬದುಕಿನ ಕಥೆಯಿದೆ. ತನ್ನ ಜೀವಿತಾವಧಿಯ ಸಾಧನೆಗಾಗಿ ವ್ಯಕ್ತಿಯೊಬ್ಬ ಪಡೆಯಬಹುದಾದ ಸರ್ವಶ್ರೇಷ್ಠ ಪ್ರಶಸ್ತಿಯೆಂದರೆ ನೊಬೆಲ್. ಈ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದವನೇ ಆಲ್ಫ್ರೆಡ್ ನೊಬೆಲ್. ವಿಜ್ಞಾನ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದವರಿಗೆ ಹಾಗೂ ವಿಶ್ವದಲ್ಲಿ ಶಾಂತಿ ಸ್ಥಾಪನೆಗೆಂದು ಶ್ರಮಿಸಿದವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಈ ಎರಡರ ಪೈಕಿ, ಶಾಂತಿ ಸ್ಥಾಪನೆಗೆ ಹೋರಾಡಿದವರಿಗೆ ನೀಡುವ ಪ್ರಶಸ್ತಿ ಇದೆಯೆಲ್ಲ; ಅದಕ್ಕೆ ಹೆಚ್ಚಿನ ಮಹತ್ವವಿದೆ.
ಈಗ ಆಲ್ಫ್ರೆಡ್ ನೊಬೆಲ್ನ ವಿಷಯಕ್ಕೆ ಬರೋಣ: ಅವನ ಬಳಿ ಏನಿರಲಿಲ್ಲ ಹೇಳಿ? ಅವನಿಗೆ ಒಂದೆರಡಲ್ಲ, ಎಂಟು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯಿತ್ತು. ಹಣವಿತ್ತು. ಫ್ಯಾಕ್ಟರಿಯಿತ್ತು. ಅರಮನೆಯಂಥಾ ಬಂಗಲೆಯಿತ್ತು. ಆಳು-ಕಾಳುಗಳಿದ್ದರು. ನೊಬೆಲ್ಗೆ ಹತ್ತು ಮಂದಿ ಮೆಚ್ಚುವಂಥ ರೂಪವಿತ್ತು. ಗುಣವಿತ್ತು. ಪಾಂಡಿತ್ಯವಿತ್ತು. ಸುಸಂಸ್ಕೃತ ಕುಟುಂಬದ ಹಿನ್ನೆಲೆಯಿತ್ತು. ಸಮಾಜದಲ್ಲಿ ದೊಡ್ಡ ಗೌರವವಿತ್ತು. ಇಷ್ಟೆಲ್ಲಾ ಇದ್ದರೂ, ಆತ 'ಸುಖಿ' ಆಗಿರಲಿಲ್ಲ. ಬದುಕಿಡೀ ಆತ ಕೊರಗುಗಳೊಂದಿಗೆ ಕಳೆದು ಹೋದ. ಮೇಲಿಂದ ಮೇಲೆ ಸಂಭವಿಸಿದ ಭಗ್ನಪ್ರೇಮದ ಗಾಯ, ಅವನಿಗೆ ಚೇತರಿಸಿಕೊಳ್ಳಲಾಗದಂಥ ಪೆಟ್ಟು ನೀಡಿತು. ಶ್ರೀಮಂತ, ಗುಣವಂತ, ಪ್ರತಿಭಾವಂತ, ರೂಪವಂತ ಎಂದೆಲ್ಲ ವಿಶೇಷ ಗುಣಗಳಿದ್ದರೂ ಅವನನ್ನು ತಿರಸ್ಕರಿಸುವ ಕಾರಣ, ಆ ಹುಡುಗಿಯರಿಗಾದರೂ ಏನಿತ್ತು? ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಹೋರಾಡುವವರಿಗೆ ಶಾಂತಿ ಪುರಸ್ಕಾರ ನೀಡುವಂತೆ ಮಾಡಿದ ವ್ಯಕ್ತಿಯೇ ಸಂಕಟಗಳ ಮಧ್ಯೆ ಬದುಕಿದ್ದಾದರೂ ಏಕೆ ಎಂಬಂಥ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
ಆಲ್ಫ್ರೆಡ್ ನೊಬೆಲ್ ಹುಟ್ಟಿದ್ದು 1833ರಲ್ಲಿ. ಈತ, ಇಮ್ಯಾನುವೆಲ್ ನೊಬೆಲ್- ಆಂಡ್ರೆ ದಂಪತಿಯ ಮೂರನೇ ಮಗ. ಸ್ಟಾಕ್ಹೋಂನಲ್ಲಿದ್ದ ಇಮ್ಯಾನುವೆಲ್, ಅವತ್ತಿನ ಕಾಲಕ್ಕೆ ಪ್ರಖ್ಯಾತ ರಸಾಯನ ಶಾಸ್ತ್ರಜ್ಞ ಎನಿಸಿಕೊಂಡಿದ್ದ. ಈತನ ಸಂಶೋಧನಾ ಪ್ರಬಂಧಗಳಿಗೆ ಆಗ ಭಾರೀ ಮನ್ನಣೆಯಿತ್ತು. ಆಲ್ಫ್ರೆಡ್ ನೊಬೆಲ್ ಕೂಡ ವಿಜ್ಞಾನ ವಿಷಯದಲ್ಲಿಯೇ ಆಸಕ್ತಿ ತೋರಿದ. ಪದವಿ ಪಡೆದ. ಸ್ವೀಡಿಷ್, ಫ್ರೆಂಚ್, ರಶಿಯನ್, ಇಂಗ್ಲಿಷ್, ಜರ್ಮನ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ವ್ಯವಹರಿಸಲು ಕಲಿತ. ಈತನ ಸಾಧನೆಯನ್ನು, ವಿದ್ವತ್ತನ್ನು ಗುರುಗಳೂ, ಅಂದಚೆಂದವನ್ನು ಸಹಪಾಠಿಗಳೂ ಹೊಗಳಿದ ಸಂದರ್ಭದಲ್ಲಿಯೇ ಅವನಿಗೇ ಗೊತ್ತಿಲ್ಲದಂತೆ ಎದೆಯೊಳಗೆ ಹರೆಯದ ಹೂವು ಅರಳಿತು. ನಂತರದ ಕೆಲವೇ ದಿನಗಳಲ್ಲಿ ತನ್ನ ಮನದ ಪಿಸು ಮಾತನ್ನೆಲ್ಲ ಹೇಳಿಕೊಳ್ಳಲು ಒಂದು ಹುಡುಗಿಯ ಸಾಂಗತ್ಯ ಬೇಕೇ ಬೇಕು ಅನ್ನಿಸಿತು. ಮರುದಿನದಿಂದಲೇ, ತನ್ನ ಮನಸ್ಸಿಗೆ ಇಷ್ಟವಾಗುವಂಥ ಬೆಡಗಿಯ ಹುಡುಕಾಟಕ್ಕೆ ನಿಂತುಬಿಟ್ಟ ಆಲ್ಫ್ರೆಡ್ ನೊಬೆಲ್.
ಈ ಸಂದರ್ಭದಲ್ಲಿ ಪರಿಚಯವಾದವಳೇ ಅಲೆಗ್ಸಾಂಡ್ರಾ. ಆಕೆಯೂ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದಳು. ಅಲೆಗ್ಸಾಂಡ್ರಾಳ ಪರಿಚಯದ ನಂತರ ಆಲ್ಫ್ರೆಡ್ ನೊಬೆಲ್ನ ಉಡುಗೆ-ತೊಡುಗೆ, ಹಾವ-ಭಾವ, ಮಾತಾಡುವ ಶೈಲಿ...ಹೀಗೆ ಎಲ್ಲವೂ ಬದಲಾಯಿತು. ದಿನಕಳೆದಂತೆಲ್ಲ ಗೆಳೆತನ ಗಾಢವಾಯಿತು. ಹೀಗಿರುವಾಗಲೇ ಅದೊಂದು ದಿನ ಈ ನೊಬೆಲ್, ಅಲೆಗ್ಸಾಂಡ್ರಾಳ ಮುಂದೆ ನಿಂತು ಹೇಳಿಯೇ ಬಿಟ್ಟ: 'ನಿನ್ನನ್ನು ಪ್ರೀತಿಸ್ತಾ ಇದೀನಿ. ನಿನ್ನೊಂದಿಗೆ ಬದುಕಬೇಕು ಎಂದು ಕನಸು ಕಾಣ್ತಾ ಇದೀನಿ. ನಿನ್ನ ಕಡೆಯಿಂದ ಬರಲಿರುವ ಸವಿಮಾತುಗಳಿಗಾಗಿ ಕಾಯ್ತಾ ಇದೀನಿ. ನೀನೂ ನನ್ನನ್ನು ಪ್ರೀತಿಸ್ತಿದೀಯ ಅಂದ್ಕೊಂಡಿದೀನಿ' ಅಂದ.
ಈ ಮಾತುಗಳಿಂದಾದ ಪರಿಣಾಮ ತುಂಬಾ ಕೆಟ್ಟದಿತ್ತು. ಆಲ್ಫ್ರೆಡ್ನ ನಿರೀಕ್ಷೆಗೆ ವಿರುದ್ಧವಾಗಿ ಅಲೆಗ್ಸಾಂಡ್ರಾ ವರ್ತಿಸಿದಳು. ಐ ಡೋಂಟ್ ಲವ್ ಯೂ ಎಂದುಬಿಟ್ಟಳು. ನಂತರದ ಕೆಲವೇ ದಿನಗಳಲ್ಲಿ ಅವನೊಂದಿಗೆ ಗೆಳೆತನ ಕಡಿದುಕೊಂಡಳು. ಎರಡು ತಿಂಗಳ ನಂತರ, ಅಪಘಾತವೊಂದರಲ್ಲಿ ಸತ್ತೂ ಹೋದಳು. ಇದು ಆಲ್ಫ್ರೆಡ್ನ ಬದುಕಲ್ಲಿ ಬಂದ ಮೊದಲ ಶಾಕ್. ಮುಂದೆ ಅವನು ಅಲೆಗ್ಸಾಂಡ್ರಾಳ ನೆನಪಿನಲ್ಲಿಯೇ ಕಳೆದು ಹೋದ. ಅವಳ ಸ್ಮರಣೆಗೆಂದೇ ಕತೆ ಬರೆದ. ಕವನ ಬರೆದ. ಅವಳ ನೆನಪಾದಾಗಲೆಲ್ಲ ಸಂಕೋಚ ಬಿಟ್ಟು ಅತ್ತು ಹಗುರವಾಗುವುದನ್ನು ರೂಢಿ ಮಾಡಿಕೊಂಡ. ಯಾರನ್ನಾದರೂ, ಅದರಲ್ಲೂ ಹುಡುಗಿಯರನ್ನು ವಿಪರೀತ ಹಚ್ಚಿಕೊಂಡರೆ, ಮುಂದೊಂದು ದಿನ ಅವರ ಅಗಲಿಕೆಯಿಂದ ದೊಡ್ಡ ನೋವು ಅನುಭವಿಸಬೇಕಾಗುತ್ತದೆ ಎಂಬ ಸರಳ ಸತ್ಯವನ್ನು ಈ ಸಂದರ್ಭದಲ್ಲಿಯೇ ಅರ್ಥ ಮಾಡಿಕೊಂಡ.
ಈ ಸಂಕಟದ ಮಧ್ಯೆಯೇ ಅವನ ಸಂಶೋಧನೆ ಸಾಗುತ್ತಿತ್ತು. ಪ್ಯಾರಿಸ್ ಮಹಾನಗರದಲ್ಲಿ ದೊಡ್ಡದೊಂದು ಬಂಗಲೆ ಖರೀದಿಸಿ ಸಂಶೋಧನೆ ಹಾಗೂ ಅಧ್ಯಯನದಲ್ಲಿ ಮೈಮರೆತ. ಕೆಲ ದಿನಗಳ ನಂತರ, ತನ್ನ ಸಂತೋಷ, ಸಂಕಟ, ದುಗುಡ, ಕನಸನ್ನೆಲ್ಲ ಹೇಳಿಕೊಳ್ಳಲು ಒಂದು ಹೆಣ್ಣು ಜೀವದ ಅಗತ್ಯವಿದೆ ಅನ್ನಿಸಿತು. ಸುಂದರ, ಸುಶಿಕ್ಷಿತ ಯುವತಿಯನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳಲು ಯೋಚಿಸಿದ. ಒಂದೆರಡೇ ದಿನಗಳಲ್ಲಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಿ ಪತ್ರಿಕಾ ಪ್ರಕಟಣೆ ನೀಡಿದ.
ಈ ಪ್ರಕಟಣೆಯ ಫಲವಾಗಿ, ಆಲ್ಫ್ರೆಡ್ನ ಆಪ್ತ ಕಾರ್ಯದರ್ಶಿಯಾಗಿ ಬಂದವಳೇ ವಾರ್ಥಾ. ಈಕೆ, ಸೌಂದರ್ಯದ ಖನಿಯಾಗಿದ್ದಳು. ಅಸಾಧಾರಣ ಪ್ರತಿಭಾವಂತೆಯಾಗಿದ್ದಳು. ಅವಳ ಸಹವಾಸದಲ್ಲಿ ಆಲ್ಫ್ರೆಡ್ ಹಳೆಯ ನೋವನ್ನೆಲ್ಲ ಮರೆತ. ಅವಳೊಂದಿಗೆ ಗಂಟೆಗಟ್ಟಲೆ ಹರಟಿದ. ತನ್ನ ಕಷ್ಟ ಹೇಳಿಕೊಂಡ. ಕನಸು ಹಂಚಿಕೊಂಡ. ಭಗ್ನಪ್ರೇಮದಿಂದ ತತ್ತರಿಸಿದ ಕ್ಷಣದಲ್ಲಿ ಬರೆದಿದ್ದ ಕವನಗಳನ್ನು ಅವಳಿಗೆ ಓದಿ ಹೇಳಿದ. ವಾರ್ಥಾ, ಎಲ್ಲವನ್ನೂ ಕೇಳಿದ ನಂತರ ಮೆಲುವಾಗಿ ನಗುತ್ತಿದ್ದಳು. ಸಮಾಧಾನದ ಮಾತಾಡುತ್ತಿದ್ದಳು. ಸಿಂಪತಿ ತೋರುತ್ತಿದ್ದಳು. ಅದನ್ನೇ ಪ್ರೀತಿ ಎಂದು ಅರ್ಥ ಮಾಡಿಕೊಂಡ ಆಲ್ಫ್ರೆಡ್, ಅವಳ ಮೇಲೇ ಕವನ ಬರೆಯಲು ಆರಂಭಿಸಿಬಿಟ್ಟ.
ಮುಂದಿನ ಕೆಲವೇ ದಿನಗಳಲ್ಲಿ ದೃಶ್ಯ ಬಯಲಾಯಿತು. ಪ್ರೇಮದಿಂದ ಹುಚ್ಚಾಗಿದ್ದ ಆಲ್ಫ್ರೆಡ್ ಒಂದರ ಹಿಂದೊಂದು ಪದ್ಯ ಬರೆದು ಓದಲು ತೊಡಗಿದರೆ, ವಾರ್ಥಾ ಬೇಕೆಂದೇ ನಿರಾಸಕ್ತಿ ತೋರುತ್ತಿದ್ದಳು. ಈತ ತನ್ನ ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ, ತನ್ನ ಸಂಸಾರದ ಬಗ್ಗೆ, ವಾರ್ಥಾಳ ಚೆಲುವಿನ ಬಗ್ಗೆ ಮಾತಾಡುತ್ತಿದ್ದರೆ, ಆಕೆ ಬೇರೆಲ್ಲೋ ನೋಡುತ್ತಾ ಕೂತು ಬಿಡುತ್ತಿದ್ದಳು. ವಾಕ್ ಹೊರಟಾಗ, ಈತ ತುಂಬಾ ಪ್ರೀತಿಯಿಂದ ಕೈ ಹಿಡಿದುಕೊಂಡರೆ, ತಕ್ಷಣವೇ ಬಿಡಿಸಿಕೊಳ್ಳುತ್ತಿದ್ದಳು. ಈ ವರ್ತನೆಯಿಂದ ಅನುಮಾನಗೊಂಡ ನೊಬೆಲ್, ಕಡೆಗೊಂದು ದಿನ ಅವಳೆದುರು ನಿಂತು ಕೇಳಿಯೇ ಬಿಟ್ಟ: ವಾರ್ಥಾ, ನಿಜ ಹೇಳು. ನೀನು ಯಾರನ್ನಾದ್ರೂ ಪ್ರೀತಿಸ್ತಾ ಇದೀಯ?'
ಈ ಪ್ರಶ್ನೆಗೆ ಉತ್ತರವಾಗಿ ಅವಳು ತನ್ನ ಹೆಸರನ್ನೇ ಹೇಳಲಿ ಎಂಬ ಹಂಬಲದಲ್ಲಿ ಅವನಿದ್ದಾಗಲೇ ವಾರ್ಥಾ, ತುಂಬ ನಿಧಾನವಾಗಿ, ಆದರೆ ನಿರ್ವಿಕಾರ ಭಾವದಲ್ಲಿ ಹೇಳಿಬಿಟ್ಟಳು: 'ಸರ್, ನನ್ನ ಮಾತಿಂದ ನಿಮಗೆ ಬೇಸರ ಆಗುತ್ತೆ ಅಂತ ಗೊತ್ತು. ಆದ್ರೂ ಹೇಳ್ತಿದೀನಿ. ಬರೋನ್ ಆರ್ಥರ್ ಎಂಬ ಹುಡುಗನನ್ನು ಪ್ರೀತಿಸ್ತಾ ಇದೀನಿ. ಶೀಘ್ರದಲ್ಲೇ ಮದುವೆ ಆಗಬೇಕು ಅಂತ ಯೋಚಿಸ್ತಿದೀವಿ.'
ಅಲ್ಲಿಗೆ, ನೊಬೆಲ್ ಎರಡನೇ ಬಾರಿಗೆ ಭಗ್ನಪ್ರೇಮದ ಹೊಂಡಕ್ಕೆ ಬಿದ್ದ. ಮುಂದಿನ ದಿನಗಳಲ್ಲಿ ಅನ್ಯಮನಸ್ಕನಾದ. ವಾರ್ಥಾಳೊಂದಿಗೆ ಅಗತ್ಯವಿದ್ದರೆ ಮಾತ್ರ, ವ್ಯಾವಹಾರಿಕ ಭಾಷೆಯಲ್ಲಿ ಮಾತಾಡುತ್ತಿದ್ದ. ಈ ವರ್ತನೆಯ ಹಿಂದೆ, ವಾರ್ಥಾ ತನ್ನ ನಿರ್ಧಾರ ಬದಲಿಸಲಿ ಎಂಬ ಹಿರಿಯಾಸೆಯೂ ಇತ್ತು. ಮುಂದಿನ ಕೆಲದಿನಗಳಲ್ಲಿಯೇ ಒಂದು ಸೆಮಿನಾರ್ನಲ್ಲಿ ಭಾಗವಹಿಸಲು ಸ್ವೀಡನ್ಗೆ ಹೊರಟು ನಿಂತ. ಆತ ಹಿಂದಿರುಗಿ ಬರುವಷ್ಟರಲ್ಲಿ, ರಾಜಿನಾಮೆ ಪತ್ರ ಬರೆದಿಟ್ಟು ವಾರ್ಥಾ ಹೋಗಿಬಿಟ್ಟಿದ್ದಳು. ಇವತ್ತಲ್ಲ ನಾಳೆ ಆಕೆ ಮನಸ್ಸು ಬದಲಿಸಬಹುದು. ತನ್ನ ಪ್ರೀತಿ ಹಾಗೂ ಶ್ರೀಮಂತಿಕೆಗೆ ಮರುಳಾಗಬಹುದು ಎಂದು ಭಾವಿಸಿದ್ದ ನೊಬೆಲ್ ಈ ಘಟನೆಯಿಂದ ವಿಹ್ವಲಗೊಂಡ. ತನ್ನ ಸಂಕಟವನ್ನೆಲ್ಲ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು ಅನ್ನಿಸಿದಾಗ, ತನ್ನ ತಮ್ಮನಿಗೆ ಹೀಗೆ ಕಾಗದ ಬರೆದ: ತಮ್ಮಾ, ನನ್ನ-ನಿನ್ನ ಜೀವನದಲ್ಲಿ ಅದೆಷ್ಟು ಅಂತರವಿದೆ ನೋಡು? ನಿನಗೆ ಸುಖ, ಶಾಂತಿ ಮತ್ತು ನೆಮ್ಮದಿಯೆಂಬುದು ದಂಡಿಯಾಗಿ ಸಿಕ್ಕಿದೆ. ಆದರೆ, ನನ್ನ ಜೀವನವು ದಡ ಸೇರುವ ಭರವಸೆಯನ್ನು ಕಳೆದುಕೊಂಡ, ಚುಕ್ಕಾಣಿ ಇಲ್ಲದ ಹಡಗಿನಂತಿದೆ. ನನ್ನ ದೌರ್ಭಾಗ್ಯದಿಂದ ಅದು ಸುಳಿಗೆ ಸಿಕ್ಕಿ ದಿಕ್ಕು ತೋಚದೆ ಸುತ್ತುತ್ತಿದೆ. ಹಳೆಯದೇನನ್ನೋ ನೆನಪಿಸಿಕೊಳ್ಳೋಣವೆಂದರೆ, ನನ್ನ ಮನದಲ್ಲಿ ಮಧುರ ನೆನಪುಗಳೇ ಇಲ್ಲ. ಸಾವಿನ ನಂತರ ಬಿಟ್ಟು ಹೋಗಲು, ಪ್ರೇಮದ ಕುರುಹು ಕೂಡ ಜೊತೆಗಿಲ್ಲ. ನಾನು ಯಾರನ್ನೋ ತುಂಬ ಆಸೆಯಿಂದ ಪ್ರೀತಿಸಿದರೆ, ಅವರು ಸರಿಯಾದ ಕಾರಣವನ್ನೇ ಹೇಳದೆ ಕೈ ಕೊಡುತ್ತಾರೆ. ಆಗೆಲ್ಲ-ಛೆ, ಇದೆಂಥ ನಿಕೃಷ್ಟ ಬದುಕು ನನ್ನದು ಎನ್ನಿಸಿ ವ್ಯಥೆಯಾಗುತ್ತದೆ...'
ಇಂಥ ಸಂಕಟಗಳ ಮಧ್ಯೆಯೇ ಆಲ್ಫ್ರೆಡ್ಗೆ 45 ವರ್ಷ ತುಂಬಿತು. ಆಗಲೂ ಒಂದು ಹೆಣ್ಣು ಜೀವದ ಸಾಂಗತ್ಯಕ್ಕಾಗಿ ಆತ ಹಂಬಲಿಸಿದ. ಈ ಸಂದರ್ಭದಲ್ಲಿ ಪರಿಚಯವಾದವಳೇ ಸೋಫಿ ಹೇಜ್. ಕಡು ಬಡವರ ಮನೆಯ ಈಕೆ, ಹೂ ಮಾರಿಕೊಂಡು ಓದು ಮುಂದುವರಿಸಿದ್ದಳು. ಶ್ರೀಮಂತರ ಮನೆಯ ಹುಡುಗಿಯರಿಗಿಂತ ಬಡವರ ಮನೆಯ ಹುಡುಗಿಯರು ವಾಸಿ ಎಂದು ಯೋಚಿಸಿದ ಆಲ್ಫ್ರೆಡ್, ಈ ಹೂ ಮಾರುವ ಹುಡುಗಿಯನ್ನು ಚೆನ್ನಾಗಿ ಓದಿಸಿ, ಉತ್ತಮ ಸಂಸ್ಕಾರ ಕಲಿಸಿ ನಂತರ ಮದುವೆಯಾಗಲು ನಿರ್ಧರಿಸಿದ. ಸೋಫಿಯನ್ನು ಪ್ಯಾರಿಸ್ನಲ್ಲಿ ಕಾಲೇಜಿಗೆ ಸೇರಿಸಿದ.
ವಿಪರ್ಯಾಸವೆಂದರೆ, ಸೋಫಿ ಹೇಜ್, ಆಲ್ಫ್ರೆಡ್ನ ನಿರೀಕ್ಷೆಗೆ ತದ್ವಿರುದ್ಧ ಎಂಬಂತಿದ್ದಳು. ಆಕೆ ಕಾಲೇಜಿಗೆ ಸೇರಿದಳು ನಿಜ. ಆದರೆ, ಪದವಿ ಪಡೆಯಲಿಲ್ಲ. ಪ್ರತಿ ತಿಂಗಳೂ ನೊಬೆಲ್ ಕಳಿಸುತ್ತಿದ್ದ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾ ಮಜಾ ಉಡಾಯಿಸಿದಳು. ಅಷ್ಟೇ ಅಲ್ಲ, ತನ್ನ ಸ್ವೇಚ್ಛೆಯ ನಡವಳಿಕೆಯಿಂದ ಕೆಟ್ಟ ಹೆಸರನ್ನು ಪಡೆದುಕೊಂಡಳು. ಈ ಸುದ್ದಿ ಕೇಳಿ ಆಲ್ಫ್ರೆಡ್ ಚಿಂತೆಗೆ ಬಿದ್ದಿದ್ದಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಂದೆರಗಿತು. ಸೋಫಿ, ತನ್ನ ಸಹಪಾಠಿಯನ್ನು ಮದುವೆಯಾಗುವುದಾಗಿ, ಇವನಿಗೆ ಪತ್ರ ಬರೆದಿದ್ದಳು.
ಹೀಗೆ, ಒಂದರ ಹಿಂದೊಂದರಂತೆ ನಡೆದು ಹೋದ ವಿಫಲಪ್ರೇಮ ಪ್ರಸಂಗಗಳಿಂದ ಆಲ್ಫ್ರೆಡ್ ನೊಬೆಲ್ ಕುಸಿದು ಹೋದ. ಸಂತೋಷವೆಂದರೆ, ವೈಯಕ್ತಿಕ ಜೀವನದ ಈ ಆಘಾತಗಳ ಮಧ್ಯೆಯೂ ಆತ ವಿಜ್ಞಾನಿಯಾಗಿ ಗೆದ್ದಿದ್ದ. ಮನುಕುಲಕ್ಕೆ ಹತ್ತಾರು ರೀತಿಯಲ್ಲಿ ಉಪಯೋಗಕ್ಕೆ ಬರುವ ಡೈನಾಮೈಟ್ ಕಂಡು ಹಿಡಿದಿದ್ದ. ಅದರಿಂದ ಇರುವ ಉಪಯೋಗಗಳ ಬಗ್ಗೆ ಎಲ್ಲರಿಗೂ ವಿವರಿಸಿ ಹೇಳಿದ್ದ. ತನ್ನ ಸಂಶೋಧನೆಯಿಂದ ಜಗತ್ತಿಗೆ ತುಂಬಾ ಅನುಕೂಲವಾಗುತ್ತದೆ. ಮನುಕುಲ ನನ್ನನ್ನು ತುಂಬ ಕೃತಜ್ಞತೆಯಿಂದ ನೆನಪಿಟ್ಟುಕೊಳ್ಳುತ್ತದೆ ಎಂದು ಆಲ್ಫ್ರೆಡ್ ಭಾವಿಸಿದ್ದ. ಆದರೆ, ಅವನ ಮನಸ್ಸಿಗೆ ಅತಿ ದೊಡ್ಡ ಶಾಕ್ ನೀಡುವಂಥ ಸುದ್ದಿಯೊಂದು ಅವನು ಬದುಕಿದ್ದಾಗಲೇ ಪ್ರಕಟವಾಗಿ ಹೋಯಿತು. ಅದೊಮ್ಮೆ ಈತ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ. ಈ ಸಂದರ್ಭದಲ್ಲೇ ಆಲ್ಫ್ರೆಡ್ನ ತಮ್ಮ ಸತ್ತುಹೋದ. ಆಗ, ಸತ್ತಿರುವುದು ಆಲ್ಫ್ರೆಡ್ ಎಂದುತಪ್ಪಾಗಿ ಭಾವಿಸಿದ ಫ್ರೆಂಚ್ ಪತ್ರಿಕೆಯೊಂದು -'ಸಾವಿನ ವ್ಯಾಪಾರಿ ಆಲ್ಫ್ರೆಡ್ ನಿಧನ' ಎಂಬ ಹೆಡ್ಡಿಂಗ್ ಹಾಕಿ ಸುದ್ದಿ ಪ್ರಕಟಿಸಿಬಿಟ್ಟಿತು. ಡೈನಾಮೈಟ್ ಕಂಡು ಹಿಡಿಯುವ ಮೂಲಕ ಮನುಕುಲದ ವಿನಾಶಕ್ಕೆ ಮುನ್ನುಡಿ ಬರೆದವನೆಂದು ಕರೆದು, ಲೇಖನದುದ್ದಕ್ಕೂ ಆಲ್ಫ್ರೆಡ್ನನ್ನು ಟೀಕಿಸಲಾಗಿತ್ತು.
ಮರುದಿನ ಈ ಸುದ್ದಿ ನೋಡಿ ಕಂಗಾಲಾದ ಆಲ್ಫ್ರೆಡ್, ಜನರು ತನ್ನನ್ನು ಸಾವಿನ ವ್ಯಾಪಾರಿ ಎಂದು ಕರೆದಿದ್ದಕ್ಕೆ ವ್ಯಾಕುಲಗೊಂಡ. ತನ್ನ ಉದ್ದೇಶ ಶಾಂತಿ ಸ್ಥಾಪನೆಯೇ ಹೊರತು ಸಂಘರ್ಷ ಉಂಟು ಮಾಡುವುದಲ್ಲ, ರಕ್ತ ಹರಿಸುವುದಲ್ಲ ಎಂಬುದನ್ನೇ ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ -ಶಾಂತಿ ಸ್ಥಾಪನೆಗೆ ಹೋರಾಡಿದವರಿಗೆ ಭಾರೀ ಮೊತ್ತದ ಪ್ರಶಸ್ತಿ ನೀಡಲು ಮುಂದಾದ. ಅದಕ್ಕೆ ನೊಬೆಲ್ ಪ್ರಶಸ್ತಿ ಎಂದೇ ಹೆಸರಿಟ್ಟ...
ನೊಬೆಲ್ ಪ್ರಶಸ್ತಿಯ ಹಿನ್ನೆಲೆ ತಿಳಿಯುವ ಆಸೆಯಿಂದ ಐದಾರು ಪುಸ್ತಕ ತಿರುವಿ ಹಾಕಿದಾಗ ಬರಹವೊಂದು ಸೃಷ್ಟಿಯಾಯಿತು: ಈ ರೀತಿ, ಈ ಥರ...
- ಎ.ಆರ್. ಮಣಿಕಾಂತ್
Comments
Post a Comment