ಗಂಗಾಮಾತೆಯ ಉಳಿಸಲು 'ಕಟ್ಟೆ'ಕಡೆಯ ಪ್ರಯತ್ನ
ಮೇಘ ಮೇದಿನಿ - ರಾಧಾಕೃಷ್ಣ ಎಸ್. ಭಡ್ತಿ ನಿಮಗೆ ನೆನಪಿರಬಹುದು, ಕಳೆದ ಜೂನ್ 14ರಂದು ಅನ್ಯಾಯವಾಗಿ ಸಂತರೊಬ್ಬರು ಈ ಪುಣ್ಯಭೂಮಿಯಲ್ಲಿ ಪ್ರಾಣಕಳೆದುಕೊಂಡರು. ಹಾಗೆ ಅವರು ಪ್ರಾಣತ್ಯಾಗ ಮಾಡಿದ್ದು ನಮ್ಮ ಪುಣ್ಯನದಿ ಗಂಗೆಗಾಗಿ. ಅದು ಆತ್ಮಹತ್ಯೆಯಲ್ಲ, ಆತ್ಮಾಹುತಿ. ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮೊದಲಬಾರಿಗೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟ ರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಳು. ಹೌದು, ಗಂಗಾ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನದಿಯ ಶುದ್ಧೀಕರಣಕ್ಕೆ ಆಗ್ರಹಿಸಿ ಸತತ 115 ದಿನ ಉಪವಾಸ ಕುಳಿತ ಉತ್ತರಾಖಂಡ್ ರಾಜ್ಯದ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರಿಗೆ ಸಿಕ್ಕ ಉತ್ತರ ಸಾವು! ನಾಚಿಕೆಯಾಗಬೇಕಿತ್ತು ನಮಗೆ. ಆದರೆ, ಸರಕಾರಕ್ಕೆ ಅದು ದೊಡ್ಡ ವಿಚಾರವಾಗಲೇ ಇಲ್ಲ. ಏಕೆಂದರೆ ಆ ಸಂತನ ಸಾವು ಸ್ವಲ್ಪ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮೊದಲಾಗಲೀ ಆನಂತರವಾಗಲೀ ನಮಗೆ ಏನೂ ಅನ್ನಿಸಲೇ ಇಲ್ಲ. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇವೆ. ಗಣಿಗಾರಿಕೆ, ಗಂಗೆಯ ಹರಿವಿಗೆ ಅಡ್ಡಲಾಗಿ ಮನಬಂದಂತೆ ಒಡ್ಡುಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅತ್ಯಾಚಾರಗಳೂ ಮುಂದುವರಿದೇ ಇವೆ. ಇದಕ್ಕಿಂತ ವಿಪಯರ್ಯಾಸ ಬೇರೇನಿದೆ? ಹಠಕ್ಕೆ ಬೀಳದೇ, ಪ್ರತಿಭಟನೆಗೆ ಇಳಿಯದೇ ಏನೂ ಆಗುವುದಿಲ್ಲವೇ ಅಥವಾ ಕೊನೇಪಕ್ಷ ಒಂದು ಜೀವಕ್ಕೆ...