ಗುಬ್ಬಿ ತೋಟದಪ್ಪರವರು ಯಾರು? ಅವರ ಸಾಧನೆಗಳೇನು?
ಶ್ರೀ ರಾವ್ ಬಹದ್ದೂರ್ ಧರ್ಮ ಪ್ರವರ್ತ ಗುಬ್ಬಿ ತೋಟದಪ್ಪನವರು ಹುಟ್ಟಿದ್ದು ತುಮಕೂರಿನ ಗುಬ್ಬಿಯಲ್ಲಿ ರುದ್ರಪ್ಪ ಮತ್ತು ಚೆನ್ನಮ್ಮ ದಂಪತಿಗಳಿಗೆ ಜನಿಸಿದರು.
ನಂತರ ತಮ್ಮ ಕುಲ ಕಸುಬು ವ್ಯಾಪಾರವನ್ನು ಬೆಂಗಳೂರಿಗೆ ಬಂದು ಮಾಮೂಲು ಪೇಟೆಯಲ್ಲಿ ಮುಂದುವರೆಸಿದರು.
ನಂತರ ತಮ್ಮ ಮನೆಯಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಓದಲು ಬರುವ ವಿಧ್ಯಾರ್ಥಿಗಳಿಗೆ ಆಸರೆ ನೀಡುತ್ತಿದ್ದರು.ಇದರ ಜೊತೆಗೆ ವ್ಯಾಪಾರಕ್ಕಾಗಿ ಬರುವವರಿಗು ಸಹ ಆಸರೆ ನೀಡಿದರು.ದಿನ ಕಳೆಯುತ್ತಾ ಈ ಸಂಖ್ಯೆ ಹೆಚ್ಚಾಯಿತು.ಅದಕ್ಕೆ ತಮ್ಮ ಎಲ್ಲಾ ಆಸ್ತಿಯನ್ನು ಸಾಮಾಜಿಕ ಕಾರ್ಯಕ್ಕಾಗಿ ಉಪಯೋಗಿಸಲು ಚಿಂತಿಸಿ 1897ರಲ್ಲಿ ಆಗಿನ ಮೈಸೂರು ಸರ್ಕಾರದ ರೈಲ್ವೆ ಇಲಾಖೆಯಿಂದ 2.5 ಎಕರೆ ಜಾಗವನ್ನು 10000 ಕೊಟ್ಟು ಖರೀದಿಸಿದರು.ಇದೆ ಜಾಗದಲ್ಲಿ ಪ್ರವಾಸಿಗಳಿಗೆ ಧರ್ಮ ಛತ್ರ ಹಾಗೂ ಓದಲು ಬರುವ ವಿದ್ಯಾರ್ಥಿಗಳಿಗೆ 10 ರೂಮ್ ಒಳಗೊಂಡ ವಿದ್ಯಾರ್ಥಿ ನಿಲಯ ತೆರೆದರು.ಈ ಸಂಸ್ಥೆಯನ್ನು ಫೆಬ್ರವರಿ 11,1903 ರಲ್ಲೀ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಅಧಿಕೃತವಾಗಿ ಉದ್ಘಾಟಿಸಿದರು.
ಸಂತಾನ ವಂಚಿತರಾದ ತೋಟದಪ್ಪನವರು ತಮ್ಮ ಎಲ್ಲಾ ಆಸ್ತಿ ಮಾರಿ ಲೋಕ ಕಲ್ಯಾಣ ಕಾರ್ಯಕ್ಕಾಗಿ ಉಪಯೋಗಿಸಲು 1910 ರಲ್ಲಿ ಒಂದು ಟ್ರಸ್ಟ್ ಕಟ್ಟಿದರು ಅದೇ " ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪ ಚಾರಿಟಿ "ಮತ್ತು ಕೆ ಪಿ ಪುಟ್ಟಣ್ಣ ಚೆಟ್ಟಿ ಅವರನ್ನು ಅದರ ಪ್ರಥಮ ಅಧ್ಯಕ್ಷರಾಗಿ ನೇಮಿಸಿದರು.
ಅಂದಿನಿಂದ ಇಂದಿನವರೆಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ.
ಗೌರವಗಳು :
1905 ದಸರಾ ಸಮಯದಲ್ಲಿ ತೋಟದಪ್ಪನವರ ಸಾಮಾಜಿಕ ಕಾರ್ಯ ಮತ್ತು ಕೆಲಸ ಗುರುತಿಸಿ ಅವರಿಗೆ ಅಂದಿನ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರ್ಮ ಪ್ರವರ್ತ ಎಂಬ ಬಿರುದು ನೀಡಿದರು.
1910 ರಲ್ಲಿ, ಜಾರ್ಜ್ V, ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷ್ ಚಕ್ರವರ್ತಿ ಇವರಿಗೆ "ರಾವ್ ಬಹದ್ದೂರ್" ಎಂಬ ಬಿರುದನ್ನು ನೀಡಿದರು.
ಈ ಧರ್ಮ ಛತ್ರವು ಎಲ್ಲಾ ಜನರಿಗೂ ಆಶ್ರಯ ಒದಗಿಸಿದೆ.ಕರ್ನಾಟಕದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 16 ಸಂಸ್ಥೆಗಳಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ (ಹುಡುಗ ಮತ್ತು ಹುಡುಗಿಯರಿಗೆ)ವಸತಿ ಮತ್ತು ದಾಸೋಹ ವ್ಯವಸ್ಥೆ ಒದಗಿಸುತ್ತಿದೆ.
ಬೆಂಗಳೂರಿನ ರೈಲ್ವೆ ನಿಲ್ದಾಣದ ಬಳಿ ಹಾಸ್ಟೆಲ್ (ಹುಡುಗರಿಗೆ) ಮತ್ತು ಪ್ರವಾಸಿಗಳಿಗೆ ಹಾಗೂ ವ್ಯಾಪಾರಿಗಳಿಗೆ ವಸತಿ ಸೌಲಭ್ಯವಿದೆ.
ಈ ಹಾಸ್ಟೆಲ್ನಲ್ಲಿ ಪ್ರತಿ ವರ್ಷವೂ 200 ಹೊಸ ವಿದ್ಯಾರ್ಥಿಗಳಿಗೆ ಆಶ್ರಯ ಮತ್ತು ದಾಸೋಹ ವ್ಯವಸ್ಥೆ ನೀಡುತ್ತಿದೆ.
ಇಂದಿನವರೆಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.
ಇದರಲ್ಲಿ ಗಣನೀಯವಾಗಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಕೂಡ ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಇಲ್ಲೇ ಇದ್ದದ್ದು(1927 -1930).
ಅದಲ್ಲದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಎಸ್.ನಿಜಲಿಂಗಪ್ಪ ನವರು 1921 ರಿಂದ 1924 ರವರೆಗೆ ಇಲ್ಲಿಯೇ ನೆಲೆಸಿ ವ್ಯಾಸಂಗ ಮಾಡಿದ್ದರು.
ಶಿಕ್ಷಣ ಸಚಿವರಾಗಿದ್ದ ಶ್ರೀ ಡಿ ಎಚ್ ಚಂದ್ರಶೇಖರಯ್ಯ , ಅಕೌಂಟೆಂಟ್ ಜನರಲ್ ಆಗಿದ್ದ ಶ್ರೀ ಡಿ ಏಚ್ ವೀರಯ್ಯ ಮತ್ತು ಕರ್ನಾಟಕ ಪೊಲೀಸ್ ಮುಖ್ಯ ಅಧಿಕಾರಿ ಎಚ್ ವೀರಭದ್ರಯ್ಯ ಅವರು ಹಾಸ್ಟೆಲ್ನಲ್ಲಿ ಇದ್ದು ಉಪಯೋಗ ಪಡೆದುಕೊಂಡಿದ್ದಾರೆ.
ತೋಟದಪ್ಪನವರ ನೂರು ವರ್ಷದ ನೆನಪಿಗಾಗಿ ಬೆಂಗಳೂರಿನಲ್ಲಿ ಬೆಲ್ ಎಂಬ ಹೋಟೆಲ್ ಪ್ರಾರಂಭಿಸಿದರು ಮತ್ತು ಇದರ ಹಣವನ್ನು ಚಾರಿಟಿ ಕಾರ್ಯಕ್ಕಾಗಿ ಉಪಯೋಗಿಸುತ್ತಾರೆ.ಅಲ್ಲದೆ ಈ ಸಂಸ್ಥೆಯು ಪ್ರತಿ ವರ್ಷವೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತದೆ.
ತೋಟದಪ್ಪ ನವರ ಮರಣ ವಾರ್ಷಕೋತ್ಸವದ ಸಲುವಾಗಿ ಪ್ರತಿ ವರ್ಷವೂ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ದತ್ತಿ ಉಪನ್ಯಾಸವನ್ನು ದೇಶದ ವಿವಿಧ ವಿದ್ವಾಂಸರಿಂದ ಏರ್ಪಡಿಸುತ್ತಾರೆ.
ಇವರ ಸೇವೆಗೆ ಗೌರವಾರ್ಥವಾಗಿ ಬೆಂಗಳೂರಿನ ರೈಲ್ವೆ ನಿಲ್ದಾಣದ ಮುಖ್ಯ ರಸ್ತೆಗೆ ಗುಬ್ಬಿ ತೋಟದಪ್ಪ ಎಂದು ನಾಮರಣ ಮಾಡಲಾಗಿದೆ.
ಈ ಸಂಸ್ತೆಯಿಂದಾಗಿ ಎಷ್ಟೋ ಬಡ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಈ ಸಂಸ್ಥೆಯಲ್ಲಿ ಆಶ್ರಯ ಪಡೆದ ಎಷ್ಟೋ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ ಎಂದು ಹೇಳಲು ಹೆಮ್ಮೆ ಇದೆ.
ಗುಬ್ಬಿ ತೋಟದಪ್ಪ ನವರ ನಿಸ್ವಾರ್ಥ ಸೇವೆಗೆ ನನ್ನಂತ ಎಷ್ಟೋ ವಿದ್ಯಾರ್ಥಿಗಳು ಚಿರಋಣಿ ಎಂದಿಗೂ.
ಇನ್ನು ಅದೆಷ್ಟೋ ಕನ್ನಡ ಚಲನ ಚಿತ್ರಗಳಲ್ಲಿ " ಇದೇನು ತೋಟದಪ್ಪನ ಛತ್ರ ನಾ ? ಎಂದು ಎಷ್ಟೋ ಬಾರಿ ಕೇಳಿದಿದ್ದೆ.ಅದು ಅವರ ಸೇವೆಯನ್ನು ಹೇಳುತ್ತದೆ.
ಕೃಪೆ: ಕೋರ
Comments
Post a Comment