ಸುಂದರ ಆಲೋಚನೆಗಳ ಬೀಜ ಬಿತ್ತಿ ಆ್ಯಪಲ್ ಬೆಳೆದವ !


“ನಾಳೆ ಸಾಯಂಕಾಲ ಎಂಟು ಗಂಟೆಗೆ ಜೆ.ಪಿ. ನಗರದಲ್ಲಿರುವ ಸ್ನೇಹಿತ ಅಖಿಲ್ ಶ್ರೀನಿವಾಸ ಅವರ ಮನೆಯಲ್ಲಿ ಒಂದು ಅಪರೂಪದ ಕಾರ್ಯಕ್ರಮವಿದೆ, ಹೋಗಬೇಕು’ ಎಂದು ನನ್ನ ಐಫೋನ್ ಬೆಳಗ್ಗೆ ಆರು ಗಂಟೆಗೆ ಮೆಲ್ಲಗೆ ನನ್ನನ್ನು ನೆನಪಿಸಿತು. ಅಲ್ಲಿ ನಾವು ಸುಮಾರು ನಲವತ್ತು ಮಂದಿ”ಹುಚ್ಚರು’ ಸಭೆ ಸೇರಿ ಒಂದು ಸಭೆ ಮಾಡುವವರಿದ್ದೇವೆ. ಅದನ್ನು ಮೊದಲ ಪುಣ್ಯಸ್ಮರಣೆ ಅನ್ನಿ, ತಿಥಿ ಅನ್ನಿ, ಶ್ರದ್ಧಾಂಜಲಿ ಅನ್ನಿ ಅಥವಾ ಗುಣಗಾನ ಸಭೆ ಅನ್ನಿ. ಎರಡು ತಾಸು ಸ್ಟೀವ್ ಜಾಬ್ಸ್ ಎಂಬ ಮಾಂತ್ರಿಕನನ್ನು ಅಲ್ಲಿ ನೆನಪಿಸಿಕೊಳ್ಳುತ್ತೇವೆ. ಸ್ಟೀವ್ ಜಾಬ್ಸ್ ಜತೆ ಕೆಲಸ ಮಾಡಿದ ಇಬ್ಬರು ಅಂದು ಮಾತಾಡುತ್ತಾರೆ. ಅಂದ ಹಾಗೆ ನಾಳೆ ಶುಕ್ರವಾರಕ್ಕೆ ಸ್ಟೀವ್ ಜಾಬ್ಸ್ ನಮ್ಮನ್ನು ಅಗಲಿ ಒಂದು ವರ್ಷವಾಗುತ್ತದೆ. ಕಳೆದ ಒಂದು ವರ್ಷದಲ್ಲಿ, ಸ್ಟೀವ್ ಜಾಬ್ಸ್ ಇಲ್ಲದ ಜಗತ್ತು ಏನಾಗಿದೆ ಎಂಬ ಬಗ್ಗೆ ಅಖಿಲ್ ಶ್ರೀನಿವಾಸ ಮಾತಾಡುತ್ತಾನೆ. ಆತ ಜಾಬ್ಸ್್ನನ್ನು ಅಡಿಯಿಂದ ಮುಡಿತನಕ ಪ್ರೀತಿಸುವವ. ನಾವು ನಲವತ್ತು ಮಂದಿ ಪ್ರತಿದಿನ ಜಾಬ್ಸ್್ನ ಕುರಿತು ಮೇಲ್, ಆರ್ಟಿಕಲ್ ಎಕ್ಸ್್ಚೇಂಜ್ ಮಾಡಿಕೊಳ್ಳುತ್ತೇವೆ. ಕೆಲವರಿಗೆ ಇದೇ ಪ್ರಮುಖ ಜಾಬ್ ವರ್ಕ್!
ಬೇರೆಯವರು ಕರೆಯುವುದಕ್ಕಿಂತ ಮೊದಲೇ ನನ್ನನ್ನು ನಾನು”ಆ್ಯಪಲ್ ಹುಚ್ಚ’ ಅಂತ ಕರೆದುಕೊಂಡು ಬಿಟ್ಟಿದ್ದೇನೆ. ಅಲ್ಲದೇ ಈ”ಹುಚ್ಚುತನ’ ಸಾಂಕ್ರಾಮಿಕ ಎಂಬುದನ್ನು ಮನಗೊಂಡು ಇತರರಿಗೂ ಹಬ್ಬಿಸಿದ್ದೇನೆ.
ನನ್ನಿಂದ”ಹುಚ್ಚ’ರಾದವರ ಸಂಖ್ಯೆ ಏನಿಲ್ಲವೆಂದರೂ ಅರ್ಧ ಶತಕ ದಾಟಿದೆ. ಕೆಲವರು ನನ್ನನ್ನು”ಆ್ಯಪಲ್ ಏಜೆಂಟ್್’ ಎಂದು ಕರೆಯುವುದುಂಟು. ಇನ್ನು ಕೆಲವರು ಇದನ್ನೇ ನಾಜೂಕಾಗಿ”ಆ್ಯಪಲ್ ಅಂಬಾಸಿಡರ್್’ ಅಂತಾನೂ ಕರೆಯುವುದುಂಟು. ಅದೇನೇ ಇರಲಿ, ನನಗೆ ಈ ಹುಚ್ಚು ಅಂಟಿದ ದಿನದಿಂದ ನಾನು ಮೊದಲಿನಂತೆ ಇಲ್ಲ. ಸಾಕಷ್ಟು ಬದಲಾಗಿದ್ದೇನೆ. ಸಾಕಷ್ಟು ಸುಧಾರಣೆಗೊಂಡಿದ್ದೇನೆ. ಜಗತ್ತು ವಿಶಾಲವಾಗುತ್ತಾ ಕೊನೆಗೆ ಸಣ್ಣದಾಗಿ ನನ್ನ ಮುಂದೆ ಕಾಲು ಮುದುರಿ ಕುಳಿತಂತೆ ಭಾಸವಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತವರೊಂದಿಗೆ ಕುಳಿತಲ್ಲಿಂದಲೇ ನೋಡುವುದು, ಮಾತಾಡುವುದು ಸಾಧ್ಯವಾಗಿದೆ. ಯಾವ ಮಾಹಿತಿಯೇ ಕೇಳಿ,anything under the Sun or anything above water or below, ಎಂಥಾ ಸಂಗತಿಯನ್ನಾದರೂ ಕೇಳಿ ಕ್ಷಣಾರ್ಧದಲ್ಲಿ ಲಭ್ಯ.
ಪ್ರಾಯಶಃ ಜಗತ್ತು ಅಥವಾ ಜೀವನ ಇದಕ್ಕಿಂತ ಸರಳ ಹಾಗೂ ರೋಚಕವಾಗಿರಲು ಸಾಧ್ಯವೇ ಇಲ್ಲ. ನನ್ನ ಹಾಗೂ ನನ್ನಂತೆ ಅಸಂಖ್ಯ ಜನರ ಪ್ರತಿಕ್ಷಣವನ್ನೂ ಸಾರ್ಥಕಗೊಳಿಸುತ್ತಿರುವ ಆ ಸ್ಟೀವ್ ಜಾಬ್ಸ್ ನಮ್ಮಿಂದ ಮರೆಯಾಗಿದ್ದಾನೆ ಅಂದ್ರೆ ನಂಬುವುದಾದರೂ ಹೇಗೆ? ಯಾಕೆಂದರೆ ತಾನು ರೂಪಿಸಿದ ಉತ್ಪಾದಿಸಿದ ಐಫೋನ್, ಐಮ್ಯಾಕ್, ಐಪಾಡ್, ಐಪ್ಯಾಡ್, ಐಪಾಡ್ ಟಚ್… ಮುಂತಾದವುಗಳಲ್ಲಿ ಸ್ಟೀವ್ ಜಾಬ್ಸ್ ಜೀವಂತವಾಗಿದ್ದಾನೆ, ನಿತ್ಯ ಮಾತಾಡುತ್ತಾನೆ. ಅವೆಷ್ಟೋ ಕೋಟಿ ಕೋಟಿ ಜನರ ಜೀವನ ಇಂದು ಆ್ಯಪಲ್್ಮಯವಾಗಿದೆ.
ಇವಿಲ್ಲದೇ ಬದುಕು ಅಯೋವುಯ. ಹೆಂಡತಿಯಿಲ್ಲದೇ ನಾಲ್ಕು ದಿನ ಬದುಕಬಹುದು. ಆದರೆ ಐಫೋನ್, ಐಪ್ಯಾಡ್ ಇಲ್ಲದೇ ಎಷ್ಟೋ ಜನರಿಗೆ ನಾಲ್ಕು ಗಂಟೆ ಸಹ ಇರಲು ಆಗೊಲ್ಲ ಅಂದ್ರೆ ನಾನು ಹೆಂಗಸರನ್ನು, ಹೆಂಡತಿಯರನ್ನು ಟೀಕಿಸುತ್ತಿದ್ದೇನೆಂದು ನೀವು ಭಾವಿಸುವುದಿಲ್ಲವೆಂಬುದು ನನಗೆ ಗೊತ್ತು. ಸ್ಟೀವ್ ಜಾಬ್ಸ್ ಸೃಷ್ಟಿಸಿದ ಮಾಂತ್ರಿಕ ಲೋಕ ಅಂಥದು. ಇಲ್ಲಿ ತನಕ ಆ್ಯಪಲ್ ಕಂಪನಿ ಹೊರತಂದಿರುವ ಎಲ್ಲ ಉಪಕರಣ, ಪ್ರಾಡಕ್ಟ್್ಗಳನ್ನು ನಾನು ಕಳೆದ ಐದು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ನಾನು ಒಂಥರಾ Apple Geek್ಞ.
ಮೂಲಭೂತವಾಗಿ ನನಗೆ ಅದೊಂದು ಕಂಪ್ಯೂಟರ್, ಫೋನ್ ಎಂದು ಅನಿಸುವುದಿಲ್ಲ. ಅದೊಂದು ಮಶೀನು, ಘನವಸ್ತು, ಜಡವಸ್ತು ಎಂದೂ ಅನಿಸುವುದಿಲ್ಲ. ಅವಿಷ್ಟೇ ಆಗಿದ್ದರೆ ಇವುಗಳಿಗೂ ಇತರ ವಸ್ತುಗಳಿಗೂ ಏನೂ ವ್ಯತ್ಯಾಸವಿರುತ್ತಿರಲಿಲ್ಲ. ಆದರೆ ಐಫೋನ್, ಐಮ್ಯಾಕ್, ಐಪ್ಯಾಡ್ ಮುಂತಾದ ಆ್ಯಪಲ್ ಪ್ರಾಡಕ್ಟ್್ಗಳಿವೆಯಲ್ಲ, ಅವು ಅದ್ಭುತವಾದ ಆವಿಷ್ಕಾರಗಳಷ್ಟೇ ಅಲ್ಲ, ಏಳೆಂಟು ಸಾವಿರ ಸುಂದರ ಮನಸ್ಸು (beautiful minds)ಗಳು ಏಕತ್ರ ಸೇರಿ, ಹಲವು ತಿಂಗಳು, ವರ್ಷ ಚರ್ಚಿಸಿ, ಚರ್ಚಿಸಿ, ಅಳೆದು, ಸುರಿದು, ತಪ್ಪು ಮಾಡಿ, ಸರಿ ಮಾಡಿ, ಬೇಡ, ಬೇಕು ಎಂದು ಜಗಳ ಕಾದು, ಪುನಃ ಚರ್ಚಿಸಿ ರೂಪಿಸಿದ ಅಮೂಲ್ಯ ವಸ್ತು!
ಐಫೋನ್ ಒಂದು ಮೊಬೈಲ್ ಫೋನಾಗಿದ್ದರೆ, ಐಮ್ಯಾಕ್ ಒಂದು ಕಂಪ್ಯೂಟರ್ ಆಗಿದ್ದರೆ, ಐಪಾಡ್ ಒಂದು ವಾಕ್್ಮನ್ ಆಗಿದ್ದರೆ ಸ್ಟೀವ್್ಜಾಬ್ಸ್ ಮಹಾನ್ ಎಂದೆನಿಸುತ್ತಿರಲಿಲ್ಲ. ಆ್ಯಪಲ್ ಪ್ರಾಡಕ್ಟ್್ಗಳು ಸುಂದರ ಮನಸ್ಸುಗಳು ಒಂದೆಡೆ ಸೇರಿ ಮೂಡಿದ ವಸ್ತುಗಳು. ಹೀಗಾಗಿ ಅವುಗಳಲ್ಲಿ ಸೌಂದರ್ಯವಿದೆ, ಜೀವನಪ್ರೀತಿಯಿದೆ, ಬಹು ಆಯಾಮಗಳಿವೆ, ವೈಶಿಷ್ಟ್ಯಗಳ ಬೆರಗುಗಳಿವೆ, ಅಪರಿಮಿತ ಸಾಧ್ಯತೆಗಳ ಸಾಗರಗಳಿವೆ ಹಾಗೂ ಇವೆಲ್ಲವೂ ಡೆಮಾಕ್ರೆಟಿಕ್ ಅಂತೆನಿಸಿಕೊಳ್ಳಲು ಎಲ್ಲರಿಗೂ ಲಭ್ಯವಿದೆ. ಸ್ಟೀವ್ ಜಾಬ್ಸ್ ಇವುಗಳನ್ನು ಅವೆಷ್ಟು ಮನಮೋಹಕವಾಗಿ, ಬಳಕೆಸ್ನೇಹಿಯಾಗಿ ರೂಪಿಸಿದ್ದಾನೆಂದರೆ ಇವುಗಳಲ್ಲಿ ಯಾವುದೇ ಓರೆಕೋರೆಗಳನ್ನು ಕಾಣಲು ಸಾಧ್ಯವಿಲ್ಲ. ಅಂಥದ್ದೊಂದು ಇರಬೇಕಾಗಿತ್ತು, ಇದು ಇರಬಾರದಿತ್ತು, ಹೀಗಿದ್ದರೆ ಭೇಷ್ ಆಗಿರುತ್ತಿತ್ತೇನೋ ಎಂದು ಸ್ವಲ್ಪವೂ ಸ್ವಾಟೆ ತಿರುವುವಂತಿಲ್ಲ. ಅಂಥ ಸಣ್ಣ-ಪುಟ್ಟ Correction ಗಳಿಗೂ ಆಸ್ಪದವೇ ಇಲ್ಲ. ಅಷ್ಟೊಂದು ಕರಾರುವಾಕ್ಕು. ಜೀವನಪ್ರೀತಿ ಹೊಂದಿರುವ ಸುಂದರ ಮನಸ್ಸುಗಳಿಗೆ ಮಾತ್ರ ಇವೆಲ್ಲ ಸಾಧ್ಯ. ಸ್ಟೀವ್ ಜಾಬ್ಸ್ ಇಂಥ ಮನಸ್ಸುಗಳ ಬೀಜ ಬಿತ್ತಿ “ಆ್ಯಪಲ್್’ ಬೆಳೆದ. ತಾನು ಹೋದ ಸಂಸ್ಥೆಗಳಲ್ಲೆಲ್ಲ ಒಂದು ವಿನೂತನ ಸ್ಟೈಲ್ ರೂಪಿಸಿದ. ಆ್ಯಪಲ್ ಪ್ರಾಡಕ್ಟ್್ಗಳು ದುಬಾರಿಯೆನಿಸಬಹುದು, ಆದರೆ ಗುಣಮಟ್ಟ, ಸೌಂದರ್ಯ, ಬಳಕೆ ಹಾಗೂ ಉಪಯುಕ್ತತೆಯಲ್ಲಿ ಅವುಗಳನ್ನು ಸರಿಗಟ್ಟುವ ಮತ್ತೊಂದು ಪ್ರಾಡಕ್ಟ್ ಇಲ್ಲ. ಆ್ಯಪಲ್ ಐಫೋನ್ ಆಗಲಿ, ಐಮ್ಯಾಕ್ ಆಗಲಿ ಬರೀ ಫೋನ್, ಕಂಪ್ಯೂಟರ್್ಗಳಲ್ಲ, ಅಭಿಮಾನದ ಸಂಕೇತ. ಗುಣಮಟ್ಟವನ್ನು ಪ್ರೀತಿಸುವ ನಿಮ್ಮ ವಿಶೇಷ ಗುಣದ appreciation ಕೂಡ ಹೌದು. ನಿಮಗೇ ನೀವು ಕೊಟ್ಟುಕೊಳ್ಳುವ ಶಹಭಾಸ್್ಗಿರಿಯೂ ಹೌದು.
ನಿಮ್ಮೊಳಗೊಂದು ಅದಮ್ಯ ಚೇತನ ಇಲ್ಲದಿದ್ದರೆ, ಜೀವನಪ್ರೀತಿ ಇಲ್ಲದಿದ್ದರೆ, ಹಸಿವು ಇಲ್ಲದಿದ್ದರೆ, ಅದ್ಭುತವೆನಿಸುವ passion ಇಲ್ಲದಿದ್ದರೆ ಇಂಥವುಗಳ ಕನಸು ಕಾಣಲು ಸಾಧ್ಯವಿಲ್ಲ. ಅವುಗಳಿಗೆ ಸಾಕಾರ ರೂಪ ಕೊಡಲೂ ಆಗುವುದಿಲ್ಲ. ಸ್ಟೀವ್ ಜಾಬ್ಸ್್ನಲ್ಲಿ ಅಂಥ ಕಾವು ಇತ್ತು. ಹುಚ್ಚಿತ್ತು, ಸೌಂದರ್ಯ ಆರಾಧನೆಯ, ಗುಣಉಪಾನೆಯ ಹಂಬಲವಿತ್ತು. ಇವುಗಳ ಹದ ಸಿದ್ಧವಾಗುವ ತನಕ ಕಾಯುವ ಸಹನೆ, ಸಂಯಮವಿತ್ತು. ತಾನು ರೂಪಿಸುವ ವಸ್ತುವನ್ನು ಜಗತ್ತಿನಲ್ಲಿರುವವರೆಲ್ಲ ಎದೆಗವುಚಿಕೊಂಡು ಸ್ವೀಕರಿಸಬೇಕು, ಅದಕ್ಕಾಗಿ ಕನವರಿಸಬೇಕು, ಅಭಿಮಾನದಿಂದ ತಮ್ಮನ್ನು ಅದರೊಂದಿಗೆ ಗುರುತಿಸಿಕೊಳ್ಳಬೇಕು ಎಂಬ ಉತ್ಕಟ ಅಭಿಲಾಷೆ ಸ್ಟೀವ್್ಜಾಬ್ಸ್್ಗೆ ಇತ್ತು.
ಐಫೋನ್ 2007ರ ಜೂನ್್ನಲ್ಲಿ ಮಾರುಕಟ್ಟೆಗೆ ಬರುವ ಹೊತ್ತಿಗೆ ಅದೆಂಥ ನಿರೀಕ್ಷೆ ಹಬ್ಬಿಕೊಂಡಿತ್ತೆಂದರೆ ಅಮೆರಿಕದಲ್ಲಿ ಹತ್ತರಲ್ಲಿ ಆರು ಮಂದಿಗೆ ಈ ವಿಷಯ ಗೊತ್ತಿತ್ತು. ಪ್ರತಿಷ್ಠಿತ”ಟೈಮ್್’ ಮ್ಯಾಗಜಿನ್ ಐಫೋನ್್ನ್ನು”ವರ್ಷದ ಆವಿಷ್ಕಾರ’ ಎಂದು ಕರೆಯಿತು. 1998ರಲ್ಲಿ ಐಮ್ಯಾಕ್್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಸ್ಟೀವ್ ಜಾಬ್ಸ್ ಒಂದು ಮಾತನ್ನು ಹೇಳಿದ್ದ-’The back of our Computer looks better than the front of anyone else’s.’ .’ ಸ್ಟೀವ್ ಜಾಬ್ಸ್್ಗೆ ಇಂಥ ಮಾತನ್ನು ಹೇಳುವ ಧಿಮಾಕಿತ್ತು. ಯಾಕೆಂದರೆ ಆತ ಮೂಲತಃ Perfectionist ಆಗಿದ್ದ. ಆತನಿಗೆ ನಕಲು ಹೊಡೆಯುವುದರಲ್ಲಿ, ಐಡಿಯಾ ಕದಿಯುವುದರಲ್ಲಿ ನಂಬಿಕೆ ಇರಲಿಲ್ಲ. ತಾನು ಮಾಡಿದ್ದು ಹೊಸ ಟ್ರೆಂಡ್ ಆಗಬೇಕು ಎಂಬುದು ಅವನ ಹಠ. ಹೀಗಾಗಿ ಸ್ಟೀವ್ ಜಾಬ್ಸ್ ಅದೇ ದಾರಿಯನ್ನು ತುಳಿಯಲಿಲ್ಲ. ತಾನೇ ಹೊಸ ದಾರಿಯನ್ನು ನಿರ್ಮಿಸಿದ. ಒಮ್ಮೆ ಆತ ತನ್ನ ಭಾಷಣದಲ್ಲಿ ಖ್ಯಾತ ಐಸ್ ಹಾಕಿ ಆಟಗಾರ ವಾಯ್್ನೆ ಗ್ರೆಟ್ಸಕಿ ಹೇಳಿದ ಮಾತನ್ನು ಉದ್ಧರಿಸಿ ಒಂದು ಮಾತನ್ನು ಹೇಳಿದ್ದ-’I skate to where the ball (puck) is going to be, not where it has been..’ (ಚೆಂಡು ಎಲ್ಲಿ ಹೋಗುತ್ತೋ ಅಲ್ಲಿ ಹೋಗುತ್ತೇನೆಯೇ ಹೊರತು ಚೆಂಡು ಇರುವಲ್ಲಿ ಅಲ್ಲ.)
ಸ್ಟೀವ್ ಜಾಬ್ಸ್ ಆ್ಯಪಲ್್ನಲ್ಲಿ ಮಾಡಿದ್ದು ಇದೇನೆ. ಜನರ ಮೂಡು ಹರಿಯುವತ್ತ ನಡೆದು ಹೋದ. ನಡೆವಾಗ ಜನರ ಮೂಡನ್ನು ತನ್ನ ಜತೆಗೇ ಕರೆದುಕೊಂಡು ಬಂದ. ಆ ಮೂಡುಗಳೆಲ್ಲ ಒಂದೆಡೆ ಕೇಂದ್ರಿಕರಿಸುವಂತೆ ಮಾಡಿದ. ತನ್ನ ಪ್ರಾಡಕ್ಟ್್ಗಳಲ್ಲಿ ಅವುಗಳೆಲ್ಲ ಅರಳುವಂತೆ ಮಾಡಿದ. ಇದು ಸಾಮಾನ್ಯ ಸಂಗತಿಯಲ್ಲ. ಒಂದು ಐಫೋನ್, ಐಪಾಡ್, ಐಪ್ಯಾಡ್್ನಿಂದ ಇಡೀ ವಿಶ್ವವನ್ನೇ ಬೆಸೆಯಬಹುದೆಂಬುದನ್ನು ತೋರಿಸಿಕೊಟ್ಟ. ಪರಿಣಾಮ ಜನ ಆ್ಯಪಲ್ ಕಂಪನಿ ಪ್ರಾಡಕ್ಟ್್ಗೆ ಕಾತರಿಸುವಂತಾಯಿತು, ಚಡಪಡಿಸುವಂತಾಯಿತು. ಪ್ರತಿ ಪ್ರಾಡಕ್ಟ್ ಸಹ ನಿರೀಕ್ಷೆಗಳ ಮೂಟೆಯೇ ಆಯಿತು. ಹೀಗಾಗಿ ಮಾರುಕಟ್ಟೆಯಲ್ಲಿ ಗೆದ್ದಿತು. ಅಷ್ಟೇ ಅಲ್ಲ, ಅದು ಇಡೀ ಜನಸಮೂಹ ಬದುಕುವ ರೀತಿಯನ್ನೇ ಬದಲಿಸಿತು. ಜಗತ್ತು ಸಹ ಮೊದಲಿಗಿಂತ ಹೆಚ್ಚು ಸಹನೀಯವಾಯಿತು. ಬದುಕುವ ಕ್ಷಣಗಳು ಇನ್ನಷ್ಟು ಸುಲಭವಾದವು, ಮಧುರವಾದವು.
ಇವೆಲ್ಲವನ್ನೂ ಸ್ಟೀವ್ ಜಾಬ್ಸ್ ಯೋಚಿಸಿದ್ದನಾ?
ನಿಶ್ಚಿತವಾಗಿ. ಅನುಮಾನವೇ ಬೇಡ.
ಯಾಕೆಂದರೆ ಆ್ಯಪಲ್ ಉಪಕರಣವೆಂದರೆ ಬರೀ ಉಪಕರಣಗಳಲ್ಲ. ಅದೊಂದು ಪರಿಪೂರ್ಣ ಬಿಜಿನೆಸ್ ಮಾಡೆಲ್. ಆ್ಯಪಲ್್ಗೆ ಐಫೋನ್, ಐಪಾಡ್ ಮಾರಿದ್ದಕ್ಕಿಂತ ಹೆಚ್ಚು ಹಣ ಆ್ಯಪಲ್ ಸ್ಟೋರ್ಸ್್ನಲ್ಲಿ ಮ್ಯೂಸಿಕ್ ಹಾಗೂ ಆ್ಯಪ್ಸ್ ಡೌನ್್ಲೋಡ್ ಮಾಡಿಕೊಂಡಾಗ ಸಿಗುತ್ತದೆ. ಸ್ಟೀವ್ ಜಾಬ್ಸ್ ಪಕ್ಕಾ ಬಿಜಿನೆಸ್್ಮನ್ ಕೂಡ. ಆತ ಇಲ್ಲದೇ ಒಂದು ವರ್ಷಅವನ ನೆನಪಲ್ಲಿ ಕಳೆದು ಹೋಯಿತು. ಆತ ಅಕಾಲಿಕವಾಗಿ ಕಾಯಿಲೆಗೆ ತುತ್ತಾಗಿ ತೀರಿಕೊಂಡ. ಹತ್ತು ಲಕ್ಷಕ್ಕೂ ಹೆಚ್ಚು ಜನ apple.com ಗೆ ಭೇಟಿ ನೀಡಿ ಕಂಬನಿಗೆರೆದರು. ನನಗೆ ಈಗಲೂ ಕಣ್ಣಿಗೆ ಬರುವುದು ಆತ ಸಾವಿನ ಬಗ್ಗೆ ಮಾಡಿದ ಭಾಷಣ. ಅದನ್ನು ಕೇಳುತ್ತಿದ್ದರೆ ಸ್ಟೀವ್ ಜಾಬ್ಸ್ ಬರೀ ಕಂಪ್ಯೂಟರ್ ತಜ್ಞನಷ್ಟೇ ಅಲ್ಲ, ತತ್ವಜ್ಞಾನಿಯಂತೆ ಗೋಚರಿಸುತ್ತಾನೆ. ಈಗ ನಿಮಗೆ ಆತನ ಭಾಷಣದ ಸಂಗ್ರಹ ಭಾಗ ಕೇಳಿಸುತ್ತೇನೆ:
ನನಗೆ ಆಗ ಹದಿನೇಳು ವರ್ಷವಾಗಿತ್ತು. ನಿಗಿನಿಗಿ ಪ್ರಾಯದ ಆ ದಿನಗಳಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಬರಹವೊಂದು ನನ್ನ ಆಲೋಚನೆಯ ಮಟ್ಟ ಮತ್ತು ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು. ನಾನು ಕಂಡ ಆ ಬರಹದ ಸಾರಾಂಶ ಹೀಗಿತ್ತು:”ನನ್ನ ಪಾಲಿಗೆ ನಾಳೆ ಎಂಬುದೇ ಇಲ್ಲ. ಇವತ್ತೇ ನನ್ನ ಬದುಕಿನ ಕೊನೆಯ ದಿನ ಅಂದುಕೊಳ್ಳಿ. ನಾಳೆ ಎಂಬುದೇ ಇಲ್ಲ ಅಂದ ಮೇಲೆ ಯಾವುದೇ ಕೆಲಸವನ್ನೂ ನಾಳೆಗೆ ಮುಂದೂಡಬೇಡಿ. ಒಂದೊಂದು ಕ್ಷಣವನ್ನೂ ಉತ್ಕಟತೆಯಿಂದ ಬದುಕಿ. ಹೀಗೆ ಮಾಡಿದರೆ ನೆಮ್ಮದಿ ಮತ್ತು ಕೀರ್ತಿ ಒಟ್ಟೊಟ್ಟಿಗೇ ಜೊತೆಯಾಗುತ್ತವೆ..’
ಅದರಿಂದ ನನಗೆ ಆದ ಉಪಯೋಗಗಳೂ ಒಂದೆರಡಲ್ಲ. ಮುಖ್ಯವಾಗಿ, ಇವತ್ತೇ ಕೊನೆಯ ದಿನ ಅಂದುಕೊಂಡಿದ್ದರಿಂದ ನನಗೆ ನಾಳೆಯ ಬಗ್ಗೆ ಚಿಂತೆಯಿರಲಿಲ್ಲ. ಸಾವಿನ ಕುರಿತಂತೆ ಹೆದರಿಕೆ ಇರಲಿಲ್ಲ. ವ್ಯವಹಾರದಲ್ಲಿ ಹೆಚ್ಚು ಕಮ್ಮಿ ಆಗಿಬಿಟ್ರೆ ಎಂಬ ಅಭದ್ರತೆ ಕಾಡಲಿಲ್ಲ. ಹಾಗಾಗಿ ಎಲ್ಲವನ್ನೂ ಒಂದೊಂದೇ ದಿನದಲ್ಲಿ ಮಾಡಿ ಮುಗಿಸಿದೆ. ಒಂದೊಂದು ಕ್ಷಣವನ್ನೂ ಉತ್ಕಟವಾಗಿ ಬದುಕಿದೆ. ಈ ಉತ್ಸಾಹದ ಕಾರಣದಿಂದ ನಿರೀಕ್ಷೆ ಮೀರಿ ಕೆಲಸ ಮಾಡುವುದು ಸಾಧ್ಯವಾಯಿತು. ಸಾವಿನ ವಿಷಯವಾಗಿ ಇರುವ ಭಯ ಮತ್ತು ಭವಿಷ್ಯದ ಕುರಿತು ಇರುವ ಅಭದ್ರತೆ ಎಂಥವರನ್ನೂ ಅಲುಗಾಡಿಸಿ ಬಿಡುತ್ತದೆ. ಈ ಎರಡೂ ಅಂಶಗಳಿಂದ ನಾನು ಕಳಚಿಕೊಂಡಿದ್ದೆ.
ಆದರೆ ಒಮ್ಮೆ ತೀವ್ರ ಅನಾರೋಗ್ಯ ಜೊತೆಯಾದಾಗ ಒಮ್ಮೆ ಸಮಗ್ರವಾಗಿ ಆರೋಗ್ಯ ತಪಾಸಣೆ ಮಾಡಿಸಿದ ಸಂದರ್ಭದಲ್ಲಿ ಹೌಹಾರುವ ಸತ್ಯ ಎದುರಾಯಿತು. ನನಗೆ ಕ್ಯಾನ್ಸರ್ ಅಮರಿಕೊಂಡಿತ್ತು! ಪ್ರಾರಂಭದಲ್ಲಿ ಇದು ವಾಸಿಯೇ ಆಗದ ಕಾಯಿಲೆ ಎಂದಿದ್ದ ವೈದ್ಯರು ನಂತರದ ಪರೀಕ್ಷೆಯಲ್ಲಿ ಬದುಕುವ ಭರವಸೆ ಕೊಟ್ಟರು. ತುಂಬ ಹತ್ತಿರದಿಂದಲೇ ಸಾವನ್ನು ನೋಡಿ ಬಂದ ಅನುಭವ ನನ್ನದಾಗಿತ್ತು. ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ಏನೆಂದರೆ, ಪ್ರತಿಯೊಬ್ಬ ಮನುಷ್ಯನೂ ಸತ್ತ ನಂತರ ಸ್ವರ್ಗ ಸೇರಬೇಕು ಎಂದು ಬಯಸುತ್ತಾನೆ. ಹೆಚ್ಚು ತಪ್ಪು ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಯಾರಾದರೂ ಹೇಳಿದರೆ, ಈವರೆಗೂ ತಾನು ಮಾಡಿರುವ ತಪ್ಪುಗಳನ್ನು ನೆನೆದು ಕಲ್ಲವಿಲಗೊಳ್ಳುತ್ತಾನೆ. ಸ್ವರ್ಗ ಸೇರಬೇಕು ಎಂಬ ಆಸೆಯಿಂದಲೇ ದಾನ ಮಾಡುತ್ತಾನೆ. ದೈವಭಕ್ತನಾಗುತ್ತಾನೆ. ಪ್ರಾರ್ಥನೆಗೆ ತೊಡಗುತ್ತಾನೆ. ವಿಪರ್ಯಾಸ ನೋಡಿ. ಸ್ವರ್ಗ ಸೇರಲು ಹೀಗೆಲ್ಲಾ ಪೂರ್ವತಯಾರಿ ಮಾಡಿಕೊಳ್ಳುವ ಮನುಷ್ಯ ಸಾಯಲು ಮಾತ್ರ ಸಿದ್ಧನಾಗಿರುವುದಿಲ್ಲ! ಬದುಕಲ್ಲಿ ಎಲ್ಲ ಸಂತೋಷವನ್ನೂ ಅನುಭವಿಸಿದವನು ಮಾತ್ರವಲ್ಲ, ಸಂಕಟಗಳ ಮಧ್ಯೆಯೇ ಬದುಕಿದವನು ಕೂಡ ಇನ್ನೂ ಒಂದಷ್ಟೂ ದಿನ ಬದುಕಬೇಕು ಎಂದೇ ಆಸೆ ಪಡುತ್ತಾನೆ.
ಹೌದು, ಸಾವು ಎಂಬುದು ಪ್ರತಿಯೊಬ್ಬ ಮನುಷ್ಯನೂ ತಲುಪಿಕೊಳ್ಳುವ ಕೊನೆಯ ನಿಲ್ದಾಣ. ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಸತ್ತ ಸಂದರ್ಭದಲ್ಲಿ ನಮ್ಮೊಂದಿಗೆ ಯಾರೂ ಜತೆಗೆ ಬರುವುದಿಲ್ಲ. ಬದುಕೆಂದರೆ ಇಷ್ಟೇನೇ ಎಂಬ ಸತ್ಯ ಪ್ರಕಟವಾಗುವಂಥ ಕಠೋರ ಸಂದರ್ಭ ಅದು.
ಒಂದರ್ಥದಲ್ಲಿ ಎಲ್ಲರೂ ಅಲ್ಪಾಯುಷಿಗಳೇ ಎಂದು ವಿವರಿಸಲು ಸಾವಿನ ಪ್ರಸ್ತಾಪ ಮಾಡಿದೆ. ಸಾವು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬಂದು ಬಿಡಬಹುದು. ಈ ವಿಷಯದಲ್ಲಿ ಎಲ್ಲರೂ ಅಸಹಾಯಕರೇ. ಯಾವ ದೈವವೂ, ಯಾವ ಜ್ಯೋತಿಷ್ಯವೂ, ಯಾವೊಂದು ತತ್ವ ಸಿದ್ಧಾಂತವೂ ನಮ್ಮನ್ನು ಸಾವಿನಿಂದ ಕಾಪಾಡಲಾರದು. ಹಾಗಾಗಿ ಪ್ರತಿಬಾರಿಯೂ ನಿಮ್ಮ ಮನಸ್ಸಿನ ಮಾತು ಕೇಳಿ. ಧೈರ್ಯವಿದ್ದ ಕಡೆ ಗೆಲುವೂ ಇರುತ್ತದೆ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನನ್ನ ಪಾಲಿಗೆ ಉಳಿದಿರುವುದು ತುಂಬ ಕಡಿಮೆ. ಅವಧಿ ಎಂದುಕೊಂಡೇ ಅಂದುಕೊಂಡಿರುವ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಲು ಮುಂದಾಗಿ.
ನಾನು ಯುವಕನಾಗಿದ್ದ ಸಂದರ್ಭದಲ್ಲಿನ ಮತ್ತೊಂದು ಪ್ರಸಂಗ ನೆನಪಿಗೆ ಬರುತ್ತದೆ. ಇದು 1960ರ ದಶಕದ ಮಾತು. ಆ ದಿನಗಳಲ್ಲಿ The Whole Earth Catalog ಎಂಬ ಒಂದು ಮ್ಯಾಗಜಿನ್ ಪ್ರಕಟವಾಗುತ್ತಿತ್ತು. ಸ್ಟುವರ್ಟ್ ಬ್ರಾಂಡ್ ಎಂಬಾತ ಅದರ ಸಂಪಾದಕನಾಗಿದ್ದ. ಆರು ವರ್ಷದ ಹುಡುಗರಿಂದ 60 ವರ್ಷದ ಮುದುಕರವರೆಗೆ ಎಲ್ಲರೂ ಓದಬಹುದಾದ ವಿಷಯಗಳು ಆ ಮ್ಯಾಗ್್ಜೀನ್್ನಲ್ಲಿದ್ದವು. ಅವತ್ತಿಗೆ ಕಂಪ್ಯೂಟರ್, ಇಂಟರ್್ನೆಟ್, ಗೂಗಲ್ ಯಾವುದೂ ಇರಲಿಲ್ಲ. ಟೈಪ್್ರೈಟಿಂಗ್ ಮೆಶೀನ್್ನಲ್ಲಿ ಟೈಪ್ ಮಾಡಿ, ನಂತರ ಅಚ್ಚುಮೊಳೆ ಜೋಡಿಸಿ ಪತ್ರಿಕೆ ಪ್ರಿಂಟ್ ಮಾಡಬೇಕಿತ್ತು. ಅವತ್ತಿಗೆ ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಕಲೆಯ ವಿಷಯವಾಗಿ ಬಯಸಿದಷ್ಟು ಮಾಹಿತಿ ಸಿಕ್ಕುವುದು ಸಾಧ್ಯವೇ ಇರಲಿಲ್ಲ. ಆದರೂ, ಸ್ಟುವರ್ಟ್ ಬ್ರಾಂಡ್ ಮತ್ತು ಸಂಗಡಿಗರು ಪತ್ರಿಕೆಯನ್ನು ಸರ್ವಾಂಗ ಸುಂದರವಾಗಿ ಹೊರತರುತ್ತಿದ್ದರು.
ಈ ಅಪರೂಪದ ಪತ್ರಿಕೆ ಕೂಡ 15 ವರ್ಷಗಳ ನಂತರ ತನ್ನ ಪ್ರಸಾರ ನಿಲ್ಲಿಸಬೇಕಾಗಿ ಬಂತು. ಕೊನೆಯದಾಗಿ ಹೊರಬಂದ ಸಂಚಿಕೆಯ ಹಿಂಬದಿ ರಿಕ್ಷಾಪುಟದಲ್ಲಿ ಮುಂಜಾನೆಯ ಮಧುರ ಕ್ಷಣದ ಚಿತ್ರವೊಂದನ್ನು ಪ್ರಕಟಿಸಿದ ಪತ್ರಿಕಾ ಬಳಗ ಅದಕ್ಕೆ Stay Hungry, Stay foolish ಎಂಬ ಶೀರ್ಷಿಕೆ ನೀಡಿದ್ದರು. ಈ ಶೀರ್ಷಿಕೆ ನನ್ನನ್ನು ವಿಪರೀತ ಕಾಡಿತು. ಈ ಶೀರ್ಷಿಕೆಯನ್ನೇ ನನ್ನ ಬದುಕಿಗೂ ಅಳವಡಿಸಿಕೊಂಡೆ. Stay Hungry, Stay foolish ಎಂದರೆ ಹಸಿವೆಯಿಂದಿರಿ, ಮೂರ್ಖರಾಗಿರಿ ಎಂದಾಗಬಹುದು. ಅಥವಾ, ಹಸಿವೆಯಿರಲಿ, ತಿಳಿಯುವ ಮನಸ್ಸೂ ಇರಲಿ ಎಂದೂ ಆಗಬಹುದು. ನಿಮ್ಮ ಆಯ್ಕೆ ಎರಡನೆಯದೇ ಆಗಿರಲಿ. ನಿಮಗೆಲ್ಲ ಶುಭವಾಗಲಿ.
ಆ್ಯಪಲ್ ಎಂದರೆ ಸೇಬಿನ ಹಣ್ಣು ಅಲ್ಲ ಎಂದು ತೋರಿಸಿಕೊಟ್ಟ ಸ್ಟೀವ್ ಜಾಬ್ ಎಂಬ ಮಹಾ ಹುಚ್ಚನಿಗೆ ಪ್ರೀತಿಯ ನೆನಕೆ.
-ವಿಶ್ವೇಶ್ವರ ಭಟ್

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website