ರೈತರ ಆತ್ಮಗೌರವ: ಪ್ರೊ.ಎಂ.ಡಿ.ನಂಜುಂಡಸ್ವಾಮಿ

ರೈತರ ಆತ್ಮಗೌರವ: ಪ್ರೊ.ಎಂ.ಡಿ.ನಂಜುಂಡಸ್ವಾಮಿ
  '''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''
    ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಮಾತಿನ ವೈಖರಿ ಬಗ್ಗೆ ಯಾರೂ ಏನೊಂದನ್ನೂ ಹೇಳಬೇಕಾದ ಅಗತ್ಯವೇ ಇಲ್ಲ. ಅವರು ಇಡೀ ನಾಡಿಗೆ ಪ್ರೊಫೆಸರ್ ಎಂತಲೇ ಖ್ಯಾತಿಯಾಗಿದ್ರು. ಅವರ ಮಾತುಗಳು ದೇಶ ವಿದೇಶಗಳಲ್ಲೂ ಜನಜನಿತವಾಗಿದ್ದೊ. ಅವರ ಮಾತುಗಳಿಗೆ ಅಂಥಾದ್ದೊಂದು ಮಾಂತ್ರಿಕತೆ ಇತ್ತು. ಅದು ವಿಭಿನ್ನವಾಗಿತ್ತು. ವಿಶಿಷ್ಟವಾಗಿತ್ತು.  ಇಡೀ ನಾಡಿಗೇ ಅದೊಂದು ಮಾದರಿಯಾಗಿತ್ತು. ಅದು ಅನುಕರಣೆಗೆ ಯೋಗ್ಯವಾಗಿತ್ತು. ಹಾಗಾಗಿ ಪ್ರೊಫೆಸರ್ ಅವರ ಶೈಲಿಯನ್ನ ಅನುಕರಣೆ ಮಾಡಿದಷ್ಟು, ಇನ್ಯಾರ ಮಾತುಗಳನ್ನೂ  ಜನ ಅನುಕರಣೆ ಮಾಡಿಲ್ಲ. ರೈತ ಸಂಘ ಹಾಗೂ ಇತರ ಕಡೆಗಳಲ್ಲಿ ಅವರ ಅನುಕರಣೆಯ ಮಾತುಗಳನ್ನ ಈಗಲೂ ನೋಡಬಹುದು. ಈ ನಾಡಿನಲ್ಲಿ ಅವರ ಮಾತುಗಳನ್ನ ಹಾಗೂ ಅವರ ಶೈಲಿಯನ್ನ ಅನುಕರಣೆ ಮಾಡುವವರು ಅನೇಕ ಮಂದಿ ಇದ್ದಾರೆ.  ಪ್ರೊಫೆಸರ್ ಅವರ ಗರಡಿಯಲ್ಲೇ ಪಳಗಿದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ರೈತ ಸಂಘದ ಅನೇಕರನ್ನ ಅದಕ್ಕಿಲ್ಲಿ ಉದಾಹರಿಸಬಹುದು. ಕೆ‌.ಎಸ್.ಪುಟ್ಟಣ್ಣಯ್ಯನವರೂ ಪ್ರೊಫೆಸರ್ ಅವರ ಮಾತಿನ ಶೈಲಿಯನ್ನೇ ಅನುಕರಣೆ ಮಾಡುತಿದ್ರು. ಆದರೆ  ವಿಚಾರಗಳನ್ನ ಮುಟ್ಟಿಸುತಿದ್ದ ರೀತಿಯಲ್ಲಿ ಅವರು ನಾಡಿಗೆ ವಿಭಿನ್ನವಾಗಿದ್ರು.   ಅವರ ಮಾತುಗಳನ್ನ  ಕಾಪಿಕ್ಯಾಟ್  ಮಾಡಿಕೊಂಡು ಕೆಲವರು ಯಥಾವತ್ತಾಗಿ ಮಾತಾಡಲು ಪ್ರಯತ್ನಿಸಿದರೆ, ಮತ್ತೆ ಕೆಲವರು ಅವರ ಮೌತ್ ಪೀಸ್ ಆಗಿದ್ರು. ಒಟ್ಟಾರೆ ಮಾತುಕತೆ, ವಿಚಾರ, ಸಿದ್ಧಾಂತ ಎಲ್ಲದರಲ್ಲೂ ಪ್ರೊಫೆಸರ್ ಅವರ ಪ್ರಭಾವ ನಾಡಿನೆಲ್ಲೆಡೆ ದಟ್ಟೈಸಿತ್ತು.
    ನಾನಾಗ ಕಾಲೇಜು ಯೂನಿಯನ್ನಿನ ಸೆಕ್ರೆಟರಿ ಆಗಿದ್ದೆ. ನಮ್ಮ ಕಾಲೇಜಿನ ಫಂಕ್ಷನ್ನೊಂದಕ್ಕೆ ಪ್ರೊಫೆಸರ್ ಅವರನ್ನ ಮುಖ್ಯ ಭಾಷಣಕಾರರಾಗಿ ಕರೆಯುವ ಯೋಜನೆ ನನಗಿತ್ತು.  ಹಾಗಾಗಿ ಅವರನ್ನ ಆಹ್ವಾನಿಸಲು ಮೈಸೂರಿನ ಕೋರ್ಟ್ ಹಿಂಭಾಗದಲ್ಲಿನ  ಸರಸ್ವತಿಪುರದ ಮಹಂತದೇವರು (ನಂಜುಂಡಸ್ವಾಮಿಯವರ ತಂದೆ) ಅವರ ಮನೆಗೆ ಹೋದೆ. ಅವರ ಮನೆಗೆ ಪ್ರವೇಶ ಮಾಡುತಿದ್ದಂತೆ ನಂಜುಂಡಸ್ವಾಮಿ ಅವರೇ ನನಗೆ ಪ್ರತ್ಯಕ್ಷರಾದರು. ನನ್ನನ್ನ ಅವರಿಗೆ ಪರಿಚಯಿಸಿಕೊಂಡೆ. ಪ್ರತಿಯಾಗಿ ನನ್ನನ್ನ ಪ್ರೀತಿಯಿಂದ ಒಳ ಬರಮಾಡಿಕೊಂಡಂತಹ ಪ್ರೊಫೆಸರ್,  ಕುರ್ಚಿಯೊಂದರಲ್ಲಿ ಕೂರಲು ಹೇಳಿ, ಎದುರಿನ ಕುರ್ಚಿಯಲ್ಲಿ ಅವರೂ ಆಸೀನರಾದ್ರು. ನಾನು ಹೋಗಿದ್ದ ವಿಚಾರ ತಿಳಿಸಿದೆ. ಅದಕ್ಕೆ ಅವರು, "ಯಾವ ಸಬ್ಜೆಕ್ಟ್ ಬಗ್ಗೆ ಮಾತನಾಡಬೇಕು?" ಎಂದು ಕೇಳಿದರು. ನಾನಾಗ ಸ್ವಲ್ಪ ತಬ್ಬಿಬ್ಬಾದೆ. ಅಷ್ಟೊತ್ತಿಗಾಗಲೇ ಐದಾರು ಫಂಕ್ಷನ್ ಮಾಡಿದ್ದ ಅನುಭವ ನನಗಿತ್ತು. ಯಾವ ಅತಿಥಿಯೂ ಅಂಥಾದ್ದೊಂದು ಪ್ರಶ್ನೆಯನ್ನ ನನಗೆ ಆವರೆಗೂ ಕೇಳಿರಲಿಲ್ಲ. ಹಾಗಾಗಿ ಆ ಪ್ರಶ್ನೆ ನನಗೊಂದು ಸೋಜಿಗವೇ ಆಗಿತ್ತು. ಅಲ್ಲದೆ ಆ ವೇಳೆಗಾಗಲೇ ನಾನು ಪ್ರೊಫೆಸರ್ ಅವರ ಭಾಷಣ ಕೇಳಿದ್ದೆ.  ಒಡನಾಡಿಗಳೊಂದಿಗೆ ಚರ್ಚಿಸುವ ಅವರ ವಾಗ್ಝರಿಯನ್ನೂ ನೋಡಿದ್ದೆ. ಯಾವುದೇ ವಿಷಯ ಕೊಟ್ಟರೂ ಅಧಿಕಾರಯುತವಾಗಿ ಮಾತನಾಡುವ ಶಕ್ತಿ, ಸಾಮರ್ಥ್ಯ, ಅರ್ಹತೆ ಇದ್ದದ್ದು ಈ ನಾಡಿನ ಕೆಲವೇ ಕೆಲವರಲ್ಲಿ ಅವರೇ ಅಗ್ರಗಣ್ಯ ಅಂತಲೂ ಗೊತ್ತಿತ್ತು. ಆದರೆ ಅವರನ್ನ ನೇರಾನೇರ ಭೇಟಿಯಾಗಿ ನಾನೆಂದೂ ಮಾತನಾಡಿರಲಿಲ್ಲ. ಹಾಗಾಗಿ  ನನಗೆ ಮೊದಲ ಹಾಗೂ ಅಧಿಕೃತ ಭೇಟಿಯೇ ಅದಾಗಿತ್ತು. ಇತರರಿಗಿಂತ ಪ್ರೊಫೆಸರ್ ಡಿಫರೆಂಟಾಗಿರುತಿದ್ರು ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅಂಥಾದ್ರಲ್ಲಿ ಇದೂ ಒಂದು ಅಷ್ಟೇ.

    ಪ್ರೊಫೆಸರ್ ಅವರ ಪರಿಚಯ ನನಗೊಂದು ಆಕಸ್ಮಿಕ ಅಂತಲೇ ಹೇಳಬೇಕು. ಹಳ್ಳಿಯಿಂದ ಮೈಸೂರಿಗೆ ಬಂದು ಪಿ.ಯು. ಸೇರಿದ್ದೆ. ಆಗ ಮೈಸೂರು ನನಗೆ ಹೊಸದೊಂದು ಪ್ರಪಂಚವೇ ಆಗಿತ್ತು. ವಿಸ್ತಾರವಾದ ಟಾರು ರಸ್ತೆಗಳು, ಬಹು ಅಂತಸ್ತಿನ ಸಿಮೆಂಟ್ ಕಟ್ಟಡಗಳು, ಅರಮನೆ, ಉದ್ಯಾನವನಗಳು, ಮಾರುಕಟ್ಟೆಗಳು, ಸಿನಿಮಾ ಮಂದಿರಗಳು ಈ ಎಲ್ಲವೂ ನನಗೆ ವೈಭವೋಪೇತವಾಗಿ ಕಾಣುತಿದ್ದವು. 

      ನನ್ನ ಹಳ್ಳಿಗೆ ರಸ್ತೆಗಳೂಂತ  ಇರಲಿಲ್ಲ. ಅಲ್ಲಿನ ಓಣಿಗಳೇ ನನ್ನೂರಿನ ರಸ್ತೆಗಳಾಗಿದ್ದೊ. ಎತ್ತಿನಗಾಡಿ ಹೋಗುವಷ್ಟಿದ್ದ ಓಣಿಯೇ ನನ್ನೂರಿನ ದೊಡ್ಡ ರಸ್ತೆಯೆಂದು ಹೇಳಬಹುದಿತ್ತು. ವಿದ್ಯುತ್ ಸಂಪರ್ಕವೂ ಆಗ ನನ್ನೂರಿಗೆ ಇರಲಿಲ್ಲ. ಹಾಗಾಗಿ ಸೀಮೆಣ್ಣೆ ಸೊಡ್ಲಿ (ಬುಡ್ಡಿ, ದೀಪ)ನ ಬೆಳಕಲ್ಲಿ ಓದಿ, ಎಸ್ಎಸ್ಎಲ್ಸಿಯಲ್ಲಿ ಜಸ್ಟ್ ಪಾಸಾಗಿ, ಮಂಡ್ಯದ ಹಳ್ಳಿಯೊಂದರಿಂದ ಬಂದು ಮೈಸೂರು ಸೇರಿದ್ದೆ. ಬಂದ ಹೊಸದರಲ್ಲಿ   ಅಬ್ಬೇಪಾರಿಯಂತೆ ಇದ್ದೆ.  ಅಲ್ಲಿನ ಎಲ್ಲವೂ ನನಗೆ ರೋಮಾಂಚನವೇ ಆಗಿದ್ದೊ.  ತುರ್ತುಪರಿಸ್ಥಿತಿ ಆಗ ದೇಶದೆಲ್ಲೆಡೆ ಜಾರಿಯಲ್ಲಿತ್ತು.  ನನಗಾಗ ಯಾವುದೇ ಪ್ರಾಪಂಚಿಕ ತಿಳುವಳಿಕೆ ಇರಲಿಲ್ಲ.  ದಿನಗಳು ಕಳೆದಂತೆ ಮೈಸೂರಿನ ವಾತಾವರಣಕ್ಕೆ ಹೊಂದಿಕೊಳ್ಳಲು, ಕೆಲವೊಂದು ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸುತಿದ್ದೆ. ತುರ್ತುಪರಿಸ್ಥಿತಿ ಎನ್ನೋದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ಕಿತ್ತುಕೊಂಡಿದೆ ಎನ್ನುವ ಅರಿವು ಆಗ ನನಗಾಗ ಆಗತೊಡಗಿತು. ದೇವರು,ಧರ್ಮ,ಜಾತಿ, ಮತ ಇತ್ಯಾದಿ ಕುರಿತಂತೆ ಕೆಲವರು ಅವರವರ ಅನಿಸಿಕೆಗಳನ್ನ ಮುಂದಿಟ್ಟು ಚರ್ಚಿಸುವುದನ್ನ ನೋಡುತಿದ್ದೆ. ಹೀಗೇ ಓದಿನ ಜೊತೆಗೆ ಮೂರು ವರ್ಷ ಕಳೆದೆ. ಒಬ್ಬ ಅಬ್ಬೇಪಾರಿಯಾಗಿ ಮೈಸೂರಿಗೆ ಎಂಟ್ರಿಕೊಟ್ಟಂತಹ ನಾನು ಎರಡನೇ ವರ್ಷದ ಬಿ.ಎ.ಓದುತಿದ್ದಾಗ, ಚುನಾವಣೆಯಲ್ಲಿ ಸ್ಪರ್ಧಿಸಿ ಕಾಲೇಜು ಯೂನಿಯನ್ನಿನ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾದೆ. ಅಷ್ಟೊತ್ತಿಗಾಗಲೇ ನಾನು ವಿಚಾರವಾದಕ್ಕೆ ವಾಲತೊಡಗಿದ್ದೆ.
ಅದಕ್ಕೆ ಪ್ರೇರಣೆ, ಸ್ಫೂರ್ತಿ ಮೈಸೂರಿನ ವಿಚಾರವಾದಿಗಳು ಅಂತಲೇ ಹೇಳಬೇಕು. 

    ಟೀ ಕುಡಿಯಲೆಂದು ಗೆಳೆಯನೊಬ್ಬನ ಜೊತೆ ಮಿಲ್ಕ್ ಬಾರೊಂದಕ್ಕೆ ಹೋದಾಗ, ಅದರ ಮುಂದೆ ಸುತ್ತಲೂ ಛೇರ್ಸ್ ಹಾಕೊಂಡು ಕೆಲವರು ಚರ್ಚೆಯಲ್ಲಿ ತೊಡಗಿದ್ರು. ಆ ಗುಂಪಿನಲ್ಲಿ ಒಬ್ಬರು ಗಡ್ಡ ನೀವಿಕೊಂಡು ಅತ್ಯಾಕರ್ಷಕವಾಗಿ ಮಾತಾಡ್ತಾಯಿದ್ರು. ನನಗೇ ಗೊತ್ತಿಲ್ಲದಂತೆ ನನ್ನ ಕಿವಿಗಳು ಅವರ ಮಾತಿಗೆ ಮಾರುಹೋದವು.  ನಾನು ಅಭಿವ್ಯಕ್ತಿಸಲು ಆಗದ್ದನ್ನ ಅವರು ಅರ್ಥವಾಗುವಂತೆ ಎಲ್ಲವನ್ನೂ ಬಿಡಿಸಿ ಅಲ್ಲಿ ಹೇಳುತಿದ್ರು. ನನ್ನ ಒಳಗಿರುವುದನ್ನೇ ಹೇಳುತಿದ್ದಾರೆಂದು ಅಂದು ನನಗೆ ಅನಿಸತೊಡಗಿತು. ದೇವರಿಲ್ಲ ಎನ್ನುವ ಅವರ ವಾದ ಸರಣಿಗೆ ಅಂದು ನಾನು ಮನಸೋತುಬಿಟ್ಟೆ. ಆನಂತರ ಅವರ ಮಾತು ಕೇಳಲೆಂದೇ ಅಲ್ಲಿಗೆ ಹೋಗಿ ಒಬ್ಬ ಆಗಂತುಕನಂತೆ ನಿಲ್ಲುತಿದ್ದೆ. ಅವರ ಚರ್ಚೆಗಳನ್ನ ಆಲಿಸುತಿದ್ದೆ.  ಸರಸ್ವತಿಪುರದ ಫಸ್ಟ್ ಮೇನ್ನಲ್ಲಿ ರಾಜಶೇಖರ ಕೋಟಿಯವರ ಆಂದೋಲನ ಪ್ರೆಸ್ ಇತ್ತು. ಅಲ್ಲಿ ಆ ಗುಂಪು ಆಗಾಗ ಸೇರುತಿತ್ತು. ಕೆಲವು ದಿನ ಕಳೆದ ಮೇಲೆ,  ಆ ಗಡ್ಡ ನೀವಿಕೊಂಡು ಮಾತಾಡುತಿದ್ದವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಎಂತಲೂ, ಅದು ವಿಚಾರವಾದಿಗಳ ಅಡ್ಡ ಎಂತಲೂ ನನಗೆ ಗೊತ್ತಾಯಿತು. ಹೀಗೆ ನಂಜುಂಡಸ್ವಾಮಿಯವರ ಪರಿಚಯ ಆಕಸ್ಮಿಕವಾಗಿ ಆಗಿತ್ತಾದರೂ ಅವರೊಡನೆ ಎಂದೂ ನಾನು ಮಾತಾಡಿರಲಿಲ್ಲ. ಅವರನ್ನ ನೇರವಾಗಿ ಪರಿಚಯ ಮಾಡಿಕೊಂಡು ಮಾತಾಡಿದ್ದೇ ಅವರ ಆ ಮನೆಯಲ್ಲಿ. ಅಷ್ಟೊತ್ತಿಗಾಗಲೇ ಅವರ ವಿಚಾರಗಳಿಗೆ ಮನಸೋತು, ಅವರಿಂದ ನಾನು ಪ್ರಭಾವಿತನಾಗಿದ್ದೆ. 
 
     ಅದು 1977 - 78, ಇಲ್ಲವೆ ಆಜುಬಾಜು ಇರಬಹುದು.  ಗೋಹತ್ಯೆ ನಿಷೇಧವಾಗಬೇಕೆಂದು ಭಾರತೀಯ ಜನಸಂಘ (ಈಗ ಅದು ಬಿಜೆಪಿ ಆಗಿದೆ) ಒತ್ತಾಯಿಸಿತ್ತು. ಭಕ್ತರು ಅದನ್ನ ಹೆಗಲ ಮೇಲೆ ಹೊತ್ಕೊಂಡು ಮೆರೆದಾಡಲು ಪ್ರಯತ್ನಿಸ್ತಾಯಿದ್ರು. ಆ ಸಂದರ್ಭದಲ್ಲಿ ಮೈಸೂರಿನ ಪ್ರಗತಿಪರ ಸಂಘಟನೆಗಳು ಹಾಗೂ ದಸಂಸ ಸೇರಿಕೊಂಡು ಹೊಸದೊಂದು ಚಳವಳಿಗೆ ನಾಂದಿ ಹಾಡಿದವು. ಬಹುಜನರ ಆಹಾರವಾಗಿರುವ  ಗೋಮಾಂಸವನ್ನ ಸಾರ್ವಜನಿಕವಾಗಿ ಭಕ್ಷಿಸುವುದೇ ಆ ಚಳವಳಿಯ ಉದ್ದೇಶವಾಗಿತ್ತು. ಗೋಮಾಂಸ ಭಕ್ಷಿಸುವ ಆ ಕಾರ್ಯಕ್ರಮವನ್ನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯಥಾಪ್ರಕಾರ ಅದರ ಉಸ್ತುವಾರಿಯನ್ನ ಚಳವಳಿಯ ಉಸ್ತಾದ್ ಪ್ರೊಫೆಸರ್ ನಂಜುಂಡಸ್ವಾಮಿಯವರೇ ವಹಿಸಿದ್ರು. ಅಂದು ಗೋಮಾಂಸ ಭಕ್ಷಿಸಲೆಂದು ಕೆ.ರಾಮದಾಸ್, ದೇವನೂರ ಮಹಾದೇವ, ಎಚ್.ಗೋವಿಂದಯ್ಯ, ಕೆ.ನ.ಶಿವತೀರ್ಥನ್, ಬಿ.ಎನ್.ಶ್ರೀರಾಂ, ಶಿವರಾಮು ಕಾಡನಕುಪ್ಪೆ ಇನ್ನೂ ಅನೇಕರು ಸೇರಿದ್ರು. ಪ.ಮಲ್ಲೇಶ್ ಅವರು "ನನಗೆ ಮೊದಲಿಂದಲೂ ಮಾಂಸ ತಿಂದು ರೂಢಿಯಿಲ್ಲ ನಾನು ತಿನ್ನೋದಿಲ್ಲ" ಎಂದರು. ಆದರೆ  ಗೋಮಾಂಸ ಭಕ್ಷಣೆಗೆ ಅವರ ಸಂಪೂರ್ಣ ಬೆಂಬಲವಿತ್ತು. ಎಂದೂ ತಿನ್ನದಿದ್ದವರೂ ಕೂಡ ಅಂದು ಗೋಮಾಂಸ ಭಕ್ಷಣೆ ಮಾಡಿ ಸಂಭ್ರಮಿಸಿದರಾದರೂ,  "ಪೆಗ್ ಸಿಸ್ಟಮ್ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು" ಅಂತ ಕೆಲವರು ಬಾಯೊಳಗೇ ಜೊಲ್ಲಾಡಿಸಿದ್ದೂ ಉಂಟು.

     "ಗೋವು ಪವಿತ್ರ, ಅದು ಪೂಜನೀಯ, ಅದು ದೇವರು. ಹಾಗಾಗಿ ಅದನ್ನ ಕೊಲ್ಲುವುದಾಗಲೀ,  ಭಕ್ಷಿಸುವುದಾಗಲೀ ಅಕ್ಷಮ್ಯ" ಎಂದು ಸನಾತನಿಗಳು ತಲೆಗೆ ತುಂಬಿರುವ ಕಸವನ್ನ ಶೂದ್ರರು ಇಂದಿಗೂ ತಲೆಯೊಳಗಿಂದ ತೆಗೆದಿಲ್ಲ. ಸನಾತನ ಬ್ರಾಹ್ಮಣ್ಯದ ಕುಯುಕ್ತಿ ಶೂದ್ರರಿಗೆ ಈಗಲೂ ಅರ್ಥವಾಗಿಲ್ಲ. ಒಂದನ್ನ ಒಂದು ಕೊಂದು ತಿನ್ನುವುದೇ ಪ್ರಕೃತಿಯ ನಿಯಮ. ಅದೇ ಪ್ರಾಪಂಚಿಕ ಸತ್ಯ ಎನ್ನುವ ಅರಿವು ಅವರಿಗಿಲ್ಲ. 

     ಹುಲಿ, ಸಿಂಹಗಳು ಹುಲ್ಲುತಿನ್ನುವುದಿಲ್ಲ.  ಮೊಲ, ಜಿಂಕೆ ಇತ್ಯಾದಿಗಳನ್ನ ಅವು ಕೊಂದೇ ತಿನ್ನಬೇಕು. ಹಾಗೆಯೇ ಜಿಂಕೆ, ಮೊಲ ಮುಂತಾವು ಮಾಂಸ ತಿನ್ನುವುದಿಲ್ಲ. ಅವು ಹುಲ್ಲ (ಸಸ್ಯ)ನ್ನ ಕೊಂದೇ ತಿನ್ನಬೇಕು. ಹೀಗೆ ಕೊಂದು ತಿನ್ನುವುದೇ ಪ್ರಕೃತಿ ನಿಯಮ. ಅದೇ ಪ್ರಾಪಂಚಿಕ ಸತ್ಯ. ಮನುಷ್ಯ  ಉಭಯ ಆಹಾರಿ. ಅವನು ಮಾಂಸ - ಸಸ್ಯ ಎರಡನ್ನೂ ತಿನ್ನುತ್ತಾನೆ. ಹಾಗಾಗಿ ಎಷ್ಟು ಅವಶ್ಯಕವೋ ಅಷ್ಟನ್ನೇ ಕೊಂದು ತಿನ್ನುವುದು ಪ್ರಕೃತಿ ನಿಯಮ. ಅವಶ್ಯಕತೆಗಿಂತ  ಯಥೇಚ್ಛವಾಗಿ ಕೊಲ್ಲುವುದು ಮತ್ತು ಭಕ್ಷಿಸುವುದೂ ಕೂಡ ಪ್ರಕೃತಿ ಬಾಹಿರ. ಅದರ ಅರಿವೂ ಎಲ್ಲರಿಗೂ ಇರಬೇಕು.

     ಗೋವು ಪವಿತ್ರ, ಹಂದಿ ಅಪವಿತ್ರ ಎನ್ನುವುದು ಕೂಡ ನಿಯಮ ಬಾಹಿರವೇ. ಎಲ್ಲ ಜೀವಿಗಳೂ ಪವಿತ್ರ. ಯಾವ ಜೀವಿಯೂ ಅಪವಿತ್ರವಲ್ಲ. ಆದ್ದರಿಂದ ಕುರಿ,ಆಡು, ಕೋಳಿಗಳಿಗಿಂತ ಹಸು ಮೇಲು ಎನ್ನುವುದು ಮೂಢನಂಬಿಕೆ ಆಗುತ್ತದೆ. 
 
    ಗೋಮಾಂಸ ಪ್ರಪಂಚದ ಬಹುಜನರ ಆಹಾರವಾಗಿದೆ. ಮಾಂಸ ತಿನ್ನುವುದು ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ಆಹಾರ ಅವರವರ ಸ್ವಂತಿಕೆಗೆ ಸೇರಿದ್ದು. ಹಾಗಾಗಿ ಬೇರೊಬ್ಬರ ಆಹಾರವನ್ನ ವಿರೋಧಿಸುವುದು ಯಾರಿಗೂ ಥರವಲ್ಲ. 
 
    ವೇದಗಳ ಕಾಲದಲ್ಲಿ ಬ್ರಾಹ್ಮಣರು ಎಳೆಗರುವನ್ನ ಯಜ್ಞಕ್ಕೆ ಬಲಿಕೊಟ್ಟು, ಗೋಮಾಂಸ ಭಕ್ಷಿಸುತಿದ್ದರೆಂದು ಜ್ಞಾನಿಗಳು ಸಾಕಷ್ಟು ಸಾಕ್ಷ್ಯಾಧಾರ ಒದಗಿಸಿದ್ದಾರೆ. ಹೀಗಿರುವಾಗ ಅದೇ ಬ್ರಾಹ್ಮಣ್ಯ ಜನ್ಯ ಸನಾತನಿಗಳು, ಗೋವು ಪವಿತ್ರವೆನ್ನುವ ಕಸವನ್ನ  ಅಬ್ರಾಹ್ಮಣರ ತಲೆಗೆ ತುಂಬಿ, ಇನ್ನಿಲ್ಲದಂತೆ ಅವರನ್ನ ನಂಬಿಸಿ ಪೂಜನೀಯ ಭಾವನೆ ಬಿತ್ತಿ, ಮೌಢ್ಯತೆ ಬೆಳೆಸುವುದನ್ನೇ ಕಸುಬಾಗಿಸಿಕೊಂಡಿದ್ದಾರೆ. ಈಗ ಅದೇ ಬ್ರಾಹ್ಮಣ್ಯ ಜನ್ಯರು ಬೇರೊಂದು ಅವತಾರದಲ್ಲಿ ಅವತರಿಸಿದ್ದಾರೆ. ದೇವರು, ಧರ್ಮದ ಹೆಸರಲ್ಲಿ ಸೆಂಟಿಮೆಂಟ್  ರಾಜಕಾರಣ ಮಾಡುವುದು ಅವರ ಕುತಂತ್ರವಾಗಿ ಹೋಗಿದೆ. ಮನಷ್ಯರನ್ನ ಕೊಲ್ಲುವುದೂ ಅವರ ಧರ್ಮವಾಗಿಬಿಟ್ಟಿದೆ. 
 
    ಇಂದು ಅವರನ್ನ ವಿರೋಧಿಸುವ ವಿರೋಧಪಕ್ಷವಾಗಲೀ, ಚಳವಳಿಗಳಾಗಲಿ ಇಲ್ಲದಿರುವುದು. ನಮ್ಮ ದೇಶದ ದುರಂತವೇ ಆಗಿದೆ. ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್, ರಾಮದಾಸ್ ಥರವರು ಈಗ ಇರಬೇಕಾಗಿತ್ತು. ಅಂಥವರು ಈಗಿಲ್ಲದಿರುವುದೂ ವಿಷಾದನೀಯ ಸಂಗತಿ.

     ಆ ನಿಟ್ಟಿನಿಂದ ನೋಡಿದಾಗ ಬಹುಜನರ ಸೇನಾನಿಯಾಗಿ, ಅಂತಹ ಎಲ್ಲಾ ಕುತಂತ್ರಿಗಳ ಕುತಂತ್ರಗಳನ್ನ ಕಾಲಕಾಲಕ್ಕೆ ಬಯಲು ಮಾಡುತ್ತಲೇ, ಅವುಗಳಿಗೆ ಚಿಕಿತ್ಸೆ ನೀಡುತಿದ್ದಂತಹ, The most different activist ಪ್ರೊಫೆಸರ್ ನಂಜುಂಡಸ್ವಾಮಿಯಂತವರು, ಎಂದಿಗಿಂತ ಇಂದಿಗೆ ಮುಖ್ಯ ಎನಿಸುತ್ತಾರೆ.

     ಕ್ರಾಂತಿಕಾರಿಯಾಗಿದ್ದ ಹಾಗೂ ಪ್ರಖರ ವಿಚಾರವಾದಿಯಾಗಿದ್ದ ಪೆರಿಯಾರ್ ಅವರಂತೆಯೇ ಪ್ರೊಫೆಸರ್ ಕೂಡ ಕಟ್ಟಾ ನಾಸ್ತಿಕರಾಗಿದ್ರು. ಮತ ಮೌಢ್ಯಗಳ ಮತ್ತು ಪವಾಡ ಪುರುಷರೆನ್ನುವ ನಕಲಿ ಬಾಬಾಗಳ ಕಡು ವಿರೋಧಿ ಅವರಾಗಿದ್ರು. ಪ್ರೊಫೆಸರ್ ನನಗೆ ಹತ್ತಿರವಾಗೋಕೆ ಅವರ ಈ ಗುಣಗಳೇ ಹೆಚ್ಚು ಕಾರಣ. ಅವರು ನನ್ನೆದೆಯಲ್ಲಿ ಹಾಗೇ ಹಸಿರಾಗಿರಲಿ ಎಂದು ಆಶಿಸುತ್ತೇನೆ.
     
      ರಾಜ್ಯ ರೈತ ಸಂಘ ಅಗಿನ್ನೂ ಪ್ರಾರಂಭವಾಗಿರಲಿಲ್ಲ. ನನ್ನಂತೆಯೇ  ಕಾಲೇಜು ದಿನಗಳಲ್ಲಿ ಅದೇ ವಿಚಾರವಾದಿಗಳಿಂದ, ದಸಂಸದಿಂದ ಹಾಗೂ ಎಡ ಪಂಥೀಯ ಸಂಘನೆಗಳಿಂದ ಪ್ರಭಾವಿತರಾಗಿದ್ದಂತಹ ಅನೇಕರು ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ಗೆ ಬಂದು ಸೇರುವಷ್ಟರಲ್ಲಿ, ರಾಜ್ಯ ರೈತ ಸಂಘ ನಾಡಿನ ತುಂಬಾ ಹೆಸರಾಗಿತ್ತು. ನಮ್ಮಂತೆಯೇ ಪ್ರಭಾವಿತರಾಗಿ ಬಂದಿದ್ದ ಪಾಲಳ್ಳಿಯ ತಿಮ್ಮಪ್ಪ - ಇಲ್ಯಾಸ್ ಈರ್ವರೂ ಹಸಿರು ಟವೆಲ್ ಹಾಕೊಂಡು, ಕನ್ನಡ ಅಧ್ಯಯನ ಸಂಸ್ಥೆಯ ತರಗತಿಗಳಿಗೆ ಹೋಗ್ತಾಯಿದ್ರು. ಅವರಿಂದ ಪ್ರಭಾವಿತರಾಗಿ ಬೆಳ್ಳಾಳೆ ಬೆಟ್ಟೇಗೌಡ, ಎಲ್.ಎಂ.ಚಂದ್ರು ಲಕ್ಷ್ಮಿಸಾಗರ ಹಾಗೂ ನಾನು ಹಸಿರು ಟವೆಲ್ ಹಾಕೊಂಡು ತರಗತಿಗಳಿಗೆ ಹೋಗಲು ಶುರುಮಾಡಿದೊ. ಆನಂತರ ಪ್ರೊ.ಕೆ.ಸಿ.ಬಸವರಾಜ್ ಹೆಗಲಿಗೂ ಹಸಿರುಶಾಲು ಬಂತು. ಆಗ ಗೆಳೆಯ ಬಡಗಲಪುರ ನಾಗೇಂದ್ರ ಎಲ್.ಎಲ್.ಬಿ.ಗೆ ಸೇರಿಕೊಂಡಿದ್ದ. ನಂತರ ಅವನೂ ನಮ್ಮ ಜೊತೆಗೂಡಿದ.  ಅಬ್ದುಲ್ ರಷೀದ್‌, ಮೊಗಳ್ಳಿ ಗಣೇಶ್, ಬಂಜಗೆರೆ ಜಯಪ್ರಕಾಶ್, ಕೆಲ್ಲೂರು ಸುರೇಶ, ಬಿ.ಎಸ್.ಸತ್ಯ, ಹೊನ್ನಕರೆ ನಂಜುಂಡೇಗೌಡ, ಬೇವಿನಕಟ್ಟೆ ಮಂಜುನಾಥ, ನೆಂಪೆ ದೇವರಾಜ್, ಬಸವರಾಜ್ ಹೊಸಕೋಟೆ, ದಾ.ಸು.ವೆಂಕಟೇಶ್, ಪೀರ್ ಗೌಸ್ ಹೀಗೆ ಇನ್ನೂ ಅನೇಕರು ಜೊತೆಗೂಡಿದೆವು. ಆಗಲ್ಲಿ ಮೈಸೂರಿನ "ರೈತ ವಿದ್ಯಾರ್ಥಿ ಒಕ್ಕೂಟ" ಜನ್ಮ ತಳೆಯಿತು. ಆಗ ನಮ್ಮೆಲ್ಲರ ಅಡ್ಡ ಮಾನಸ ಗಂಗೋತ್ರಿಯ ಗಾಂಧಿಭವನವೇ ಆಗಿತ್ತು. ನಮ ಪಾಲಿನ ಗೆಳೆಯ ಹಾಗೂ ಮೆಂಟರ್ ಎರಡೂ ಆಗಿದ್ದಂತಹ ಕೆ.ಎಸ್.ಕೇಶವಪ್ರಸಾದ್ ನಮ್ಮೆಲ್ಲ ಹೋರಾಟಗಳಿಗೆ ಕಾರ್ಯಕ್ರಮ ರೂಪಿಸುತಿದ್ದ. ಆಗ  ಕುಕ್ಕರಹಳ್ಳಿಯ ಗೆಳೆಯರು, ಪ್ರೊ.ಕೆ.ರಾಮದಾಸ್, ಡಾ.ಹಿ.ಶಿ.ರಾಮಚಂದ್ರೇಗೌಡ, ಪ್ರೊ.ಶಿವರಾಮು ಕಾಡನಕುಪ್ಪೆ , ಪ್ರೊ.ಎ.ರಾಮಲಿಂಗಂ, ಎನ್.ಈಶ್ವರ್ ಮುಂತಾದಂತಹ ಮೈಸೂರಿನ ಪ್ರಗತಿಪರರು ಸದಾ ನಮ್ಮ ಬೆನ್ನಿಗೆ ಇರುತಿದ್ರು. ಹಾಗಾಗಿ ನಾವ್ಯಾರೂ ಅವರನ್ನ ಮರೆಯುವಂತಿಲ್ಲ.

     ನಾವೊಂದಷ್ಟು ಜನ  ನಂಜುಂಡಸ್ವಾಮಿ ಅವರಿಂದ ಎಷ್ಟೊಂದು ಪ್ರಭಾವಿತರಾಗಿದ್ದೋ ಅಂದರೆ, ಪ್ರೊಫೆಸರ್ ಬಗ್ಗೆ ಯಾರಾದರೂ ಒಂದು ಸಣ್ಣ ಕೊಂಕಾಡಿದರೂ ಕತ್ತಿನ ಪಟ್ಟಿಗೆ ಕೈ ಹಾಕುವಷ್ಟು ಪ್ರಭಾವಿತರಾಗಿಬಿಟ್ಟಿದ್ದೊ. ಆಗಿನ ವಯಸ್ಸೂ ಹಾಗೇ ಇತ್ತು!

     ಅಂದು ವಿಚಾರವಾದಿಗಳ ಆ ಅಡ್ಡಾದಲ್ಲಿ ನನಗೆ ನೆನಪಿರುವಂತೆ ಐದಾರು ಮಂದಿ ಡಿಫರೆಂಟ್ ಥಿಂಕರ್ಸ್  ಜೊತೆ ಪ್ರೊಫೆಸರ್ ಚರ್ಚಿಸುತ್ತಾ ಇದ್ರು. ಆಗ, ತನ್ನ ಎರಡು ಕೈಗಳ ಅಂಗಿಯನ್ನ ತೋಳಿನತನಕ ಮಡಿಚಿಕೊಳ್ಳುತ್ತಾ, ಅವರನ್ನ ನಿಕೃಷ್ಟವಾಗಿ ನೋಡುತ್ತಾ ಬಂದಂತಹ ದಾಂಡಿಗನೊಬ್ಬ, "ಇಲ್ಲಿ ಯಾರು ವಿಚಾರವಾದಿ?" ಎಂದ. ಅವನು ಬಂದ ರಭಸ ನೋಡಿ ಅಂದು ಪ್ರೊಫೆಸರ್ ಜೊತೆಗಿದ್ದ ಎಲ್ಲರೂ  ಒಂದು ಕ್ಷಣ ಥಂಡಾ ಹೊಡೆದು ಹೋದರು. ಆ ಕ್ಷಣ ಅಲ್ಲೊಂದು  ಮೌನ ಆವರಿಸಿಬಿಡ್ತು. ಪ್ರೊಫೆಸರ್ ಸ್ವಲ್ಪವೂ ವಿಚಲಿತರಾಗದೆ, ತಮ್ಮ ಮಾಮೂಲು ವರಸೆಯಲ್ಲೇ "ನಾನೇ ವಿಚಾರವಾದಿ ನಿನಗೇನಾಗಬೇಕು" ಎಂದರು. ಅವರ  ಮಾತಿನ ಧಾಟಿಗೆ ಆ ದಾಂಡಿಗ ಏನೂ ಹೇಳಲಾಗದೆ ಬೆಪ್ಪನಂತಾಗಿ ಹೋದ. ಹುಲಿಯಾಗಿ ಬಂದವನು ನಾಯಿ ಕುನ್ನಿಯಂತೆ 'ಕಯ್ ಕಯ್' ಎಂದು ಕುಯ್ಗುಟ್ಟುತ್ತಾ  ಹೊರಟು ಹೋದ. 

     ಮತ್ತೊಮ್ಮೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದ ವೇದಿಕೆಯಲ್ಲಿ ಪ್ರೊಫೆಸರ್ ಮಾತನಾಡುತಿದ್ದಾಗ, ಬಳೆ ಸೀನ (ಶ್ರೀನಿವಾಸ್ ಬೆಸಗರಹಳ್ಳಿ) ಎಂಬ ವಿದ್ಯಾರ್ಥಿ ಧುರೀಣನೊಬ್ಬ , "ನೀವೆಲ್ಲ ಅಕಾಡೆಮಿಷಿಯನ್ಸ್ …" ಎಂದಾಗ, ಪ್ರೊಫೆಸರ್  "ಹಲೋ,   ಬನ್ನಿ ಇಲ್ಲಿಗೆ.  ಹೇಳಿ ಹಾಗಂದ್ರೇನು? .." ಹೀಗೆ ಎರಡು ಬಾರಿ ವೇದಿಕೆಗೆ ಕರೆದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, "ನೀವಂದ್ಕೊಂಡಿದ್ದೀರಲ್ಲ ಅದು ನಾವಲ್ಲ" ಎಂದು ಹೇಳಿ, ಸಣ್ಣದಾಗಿ ನಕ್ಕರು.

     ಇನ್ನೊಮ್ಮೆ ಅದೇ ಮಾನಸ ಗಂಗೋತ್ರಿಯ ಕ್ಯಾಂಟೀನ್ ಎದರು, 'ಚಿನ್ನಪ್ಪರೆಡ್ಡಿ ಆಯೋಗ ಅವೈಜ್ಞಾನಿಕವಾಗಿದೆ' ಎಂದು ಪ್ರೊಫೆಸರ್  ವಿವರಿಸುತಿದ್ದಾಗ, ಮಂಡ್ಯದ ಒಕ್ಕಲಿಗರ ವಿದ್ಯಾರ್ಥಿ ದಂಡೊಂದು ಬಂದು ಮೈಕ್ ಕಿತ್ತಾಕಿ, ಗಲಾಟೆ ಮಾಡಿಬಿಟ್ರು. ಪ್ರೊಫೆಸರ್ ಆಗಲೂ ವಿಚಲಿತರಾಗಲಿಲ್ಲ.

     - ಪ್ರೊಫೆಸರ್  ಅವರಿಗಿದ್ದ ವಿಚಾರದ ಗುಂಡಿಗೆ ಎಂಥದ್ದು,  ಎಷ್ಟಿತ್ತು ಎನ್ನುವುದಕ್ಕೆ  ಇವು ನಿದರ್ಶನಗಳಷ್ಟೇ. ಪ್ರೊಫೆಸರ್ ಮಾತಿನ ಧಾಟಿಯಲ್ಲಿ ಹಾಗೂ ಅವರ ವರ್ತನೆಯಲ್ಲಿ ಅದ್ಯಾವ ಮೋಡಿ ಇತ್ತೋ ಕಾಣೆ. ಕೆಲವರು ಎದುರುತ್ತರ ಕೊಡದೆ ಸುಮ್ಮನಾಗಿಬಿಡುತಿದ್ರು.

      ಮೈಸೂರು ಆಗ ಚಳವಳಿಗಳ ಕೇಂದ್ರಸ್ಥಾನವೇ ಆಗಿತ್ತು. ಆ ಚಳವಳಿಗಳನ್ನ ವಿಭಿನ್ನವಾಗಿ ರೂಪಿಸಿತಿದ್ದವರೇ ನಂಜುಂಡಸ್ವಾಮಿಯವರು. 

      ವ್ಯಕ್ತಿ ಪರಿಚಯದ ನನ್ನೀ ಸರಣಿಯಲ್ಲಿ ಕೆ.ರಾಮದಾಸ್ ಅವರ ಬಗ್ಗೆ ಬರೆಯುವಾಗ, ರಾಮದಾಸ್ ಹಾಗೂ ಚಳವಳಿಗಳನ್ನ ಬೇರ್ಪಡಿಸಿ ನೋಡಲು ನನಗೆ ಸಾಧ್ಯವಿಲ್ಲಾಂತ ಬರೆದಿದ್ದೆ. ಅದೇ ಯಥಾವತ್ ಮಾತು ಇಲ್ಲಿ 
ನಂಜುಂಡಸ್ವಾಮಿಯವರಿಗೂ ಅನ್ವಯವಾಗುತ್ತದೆ. ಹೌದು, ಪ್ರೊಫೆಸರ್ ಮತ್ತು ಚಳವಳಿಯನ್ನ  ಬೇರೆ ಬೇರೆಯಾಗಿ ನೋಡಲು ನನ್ನಿಂದ  ಆಗುವುದೇ ಇಲ್ಲ. ನಂಜುಂಡಸ್ವಾಮಿ ಎಂದರೆ ಚಳವಳಿ. ಚಳವಳಿ ಎಂದರೆ ನಂಜುಂಡಸ್ವಾಮಿ ಎನ್ನುವುದು ಈಗಲೂ ನನ್ನ ಎದೆಯಲ್ಲಿ ಕೂತುಬಿಟ್ಟಿದೆ. ಯಾಕೆಂದರೆ, ನಾಡಿನ ಪ್ರಗತಿಪರ ಚಳವಳಿಗಳಿಗೆಲ್ಲಾ ತಮ್ಮದೇ ಆದಂತಹ ನ್ಯಾಯ ಒದಗಿಸಿ ಹೋಗಿದ್ದಾರೆ.

   ಕೆ.ರಾಮದಾಸ್ ಅವರ ಬಗ್ಗೆ ಬರೆಯುವಾಗ ಚಳವಳಿಗಳನ್ನ ಕುರಿತು ಬರೆದಿದ್ದೆ. ಅವು ಇಲ್ಲಿಗೂ ಅನ್ವಯವಾಗುತ್ತವೆ. 
  
        " ಈ ದೇಶ ಕಂಡಂತಹ ಅತ್ಯುನ್ನತರಲ್ಲೂ ಅತ್ಯುತ್ತಮ ರಾಜಕಾರಣಿ ಎಂದರೆ ಎರಡನೇ ಮಾತೇ ಇಲ್ಲ. ಅದು ಲೋಹಿಯಾ. ಅವರು ಶ್ರೇಷ್ಠ ಬರಹಗಾರರಾಗಿದ್ರು. ಪ್ರಗತಿಪರರಾಗಿದ್ರು ಹಾಗೂ ವಿಶಿಷ್ಟ ವಿಚಾರವಾದಿ ಅವರಾಗಿದ್ರು. ಸಾಂಸ್ಕೃತಿಕ ಚಿಂತಕರಾಗಿದ್ರು. ನೆಲಮೂಲ ಸಂಸ್ಕೃತಿಯ ಹಿತ ಚಿಂತಕರೂ ಆಗಿದ್ರು . ನುಡಿದಂತೆಯೇ ನಡೆದು ಹೋದ ಅಪರೂಪದ ಮುತ್ಸದ್ಧಿ ಅವರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಗಾಂಧೀಜಿ ಅವರ ಮುಂದುವರಿದ ಭಾಗವೇ ಅವರಾಗಿದ್ರು.

     ಲೋಹಿಯಾ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ಕರ್ನಾಟಕ ಕಂಡ ದಿಟ್ಟ ಹೋರಾಟಗಾರ, ಖಡಕ್ ರಾಜಕಾರಣಿ ಹಾಗೂ ಕರ್ನಾಟಕದ ಲೋಹಿಯಾ ಎಂದೇ ಹೆಸರಾಗಿದ್ದ ಶಾಂತವೇರಿ ಗೋಪಾಲಗೌಡರು,  "ಸಮಾಜವಾದಿ ಯುವಜನ ಸಭಾ" (SYS)ದ ಅಡಿಯಲ್ಲಿ ಕೋಣಂದೂರು ಲಿಂಗಪ್ಪ, ರಮೇಶ್ ಬಂದಗದ್ದೆ ಮುಂತಾದವರ ಜೊತೆಗೂಡಿ  ಶಿವಮೊಗ್ಗಾದಿಂದ ಸಮಾಜವಾದಿ ಚಳವಳಿ ಆರಂಭಿಸುತ್ತಾರೆ. 

     ಶಿವಮೊಗ್ಗದವರೇ ಆದಂತಹ ಯು.ಆರ್. ಅನಂತಮೂರ್ತಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್,  ಕಡಿದಾಳು ಶಾಮಣ್ಣ, ಕೆ.ರಾಮದಾಸ್ ಮುಂತಾದವರು ಗೋಪಾಲಗೌಡರು ಆರಂಭಿಸಿದ ಆ ಚಳವಳಿಯಿಂದ ಪ್ರಭಾವಿತರಾಗಿ ಹಾಗೂ  ಲೋಹಿಯಾವಾದಿಗಳಾಗಿ ಅವರೆಲ್ಲ ಮೈಸೂರಿಗೆ ಕಾಲಿರಿಸಿದರೆ ಲಂಕೇಶರು ಬೆಂಗಳೂರು ಸೇರುತ್ತಾರೆ.  ಅಷ್ಟೊತ್ತಿಗೆ ಜರ್ಮನಿ ವ್ಯಾಸಂಗ ಮುಗಿಸಿಕೊಂಡು ಪ್ರೊ.ನಂಜುಂಡಸ್ವಾಮಿ ಅವರೂ ಮೈಸೂರಿಗೆ ಬಂದಿರುತ್ತಾರೆ. ವಕೀಲರಾಗಿದ್ದ ಟಿ.ಎನ್. ನಾಗರಾಜ್ ಅವರಿಂದ ಪ್ರಭಾವಿತರಾಗಿ ಲೋಹಿಯಾ ಅವರನ್ನ ಓದಿಕೊಂಡಂತಹ ನಂಜುಂಡಸ್ವಾಮಿಯವರು ಬೆಂಗಳೂರು ಮತ್ತು ಮೈಸೂರು ಎರಡೂ ಕಡೆ ಸಂಪರ್ಕದಲ್ಲಿ ಇರುತ್ತಾರೆ.  ಹಾಗೇಯೇ ಪ. ಮಲ್ಲೇಶ್, ಬಿ.ಎನ್. ಶ್ರೀರಾಂ ಹೀಗೆ  ಲೋಹಿಯಾ ಸಿದ್ಧಾಂತಕ್ಕೆ ಆಕರ್ಷಿತರಾದ ಎಲ್ಲರೂ  ಸೇರಿ, ಮೈಸೂರಿನ ಗೆಳೆಯರೊಡಗೂಡಿ ಮೈಸೂರಿನಲ್ಲೂ ಸಮಾಜವಾದಿ ಚಳವಳಿ ಆರಂಭಿಸುತ್ತಾರೆ.

    ಲೋಹಿಯಾ ಸಿದ್ದಾಂತಕ್ಕೆ ವಿಶಿಷ್ಟ ರೀತಿಯಲ್ಲಿ ರೂಪು ಗೊಂಡವರೆಂದರೆ, ಅದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅಂತ ನಾನಿಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ನಾಡಿನ ಹಲವಾರು ಹೋರಾಟಗಳಿಗೆ ಆಯಾಮ ಕೊಟ್ಟವರೂ  ಅವರೇ ಹಾಗೂ ನಾಡಿನ ಅನೇಕರನ್ನ ತಯಾರು ಮಾಡಿದ ಮೆಂಟರ್ ಕೂಡ ಅವರೇ.

      ನಂಜುಂಡಸ್ವಾಮಿ ಹಾಗೂ ತೇಜಸ್ವಿ ಈರ್ವರೂ ಕೂಡಿ ಲೋಹಿಯಾ ಕುರಿತ "ಕೆಂಪು ಪುಸ್ತಕ"ವೊಂದನ್ನ ಆಗ ಹೊರತರುತ್ತಾರೆ.  ಲೋಹಿಯಾ ಅವರಿಂದ ಅವರು ಪ್ರಭಾವಿತರಾಗಿದ್ರು ಎನ್ನುವುದಕ್ಕೆ ಆ ಪುಸ್ತಕವೂ ಒಂದು ಸಾಕ್ಷಿ.

    ನಾಡಿನ ನಿರಂತರ ಚಳವಳಿಕಾರರಲ್ಲಿ ಎರಡು ಹೆಸರೇಳಿ ಎಂದರೆ  ಕಣ್ಣು ಮುಚ್ಚಿಕೊಂಡು ನಂಜುಂಡಸ್ವಾಮಿ ಮತ್ತು ರಾಮದಾಸ್ ಎಂದುಬಿಡುತ್ತೇನೆ.

     ಎಪ್ಪತ್ತು ಮತ್ತು ಎಂಭತ್ತರ ಆ ದಶಕಗಳನ್ನ ಹೋರಾಟದ ದಶಕಗಳೆಂದೇ ನಾನು ಕರೆಯುತ್ತೇನೆ. ಆ ಎರಡೂ ದಶಕಗಳಲ್ಲಿ ಸದಾ ಜೀವಂತವಿದ್ದಂತಹ ಆ ಚಳವಳಿಗಳು ಅದೆಲ್ಲಿ ಮಾಯವಾದವೋ ನೆನಪಿಸಿಕೊಂಡರೆ ಬೇಸರವಾಗುತ್ತೆ. ಜಾತಿ-ಧರ್ಮ-ದೇವರು, ವಿಗ್ರಹಾರಾಧನೆ ಹಾಗೂ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಾ,  ಜನಪ್ರಜ್ಞೆಯನ್ನ ಸದಾ ಎಚ್ಚರವಾಗಿರುವಂತೆ ನೋಡಿಕೊಳ್ಳುತಿದ್ದ ಚಳವಳಿಗಳು ಈಗ ಇಲ್ಲವಾಗಿವೆ.  ಸಮರ್ಥವಾದ ವಿರೋಧಪಕ್ಷವೂ ಇಲ್ಲವಾಗಿದೆ. ಈಗ ಅರಾಜಕತೆ, ಅಮಾನುಷತೆ ಎಲ್ಲೆಲ್ಲೂ ವ್ಯಾಪಿಸಿದೆ. ಇಂದು ಜಾತಿ-ಧರ್ಮ-ದೇವರು, ವಿಗ್ರಹಾರಾಧನೆ, ಮೂಢನಂಬಿಕೆಗಳೇ ಓಟಿನ ದಾಳಗಳಾಗಿಬಿಟ್ಟಿವೆ. ಇದು ಅಪಾಯಕರ ಹಾಗೂ ಈ ದೇಶದ ದುರಂತ.

    ಅಂದು ಆ ಎಲ್ಲ ಚಳವಳಿಗಳ ಒಂದು ಭಾಗವೇ ಆಗಿ ಒಂದಲ್ಲ ಒಂದು ರೀತಿಯಲ್ಲಿ ಜನಪ್ರಜ್ಞೆಯನ್ನ ಎಚ್ಚರಿಸುತ್ತಲೇ ಇದ್ದಂತಹ ನಂಜುಂಡಸ್ವಾಮಿ, ತೇಜಸ್ವಿ , ರಾಮದಾಸ್, ಬಿ.ಕೃಷ್ಣಪ್ಪ , ಅನಂತಮೂರ್ತಿ, ಪೋಲಂಕಿ ರಾಮಮೂರ್ತಿ, ಎ. ರಾಮಲಿಂಗಂ, ಎಚ್.ಎಲ್. ಕೇಶವಮೂರ್ತಿ, ಶಿವರಾಮು ಕಾಡನಕುಪ್ಪೆ , ಡಿ.ಆರ್. ನಾಗರಾಜ್, ಲಂಕೇಶ್, ಕೆ.ಎಸ್. ಪುಟ್ಟಣ್ಣಯ್ಯ  ಇನ್ನೂ ಮುಂತಾದವರು ಈಗಿಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ.
  
     ಆಗ ಕಾಂಗ್ರೆಸ್ಸಿನ ದುರಾಡಳಿತ ಎಲ್ಲೆ ಮೀರಿತ್ತು. ಭ್ರಷ್ಟಾಚಾರ, ಅನೀತಿ, ಅನ್ಯಾಯ, ಸ್ವಜನಪಕ್ಷಪಾತ ಎಲ್ಲವೂ ಮಿತಿ ಮೀರಿದ್ದೊ. ಆ ದುರಿತ ಕಾಲದ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರು  ಜಾಗೃತಿಯ ಕಿಡಿಯೊಂದನ್ನ ಹತ್ತಿಸಿ, ಸಂಪೂರ್ಣ ಕ್ರಾಂತಿಗೆ ಕರೆ ಕೊಡುತ್ತಾರೆ. ಅದು ಕರ್ನಾಟಕ ನವನಿರ್ಮಾಣ ಕ್ರಾಂತಿಗೂ ನಾಂದಿಯಾಗುತ್ತದೆ. ಆಗ ನಾಡಿನ ಎಲ್ಲಾ ಪ್ರಜ್ಞಾವಂತರೂ ಅದರಲ್ಲಿ ಭಾಗಿಯಾಗುತ್ತಾರೆ. ಒಬ್ಬರಿಗೊಬ್ಬರು ಕೈ ಜೋಡಿಸುವ ಮೂಲಕ ಅದನ್ನ ಇಡೀ ನಾಡಿಗೆ ಪಸರಿಸುತ್ತಾರೆ. ಅದರ ಪ್ರಯುಕ್ತ ಎಲ್ಲೆಲ್ಲೂ ಪ್ರತಿಕಾರದ ಘೋಷಣೆಗಳು ಮೊಳಗತೊಡಗುತ್ತವೆ. ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಅದು ಕಾಂಗ್ರೆಸ್ ವಿರುದ್ಧದ ಚಳವಳಿಗಷ್ಟೇ ಸೀಮಿತವಾಗದೆ, ಜನರನ್ನ ಪ್ರಜ್ಞೆಯನ್ನ  ಎಚ್ಚರಿಸುವ ಹಾಗೂ ಜನರಲ್ಲಿ  ಜಾಗೃತಿ ಮೂಡಿಸುವ ಚಳವಳಿಯಾಗಿ ಅದು ಮಾರ್ಪಾಡಾಗುತ್ತದೆ. 

     ಆ ಸಂದರ್ಭದಲ್ಲಿ ನಂಜುಂಡಸ್ವಾಮಿ ಹಾಗೂ ಗೆಳೆಯರು ಒಂದರ ಹಿಂದೆ ಒಂದು ಕಾರ್ಯಕ್ರಮ ರೂಪಿಸುತ್ತಲೇ ಹೋಗುತ್ತಾರೆ. ಹಾಗಾಗಿ ಅದು ಚಳವಳಿಗಳ ಪರ್ವಕಾಲವೇ ಆಗಿ ಹೋಗಿತ್ತು. 

    ಕಂದಾಚಾರಗಳ ವಿರುದ್ಧ ಯುದ್ಧ ಸಾರುವ ಚಳವಳಿ ಅದಾಗಿತ್ತು. ಮೂಢನಂಬಿಕೆಗಳ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ನಾಡಿನಾದ್ಯಂತ ಜನಜಾಗೃತಿ ಮೂಡಿಸುವ, ಸ್ವಯಂ ಘೋಷಿತ ದೇವಮಾನವರಾಗಿದ್ದ ಬಾಬಾಗಳ, ಪವಾಡಪುರುಷರ, ಅಂತಹ ಎಲ್ಲಾ ಕಪಟಿಗಳ ರಹಸ್ಯ ಬಯಲು ಮಾಡುವ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು, ನಾಡನ್ನೆಲ್ಲ ಸುತ್ತುತ್ತಾರೆ. ಜನರನ್ನ ಎಚ್ಚರಿಸುತ್ತಾರೆ. 

    ದೇವರು ಮತ್ತು ಕಂದಾಚಾರಗಳ ಕಡು ವಿರೋಧಿಯಾಗಿದ್ದ ತಮಿಳುನಾಡಿನ ಪೆರಿಯಾರ್ ಅವರನ್ನ ಕರೆಸಿಕೊಂಡು ಹಲವಾರು ಕಡೆ ಕಾರ್ಯಕ್ರಮಗಳನ್ನ ಕೊಡುತ್ತಾರೆ.  ಪವಾಡ ಹಾಗೂ ಹಿಪ್ನಾಟಿಸಂ ಕಲಿತು ಮಹಾನ್ ವಿಚಾರವಾದಿ ಎನಿಸಿಕೊಂಡಿದ್ದಂತಹ ಶ್ರೀಲಂಕಾದ ಕೊವೂರ್ ಅವರನ್ನ ಕರೆಸಿಕೊಂಡು ಪವಾಡಪುರುಷರ ಕಪಟವನ್ನ ಬಯಲು ಮಾಡುತ್ತಾರೆ "

   - ಈ ಎಲ್ಲದರ ಹಿಂದೆ ಪ್ರೊಫೆಸರ್ ಅವರ ಪಾತ್ರ ಪ್ರಧಾನವಾಗಿ ಇತ್ತೆಂಬುದನ್ನ ಯಾರೂ ಮರೆತಿಲ್ಲ. ಮರೆಯಬಾರದು.  ವಿಭಿನ್ನವಾದ ಹಾಗೂ ಅಪರೂಪದ ಹೋರಾಟಗಾರ ಅವರಾಗಿದ್ರು ಎನ್ನುವುದಕ್ಕೆ ಈ ಮೇಲಿನ ಚಳವಳಿಗಳು ಸಾಕ್ಷಿ.

     ರೈತ ನಾಯಕರಾಗಿದ್ದ ಪ್ರೊಫೆಸರ್ ಕರ್ನಾಟಕದ ಮನೆಮಾತಾಗಿದ್ರು. ಭಾರತದ ವಿಶಿಷ್ಟ ರೈತನಾಯಕ ಅವರಾಗಿದ್ರು. ಉತ್ತರ ಭಾರತದ ಹಳ್ಳಿಗೌಡನಂತಿದ್ದ ರೈತ ನಾಯಕ ಟಿಕಾಯತ್, ಒರಿಸ್ಸಾದ ಕಿಷನ್ ಪಟ್ನಾಯಕ್, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ನಾಯಕರು, ತಮಿಳುನಾಡಿನ ರೈತನಾಯಕರೂ ಸೇರಿದಂತೆ ವಿವಿಧ ರಾಜ್ಯಗಳ ರೈತ ನಾಯಕರ ಜೊತೆಗೂಡಿ ರಾಷ್ಟ್ರಮಟ್ಟದಲ್ಲೂ ರೈತರನ್ನ ಸಂಘಟಿಸುವ ಮುಂಚೂಣಿಯಲ್ಲಿ ಪ್ರೊಫೆಸರ್ ಅವರ ಸ್ಥಾನ ಗುರುತರವಾಗಿತ್ತು.

    ಇಂತಹ ಎಲ್ಲಾ ವೈಶಿಷ್ಟ್ಯಗಳ ಜೇನಿನ ಗೂಡಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ರಾಜ್ಯ ರೈತ ಸಂಘ ಸೇರಿದ್ದೇ ಒಂದು ಕೌತುಕದ ಸಂಗತಿ. 

       ಜುಲೈ 21, 1980 ರಂದು ಬೆಟರ್ ಮೆಂಟ್ 
ಲೆವಿ ಕಾಯ್ದೆ ವಿರುದ್ಧ ಬಂಡಾಯವೆದ್ದಿದ್ದ ನರಗುಂದ-ನವಲಗುಂದದ ರೈತರ ಮೇಲೆ ಗುಂಡುರಾಯರ ಸರ್ಕಾರ ಆಗ ಗುಂಡು ಹಾರಿಸುತ್ತದೆ. ಆ ಗೋಲಿಬಾರಿನಲ್ಲಿ ನನಗೆ ನೆನಪಿರುವಂತೆ ಮೂವರು ಸಾವನ್ನಪ್ಪುತ್ತಾರೆ. ಆಗ ಶಿವಮೊಗ್ಗದ ಕಬ್ಬು ಬೆಳೆಗಾರರ ಸಂಘ ಹಾಗೂ ಹಾಸನದ ಸಮಾಜವಾದಿ ರೈತ ಸಭಾಗಳು  ಅಲ್ಲಿನ ಸ್ಥಳೀಯ ರೈತರೊಡಗೂಡಿ ಸರಕಾರದ ವಿರುದ್ಧ ಚಳವಳಿ ರೂಪಿಸುತ್ತವೆ. ಅದರ ನೇತೃತ್ವವನ್ನ ಶಿವಮೊಗ್ಗದ ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ.ಗಂಗಾಧರ್ ಹಾಗೂ ಹಾಸನದ ಮಂಜುನಾಥ ದತ್ತ, ಆರ್.ಪಿ. ವೆಂಕಟೇಶಮೂರ್ತಿ ಮತ್ತು ಧಾರವಾಡದ ಹೇಮಂತಕುಮಾರ್ ಪಂಚಾಲ ಮುಂತಾದವರು ವಹಿಸುತ್ತಾರೆ. ಆ ಚಳವಳಿ ಜನಮನ್ನಣೆಗೆ ಪಾತ್ರವಾಗುತ್ತದೆ. ಆಗ ಅವರೆಲ್ಲಾ ಕೂಡಿ ಒಂದು ಸಭೆ ಹಮ್ಮಿಕೊಳ್ಳುತ್ತಾರೆ. ಅಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉದಯವಾಗುತ್ತದೆ. ಹಸಿರು ಟವೆಲ್ಲನ್ನ ಸಂಘದ ಸಂಕೇತ ಮಾಡಿಕೊಳ್ಳಲು ಹಾಸನದ ಮಂಜುನಾಥ ದತ್ತ ಅವರು ಸೂಚಿಸುತ್ತಾರೆ. ಆ ಸಭೆ ಅದನ್ನ  ಅನುಮೋದಿಸುತ್ತದೆ. ಹೀಗೆ ಅಂದು ರೈತ ಸಂಘದ ಉದಯವಾಗುತ್ತದೆ. ನಂತರ ಅದು ಒಂದರ ಹಿಂದೆ ಒಂದು ಕಾರ್ಯಕ್ರಮ ರೂಪಿಸುತ್ತಲೇ ಹೋಗುತ್ತದೆ. ಆ ವೇಳೆಗಾಗಲೇ ರಾಜ್ಯದಾದ್ಯಂತ ಖ್ಯಾತ ವಿಚಾರವಾದಿಯಾಗಿ, ಅತ್ಯದ್ಭುತ ವಾಗ್ಮಿಯಾಗಿ ಹೆಸರಾಗಿದ್ದ ಪ್ರೊಫೆಸರ್ ಅವರನ್ನ ದತ್ತ, ಸುಂದರೇಶ್ ಮುಂತಾದವರು  ಎಲ್ಲ ಕಡೆಗೆ ಕರೆದೊಯ್ದು ಭಾಷಣ ಮಾಡಿಸಲು ಶುರುಮಾಡುತ್ತಾರೆ. ಅವರ ಮಾತಿನ ಮೋಡಿಗೆ ರೈತರು ಇನ್ನಿಲ್ಲದಂತೆ ಒಳಗಾಗತೊಡಗುತ್ತಾರೆ. ಹೀಗಿದ್ದಾಗ ಪ್ರೊಫೆಸರ್ ಅವರ ಮಾತಿನಿಂದ ಸ್ಫೂರ್ತಿಗೊಂಡಂತಹ ಸಭಿಕರೊಬ್ಬರು , "ರೈತ ಸಂಘಕ್ಕೆ ನೀವೇನಾಗಿದ್ದೀರಿ?" ಎಂದು ಕೇಳುತ್ತಾರೆ. ಆಗ ಪ್ರೊಫೆಸರ್ ವೇದಿಕೆಯ ಮುಖಂಡರ ಕಡೆ ಒಮ್ಮೆ ನೋಡಿ ಸಣ್ಣಗೆ ನಕ್ಕು , "ನಾನು ರೈತ ಸಂಘದ ಸಂಚಾಲಕ" ಎನ್ನುತ್ತಾರೆ. ನಂತರ ರೈತ ಸಂಘ  ಅದನ್ನೇ ಅನುಮೋದಿಸುತ್ತದೆ. ಹೀಗೆ ಪ್ರೊಫೆಸರ್ ಅವರು  ರೈತ ಸಂಘಕ್ಕೆ ಅಧಿಕೃತವಾಗಿ ಪ್ರವೇಶಿಸುತ್ತಾರೆ. ಅಲ್ಲಿ ತನಕ ನಾನಾ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಂತಹ ಪ್ರೊಫೆಸರ್ ಆನಂತರ ರಾಜ್ಯ ರೈತ ಸಂಘಕ್ಕೆ ಇನ್ನಿಲ್ಲದಂತೆ ಅಂಟಿಕೊಳ್ಳುತ್ತಾರೆ.
 
     ಆರಂಭದ ದಿನಗಳಲ್ಲಿ ಅಧ್ಯಯನ ಶಿಬಿರಗಳನ್ನ ಹಮ್ಮಿಕೊಂಡು, ಆ ಮೂಲಕ ರೈತ ಕಾರ್ಯಕರ್ತರಿಗೆ ಅರಿವು ಮೂಡಿಸುವ ಕೆಲಸವನ್ನ ರೈತ ಸಂಘ ಮಾಡುತ್ತಾ ಹೋಗುತ್ತದೆ. "ಶಿಬಿರಾರ್ಥಿಗಳು ತಪ್ಪದೇ ಪೆನ್ನು ಹಾಗೂ ನೋಟ್ ಬುಕ್ ತರಲೇಬೇಕು. ಶಿಸ್ತಿನಿಂದ ಆಲಿಸಬೇಕು. ಕಲಿತದ್ದನ್ನ ಜೀವನಕ್ಕೆ ಅಳವಡಿಸಿಕೊಳ್ಳಬೇಕು" ಎಂಬುದನ್ನ ಪ್ರೊಫೆಸರ್ ಆಗ ಕಡ್ಡಾಯ  ಮಾಡುತ್ತಾರೆ. ಅಂತಹ ಶಿಬಿರಗಳಿಂದ ತಯಾರಾದ ರೈತ ಕಾರ್ಕರ್ತರು ತಾವು ಶಿಸ್ತು ಅಳವಡಿಸಿಕೊಳ್ಳುವುದಲ್ಲದೆ, ಸಂಗಡಿಗರಿಗೂ ಅದೇ ಶಿಸ್ತನ್ನ ಕಲಿಸುತ್ತಾರೆ. ಅದರ ಪ್ರಯುಕ್ತ ಬಸ್ಸಿನಲ್ಲಿ ಪ್ರಯಾಣಿಸುವಾಗ ವೃದ್ಧರಿಗೆ ಸೀಟು ಬಿಟ್ಟುಕೊಡುವುದು, ಮಗುವನ್ನ ಎತ್ತಿಕೊಂಡು ಬರುವ ತಾಯಂದಿರಿಗೆ ಎದ್ದು ನಿಂತು ಸೀಟು ಕೊಡುವುದು, ಇತ್ಯಾದಿಗಳನ್ನ ಹಸಿರು ಟವೆಲ್ಲಿನ ಕಾರ್ಯಕರ್ತರು ಆಗ ಎಲ್ಲೆಡೆಯೂ ಮಾಡತೊಡಗುತ್ತಾರೆ. ಆ ಮೂಲಕ ಜನರ ಪ್ರೀತಿಯನ್ನೂ ಸಂಪಾದಿಸುತ್ತಾರೆ. ಈಗ, ಆ ಅಧ್ಯಯನ ಶಿಬಿರಗಳೂ ಇಲ್ಲ. ಆ ಶಿಸ್ತೂ ಇಲ್ಲ. ಆ ಹೋರಾಟವೂ ಇಲ್ಲ! 

    ಅಂದು ಮದ್ದೂರಿನ ಅರ್ಜುನಪುರಿ ಕಾಲೇಜಿಗೆ ಪ್ರೊಫೆಸರ್ ಅತಿಥಿಯಾಗಿ ಆಗಮಿಸಿದ್ರು. ಆ ಕಾರ್ಯಕ್ರಮಕ್ಕೆ ರೈತ ಮುಖಂಡ ಕೋಣಸಾಲೆ ನರಸರಾಜು ಜೊತೆ ನಾನೂ ಹೋಗಿದ್ದೆ. ಪ್ರೊಫೆಸರ್ ಆ ದಿನ ಹೊಸದೊಂದು ಪ್ರಯೋಗ ಮಾಡಿದ್ರು. ಎಂದಿನಂತೆ ಮಾಲೂಲು ಭಾಷಣ ಮಾಡದೆ, ಒಂದೆರಡು ಮಾತುಗಳನ್ನಾಡಿ, "ನೀವು ವಿದ್ಯಾರ್ಥಿಗಳು. ಮುಂದಿನ ಭವಿಷ್ಯದ ಪ್ರಜೆಗಳು. ನಿಮಗೆ ಈ ಭಾಷಣ ಬೇಡ.  ಪ್ರಶ್ನೆ ಕೇಳಿ ಪ್ರಶ್ನೆ" ಎನ್ನುತ್ತಾರೆ. ಪ್ರಶ್ನೆ ಕೇಳಲು ವಿದ್ಯಾರ್ಥಿಗಳನ್ನ ಹುರಿದುಂಬಿಸುತ್ತಾರೆ. ಆಗ -

    ವಿದ್ಯಾರ್ಥಿಯೊಬ್ಬ ಎದ್ದು ನಿಂತು, " ಸರ್, ರಾಜಕೀಯ ಪಕ್ಷಗಳು ನಿಮ್ಮ ದೃಷ್ಟಿಯಲ್ಲಿ ಏನು?" ಎನ್ನುತ್ತಾನೆ. ಆಗ ಪ್ರೊಫೆಸರ್, "ರಾಜಕೀಯ ಪಕ್ಷಗಳು ನನ್ನ ದೃಷ್ಟಿಯಲ್ಲಿ ಕಸ. ಕಳೆದ ಸಾರಿ ಗುಂಡುರಾವೆ ಎನ್ನುವ ಕಸವನ್ನ ಗುಡಿಸಿ ಹಾಕಿದ್ದೊ. ಈಗ ಹೆಗ್ಡೆ ಎನ್ನುವ ಕಸ ಬಂದು ಕುಳಿತ್ಕೊಂಡಿದೆ. ಅದನ್ನ ಗುಡಿಸಾಕ್ತೀರೇನು?" ಎಂದಾಗ, ಅದೇ ಹುಡುಗ, ಗುಡಿಸಾಕಿದ್ದ ಕಸ ಮತ್ತೇ ಬಂದ್ಬಿಟ್ರೆ…" ಎನ್ನುತಿದ್ದ ಆತನ ಮುಗಿಯುವ ಮೊದಲೇ,  "ಕೂತ್ಕೊ ಕೂತ್ಕೊ. ಯಾಕೇಂದ್ರೆ, ನೀನು ಕಸಗುಡಿಸೋನಲ್ಲ!  ಇಲ್ಲಿ ಕೂತಿದ್ದಾರೆ ನೋಡು. (ಮುಂದಿನಾ ಸಾಲಿನ ಹೆಣ್ಣು ಮಕ್ಕಳನ್ನ ತೋರುತ್ತಾ) ಅವರನ್ನ ಕೇಳು. ಗುಡಿಸಾಕಿದ ಕಸನಾ ಮತ್ತೆ ತಂದಾಕೋತೀರಾಂತ?"  ಪ್ರೊಫೆಸರ್ ಅವರ ಆ ತಾಕ್ಷಣಿಕ ಪ್ರತಿಕ್ರಿಯೆಗೆ ನಾವೆಲ್ಲಾ ದಂಗುಬಡಿದೋದ್ವಿ. ಇದೊಂದು  ಸ್ಯಾಂಪಲ್ ಅಷ್ಟೇ. ಪ್ರೊಫೆಸರ್ ಹೀಗೆ ಅನೇಕ ಸಾರಿ ನಮ್ಮನ್ನ ದಂಗುಬಡಿಸಿದ್ದು ಸಾಕಷ್ಟೇ ಇದೆ.  ಆ ಥರ ತಾಕ್ಷಣಿಕವಾಗಿ ಪ್ರತಿಕ್ರಿಯಿಸುವವರನ್ನ ನಾನಂತೂ ನೋಡಿಲ್ಲ.

     ದಾರಿ ಮಧ್ಯೆ ಸಿಗುವ ಊರುಗಳಲ್ಲಿ ಅನ್ನದಾತರು ಕೊಡುವ ಊಟ ಮಾಡುತ್ತಾ, ಪಾನೀಯ ಸೇವಿಸುತ್ತಾ, ರಾಜ್ಯದ ಎಲ್ಲ ಕಡೆಯಿಂದ ನೂರಾರು ಮೈಲಿಗಳನ್ನ ನಡೆದುಕೊಂಡೇ ಬಂದಿದ್ದ ಲಕ್ಷೋಪಲಕ್ಷ ರೈತರು ಅಂದು ಬೆಂಗಳೂರಿನಲ್ಲಿ ಜಮಾಯಿಸಿದ್ರು. ಅದು ರೈತ ಸಂಘದ ಪಾದಯಾತ್ರೆ ಕಾರ್ಯಕ್ರಮ. ಆಗ ರಾಜ್ಯದೆಲ್ಲೆಡೆ ಡಾ.ಹಿ.ಶಿ.ರಾಮಚಂದ್ರೇಗೌಡರು ಬರೆದಂತಹ ರೈತ ಹೋರಾಟದ ಹಾಡುಗಳೇ ಮೊಳಗುತಿದ್ದವು. ಅಂದು ಮೈಸೂರಿನ ರೈತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನಾನು, ಎಲ್.ಎಂ. ಚಂದ್ರು ಲಕ್ಷ್ಮಿಸಾಗರ, ಬೆಳ್ಳಾಳೆ ಬೆಟ್ಟೇಗೌಡ, ಬಿ.ಎಸ್.ಸತ್ಯ, ಸೋಗಳ್ಳಿ ರಾಜೇಂದ್ರ, ದೊಡ್ಡಪಾಳ್ಯ ಚಂದ್ರು, ಗೌಸ್ ಪೀರ್  ಹೀಗೆ ಹಲವಾರು ಗೆಳೆಯರು ಮೈಸೂರಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿ, ತಮಟೆ ಹೊಡೆದು ಕೊಂಡು, ಹಾಡು ಹಾಡುತ್ತಾ, ರಸ್ತೆಯ ಉದ್ದಕ್ಕೂ ರೈತರನ್ನ ರಂಜಿಸುತ್ತಾ, ಅಂದಿನ ಆ ಬೃಹತ್ ಸಮಾರಂಭದಲ್ಲಿ ಗಾಯಕ ಬೆಳ್ಳಾಳೆ ಬೆಟ್ಟೇಗೌಡನ ಒಡಗೂಡಿ ಹಾಡುವ ಮೂಲಕ, ಆ ಸಮಾವೇಶಕ್ಕೆ ನಾವೂ ಸಾಕ್ಷಿಯಾದೆವು.  ಅಂದಿನ  ಕಾಲ್ನಡಿಗೆಯ ಆ ಜಾಥಾ ಒಂದು ಐತಿಹಾಸಿಕ ಸಮಾರಂಭವೇ ಆಗಿತ್ತು. ಅಂತಹ ಒಂದು ಸಮಾರಂಭಕ್ಕೆ ನಡೆದೇ ಬಂದು, ಬೆಂಗಳೂರನ್ನ ಪ್ರವೇಶಿಸುತಿದ್ದ ರೈತರ ಕಣ್ಣಿಗೆ ಬೀಳುವಂತೆ, ಕೆಲವು ಪೋಸ್ಟರುಗಳನ್ನ , ಸರ್ಕಾರಿ ಏಜೆಂಟರೆಂಬ ಕೆಲವು ತಿಳಿಗೇಡಿಗಳು ಅಲ್ಲಲ್ಲಿ ಅಂಟಿಸಿದ್ದರು. ಆ ಪೋಸ್ಟರನ್ನ ಯಾರು ಹಾಕಿದ್ದಾರೆ? ಎನ್ನುವುದಕ್ಕೆ ಯಾವುದೇ ದಾಖಲೆ ಅದರಲ್ಲಿ ಇರಲಿಲ್ಲ!

     "ನಂಜುಂಡಸ್ವಾಮಿಯವರೆ, ಕನಕಪುರದ ಕಲ್ಲಿನಿಂದ ವಸೂಲಿಯಾದ ಲಕ್ಷಾಂತರ ಹಣ ಏನಾಯ್ತು? ನಿಮಗೆ ಕಾರು ಎಲ್ಲಿಂದ ಬಂತು? …" ಇಂಥಾದ್ದೊಂದು ಪೋಸ್ಟರ್ ಅದಾಗಿತ್ತು. ಆ ಒಂದು ಪೋಸ್ಟರನ್ನ ಕೈಯಲ್ಲಿ ಹಿಡಿದುಕೊಂಡು ಅಂದಿನ ಆ ಬೃಹತ್ ವೇದಿಕೆ ಏರಿದ ಪ್ರೊಫೆಸರ್, ಹಸಿರು ಟವೆಲ್ಲುಗಳಿಂದ ತುಂಬಿಹೋಗಿದ್ದ ರೈತರಿಗೆಲ್ಲ ಕಾಣಿಸುವಂತೆ ಆ ಪೋಸ್ಟರನ್ನ ಬಿಚ್ಚಿ ತೋರಿಸಿದರು. ನಂತರ ಅವರ ಸೊಂಟದಿಂದ ಪಾದದ ತನಕ ಅದನ್ನ ಇಳಿಬಿಟ್ಟರು. ಸಭೆಗೆ ಅದನ್ನ ಹಾಗೇ ಪ್ರದರ್ಶಿಸುತ್ತಾ, " ನೋಡಿ ಇದನ್ನ. ಸೊಂಟದ ತನಕ ಬಂದಿದೆ. ಅಂದರೆ ಇದು ಯಾರ ಕೆಲಸ ಅಂತಾ  ಗೊತ್ತಾಯ್ತಲ್ಲಾ!? ಇದು ಸೊಂಟದ ಕೆಳಗಿನವರ ಕೆಲಸ.  ಇದಕ್ಕೆ ಅಪ್ಪ, ಅಮ್ಮ ಯಾರೂ ಇಲ್ಲ. ಈಗ ಗೊತ್ತಾಯ್ತಲ್ಲಾ! ಇದು ಯಾರಿಗೆ ಹುಟ್ಟಿದೆ ಅಂತಾ?" ಎಂದು ವ್ಯಂಗ್ಯವಾಡುವ ಮೂಲಕ, ಅದು ಅಕ್ರಮ ಸಂಬಂಧದ ಕೂಸು ಎಂಬುದನ್ನ ಸಭೆಗೆ ಮುಟ್ಟಿಸಿದರು. ಪ್ರೊಫೆಸರ್ ಅವರ ವ್ಯಂಗ್ಯದ ಚಾಟಿ ಹೇಗಿರುತ್ತೆ ಎನ್ನುವುದಕ್ಕೆ ಇದೊಂದು ದೃಷ್ಟಾಂತ ಅಷ್ಟೇ.

     ಅದೇ ಪಾದಯಾತ್ರೆಯ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಂತಹ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು, "ರೈತ ಚಳವಳಿಯು ಹಟಕ್ಕೆ ಬಿದ್ದಿರುವಂತಹ ತೀವ್ರತೆ ನೋಡುತಿದ್ದರೆ, ಮುಂದೊಂದು ದಿನ ಕರ್ನಾಟಕದ ತುಂಬಾ ರೈತರ ವೀರಗಲ್ಲುಗಳನ್ನ ನೋಡಬೇಕಾಗುತ್ತೆ ಕಂಡ್ರಿ. ಹಾಗಾಗಿ ಆದಷ್ಟು ರಾಜಿ ಮಾಡ್ಕೊಂಡು ನಾವು ನಮ್ಮ ಕಾರ್ಯಸಾಧಿಸ್ಕೊಬೇಕಾಗಿದೆ" ಎಂದು  ಹೇಳಿದಾಗ, ಪ್ರೊಫೆಸರ್, "ಅದು ತೇಜಸ್ವಿಯವರ ಮಾತು. ಬಿಡಿ ಅದನ್ನ"  ಅಂತಷ್ಟೇ ಹೇಳಿದರು.  ಪ್ರೊಫೆಸರ್ ಮಾತಿಗೆ  ನಾವೆಲ್ಲರೂ ಅಂದು ಚಪ್ಪಾಳೆ ತಟ್ಟಿದ್ದೊ. ತೇಜಸ್ವಿಯವರು ಅವತ್ತು ಆಡಿದ್ದ ಭವಿಷ್ಯದ ನುಡಿಗಳು ನಮಗೆ ರುಚಿಸಿರಲಿಲ್ಲ. ರೈತ ಸಂಘ ತೇಜಸ್ವಿಯವರ ಮಾತು ಕೇಳ್ಬೇಕಾಗಿತ್ತು ಅಂತ ಆಮೇಲೆ ನಮಗೆಲ್ಲಾ ಅನುಭವವಾಯಿತು. 

     ರಾಜ್ಯ ರೈತ ಸಂಘ "ನಮ್ಮನಾಡು" ಪತ್ರಿಕೆಯನ್ನ ಮತ್ತೆ ಪ್ರಾರಂಭಿಸಲು ಮಂಡ್ಯ ಜಿಲ್ಲಾ ರೈತ ಸಂಘಕ್ಕೆ ವಹಿಸಿಕೊಟ್ಟಿತ್ತು. ಮಂಡ್ಯದಿಂದ ಪ್ರಕಟವಾಗುತಿದ್ದ ನಮ್ಮ ನಾಡು" ಪತ್ರಿಕೆಗೆ ಪ್ರಾರಂಭದ ದಿನಗಳಲ್ಲಿ ನಾನು ಸಂಪಾದಕನಾಗಿದ್ದೆ. ಪ್ರೊಫೆಸರ್ ಪ್ರಧಾನ ಸಂಪಾದಕರಾಗಿದ್ರು.  ಮಂಡ್ಯದ ಸರಳ ಸಮಾರಂಭವೊಂದರಲ್ಲಿ ಅದರ ಬಿಡುಗಡೆಯಾಯಿತು. ಆ ದಿನ ಪ್ರೊಫೆಸರ್, "ರಾಜ್ಯದ ಮಂತ್ರಿ ಮಹೋದಯರೂಂತ ಇದ್ದಾರಲ್ಲ. ಅವರು ರಾಜಕಾರಣಿಯಾಗುವ ಮುಂಚೆ ಅವರ ಆಸ್ತಿ ಎಷ್ಟಿತ್ತು? ಮಂತ್ರಿ ಯಾದಮೇಲೆ ಅವರ ಆಸ್ತಿ ಎಷ್ಟಿದೆ? ಅವರ ನೆಂಟರಿಷ್ಟರ ಹೆಸರಿನಲ್ಲಿ ಆಸ್ತಿ ಎಷ್ಟಿದೆ? ಎಲ್ಲವನ್ನೂ ಕರಾರುವಾಕ್ಕಾಗಿ ಈ "ನಮ್ಮ ನಾಡು"ನಲ್ಲೇ ಬಯಲು ಮಾಡೋಣ" ಎಂದು ನನಗೆ ಹೇಳಿದ್ರು.  ಇಂತಹ ಅನೇಕ ಯೋಜನೆಗಳು ಅವರ ಜೊತೆಯಲ್ಲೇ ಈಗ ಹೊರಟು ಹೋಗಿವೆ. 

      ನಾನು ಅಂದು ನಂಜನಗೂಡು ಟೌನಿನ ರಸ್ತೆಯೊಂದರಲ್ಲಿ, ಟೀ ಕುಡಿಯೋಣಾಂತ  ನಡೆದು ಹೋಗುತಿದ್ದೆ. ಆಗ ಎದುರುಗಡೆಯಿಂದ ಬಂದಂತಹ ಪ್ರೊಫೆಸರ್ ನನ್ನನ್ನ ನೋಡಿ ಕಾರು ನಿಲ್ಲಿಸಿದ್ರು. "ಸರ್, ಕಾರ್ಯಕ್ರಮ ಶುರುವಾಗೋಕೆ ಇನ್ನೂ ಒಂದು ಗಂಟೆ ತಡವಾಗುತ್ತೆ" ಎಂದೆ. "ಬನ್ನಿ ಕೂತ್ಕೊಳ್ಳಿ" ಎಂದ್ರು. ರಸ್ತೆ ಬದಿಯಲ್ಲಿ ಇದ್ದಂತಹ ಬೇಕರಿಯೊಂದರ ಮುಂದೆ ಕಾರು ನಿಲ್ಲಿಸಿ, "ತಿಂಡಿ ತಿನ್ನಿ" ಎಂದ್ರು.  "ಬೇಡಿ ಸರ್.." ಎಂದೆ.  ಎರಡು ಸ್ಲೈಸ್ ಬ್ರೆಡ್ಡು ಜಾಂ ತಿಂದು  ಕಾರ್ ಸ್ಟಾರ್ಟ್ಮಾಡಿ, ಅಲ್ಲೊಂದ್ಕಡೆ ಒಳ್ಳೆ ಟೀ ಕೊಡ್ತಾನೆ.  ಕುಡಿದು ಬರೋಣ" ಅಂತ ಹೊರಟ್ರು. ನಂತರ ಮತ್ತೊಂದು ಕಡೆ ಕಾರು ನಿಲ್ಲಿಸಿ, "ಸಿಗರೇಟ್ ತರ್ತೀನಿ ಇರಿ" ಎಂದ್ರು. "ಸರ್, ನಾತರ್ತೀನಿ" ಎಂದೆ. "ಬೇಡ" ಎಂದೇಳಿ, ಅವರೇ ಇಳಿದೋಗಿ ಒಂದು ಪ್ಯಾಕ್ ಸಿಗರೇಟು ತಂದ್ರು. ಮತ್ತೆ ಹೊರಟ್ರು. ಅಷ್ಟೊತ್ತಿಗಾಗಲೇ ಟೌನ್ ಬಿಟ್ಟು ಸುಮಾರು ದೂರ ಕ್ರಮಿಸಿದ್ದೊ. ಮತ್ತೆ ಒಂದು ಕಡೆ ಕಾರು ನಿಲ್ಲಿಸಿ ಅದು-ಇದು ಮಾತನಾಡುತ್ತಾ, ಆನಂದವಾಗಿ ಧಂ ಎಳೆದ್ರು. ನಂತರ ಹೊರಡಲು ಅನುವಾದರು.  ಕಾರ್ ಸ್ಟಾರ್ಟ್ ಆಗಲಿಲ್ಲ. ಎರಡು-ಮೂರು ಬಾರಿ ಪ್ರಯತ್ನಿಸಿ, ಸ್ವಲ್ಪವೂ ವಿಚಲಿತರಾಗದೆ ಕೆಳಗಿಳಿದು, ಬ್ಯಾನೆಟ್ ತೆರೆದು ನೋಡಿದ್ರು. ಅವರಿಗೆ ಅದೇನ್ ಹೊಳಿತೋ ಗೊತ್ತಿಲ್ಲ. ಒಂದು ಸ್ಪ್ಯಾನರ್ ಹಿಡಿದು ಕಾರಿನ ಕೆಳಗೆ ತೂರೇಬಿಟ್ರು. ಆ ದೃಶ್ಯ ನೋಡುತಿದ್ದ ನನಗೆ, "ಆ ಬಾಡಿನ ಹೆಂಗೇ ಗೋರ್ಕೊಂಡ್ರು ಇಪ್ಪತ್ಕೇಜಿ ಬಾಡು ಸಿಗೋದೇ ಕಷ್ಟ. ಆದರೆ ಆ ಬಾಡಿಯೊಳಗಿರೋ ಆರ್ಗನ್ಸ್ಗಳಿಗೆ ಆ ಕೆಚ್ಚು, ಆ ಫ್ಲೇಮು, ಆ ಫೈರ್ ಬಾಂಡ್ ಅದೆಲ್ಲಿಂದ ಬಂತು?!" ಎಂದುಕೊಂಡು, ನನ್ನಷ್ಟಕ್ಕೆ ನಾನೇ ಅಚ್ಚರಿ ಪಡ್ತಾ ಇದ್ದೆ. ಐದ್ಹತ್ತು ನಿಮಿಷದಲ್ಲಿ ಅದೇನ್ ಮ್ಯಾಜಿಕ್ ಮಾಡಿದ್ರೋ! ಕಾರ್ ಸ್ಟಾರ್ಟ್ ಮಾಡೇಬಿಟ್ರು. ನಂತರ ಸಣ್ಣ ನಗೆಯೊಂದನ್ನ ನನ್ನ ಕಡೆಗೆ ಎಸೆದು, "ಕಾರ್ ಇಟ್ಕೊಳ್ಳೋದು ಮುಖ್ಯವಲ್ಲ. ಅದರ ಬಗ್ಗೆ ತಿಳ್ಕೊಂಡೂ ಇರಬೇಕು" ಎಂದ್ರು. ನಾನು ಕೋಲೆ ಬಸವನಂತೆ ತಲೆ ಆಡಿಸಿದೆ. ನಂತರ ಅಲ್ಲೊಂದು ಪೆಟ್ಟಿ ಅಂಗಡಿಯಲ್ಲಿ ಅವರ ಫೇವರೇಟ್ ಟೀ ಕುಡಿದು, ನಂಜನಗೂಡಿನಲ್ಲಿ ಅಂದು ರೈತ ಸಂಘ ಹಮ್ಮಿಕೊಂಡಿದ್ದ  ಕಾರ್ಯಕ್ರಮಕ್ಕೆ ವಾಪಸ್ಸಾದೆವು. ಪ್ರೊಫೆಸರ್ ಎಂಥಾ ಸ್ನೇಹಮಯಿ ಎನ್ನುವುದಕ್ಕೆ ಇದಕ್ಕಿಂತ ಮತ್ತೇನು ಬೇಕು.

    ನಾನಾಗ ಒಂದಷ್ಟು ದಿನಗಳ ಕಾಲ ವಾರಪತ್ರಿಕೆಯೊಂದರ ಉಪ ಸಂಪಾದಕನಾಗಿದ್ದೆ. ಆಗ ಹಾಸನದ ರೈತ ಮುಖಂಡರುಗಳಾದ ಮಂಜುನಾಥ ದತ್ತ, ಆರ್.ಪಿ.ವೆಂಕಟೇಶಮೂರ್ತಿ ಮುಂತಾದವರನ್ನ ಹಾಗೂ ತುಮಕೂರಿನ ಎನ್.ಜಿ.ರಾಮಚಂದ್ರ ಮುಂತಾದವರನ್ನ  ರಾಜ್ಯ ರೈತಸಂಘದಿಂದ ಉಚ್ಚಾಟಿಸಲಾಗಿತ್ತು. ಅದೇ ಸಂದರ್ಭದಲ್ಲಿ ಪ್ರೊಫೆಸರ್ ಅವರನ್ನ ಸಂದರ್ಶನ ಮಾಡಲೆಂದು, ಬೆಂಗಳೂರಿನ ವಿಜಯನಗರದ ಆರ್.ಪಿ.ಸಿ ಲೇಔಟ್ನಲ್ಲಿದ್ದ ಅವರ ಮನೆಗೆ ಹೋಗಿದ್ದೆ. ನನ್ನ ಅಷ್ಟೂ ದಿನಗಳ ಒಡನಾಟದಲ್ಲಿ  ಖಾದಿ ವಸ್ತ್ರ ಬಿಟ್ಟು ಬೇರೊಂದು ಉಡುಪಿನಲ್ಲಿ, ಅವರನ್ನ ನಾನೆಂದೂ ನೋಡಿರಲಿಲ್ಲ.  ಆ ದಿನ ಅವರು, ಉದ್ದನೆಯ ನಿಲುವಂಗಿಯಂತಿದ್ದ ಗೌನೊಂದನ್ನ ಧರಿಸಿದ್ದರು. ಆ  ದಿರಸು ನೋಡಿ ನನಗೆ ಅಚ್ಚರಿಯೋ ಅಚ್ಚರಿ. ಅವರು ಧರಿಸಿದ್ದ ಆ ಉಡುಪು ಸಿನಿಮಾಗಳಲ್ಲಿ ಸಿರಿವಂತರು ಧರಿಸುವ ದಿರಸಿನಂತೆಯೇ ಇತ್ತು. 
 
     ಅಂದು ನನ್ನನ್ನ ಪ್ರೀತಿಯಿಂದ ಒಳ ಕರೆದು ಹಾಲಿನಲ್ಲಿ ಕೂರಿಸಿ ಒಳ ಹೋದಂತಹ ಪ್ರೊಫೆಸರ್, ಐದಾರು ನಿಮಿಷ ಬಿಟ್ಟುಕೊಂಡು ಎರಡು ಟೀ ಕಪ್ಗಳನ್ನ ಹಿಡಿದುಕೊಂಡು, ಅದೇ ದಿರಸಿನಲ್ಲಿ ನಡೆಯುತ್ತಾ ಬಂದರು. ಆ ಸನ್ನಿವೇಶ   ಮಹಾರಾಜರೊಬ್ಬರು ಟೀ ತರುತ್ತಿರುವಂತೆ ನನಗೆ  ಕಂಡಿತು. ಆ ದೃಶ್ಯ ಇಂದೂ ಸಹ ನನ್ನ ಕಣ್ಣಲ್ಲಿ ಹಾಗೇ ಕಟ್ಟಿದಂತಿದೆ. ಅಲ್ಲಿನ ಟೀಪಾಯಿ ಮೇಲೆ  ತಂದಂತಹ ಟೀ ಇಟ್ಟು, ಸಿಗರೇಟು ಪ್ಯಾಕೊಂದನ್ನ ತೆರೆದು, ನನ್ನ ಮುಂದಕ್ಕೆ ಕೈ ಚಾಚಿ "ಸಿಗರೇಟ್?" ಎಂದರು. ನಾನು "ಬೇಡಿ ಸರ್" ಎಂದು ಬಿಟ್ಟೆ. ಅವರ ಜೊತೆ ಸಿಗರೇಟ್ ಸೇದುವ ಆಸೆ ನನಗಿತ್ತು. ಆದರೆ ಅವರೆದುರು ಸಿಗರೇಟು ಸೇದಲು ಏನೋ ಸಂಕೋಚವೆನಿಸಿ, ಬೇಡ ಸರ್ ಎಂದೆ. ನಂತರ ಪ್ರೊಫೆಸರ್ ಒಂದು ಧಮ್ ಎಳೆದು, ಒಂದು ಸಿಪ್ ಟೀಯನ್ನ ಹೀರಿ, "ಟೀ ನಾನೇ ಮಾಡಿದ್ದು ಹೇಗಿದೆ?" ಎಂದರು. "ಸರ್, ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್" ಎಂದೆ. 

     ಟೀ ಕುಡಿಯುತಿದ್ದಾಗ, ನಮ್ಮ ನೆತ್ತಿ ಮೇಲಿನ ಸೀಲಿಂಗ್ನಲ್ಲಿ  ತೂಗುಹಾಕಿದ್ದ ಷಾಂಡಿಲಿಯರ್ (ವಿದ್ಯುತ್ ದೀಪ ಗುಚ್ಚ)  ತೋರಿಸಿದ ಪ್ರೊಫೆಸರ್,  "ಇದನ್ನ ನನ್ನಪ್ಪ ಅಟ್ಟದ ಮೇಲೆ ಬಿಸಾಕಿದ್ರು. ಮೈಸೂರಿಂದ ತಂದು, ನಾನೇ ವೈರಿಂಗ್ ಮಾಡಿ, ಇಲ್ಲಿಗೆ ಅಳವಡಿಸಿದ್ದೇನೆ. ಹೇಗಿದೆ?" ಎಂದರು.  "ಸರ್, ಗ್ರ್ಯಾಂಡಾಗಿದೆ" ಎಂದೆ.  "ಎಷ್ಟಾಗ್ಬಹುದು?" ಎಂದ್ರು.  "ಸರ್, ನಂಗೊತ್ತಾಗೊಲ್ಲ. ಸೀಮೆಣ್ಣೆ ಬುಡ್ಡಿ ಬೆಳಕಲ್ಲಿ ಬೆಳೆದವನು ನಾನು " ಎಂದೆ. ಅವರು ಸಣ್ಣಗೆ ನಕ್ಕು, "ಯಾವುದೇ ಕಳ್ಳನಿಗೆ ಕೊಟ್ರು, ಕಣ್ಮುಚ್ಕೊಂಡು ಹತ್ತು ಸಾವಿರ ರೂಪಾಯಿ ಕೊಡ್ತಾನೆ" ಎಂದ್ರು. 

     ಅವರು  ಟೀ ಮಾಡುತಿದ್ರು, ವೈರಿಂಗ್ ಮಾಡುತಿದ್ರು, ಕಾರ್ ರಿಪೇರಿ ಮಾಡುತಿದ್ರು - ಇವು ಅವರ ಸಂಪರ್ಕದಲ್ಲಿ ನನಗೆ ಸಿಕ್ಕಂತಹ ಸ್ಯಾಂಪಲ್ಸ್ ಅಷ್ಟೇ. ಇವಲ್ಲದೆ ಅವರು ಕಾರ್ಪೆಂಟರಿ ಕೆಲಸ ಮಾಡುತಿದ್ರು,  ಐರನ್ ಮಾಡ್ಕೊತಿದ್ತು, ಬಟ್ಟೆ ಹೊಲಿತಿದ್ರು, ಕ್ರೋಶಾದಿಂದ ಅವರ ಟೋಪಿಯನ್ನ ಅವರೇ ತಯಾರಿಸ್ಕೋತಾ ಇದ್ರು  ಹೀಗೆ ಸುಮಾರು ಕೆಲಸಗಳನ್ನ ಪ್ರೊಫೆಸರ್ ತಾವೇ ಮಾಡ್ಕೊತಿದ್ರು. ಅದು ಪ್ರೊಫೆಸರ್ ಅವರಲ್ಲಿದ್ದಂತಹ ಮತ್ತೊಂದು ವಿಶೇಷ. ಅವರದು ಬಹುಮುಖ ವ್ಯಕ್ತಿತ್ವ.

      ಅವರನ್ನ ಅಂದು ಸಂದರ್ಶಿಸುತಿದ್ದಾಗ, "ಸರ್, ಹಟವಾದಿ ಎನ್ನುವ ಬಲವಾದ ಆರೋಪ ನಿಮ್ಮ ಮೇಲಿದೆ" ಎಂದೆ. "ಹೌದು, ನಾನು ಹಟವಾದಿನೇ. ಕೆಲವರು ಚಟವಾದಿಗಳಿದ್ದಾರೆ. ನಿಮಗೆ ಹಟವಾದಿ ಬೇಕೋ? ಚಟವಾದಿ ಬೇಕೋ?" ಎಂದ್ರು.  ಅವರನ್ನ ಮಾತಿನಲ್ಲಿ ಸೋಲಿಸುವುದು ಸುಲಭವಾಗಿರಲಿಲ್ಲ.

  ಪ್ರೊಫೆಸರ್ ಈ ನಾಡು ಕಂಡುಂಡ ಅಪ್ರತಿಮ ಪ್ರತಿಭೆಯಾಗಿದ್ರು. ಅದ್ಭುತ ಚಿಂತಕರಾಗಿದ್ರು. ಮಹಾನ್ ವಿಚಾರವಾದಿಯಾಗಿದ್ರು.  ಮುಂದಿನ ನೂರು ವರ್ಷದ್ದನ್ನ ಇಂದೇ ಚಿಂತಿಸಿ ಹೇಳುವ ಭವಿತಜ್ಞ ದಾರ್ಶನಿಕರೂ ಅವರಾಗಿದ್ರು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಹಾಗೆಯೇ,  ಯಾರು ಏನೇ ಹೇಳಬಹುದು. ಪ್ರೊಫೆಸರ್  ಹಟವಾದಿಯಾಗಿದ್ರು ಎನ್ನುವುದರಲ್ಲಿ ಕೂಡ ಎರಡನೇ ಮಾತು ಇಲ್ಲವೇ ಇಲ್ಲ. ಅವರ ಸ್ವಭಾವವೇ ಹಟದ  ಸ್ವಭಾವ. ಆಗಾಗ ದುಡುಕುವುದು, ಸಿಡುಕುವುದು ಕೂಡ ಅವರ ಸ್ವಭಾವವಾಗಿತ್ತು. ಅವರಿಗೆ ಹಿತೈಷಿಯಂತಿದ್ದ ಕೆಲವರು ಹೇಳಿದ್ದನ್ನ ಕೇಳಿಕೊಂಡು, ಅದನ್ನ ಪರಾಮರ್ಶಿಸದೆ ಕೆಲವರನ್ನ ಘಾಸಿ ಮಾಡಿದ್ದೂ ಇದೆ. ಅದೇ ವಿಚಾರಕ್ಕೆ  ಬೇಸರ ಮಾಡಿಕೊಂಡು, ಕೋಪ ಮಾಡಿಕೊಂಡು ಹೊರಟೇ ಹೋದದ್ದೂ ಇದೆ. ಅವರಿಗೆ ಇಷ್ಟವಾಗದ್ದನ್ನ ಅವರು ಎಂದೂ ಸಹಿಸುಕೊಳ್ಳುತ್ತಿರಲಿಲ್ಲ. ಅಂತಹ ಎಷ್ಟೋ ಸಂದರ್ಭಗಳಲ್ಲಿ ತಮ್ಮ Ego ಗೆ Hurt ಆದವರಂತೆ ವರ್ತಿಸಿ ಬಿಡುತಿದ್ರು. ಅವರು ಎಂದೂ ರಾಜಿಯಾಗುತ್ತಿರಲಿಲ್ಲ. ಅಂತಹ ಹಟವಾದಿ ಅವರಾಗಿದ್ರು. ಹಾಗಾಗಿ ಕೆಲವರಿಗೆ ಪ್ರೊಫೆಸರ್ ಸರ್ವಾಧಿಕಾರಿಯಂತೆ ಕಾಣುತಿದ್ರು.

     ಈ ನಾಡಿನ ದಿಗ್ಗಜರಂತಿದ್ದ ಪಿ.ಲಂಕೇಶ್ ಮತ್ತು ಎಂ.ಡಿ.ನಂಜುಂಡಸ್ವಾಮಿಯವರು ಮೊದಲು ತುಂಬಾ ಒಡನಾಡಿಗಳಾಗಿದ್ರು. ನಂತರ ತಮ್ಮ ತಮ್ಮ ವಯಕ್ತಿಕ ಪ್ರತಿಷ್ಠೆಗಳಿಂದಾಗಿ ದೂರಾಗಿಬಿಟ್ರು. ಕೊನೆಗೆ  ಒಂದಾಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಟ್ಟ ತಲುಪಿಬಿಟ್ರು. 

      ಸ್ವಂತವಾಗಿ ಯೋಚಿಸುವ ಡಿಫರೆಂಟ್ ಥಿಂಕರ್ಸ್ಗಳಲ್ಲಿ ಇರುವಂತಹ ಮಹಾ ದೌರ್ಬಲ್ಯ ಎಂದರೆ ಆ ಪ್ರತಿಷ್ಠೆ. ಅದೇ ಪ್ರತಿಷ್ಠೆಗಳಿಂದಾಗಿ ಸಮಾನ ಮನಸ್ಕ ಸಂಘಟನೆಗಳು ಒಗ್ಗೂಡಲು ಆಗಲಿಲ್ಲ.  ಅನ್ಯಾಯ, ದಬ್ಬಾಳಿಕೆ ವಿರುದ್ದ ಒಗ್ಗೂಡಿ ಅವು ಹೋರಾಟ ಮಾಡಬೇಕಾಗಿತ್ತು. ಆದರೆ ನಮ್ಮ ಬೆನ್ನಿಗೆ ಲಕ್ಷಾಂತರ ಜನರಿದ್ದಾರೆ ಎನ್ನುವ ಅಮಲು ಕೆಲವರ ನೆತ್ತಿಗೆ ಏರಿಬಿಟ್ಟಿತ್ತು. ಆ ಅಮಲು ಅಫೀಮಿನಷ್ಟೇ ಅಪಾಯಕಾರಿ ಎನ್ನುವ ಅರಿವು  ಆ ಚಳವಳಿಗಳ ಎಲ್ಲಾ ಮುಂಚೂಣಿಗರಿಗೂ ಇರಬೇಕಾಗಿತ್ತು. ಆದರೂ ಅವರವರ ಪ್ರತಿಷ್ಠೆಯೇ ಅವರಿಗೆ ದೊಡ್ಡದಾಗಿ ಹೋಯಿತು. ನಾಯಕರ ಆ ಪ್ರತಿಷ್ಠೆಗೆ  ಪ್ರಗತಿಪರ ಸಂಘಟನೆಗಳು ಬಲಿಯಾದವು. ಆ ಪ್ರತಿಷ್ಠೆಯಿಂದಾಗಿಯೇ ರೈತ, ದಲಿತ ಇನ್ನಿತರೆ ಸಂಘಟನೆಗಳು ವಿಘಟನೆಯಾದವು. ನಮ್ಮನ್ನಾಳುವ ಸರ್ಕಾರಗಳಿಗೂ ಅದೇ ಬೇಕಾಗಿತ್ತು. ಅದೇ ನಮ್ಮೆಲ್ಲರ ದುರಂತವಾಯಿತು. ಈ ನಾಡಿನ ದುರಂತಕ್ಕೂ ಅದೇ ಕಾರಣವಾಯಿತು.

     "ಲಂಕೇಶ್ ಒಬ್ಬ ಚಾರಿತ್ರ್ಯ ಹೀನ. ಅವರ ಜೊತೆ ನಾನು ಮಾತಾಡುವುದಿಲ್ಲ. ಅವರ ಜೊತೆ ನಾನು ಭಾಗವಹಿಸುವುದಿಲ್ಲ.  Xxxx  ಸಂಸಾರ ಹಾಳ್ಮಾಡೋದು ಅಂದ್ರೆ ಗೊತ್ತಲ್ಲ. ಅಂತೋರು ಅವರು. ಅಂತವರ ಸಹವಾಸ ನಮಗೆ ಬೇಕಾಗಿಲ್ಲ.  Xxxxx ಎನ್ನುವ ಆ ಮೂರ್ಖರಿಗೆ  ನಾವೇನೂಂತ ಇನ್ನೂ ಅರ್ಥವಾಗಿಲ್ಲ. ಅರ್ಥವಾದ ಮೇಲೆ ಅವರೆಲ್ಲಾ ಬರ್ತಾರೆ ಬಿಡಿ. .. " ರೈತ ಸಂಘ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ನಾನು ಕೇಳಿದಂತಹ ಪ್ರಶ್ನೆಗಳಿಗೆ ಪ್ರೊಫೆಸರ್ ಕೊಟ್ಟಂತಹ ಉತ್ತರದ  ಕೆಲವು ಭಾಗಗಳಿವು. (ಲಂಕೇಶ್ ಅವರ ಹೆಸರಷ್ಟೇ ಇಲ್ಲಿ ಸೇರಿಸಿದ್ದೇನೆ. ಉಳಿದವರ ಹೆಸರುಗಳನ್ನ ನಾನು ಬೇಕೆಂತಲೇ ಸೇರಿಸಿಲ್ಲ!)   ಹೀಗೆ ಹರಿತವಾಗಿ ಹೇಳುವುದು ಪ್ರೊಫೆಸರ್ ಅವರ ಹುಟ್ಟುಗುಣವಾಗಿತ್ತು. ಅಂತಹ ಒಂದು ಸ್ವಭಾವದಿಂದ ಹತ್ತಿರವಿದ್ದಂತಹ ಅನೇಕರನ್ನ ಪ್ರೊಫೆಸರ್ ದೂರ ಇಟ್ಟು ಬಿಟ್ರು. 

    ಪ್ರೊಫೆಸರ್ ಅವರನ್ನ ಸದಾ ಹೆಗಲಮೇಲೆಯೇ ಇರಿಸಿಕೊಂಡಿದ್ದಂತಹ ಹಾಸನದ ಮಂಜುನಾಥ ದತ್ತ ಮುಂತಾದವರನ್ನ, ಪ್ರೊ.ರವಿವರ್ಮಕುಮಾರ್ ಅವರನ್ನ,  ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದ ಬಾಬಗೌಡ ಪಾಟೀಲರನ್ನ,  ರೈತ ಸಂಘಕ್ಕೆ ಹಾಡು ಬರೆದು ಕೊಟ್ಟಂತಹ ಸಾಂಸ್ಕೃತಿಕ ನಾಯಕ ಡಾ.ಹಿ.ಶಿ.ರಾಮಚಂದ್ರೇಗೌಡರನ್ನ, ಇದಕ್ಕೂ ಮೊದಲೇ ವಿಚಾರವಾದಿ ಹಾಗೂ ಸಮಾಜವಾದಿ ಗೆಳೆಯರಾಗಿದ್ದಂತಹ ಲಂಕೇಶ್, ಕೆ.ರಾಮದಾಸ್, ಎಚ್.ಎಲ್.ಕೇಶವಮೂರ್ತಿ ಇನ್ನೂ ಅನೇಕರನ್ನ ದೂರ ಮಾಡಿಕೊಳ್ಳುವುದರ ಜೊತೆಗೆ ಪ್ರೊಫೆಸರ್ ಎಂದರೆ ನನ್ನ ಪ್ರಾಣ ಎನ್ನುತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನೂ ದೂರ ಮಾಡ್ಕೊಬಿಟ್ರು. 

    "ದೂರಮಾಡ್ಕೊಬಿಟ್ರು" ಅಂತ ನಾನಿಲ್ಲಿ ಸಲೀಸಾಗಿ ಹೇಳಿಬಿಟ್ಟೆ. ಆದರೆ  ದೂರಮಾಡಿಕೊಳ್ಳಲು ಆಗದಂತಹ ಸಂಬಂಧಗಳವು. ಅವರು ಭೌತಿಕವಾಗಿ ದೂರವಿದ್ದರೇ ಹೊರತು, ಮಾನಸಿಕವಾಗಿ ದೂರವಾಗುವುದಕ್ಕೇ  ಅವರ್ಯಾರಿಗೂ ಸಾಧ್ಯವಿರಲಿಲ್ಲ ಎಂಬುದು ಬೆಳಕಿನಷ್ಟೇ ಸತ್ಯ.

    "ಲೋಹಿಯಾ ಅವರನ್ನ ಓದುತಿದ್ದರೆ ನನ್ನ ಅನಿಸಿಕೆಗಳನ್ನೇ ಹೇಳಿದ್ದಾರೆ ಅನಿಸುತ್ತದೆ" ಎಂದು ಪ್ರೊಫೆಸರ್ ಒಂದು ಕಡೆ ಬರೆದುಕೊಂಡಿದ್ದಾರೆ. ಈ ಮಾತನ್ನ ಏಕೆ ನೆನಪಿಸಿಕೊಂಡೆ ಎಂದರೆ -

     ನಂಜನಗೂಡು ತಾಲೂಕಿನ ತಾಂಡವಪುರದ ಅಧ್ಯಯನ ಶಿಬಿರದ ಪ್ರಶ್ನೋತ್ತರ ವೇಳೆಯಲ್ಲಿ ನನ್ನ ಗೆಳೆಯ ಜಿ.ಕೆ.ಕೃಷ್ಣ , "ಸರ್, ನೀವಿಲ್ಲಿ ಹೇಳಿದಂತಹ ಬಹಳಷ್ಟು ವಿಚಾರಗಳನ್ನ ಲೋಹಿಯಾ ಅವರೇ ಹೇಳಿದ್ದಾರೆ .." ಎನ್ನುತಿದ್ದಂತೆ, "ಕೂತ್ಕಳಿ ಕೂತ್ಕಳಿ. ಲೋಹಿಯಾ ನನಗಿಂತ ಮೊದಲೇ ಹುಟ್ಟಿದ್ರು ಹೇಳಿದ್ರು. ಅವರಿಗಿಂತ ಮೊದಲೇ ಹುಟ್ಟಿದ್ರೆ ನಾನು ಅದನ್ನೇ ಹೇಳುತಿದ್ದೆ" ಎಂದು ಹೇಳಿ, ಪ್ರೊಫೆಸರ್ ಕೃಷ್ಣನನ್ನ ಕೂರಿಸಿಬಿಟ್ರು.
  
      'ಸೌಜನ್ಯಕ್ಕಾದರೂ ಲೋಹಿಯಾ ಹೆಸರು ಹೇಳಬೇಕಿತ್ತು' ಎನ್ನುವುದು ಕೃಷ್ಣನ ಇಂಗಿತವಾಗಿತ್ತು.  'ಯಾರು ಹೇಳಿದರೇನು? ಅದನ್ನ ಜನರಿಗೆ  ಮುಟ್ಟಿಸುವ ರೀತಿ ಮುಖ್ಯ' ಎನ್ನುವುದು ಪ್ರೊಫೆಸರ್ ಅವರ ಧೋರಣೆಯಾಗಿತ್ತು. 

     ಪ್ರೊಫೆಸರ್ ತಮ್ಮ ವ್ಯಂಗ್ಯದ ಮಾತುಗಳಿಂದ ಕೆಲವರಿಗೆ  ಅವಹೇಳನ ಮಾಡಿದ್ದಾರೆ. ಆ ಮೂಲಕ ಅವರನ್ನ ಘಾಸಿ ಮಾಡಿ ಹೋಗಿದ್ದಾರೆ. ಅದಕ್ಕೆಲ್ಲ ಅವರ ಸ್ವಭಾವ ಗುಣವೇ ಕಾರಣ.  ಮನುಷ್ಯ ಎಂದ ಮೇಲೆ ಕೆಲವು ದೌರ್ಬಲ್ಯಗಳು ಇರುತ್ತವೆ. ಅದಕ್ಕೆ ಪ್ರೊಫೆಸರ್ ಕೂಡ ಹೊರತಾಗಿರಲಿಲ್ಲ ಎನ್ನುವುದಕ್ಕೆ ಇವು ಸಾಕ್ಷಿಯಾಗಿವೆ. 

     ಅವೇನೇ ಇರಲಿ.  ಪ್ರೊಫೆಸರ್ ಬಗ್ಗೆ ಜನರಿಗೆ ಹುಚ್ಚು ಪ್ರೀತಿ ಇತ್ತು.  ಹೇಳತೀರದ ಅದಮ್ಯವಾದ ಪ್ರೀತಿ ಅದು. ಅವರ ಸ್ವಭಾವವನ್ನೂ ಮೀರಿ ಪ್ರೀತಿಸಬೇಕಾದ ಗುಣಗಳು ಪ್ರೊಫೆಸರ್ ಅವರಲ್ಲಿ ಸಾಕಷ್ಟಿದ್ದೊ. ಅಂತಹ ಅಗಾಧವಾದ ಪ್ರೀತಿಗೆ ಅವರು ಪಾತ್ರರಾಗಿದ್ರು. ಒಬ್ಬರನ್ನ ಕಳಕೊಂಡರೆ,  ಅಂಥಾ ಹತ್ತು ಜನರನ್ನ ಹುಟ್ಟಿಹಾಕುವ ತಾಕತ್ತು ಇದ್ದದ್ದು ಅವರಿಗೆ ಮಾತ್ರ. ಪ್ರೊಫೆಸರ್ ಅಸಾಮಾನ್ಯರು ಎಂಬ ಅರಿವು ಈ ನಾಡಿನ ಬಹುತೇಕರಿಗೆ ಇತ್ತು. ಪ್ರೊಫೆಸರ್ ಸ್ವಭಾವದಿಂದ  ಬೇಸರಕ್ಕೆ ಒಳಗಾದವರೂ ಕೂಡ ಅವರನ್ನ ಇನ್ನಿಲ್ಲದಂತೆ ಪ್ರೀತಿಸುತಿದ್ರು. ಅದನ್ನೂ ನಾನು ನೋಡಿದ್ದೇನೆ.  ಈ ನಾಡಿಗೆ ವಿಶೇಷವಾದದ್ದನ್ನ ಕೊಡುವ ಜ್ಞಾನ ಪ್ರೊಫೆಸರ್ಗೆ ಅಪಾರವಾಗಿದೆ ಎನ್ನುವ ಮನೋಭಾವ, ಅರಿವು   ಅನೇಕರಲ್ಲಿ ಇತ್ತು.  'ಆ ಮನುಷ್ಯ ಹಟ ಬಿಡಬೇಕಾಗಿತ್ತು. ರಾಜಿ ಮನೋಭಾವ ತೋರಬೇಕಾಗಿತ್ತು' ಎನ್ನುವುದನ್ನ ಬಿಟ್ಟರೆ ಇನ್ಯಾವ ಆರೋಪವೂ ಅವರ ಬಗ್ಗೆ ಇರಲಿಲ್ಲ. 

    ಬೆಂಡೆತ್ತುವುದನ್ನೇ  ವೃತ್ತಿಮಾಡಿಕೊಂಡಿದ್ದಂತಹ ಪ್ರೊಫೆಸರ್, ತಗ್ಗೆತ್ತಿಕೊಳ್ಳುವುದನ್ನೂ  ಕೊಂಚ ರೂಢಿಸಿಕೊಂಡಿದ್ದರೆ ಚಂದವಿರುತಿತ್ತು ಎನ್ನುವುದು ನನ್ನ ಅನಿಸಿಕೆ.

     "ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರನ್ನು ಕುರಿತ ಒಂದು ಮಾತು ಮಾತ್ರ ಬಹಳ ಸತ್ಯ. ಅದೇನೆಂದರೆ ಅವರನ್ನ ಪ್ರೀತಿಸಲಿ ಅಥವಾ ದ್ವೇಷಿಸಲಿ, ಅವರನ್ನು ಯಾರು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದು ಅವರ ವ್ಯಕ್ತಿತ್ವದ ಒಂದು ಅಂಶ" - ಪ್ರೊಫೆಸರ್ ಅವರನ್ನ ಚೆನ್ನಾಗಿ ಬಲ್ಲಂತಹ ಪ್ರೊ.ರವಿವರ್ಮಕುಮಾರ್ ಹೇಳಿರುವ ಮಾತಿದು. ಈ ಮಾತು ಅಕ್ಷರಶಃ ಸತ್ಯ. ಪ್ರೊಫೆಸರ್ ಇದ್ದದ್ದೇ ಹಾಗೆ.

     ಪ್ರೊಫೆಸರ್ ಅವರ ಜ್ಞಾನ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಕ್ಷೇತ್ರದಲ್ಲೂ ಅವರ ಜ್ಞಾನ ಅಖಂಡವಾಗಿತ್ತು. ಈ ನಾಡು ಕಂಡಂತಹ ಅಪರೂಪದ ಜ್ಞಾನಿ ಅವರಾಗಿದ್ರು. ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲದೆ ಸಾಹಿತ್ಯ, ಸಂಸ್ಕೃತಿ, ಕೃಷಿ, ಕಾನೂನು ಎಲ್ಲದರಲ್ಲೂ ಖಚಿತ ಅಭಿಪ್ರಾಯಗಳನ್ನ ಅವರು ರೂಪಿಸಿಕೊಂಡಿದ್ರು. ಪ್ರತಿಯೊಂದನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಹಾಗೂ ಅವುಗಳಿಗೆ ವೈಚಾರಿಕತೆಯ ಸ್ಪರ್ಶ ಕೊಡುವ ಚಾಣಾಕ್ಷ ಅವರಾಗಿದ್ರು. ಸಮಾಜವಾದಿ, ವಿಚಾರವಾದಿ, ಜಾತಿ ವಿನಾಶ, ಪವಾಡ ಬಯಲು, ಮೂಢನಂಬಿಕೆಗಳ ವಿರುದ್ಧ, ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿ "ಕೆಂಟಕಿ ಫ್ರೈಡ್ ಚಿಕನ್" ವಿರುದ್ಧ, ದಲಿತ-ರೈತ-ಕನ್ನಡ  ಹೀಗೆ ಎಲ್ಲ ಚಳವಳಿಗಳನ್ನ ಬಹುತೇಕ ಅವರೇ ರೂಪಿಸಿದ್ರು. ಅವುಗಳ ಹಿಂದಿನ ಚಿಂತನೆ, ಪ್ರೇರಣೆ ಅವರೇ ಆಗಿದ್ರು. ವರ್ತಮಾನದ ರಾಜಕೀಯ ಹುನ್ನಾರಗಳನ್ನ ಬಿಡಿಸಿ ಹೇಳುತಿದ್ರು. ಬಹುರಾಷ್ಟ್ರೀಯ ಕಂಪನಿಗಳ ಇಬ್ಬಂದಿ ತನವನ್ನ ವಿಶ್ಲೇಷಿಸಿ ಅವರ ಕುಯುಕ್ತಿಗಳನ್ನ ಅನಾವರಣ ಮಾಡುತಿದ್ರು. ರೈತನ ಮೊದಲ ವೈರಿಗಳೆಂದರೆ ಬಹುರಾಷ್ಟ್ರೀಯ ಕಂಪನಿಗಳು. ಅವು ಭಾರತದ ಅರ್ಥ ವ್ಯವಸ್ಥೆಯನ್ನ ಹಾಳು ಮಾಡುತ್ತವೆ ಎಂಬುವುದನ್ನ ಅವರು ಒತ್ತಿ ಹೇಳುತಿದ್ರು. ನಗರಗಳನ್ನ ಓಲೈಸುವ, ಹಳ್ಳಿಗಳನ್ನ ಕಡೆಗಣಿಸುವ ಸರ್ಕಾರಗಳ ಇಬ್ಬಂದಿತನದ ಬಗ್ಗೆ ಪ್ರೊಫೆಸರ್ಗೆ ವಿಪರೀತವಾದ ಸಿಟ್ಟಿತ್ತು.  ಗ್ರಾಮೀಣ ವಿದ್ಯಾರ್ಥಿಗಳಿಗೆ ಗೌರವ ಅಂಕ ಕೊಡಿಸುವ ವಿಚಾರವಿರಬಹುದು, ಅದು ಗ್ಯಾಟ್ ವಿಚಾರವಿರಬಹುದು ಎಲ್ಲದರಲ್ಲೂ ಅವರು ಪರಿಣಿತರಾಗಿದ್ರು. ಜಾಗತೀಕರಣದ ಅಪಾಯಗಳ ಬಗ್ಗೆ ಅವರು ಸಾಕಷ್ಟೇ ತಿಳಿಸಿ ಹೋಗಿದ್ದಾರೆ.

    ಪ್ರೊಫೆಸರ್ ಕಾನೂನು ಪಂಡಿತರಾಗಿದ್ರು. ಕಾನೂನು ಕಾಲೇಜಿನ ಪ್ರಾಧ್ಯಾಪಕರೂ ಆಗಿದ್ರು. ಸಂವಿಧಾನ ಕುರಿತಂತೆ ಅವರ ತರಹ ಪಾಠಮಾಡುತಿದ್ದವರು ಇನ್ನೊಬ್ಬರು ಇರಲಿಲ್ಲ ಅಂತ ಕೇಳಿದ್ದೀನಿ. ಅವರು ಸಂವಿಧಾನ ತಜ್ಞರೂ ಆಗಿದ್ರು. 

    ವಿಧಾನ ಸಭೆಯಲ್ಲಿ ಮಾತನಾಡಲು ಪ್ರೊಫೆಸರ್ ನಿಂತರೆಂದರೆ, ಅಲ್ಲಿ ನಿಶಬ್ಧತೆ ಆವರಿಸುತಿತ್ತು. ಯಾವುದೇ ಆವೇಗವಿಲ್ಲದೆ ಎಲ್ಲಿ ಎಷ್ಟು ಹೇಳಬೇಕು? ಯಾವುದಕ್ಕೆ ಹೆಚ್ಚು ಪ್ರಿಪರೆನ್ಸ್ ಕೊಡಬೇಕು? ಇತ್ಯಾದಿಗಳು ಅವರಿಗೆ ಕರಗತವಾಗಿದ್ದೊ. ಅದನ್ನ ಸ್ಪಷ್ಟವಾಗಿ ಅಷ್ಟೇ ನಿರರ್ಗಳವಾಗಿ, ಎಲ್ಲರೂ ಕಿವಿಗೊಟ್ಟು ಕೇಳುವಂತೆ ಅವರು ವಿಚಾರಗಳನ್ನ  ಮಂಡಿಸುತಿದ್ರು. ಅವರ ಮಾತುಗಳನ್ನ ಕೆಲವರು ಟಿಪ್ಪಣಿ ಮಾಡಿಕೊಳ್ಳುತಿದ್ರು. ಇದ್ದರೆ ಪ್ರೊಫೆಸರರಂತ  ಶಾಸಕರಿರಬೇಕು ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ರು. ಅಂಥಾ ಛಾಪೊಂದನ್ನ ಅವರು ವಿಧಾನಸಭೆಯಲ್ಲಿ  ಒತ್ತಿ ಹೋಗಿದ್ದಾರೆ. 

    ನಾಡಿನ ಸಾಕ್ಷಿಪ್ರಜ್ಞೆ ಹಾಗೂ ವೈಚಾರಿಕ ಪ್ರಜ್ಞೆಯಾಗಿದ್ದ ಕುವೆಂಪುರವರು ಪೌರೋಹಿತ್ಯ ಶಾಹಿಯ ವಿರುದ್ದ ರೂಪಿಸಿಕೊಟ್ಟಂತಹ "ಮಂತ್ರ ಮಾಂಗಲ್ಯ" ದ ಅಡಿಯಲ್ಲಿ ಕೆ.ಪಿ.ಪೂರ್ಣಚಂದ್ರತೇಜಸ್ವಿಯವರು ಸರಳ ಮತ್ತು ಸ್ವಾಭಿಮಾನದ ಪ್ರತೀಕವಾಗಿ ರಾಜೇಶ್ವರಿಯವರೊಂದಿಗೆ  ಅಂತರ್ಜಾತಿ ವಿವಾಹವಾಗುತ್ತಾರೆ. ಅದೇ ಮಾರ್ಗದಲ್ಲೇ ಅದಕ್ಕಿಂತಲೂ ಅತ್ಯಂತ ಸರಳವಾಗಿ ಪ್ರತಿಮಾ ಅವರನ್ನ ಅಂತರ್ಜಾತಿ ಮದುವೆಯಾಗುವ ಮೂಲಕ ಪ್ರೊಫೆಸರ್ ಕೂಡ ನುಡಿದಂತೆ ನಡೆದು ನಾಡಿಗೆ ಅವರೂ ಮಾದರಿಯಾಗುತ್ತಾರೆ. 

      ನಾಡಿನಾದ್ಯಂತ ಲೆಕ್ಕವಿಲ್ಲದಷ್ಟು ಸರಳ ಮದುವೆಗಳನ್ನ ನೆರವೇರಿಸಿ, ರಾಜ್ಯ ರೈತ ಸಂಘ ದೊಡ್ಡ ಕ್ರಾಂತಿಯನ್ನೇ ಮಾಡುತ್ತದೆ. ಅದೊಂದು ಇತಿಹಾಸ. ಅದರ ಹಿಂದೆ ಪ್ರೊಫೆಸರ್ ಅವರ ಪ್ರೇರಣೆ ಇರುವುದನ್ನ ನಾಡಿನ ಯಾರೂ ಮರೆಯಬಾರದು.

     ಪ್ರೊಫೆಸರ್ ಸಣ್ಣ ಸಣ್ಣ ವಿಷಯಕ್ಕೂ ಹೊಸತನ ಕೊಡುತಿದ್ರು ಎನ್ನುವುದಕ್ಕೆ ರೈತ ಸಂಘದ ಬೋರ್ಡುಗಳೇ ಸಾಕ್ಷಿ. ರೈತ ಸಂಘದ ಬೋರ್ಡುಗಳನ್ನ ಹಾಕುವಾಗ ಒಂದು ಚಳವಳಿಯ ರೂಪದಲ್ಲಿ ಅದನ್ನ ಬಳಸುತ್ತಾರೆ. "ರೈತರ ಅಪ್ಪಣೆ ಇಲ್ಲದೆ, ಅಧಿಕಾರಿಗಳು ಊರೊಳಗೆ ಪ್ರವೇಶಿಸುವಂತಿಲ್ಲ. ಭ್ರಷ್ಟ ಅಧಿಕಾರಿಗಳಿಗೆ ಊರೊಳಗೆ ಪ್ರವೇಶವಿಲ್ಲ. …." ಈ ತರಹದ ಬೋರ್ಡುಗಳನ್ನ ಹಳ್ಳಿ ಹಳ್ಳಿಯಲ್ಲೂ ಹಾಕುವ ಮೂಲಕ ಪ್ರೊಫೆಸರ್ ಒಂದು ಚಳವಳಿಯನ್ನೇ ಆರಂಭಿಸಿ ಹೋಗಿದ್ದಾರೆ.

    ಪ್ರೊ ಎಂ.ಡಿ.ನಂಜುಂಡಸ್ವಾಮಿಯವರು ಕೃಷಿ ನೀತಿ ಹೇಗಿರಬೇಕೆಂದು ಅನೇಕ ರೀತಿಯಲ್ಲಿ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.  ಯಾವುದೇ ಸರ್ಕಾರ ಅದನ್ನ ಜಾರಿ ಮಾಡಿಲ್ಲ.  ಇದು ಈ ನಾಡಿನ ಅನ್ನದಾತರ ದುರಂತ. ಎಲ್ಲ ಸರ್ಕಾರಗಳು ಉಳ್ಳವರ ಕೈಗೊಂಬೆಗಳಾಗಿವೆ. ಪ್ರೊಫೆಸರ್ ಅವರ  ಕೃಷಿನೀತಿಯ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು. ಅಷ್ಟೊಂದು ಒಳನೋಟಗಳನ್ನ ಪ್ರೊಫೆಸರ್ ನಮಗೆ ಕೊಟ್ಟು ಹೋಗಿದ್ದಾರೆ. ಅದರಲ್ಲಿ ಒಂದನ್ನ ನನ್ನದೇ ರೀತಿಯಲ್ಲಿ ಹೇಳಲು ಈಗಾಗಲೆ ಒಂದು ಪ್ರಯತ್ನ ಮಾಡಿದ್ದೆ. ಅದು ಹೀಗಿದೆ:

   ಕಾರ್ಮಿಕರ ಸಂಬಳ, ವಿದ್ಯುತ್ ವೆಚ್ಚ , ಇನ್ನಿತರೆ ಎಲ್ಲಾ ವೆಚ್ಚಗಳು ಸೇರಿ ಒಂದು ಬ್ಲೇಡ್ ತಯಾರಿಸಲು ತಗಲುವ ವೆಚ್ಚ ಒಂದು ರೂ. ಎಂದುಕೊಳ್ಳಿ . ಅದನ್ನ ಮಾರ್ಕೆಟಿಂಗ್ ಮಾಡಲು ಜಾಹಿರಾತು ಇತ್ಯಾದಿ ವೆಚ್ಚಗಳನ್ನೆಲ್ಲಾ ಸೇರಿಸಿ, ಆ ಒಂದು ಬ್ಲೇಡಿಗೆ, ಬ್ಲೇಡ್ ತಯಾರಕ ಐದು ರೂ. ಬೆಲೆಯನ್ನ  ಫಿಕ್ಸ್ ಮಾಡುತ್ತಾನೆ.

   ಅದೇ ರೈತ ಒಂದು ಕ್ವಿಂಟಾಲ್ ಭತ್ತ ಬೆಳೆಯಲು ಎಲ್ಲಾ ವೆಚ್ಚಗಳೂ ಸೇರಿ ೧೦೦೦/- ರೂ. ಬೀಳುತ್ತೆ ಎಂದುಕೊಳ್ಳಿ. ಆಗ, ಮೇಲಿನ ನೀತಿಯಂತೆ  ೫೦೦೦/- ರೂ.ಗಳನ್ನ ರೈತನೇ ಫಿಕ್ಸ್ ಮಾಡಬೇಕು ತಾನೆ? ಆದರೆ ಅದು ರೈತನಿಗೆ ಸಾಧ್ಯವೇ ಇಲ್ಲ!

   ಯಾಕೇಂದ್ರೆ , ಇಂಡಸ್ಟ್ರಿಯಲ್ ಆ್ಯಕ್ಟ್ ಪ್ರಕಾರ ತಯಾರಕ ತಾನು ತಯಾರಿಸುವ ಪದಾರ್ಥಕ್ಕೆ ತಾನೇ ಬೆಲೆ ನಿರ್ಧರಿಸುವ ಅವಕಾಶವಿದೆ. ಆದರೆ ರೈತನಿಗೆ ಅಂತಹ  ಕೃಷಿ ನೀತಿ (Agriculture Act) ಇಲ್ಲ!

   ಈ ತಾರತಮ್ಯ ನೀತಿಯನ್ನ ಪ್ರೊ ಎಂ.ಡಿ.ಎನ್. ಇನ್ನಿಲ್ಲದಂತೆ ಬಿಡಿ ಬಿಡಿಯಾಗಿ ಬಿಡಿಸಿ ಹೋಗಿದ್ದಾರೆ.

   ಯಾವುದೋ ಒಂದು ಕಾರಣಕ್ಕಾಗಿ ಇಂಡಸ್ಟ್ರಿಯೊಂದು ನಷ್ಟ ಅನುಭವಿಸಿದರೆ sick Industry (ರೋಗಗ್ರಸ್ತ ಕೈಗಾರಿಕೆ) ಎಂಬ ಹಣೆಪಟ್ಟಿ ಅಂಟಿಸಿಕೊಂಡು, ಇಂಡಸ್ಟ್ರಿಯಲ್ ಆ್ಯಕ್ಟ್ ಪ್ರಕಾರವೇ ಸಾಲ ಮನ್ನಾ ಮಾಡಿಸಿ ಪರಿಹಾರ ಪಡೆಯುವ ಅವಕಾಶವೂ ಅವರಿಗಿದೆ. ದೊಡ್ಡ ದೊಡ್ಡ ಕುಳ (ವೈಟ್ ಎಲಿಫೆಂಟ್ಸ್)ಗಳೇ ಕೋಟ್ಯಾಂತರ ರೂ. ಮನ್ನಾ ಮಾಡಿಸಿಕೊಂಡಿರುವ ಸಾಕಷ್ಟು ಸಂಗತಿಗಳನ್ನ ನಂಜುಂಡಸ್ವಾಮಿ ಅವರು ಉದಾಹರಿಸಿ ಹೋಗಿದ್ದಾರೆ. ರೋಗ ಬಾಧೆ, ನೀರಿನ ಕೊರತೆ,  ಮಳೆಯ ಅಭಾವ ಇಂತಹ ಯಾವುದರಿಂದಲೇ ಬೆಳೆ ನಷ್ಟವಾದರೂ ರೈತನಿಗೆ ಸಾಲ ಮನ್ನಾ ಇಲ್ಲ. ಪರಿಹಾರವೂ ಇಲ್ಲ. ಪರಿಹಾರ ರೂಪದ ಕಣ್ಣೊರೆಸುವ ನಾಟಕ ಇದೆ. ಅಷ್ಟೇ.

   ಈ ಇಬ್ಬಂದಿ ಬಗೆಯನ್ನ ನಂಜುಂಡಸ್ವಾಮಿ ಅವರು  ಖಂಡಿಸುತ್ತಿದ್ದರು. ಕೈಗಾರಿಕಾ ನೀತಿಯಂತೆಯೇ ಕೃಷಿ ನೀತಿಯೂ ಜಾರಿಯಾಗಲಿ ಎಂಬ ಇಂಗಿತವನ್ನ ಇಟ್ಟುಕೊಂಡು ಪ್ರೊಫೆಸರ್ ಸರ್ಕಾರಗಳನ್ನ ಇನ್ನಿಲ್ಲದಂತೆ ಒತ್ತಾಯಿಸುತಿದ್ರು. ಆದರೆ ಯಾವುದೇ ಸರ್ಕಾರ ಇಲ್ಲೀತನಕ ಅದಕ್ಕೆ ಕ್ಯಾರೇ ಅಂದಿಲ್ಲ.

      ದೇಶಕ್ಕೆಲ್ಲಾ ಅನ್ನ ಕೊಡುವ ರೈತ ತನ್ನ ಬದುಕನ್ನ ನೇರ್ಪು ಮಾಡಿಕೊಳ್ಳಲು ಸಾವಿರಾರೂ ವರ್ಷಗಳಿಂದಲೂ ಹೆಣಗುತಿದ್ದಾನೆ. ಆದರೂ ಅದು ಸಾಧ್ಯವಾಗಿಲ್ಲ. ರೈತನ ಬೆನ್ನು ಮೂಳೆಯ ಮೇಲೆಯೇ ದೇಶ ನಿಂತಿದೆ. ಆದರೆ ರೈತನ ಬೆನ್ನುಮೂಳೆ ಕುಸಿಯುತ್ತಿದೆ. ಯಾರಿಗ್ಹೇಳೋಣ ಈ ನಮ್ಮ ನೋವು , ಸಂಟಕ! ಹೇಳಿದರೆ ಕೇಳೋರ್ಯಾರು?

    ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ . ಇದರರಿವಾಗಲ್ಲಯ್ಯ ತಂದೆ ಎಲ್ಲರಿಗೂ!

    - ಕವಿ M.s.Rudreswaraswamy ಯವರ ಪ್ರಶ್ನೆಯೊಂದಕ್ಕೆ ಒಮ್ಮೆ ಈ ಮೇಲಿನಂತೆ ಉತ್ತರಿಸಿದ್ದೆ. 

    ಕೃಷಿನೀತಿ ಕುರಿತಂತೆ ಪ್ರೊಫೆಸರ್ ಅವರಲ್ಲಿ ಅಪಾರವಾದ ಮಾಹಿತಿ ಇತ್ತು. ಅಪರಿಮಿತವಾದ ಜ್ಞಾನವಿತ್ತು. ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ ದೃಷ್ಟಿ ಇಟ್ಟುಕೊಂಡು, ಎಡಬಿಡಂಗಿ ಸರ್ಕಾರಗಳಿಗೆ ಗಿಣಿಗೇಳಿದಂತೆ ಕೂರಿಸಿ ಹೇಳಿದ್ದಾರೆ.  ಅವುಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. 

      ಪ್ರೊಫೆಸರ್ ಅವರ ಕೃಷಿ ನೀತಿಯನ್ನ ಅಳವಡಿಸುವ ಧೈರ್ಯವನ್ನ ಯಾವುದೇ ಒಂದು ಸರ್ಕಾರ ತೋರಿದ್ದರೂ, ದೇಶದ ಅನ್ನದಾತ ರೈತರಿಗೆ  ಈ ದುಸ್ಥಿತಿ ಇರುತ್ತಿರಲಿಲ್ಲ. ಎಲ್ಲ ಸರ್ಕಾರಗಳ ರೇಜಿಗೆಗಳಿಂದ ಹೇಸಿಹೋಗಿದ್ದ, ರೋಷಿಹೋಗಿದ್ದ ಪ್ರೊಫೆಸರ್ ಅವರು,  ರೈತರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಅದಕ್ಕಾಗಿ ಪ್ರಯತ್ನಿಸಿದರಾದರೂ, ಅವರ ಆ ಕನಸು ಅವರ ಜೊತೆಯಲ್ಲೇ ಮಣ್ಣಾಗಿ ಹೋಯಿತು.

     ಪ್ರೊಫೆಸರ್ ಅತ್ಯುತ್ತಮ ಬರಹಗಾರರಾಗಿದ್ರು. "ಮಾನವ"  "ನಮ್ಮ ನಾಡು" ಪತ್ರಿಕೆಗಳಿಗಲ್ಲದೆ, "ಅಗ್ನಿ" ಹಾಗೂ ಇತರ ಪತ್ರಿಕೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಅವರು ಬರೆಯುತಿದ್ರು.  ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜೊತೆ ಗೂಡಿ ಲೋಹಿಯಾ ಕುರಿತಂತೆ "ಕೆಂಪು ಪುಸ್ತಕ" ಎಂಬ ಕೃತಿಯನ್ನೂ ಹೊರತಂದಿದ್ದಾರೆ. ಪೆರಿಯಾರ್ ಅವರ ಕೃತಿಯೊಂದನ್ನ ಅನವಾದಿಸಿ, "ರಾಮಾಯಣದಲ್ಲಿ ಸ್ತ್ರೀ ಪಾತ್ರಗಳು" ಎನ್ನುವ ಪುಸ್ತಕವನ್ನ ಕನ್ನಡಕ್ಕೆ ಕೊಟ್ಟಂತಹ ಕೀರ್ತಿಯೂ ಅವರಿಗಿದೆ. ಇವಲ್ಲದೆ "ಮತ್ತೆ ಪರ್ಯಾಯ ಸರ್ಕಾರದೆಡೆಗೆ" ಎನ್ನುವ ಕಿರು ಹೊತ್ತಿಗೆಯನ್ನೂ ಪ್ರೊಫೆಸರ್  ಲೋಕಾರ್ಪಣೆ ಮಾಡಿದ್ದಾರೆ. 

    ಪ್ರೊಫೆಸರ್  ಭಾರತದಲ್ಲಷ್ಟೇ ಅಲ್ಲ. ವಿದೇಶಗಳಲ್ಲೂ ರೈತ ಹೋರಾಟದ ಮುನ್ನುಡಿ ಬರೆದು ಹೆಸರಾಗಿದ್ದಾರೆ. ಅದು ಒಂದು  ಇತಿಹಾಸವಾಗಿದೆ. ಅದು  ಹೆಗ್ಗಳಿಕೆಯ ವಿಚಾರವೂ ಆಗಿದೆ. ಪ್ರೊಫೆಸರ್  ಮಹಾನ್ ಮಹತ್ವಾಕಾಂಕ್ಷಿಯಾಗಿದ್ರು. ವಿಶ್ವ ಮಟ್ಟದಲ್ಲಿ ರೈತ ಒಕ್ಕೂಟ ಕಟ್ಟುವ ಕನಸು, ಯೋಜನೆ ಅವರಿಗಿತ್ತು. ಕಣ್ಣಿರದ ಆ ಜವರಾಯ ಅದಕ್ಕೆ ಅವಕಾಶ ಕೊಡದೆ ಅವರನ್ನ ಕರೆದುಕೊಂಡು ಬಿಟ್ಟ.

     ಈ ನಾಡು ಕಂಡಂತಹ ಅತ್ಯದ್ಭುತ ವಾಗ್ಮಿ  ಎಂದರೆ ಅದು ಪ್ರೊ.ಎಂ.ಡಿ.ನಂಜುಂಡಸ್ವಾಮಿ. ಅದರಲ್ಲಿ ನನಗೆ ಎರಡನೇ ಮಾತಿಲ್ಲ. ಈ ನಾಡಿನ ಜನಮನದಲ್ಲಿ ಅವರು ಪ್ರೊಫೆಸರ್ ಎಂದೇ ಪ್ರಖ್ಯಾತಿಯಾಗಿದ್ರು. He was professor to the core and master in many fields. ಯಾವುದೇ ವಿಷಯದಲ್ಲೂ ಅಥೆಂಟಿಕ್ಕಾಗಿ ಮಾತನಾಡುವ ಸಾರ್ವಭೌಮ ಅವರಾಗಿದ್ರು. ಅಂತಹ ಒಂದು ಅದ್ಭುತ ಕಲೆ ಅವರಿಗೆ ಕರಗತವಾಗಿತ್ತು. ಅವರು ಮಾತಿಗೆ ನಿಂತರೆಂದರೆ ಇಡೀ ಸಭೆ ಮಂತ್ರಮುಗ್ಧತೆಗೆ ಒಳಗಾಗುತಿತ್ತು. ನೀರವ ಮೌನ ಅಲ್ಲಿ ಆವರಿಸುತಿತ್ತು. ಅವರು  ಮಾತನಾಡುತಿದ್ದರೆ ಸಮಯ ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಅವರ ಮಾತಿನ ಸಂಮೋಹನಕ್ಕೆ ಸಭಿಕರು  ವಶೀಕರಣ  ಆಗಿಬಿಡುತಿದ್ರು. ಅವರ ದನಿಯಲ್ಲಿ ಯಾವುದೋ ಒಂದು ಸೆಳೆತವಿತ್ತು.  ಅದು ವಿಭಿನ್ನವಾಗಿತ್ತು. ಆಕರ್ಷಕಣೀಯವಾಗಿತ್ತು.  ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಿಬಿಡುವ  ಮಾಂತ್ರಿಕ ಅವರಾಗಿದ್ರು. ಅಂತಹ ಮತ್ತೊಬ್ಬ ಮಾಂತ್ರಿಕನನ್ನ ನಾನು ಈವರೆಗೂ ನೋಡಿಲ್ಲ. 

     ಪ್ರೊಫೆಸರ್ ಎಂತಲೇ ಖ್ಯಾತರಾಗಿದ್ದ ಎಂ.ಡಿ.ಎನ್. ರವರು  ನಾಡಿನ ವಿಚಾರವಾದಿಗಳಿಗೆ ಮೇಷ್ಟರಾಗಿದ್ರು. ಚಿಂತಕರ ಪಾಲಿನ ದಾರ್ಶನಿಕರಾಗಿದ್ರು. ನಾಡಿನ ಅನೇಕರಿಗೆ ಟಾಸ್ಕ ಮಾಸ್ಟರ್ ಅವರಾಗಿದ್ರು. ಅವರ ಮಾತುಗಳು ಸಿಡಿಗುಂಡಿನಂತಿದ್ದವು. ಅವರ ವ್ಯಂಗ್ಯ ಚಾಕಿಗಿಂತಲೂ ಹರಿತವಾಗಿತ್ತು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಮಾತನಾಡುವುದರಲ್ಲಿ ಅಥಾರಿಟೇಟಿವ್ ಪ್ರೊಫೆಸರ್ ಅವರಾಗಿದ್ರು.     

   ಕಳೆದ ವರ್ಷ (೨೦೧೯) ಮಾನ್ಯ ಟಿ.ಎನ್.ಸೀತಾರಾಮ್ ಅವರು ಬರೆದಂತಹ ಬರಹ ಇದು. ಅದು ಹೀಗಿದೆ ನೋಡಿ:
   
  "  ಅದು ಎಪ್ಪತ್ತರ ದಶಕ. ನಾನಾಗ ಪ್ರತಿದಿನ ಸಂಜೆ ಸ್ಕೂಟರ್ನಲ್ಲಿ ಗುರುಗಳಾದ ಲಂಕೇಶ್ ಮೇಷ್ಟ್ರ ಮನೆಗೆ ಹೋಗಿಬಿಡುತ್ತಿದ್ದೆ. ಅವರ ಮನೆ ಗಾಂಧಿ ಬಜ಼ಾರ್ನಲ್ಲಿತ್ತು.
ಒಂದು ಸಂಜೆ ಹೀಗೆ ಮೇಷ್ಟ್ರ ಮನೆಗೆ ಹೋಗುವ ವೇಳೆಗೆ, ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು ಬಂದು ಅಲ್ಲಿ ಕೂತಿದ್ರು. ನಾನು ಹೋದಾಗ ಪ್ರೊಫೆಸರ್: 

"ಎಲ್ಲಿಂದ ಬಂದ್ರಿ?"

"ಮಲ್ಲೇಶ್ವರದಿಂದ ಸಾರ್"

"ಎಷ್ಟು ಹೊತ್ತು ಹಿಡೀತು ಅಲ್ಲಿಂದ ಇಲ್ಲಿಗೆ ಬರೋಕೆ"

 "ಕಾಲು ಗಂಟೆ ಸಾರ್.ಯಾಕೆ?"

"ಇನ್ನು ಐದು ವರ್ಷ ಮುಗಿಯೊದ್ರೊಳಗೆ ಅರ್ಧ ಗಂಟೆ ಬೇಕಾಗುತ್ತೆ. ಅಲ್ಲಿಂದ ಇಲ್ಲಿಗೆ ಬರೋಕೆ. ನಾಳೆ ಒಂದು ಸ್ಟ್ರೈಕ್ ಆರ್ಗನೈಜ಼್ ಮಾಡೊಣ. ನಿಮ್ಮ ಫ಼್ರೆಂಡ್ಸ್ ಕರ್ಕೊಂಡು ಬನ್ನಿ"

"ಯಾಕ್ಸಾರ್?"

"ಇವತ್ತು ಸರ್ಕಾರದ ನಿರ್ಧಾರ ಪೇಪರ್ನಲ್ಲಿ ಓದಿಲ್ಲವಾ? ಈ ಅವಿವೇಕಿಗಳು ಮಾಡಿರೋ ಕೆಲಸ ನೋಡಿ.ಸಿ.ಐ.ಟಿ.ಬಿ. ನ ಬಿ.ಡಿ.ಎ. (ಬೆಂಗಳೂರು ಡೆವಲಪ್ಮೆಂಟ್ ಅಥಾರಿಟಿ) ಮಾಡ್ತಾರಂತೆ. ಬೆಂಗಳೂರು ಡೆವೆಲಪ್ ಆಗಿರೋದು ಸಾಲದಾ? ಕೆಂಪೇಗೌಡರ ಗೋಪುರದಿಂದ ಮೂರು  ಕಿಲೋಮೀಟರ್ ಆಚೆ  ಬೆಳೆದಿದೆ. ಇನ್ನೂ ಬೇಕಾ? ಇವರು ಬಡಾವಣೆಗಳನ್ನು ಮಾಡ್ತಾ ಕೂತರೆ ದೇಶದಲ್ಲಿರೊ ವ್ಯಾಪಾರಿಗಳೆಲ್ಲ ಇಲ್ಲೇ ಬಂದು ವಕ್ರಿಸ್ಕೋತಾರೆ. ಎಲ್ಲಾರಿಗೂ ಬೆಂಗಳೂರೇ ಬೇಕು. ಏರ್ ಕಂಡಿಶನ್ಡ್ ಸಿಟಿ ಅಲ್ವಾ? ಇಂಡಸ್ಟ್ರಿಯಲಿಸ್ಟ್ಸ್ ಬಂದು ಇಲ್ಲೇ ಕಾರ್ಖಾನೆ ತೆಗೀತಾರೆ. ಸರ್ಕಾರದೋರು ಅವರಿಗೆ ೧೦ - ೨೦ ಎಕರೆ ಜಮೀನು ಕೊಡ್ತಾರೆ. ಕನ್ನಡದೋರು ಆಮೇಲೆ ಸಿಕ್ಕೋದೆ ಇಲ್ಲ. ಎಲ್ಲರೂ ಕಾರುಗಳನ್ನ ತಗೊಂತಾರೆ. ಮನೆಗೊಂದು ಕಾರು ಬಂದ್ರೆ, ಟ್ರಾಫ಼ಿಕ್ ಜಾಮ್ಗಳು ಶುರು ಆಗುತ್ತೆ. ಆಗ, ನೀವು ಕಾಲು ಗಂಟೆಗೆ ಅಲ್ಲಿಂದ ಇಲ್ಲಿಗೆ ಬರೋಕೆ ಆಗುತ್ತಾ? ಈಗ ಇಲ್ಲಿ  ಸೈಟೊಂದಕ್ಕೆ ೨೦ ರಿಂದ ೩೦ ಸಾವಿರ ಇದೆ. ಐದು ವರ್ಷ ಹೋದ್ರೆ ಇಲ್ಲಿನ  ಒಂದು ಸೈಟಿಗೆ  ೩೦ ರಿಂದ ೪೦ ಲಕ್ಷ ಆಗುತ್ತೆ. ಸಾಮಾನ್ಯ ಜನ ಕೊಂಡುಕೊಳ್ಳೋಕೆ ಆಗುತ್ತಾ?
ಇಷ್ಟು ಸಾಲದು ಅಂತ ನಮ್ಮ ರಾಜ್ಯದಲ್ಲಿರೋ ಎಲ್ಲಾರೂ ಬೆಂಗಳೂರ್ನಲ್ಲಿ ಒಂದು ಮನೆ ಬೇಕು ಅಂತ ಇಲ್ಲೇ ಬಂದು ಸೆಟ್ಳ್ ಆಗ್ತಾರೆ. ಇಲ್ಲಿ ಬೀಳೋ ಕಸಾನ ಎತ್ತಿ ಹಾಕೋಕೆ ಜಾಗ ಇರಲ್ಲ. ಈ ಮೂರ್ಖರು ಮಾಡಿರೋದು ಸರಿನಾ? ಅದಕ್ಕೆ ಸ್ಟ್ರೈಕ್ ಮಾಡಬೇಕು"

" ಏನಂತ ಸ್ಟ್ರೈಕ್ ಮಾಡೋದು ಸಾರ್?"

"ನಮಗೆ ಬಿ.ಡಿ.ಎ. ಬೇಡ.  ಬಿ.ಎಂ.ಎ. ಶುರು ಮಾಡಿ ಅಂತ"

"ಬಿ.ಎಂ.ಎ. !?"

"ಬ್ಯಾಂಗಲೋರ್ ಮೈಂಟೆನೆನ್ಸ್ ಅಥಾರಿಟಿ. ನಮಗೆ ಡೆವಲಪ್ಮೆಂಟ್ ಬೇಡ. ಮೈಂಟೆನೆನ್ಸ್ ಬೇಕು ಅಷ್ಟೇ. ಬೆಂಗಳೂರು ಇನ್ನು ಬೆಳೀಬಾರದು ಅಂತ ಸ್ಟ್ರೈಕ್ ಮಾಡಬೇಕು"

   ಎರಡನೇ ದಿನ ಕಬ್ಬನ್ ಪಾರ್ಕ್ನಲ್ಲಿ ಕೂತು ಸ್ಟ್ರೈಕೂ ಮಾಡಿದಿವಿ. ಘಾಳಪ್ಪ ಅನ್ನೋ ಮಂತ್ರಿಗೆ ಘೇರಾವ್ ಕೂಡ ಮಾಡಿದಿವಿ. ಪತ್ರಿಕಾ ಗೋಷ್ಠಿನೂ ಮಾಡಿದಿವಿ. ಸರ್ಕಾರ ಕ್ಯಾರೇ ಅನ್ನಲಿಲ್ಲ. ಅವೆಲ್ಲಾ ನಂಜುಂಡಸ್ವಾಮಿಯವರ ಭ್ರಮೆ ಅಂದುಬಿಟ್ಟರು.

   ಮೊನ್ನೆ ಶನಿವಾರ ಸಂಜೆ ನಾನು ಮಲ್ಲೇಶ್ವರದಿಂದ ಗಾಂಧಿ ಬಜ಼ಾರ್ಗೆ ಬರೋಕೆ ಸರಿಯಾಗಿ ಒಂದೂವರೆ ಗಂಟೆ ಕಾಲ ಹಿಡಿಯಿತು. ಯಾರೋ ಒಬ್ರು "ನಮ್ಮ ಏರಿಯಾದಲ್ಲಿ ಒಂದು ಸೈಟ್ ಈಗ ಮೂರೂ ಕಾಲು ಕೋಟಿ" ಎಂದರು! ಎಲ್ಲೆಲ್ಲೂ ಕಸದ ರಾಶಿ ಬಿದ್ದಿತ್ತು!

   ಪ್ರೊಫೆಸರ್  ನಂಜುಂಡಸ್ವಾಮಿಯವರಿಗೆ ಎಂಥಾ ವಿಷನ್ ಇತ್ತು ಎನ್ನುವುದಕ್ಕೆ ಇಷ್ಟು ಸಾಕಲ್ವಾ?  ಅವರು ಮುಖ್ಯಮಂತ್ರಿಯಾಗಬೇಕಿತ್ತು " ಎನ್ನುತ್ತಾರೆ ಟಿ.ಎನ್. ಸೀತಾರಾಮ್.
                ***          ***       ****
     - ಈ ಮೇಲಿನ ಮಾತುಕತೆ ನಡೆದು ಸುಮಾರು ನಲತ್ತೈದು ವರ್ಷವಾಗಿರಬಹುದು. ಪ್ರೊಫೆಸರ್ ಅಂದು ಹೇಳಿದ  ಆ ಮಾತುಗಳು ಇಂದು  ನಿಜವಾಗಿರುವುದು ನಿಜಕ್ಕೂ ಸೋಜಿಗ. ಪ್ರೊಫೆಸರ್ ದೂರದೃಷ್ಟಿಯ ದಾರ್ಶನಿಕರಾಗಿದ್ರು ಎನ್ನುವುದಕ್ಕೆ ಇದಕ್ಕಿಂತ ಮತ್ಯಾವ ಸಾಕ್ಷಿ ಬೇಕು. ಪ್ರೀತಿಯ ಟಿ.ಎನ್. ಸೀತಾರಾಮ್ ಅವರ ಮಾತಿನಲ್ಲೇ ಹೇಳುವುದಾದರೆ: ಪ್ರೊಫೆಸರ್ ಕುಶಾಗ್ರಮತಿಯಾಗಿದ್ರು ಎನ್ನುವುದಕ್ಕೆ ಇಷ್ಟು ಸಾಕು.

    ಪ್ರೊಫೆಸರ್ ಬಗ್ಗೆ ಇನ್ನೂ ಖಚಿತವಾಗಿ ಹೇಳಬೇಕೂಂದ್ರೆ ಲೋಹಿಯಾ ಅವರ ಚಿಂತನೆಯ ಮುಂದುವರಿದ ಭಾಗ ಅವರಾಗಿದ್ರು. 

     ನಾಡಿನ ವೈಚಾರಿಕ ಪ್ರಜ್ಞೆಯಾಗಿ, ಮಹಾನ್ ವಿಚಾರವಾದಿಯಾಗಿ, ದೂರದೃಷ್ಟಿಯ  ಚಿಂತಕರಾಗಿ, ತತ್ವಜ್ಞಾನಿಯಾಗಿ, ಪರಿಸರ ಪ್ರೇಮಿಯಾಗಿ, ನಾಡಿನ ಜನರ ನಾಡಿ ಮಿಡಿತ ಬಲ್ಲಂತ ಸಾಮಾಜಿಕ ವೈದ್ಯರಾಗಿ, ನಾಳೆಯನ್ನ ರೂಪಿಸುವ ಭವಿಷ್ಯದರಿವಿನ ಗಾರುಡಿಗನಾಗಿ, ಕಾನೂನು ತಜ್ಞರಾಗಿ, ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ಪ್ರೊಫೆಸರ್ ಅವರಿಗೆ ದೇವರೆಂದರೆ ಅಸಡ್ಡೆಯಿತ್ತು. ಕೋಮುವಾದಿಗಳಿಗೆ ದುಸ್ವಪ್ನವಾಗಿದ್ರು. ಪ್ರತಿಗಾಮಿಗಳಿಗೆ ಸಿಂಹಸ್ವಪ್ನವಾಗಿದ್ರು. ನಿದ್ರಿಸುವ ಸರ್ಕಾರಗಳನ್ನ  ಚುಚ್ಚಿ ಎಚ್ಚರಿಸುವ ಮೊನಚಾದ ಭರ್ಜಿ ಅವರಾಗಿದ್ರು. ಭ್ರಷ್ಟಾಚಾರಿಗಳಿಗೆ ಗುಂಡು ಸಿಡಿಸುವ ಕೋವಿಯಾಗಿದ್ರು. ಪುಂಡು-ಪೋಕರಿಗಳನ್ನ ತಿವಿದು ಎಚ್ಚರಿಸುವ ಹಾಗೂ ಮೂಢರನ್ನ ತಿದ್ದುವ ಲೇಖನಿಯೂ ಆಗಿದ್ರು. ಸಮಾಜದ ಓರೆ-ಕೋರೆಗಳನ್ನ ಕತ್ತರಿಸುವ ಬಂಡಾಯದ ಖಡ್ಗ ಅವರಾಗಿದ್ರು. ರೈತರ ದನಿಯಾಗಿದ್ರು. ರೈತರ ಆಶಾಕಿರಣವಾಗಿದ್ರು. ರೈತರ ಆತ್ಮಗೌರವ ಅವರಾಗಿದ್ರು. ಅವರ ಬದುಕೇ ಒಂದು ಹೋರಾಟವಾಗಿತ್ತು. ಅದು ದುಡಿಯುವ ಜನರ ಬದುಕು ಕಟ್ಟುವುದಕ್ಕೆ ಮೀಸಲಾಗಿತ್ತು. ಅಂತಹ ಮಹಾನ್ ಚೇತನ ಇಂದು ನಮ್ಮ ನಡುವೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. 

    ಅವರ ಮಕ್ಕಳಾದ ಚುಕ್ಕಿ ನಂಜುಂಡಸ್ವಾಮಿ ಹಾಗೂ ಪಚ್ಚೆ ನಂಜುಂಡಸ್ವಾಮಿ ರೈತ ಹೋರಾಟದಲ್ಲಿ ಈಗ ಸಕ್ರಿಯರಾಗಿರುವುದು ಖುಷಿಯ ವಿಚಾರ. ಅವರೀರ್ವರು ಪ್ರೊಫೆಸರ್ ಅವರ ಮುಂದುವರಿದ ಭಾಗವಾಗಿ ಅರಳಲಿ ಹಾಗೂ ಪ್ರೊಫೆಸರ್ ನಮ್ಮ ನಡುವೆಯೇ ಇದ್ದಾರೆ ಎನ್ನುವುದಕ್ಕೂ ಅವರು ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆ.

                                                       ಡಿ.ಹೊಸಳ್ಳಿಶಿವು

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website