ಮರೆಯಲಾಗದ ಚೇತನ ಇತಿಹಾಸ ತಜ್ಞ ಹಯವದನ ರಾವ್

"ಇತಿಹಾಸದ ವಿಸ್ಮಯ" ವಿಶೇಷ 
"ಇತಿಹಾಸಕಾರರು ಮರೆಯಬಾರದ ಒಬ್ಬರು ಅಮೂಲ್ಯ ವ್ಯಕ್ತಿ ಈ ಮಹಾನ್ ಚೇತನ . ಆದ್ರೆ ಇವರ ಪರಿಚಯವೇ ಇಲ್ಲ ನಮಗೆ......! " 

 ನಿಜವಾಗಿಯೂ ಇವರು ದೇಶದ ಇತಿಹಾಸಕ್ಕೆ ಕೊಟ್ಟ ಕಾಣಿಕೆ ಬಹಳ ದೊಡ್ಡದು, ಮೈಸೂರಿನ ಸಾಮ್ರಾಜ್ಯದ ಇತಿಹಾಸ ತಿಳಿಯಲು ಹಲವಾರು ಜನ ಇತಿಹಾಸಕಾರರು ಇವರ ದಾಖಲೆಗಳನ್ನು ಓದಲೇಬೇಕು, ಇವರ ಬಗ್ಗೆ ಹೆಸರನ್ನು ಬಹಳಷ್ಟು ಸಾರಿ ಕೇಳಿದ್ದೇವೆ ಅಥವಾ ಓದಿದ್ದೇವೆ ಆದರೆ ಈ ಮಹಾನ್ ಚೇತನದ ಬಗ್ಗೆ ಹೆಚ್ಚು ತಿಳಿಯಲು ಎಂದಿಗೂ ಪ್ರಯತ್ನ ಮಾಡಲೇ ಇಲ್ಲ, ನಮ್ಮ ಇತಿಹಾಸ ಪ್ರಿಯ ಮನಸುಗಳು. ಈ ಮಹಾನ್ ಚೇತನವೇ ಕಾಂಜೀವರಂ "ಹಯವದನ ರಾವ್ / ಸಿ. ಹಯವದನ ರಾವ್ ಅಥವಾ ರಾವ್ ಬಹದ್ದೂರ್ ಕಾಂಜೀವರಂ ಹಯವದನ ರಾವ್" ಹೌದು ಮೊದಲು "ಶ್ರೀಯುತ ಬೆಂಜಮಿನ್ ರೈಸ್" ರವರು ಮೈಸೂರಿನ ಇತಿಹಾಸಕ್ಕೆ ಶಾಸನ ಗಳ ಅಧ್ಯಯನ ಮಾಡಿ ಇತಿಹಾಸದ ಗೆಜೆತೀರ್ ಕೊಡುಗೆ ಕೊಟ್ಟರೆ ಈ ಮಹಾನ್ ಚೇತನ "ಬೆಂಜಮಿನ್ ಲೆವಿಸ್ ರೈಸ್" ಅವರ ಇತಿಹಾಸ ಅಧ್ಯಯನದ ಮುಂದುವರೆದ ಭಾಗವಾಗಿ ಮತ್ತಷ್ಟು ಅನ್ವೇಷಣೆ ನಡೆಸಿ , ಇತಿಹಾಸವನ್ನು ಮತ್ತಷ್ಟು ಆಳವಾಗಿ ತಿಳಿದು ಕನ್ನಡ ತಾಯಿಯ ಚರಣಕ್ಕೆ ಇತಿಹಾಸದ ಪುಷ್ಪಮಾಲಿಕೆಯ ಅರ್ಪಣೆ ಮಾಡುತ್ತಾರೆ. ಬನ್ನಿ ಇವರ ಬಗ್ಗೆ ತಿಳಿಯೋಣ. 

ಹಯವದನ ರಾವ್ ಇಂದಿನ ತಮಿಳುನಾಡು ರಾಜ್ಯದ ಹೊಸೂರಿನಲ್ಲಿ 1865 ನೆ ಇಸವಿ ಜುಲೈ 10, ರಂದು ಕನ್ನಡ ಮಾತನಾಡುವ ದೇಶಸ್ಥ ಮಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ನಂತರ ಬಾಲ್ಯವನ್ನು ಹೊಸೂರಿನಲ್ಲಿ ಕಳೆಯುತ್ತಾರೆ. ನಂತರ ಅಂದಿನ ಮದ್ರಾಸ್ ನಲ್ಲಿ ಇತಿಹಾಸದ ವಿಚಾರದಲ್ಲಿ ಪದವಿ ಪಡೆದು ನಂತರ ಕಾನೂನು ಹಾಗು ಹಣಕಾಸು ವಿಚಾರಗಳಲ್ಲಿ ಪದವಿಯನ್ನೂ ಸಹ ಗಳಿಸಿ ಮದ್ರಾಸ್ ಸರ್ಕಾರಿ ಒಡೆತನದ ಐತಿಹಾಸಿಕ ವಸ್ತು ಸಂಗ್ರಹಾಲಯದಲ್ಲಿ ಕ್ಯೂರೇಟರ್ ಹುದ್ದೆಯನ್ನು ಅಲಂಕರಿಸುತ್ತಾರೆ. ಆ ಹುದ್ದೆಯಲ್ಲಿರಬೇಕಾದ್ರೆ "The Indian Biographical Dictionary". ಯನ್ನು ಸಂಪಾದಿಸಿ ಹೊರತರುತ್ತಾರೆ. ಹಯವದನ ರಾವ್ ಬಹುಭಾಷಾ ಪ್ರವೀಣರು ಕನ್ನಡ, ತಮಿಳು, ಇಂಗ್ಲಿಷ್, ತೆಲಗು, ಮರಾಠಿ, ಸಂಸ್ಕೃತ , ಫ್ರೆಂಚ್, ಲ್ಯಾಟಿನ್, ಜರ್ಮನ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು.  

ಮದ್ರಾಸ್ ಸರ್ಕಾರಿ ಒಡೆತನದ ಐತಿಹಾಸಿಕ ವಸ್ತು ಸಂಗ್ರಹಾಲಯದಲ್ಲಿ ಕ್ಯೂರೇಟರ್ ಹುದ್ದೆಯಿಂದ ನಿವೃತ್ತಿಯಾದ ನಂತರ 1924 ರಲ್ಲಿ ಮೈಸೂರು ಸಂಸ್ಥಾನದ ಪ್ರಭುತ್ವದ ಸಂಪರ್ಕಕ್ಕೆ ಬಂದು ಬೆಂಜಮಿನ್ ಲೆವಿಸ್ ರೈಸ್ ಬರೆದಿದ್ದ ಮೈಸೂರು ಗೆಜೆತೀರ್ ಪರಿಸ್ಕರಣೆ ಸಮಿತಿಯ ಮುಖ್ಯಸ್ಥರಾಗಿ ನಿಯೋಜನೆ ಗೊಳ್ಳುತ್ತಾರೆ. ಸತತವಾಗಿ ಮೂರುವರ್ಷ ಮೈಸೂರು ಸಂಸ್ಥಾನ ಅಲೆದಾಡಿ ಇತಿಹಾಸದ ಮಾಹಿತಿ ಜೊತೆಗೆ ಆಡಳಿತಕ್ಕೆ ಅಗತ್ಯವಾದ ಎಲ್ಲಾ ಬಗೆಯ ಮಾಹಿತಿ ಸಂಗ್ರಹಿಸಿ ಮೈಸೂರು ಗೆಜೆತೀರ್ ಪರಿಷ್ಕೃತ ಏಳು ಸಂಪುಟಗಳನ್ನು 1927 ರಲ್ಲಿ ಹೊರತರುತ್ತಾರೆ. ಅದಾದ ಸ್ವಲ್ಪ ಸಮಯಕ್ಕೆ ತಮ್ಮ ಬಳಿಯಲ್ಲಿ ಸಂಗ್ರಹ ಮಾಡಿದ್ದ ಮಾಹಿತಿಗಳ ಆಧಾರದ ಮೇಲೆ ಮೈಸೂರು ಇತಿಹಾಸದ ಬಗ್ಗೆ ಮೂರು ಸಂಪುಟ ಹೊರತಂದು 1399-1799 ರವರೆಗಿನ ಮೈಸೂರು ವೊಡೆಯರ್ ವಂಶದ ಆಳ್ವಿಕೆಯ ಸಮಗ್ರ ಇತಿಹಾಸವನ್ನು ಅದ್ಭುತವಾಗಿ ಮೈಸೂರು ಸಂಸ್ಥಾನದ ಜನರಿಗೆ ಕಾಣಿಕೆಯಾಗಿ ನೀಡುತ್ತಾರೆ, ಅಂದು ಮಾಡಿದ ಈ ಕೆಲಸ ಇಂದಿಗೂ ಮರೆಯಾಗದೆ ದೇಶದ ಇತಿಹಾಸಕಾರರ ಮಾಹಿತಿ ಖಣಜವಾಗಿ ಅಮರವಾಗಿ ನಿಂತಿದೆ. "Journal of Oriental Research " ಸಂಪಾದಕರಾಗಿ ಕರ್ತವ್ಯ ನಿರ್ವಹಣೆ ಮಾಡಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಾರೆ . ಇದೆ ಸಮಯದಲ್ಲಿ 1946 ಜನವರಿ 27 ರಂದು ಬೆಂಗಳೂರಿನಲ್ಲಿ ತಮ್ಮ ಜೀವನದ ಪಯಣವನ್ನು ಮುಗಿಸಿ , ಕನ್ನಡ ಇತಿಹಾಸದ ಪುಟಗಳಲ್ಲಿ ಮರೆಯಾಗುತ್ತಾರೆ.ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಯಾವುದಾದರೂ ಅರ್ಥ ಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತಿಹಾಸ ಪ್ರಿಯರು ಶ್ರೀಯುತರಾದ ಬೆಂಜಮಿನ್ ಲೆವಿಸ್ ರೈಸ್ ಹಾಗು ಹಯವದನ ರಾವ್ ಅವರುಗಳನ್ನು ಸ್ಮರಿಸುವ ಕಾರ್ಯ ಮಾಡಬೇಕಿದೆ. 

ಚಿತ್ರ ಕೃಪೆ :- ಅಂತರ್ಜಾಲ ಗೂಗಲ್ ತಾಣ

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website