ಎಚ್.ಡಿ.ಕೋಟೆ ತಾಲೂಕಿನಲ್ಲಿ ಡ್ಯಾಂ ಧಮಾಕ,ಅನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ

ಒಂದೇ ತಾಲೂಕಿನಲ್ಲಿ ನಾಲ್ಕು ಜಲಾಶಯಗಳು. ಈ ರೀತಿ ಇರುವುದು ಅಪರೂಪ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕು ಈ ರೀತಿಯ ವಿಶೇಷತೆಗೆ ಸಾಕ್ಷಿಯಾಗಿದೆ. ಈ ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳು ಬರುತ್ತವೆ.

ಕಾವೇರಿ ಕಣಿವೆಯಲ್ಲಿ ಬರುವ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಕಾವೇರಿ ವಿವಾದದಿಂದಾಗಿ ತಮಿಳುನಾಡು ನೀರಿಗೆ ಕ್ಯಾತೆ ತೆಗೆದಾಗಲೆಲ್ಲಾ ಹೆಚ್ಚು ನೀರು ಪೂರೈಸುವುದೇ ಕಬಿನಿ ಜಲಾಶಯದಿಂದ. ಹೀಗಾಗಿ, ಕಬಿನಿ ಜಲಾಶಯದ ಬಗ್ಗೆ ಮಾಹಿತಿ ಇದ್ದರೂ ಕಬಿನಿಯ ಸೆರಗಿನಲ್ಲೇ ಇರುವ ನುಗು, ತಾರಕ ಹಾಗೂ ಹೆಬ್ಬಳ ಜಲಾಶಯಗಳ ಬಗ್ಗೆ ಕೇಳಿರುವವರು ಕಡಿಮೆ.

ಬೀಚನಹಳ್ಳಿ ಬಳಿ ಇರುವ ಕಬಿನಿಗಂತೂ ವರ್ಷಕ್ಕೆರಡು ಬಾರಿ ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಈ ಬಾರಿ ಕಬಿನಿ ಜೊತೆಗೆ ಬೀರ್ವಾಳ್ ಬಳಿ ಇರುವ ನುಗು ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿರುವುದು ವಿಶೇಷ. ಏಕೆಂದರೆ, ಕಬಿನಿ ಹೊರತುಪಡಿಸಿದರೆ ಉಳಿದ ಜಲಾಶಯಗಳು ಸಾಮಾನ್ಯವಾಗಿ ಭರ್ತಿಯಾಗುವುದಿಲ್ಲ. ಆದರೆ, ಈ ಬಾರಿ ಕೇರಳದ ವಯನಾಡು ಹಾಗೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ಜಲಾಶಯಗಳು ಭರ್ತಿಯಾಗಿವೆ. ಮೂರು ಜಲಾಶಯಗಳಿಂದಲೂ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ತಾರಕ ನೀರು ಹೈರಿಗೆ- ಮಟಕೆರೆ ಸಮೀಪ ಕಪಿಲಾ ನದಿಗೆ, ನುಗು ಜಲಾಶಯದಿಂದ ನದಿಗೆ ಹರಿಸಲಾದ ನೀರು ಹೊಮ್ಮರಗಳ್ಳಿ ಸಮೀಪ ಸಂಗಮ ಬಳಿ ಕಪಿಲಾ ನದಿಗೆ ಸೇರುತ್ತವೆ. ಹೀಗಾಗಿ, ಮೂರು ಜಲಾಶಯಗಳ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ.

ಅಪರೂಪಕ್ಕೆ ಭರ್ತಿಯಾಗಿರುವ ಮೂರು ಜಲಾಶಯಗಳನ್ನು ನೋಡಲು ಒಂದು ದಿನದ ಪ್ರವಾಸ ಹಾಕಿಕೊಳ್ಳಬಹುದು. ಈಗಾಗಲೇ ವಾರಾಂತ್ಯಗಳಲ್ಲಿ ಸಹಸ್ರಾರು ಜನರು ಭೇಟಿ ನೀಡುತ್ತಿದ್ದಾರೆ. ಮೂರು ಜಲಾಶಯಗಳನ್ನು ಒಟ್ಟಿಗೆ ನೋಡಿ ಬರಲು ಸ್ವಂತ ವಾಹನಗಳಲ್ಲಿ ಹೋಗುವುದು ಸೂಕ್ತ. ಕಣ್ಣು ಹಾಯಿಸಿದಷ್ಟು ದೂರ ಜಲರಾಶಿಯೇ ಕಾಣುವ ಕಬಿನಿ ಹಿನ್ನೀರಿನ ನೋಟವಂತೂ ನಯನ ಮನೋಹರ.

ಎಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ಕು ಜಲಾಶಯಗಳಿದ್ದರೂ ಇವು ಒಂದು ರೀತಿಯಲ್ಲಿ ಊರಿಗೆ ಮಾರಿ, ಪರರಿಗೆ ಉಪಕಾರಿ. ಏಕೆಂದರೆ ತಾಲೂಕಿಗೆ ಇವುಗಳಿಂದ ಹೆಚ್ಚು ಪ್ರಯೋಜನವಿಲ್ಲ. ಅಕ್ಕಪಕ್ಕದ ತಾಲೂಕುಗಳು, ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಗೆ ಅನುಕೂಲ. ಕಬಿನಿ ಹೊರತುಪಡಿಸಿ, ಉಳಿದ ಮೂರು ಯಾವ ವರ್ಷ ತುಂಬುತ್ತವೆ ಎಂಬುದನ್ನು ಕಾಯುವ ಸ್ಥಿತಿ. ಡಾ. ಡಿ.ಎಂ. ನಂಜುಂಡಪ್ಪ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿಯ ಪ್ರಕಾರ ಎಚ್.ಡಿ.ಕೋಟೆ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಆದರೆ, ವನಸಿರಿಯ ನಾಡು. ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಇದೆ. ಒಂದು ಕಾಲಕ್ಕೆ ಖೆಡ್ಡಾಗೆ ಫೇಮಸ್ ಆಗಿದ್ದ ಕಾಕನಕೋಟೆಯೂ ಇದೆ. ಕಬಿನಿ ಹಿನ್ನೀರಿನ ಪ್ರದೇಶವಂತೂ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಆನೆಗಳು ಸೇರಿದಂತೆ ನಾನಾ ಬಗೆಯ ವನ್ಯಮೃಗಗಳ ಬೀಡು.
- ಅಂಶಿ ಪ್ರಸನ್ನಕುಮಾರ್,


ಮದವೂರ ವಿನಾಯಕ


'ದೇವರ ಸ್ವಂತ ನಾಡು' ಎಂದೇ ಕರೆಯುವ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿನ ಕಾಸರಗೋಡಿನಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯವೇ ಅನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ. ದೇವಸ್ಥಾನಕ್ಕೆ ಈ ಹೆಸರಿದ್ದರೂ ಸುತ್ತಮುತ್ತಲಿನ ಊರಲ್ಲಿ ಇದು ಮಧೂರು ಎಂದೇ ಪ್ರಸಿದ್ಧಿ.

ಸುಮಾರು 1,200 ರಿಂದ 1,500  ವರ್ಷಗಳ ಹಳೆಯ ಮಧೂರು, ಕುಂಬ್ಳೆ ಸೀಮೆಯ 4 ಸೀಮಾ ದೇವಸ್ಥಾನಗಳಲ್ಲಿ (ಅಡೂರು, ಮಧೂರು, ಕಾವು, ಕಣ್ಯಾರ) ಒಂದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಜಪೃಷ್ಠಾಕಾರದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಗಣಪನ ಗುಡಿ ದಕ್ಷಿಣಾಭಿಮುಖವಾಗಿರುವುದು, ಜೊತೆಗೆ ಶಿವನ ಗುಡಿ ಪೂರ್ವಾಭಿಮುಖವಾಗಿದೆ. ಇಲ್ಲಿನ ಗಣಪತಿ ಮತ್ತು ಶಿವನ ಲಿಂಗಗಳು ಉದ್ಭವ ಲಿಂಗಗಳೆಂದೇ ಪ್ರತೀತಿ. ಮುಖ್ಯವಾಗಿ ಇಲ್ಲಿ ಗಣಪನಿಗೆ ಅಭಿಷೇಕ ಇಲ್ಲ. ಶಿವನಿಗೆ ಮಾತ್ರ ಅಭಿಷೇಕ, ರುದ್ರಾಭಿಷೇಕ ನಡೆಯುತ್ತದೆ. ಉದಯಾಸ್ತಮಾನ ಸೇವೆ, ಮೂಡಪ್ಪ ಸೇವೆ, ಗಣಹೋಮಗಳು ಇಲ್ಲಿನ ವಿಶೇಷ ಪೂಜೆಗಳು. ಜೊತೆಗೆ ಸಹಸ್ರ ಅಪ್ಪ ಸೇವೆಯನ್ನೂ ಮಾಡಿಸುತ್ತಾರೆ. ಎಲ್ಲದಕ್ಕಿಂತ ದೊಡ್ಡ ಸೇವೆಯೆಂದರೆ ಮೂಡಪ್ಪ ಸೇವೆ. ಈ ಸೇವೆ ಮಾಡಿಸಿದರೆ ಮಕ್ಕಳಾಗದ ದಂಪತಿಗಳಿಗೆ ಮಕ್ಕಳಾಗುತ್ತವೆ ಎಂಬುದು ನಂಬಿಕೆ.

ಮಳೆ ಬಾರದ ಸಂದರ್ಭದಲ್ಲಿ ಊರಿನ ಜನರೆಲ್ಲಾ ಒಟ್ಟಾಗಿ ಸೇರಿ ವಿಶೇಷವಾದ ಬಲಿವಾಡು ಕೂಟ ಏರ್ಪಾಡು ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ  ಪ್ರಸಾದ ಭೋಜನವನ್ನು ಮಾಡುವುದು ವಾಡಿಕೆ.


ಸ್ಥಳ ಮಹಾತ್ಮೆ

ಈ ದೇವಸ್ಥಾನದ ಹಿಂದೆ ಇಂಥದ್ದೊಂದು ಕತೆಯಿದೆ. ಮದರು ಎಂಬ ಪರಿಶಿಷ್ಟ ಜಾತಿಯ, ಮೊಗೆರ ಸಮುದಾಯಕ್ಕೆ ಸೇರಿದ ಹೆಂಗಸು ಅಡುಗೆ ಮಾಡಲು ಸೌದೆ ತರಲು ಗುಡ್ಡಕ್ಕೆ ಹೋಗಿದ್ದಳಂತೆ. ಆ ಗುಡ್ಡದಲ್ಲಿ ಸೌದೆ ಕಡಿಯುತ್ತಿದ್ದಾಗ ಕತ್ತಿ ಒಂದು ಕಲ್ಲಿಗೆ ತಾಗಿ ಆ ಕಲ್ಲಿನಿಂದ ರಕ್ತ ಚಿಮ್ಮಿತು. ಗಾಬರಿಗೊಂಡ ಮದರು ತಕ್ಷಣ ಅಲ್ಲಿಂದ ಓಡಿ ಹೋಗಿ ಬ್ರಾಹ್ಮಣ ಮುಖಂಡರಿಗೆ ವಿಷಯ ತಿಳಿಸುತ್ತಾಳೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಊರ ಹಿರಿಯರು ಅರಸನಿಗೆ ವಿಷಯ ತಿಳಿಸುತ್ತಾರೆ. ಅರಸ ಆ ಉದ್ಭವ ಲಿಂಗಕ್ಕೆ ಗುಡಿಯನ್ನು ಕಟ್ಟಿದ. ಮುಂದೆ ಇದೇ ಮದವೂರು ಎಂದು ಪ್ರಸಿದ್ಧವಾಯಿತು.


ಟಿಪ್ಪು ಬಂದಿದ್ದಕ್ಕೆ ಇಲ್ಲಿದೆ ಸಾಕ್ಷಿ

ಟಿಪ್ಪು ಸುಲ್ತಾನ್ ತನ್ನ ದಂಡಯಾತ್ರೆಯ ಸಮಯದಲ್ಲಿ ಮೈಸೂರು, ಮಡಿಕೇರಿ, ವಿಟ್ಲದ ಮೂಲಕ ಮಧೂರಿಗೂ ಬಂದಿದ್ದ. ದೇವಸ್ಥಾನಗಳು, ಸಣ್ಣಪುಟ್ಟ ಅರಸು ಮನೆತನಗಳ ಮೇಲೆ ದಾಳಿ ಮಾಡುತ್ತಾ ತನ್ನ ಸಾಮ್ರಾಜ್ಯ ವಿಸ್ತಾರಗೊಳಿಸುತ್ತಿದ್ದ ಸಮಯದಲ್ಲಿ ಬಾಯಾರಿಕೆಯಿಂದ ಬಳಲಿದ್ದ ಟಿಪ್ಪುವಿಗೆ ದಾಹ ತಣಿಸಿದ್ದು ಮಧೂರು ದೇವಸ್ಥನದ ಬಾವಿಯ ನೀರು. ಇದರಿಂದ ಸಂತೋಷಗೊಂಡ ಟಿಪ್ಪು ಈ ದೇವಸ್ಥಾನವನ್ನು ಹಾಳುಗೆಡವದಂತೆ ಸೈನಿಕರಿಗೆ ಆಜ್ಞೆ ಮಾಡಿದ. ತಾನು ಬಂದ ನೆನಪಿಗಾಗಿ ಶಾಸ್ತಾರ ಗುಡಿಯ ತಾಮ್ರದ ಹಾಸಿನ ಮಾಡಿಗೆ ತನ್ನ ಖಡ್ಗದಿಂದ ಕಡಿದ. ಆ ಗುರುತು ಇಂದಿಗೂ ಶಾಸ್ತಾರ ಗುಡಿಯ ಮಾಡಿನ ಮೇಲೆ ಕಾಣಬಹುದು. ಈ ದೇವಸ್ಥಾನವು ಈಗ ಕೇರಳದ ದೇವಸ್ವಂ ಬೋರ್ಡ್‌ನ ಆಡಳಿತಕ್ಕೊಳಪಟ್ಟಿದ್ದರೂ, ಸಾಂಪ್ರದಾಯಿಕವಾಗಿ ಮಾಯಿಪ್ಪಾಡಿ ಅರಸರೇ ಆಡಳಿತ ನಡೆಸುತ್ತಿದ್ದಾರೆ.


ಹೀಗೆ ಬನ್ನಿ

ಕಾಸರಗೋಡಿನಿಂದ ಕೇವಲ 6 ಕಿ.ಮೀ. ಸಾಗಿದರೆ ಮಧೂರು ಕ್ಷೇತ್ರ ಸಿಗುತ್ತದೆ. ಇಲ್ಲಿಗೆ ಹೋಗಲು ಕಾಸರಗೋಡಿನಿಂದ  ಸಿಟಿ ಬಸ್‌ಗಳ ವ್ಯವಸ್ಥೆ ಕೂಡ ಇದೆ. ಮಂಗಳೂರಿನಿಂದ ಹೋಗುವವರಿಗೆ ನೇರವಾಗಿ ಕಾಸರಗೋಡು (ಸುಮಾರು 75 ಕಿ.ಮೀ), ಮಂಗಳೂರು, ವಿಟ್ಲ ಮೂಲಕ ಕಾಸರಗೋಡು ತಲುಪಬಹುದು (ಸುಮಾರು 110 ಕಿ.ಮೀ.). ಪೂರಕ ಮಾಹಿತಿಗಾಗಿ ದೂ. 04994 240666 ಸಂಪರ್ಕಿಸಬಹುದು.


- ಉದಯ್ ವಿಟ್ಲ

ಕೃಪೆ:ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website