ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು?
'ಅಲ್ಲ, ಅಲ್ಲ..' ಎಂದು ಒಕ್ಕೊರಲಿನಿಂದ ಕೂಗಿತು ಸಭೆ.
ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು?
ಜನ: ಅಲ್ಲ, ಅಲ್ಲ!
ಅದರಿಂದ ಉತ್ತೇಜಿತನಾದ ರಾಜಕಾರಣಿ ಹೇಳಿದ-'ನಮಗೆ ಬೇಕಿರುವುದು ಶರವೇಗದ ರೈಲು ಗಾಡಿಯಲ್ಲ, ಲಗ್ಝುರಿ ಬಸ್ಗಳಲ್ಲ, ಜೇಡರಗೂಡಿನಂಥ ಬಟ್ಟೆಯಲ್ಲ. ಇಂದು ನಮಗೆ ಬೇಕಿರುವುದು......'
ಅಷ್ಟರಲ್ಲಿ ಸೋಮಾರಿಗಳ ಮಹಾಸಭೆಯಿಂದ ಕರತಾಡನ...
ರಾಜಕಾರಣಿ: ಇಂದು ನಮಗೆ ಏನು ಬೇಕು? ನಮ್ಮ ಭೂತಾಯಿಯ ಚೊಚ್ಚಲ ಮಗನಾದ ರೈತನಿಗೆ, ಅನುದಿನವೂ ದುಡಿಯುವ ಕೂಲಿಗೆ, ಪ್ರತಿಯೊಬ್ಬನಿಗೂ ಬೇಕು ಅನ್ನ.. ಅನ್ನ!
ಜನ: ಅಹುದು, ಅಹುದಹುದು!
ರಾಜಕಾರಣಿ: ನಮ್ಮ ಬಡವನ ರೂಪಾಯಿಗೆ ಹತ್ತು ಸೇರಿನ ಅಕ್ಕಿ ಬೇಕು!
ನಮ್ಮ ಕರ್ನಾಟಕದ ಮುಂದಿನ ಸರ್ಕಾರವನ್ನು ರಚಿಸಲು ಅಣಿಯಾಗುತ್ತಿರುವ ಕಾಂಗ್ರೆಸ್ ಹಾಗೂ ಈ ಹಿಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಗಬ್ಬೆಬ್ಬಿಸಿದ ಬಿಜೆಪಿ ಇವುಗಳೆರಡೂ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ನೋಡಿದಾಗ ಮೂವತ್ಮೂರು ವರ್ಷಗಳ ಹಿಂದೆ ಬೀChiಯುವರು ಬರೆದಿದ್ದ ಈ ಕಥೆ ನೆನಪಿಗೆ ಬಂತು!
ಕಳೆದ ಮೂರು ದಶಕಗಳಲ್ಲಿ ಅಥವಾ ಸ್ವಾತಂತ್ರ್ಯ ಬಂದಾಗಿನಿಂದ ಆದ ಬದಲಾವಣೆಯಾದರೂ ಏನು?
ಬಡವನ ಒಂದು ರೂಪಾಯಿಗೆ ಹತ್ತು ಸೇರು ಅಕ್ಕಿ ಸಿಗಬೇಕು ಎನ್ನುತ್ತಾರೆ ಈ ರಾಜಕಾರಣಿಗಳು ಎಂದು ಬೀChi ಅಂದು ವಿಡಂಬನೆ ಮಾಡಿದ್ದರು. ಇಂದು ಅದೇ ಒಂದು ರೂಪಾಯಿಗೆ ಒಂದು ಕೆಜಿ ಕೊಡುತ್ತೇವೆ ಎನ್ನುತ್ತಿದ್ದಾರೆ, ಅಷ್ಟೆ! ರೂಪಾಯಿಗೆ ಒಂದರಂತೆ ತಿಂಗಳಿಗೆ 25 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಏಪ್ರಿಲ್ 19ರಂದು ಬಿಜೆಪಿ ವಾಗ್ದಾನ ಮಾಡಿದರೆ, ಐದು ದಿನ ಕಳೆದು ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, ಬಿಜೆಪಿಯ 25ಕ್ಕೆ ಇನ್ನೈದು ಕೆಜಿ ಸೇರಿಸಿ 30 ಕೆಜಿ ಕೊಡುತ್ತೇವೆ ಎಂದಿದೆ.
ಇಷ್ಟಕ್ಕೂ ಈ ರಾಜಕೀಯ ಪಕ್ಷಗಳ ಉದ್ದೇಶವಾದರೂ ಏನು?
ಈ ದೇಶವನ್ನು ಭಿಕ್ಷುಕರು, ಭಿಕಾರಿಗಳು, ಆಲಸಿಗಳು, ಸೋಮಾರಿಗಳ ಸಾಮ್ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆಯೇ? ಅಥವಾ ರಾಜಕಾರಣಿಗಳು ನಮ್ಮ ಜನರನ್ನು ಭಿಕಾರಿಗಳು, ಭಿಕ್ಷುಕರು ಎಂದು ಭಾವಿಸಿಕೊಂಡಿದ್ದಾರೆಯೇ? ಇವರು ರೂಪಾಯಿಗೆ ಒಂದು ಕೆ.ಜಿಯಂತೆ ಕೊಡುವ ಅಕ್ಕಿಯಿಂದ ಬಡವನ ಬದುಕು ಹಸನಾಗಿ ಬಿಡುತ್ತದೆಯೇ? ಪುಡಿಗಾಸಿಗೆ ಇಲ್ಲವೆ ಪುಕ್ಕಟೆಯಾಗಿ ಕೊಡುವ ಪಡಿತರದಿಂದ ಯಾರಿಗೆ ಲಾಭ? ನಮ್ಮ ಜನ ಹಾಗೂ ದೇಶದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಇವರು ಎಂದಾದರೂ ಯೋಚಿಸುತ್ತಿದ್ದಾರೆಯೇ? ಅಥವಾ ಈ ದೇಶವನ್ನು ಶಾಶ್ವತವಾಗಿ ಸರ್ಕಾರದತ್ತ ಕೈ ಚಾಚುವ ದರಿದ್ರರ ನಾಡಾಗಿ ಪರಿವರ್ತಿಸಬೇಕೆಂದು ಬಯಸಿದ್ದಾರೆಯೇ?
ಇವತ್ತು ಸರ್ಕಾರ ಪುಕ್ಕಟೆಯಾಗಿ ಕೊಡುವ ಸವಲತ್ತುಗಳಿಂದಾಗಿ ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳಗಳಲ್ಲಿ ಎಂತಹ ಪರಿಸ್ಥಿತಿ ಸೃಷ್ಟಿ ಆಗಿದೆ ಗೊತ್ತಾ?
2006ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಏರ್ಪಾಡಾಗಿತ್ತು. ಆಗಿನ ಮುಖ್ಯಮಂತ್ರಿ ಜಯಲಲಿತಾ ಸರ್ಕಾರ ಒಳ್ಳೆಯ ಆಡಳಿತವನ್ನೇ ಕೊಟ್ಟಿತ್ತು. ರಸ್ತೆಗಳ ಲಕ್ಷಣವನ್ನೇ ಬದಲಿಸಿತ್ತು. ಒಳ್ಳೆಯ ಅಭಿಪ್ರಾಯವೂ ಸೃಷ್ಟಿಯಾಗಿತ್ತು. ಆದರೆ ಕಣಕ್ಕಿಳಿದ ಡಿಎಂಕೆ ಪ್ರತಿ ಬಡ ಕುಟುಂಬಕ್ಕೂ ಒಂದು ಕಲರ್ ಟಿವಿ, ಭೂರಹಿತರಿಗೆ ಎರಡು ಎಕರೆ ಜಮೀನು ನೀಡುತ್ತೇವೆ ಎಂದಿತು. ಅವು ಕರುಣಾನಿಧಿಯವರನ್ನು ಅನಾಮತ್ತಾಗಿ ಗದ್ದುಗೆಗೆ ತಂದು ಕೂರಿಸಿ ಬಿಟ್ಟವು. ಆದರೆ ಅಧಿಕಾರಕ್ಕೆ ಬಂದ ಐದು ವರ್ಷಗಳ ಅಂತ್ಯದಲ್ಲಿ ತಮಿಳುನಾಡು ಡಿಎಂಕೆಯ ಭ್ರಷ್ಟಾಚಾರದ ಕೂಪಕ್ಕೆ ಬಿದ್ದು ಬಿಟ್ಟಿತು. ರಸ್ತೆಗಳು ಹೊಂಡವಾದವು, ಯದ್ವಾತದ್ವ ವಿದ್ಯುತ್ ಕಡಿತ, ಜತೆಗೆ ಗೂಂಡಾಯಿಸಂ. ಇವಿಷ್ಟೇ ಕಾರಣಗಳು ಸಾಕಿದ್ದವು 2011ರಲ್ಲಿ ಜಯಲಲಿತಾ ಮತ್ತೆ ಅಧಿಕಾರಕ್ಕೇರಲು. ಆದರೆ freebieಗಳನ್ನು ಕೊಡದೆ ಹೋದರೆ ಲೆಕ್ಕಾಚಾರವೇ ತಲೆಕೆಳಗಾಗಬಹುದು ಎಂಬ ಆತಂಕ ಜಯಾಗೆ ಶುರುವಾಯಿತು. 2004ರಲ್ಲಿ ಡಿಎಂಕೆಯವರು ಬಣ್ಣದ ಟೀವಿಯ ಆಮಿಷವೊಡ್ದಿದ್ದರೆ, 2011ರಲ್ಲಿ ಜಯಲಲಿತಾ ಪುಕ್ಕಟೆ ಮಿಕ್ಸರ್, ಗ್ರೈಂಡರ್ ಹಾಗೂ ಫ್ಯಾನ್ಗಳನ್ನು ಪ್ಯಾಕೇಜ್ ರೂಪದಲ್ಲಿ ನೀಡುವ ವಾಗ್ದಾನ ಮಾಡಿದರು. ಅಷ್ಟು ಮಾತ್ರವಲ್ಲ, ಹಜ್ ಯಾತ್ರೆಗೆ ಪರ್ಯಾಯವಾಗಿ ಕ್ರೈಸ್ತರಿಗೆ ಜೆರುಸಲೇಂ ಯಾತ್ರೆ ಆಯೋಜಿಸುವುದಾಗಿ ಭರವಸೆ ಕೊಟ್ಟರು. ಕ್ರೈಸ್ತರು ಗಣನೀಯವಾಗಿರುವ ಪಕ್ಕದ ಕೇರಳ ಕೂಡ ಜಯಲಲಿತಾರನ್ನು ಕಾಪಿ ಮಾಡಿ ಜೆರುಸಲೇಂ ಯಾತ್ರೆ ಆಯೋಜಿಸುವ ಮಾತನಾಡಬೇಕಾಗಿ ಬಂತು. ಪರಿಣಾಮ: ಎರಡೂ ಕಡೆಯೂ ಅಭೂತಪೂರ್ವ ವಿಜಯ. ಈ ಮಧ್ಯೆ ತಮಿಳುನಾಡಿನಲ್ಲಿ 25 ಕೆ.ಜಿ ಅಕ್ಕಿ ಉಚಿತವಾಗಿ, ಇನ್ನು 25 ಕೆ.ಜಿ.ಯನ್ನು ರೂಪಾಯಿಗೆ ಒಂದರಂತೆ ನೀಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಈಗ ತಮಿಳುನಾಡಿನಲ್ಲಿ ಎಂಥ ಪರಿಸ್ಥಿತಿ ಸೃಷ್ಟಿಯಾಗುತ್ತಿದೆಯೆಂದರೆ ಜನ ಕೆಲಸ ಮಾಡುವುದೇನಿದ್ದರೂ 'ಎಣ್ಣೆ' ಕರ್ಚಿಗಾಗಿ ಮಾತ್ರ. ಈ ಪುಕ್ಕಟೆ ಅಥವಾ ಅಗ್ಗದ ಅಕ್ಕಿ ಸೃಷ್ಟಿಸುತ್ತಿರುವ ದುಷ್ಪರಿಣಾಮ ಇಷ್ಟೇ ಎಂದುಕೊಳ್ಳಬೇಡಿ. ಇವತ್ತು ದೇಶದ ಅಥವಾ ನಮ್ಮ ರಾಜ್ಯದ ಯಾವುದೇ ಮೂಲೆಗೆ ಹೋಗಿ ಕೃಷಿ, ತೋಟಗಾರಿಕೆ ಬಗ್ಗೆ ಕೇಳಿದರೆ ಬರುವ ಸಾಮಾನ್ಯ ದೂರು, ಕೊರಗು ಯಾವುದು? ಕಾರ್ಮಿಕರ ಕೊರತೆ. ಇದಕ್ಕೆ ಕಾರಣ ಏನು? ಕೂಲಿ ಕಾರ್ಮಿಕನಿಗೆ ತಕ್ಕ ಸಂಬಳ ಸಿಗಬೇಕು ಎಂಬುದನ್ನು ಎಲ್ಲರೂ ಒಪ್ಪುವಂಥದ್ದೇ. ಆದರೆ ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಚುನಾವಣೆ ಸಂದರ್ಭದಲ್ಲಿ ಉಚಿತ ಸೌಲಭ್ಯಗಳಡಿ ರೂಪಾಯಿಗೆ ಒಂದು ಕೆ.ಜಿ ಅಕ್ಕಿಯಂತೆ 25-30 ಕೆ.ಜಿ ಕೊಡುವುದಾಗಿ ಭರವಸೆ ನೀಡಿದರೆ ಗತಿಯೇನಾದೀತು? ಇಂತಹ ಭರವಸೆ, ಯೋಜನೆಗಳಿಗೆ ರಾಜಕಾರಣಿಗಳೇನು ಸ್ವಂತ ಕಿಸೆಯಿಂದ ಕಾಸು ಬಿಚ್ಚುವುದಿಲ್ಲ. ಗೆದ್ದ ಮೇಲೆ ಸರ್ಕಾರಿ ಬೊಕ್ಕಸವನ್ನೇ ಖಾಲಿ ಮಾಡುತ್ತಾರೆ.
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ-GNREGA)!
2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ ಯೋಜನೆ. ವರ್ಷಕ್ಕೆ 100 ದಿನಗಳು ಖಚಿತ ಕೆಲಸ, ದಿನವೊಂದಕ್ಕೆ ಈಗ 120 ಕೂಲಿ ನೀಡುವ ಈ ಯೋಜನೆಯಿಂದ ಎಂಥ ಅನಾಹುತ ಸಂಭವಿಸಿದೆಯೆಂದರೆ ಅಸ್ಸಾಂನ ಟೀ ಎಸ್ಟೇಟ್ಗಳಿಂದ ಕರ್ನಾಟಕದ ಬತ್ತ ಬೆಳೆಯುವವರವರೆಗೂ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ಯೋಜನೆಗೆ ಇದುವರೆಗೂ 1.25 ಲಕ್ಷ ಕೋಟಿ ವ್ಯಯವಾಗಿದೆ! ಆದರೆ ನರೇಗಾದಿಂದಾಗಿ ಯಾವುದಾದರೂ ಎದ್ದು ಕಾಣುವ ಅಭಿವೃದ್ಧಿ ಕಾರ್ಯಗಳಾಗಿದ್ದನ್ನು ನೋಡಿದ್ದೀರಾ? ನಕಲಿ ಕೂಲಿಕಾರರ ಸೃಷ್ಟಿ, ಕೆಲಸದ ವಿಷಯದಲ್ಲೂ ನಿರ್ದಿಷ್ಟ ಗುರಿಯಿಲ್ಲ. ಹೀಗಾಗಿ 55 ಸಾವಿರ ಕೋಟಿ ವಿನಾಕಾರಣ ಪೋಲಾಗಿದೆ. ಸರ್ಕಾರ 30 ಕೆ.ಜಿ ಅಕ್ಕಿಯನ್ನೂ ಕೊಡುತ್ತದೆ, ನರೇಗಾವೆಂಬ ಕಳ್ಳಾಟಕ್ಕೂ 120 ಕೊಡುತ್ತದೆ. ಹೀಗಾಗಿ ನಮ್ಮ ಜನ ಸಾರಾಯಿಗಷ್ಟೇ ಚಿಂತೆಪಡಬೇಕೇ ಹೊರತು, ಅನ್ನಕ್ಕಲ್ಲ. ಮೈ ಬಗ್ಗಿಸಿ ದುಡಿದಿದ್ದರೆ ಆರೋಗ್ಯವಾದರೂ ಸರಿಯಿರುತ್ತಿತ್ತು. ಆದರೆ ಆಗುತ್ತಿರುವುದೇನು? ಇಂತಹ ಉಚಿತ ಸೌಲಭ್ಯಗಳು, ಯೋಜನೆಗಳಿಂದ ಮನುಷ್ಯರಲ್ಲಿ ಆಲಸೀತನ, ಸೋಮಾರಿತನವನ್ನು ಹೆಚ್ಚು ಮಾಡಲಾಗುತ್ತಿದೆಯೇ ಹೊರತು, ಅದರಿಂದ ಜನಕ್ಕಾಗಲಿ, ದೇಶಕ್ಕಾಗಲಿ ಒಳಿತಾಗುತ್ತಿಲ್ಲ. ಇಷ್ಟಕ್ಕೂ ಈ freebieಗಳನ್ನು ಕೊಟ್ಟೂ ಕೊಟ್ಟೂ ಒರಿಸ್ಸಾ ರಾಜ್ಯ 16 ಸಾವಿರ ಕೋಟಿ ನಷ್ಟ ಅನುಭವಿಸಿದ್ದರೆ, ಕಮ್ಯುನಿಸ್ಟರು ಪಶ್ಚಿಮ ಬಂಗಾಳದ ಶೇ.97ರಷ್ಟು ಆದಾಯ ಸಾಲದ ಬಡ್ಡಿ ಮರುಪಾವತಿಗೆ ಹಾಗೂ ಸರ್ಕಾರಿ ಉದ್ಯೋಗಿಗಳ ಸಂಬಳಕ್ಕೇ ವ್ಯಯವಾಗುವಂತೆ ಮಾಡಿ ರಾಜ್ಯವನ್ನು ನಾಯಿಪಾಲು ಮಾಡಿದ್ದಾರೆ. ಇತ್ತ ಎನ್ಡಿಎ ಇದ್ದಾಗ ಜಿಡಿಪಿಯ ಶೇ.3ಕ್ಕಿಂತ ಕಡಿಮೆಯಿದ್ದ ವಿತ್ತೀಯ ಕೊರತೆ ಶೇ.5.6ಕ್ಕೇರಿದೆ!
ಹಾಗಾದರೆ ನಮ್ಮ ಜನರಿಗೆ ಬೇಕಾಗಿರುವುದಾದರೂ ಏನು?
ಸರ್ಕಾರ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿಸಲಿ. ದುಡಿಯುವ ಕೌಶಲ ವೃದ್ಧಿಗೆ ಕ್ರಮಕೈಗೊಳ್ಳಲಿ. ದುಡಿದು ಸ್ವಾಲಂಬಿಯಾಗುವ ದಾರಿ ತೋರಿಸಲಿ. 1ಕ್ಕೆ 25 ಕೆಜಿ ಅಕ್ಕಿಕೊಡುವ ಬದಲು ತಿಂಗಳಿಗೆ ಕುಟುಂಬಕ್ಕೆ ಬೇಕಾದ ಅಕ್ಕಿ ಖರೀದಿಸುವ ಶಕ್ತಿ ನೀಡಲಿ. ಅಕ್ಕಿ ದರ ಆಕಾಶಕ್ಕೇರದಂತೆ ತಡೆಯಲಿ. ಇದನ್ನು ಬಿಟ್ಟು ಕಡಿಮೆ ದರಕ್ಕೆ ಅಕ್ಕಿ ಕೊಡುತ್ತೇವೆ ಮನೆಯಲ್ಲಿ ಬಿದ್ದಿರಿ ಎಂಬರ್ಥದ ಭರವಸೆಗಳೇಕೆ?
ಮಕ್ಕಳಿಗೆ ಪುಕ್ಕಟೆ ಲ್ಯಾಪ್ಟಾಪ್ ಕೊಡುತ್ತೇವೆ ಎಂದು ಹೇಳುವ ಬದಲು ಅವರ ತಂದೆ-ತಾಯಿಗೆ ಮಕ್ಕಳಿಗೆ ಲ್ಯಾಪ್ಟಾಪ್ ಕೊಡಿಸುವ ಶಕ್ತಿ ಕಲ್ಪಿಸಲು ಯೋಜನೆ ರೂಪಿಸಲಿ. ಪ್ರತಿ ವರ್ಷ ರೈತರ ಸಾಲ ಮನ್ನಾ ಮಾಡುವ ಬದಲು ಅವರ ಬೆಳೆಗೆ ಉತ್ತಮ ಬೆಲೆ ಕಲ್ಪಿಸಲಿ. ಆ ಮೂಲಕ ಮಾಡಿದ ಸಾಲ ತೀರಿಸಿ, ಮರ್ಯಾದೆಯಿಂದ ಜೀವನ ಸಾಗಿಸುವ ಸ್ಥಿತಿ ನಿರ್ಮಿಸಲಿ. ಅದನ್ನು ಬಿಟ್ಟು ರೈತ ಪ್ರತಿವರ್ಷ ಮಳೆಗೆ ಕಾಯುವ ಬದಲು ಸರ್ಕಾರದ ಸಾಲಮನ್ನಾಕ್ಕೆ ಕಾಯುವ ದಯನೀಯ ಸ್ಥಿತಿ ನಿರ್ಮಿಸಲು ರಾಜಕೀಯ ಪಕ್ಷಗಳು ಹೊರಟಿವೆ.
ಮೇಲ್ನೋಟಕ್ಕೆ ಇದು ಬಡವರ ವಿರೋಧಿ ಮನಸ್ಥಿತಿ ಅನ್ನಿಸಬಹುದು. ಆದರೆ ಶಾಂತಚಿತ್ತದಿಂದ ವಿಚಾರ ಮಾಡಿನೋಡಿ. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ರಾಜಕಾರಣಿಗಳು ಜನರನ್ನು ಸ್ವಾವಲಂಬಿಯಾಗಿಸುವ ಎಷ್ಟು ಯೋಜನೆ ರೂಪಿಸಿದ್ದಾರೆ? ಅವರಿಗೆ ಜನ ಸ್ವಾವಲಂಬಿಯಾಗಬಾರದು. ಜನ ಸರ್ಕಾರವನ್ನು ಮತ್ತು ಅದನ್ನು ನಡೆಸುವ ರಾಜಕಾರಣಿಗಳ ಹಂಗಿನಲ್ಲಿರಬೇಕು. ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸಿರಬೇಕು. ಜನ ಸ್ವಾವಲಂಬಿಗಳಾದಷ್ಟೂ ರಾಜಕಾರಣಿಗಳಿಗೆ ಹಾನಿ. ಇದೇ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಒಳಗುಟ್ಟು.
ಬರ, ಪ್ರವಾಹ ಬಂದು ಜನರಿಗೆ ಉದ್ಯೋಗವಿಲ್ಲ ಎಂಬ ಸ್ಥಳಗಳಲ್ಲಿ ನರೇಗಾದಂಥ ಯೋಜನೆಗಳನ್ನು ಜಾರಿಗೆ ತರಲಿ, ಪುಕ್ಕಟೆ ಅಕ್ಕಿಯನ್ನೂ ನೀಡಲಿ. 1929ರಲ್ಲಿ ಅಮೆರಿಕದಲ್ಲಿ ಭಾರೀ ಆರ್ಥಿಕ ಸಂಕಷ್ಟ ಎದುರಾಗಿದ್ದಾಗಲೂ ಕುಟುಂಬದ ಇಂತಿಷ್ಟು ಜನರಿಗೆ ಸರ್ಕಾರವೇ ಕೆಲಸ, ಕೂಲಿ ನೀಡುತ್ತಿತ್ತು. ಆದರೆ ನಮ್ಮ ದೇಶದ ರಾಜಕಾರಣಿಗಳು ಪುಕ್ಕಟೆ ಅಕ್ಕಿ, ಗೋಧಿ ಕೊಟ್ಟು, ಕಳ್ಳಾಟಕ್ಕೂ ಕೂಲಿ ನೀಡಿ ಜನ ಎಲ್ಲದಕ್ಕೂ ಸರ್ಕಾರವನ್ನೇ ನೆಚ್ಚಿ ಕುಳಿತುಕೊಳ್ಳಬೇಕಾದ ಅವಲಂಬಿತ ಮನಸ್ಥಿತಿಯನ್ನು ಸೃಷ್ಟಿಸುತ್ತಿರುವುದು, ಆ ಮೂಲಕ ದೇಶವನ್ನು ಹಾಳುಗೆಡುವುದನ್ನು ಒಪ್ಪಲು ಸಾಧ್ಯವೆ? ಪುಕ್ಕಟೆ ಸಿಕ್ಕಿದರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಎಂಬಂತಿರುವ ಜನರಲ್ಲಿ 'ಕಾಯಕವೇ ಕೈಲಾಸ' ಎಂಬ ಭಾವನೆ ತುಂಬುವ ಬದಲು ಸೋಮಾರಿತನವನ್ನು ಹೆಚ್ಚು ಮಾಡಲು ಹೊರಟಿರುವುದು ಎಷ್ಟು ಸರಿ?
- ಪ್ರತಾಪ್ ಸಿಂಹ
Comments
Post a Comment