ಸೆರೆಬ್ರಲ್ ಪಾಲ್ಸಿಯಂಥ ಅಂಗವೈಕಲ್ಯಕ್ಕೆ ತುತ್ತಾದ ಮಕ್ಕಳು ಕೆಲವು ಸಂದರ್ಭಗಳಲ್ಲಿ ಬದುಕುವುದೇ ಕಷ್ಟ. ವಾಸ್ತವ ಹೀಗಿರುವಾಗ, ಛಲ ಮತ್ತು ಪ್ರಚಂಡ ಆತ್ಮವಿಶ್ವಾಸದಿಂದ ಕಂಪ್ಯೂಟರ್ ಸಂಸ್ಥೆಯೊಂದನ್ನು ಹುಟ್ಟುಹಾಕಿರುವ ಪಾಂಡುರಂಗರಾವ್ ಅವರ ಬದುಕು, ನಾಡಿನ ಎಲ್ಲರಿಗೂ ಮಾದರಿ. ಅಂದ ಹಾಗೆ, ಪಾಂಡುರಂಗರಾವ್ ಅವರ ಸಕ್ಸಸ್ನ ಎಲ್ಲ ಕ್ರೆಡಿಟ್ಟೂ ಸಲ್ಲಬೇಕಿರುವುದು ಅವರಮ್ಮ ಸುನಂದಾರಾವ್ಗೆ. ಈಗ, ಮಗನ ಯಶಸ್ಸನ್ನು ಕಂಡು ಆನಂದಭಾಷ್ಪ ಸುರಿಸುವ ಆಕೆ, ಮಗನ ಯಶೋಗಾಥೆಯನ್ನು ವಿವರಿಸಿದ್ದು ಹೀಗೆ:
'ಹೆರಿಗೆಯ ಸಂದರ್ಭದಲ್ಲಿ ವೈದ್ಯರು ಮಾಡಿದ ತಪ್ಪಿನಿಂದಾಗಿ ನನ್ನ ಒಬ್ಬನೇ ಮಗ, ಸೆರೆಬ್ರಲ್ ಪಾಲ್ಸಿಗೆ ತುತ್ತಾದ. ಬಾಲ್ಯದಲ್ಲಿ ಮಗುವನ್ನು ಕೂರಿಸಬೇಕೆಂದರೆ, ಸುತ್ತಲೂ ದಿಂಬುಗಳನ್ನು ಇಡಬೇಕಾಗಿತ್ತು. ಮಾತುಗಳೂ ಬರುತ್ತಿರಲಿಲ್ಲ. ಆದರೆ ನಮ್ಮ ಮಾತುಗಳಿಗೆ ಪಾಂಡು ಸನ್ನೆಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದ. ಮಗುವಿನ ಮೆದುಳು ಚುರುಕಾಗಿದೆ ಎಂಬುದು ಇದರಿಂದ ಗ್ಯಾರಂಟಿಯಾಯಿತು. ಈ ಸಂದರ್ಭದಲ್ಲಿಯೇ, ಬಾಂಬೆಯಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಮೆಡಿಸಿನ್ಸ್'ನಲ್ಲಿ ಸೆರೆಬ್ರಲ್ ಪಾಲ್ಸಿಗೆ ಚಿಕಿತ್ಸೆ ಸಿಗುತ್ತದೆ ಎಂದರು. ತಕ್ಷಣವೇ ಮಗುವಿನೊಂದಿಗೆ ಬಾಂಬೆಗೆ ಹೋದೆ. ಅಲ್ಲಿನ ವೈದ್ಯರು- 'ಈ ಅಂಗವಿಕಲತೆಗೆ ಮದ್ದಿಲ್ಲ. ಆದರೆ ಮನೆಯಲ್ಲೇ ತರಬೇತಿ ನೀಡಿ ವ್ಯಾಯಾಮ ಮಾಡಿಸುತ್ತಿದ್ದರೆ ಮಗು ಚಟುವಟಿಕೆಯಿಂದ ಇರಬಲ್ಲದು' ಎಂದರು. ಮುಂಬಯಿಯಲ್ಲಿ ನನ್ನ ನಾದಿನಿಯ ಮನೆಯಿತ್ತು. ಅಲ್ಲೇ 15 ದಿನ ಉಳಿದು ಮಗುವಿಗೆ ಮಾಡಿಸಬೇಕಿರುವ ವ್ಯಾಯಾಮಗಳನ್ನು ತಿಳಿದುಕೊಂಡೆ.
ಈ ಸಂದರ್ಭದಲ್ಲಿ ನಾವು ವಾಸವಿದ್ದುದು ಉಡುಪಿಯಲ್ಲಿ. ನನ್ನ ಪತಿ ನಾರಾಯಣರಾವ್ ಅವರಿಗೆ ಬ್ಯಾಂಕ್ನಲ್ಲಿ ನೌಕರಿಯಿತ್ತು. ಈ ಮಗುವನ್ನು ಸ್ವಾವಲಂಬಿಯನ್ನಾಗಿ ರೂಪಿಸಬೇಕು ಎಂಬುದೇ ನಮ್ಮಿಬ್ಬರ ನಿರ್ಧಾರವೂ ಆಗಿತ್ತು. ಹಾಗಾಗಿ, ನಾವು ಎರಡನೇ ಮಗುವಿನ ಬಗ್ಗೆ ಯೋಚಿಸಲಿಲ್ಲ. ನಾಲ್ಕನೇ ವರ್ಷದಲ್ಲಿ ಪಾಂಡುವನ್ನು ಶಾಲೆಗೆ ಸೇರಿಸಲು ಹೊರಟಾಗ, ಅವನ ಅಂಗವೈಕಲ್ಯ ಕಂಡು ಮೊದಲು ಎಲ್ಲ ಶಾಲೆಯಲ್ಲೂ ಪ್ರವೇಶ ನಿರಾಕರಿಸಿದರು. ಕಡೆಗೊಮ್ಮೆ ಸೇಂಟ್ ಸಿಸಿಲೀಸ್ ಶಾಲೆಯಲ್ಲಿ ಪ್ರವೇಶ ದೊರೆಯಿತು. ಆಗ, ಮಗುವಿನ ಕೈಗಳಿಗೆ ಬಳಪ ಹಿಡಿಯುವ ಶಕ್ತಿಯೂ ಇರಲಿಲ್ಲ. ಹಾಗಾಗಿ ಆತ ಬೇಗನೆ ಅಕ್ಷರ ಬರೆಯುವುದನ್ನು ಕಲಿಯಲಿಲ್ಲ. ಪರಿಣಾಮ, ಎಲ್ಕೇಜಿಯನ್ನೇ ಎರಡು ವರ್ಷ ಓದಬೇಕಾಯಿತು. 4ನೇ ತರಗತಿಗೆ ಬಂದಾಗಲೂ ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಹಾಗಾಗಿ ಒಳ್ಳೆಯ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಮೈಸೂರಿಗೆ ಶಿಫ್ಟ್ ಆದೆವು. ಅಲ್ಲಿ ಕೂಡ ಶಾಲೆಯ ಪ್ರವೇಶ ಸುಲಭವಾಗಲಿಲ್ಲ. ಕಡೆಗೊಮ್ಮೆ ಭಾರತೀಯ ಸಮಾಜ ಶಾಲೆಯವರು ಪ್ರವೇಶ ನೀಡಿದರು.
ಎಲ್ಕೇಜಿಯಲ್ಲಿದ್ದಾಗ ಪಾಂಡುವನ್ನು ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದೆ. ಮೂರನೇ ತರಗತಿಗೆ ಬಂದ ಮೇಲೆ ಅವನು ತಾನೊಬ್ಬನೇ ಹೋಗುವುದಾಗಿ ಹಠ ಹಿಡಿದ. ಸೆರೆಬ್ರಲ್ ಪಾಲ್ಸಿಗೆ ತುತ್ತಾದ ಮಕ್ಕಳು ಸೊಟ್ಟಂಪಟ್ಟ ಹೆಜ್ಜೆ ಹಾಕುತ್ತವೆ. ಶಾಲೆಗೆ ಹೋಗುವಾಗ ಅವನೇನಾದರೂ ಆಯತಪ್ಪಿ ಬಿದ್ದರೆ ಗತಿಯೇನು ಎಂದು ಯೋಚಿಸಿ, ಅವನನ್ನು ಮುಂದೆ ಕಳಿಸಿ ನಾನು ಹಿಂದಿನಿಂದ ಫಾಲೋ ಮಾಡತೊಡಗಿದೆ. ಈ ಸಂದರ್ಭದಲ್ಲಿ ಕೆಲವು ಮಕ್ಕಳು ಪಾಂಡುವಿಗೆ ಕಲ್ಲು ಹೊಡೆದು ಕೀಟಲೆ ಮಾಡುತ್ತಿದ್ದರು. ಅವರ ಮೇಲೆ ಜಗಳಕ್ಕೆ ಹೋದರೆ, ಮುಂದೊಂದು ದಿನ ನಾನಿಲ್ಲದ ಸಂದರ್ಭದಲ್ಲಿ ಪಾಂಡುವಿಗೆ ತೊಂದರೆಯಾಗಬಹುದು ಅನ್ನಿಸ್ತು. ಕೀಟಲೆ ಮಾಡ್ತಿದ್ದವರನ್ನೇ ಫ್ರೆಂಡ್ಸ್ ಮಾಡಿಕೊಂಡೆ. ಅದು ಅಂಗವಿಕಲ ಮಗು. ಅವನಿಗೆ ನೀವೆಲ್ಲಾ ಸಪೋರ್ಟ್ ಮಾಡಬೇಕೇ ವಿನಃ ಕಿರಿಕಿರಿ ಮಾಡಬಾರದು ಎಂದೆ. ಈ ಪಾಸಿಟಿವ್ ಮಾತು ಆ ತುಂಟರ ಮನಸ್ಸನ್ನು ಬದಲಿಸಿತು. ಆ ಕ್ಷಣದಿಂದಲೇ ಅವರೆಲ್ಲ ನನ್ನ ಮಗನಿಗೆ ಫ್ರೆಂಡ್ಸ್ ಆದರು. ಈ ಸಂದರ್ಭದಲ್ಲಿಯೇ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ವಿಶೇಷ ತರಬೇತಿಯೂ ಸಿಕ್ಕಿತು. ಆದರೆ, ಉಳಿದೆಲ್ಲ ಮಕ್ಕಳಂತೆ ಅವನು ಇರಲೇ ಇಲ್ಲ. ಓದಲು ಕೂತರೆ ಪುಸ್ತಕವೇ ಕೈಯಿಂದ ಜಾರಿ ಬೀಳುತ್ತಿತ್ತು. ಕೈಯಲ್ಲಿ ಪೆನ್ ಸಹ ನಿಲ್ಲುತ್ತಿರಲಿಲ್ಲ. ಆಗ, ಪಠ್ಯವನ್ನು ನಾನು ಓದುವುದೆಂದೂ, ಪಾಂಡು ಎಲ್ಲವನ್ನೂ ಕೇಳಿಸಿಕೊಂಡು ಅರ್ಥಮಾಡಿಕೊಳ್ಳುವುದೆಂದೂ ನಿರ್ಧರಿಸಿದೆವು. ಹೀಗೇ ಅವನ ಏಳನೇ ತರಗತಿ ಮುಗಿಯಿತು.
ಮುಂದೆ ಚಿನ್ಮಯ ಮಿಷನ್ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂನಲ್ಲಿ 8ನೇ ತರಗತಿ ಮುಗಿಸಿದ ಪಾಂಡು,9 ಹಾಗೂ 10ನೇ ತರಗತಿಯನ್ನು ಉಡುಪಿಯ ಮಿಲಾಗ್ರೀಸ್ ಶಾಲೆಯಲ್ಲಿ ಓದಿದ. ಈ ಸಂದರ್ಭದಲ್ಲಿ ಪುರುಷೋತ್ತಮ ಎಂಬುವವರು ಮನೆಗೇ ಬಂದು ಪಾಠ ಹೇಳಿಕೊಟ್ಟರು. ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ದರ್ಜೆಯಲ್ಲೇ ಪಾಂಡು ಪಾಸಾದ. ಆ ವೇಳೆಗೆ, ಹೆಚ್ಚು ಬರೆಯುವ ವಿಷಯಗಳಿದ್ದರೆ ಪಾಂಡುವಿಗೆ ಕಷ್ಟವಾಗುತ್ತದೆ ಎಂದು ನನಗೆ ಅರ್ಥವಾಗಿತ್ತು. ಹಾಗಾಗಿ ಅವನನ್ನು ಪಿಯುಸಿಗೆ ಕಳಿಸುವ ಬದಲು ಡಿಪ್ಲೋಮಾ ಓದಿಸಲು ನಿರ್ಧರಿಸಿದೆ. ಅದೇ ವೇಳೆಗೆ, ಅಂಗವೈಕಲ್ಯ ಹೊಂದಿದವರಿಗೆಂದೇ ಮೈಸೂರಿನಲ್ಲಿ ಪಾಲಿಟೆಕ್ನಿಕ್ ಆರಂಭವಾಗುತ್ತಿದೆ ಎಂಬ ಸುದ್ದಿ ಬಂತು. ತಕ್ಷಣವೇ ನಾವು ಮೈಸೂರಿಗೆ ಶಿಫ್ಟ್ ಆದೆವು. ಆ ವರ್ಷ ಹೊಸ ಪಾಲಿಟೆಕ್ನಿಕ್ ಶುರುವಾಗಲಿಲ್ಲ. ಆದರೆ, ಸಿಪಿಸಿ ಪಾಲಿಟೆಕ್ನಿಕ್ನಲ್ಲಿ ಪಾಂಡುವಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೀಟ್ ಸಿಕ್ಕಿತು.
ಡಿಪ್ಲೋಮಾದಲ್ಲಿ ಪಾಂಡುವಿನ ಅಂಗವೈಕಲ್ಯವನ್ನು ಗಮನಿಸಿ ಕೆಲವು ಶಿಕ್ಷಕರು ತುಂಬ ಮುತುವರ್ಜಿಯಿಂದ ಪಾಠ ಹೇಳಿಕೊಟ್ಟರು. ಹೆಜ್ಜೆ ಹೆಜ್ಜೆಗೂ ಪ್ರೋತ್ಸಾಹಿಸಿದರು. ಆದರೆ ಖಳನಾಯಕನ ರೂಪದಲ್ಲಿ ಅದೇ ಪಾಲಿಟೆಕ್ನಿಕ್ನ ಪ್ರಾಚಾರ್ಯರೇ ನಿಂತಿದ್ದರು. ಅದೊಮ್ಮೆ ಅವರು ತಪ್ಪುತಪ್ಪಾಗಿ ಪಾಠ ಮಾಡಿದಾಗ, ಸಾರ್ ನೀವು ಹೇಳ್ತಿರೋದು ತಪ್ಪು ಎಂದುಬಿಟ್ಟಿದ್ದಾನೆ ಪಾಂಡು. ಅದನ್ನೇ ಮನದಲ್ಲಿ ಇಟ್ಟುಕೊಂಡ ಅವರು ಕಡೆಯ ವರ್ಷದಲ್ಲಿ ಪಾಂಡುವನ್ನು ಫೇಲ್ ಮಾಡಿಬಿಟ್ಟರು. ಆ ದಿನಗಳಲ್ಲಿ ರೀವ್ಯಾಲ್ಯೂಯೇಷನ್ ಪದ್ಧತಿ ಇರಲಿಲ್ಲ. ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ನೀಡುವ ಪದ್ಧತಿಯೂ ಇರಲಿಲ್ಲ. ಹಾಗಾಗಿ, ನಡೆದಿರುವ ಅನಾಹುತದ ಬಗ್ಗೆ ಅಂದಿನ ತಾಂತ್ರಿಕ ಶಿಕ್ಷಣ ನಿರ್ದೇಶಕರನ್ನು ಭೇಟಿಯಾಗಿ ಸಂಕಟ ಹೇಳಿಕೊಂಡೆ. ಈ ಸಂದರ್ಭದಲ್ಲಿ ಉತ್ತರ ಪತ್ರಿಕೆಯನ್ನೇ ಖುದ್ದಾಗಿ ಪರಿಶೀಲಿಸಲು ಅವರು ಆಸಕ್ತಿ ತೋರಿದರು. ಆದರೆ, ಪ್ರಾಚಾರ್ಯರ ಕಡೆಯಿಂದ 'ಉತ್ತರ ಪತ್ರಿಕೆ ಕಳೆದುಹೋಗಿದೆ' ಎಂಬ ಉತ್ತರ ಬಂತು. ಈ ಅವಮಾನದಿಂದ ಪಾಂಡು ಮಾನಸಿಕವಾಗಿ ಕುಗ್ಗಿ ಹೋದ. ಕಡೆಗೊಮ್ಮೆ ಪರೀಕ್ಷಾ ಕೇಂದ್ರವನ್ನು ಬದಲಿಸಿ ಮೂರನೇ ಬಾರಿಗೆ ಪರೀಕ್ಷೆ ಬರೆಸಿದೆ. ಕೊನೆಗೂ ಪಾಂಡು ಸೆಕೆಂಡ್ ಕ್ಲಾಸ್ನಲ್ಲಿ ಪಾಸಾದ.
ಡಿಪ್ಲೊಮಾ ಪಡೆದ ನಂತರವೂ, ಪ್ರಾಚಾರ್ಯರು ಬೇಕೆಂದೇ ಮಾಡಿದ ಅನ್ಯಾಯ, ಪಾಂಡುವನ್ನು ಘಾಸಿಗೊಳಿಸಿತ್ತು. ಆತ ಮೇಲಿಂದ ಮೇಲೆ ಖಿನ್ನನಾಗುತ್ತಿದ್ದ. ಹೀಗೇ ಉಳಿದರೆ ಅವನ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳಬಹುದು ಅನ್ನಿಸಿದಾಗ, ಜೆಎಸ್ಎಸ್ ವಿಶೇಷ ಮಕ್ಕಳ ಪಾಲಿಟೆಕ್ನಿಕ್ನಲ್ಲಿ 'ಲ್ಯಾಬ್ ಇನ್ಸ್ಟ್ರಕ್ಟರ್' ಹುದ್ದೆಗೆ ಪಾಂಡುವನ್ನು ಸೇರಿಸಿ ಬಿಟ್ಟೆ. ಬಹುಶಃ ಪಾಂಡುವಿನ ಬದುಕಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೇ ಈ ಸಂದರ್ಭದಲ್ಲಿ. ಹೇಗೆಂದರೆ, ಆ ಪಾಲಿಟೆಕ್ನಿಕ್ನಲ್ಲಿ ಇದ್ದವರೆಲ್ಲ ಒಂದಲ್ಲ ಒಂದು ಥರದ ಅಂಗವೈಕಲ್ಯದಿಂದ ಬಳಲುತ್ತಿದ್ದ ಮಕ್ಕಳೇ. ಅವರನ್ನು ನೋಡಿ, ಪಾಂಡು ತನ್ನ ಸಂಕಟ ಮರೆತನೇನೋ. ಈ ಸಂದರ್ಭದಲ್ಲಿ ಜೆಎಸ್ಎಸ್ ಪಾಲಿಟೆಕ್ನಿಕ್ನ ಅಧ್ಯಾಪಕ ಇಳಂಗೋವನ್ ಹಾಗೂ ವಿದ್ಯಾರಣ್ಯ ಅಕಾಡೆಮಿ ಆಫ್ ಕಂಪ್ಯೂಟರ್ಸ್ನ ಕೃಷ್ಣಮೂರ್ತಿಯವರು ವೆಬ್ಸೈಟ್ ಹಾಗೂ ಸಾಫ್ಟ್ವೇರ್ಗಳನ್ನು ರೂಪಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಎಕ್ಸೆಲ್ ಸಾಫ್ಟ್ವೇರ್ನ ಸುಧನ್ವ ಅವರಿಂದ ಒಂದು ಸಂಸ್ಥೆ ನಡೆಸಲು ಅಗತ್ಯವಿದ್ದ ವ್ಯವಹಾರ ಜ್ಞಾನದ ಪಾಠವೂ ನಡೆಯಿತು. ಈ ನಡುವೆಯೇ ಮೈಸೂರಿನ ಮುಕ್ತ ವಿವಿಯಲ್ಲಿ ಬಿಎಸ್ಸಿ ಪದವಿಯನ್ನೂ ಪಾಂಡುರಂಗ ಪಡೆದುಕೊಂಡ.
ಪಾಂಡುವಿನ ಪ್ರತಿಯೊಂದು ಹೆಜ್ಜೆಯನ್ನು ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ಧನಂಜಯ, ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದೊಮ್ಮೆ, ನೀನೇ ಸ್ವತಂತ್ರವಾಗಿ ಏನಾದ್ರೂ ಮಾಡಬಹುದಲ್ಲ ಅಂದರು. ಈ ಮಾತು ಕೇಳಿದ್ದೇ ಪಾಂಡು ಖುಷಿಯಾದ. ಅವತ್ತಿನಿಂದ, ತುಂಬ ನಿಧಾನವಾಗಿ ಅಸ್ಪಷ್ಟವಾಗಿ, ನಾನು ಗೆಲ್ಲಬಲ್ಲೆ. ನಾನು ಸಾಧಿಸಬಲ್ಲೆ ಎನ್ನುತ್ತಿದ್ದ. ಕಡೆಗೊಮ್ಮೆ ಯಾವುದೇ ಕೆಲಸವನ್ನಾದರೂ ನಾನು ಮಾಡಬಲ್ಲೆ ಎಂದು ಹೇಳುವ I can technologies ಕಂಪನಿಯನ್ನು ಜೆಎಸ್ಎಸ್ ಕಾಲೇಜಿನ ಆವರಣದಲ್ಲಿರುವ ಸ್ಟೆಪ್ ಸಂಸ್ಥೆಯಲ್ಲಿ ಆರಂಭಿಸಿದ. ಮಗನನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅದರಲ್ಲಿ ಯಶಸ್ವಿಯಾದೆನೆಂಬ ಹೆಮ್ಮೆ ನನಗಿದೆ ಎನ್ನುತ್ತಾ ಮಾತು ಮುಗಿಸಿದರು ಸುನಂದರಾವ್.
ಪಾಂಡುಗೆ ಈಗ 38 ವರ್ಷ. ಅವರಿಗೆ ಶಿವಮೊಗ್ಗದ ಜ್ಯೋತಿಯೊಂದಿಗೆ ಮದುವೆಯಾಗಿದೆ. ಈ ಮದುವೆಯ ಕಥೆಯೂ ಸ್ವಾರಸ್ಯವಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿಯವರಿಗೆ ಕುಟುಂಬದ ಗೆಳೆಯರೊಬ್ಬರು ಪಾಂಡುವಿನ ಬಗ್ಗೆ ಹೇಳಿದರಂತೆ. ಗಂಡನ್ನು ನೋಡಲು ತಾವೇ ಮೈಸೂರಿಗೆ ಬಂದ ಜ್ಯೋತಿ, ಪಾಂಡುವನ್ನು ಕಂಡ ನಂತರ 'ಸಾರಿ' ಎಂದು ಹೊರಟುಬಿಟ್ಟರು. 'ಒಂದ್ಸಲ ನನ್ನ ಕೆಲಸ ನೋಡ್ಕೊಂಡುಹೋಗಿ ಅಂದ್ರಂತೆ' ಪಾಂಡು. ಆನಂತರದಲ್ಲಿ ನಡೆದಿದ್ದೇ ಮ್ಯಾಜಿಕ್ಕು. ಕಂಪ್ಯೂಟರ್ನ ಮುಂದೆ ಕೂತರೆ ಹೊಸದೊಂದು ಲೋಕವನ್ನೇ ತೋರಿಸುವ ಪಾಂಡುವಿನ ಬುದ್ಧಿಶಕ್ತಿ ಕಂಡು ಜ್ಯೋತಿ ತಕ್ಷಣವೇ ಮನಸ್ಸು ಬದಲಿಸಿ ಮದುವೆಗೆ ಒಪ್ಪಿದರಂತೆ. 'ಇವರಿಂದ ಪಾಠ ಹೇಳಿಸಿಕೊಂಡ ಅದೆಷ್ಟೋ ಮಂದಿ ಇನ್ಫೋಸಿಸ್, ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಹೊರಗೆ ಸಿಕ್ಕಿದ್ರೆ ತುಂಬಾ ಗೌರವ ಕೊಡ್ತಾರೆ. ಇಂಥಾ ಜೀನಿಯಸ್ನ ಹೆಂಡತಿ ಆಗಿರೋದು ನನಗಂತೂ ಹೆಮ್ಮೆ' ಅನ್ನುತ್ತಾರೆ ಜ್ಯೋತಿ.
ಸಣ್ಣ ಹಾಗೂ ಬೃಹತ್ ಉದ್ದಿಮೆಗಳಿಗೆ ಅಂತರ್ಜಾಲ ತಾಣಗಳನ್ನು ನಿರ್ಮಿಸಿ ಕೊಡುವುದು, ದೈನಂದಿನ ಕೆಲಸಗಳನ್ನು ಸುಲಭಗೊಳಿಸುವ ಸಾಫ್ಟ್ವೇರ್ ನಿರ್ಮಿಸುವುದು, ತಾಂತ್ರಿಕ ಹಾಗೂ ತಾಂತ್ರಿಕೇತರ ವಿಷಯಗಳಿಗೆ ಸಂಬಂಧಿಸಿದ ಪಠ್ಯವನ್ನು ತಯಾರಿಸುವುದು, ಡೇಟಾ ಎಂಟ್ರಿಯಿಂದ ಹಿಡಿದು ಸಾಫ್ಟ್ವೇರ್ ನಿರ್ಮಾಣದವರೆಗೆ ಸಾಧ್ಯವಿರುವ ಎಲ್ಲ ಸೇವೆಗಳನ್ನೂ ಒದಗಿಸುವುದು... ಈ ಎಲ್ಲ ಕೆಲಸಗಳನ್ನು ಪಾಂಡುವಿನ ಐ ಕ್ಯಾನ್ ಟೆಕ್ನಾಲಜೀಸ್ ಸಂಸ್ಥೆ ಮಾಡುತ್ತದೆ. ಮತ್ತೊಂದು ವಿಶೇಷವೆಂದರೆ, ತನ್ನ ಕಂಪನಿಯಲ್ಲಿ, ತನಗಿಂತ ಹೆಚ್ಚಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಯತೀಶ್ ಕುಮಾರ್ ಎಂಬಾತನಿಗೆ ಕೆಲಸ ನೀಡಿ ಮಾನವೀಯತೆ ಮೆರೆದಿದ್ದಾರೆ ಪಾಂಡುರಂಗರಾವ್. ಅಷ್ಟೇ ಅಲ್ಲ ತನ್ನಂತೆ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಂದಿಯ ಭವಿಷ್ಯ ರೂಪಿಸಲೆಂದೇ 'ಸಮರ್ಪಿತ' ಎಂಬ ಎನ್ಜಿಒ ಒಂದನ್ನು ಆರಂಭಿಸಿದ್ದಾರೆ. 'ಐ ಕ್ಯಾನ್ ಹಾಗೂ ಸಮರ್ಪಿತಾ ನನ್ನ ಬಹುದೊಡ್ಡ ಕನಸುಗಳು. ಈ ಎರಡೂ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತೇನೆ. ಎರಡೂ ಸಂಸ್ಥೆಗಳಲ್ಲಿ ನನಗಿಂತ ದುರ್ಬಲರಿಗೆ, ನನಗಿಂತ ಅಸಹಾಯಕರಾಗಿರುವವರಿಗೆ ನೌಕರಿ ಕೊಡುತ್ತೇನೆ. ಯಾರೊಬ್ಬರಿಂದಲೂ ನಾನು ಅನುಕಂಪ ಬಯಸಲಾರೆ. ನಮ್ಮ ಸಂಸ್ಥೆ ನೀಡುವ ಸೇವೆಯನ್ನು ದಯವಿಟ್ಟು ಬಳಸಿಕೊಳ್ಳಿ. ಆ ಮೂಲಕ ನಮಗೆ ಕೆಲಸ ಕೊಡಿ. ಇರುವ ಸ್ಥಳದಿಂದಲೇ ಒಂದು ಬೆಸ್ಟ್ ಆಫ್ ಲಕ್ ಹೇಳಿ...' ಕನ್ನಡಿಗರಲ್ಲಿ ನನ್ನ ಪ್ರಾರ್ಥನೆ ಇಷ್ಟೇ, ಇದಷ್ಟೇ ಎನ್ನುತ್ತಾರೆ ಪಾಂಡು.
ಕಂಪ್ಯೂಟರ್ ಮೂಲಕ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಡಬಹುದಾದ 'ಕ್ವಿಜ್ ಮಾಸ್ಟರ್' ಎಂಬ ಇಂಗ್ಲೀಷಿನ ಸಾಫ್ಟ್ವೇರ್ ತಯಾರಿಸಿರುವ ಪಾಂಡು, ವಿಸ್ಟಾ ಹಂಟ್ ಡಾಟ್ ಕಾಮ್ ಹಾಗೂ ಸೆಕ್ಯುರಿಟಿ ಹಂಟ್ ಡಾಟ್ಕಾಮ್ ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನ ಬರೆಯುತ್ತಾರೆ. ಈತನನ್ನು ಹುಡುಕಿಕೊಂಡು ಬಂದಿರುವ ಬಹುಮಾನ, ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿರುವ ಈತನಿಗೆ ಸಾಧ್ಯವಾದರೆ ಒಂದು ಅಭಿನಂದನೆ ಹೇಳಿ: ಸಂಪರ್ಕಕ್ಕೆ: 8050239039. ವೆಬ್ಸೈಟ್: www.icantech.in, ಇ-ಮೇಲ್: icantech.info@yahoo.com
Comments
Post a Comment