ದಶರಥ್ ಮಂಜಿ ಅಂತಿಂಥವನಲ್ಲ ಮತ್ತು ಅನುಪಮ ಕಾರ್ಯ

ಗಹ್ಲೋರ್ ಎಂಬುದು ಬಿಹಾರದ ಗಯಾ ಬಳಿ ಇರುವ ಒಂದು ಕುಗ್ರಾಮ. ಅಲ್ಲಿ ಕುಡಿಯುವ ನೀರಿಗೂ ತತ್ವಾರ. ಒಂದು ಕೊಡ ನೀರು ತರಲು ಆ ಹಳ್ಳಿಯ ಅಂಚಿನಲ್ಲಿದ್ದ ಪರ್ವತದಾಚೆ ನಡೆದು ಹೋಗಿ ಅಲ್ಲಿರುವ ನದಿಯಿಂದ ನೀರು ತರಲು ಕನಿಷ್ಟ ಅರ್ಧ ದಿನ ವ್ಯಯಮಾಡಬೇಕಾಗಿತ್ತು. ಇದು ಅಲ್ಲಿನ ಮಹಿಳೆಯರಿಗೆ ಪ್ರಯಾಸದ ಕೆಲಸವೇ ಆಗಿತ್ತು. ಒಮ್ಮೆ ನೀರು ತರಲು ಹೋಗಿದ್ದ ದಶರಥ್ ಮಂಜಿ ಎಂಬ ಗ್ರಾಮಸ್ಥನ ಪತ್ನಿ ತುಂಬಾ ತಡವಾಗಿ ಅದೂ ಬರೀಕೈನಲ್ಲಿ ಬಂದಾಗ ದಶರಥನಿಗೆ ತುಂಬಾ ಕೋಪಬಂತು. 'ಬಾಯಾರಿಕೆಯಿಂದ ಬಳಲುತ್ತಿದ್ದೇನೆ. ನೀರು ತರಲಾಗದೇ?' ಎಂದು ಪತ್ನಿಯನ್ನು ನಿಂದಿಸಿದಾಗ ಆಕೆ ಕಣ್ಣಲ್ಲಿ ನೀರು ತುಂಬಿಕೊಂಡು, 'ನಾನೇನು ಮಾಡಲಿ, ನೀರು ತರುವಾಗ ಇನ್ನೇನು ಮನೆ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಎಡವಿ ಬಿದ್ದು ಬಿಂದಿಗೆ ಒಡೆದು ಹೋಯಿತು.'

ತನ್ನ ಪತ್ನಿಯ ಪರಿಸ್ಥಿತಿ, ಅಸಹಾಯಕತೆಯನ್ನು ನೋಡಿ ದಶರಥನ ಮನ ಕಲಕಿತು. ನದಿಯ ಬಳಿ ಹೋಗಲು ಅಡ್ಡಿಯಾಗಿರುವ ಬೆಟ್ಟವನ್ನೇ ಕೊರೆದು ರಸ್ತೆ ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ಮನದಲ್ಲಿ ಮೂಡಿತು. ತನಗೆ ತಾನೇ ಹೇಳಿಕೊಂಡ, 'ಹೌದು ನಾನಿದನ್ನು ಮಾಡಲೇ ಬೇಕು'.

ಆದರೆ ಅವನು ಅಂದುಕೊಂಡಂತೆ ಆ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವನು ಛಲದಿಂದ ಒಂದು ಸುತ್ತಿಗೆ, ಕಬ್ಬಿಣದ ಉಳಿ ಮತ್ತು ದೊಡ್ಡ ಮೊಳೆಯನ್ನುಪಯೋಗಿಸಿ, ಬೆಟ್ಟ ಕೊರೆಯಲು ಹೊರಟೇ ಬಿಟ್ಟ. ಆತನ  ಹುಚ್ಚು ಸಾಹಸಕ್ಕೆ ಎಲ್ಲರೂ ಪರಿಹಾಸ್ಯ ಮಾಡಿದರು. ಅವನ ಪತ್ನಿ ಮತ್ತು ಬಂಧುಗಳೂ ಸಹ ಇವನ ಕಾರ್ಯಕ್ಕೆ ಸಮ್ಮತಿಸಲಿಲ್ಲ. ತನ್ನ ಗುಡಿಸಲನ್ನು ಬೆಟ್ಟದ ಬುಡಕ್ಕೇ ಬದಲಾಯಿಸಿ, ಹಗಲು ರಾತ್ರಿಯೆನ್ನದೆ ಒಬ್ಬನೇ ಈ ಕಾರ್ಯದಲ್ಲಿ ಮುಳುಗಿಹೋದ. ಊಟ- ನಿದ್ದೆ ಸಹ ಅವನಿಗೆ ಬೇಡವಾದವು. ಹೀಗೆ ಸತತ ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಅವನು ಕೊರೆಯುತ್ತಿದ್ದ ಸುರಂಗಕ್ಕೆ ಒಂದು ಆಕಾರ ಬಂದಾಗ ಹುಚ್ಚನೆಂದು ಕರೆದವರೇ ಅವನಿಗೆ ನೆರವು ನೀಡಲು ಪ್ರಾರಂಭಿಸಿದರು. ಅಂತೂ 22 ವರ್ಷಗಳ ನಂತರ 360 ಅಡಿ ಉದ್ದದ, 30 ಅಡಿ ಅಗಲದ, 25 ಅಡಿ ಎತ್ತರದ ಸುರಂಗ ಮಾರ್ಗ ನಿರ್ಮಾಣವಾಗಿತ್ತು. ಅರ್ಧದಿನ ನಡೆದು ಹೋಗುವ ಈ ಮಾರ್ಗದಲ್ಲೀಗ ಅರ್ಧ ಗಂಟೆ ಸಾಕಾಗಿತ್ತು.

ಎಲ್ಲರೂ ದಶರಥನ ಸಾಹಸವನ್ನು ಕೊಂಡಾಡುವವರೇ. ಆದರೆ ದಶರಥ್ ಮಾತ್ರ ದುಃಖಿತನಾಗಿದ್ದ, ಏಕೆಂದರೆ ಈ ಹಾದಿಯ ನಿರ್ಮಾಣಕ್ಕೆ ಸ್ಫೂರ್ತಿ ನಿಡಿದ್ದ ಆತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆದರೂ  ಗ್ರಾಮದ ಇತರ ಮಹಿಳೆಯರು ತನ್ನ ಪತ್ನಿಯಂತೆ ಇನ್ನು ಮುಂದೆ ಕಷ್ಟ ಪಡಬೇಕಿಲ್ಲ ಎಂಬ ಸಮಾಧಾನವಾಯಿತು. ಬಿಹಾರ ಸರ್ಕಾರ ಅವನು ಮಾಡಿದ ಸಮಾಜ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತು. ಅಲ್ಲದೆ ಅವನ ಸೇವೆಯನ್ನು ಮೆಚ್ಚಿ ಸರ್ಕಾರ ಅವನಿಗೆ ಐದು ಎಕರೆ ಭೂಮಿಯನ್ನು ನೀಡಿತಾದರೂ ಅದನ್ನು ಆಸ್ಪತ್ರೆ ನಿರ್ಮಿಸಲು ದಾನ ಮಾಡಿದ. ಅಲ್ಲಿ ಅವನ ಹೆಸರಿನ ಒಂದು ಸರ್ಕಾರಿ ಆಸ್ಪತ್ರೆ ತಲೆಎತ್ತಿದೆ. ಒಮ್ಮೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗ ನಿತೀಶ್ ಎದ್ದು ನಿಂತು ಗೌರವ ತೋರಿಸಿದ್ದಲ್ಲದೆ, ಸ್ವತಃ ತಮ್ಮ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂಡಿಸಿ ಗೌರವ ಸೂಚಿಸಿದ್ದರು. 2007ರಲ್ಲಿ ಮಂಜಿ ಅನಾರೋಗ್ಯದಿಂದ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಬಿಹಾರ ಸರ್ಕಾರ ಆತ ನಿರ್ಮಿಸಿದ ರಸ್ತೆಗೆ ಆತನ ಹೆಸರನ್ನೇ ಇಟ್ಟಿತು.
ಅನುಪಮ ಕಾರ್ಯ

ಕೀನ್ಯಾ ದೇಶದ ನದಿಗಳು ಅಕಾಲಿಕ ಮತ್ತು ಶೀಘ್ರ ಪ್ರವಾಹದಿಂದಾಗಿ ಅನೇಕ ಅನಾಹುತಗಳಿಗೆ ಮತ್ತು ನಾಶಕ್ಕೆ ಎಡೆಮಾಡಿಕೊಡುತ್ತಿದ್ದವು. ಅಲ್ಲದೆ ಸಾಕಷ್ಟು ಸೇತುವೆಗಳಿಲ್ಲದೆ ಅನೇಕರು ನೆರೆಬಂದಾಗ ತಮ್ಮ ಜೀವಗಳನ್ನು ಕಳೆದುಕೊಂಡದ್ದೂ ಇದೆ. ಪ್ರವಾಹದ ಜೊತೆಗೆ ನದಿಯಲ್ಲಿರುವ ಭಯಂಕರ ಮೊಸಳೆಗಳು ಮತ್ತು ನೀರಾನೆಗಳಿಂದಾಗಿ ಅನೇಕ ಆದಿವಾಸಿಗಳು ನದಿ ದಾಟುವ ಪ್ರಯತ್ನದಲ್ಲಿ ಜೀವಕಳೆದುಕೊಳ್ಳುವ ಸ್ಥಿತಿ ಸಾಮಾನ್ಯವಾಗಿತ್ತು. ಅಲ್ಲಿ ಹರಿಯುವ ಮೊರುನಿ ನದಿಯಂತೂ ಆಗಾಗ್ಗೆ ಅಸಂಖ್ಯಾತ ಜನರ ಬಲಿ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ಅನೇಕರು ವಸ್ತುಶಃ ಅನಾಥರಾಗಿದ್ದರು. ಹೀಗೆ ತಂದೆ ತಾಯಿಯರನ್ನು ಪ್ರವಾಹದಲ್ಲಿ ಕಳೆದು ಕೊಂಡ ಡೇವಿಡ್ ಕಕೂಕೋ ಎಂಬ ವ್ಯಕ್ತಿ ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಲೇಬೇಕೆಂದು ಪಣತೊಟ್ಟು, ಮೊರುನಿ ನದಿಗೆ ಕಾಲು ಸೇತುವೆಯೊಂದನ್ನು ಕಟ್ಟಲು ನೆರವಾದ. 1989ರಲ್ಲಿ ಕೀನ್ಯಾಕ್ಕೆ ಬಂದ ಹರ್ಮನ್ ಪಾರ್ಕರ್ ಎಂಬ ಕ್ರೈಸ್ತ ಪಾದ್ರಿಗೆ ಅಲ್ಲಿನ ಜನ ತಮ್ಮ ಕುಟುಂಬದ ಒಬ್ಬ ಸದಸ್ಯನನ್ನಾದರೂ ಆ ಪ್ರವಾಹದಲ್ಲಿ ಕಳೆದುಕೊಂಡಿದ್ದರ ಬಗ್ಗೆ ತಿಳಿದುಬಂತು. ಪ್ರವಾಹದ ವೇಳೆಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಜನ ಸಂಚರಿಸುವಂತಿರಲಿಲ್ಲ, ಮಕ್ಕಳು ಶಾಲೆಗೆ ಹೋಗಲಾಗುತ್ತಿರಲಿಲ್ಲ. ಮಾರುಕಟ್ಟೆಗಳು, ಅಂಗಡಿಗಳು ಮುಚ್ಚಿ ಹೋಗಿದ್ದವು. ವೈದ್ಯಕೀಯ ಚಿಕಿತ್ಸೆ ಕೊಡಿಸದೆ ಅನೇಕರು ಕೊನೆಯುಸಿರು ಎಳೆಯುವಂತಾಯಿತು.  ಈ ಸಮಸ್ಯೆಯನ್ನು ಹೇಗಾದರೂ ಮಾಡಿ ಪರಿಹರಿಸಬೇಕೆಂದು ನಿರ್ಧರಿಸಿದ ಪಾರ್ಕರ್ ಕೊನೆಗೆ ನದಿಗಳಿಗೆ ಅಂಕುಶ ಹಾಕಲು ಸೇತುವೆಗಳನ್ನು ನಿರ್ಮಾಣ ಮಾಡುವ ನಿರ್ಧಾರ ಮಾಡಿದ. ಜೆ ಹಿಂಡ್ಸನ್ ಎಂಬ ಸಮಾಜ ಸೇವಕ ಪಾರ್ಕರ್ ಗೆಳೆಯನಾದ ಮತ್ತು ಆತನೂ ಸಹ ಕಾಲು ಸೇತುವೆಗಳ ನಿರ್ಮಾಣದ ಕುರಿತು ಅಗತ್ಯ ನೆರವನ್ನು ಪಾರ್ಕರ್‌ಗೆ ನೀಡಿದ. ಅಲ್ಲದೆ ಡೇವಿಡ್ ಕಕೂಕೊ ಸಹ ಇವನ ಕಾರ್ಯದಲ್ಲಿ ನೆರವಾದ. ಇದರ ಪರಿಣಾಮವಾಗಿ 1997ರಿಂದೀಚೆಗೆ ಅಲ್ಲಿ ನಲವತೈದು ತೂಗು ಸೇತುವೆಗಳನ್ನು ನಿರ್ಮಿಸಿದ ಕೀರ್ತಿ ಪಾರ್ಕರ್‌ಗೆ ಸೇರುತ್ತದೆ.  ಅದಕ್ಕಾಗಿ 2003 ರಲ್ಲಿ ಆತ 'ಬ್ರಿಡ್ಜಿಂಗ್ ದಿ ಗ್ಯಾಪ್‌' ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಸರಳವಾದ ವಿಧಾನಗಳನ್ನು ಉಪಯೋಗಿಸಿ, ಸ್ಥಳೀಯರ ನೆರವಿನಿಂದ ಮತ್ತು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನೇ ಉಪಯೋಗಿಸಿ, ಕೇವಲ ಆರು ಸಾವಿರ ಡಾಲರಿನಲ್ಲಿ ಅಲ್ಲಲ್ಲಿ ಕಾಲು ಸೇತುವೆಗಳನ್ನು ನಿರ್ಮಿಸಿದ. ಹೀಗಾಗಿ ಕೀನ್ಯಾದಲ್ಲಿ ಅನೇಕ ಕಡೆ ಇಂತಹ ಸೇತುವೆಗಳು ಜನರ ಜೀವನ ಗತಿಯನ್ನೇ ಬದಲಾಯಿಸಿತು. ಈ ಪ್ರಕ್ರಿಯೆ ಅಷ್ಟು ಸುಲಭವಾಗಿರಲಿಲ್ಲ. ಅನೇಕ ಬಾರಿ ಪಾರ್ಕರ್ ಮಲೇರಿಯಾ ಮತ್ತು ಡೆಂಘೇ ಖಾಯಿಲೆಯಿಂದ ನರಳಬೇಕಾಯಿತು. ಕೆಲವು ಬಾರಿ ದರೋಡೆಕೋರರಿಂದಲೂ ದಾಳಿಗೊಳಗಾದ. ಏನೇ ಆದರೂ ಅವನು ಮಾತ್ರ ತನ್ನ ಕಾರ್ಯದಿಂದ ವಿಮುಖನಾಗಲಿಲ್ಲ. 'ನನಗೆ ಪರಿಚಯವಿಲ್ಲದ ಅನೇಕ ಜೀವಗಳನ್ನು ರಕ್ಷಿಸಿದ್ದೇನೆ. ನನ್ನ ಈ ಸೇತುವೆಗಳು ಕನಿಷ್ಠ ಕುಟುಂಬದ ಒಬ್ಬ ಸದಸ್ಯನ ಜೀವವನ್ನಾದರೂ ಉಳಿಸಿದ ತೃಪ್ತಿ ನೀಡಿವೆ. ಇಂತಹ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪರಮಾತ್ಮನಿಗೆ ನಾನು ಕೃತಜ್ಞ' ಎಂದಾತ ಆಗಾಗ ಹೇಳುತ್ತಿರುತ್ತಾನೆ. ಹೀಗೆ ಪ್ರತಿಫಲಾಪೇಕ್ಷೆಯಿಲ್ಲದೆ, ಸರ್ಕಾರದ ನೆರವಿಲ್ಲದೆ ಕೀನ್ಯಾದ ಸಾಮಾನ್ಯ ಜನರ ಬದುಕನ್ನು ರೂಪಿಸುತ್ತಿರುವ ಹರ್ಮನ್ ಪಾರ್ಕರ್ ಎಲ್ಲರ ಗೌರವಾದರಗಳಿಗೆ ಪಾತ್ರನಾಗಿದ್ದಾನೆ.
 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website