ಕಾಲ ಕೆಟ್ಟಿದೆಯೇ?

ಹದಿಹರೆಯದ ಹುಡುಗರಲ್ಲಿ ಅನ್ಯಮನಸ್ಕತೆ, ಏಕಾಗ್ರತೆ ಕೊರತೆ ಹಾಗೂ ಯಾವುದರಲ್ಲೂ ಆಸಕ್ತಿ ಇಲ್ಲದಿರುವುದನ್ನು ನೋಡಿದರೆ `ಏಕೆ ಹೀಗೆ' ಎಂಬ ಪ್ರಶ್ನೆ ಇತ್ತೀಚೆಗೆ ನನ್ನನ್ನು ಕಾಡತೊಡಗಿತ್ತು. ಸುಮಾರು ನಾಲ್ಕೈದು ವರ್ಷಗಳಿಂದ ಈಚೆಗೆ ಈ ಪ್ರವೃತ್ತಿ ಹೆಚ್ಚಾಗಿರುವುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ.
ಶಿಕ್ಷಕ ವೃತ್ತಿಯಲ್ಲಿರುವ ನಾನು ಹುಡುಗರ ಈ ವರ್ತನೆಗೆ ಕಾರಣ ತಿಳಿಯಲು ಕೆಲವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ.
ಮೊದಮೊದಲು ಅವರು ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿದರೂ, ಅವರ ಬಗೆಗಿನ ನನ್ನ ಆಸಕ್ತಿ ನೈಜವಾದದ್ದು, ನಿಷ್ಕಪಟವಾದದ್ದು ಎಂದು ತಿಳಿದ ಮೇಲೆ ಅವರು ಮಾತನಾಡಲು ಒಪ್ಪಿದರು. ಇದರಿಂದ ಕಂಡುಕೊಂಡ ಸಂಗತಿಗಳು ಇಲ್ಲಿವೆ.
ಪ್ರಕರಣ 1
ಆಶಾ ಹದಿಹರೆಯದ, ಚುರುಕಾದ, ಚೆಲುವೆ. ಆದರೂ ಅವಳ ಕಂಗಳಲ್ಲಿ ಆ ವಯಸ್ಸಿನ ಹುಡುಗರಿಗೆ ಇರಬೇಕಾದ ಹುಡುಗಾಟವಿಲ್ಲ. ಏನೋ ಚಿಂತೆ ಕಾಡುತ್ತಿದೆ ಎನಿಸಿತು. ಏನೇ ವಿಷಯ ಇದ್ದರೂ ಮುಕ್ತ ಮನಸ್ಸಿನಿಂದ ಹೇಳಬೇಕೆಂದು ನಾನು ಅವಳಿಗೆ ತಿಳಿ ಹೇಳಿದೆ. ಅವಳು ಹೇಳಿದ ಕೆಲವು ವಿಷಯಗಳು ನನಗೆ ಹೊಸ ಪ್ರಪಂಚವನ್ನೇ ತೆರೆಸಿದವು. ಆಶಾ ತಂದೆ ತಾಯಿಗೆ ಒಬ್ಬಳೇ ಮುದ್ದಿನ ಮಗಳು. ತಂದೆ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ತಾಯಿ ಗೃಹಿಣಿ. ತಂದೆ ವರ್ಗಾವಣೆಯಾಗುವ ಕೆಲಸದಲ್ಲಿ ಇರುವುದರಿಂದ ಕೆಲವು ಸಲ ವಿದ್ಯಾಭ್ಯಾಸಕ್ಕಾಗಿ ತಾಯಿ ಮಗಳಿಬ್ಬರೇ ಇರಬೇಕಾಗುತ್ತಿತ್ತು. ಅವಳಿಗೆ ಮನೆಯಿಂದ ಯಾವ ತೊಂದರೆಯೂ ಇಲ್ಲ. ಆದರೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅಣ್ಣ, ತಮ್ಮ ಅಥವಾ ಅಕ್ಕ ತಂಗಿ ಇದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಈಗಿನ ಕಾಲದಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕುವುದೂ ಕಷ್ಟವೇ. ಏನಾದರೂ ಲೆಕ್ಕಾಚಾರ ಮಾಡೇ ಸ್ನೇಹ ಬಯಸುತ್ತಾರೆ ಎನ್ನುವುದು ಅವಳ ಅನುಭವ.

`ವಿದ್ಯಾಭ್ಯಾಸದಿಂದ ಮಾನವೀಯತೆಯ ಬದಲಿಗೆ ಅಸೂಯೆ, ಸಂಶಯ, ಅಸಹಜ ಪೈಪೋಟಿ ಹೆಚ್ಚುತ್ತಿದೆ. ನಿಜವಾದ ಅರ್ಥದಲ್ಲಿ ಇದು ವಿದ್ಯಾಭ್ಯಾಸವೇ ಅಥವಾ ಸಾಕ್ಷರತಾ ಪ್ರಚಾರವೇ ಎನಿಸುತ್ತದೆ' ಎಂದು ಹೇಳಿದಳು.  ಒಂದೇ ಮಕ್ಕಳಿರುವ ಮನೆಗಳಲ್ಲಿ ಮಕ್ಕಳನ್ನು ಒಂಟಿತನ ಕಾಡುತ್ತದೆ. ಈ ಒಂಟಿತನವನ್ನು ನೀಗಿಸಲು ಅವರು ಹಲವು ವ್ಯಸನಗಳಿಗೆ ಮೊರೆ ಹೋಗುತ್ತಾರೆ. ಇದರಿಂದ ಮನುಷ್ಯರ ಒಡನಾಟ, ಸಂಪರ್ಕ, ಸಂತೋಷ ಮರೆಯಾಗುತ್ತದೆ. ಕ್ರಮೇಣ ಸಹವಾಸದಿಂದ ವ್ಯಸನಗಳ ದಾಸರಾಗುತ್ತಾರೆ. ಇಂತಹ ಯಾಂತ್ರಿಕ ಬದುಕಿನಿಂದ ಅವರು ಯಾಂತ್ರಿಕ ಜೀವನಕ್ಕೆ ಬಲಿಯಾಗುತ್ತಾರೆ. ಯಾವ ಬೆಲೆಬಾಳುವ ವಸ್ತುವಿನಿಂದಲೂ ಅವರಿಗೆ ಬೇಕಾದ ಪ್ರೀತಿ, ಒಡನಾಟಗಳನ್ನು ಕೊಡಲು ಸಾಧ್ಯವಿಲ್ಲ. ವ್ಯಸನಗಳ ಬಗ್ಗೆ ತಂದೆ ತಾಯಂದಿರ ದ್ವಂದ್ವ ಧೋರಣೆಯೂ ಮಕ್ಕಳ ಅವನತಿಗೆ ಕಾರಣ. ಮುಂದುವರಿದ ಸಮಾಜಕ್ಕೆ ಇದು ಬೇಕೆಂಬ ವಿವರಣೆ.
ಪ್ರಕರಣ 2
ರವಿ ಪದವೀಧರ, ಮೃದುಮಾತಿನ ಲಕ್ಷಣವಾದ ವಿನಯವಂತ. ಅವನು ಮಾಡುವ ಕೆಲಸಕ್ಕೂ ಓದಿದ್ದಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ತಂದೆ ತಾಯಿಗೆ ನೆರವಾಗುತ್ತದೆ ಎಂಬ ಕಾರಣಕ್ಕೆ ತನಗಿಷ್ಟವಿಲ್ಲದ ಕೆಲಸ ಮಾಡುತ್ತಿರುವ ಈ ಹುಡುಗನಿಗೂ ಒಂಟಿತನ, ತನ್ನ ಕೆಲಸದಲ್ಲಿ ಅತೃಪ್ತಿ ಕಾಡುತ್ತದೆ.

`ಈಗಿನ ಕಾಲದಲ್ಲಿ ಎಲ್ಲಿ ನೋಡಿದರೂ ಏನು ಓದಿದ್ದಿ, ಎಲ್ಲಿ ಕೆಲಸ, ಸಂಬಳ ಎಷ್ಟು, ಅಮೆರಿಕ ಅಥವಾ ಇಂಗ್ಲೆಂಡಿಗೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳೇ ಎದುರಾಗುತ್ತವೆ. ಎಲ್ಲರೂ ಯಾಕೆ ಹೀಗೆ? ನಾವು ಓದಿದ್ದು ಜ್ಞಾನಾರ್ಜನೆಗಲ್ಲವೇ? ದುಡ್ಡು ಸಂಪಾದಿಸುವುದೇ ಜೀವನದ ಪರಮ ಗುರಿಯೇ? ಈಗಿನ ಸಮಾಜದಲ್ಲಿ ಬರೀ ದುಡ್ಡಿಗೇ ಪ್ರಾಧಾನ್ಯ. ಯಾವ ಕೆಲಸ ಮಾಡಿದರೆ ಹೆಚ್ಚು ಸಂಪಾದನೆ ಮಾಡಬಹುದು ಎಂಬುದರತ್ತ ಪೋಷಕರ ಗಮನ ಹೊರತು, ತಮ್ಮ ಮಗ ಅಥವಾ ಮಗಳ ಆಸೆ, ಆಸಕ್ತಿಗಳ ಬಗ್ಗೆ ಯಾವ ಯೋಚನೆಯನ್ನೂ ಮಾಡುವುದಿಲ್ಲ' ಎಂಬುದು ರವಿಯ ಕೊರಗು. ಈ ಬಗೆಯ ಸಾಮಾಜಿಕ ಧೋರಣೆಯಿಂದ ಇಂತಹ ಹುಡುಗರು ಖಿನ್ನತೆಗೆ ಒಳಗಾಗುತ್ತಾರೆ. ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.
ಪ್ರಕರಣ 3
ಮಂಜುಳಾ ತುಂಬಾ ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಆದರೆ ಕಾಲೇಜಿಗೆ ಸೇರಿದ ಮೇಲೆ ಸಂಪ್ರದಾಯಕ್ಕೂ, ಈಗಿನ ಸ್ವಚ್ಛಂದ ಜೀವನಶೈಲಿಗೂ ಇರುವ ವ್ಯತ್ಯಾಸವನ್ನು ಸರಿಯಾಗಿ ತಿಳಿಯದೆ ದ್ವಂದ್ವಕ್ಕೆ ಒಳಗಾದವಳು. ಚುರುಕು ಬುದ್ಧಿಯ ಹುಡುಗಿಯಾದರೂ ಈ ಗೊಂದಲಗಳಿಂದಾಗಿ ಏಕ ಮನಸ್ಸಿನಿಂದ ಯಾವ ಕೆಲಸವನ್ನೂ ಮಾಡಲಾರಳು. ಅವಳ ಮನಃಸ್ಥಿತಿಯನ್ನು ಅರಿಯದೆ ಬೇರೆ ಮಕ್ಕಳ ಜೊತೆ ಹೋಲಿಸಿ ಇವಳನ್ನು ಹೀಯಾಳಿಸುವ ಬಂಧು ವರ್ಗ. ಅದರಿಂದಾಗಿ ಬೆಳೆಯುತ್ತಿರುವ ಕೀಳರಿಮೆ ಅವಳ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.

ಈ ಮೂರೂ ಮಂದಿಯ ಮಾನಸಿಕ ವಿಶ್ಲೇಷಣೆಯಿಂದ ತಿಳಿದದ್ದು ಬಹಳ. ಯಾವಾಗಲೂ ಕಾಲ ಕೆಟ್ಟಿದೆ, ಹುಡುಗರು ಕೆಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುವ ಹಿರಿಯರು, ಮಕ್ಕಳ ಈ ಸ್ಥಿತಿಗೆ ತಾವೇ ಪರೋಕ್ಷವಾಗಿ ಕಾರಣ ಎಂಬುದನ್ನು ತಿಳಿಯುವುದಿಲ್ಲ. ಹೀಗಾಗಿ ಹೆತ್ತವರು ಮತ್ತು ಉಪಾಧ್ಯಾಯರಿಗೆ ಮೊದಲು ಆಪ್ತ ಸಮಾಲೋಚನೆ ಆಗಬೇಕು. ನಂತರ ಮಕ್ಕಳಿಗೆ ಅದನ್ನು ಕೊಡಿಸುವ ಬಗ್ಗೆ ಯೋಚಿಸಬೇಕು.
ಚಿಕ್ಕ ಸಂಸಾರ ಚೊಕ್ಕ ಸಂಸಾರ ಎಂಬುದೇನೋ ಹೌದು. ಆದರೆ ಮಕ್ಕಳನ್ನು ನಾವು ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಒಡನಾಟದಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆಯೇ? ದುಡ್ಡಿನಿಂದ, ವಸ್ತುಗಳಿಂದ ಈ ಪ್ರೀತಿ, ಒಡನಾಟದ ಸಂತೋಷವನ್ನು ಕೊಡಲು ಸಾಧ್ಯವೇ? ಒಂಟಿ ಮಕ್ಕಳು ಅನಿವಾರ್ಯವಾಗಿ ಚಟಗಳ ದಾಸರಾದರೆ, ವ್ಯಸನಗಳಿಗೆ ಬಲಿಯಾದರೆ ಅದರಲ್ಲಿ ಹಿರಿಯರ ಪಾತ್ರವೂ ಎಷ್ಟು ದೊಡ್ದದಿರುತ್ತದೆ ಅಲ್ಲವೇ?
ಅದೇ ರೀತಿ ರವಿಯ ವಿಷಯದಲ್ಲಿ ಆದಂತೆ, ಇಷ್ಟವಿಲ್ಲದ್ದನ್ನು ಓದಿ, ಇಷ್ಟವಿಲ್ಲದ ಕೆಲಸ ಮಾಡುತ್ತಾ ಇರುವ ಎಷ್ಟು ಹುಡುಗರು ಮಾನಸಿಕವಾಗಿ ಬಳಲುತ್ತಿದ್ದಾರೋ? ಇನ್ನು ಮಂಜುಳಾ. ಮನೆಯ ಪ್ರಪಂಚಕ್ಕೂ ಹೊರಗೆ ನೋಡುವ ಪ್ರಪಂಚಕ್ಕೂ ಇರುವ ವ್ಯತ್ಯಾಸ, ಎರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ತೊಳಲಾಡುತ್ತಿರುವ ಅವಳಂತಹ ಮುಗ್ಧ ಜೀವಿಗಳೆಷ್ಟೋ.
ಯಾವಾಗಲೂ ಎಲ್ಲ ಸಮಸ್ಯೆಗಳಿಗೂ ಮಕ್ಕಳನ್ನೇ ಗುರಿ ಮಾಡುವ ಸಮಾಜ ಕಣ್ಣು ತೆರೆಯಬೇಕು. ಹುಡುಗರು- ಹಿರಿಯರ ನಡುವೆ ಮುಕ್ತವಾಗಿ ಮಾತನಾಡುವ ಅವಕಾಶ ಕಲ್ಪಿಸಬೇಕು. ಅದರಲ್ಲೂ ಹಿರಿಯರು ತೆರೆದ ಮನಸ್ಸು ಮತ್ತು ಹೃದಯದಿಂದ ಸಮಸ್ಯೆಗಳ ವಿಶ್ಲೇಷಣೆ ಮಾಡಬೇಕು. ಎರಡು ಪೀಳಿಗೆಗಳ ದೃಷ್ಟಿಯಿಂದಲೂ ಈ ಕಾರ್ಯ ಅಗತ್ಯವಾಗಿ ಆಗಲೇಬೇಕು.
ಕೃಪೆ:ಪ್ರಜಾವಾಣಿ

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website