ಮಾಳ ಕಾಡಿನ ರಸಕವಳ,ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

ಮಾಳ ಕಾಡಿನ ರಸಕವಳ


ಮಾಳ ಪಶ್ಚಿಮ ಘಟ್ಟದ ತಡಿಯ ಪುಟ್ಟ ತೊಟ್ಟಿಲು, ಬಗಲಲ್ಲಿ ಸಾವಿರಾರು ಜೀವರಾಶಿಗಳನ್ನು, ಪುಟ್ಟ ತೊರೆಗಳನ್ನು ಹೊತ್ತುಕೊಂಡ ಕಾರ್ಕಳ ತಾಲೂಕಿಗೆ ನವಿಲುಗರಿಯಂತಿರೋ ಮಾಳ ಸೌಂದರ್ಯರಾಶಿಗೆ ಅಣಿಯಿಲ್ಲದ ಪುಟ್ಟ ಗ್ರಾಮ. ಮಲೆನಾಡಿನ ಹಸಿರ ಕೇಶ ರಾಶಿಯ ತಪ್ಪಲ್ಲಲ್ಲಿರೋ ಮಾಳದ ಕಾಡ ದಾರಿ, ನೀರ ಹಾದಿ, ಹಸಿರಬೆಟ್ಟ ಎಲ್ಲವೂ ಚಾರಣಿಗರ ಸ್ವರ್ಗ. ಕಾಡಲ್ಲಿ ಪ್ರಕೃತಿಯೊಂದಿಗೆ ಕಾಡೇಗೂಡೇ ಆಡಬೇಕೆನ್ನುವವರಿಗೆ ಮಾಳದ ಚಾರಣ ಬಿಟ್ಟೆನೆಂದರೂ ಬಿಡದ ಮಾಯೆ. ಕಣ್ಣು ಹಾಸಿದ್ದಲ್ಲಿ ಕಾಡುವ ಗಿಡಗಂಟಿಗಳನ್ನು ದಾಟುತ್ತಾ, ಹಾದಿಯೇ ಕಾಣದ ಹುಲ್ಲುರಾಶಿಗಳ ನಡುವೆ ದಾರಿ ಮಾಡಿಕೊಳ್ಳುತ್ತಾ, ಹಕ್ಕಿಗಳ ಕೊರಳ ದನಿಗೆ ತಲೆದೂಗುತ್ತಾ, ಮಾಳದ ಕಾಡ ಹಾದಿ ಹೊಕ್ಕರೆ ಮನಸ್ಸು ನಿರಾಳವಾಗುತ್ತದೆ. ಹರಿಯುವ ಜಲಪಾತದ ವಾದ್ಯ ಸಂಗೀತ ಕಿವಿಗೆ ದಯಪಾಲಿಸುತ್ತದೆ.



ಮಾಳ ಕಾಡಿನಲ್ಲಿ ಮೂರುದಿಕ್ಕಿಗೆ ಮೂರು ಜಲಪಾತಗಳು ಬಳಕುತ್ತಾ ಹರಿಯುತ್ತಿರುವುದು ಹಸಿರ ಒಲೆಯಲ್ಲಿ ಕೆನೆ ಹಾಲು ಉಕ್ಕಿದಂತೆ ಕಾಣುತ್ತದೆ. ದಾನಗುಂಡಿ ಜಲಪಾತ, ಕುರೆಂಗಲ್ ಜಲಪಾತ, ಪಶ್ಚಿಮಘಟ್ಟದ ಮೇಲ್ಮೈಯಿಂದ ಜಿಗಿಜಿಗಿದು ಮಲೆನಾಡಿಗೆ ಸೇರುತ್ತದೆ. 500-600 ಅಡಿ ಎತ್ತರದಿಂದ ಕುಣಿಯುತ್ತಾ ಬಂಡೆಗಲ್ಲಿಗೆ ನೂರ್ಮಡಿದು ಬಂದು ರಾಚುವ ದಾನಗುಂಡಿಯ ಧ್ಯಾನಕ್ಕೆ ಎದೆಯರಳಿ ಐಸ್ ಕ್ಯಾಂಡಿಯಾದೀತು. ಕೂಗಳತೆ ದೂರದಿಂದ ನೀರಧಾರೆಯನ್ನು ನೋಡುತ್ತಿದ್ದರೆ ನಿಜಕ್ಕೂ ದುಂಡುಮಲ್ಲಿಗೆ ಮಳೆಗರೆಯುತ್ತಿದೆಯೇನೋ ಅನ್ನಿಸಿ ಒಂದರೆ ಕ್ಷಣ ನಿರುಮ್ಮಳವಾಗಿ, ಮಲ್ಲಿಗೆ ಮುಟ್ಟಲೆಂದು ಹೋದರೆ ಅನೂಹ್ಯ ಜಲಪಾತದ ನಡುವೆ ಮೈ ಕುಣಿಸಿ ಮಹಾಮಜ್ಜನ ಮುಗಿಸಿಯೇ ಆಚೆಗೆ ಬರಬೇಕಷ್ಟೆ. ಇಡೀ ಚಾರಣವನ್ನೇ ಕಣ್ಣೊಳಗಿನ ಮೆಮೋರಿ ಕಾರ್ಡಿನಲ್ಲಿ ಶಾಶ್ವತವಾಗಿಸಿಬಿಡುವ ಈ ಗಿರಿಕುವರಿ ಹಸಿರಿನ ಪ್ರೀತಿಯ ಒರತೆಯಿಂದ ಹರಿಯುತ್ತಿರುವ ಮದುವಣಗಿತ್ತಿ.



ಕಾಡಿನ ಸೆರಗಿನಲ್ಲಿರುವುದರಿಂದ ಉನ್ಮತ್ತವಾದ ತಂಪು, ಪಕ್ಷಿಗಳ ಇಂಪು, ಏಕಾತಾನತೆಯಲ್ಲಿ ಕೂತು ದಣಿವಾರಿಸಿಕೊಳ್ಳುವುದಕ್ಕೆ ಹಾಸಿಗೆಯಾಗೋ ಬಂಡೆಗಲ್ಲುಗಳು ಚಾರಣಕ್ಕೆ ಮತ್ತಷ್ಟು ರೋಮಾಂಚನದ ಲಾಲಿ ಹಾಡುತ್ತದೆ. ಪಚ್ಚೆಯ ಹಾದಿಯನ್ನು, ದೂರದಲ್ಲಿ ಪಶ್ಚಿಮಘಟ್ಟದ ಹಸಿರ ಚೆಲುವು ನೋಡಿ ಚಾರಣದ ಹುಮ್ಮಸ್ಸೇ ಬದಲಾದೀತು. ಜಲಪಾತದ ಆಚೆಗೆ ಕಾಡಜನರೇ ನಿರ್ಮಿಸಿದ ಅಡಿಕೆ ಮರದ ತೂಗು ಸೇತುವೆ ಮೇಲೆ ನಿಂತು ಸುತ್ತಲೂ ನೋಡುವ ಖುಷಿಯೇ ಬೇರೆ. ಬಾಯಾರಿ ಗಂಟಲು ಒಣಗಿದರೆ ಜಲಪಾತದ ನೀರು ಅಮೃತ. ಮಾಳದಿಂದ ಸುಮಾರು 7 ಕಿಮೀ ದೂರದಲ್ಲಿ ಗಂಗಾಮೂಲ ಎಂಬ ಪವಿತ್ರ ಕ್ಷೇತ್ರವಿದೆ ಗಂಗಾಮೂಲ ಎಂದರೆ ಗುಹೆ. ಇದು, ತುಂಗಾ ಹಾಗೂ ಭದ್ರಾನದಿಗಳ ಉಗಮ ಸ್ಥಾನವಾದ್ದರಿಂದ ಅಲ್ಲಿಯೂ ಕಾಡ ಹಾದಿಯ ಮೂಲಕ ಸಾಗಿ, ಪವಿತ್ರ ತೀರ್ಥ ಸಂಗಮ ಕಾಣಬಹುದು.



ಹೋಗೋದು ಹೇಗೆ?
ಕಾರ್ಕಳದ ಮಾಳಕ್ಕೆ ಬೆಂಗಳೂರಿನಿಂದ ಸುಮಾರು 390ಕಿಮೀ ದೂರ ಬೆಂಗಳೂರಿನಿಂದ ರೈಲು ಮಾರ್ಗವಾಗಿ ಉಡುಪಿಗೆ ಬಂದರೆ ಉಡುಪಿಯಿಂದ ಕಾರ್ಕಳದ ಕಡೆಗೆ ಖಾಸಗಿ ಬಸ್ಸುಗಳು ಓಡಾಡುತ್ತವೆ. ಕಾರ್ಕಳದಿಂದ ಮಾಳಕ್ಕೆ ಹೋಗುವ ಬಸ್ಸು, ಟ್ಯಾಕ್ಸಿ ಲಭ್ಯ. ಮಾಳದ ಸರ್ಕಾರಿ ಶಾಲೆ ಬಳಿ ಇಳಿದು ಮಾಳ ಫಾಲ್ಸ್ ದಾರಿ ಕೇಳಿದರೆ ಮಾಹಿತಿ ನೀಡುತ್ತಾರೆ.


ಪ್ರಸಾದ್ ಶೆಣೈ ಆರ್.ಕೆ


ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

ಮಲ್ಯಾಡಿಯಲ್ಲಿ ಪಕ್ಷಿಗಳ ಕಲರವ

ಉಡುಪಿ ಜಿಲ್ಲೆಯ ಕುಂದಾಪುರದಿಂದ 9 ಕಿಮೀ ದೂರದಲ್ಲಿರುವ ಮಲ್ಯಾಡಿಯಲ್ಲಿ ವಿದೇಶಗಳಿಂದ ನೀರಿನ ಹಕ್ಕಿಗಳು ವಲಸೆ ಬರುತ್ತವೆ. ವಿವಿಧಜಾತಿಯ ಹಲವು ಬಣ್ಣದ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಬೆಳ್ಳಕ್ಕಿಗಳು, ಕೊಳದ ಬಕ, ಜಾನು ಬೆಳ್ಳಕ್ಕಿ, ವಿವಿಧ ಜಾತಿಯ ಬಕ ಪಕ್ಷಿಗಳು, ಬಿಳಿ ತಲೆ ಗಿಡುಗ, ಕತ್ತರಿ ಬಾಲದ ಕಾಜಾಣ, ಮಿಂಚುಳ್ಳಿ,ಬಿಳಿ ಎದೆ ಇರುವ ಮಿಂಚುಳ್ಳಿ, ನೆಲಗುಬ್ಬಿ, ನಾಮ ಕೋಳಿ, ಗೊರವಂಕ, ಬಿಳಿ ಬಾತು, ಪಿಕಳಾರ ಸೇರಿದಂತೆ ಹಲವು ಜಾತಿಯ ಪಕ್ಷಿಗಳನ್ನು ನೋಡಬಹುದು. ಆಹಾರ, ನೀರು ಹುಡುಕಿಕೊಂಡು ವಲಸೆ ಬರುವ ಪಕ್ಷಿಗಳು ಮಲ್ಯಾಡಿಯ ಗದ್ದೆಗಳಲ್ಲಿ, ಅಲ್ಲಲ್ಲಿ ಹೊಂಡದಲ್ಲಿ ನಿಂತ ನೀರಿನಲ್ಲಿ ಸಿಗುವ ಮೀನುಗಳನ್ನು ಆಹಾರವಾಗಿಸಿಕೊಳ್ಳುತ್ತವೆ. ಹಾಗಾಗಿ ನಾನಾ ಬಗೆಯ ಪಕ್ಷಿಗಳು ಒಂದೇ ಕಡೆ ಠಿಕಾಣಿ ಹೂಡುತ್ತವೆ. ಅದರಿಂದಾಗಿಯೇ ಮಲ್ಯಾಡಿಯಲ್ಲೊಂದು ಪಕ್ಷಿಧಾಮ ನಿರ್ಮಾಣಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಹೆಚ್ಚಿದೆಯಂತೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದಲೇ ಪಕ್ಷಿಗಳು ವಲಸೆ ಬರಲು ಆರಂಭಿಸುತ್ತವೆ ಮತ್ತು ಮಾರ್ಚ್ ಕೊನೆಯವರೆಗೂ ಇಲ್ಲಿಯೇ ಆಶ್ರಯ ಪಡೆಯುತ್ತವೆ. ಇನ್ನುಳಿದಂತೆ ಇಲ್ಲಿ ಸ್ಥಳೀಯ ಪಕ್ಷಿಗಳನ್ನು ವರ್ಷಪೂರ್ತಿ ನೋಡಬಹುದು. ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ ಸೆಪ್ಟೆಂಬರ್‌ನಿಂದ ಮಾರ್ಚ್.


ಹೋಗುವುದು ಹೇಗೆ?

ಬೆಂಗಳೂರಿನಿಂದ 430 ಕಿಮೀ, ಮೈಸೂರಿನಿಂದ 334 ಕಿಮೀ ದೂರದಲ್ಲಿದೆ. ಹತ್ತಿರದ ರೈಲು ನಿಲ್ದಾಣ ಕುಂದಾಪುರ, ಮಂಗಳೂರು ಹತ್ತಿರದ ವಿಮಾನ ನಿಲ್ದಾಣ.

ಕೃಪೆ:ವಿಜಯಕರ್ನಾಟಕ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website