ಪ್ರಥಮ ಅವಧಿಯಲ್ಲೇ ಮೂವರು ಮುಖ್ಯಮಂತ್ರಿ


ಮೆಲುಕು
ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ ಸಿಎಂ ಆಗಿದ್ದರು

ಭಾರತದ ಸಂವಿಧಾನ ರಚನೆ ನಂತರ ಪ್ರಥಮ ಬಾರಿಗೆ 1952ರ ಮಾರ್ಚ್ 27ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಿತು. 80 ಸದಸ್ಯರು ಜನರಿಂದ ಆಯ್ಕೆಯಾದರು. ಭಾರತೀಯ ಜನತಾಪಕ್ಷದಿಂದ 74 ಸದಸ್ಯರಿದ್ದರು. ಆದ್ದರಿಂದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿ ಕೆಂಗಲ್ ಹನುಮಂತಯ್ಯ 1952ರ ಮಾರ್ಚ್ 30ರಂದು ಅಧಿಕಾರ ಸ್ವೀಕರಿಸಿದರು.


ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆಂಗಲ್ ಹನುಮಂತಯ್ಯ ರಾಜ್ಯದ ವಿಧಾನಸೌಧ ನಿರ್ಮಾಣದ ಮೂಲ ಪುರುಷ. ಇವರ ಸಭಾನಾಯಕತ್ವದಲ್ಲಿ ಪ್ರಥಮ ವಿಧಾನಸಭೆ ಅಧಿವೇಶನ ಬೆಂಗಳೂರಿನ ಹಳೆಯ ಸಾರ್ವಜನಿಕ ಕಟ್ಟಡದ ಸಮ್ಮೇಳನ ಸಭಾಂಗಣದಲ್ಲಿ ಅಂದರೆ ಇಂದಿನ ಹೈಕೋರ್ಟ್ ಕಟ್ಟಡದಲ್ಲಿ 1952ರ ಜೂನ್ 18ರಂದು ಬೆಳಗ್ಗೆ 11 ಗಂಟೆಗೆ ನಡೆಯಿತು. ಚನ್ನಪಟ್ಟಣದಿಂದ ಆಯ್ಕೆಯಾಗಿದ್ದ ವಿ. ವೆಂಕಟಪ್ಪ ಅವರನ್ನು ಗೌರವ ಸ್ಪೀಕರ್ ಅನ್ನಾಗಿ ನೇಮಿಸಲಾಯಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಆಯ್ಕೆಯಾದ ಎಲ್ಲ ಸದಸ್ಯರಿಗೂ ವೆಂಕಟಪ್ಪ ಅವರೇ ಪ್ರತಿಜ್ಞಾವಿಧಿ ಬೋಧಿಸಿದ್ದರು. ನಂತರ ನಡೆದ ಸ್ಪೀಕರ್ ಸ್ಥಾನದ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡ ಹಾಗೂ ಎಚ್. ಸಿದ್ದಯ್ಯ ಸ್ಪರ್ಧಿಸಿದ್ದರು.


74 ಮತ ಪಡೆದ ಎಚ್. ಸಿದ್ದಯ್ಯ ಪ್ರಥಮ ಸ್ಪೀಕರ್ ಎನಿಸಿದರು. ಜಿ.ಎಸ್. ವೆಂಕಟರಮಣ ಅಯ್ಯರ್ ಕಾರ್ಯದರ್ಶಿಯಾಗಿದ್ದರು. ಪ್ರಥಮ ವಿಧಾನಸಭೆಯ ಅವಧಿ 1952ರ ಜೂನ್ 18ರಿಂದ 1957ರ ಮಾರ್ಚ್ 31. ಆದರೆ, ಈ ಅವಧಿಯಲ್ಲೇ ರಾಜ್ಯ ಮೂವರು ಮುಖ್ಯಮಂತ್ರಿಗಳನ್ನು ಕಂಡಿತು. 1956ರಲ್ಲಿ ಭಾಷಾವಾರು ರಾಜ್ಯ ರಚನೆ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇರಿಸಿದರು. ಹೀಗಾಗಿ 1956ರ ಆಗಸ್ಟ್ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇವರ ಸ್ಥಾನದಲ್ಲಿ ತೀರ್ಥಹಳ್ಳಿ ಕ್ಷೇತ್ರದ ವಿಜೇತ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಮೂರು ತಿಂಗಳ ಅವಧಿ ಪೂರ್ಣಗೊಳಿಸುವ ಮುನ್ನವೇ ಅಂದರೆ 1956ರ ಅಕ್ಟೋಬರ್ 31ರಂದು ರಾಜಿನಾಮೆ ನೀಡಬೇಕಾಯಿತು. ರಾಜ್ಯ ಏಕೀಕರಣ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು. 1956ರ ನವೆಂಬರ್ 1ರಂದು ಅಧಿಕಾರ ಸ್ವೀಕರಿಸಿದ ಎಸ್. ನಿಜಲಿಂಗಪ್ಪ ರಾಜ್ಯದ ಪ್ರಥಮ ವಿಧಾನಸಭೆ ಅವಧಿಯನ್ನು ಅಂದರೆ 1957ರ ಮಾರ್ಚ್ 31ರವರೆಗೂ ಕಾರ್ಯನಿರ್ವಹಿಸಿದರು. ಎರಡನೇ ವಿಧಾಸಭೆಗೆ ಈ ಅವಧಿಯಲ್ಲೇ ಚುನಾವಣೆ ನಡೆಯಿತು. ಪ್ರಥಮ ವಿಧಾನಸಭೆಯ ಅವಧಿಯಲ್ಲಿ ಒಟ್ಟು 269 ದಿನ ವಿಧಾನಸಭೆ ಅಧಿವೇಶನ ನಡೆಯಿತು.


-ಕೆರೆ ಮಂಜು

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website