ಆರಂಬೋಲ,ಮಥೆರಾನ್
ಅಲೆಗಳಿಗೆ ಅಬ್ಬರವಿಲ್ಲ. ಕಂಡಷ್ಟು ದೂರ ಮರಿಚೀಕೆ ಸೃಷ್ಟಿಸುವ ಧಾವಂತ
ಮರಳ ಹರಳಿಗಿಲ್ಲ. ತಂಗಾಳಿಗೆ ಬಿಸಿಲಿಗೂ ಬೇಲಿಯಾಗುವ ಬಯಕೆ. ಸಾಗರದ
ಉಪ್ಪಿಗೂ ಸಿಹಿಯಾಗುವ ಕನಸು.
ಇದು ಕೇವಲ ಕಲ್ಪನೆಯಲ್ಲ, ಕನಸಿನ ಮಾತೂ ಇಲ್ಲ. ವಾಸ್ತವವೇ ಹಾಗಿದೆ. ಬರೀ ಉಪ್ಪು ಅನ್ನುವ ಸಮುದ್ರದಲ್ಲೂ ಸಿಹಿನೀರಿದೆ. ಮರಳಗುಡ್ಡೆಯ ಮೇಲೂ ಹಸಿರಿನ ಗಿರಿ ಇದೆ. ಇಂತಹದ್ದೊಂದು ಕಡಲ ಕಿನಾರೆಯ ಹೆಸರು ಆರಂಬೋಲ.
ಇದು ಪಣಜಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಇದು ಗೋವಾದ ಇತರೇ ಬೀಚ್ಗಳಿಗಿಂತ ಡಿಫರೆಂಟ್. ಉತ್ತರ ಗೋವಾದಲ್ಲಿರುವ ಇದು ಪ್ರಾಚೀನ ಮತ್ತು ಏಕಾಂತ ಬೀಚ್ ಅಂದೆನಿಸಿದೆ. ಗೇರು ಮರಗಳ ನಡುವೆ ಅಂಕುಡೊಂಕಾದ ರಸ್ತೆ ಮೂಲಕ ಸಂಚರಿಸುವಾಗ ಪ್ರಕೃತಿ ಸೌಂದರ್ಯ ಆಸ್ವಾದನೆಯಲ್ಲಿ ನೀವು ಮುಳುಗಿ ಹೋಗುತ್ತೀರ.
ಸಮುದ್ರದ ಸುತ್ತಲೂ ಹಸಿರು ಗಿಡಗಳಿಂದ ಮುಚ್ಚಿದ ಗುಡ್ಡ, ನೂರಾರು ವರ್ಷಗಳಿಂದ ನೀರಿನ ನಡುವೆ ಇರುವ ಬೃಹತ್ ಕಲ್ಲಿನ ಬಂಡೆಗಳು ಸಮುದ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಇದು ಕಲ್ಲು ಹಾಗೂ ಮರಳಿನಿಂದ ತುಂಬಿದ ಬೀಚ್ ಅಂದೆನಿಸಿಕೊಂಡಿದೆ. ಒಟ್ಟಾರೆ ನೀರು, ನಿಸರ್ಗದ ನಡುವೆ ಆರಾಮವಾಗಿ ಕಾಲ ಕಳೆಯುವ ತಾಣವಿದು.
ಸಿಹಿ ನೀರಿನ ಸರೋವರ
ಗೋವಾದ ಉತ್ತರಕ್ಕೆ ಕಲಂಗುಟ ಮತ್ತು ಭಾಗಾ ತೀರಗಳ ಆಚೇಗೆ ಆರಂಬೋಲ ಕಡಲ ತೀರ ನಿಮ್ಮನ್ನು ಸೆಳೆಯುತ್ತದೆ. ಶಾಂತಿ ಪ್ರಿಯರ ತಾಣ ಇದು. ಹೆಚ್ಚು ಅಬ್ಬರವಿಲ್ಲದ ಸಮುದ್ರವೂ ಶಾಂತವಾಗಿ ಕಾಣುತ್ತದೆ. ವಿಶೇಷ ಅಂದರೆ ಈ ಕಡಲ ತೀರದ ಪಕ್ಕದಲ್ಲಿ ಶುದ್ಧ ನೀರಿನ ಸರೋವರ ಇದೆ. ಈ ಸ್ಥಳ ಸಿಹಿ ಹಾಗೂ ಉಪ್ಪು ನೀರಿನ ಸಂಗಮ. ಈ ಸರೋವರದ ಬಳಿ ಮಣ್ಣನ್ನು ದೇಹಕ್ಕೆ ಹಚ್ಚಿಕೊಂಡರೆ ಸೌಂದರ್ಯ ವೃದ್ಧಿಯಾಗುತ್ತದೆ ಅನ್ನುವ ನಂಬಿಕೆ ಇದೆ. ಇಲ್ಲಿ ನೀವು ಈಜಬಹುದು.
ಆಕರ್ಷಣೆ
ಸಮುದ್ರದ ಸಮೀಪ ಮತ್ತೊಂದು ಆಕರ್ಷಣೆ ಅಂದರೆ ಮನಿಸ್ಟೋನ್ ಶಿಲ್ಪ. ಡಾಲ್ಫಿನ್ ನೋಡಲು ದೋಣಿ ವ್ಯವಸ್ಥೆ ಇಲ್ಲಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಟ್ರೈ ಮಾಡಬಹುದು.
ಭಾರತೀಯ ನಾನಾ ಸಂಸ್ಕೃತಿಯನ್ನು ಬಿಂಬಿಸುವ ಆಭರಣ, ಉಡುಗೆಗಳನ್ನು ಇಲ್ಲಿ ಶಾಪಿಂಗ್ ಮಡಬಹುದು. ಬಟ್ಟೆ, ಜಂಕ್ ಜುವೆಲರಿ ಹಾಗೂ ವಿವಿಧ ಬಗೆಯ ಕರಕುಶಲ ವಸ್ತುಗಳನ್ನು ಖರೀದಿಸಬಹುದು.
ಆದ್ರೆ ನೀವು ಸಮುದ್ರ ತೀರಕ್ಕೆ ಹೋಗುತ್ತೀರ ಅಂದರೆ ಬಿಸಿಲಿನ ರಕ್ಷಣೆಗೆ ತಯಾರಾಗಬೇಕು. ಟೋಪಿ, ಸನ್ಸ್ಕ್ರೀನ್ ಲೋಷನ್ ನಿಮ್ಮ ಕೈಯಲ್ಲಿರಲಿ. ಕುಟುಂಬದ ಸದಸ್ಯರು, ಸ್ನೇಹಿತರು, ಹನಿಮೂನ್ಗೆ ಹೊರಟ ನವದಂಪತಿಯಷ್ಟೆ ಅಲ್ಲ, ಫೋಟೋಗ್ರಫಿಗೂ ಇದು ಸುಂದರ ತಾಣ.
ತಲುಪುವುದು ಹೇಗೆ
ಬೆಂಗಳೂರು, ಮುಂಬಯಿ, ದಿಲ್ಲಿಯಿಂದ ವಿಮಾನ ಮೂಲಕ ಪಣಜಿ ತಲುಪಬಹುದು. ಬೆಂಗಳೂರು, ಬೆಳಗಾವಿ, ಹೊಸಪೇಟೆ. ಹೈದರಾಬಾದ್ ಮಂದಿ ರೈಲಿನ ಮೂಲಕ ತಲುಪಬಹುದು.
ಬಸ್ಸಿನ ಮೂಲಕ ತಲುಪಬಹುದಾದರೂ ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಬೇಕಾದಷ್ಟು ಬಸ್ಗಳು ಪಣಜಿಗೆ ಇವೆ. ಅಲ್ಲಿಂದ ಪಂಜೀಮಗೆ ಹೋಗುವ ಬಸ್ಸಿನ ಮುಖಾಂತರ ಆರಂಬೋಲ ತಲುಪಬಹುದು. ಖಾಸಗಿ ವಾಹನಗಳಿದ್ದರೆ ಚಿಂತೆಯಿಲ್ಲ.
ಆಹಾರ
ಪ್ರಮುಖ ಹೋಟೆಲ್ಗಳೇನೂ ಇಲ್ಲ. ಆದ್ರೆ ಬೇಕಾದಷ್ಟು ರೆಸ್ಟೋರೆಂಟ್ಗಳಿವೆ.ಕಾಫಿ ಶಾಪ್ಗಳಿವೆ.ಇಟಲಿ, ಗೋವಾ ಸ್ಪೆಷಲ್ ತಿನಿಸುಗಳು ಲಭ್ಯ.
ವಸತಿ
ಆರೋಂಬಲಾ ಬೀಚ್ ಗೆಸ್ಟ್ಹೌಸ್, ಹಟ್ಗಳಿವೆ.
* ಶುಭಾ ವಿಕಾಸ್
ಮಥೆರಾನ್
ಮಥೆರಾನ್ ಅಂದರೆ ಎತ್ತರದ ಕಾಡು ಎಂದರ್ಥ. ಇದು ಮುಂಬೈನಿಂದ 90ಕಿಮೀ, ಪುಣೆಯಿಂದ 120ಕಿಮೀ ಹಾಗೂ ಸೂರತ್ನಿಂದ 320ಕಿಮೀ ದೂರದಲ್ಲಿದೆ. 1850ರಲ್ಲಿ ಇದನ್ನು ಇಂಗ್ಲೆಂಡ್ನ ಹ್ಯೂಜ್ ಮಾಲ್ಲೆಟ್ ಕಂಡುಹಿಡಿದರು. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ಇದನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದೆ. ಈ ಗಿರಿಧಾಮಲ್ಲಿ ವಾಹನಗಳನ್ನು ನಿಷೇಧಿಸಿದೆ. ಹಾಗಾಗಿಯೇ ಇದು ಇತರ ಸ್ಥಳಗಳಿಗಿಂತ ಭಿನ್ನ. ಒಂದರ್ಥದಲ್ಲಿ ಇದು ವಾಹನಗಳೇ ಇಲ್ಲದೆ ನೂರು ವರ್ಷಗಳ ಹಿಂದಿನ ಸ್ಥಿತಿಯನ್ನು ನೆನಪಿಸುತ್ತದೆ. ಮಥೆರಾನ್ ಬೆಟ್ಟದ ಸುತ್ತಮುತ್ತ ದಟ್ಟ ಅರಣ್ಯ, ಬೆಟ್ಟ, ಕಣಿವೆಗಳ ಅದ್ಭುತ ನೋಟ ಬೆರಗುಗೊಳಿಸುತ್ತದೆ. ಗಿರಿಧಾಮದಿಂದಲೇ ಸೂಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದು.
ಮಹಾರಾಷ್ಟ್ರದ ಎರಲ್ (Neral) ಹತ್ತಿರದ ನಗರ. ದಸ್ತುರಿ ನಾಕದಿಂದ ಮತೆರಾನ್ಗೆ 9ಕಿಮೀ ದೂರ. ಮಥೆರಾನ್ನಲ್ಲಿ ಕುದುರೆ ಹಾಗೂ ಕೈಗಾಡಿ ಸಿಗುತ್ತದೆ. ಬೇಸಿಗೆ ಕಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಇದಲ್ಲದೆ ಇಲ್ಲಿ ಇನ್ನೂ ಅನೇಕ ವ್ಯೆಪಾಯಿಂಟ್ಗಳಿವೆ. ಮಥೆರಾನ್ನಲ್ಲಿ ಹಳೆಯ ಕಾಲದ ಬ್ರಿಟಿಷರ ವಾಸ್ತುಶಿಲ್ಪವನ್ನು ಸಂರಕ್ಷಿಸಲಾಗಿದೆ. ರಾತ್ರಿ ಹೊತ್ತು ಗಿರಿಧಾಮದಿಂದ ನೋಡಿದರೆ ಮುಂಬೈಯಲ್ಲಿ ಬೆಳಗುವ ದೀಪಗಳು ಕಾಣಿಸುತ್ತವೆ.
ಹೋಗೋದು ಹೇಗೆ?
ಮಥೆರಾನ್ ಗಿರಿಧಾಮದ ಕೆಳಗೆ ಇರುವ ಎರಲ್ ಜಂಕ್ಷನ್ಗೆ ಪುಣೆ ಮತ್ತು ಮುಂಬೈಯಿಂದ ರೈಲು ಸಂಪರ್ಕವಿದೆ. ಅಲ್ಲಿಂದ ಜಿಗ್ಜಾಗ್ ಆಗಿ 21ಕಿಮೀ ಟಾಯ್ ರೈಲು ಮೂಲಕ ಪ್ರಯಾಣಿಸಬಹುದು. ಕಡಿದಾದ ಇಳಿಜಾರಿನಲ್ಲಿ ಹೋಗುವಾಗ ಅದ್ಭುತ ಕಣಿವೆಗಳನ್ನು ನೋಡಬಹುದು. ಮಥೆರಾನ್ಗೆ ಹೋಗುವ ದಾರಿಯಲ್ಲಿ ಜುಮ್ಮಾ ಪಟ್ಟಿ, ವಾಟರ್ಪೈಪ್, ಅಮನ್ ಲಾಡ್ಜ್ ಎಂಬ ಸಣ್ಣ ಕೇಂದ್ರಗಳು ಸಿಗುತ್ತವೆ. ಆದರೆ ಟಾಯ್ಟ್ರೇನ್ನ್ನು ಮೊದಲೇ ಮುಂಬೈ ಅಥವಾ ಪುಣೆಯಲ್ಲಿ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಮುಂಬೈಯಿಂದ ಎರಲ್ಗೆ 90ಕಿಮೀ. ಅಲ್ಲಿಂದ ಮಥೆರಾನ್ಗೆ 21ಕಿಮೀ. ಪುಣೆಯಿಂದ ಎರಲ್ಗೆ 120ಕಿಮೀ ದೂರ. ಬಸ್ ಮೂಲಕ ಮುಂಬೈ-ಎರಲ್-ಮಥೆರಾನ್ ತಲುಪಬಹುದು. ಹತ್ತಿರದ ಏರ್ಪೋರ್ಟ್ ಮುಂಬೈ. ಅಲ್ಲಿಂದ ಮಥೆರಾನ್ಗೆ 100ಕಿಮೀ ದೂರ.
ಅಲೆಕ್ಸಾಂಡರ್ ಪಾಯಿಂಟ್
ಇಳಿಜಾರಿನಲ್ಲಿ ಬಂಡೆಗಲ್ಲಿನ ಪಕ್ಕ ಇನ್ನೂ ಇಳಿಯುತ್ತ ಸಾಗಿದಂತೆ ಮತ್ತೆ ಮೇಲೆ ಏರುವ ಕೊರಚಲು ಪೊದೆಗಳ ಅಲೆಕ್ಸಾಂಡರ್ ಪಾಯಿಂಟ್. ಮಥೆರಾನ್ನಲ್ಲಿರುವ ಅದ್ಭುತ ದೃಶ್ಯವುಳ್ಳ ಪ್ರದೇಶವಾಗಿದ್ದು ಮಾಧವಜಿ ರಸ್ತೆಯಲ್ಲಿದೆ. ಕಾಡಿನ ಹಸಿರು, ಸರೋವರದ ಭವ್ಯತೆಯ ಮೆರುಗು ಕಾಣಿಸುತ್ತದೆ. ಅಲ್ಲಿಂದಲೇ ರಾಮಬಂಗ್ ಪಾಯಿಂಟ್. ಗರ್ಬತ್ ಪಾಯಿಂಟ್, ಚೌಕ್ ಪಾಯಿಂಟ್ ನೋಡಬಹುದು.
ಷಾರ್ಲೆಟ್ ಸರೋವರ
ಮಥೆರಾನ್ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಸರೋವರವಿದು. ಸರೋವರದ ಬಲಭಾಗಕ್ಕೆ ಪೈಸರ್ನಾಥ ದೇವಾಲಯ ಮತ್ತು ಲೂಸಿಯಾಪಾಯಿಂಟ್ ಮತ್ತು ಎಕೋ ಪಾಯಿಂಟ್ ಅನ್ನುವ ಎರಡು ಪ್ರಮುಖ ಪಿಕ್ನಿಕ್ ತಾಣಗಳಿವೆ. ಇವುಗಳಿಂದಾಗಿಯೇ ಷಾರ್ಲೆಟ್ ಸರೋವರಕ್ಕೆ ಮತ್ತಷ್ಟು ಕಳೆ ಬಂದಿದೆ.
ಶಿವಾಜಿ ಲ್ಯಾಡರ್
ಶಿವಾಜಿ ತನ್ನ ಆಳ್ವಿಕೆಯ ಕಾಲದಲ್ಲಿ ಬೇಟೆಯಾಡಲು ಹಾದು ಹೋಗುತ್ತಿದ್ದ ಹಾದಿಯನ್ನು ಶಿವಾಜಿ ಲ್ಯಾಡರ್ ಎಂದು ಕರೆಯುತ್ತಾರೆ. ಇದು ಮಥೆರಾನ್ ಕಣಿವೆಯ ಟ್ರೀ ಹಿಲ್ ಪಾಯಿಂಟ್. ಈ ದಾರಿಯು ಸಮೃದ್ಧ ಹಸಿರು ಕಾಡುಗಳಿಂದ ಕೂಡಿದ್ದು, ಇಲ್ಲಿ ಹಿತವಾದ ಗಾಳಿ ಬೀಸುತ್ತಿರುತ್ತದೆ.
ಶ್ರೀದೇವಿ ಅಂಬೆಕಲ್ಲು
Comments
Post a Comment