ಮಾಂದಾಲಪಟ್ಟಿ ಬೆಟ್ಟ,ಏಲಗಿರಿ,ತಡಿಯಂಡ ಮೋಳ್
ನಿಸರ್ಗದ ನೈಜ ಸೌಂದರ್ಯದ ಆಸ್ವಾದನೆಗೆ ಇಲ್ಲಿದೆ ಮಾಂದಾಲಪಟ್ಟಿ ಬೆಟ್ಟ
* ಸುಖೇಶ್ ಪಡಿಬಾಗಿಲು
ಗಾಳಿಪಟ ಚಿತ್ರವೂ ಭಟ್ಟರ ಯಶಸ್ಸಿನ ಚಿತ್ರಗಳ ಹಲವುಗಳಲ್ಲಿ ಒಂದು. ಈ ಚಿತ್ರದಲ್ಲಿ ಗಾಳಿಪಟ ಸೌಂದರ್ಯವನ್ನು ಮೆಚ್ಚಿದಷ್ಟೇ.. ಈ ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ಸಿನಿ ಪ್ರೇಕ್ಷಕರು ಮೆಚ್ಚಿದ್ದಾರೆ. ಮನಮೋಹಕ ಪ್ರಕೃತಿ ಸೌಂದರ್ಯವನ್ನು ಹೊಂದಿರು ಈ ಜಾಗವನ್ನು ತಾವೆಂದು ನೋಡಿಲ್ಲ ಎಂದು ಸಾಕಷ್ಟು ಪ್ರವಾಸಿ ಪ್ರಿಯರು ಹೇಳಿದ್ದೂ ಉಂಟು. ಬೆಟ್ಟಗುಡ್ಡಗಳ ಹಿನ್ನೆಲೆಯುಳ್ಳ ಅಂತಹ ಅದ್ಭುತ ಲೊಕೇಶನ್ ಅನ್ನು ಚಿತ್ರತಂಡ ಹುಡುಕಿತ್ತು. ಹೀಗಾಗಿ ಚಿತ್ರದ ಯಶಸ್ಸಿಗೆ ಕಥೆ, ನಿರ್ದೇಶನ, ಪಾತ್ರಧಾರಿಗಳಷ್ಟೇ ಈ ಬೆಟ್ಟ, ಗುಡ್ಡವೂ ಕಾರಣವಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಇಷ್ಟೆಲ್ಲ ಪೀಠಿಕೆಗೆ ಪ್ರವಾಸಿ ತಾಣದ ಪರಿಚಯ ಮಾಡುವುದೇ ಉದ್ದೇಶ. ಹೌದು. ಗಾಳಿಪಟ ಚಿತ್ರವು ತಯಾರಿಸಿರುವ ಈ ಬೆಟ್ಟಗುಡ್ಡಗಳ ತಪ್ಪಲು ಕೊಡಗಿನ ಒಂದು ಪ್ರವಾಸಿ ಕೇಂದ್ರ. ಅಷ್ಟು ಹೆಸರವಾಸಿಯಾಗದಿದ್ದರೂ, ಪ್ರಕೃತಿ ಪ್ರಿಯರಿಗೆ ಬಹುಮೆಚ್ಚುಗೆಯಾದ ಪ್ರದೇಶ. ಮಡಿಕೇರಿಯಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿ ಇರುವ ಈ ಪ್ರದೇಶಕ್ಕೆ ಸಾಕಷ್ಟು ಪ್ರವಾಸಿಗ ಭೇಟಿ ಕೊಟ್ಟು ತಮ್ಮ ಮನತಣಿಸಿಕೊಳ್ಳುತ್ತಾರೆ. ಅದುವೇ ಮಾಂದಾಲಪಟ್ಟಿ. ಸಿನಿಮಾದಲ್ಲಿ ಮುಗಿಲಪೇಟೆ ಎನ್ನುವ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿತ್ತು. ಆದರೆ, ನಿಜವಾದ ಹೆಸರು ಮಾಂದಾಲಪಟಿ.
ಕೊಡುಗು ಜಿಲ್ಲೆಯಲ್ಲಿರುವ ಅತ್ಯಂತ ಸುಂದರ ಪ್ರದೇಶಗಳಲ್ಲಿ ಇದೂ ಒಂದು. ಮಡಿಕೇರಿಯಿಂದ ಆಚೀಚೆ 20 ಕಿಲೋಮೀಟರ್ ದೂರದಲ್ಲಿ ಬೆಟ್ಟಗಳ ಸಾದು ಹಾದುಹೋಗುತ್ತದೆ. ಪುಷ್ಪಗಿರಿ ವನ್ಯಧಾಮಕ್ಕೆ ಸೇರಿರುವ ಈ ಪ್ರದೇಶಕ್ಕೆ ಸೀದಾ ಎದ್ದು ಹೋಗುವ ಹಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆಯ ಪೂರ್ವಾನುವತಿಯಂತೂ ಬೇಕೆ ಬೇಕು. ಮಡಿಕೇರಿಯಿಂದ ಸೋಮವಾರಪೇಟೆ ರಸ್ತೆಯಲ್ಲಿ ಸಾಗಿದರೆ, ಮಕ್ಕಂದೂರು ಎನ್ನುವ ಸ್ಥಳ ಸಿಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ರಸ್ತೆ ಮಾರ್ಗದಲ್ಲಿ ಸಾಗಿದರೆ ಮಾಂದಲಪಟ್ಟಿಗೆ ತಲುಪುವುದಕ್ಕೆ ಸಾಧ್ಯ. ಕುಕ್ಕೆ ಸುಬ್ರಹ್ಮಣ್ಯದಿಂದ ಇಲ್ಲಿಗೆ ಕಾಡು ಹಾದಿಯೂ ಇದೆ ಎಂದು ಹೇಳಲಾಗುತ್ತಿದೆ. ಆದರೆ, ನಗರ ಪ್ರದೇಶದಿಂದ ಸಾಗುವ ಪ್ರವಾಸಿಗರಿಗೆ ಸೂಕ್ತ ಮಾಹಿತಿ ಇಲ್ಲದೆ ಈ ರಸ್ತೆಯಲ್ಲಿ ಬರುವುದು ಸ್ವಲ್ಪ ತ್ರಾಸದ ಕೆಲಸ. ಹೀಗಾಗಿ ಮುಖ್ಯವಾಹಿನಿಯ ಪ್ರಯಾಣವೇ ಸುಖ.
ಈ ಬೆಟ್ಟಗಳಿಗೆ ಹೋಗುವ ದಾರಿಯಲ್ಲಿನ ಅನುಭವ ಕೂಡ ಚೆನ್ನಾಗಿಯೇ ಇರುತ್ತದೆ. ಕಾಫಿ, ಏಲಕ್ಕಿ ತೋಟಗಳ ಸಾಲು ಸಾಲು ಮತ್ತು ಸಣ್ಣ ಸಣ್ಣ ತೊರೆ, ಹೊಳೆಗಳು ಮನಸ್ಸಿಗೆ ಆರಂಭದಲ್ಲಿಯೇ ಮುದ ನೀಡುತ್ತದೆ. ಹೀಗೆ ಸಾಗುತ್ತ ಕೊನೆಯಲ್ಲಿ ಸಿಗುವುದೇ ಮಾಂದಲಪಟ್ಟಿ. ಕೆಲವು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇರಲಿಲ್ಲ. ಗ್ರಾಮಸ್ಥರು ದನ ಮೇಯಿಸಲು ಹೋಗುತ್ತಿದ್ದ ಪ್ರದೇಶವೂ ಆದಾಗಿತ್ತು. ಆದರೆ, ಕಾಲಕ್ರಮೇಣ ಪ್ರವಾಸಿ ತಾಣವಾಗಿ ಮಾರ್ಪಟ್ಟ ಬಳಿಕ ರಸ್ತೆ ಸಂಪರ್ಕವೂ ದೊರೆಯಿತು ಹೀಗಾಗಿ ಬೆಟ್ಟದ ಬುಡಕ್ಕೆ ತಲುಪುದು ದೊಡ್ಡ ವಿಷಯವೇನಲ್ಲ.
ಪ್ರಕೃತಿ ರಮಣೀಯ:
ಇದು ಪ್ರಕೃತಿ ಪ್ರಿಯರ ಪ್ರೀತಿಯ ತಾಣವಾಗಿದ್ದರೂ, ಇಲ್ಲಿಗೆ ಜಾಸ್ತಿ ಜನರು ಬರುವುದು ಕಡಿಮೆ. ಆಗೀಗ ಕೆಲವು ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಲ್ಲದಿದ್ದರೆ, ಅತ್ಯಂತ ಪ್ರಶಾಂತವಾದ ತಾಣವೆಂದೇ ಹೇಳಬಹುದು. ಬೆಟ್ಟದ ಹತ್ತಿರದವರೆಗೆ ಮಾತ್ರ ಕಾರು ಅಥವಾ ಇನ್ಯಾವುದೇ ವಾಹನಗಳಲ್ಲಿ ಹೋಗಬಹುದು. ಮಣ್ಣಿನ ಕಚ್ಚಾರಸ್ತೆಗಳು ಸಿಕ್ಕಿದ ಮೇಲೆ ವಾಹನಗಳ ಸಂಚಾರ ಇರುವುದಿಲ್ಲ. ನಡಿಗೆಯಲ್ಲೇ ಸಾಗಿ ಬೆಟ್ಟದ ತುತ್ತ ತುದಿಗೆ ತಲುಪುದಕ್ಕೆ ಸಾಧ್ಯವಿದೆ.
ಸ್ಥಳೀಯರಿಗೆ ಈ ಜಾಗವು ಚಿರಪರಿಚಿತ ವಾಗಿರುವುದಿರಿಂದ ತಮ್ಮ ಜೀಪನ್ನು ಚಲಾಯಿಸುವುದನ್ನು ಕಾಣಬಹುದು. ಆದರೆ, ನಾವು ಆ ಸಾಹಸಕ್ಕೆ ಕೈ ಹಾಕಿದರೆ, ಮಧ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುದು ಖಚಿತ. ಹೀಗಾಗಿ ಕಲ್ಲು, ಮುಳ್ಳುಗಳ ಕಾಲು ದಾರಿಯನ್ನು ಅನುಸರಿಸಿದರೆ ಪ್ರಕೃತಿಯ ನಿಜವಾದ ಸೌಂದರ್ಯದ ಜತೆಗೆ ಆರಾಮದಾಯಕ ಪ್ರವಾಸವನ್ನಾಗಿಯೂ ಮಾಡಬಹುದು. ಬೆಟ್ಟದ ತುತ್ತ ತುದಿಗೆ ತಲುಪುತ್ತಿದ್ದಂತೆ ನಿಮ್ಮ ಮನಸು ಪುಳಕಿತಗೊಳ್ಳುತ್ತದೆ. ಆಕಾಶವೇ ಕೈ ಗೆಟಕಿ ಬಿಡುತ್ತದೆ ಅನ್ನುವ ಭಾವ ಸೃಷ್ಟಿಯಾಗುತ್ತದೆ. ನಡು ಬೇಸಿಗೆಯ ವೇಳೆಯಲ್ಲೂ ಮೋಡ, ಮಂಜು ಮತ್ತು ಸಂಜೆಯ ಅದ್ಭುತ ಸೂರ್ಯಾಸ್ತದ ಪರಿಚಯವನ್ನು ಇಲ್ಲಿ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.
ಇಲ್ಲಿನ ಬೆಟ್ಟಗಳು ಒಂದಕ್ಕೊಂದು ಪೋಣಿಸಿದ ರೀತಿಯಲ್ಲಿ ಇದ್ದು, ಏರು, ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದಂತೆ ನಿಮ್ಮ ಆಯಾಸವೆಲ್ಲವೂ ಪರಿಹಾರವಾಗುತ್ತದೆ. ಪ್ರಕೃತಿಯ ಸಹಜ ಮೌನದೊಂದಿಗೆ ಸಾಗುತ್ತಿದ್ದ ಹಾಗೆ, ಯಾವುದೋ ಒಂದು ಭಾವವು ಸೃಷ್ಟಿಯಾಗುತ್ತದೆ. ಗಿಡ ಮರಗಳ ನಡುವಿನ ಹಾದಿಯು ಇದೇ ಜೀವನದ ಅಂತಿಮ ಗುರಿಯಾಗಿರಬಹುದು ಎನ್ನುವ ಭಾವನೆಯನ್ನೂ ತರುವುದುಂಟು. ಒಂದು ಮುಂಜಾನೆಯಿಂದ ಪ್ರಾರಂಭಗೊಂಡ ಈ ಪ್ರವಾಸವನ್ನು ಮುಗಿಸುವ ವೇಳೆ ಇನ್ನೊಮ್ಮೆ ಈ ಪ್ರದೇಶಕ್ಕೆ ಯಾಕೆ ಪ್ರವಾಸಕ್ಕೆ ಹೋಗಬಾರದು ಎಂದು ಅನಿಸುವುದು ಕೂಎ ಹೌದು.
ಶಾಂತಿಗೆಡಿಸಬೇಡಿ: ಮೊದಲಿಗೆ ಈ ಪ್ರವಾಸಿ ತಾಣವು ಅಷ್ಟು ಪ್ರಚಾರವನ್ನು ಪಡೆದುಕೊಂಡಿರಲಿಲ್ಲ. ಆದರೆ, ಸಿನಿಮಾ ನೋಡಿ ಮನಸೋತಿರುವ ಸಾಕಷ್ಟು ಜನರು ಇಲ್ಲಿಗೆ ಪ್ರವಾಸಕ್ಕೆ ಬರುವುದಕ್ಕೆ ಆರಂಭಿಸಿದ್ದಾರೆ. ಆದರೆ, ಸ್ಥಳೀಯರಿಗೆ ಈ ಪ್ರದೇಶವು ಯಥಾ ಸ್ಥಿತಿಯಲ್ಲಿ ಇರುವುದೇ ಇಷ್ಟ. ಹೆಚ್ಚು ಪ್ರವಾಸಿಗರು ಬಂದ ಹಾಗೆ ಇಲ್ಲಿನ ಶಾಂತಿ ಕೆಡುತ್ತದೆ. ಪ್ರಕೃತಿಯ ನಿಜವಾದ ಮೌನಕ್ಕೆ ಏಟು ಬೀಳುತ್ತದೆ ಎನ್ನುವ ಭಯ ಇದೆ. ಹೆಚ್ಚಿನ ಪ್ರವಾಸಿಗರು ಕೂಡ ಅದಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ. ಪೇಟೆಯಿಂದ ಬರುವಾಗ ತಂದಿರುವ ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಅನ್ನು ಇಲ್ಲಿ ಎಸೆದು ಹೋಗಿ ಪರಿಸರದ ಅಂದವನ್ನು ಕೆಡಿಸುತ್ತಿದ್ದಾರೆ. ಜತೆಗೆ ವಿಚಿತ್ರವಾಗಿ ಕಿರಿಚಾಡುತ್ತಾ ಆಸು ಪಾಸಿನಲ್ಲಿರುವ ಪ್ರಾಣಿ ಪಕ್ಷಿಗಳ ನೆಮ್ಮದಿಗೂ ಭಂಗ ತರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇದ್ದೊಂದು ಉತ್ತಮ ತಾಣವೂ ಹಾಳಾಗಿ ಹೋಗಬಹುದು ಎನ್ನುವ ಭಯ ಗ್ರಾಮಸ್ಥರದು.
ಹೇಗೆ ಹೋಗಬಹುದು:
ಬೆಂಗಳೂರು ಮತ್ತು ಮಂಗಳೂರಿರು ವಿಮಾನ ನಿಲ್ದಾಣವಿದೆ. ಎರಡೂ ನಗರಗಳಿಂದ ಸಾರಿಗೆ ಮತ್ತು ಖಾಸಗಿ ಬಸ್ಗಳ ವ್ಯವಸ್ಥೆ ಇದೆ. ಮಡಿಕೇರಿ ಸಮೀಪದ ಪಟ್ಟಣ. ಬಸ್ ಮೂಲಕ ಹೋಗುವರು ಅಲ್ಲಿಂದಲೇ ಟ್ಯಾಕ್ಸಿ ಹಿಡಿದರೆ ಉತ್ತಮ. ಸ್ವಂತ ವಾಹನದಲ್ಲಿ ಹೋಗುವವರಿಗೆ ಯಾವುದೇ ಸಮಸ್ಯೆ ಇಲ್ಲ. ರಸ್ತೆಗಳು ಸ್ವಲ್ಪ ಕಡಿದಾಗಿದ್ದು, ನಿಯಂತ್ರಿತ ಚಾಲನೆ ಮಾಡಿದರೆ ಅಪಾಯ ಕಡಿಮೆ. ಮೈಸೂರು ದಾರಿಯಿಂದಲೂ ಮಡಿಕೇರಿಗೆ ತಲುಪಬಹುದು. ಇಲ್ಲಿಗೆ ಯಾವುದೇ ರೈಲು ಮಾರ್ಗಗಳ ಸಂಪರ್ಕ ಇಲ್ಲ.
ಊಟ, ವಸತಿ
ಮಾಂದಲಪಟ್ಟಿಯಲ್ಲಿ ಉಳಿದುಕೊಳ್ಳುವುದಕ್ಕೆ ಯಾವುದೇ ಸೌಲಭ್ಯ ಇದ್ದಂತಿಲ್ಲ. ಊಟ, ತಿಂಡಿಯನ್ನೂ ಬೆಟ್ಟಕ್ಕೆ ಹೋಗುವಾಗ ತೆಗೆದುಕೊಂಡು ಹೋಗಬೇಕು. ಉಳಿಯುದಿದ್ದರೆ, ಮಡಿಕೇರಿ ಸುತ್ತಮುತ್ತರಿನ ಹೋಮ್ ಸ್ಟೇನಲ್ಲಿ ಉಳಿದುಕೊಳ್ಳಬಹುದು. ಇಲ್ಲದಿದ್ದರೆ, ಮಡಿಕೇರಿಯಲ್ಲಿ ಹೋಟೆಲ್ ಮತ್ತು ಲಾಡ್ಜ್ಗಳು ಇವೆ.
ತಡಿಯಂಡ ಮೋಳ್
ತಡಿಯಂಡಮೋಳ್ (5,724ಅಡಿ) ಎತ್ತರದಲ್ಲಿದ್ದು ಕೊಡಗಿನ ಅತಿ ಎತ್ತರದ ಶಿಖರ ಎಂಬ ಖ್ಯಾತಿ ಇದೆ. 'ನಾಲ್ಕುನಾಡು ಅರಮನೆ'ಯ ಹತ್ತಿರದಲ್ಲಿದ್ದು, ಮಡಿಕೇರಿಯಿಂದ 40 ಕಿಮೀ ದೂರದಲ್ಲಿದೆ. ನಾಪೋಕ್ಲು, ಭಾಗಮಂಡಲದಿಂದ 30 ಕಿಮೀ ದೂರದಲ್ಲಿದೆ. ಇದು ಮಕುಟ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿದೆ. ಈ ಶಿಖರಕ್ಕೆ ಹೋಗಲು 18 ಟ್ರೆಕ್ಕಿಂಗ್ ದಾರಿಗಳಿವೆ. ಹನಿ ವ್ಯಾಲಿ ರಸ್ತೆ, ಪ್ಯಾಲೇಸ್ ರಸ್ತೆಯ ಮೂಲಕವೂ ಹೋಗಬಹುದು. ಈ ಶಿಖರವು ಉತ್ತರದಲ್ಲಿ ಹಿಮಾಲಯ ದಕ್ಷಿಣದಲ್ಲಿ ನೀಲಗಿರಿ ಶಿಖರದಲ್ಲಿದೆ. ಇದು ಪಶ್ಚಿಮ ಘಟ್ಟಗಳ ವಲಯದ ಒಂದು ಭಾಗ. ಇಲ್ಲಿ ಆನೆ, ಹುಲಿ, ಕಾಡುಕೋಣ, ಕಾಡು ಬೆಕ್ಕು ಹಾಗೂ ಇನ್ನಿತರ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ.
ಕಣಿವೆಯಲ್ಲಿ ನೀರಿನ ತೊರೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಶಿಖರದ ಅಲ್ಲಲ್ಲಿ ಕೆಲವರು ಕಾಫಿ, ಪೆಪ್ಪರ್, ಏಲಕ್ಕಿ, ವೀಳ್ಯದೆಲೆ, ಅಡಕೆ ತೋಟಗಳನ್ನಾಗಿ ಮಾಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಮರಗಳಿಂದಾಗಿ ಹಸಿರು ವಾತಾವರಣ ನಿರ್ಮಾಣವಾಗಿದೆ.
***
ಟಿಪ್ಸ್
ಶಿಖರದಲ್ಲಿ ಜಾಗರೂಕತೆ ವಹಿಸಿ. ಶಿಖರದಲ್ಲಿ ಗಾಳಿ ಬೀಸುತ್ತಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಮಂಕಿ ಕ್ಯಾಪ್ ಅಥವಾ ಇತರ ರಕ್ಷಣೆಯ ವಸ್ತುಗಳನ್ನು ಕೊಂಡು ಹೋಗಿ.ಬೆಟ್ಟದ ಮೇಲೆ ಹೋಗುವಾಗ ಕುಡಿಯಲು ನೀರು, ಎನರ್ಜಿ ಡ್ರಿಂಕ್ಸ್ ತೆಗೆದುಕೊಂಡು ಹೋಗಬಹುದು.
***
ಹತ್ತಿರದ ಆಕರ್ಷಣೆಗಳು
ಮಡಿಕೇರಿಯ ತಂಪಾದ ವಾತಾವರಣ ಮೈಮನವನ್ನು ಪುಳಕಿತಗೊಳಿಸುತ್ತದೆ. ಇಲ್ಲಿಗೆ ಬಂದಾಗ ತಡಿಯಂಡಮೋಳ್ಗೆ ಒಂದು ದಿನದ ಟ್ರೆಕ್ಕಿಂಗ್ ಕೈಗೊಂಡು ನಂತರ ಇಲ್ಲಿನ ಹಲಾರು ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಬರಬಹುದು. ಪ್ರಮುಖವಾಗಿ ರಾಜಾ ಸೀಟ್, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ (ವೀರ ರಾಜೇಂದ್ರ ಅವರ ಸಮಾಧಿ) ಮಡಿಕೇರಿ ಫೋರ್ಟ್, ಕಾವೇರಿ ನಿಸರ್ಗಧಾಮ, ತಲಕಾವೇರಿ, ಬಯಲುಕುಪ್ಪೆ, ದುಬಾರೆ ಸಂರಕ್ಷಿತ ಅರಣ್ಯ ಮತ್ತು ದುಬಾರೆ ಎಲೆಫೆಂಟ್ ಕ್ಯಾಂಪ್, ಹಾರಂಗಿ ಜಲಾಶಯವನ್ನು ನೋಡಬಹುದು. ನಾಲ್ಕುನಾಡು ಅರಮನೆಯನ್ನು 1792ರಲ್ಲಿ ದೊಡ್ಡ ವೀರ ರಾಜೇಂದ್ರ ನಿರ್ಮಿಸಿದರು. ಕೆತ್ತನೆಯಿಂದ ಕೂಡಿದ ಕಿಟಕಿ, ಬಾಗಿಲು, ಅಲಂಕಾರಿಕ ಸ್ತಂಭಗಳು ಈ ಅರಮನೆಯ ವಿಶೇಷತೆ. ಕಟ್ಟಡದ ವಿವಿಧ ಸ್ಥಳಗಳಲ್ಲಿ ಕೋಬ್ರಾದ ಚಿತ್ರ ಕೆತ್ತಲಾಗಿದೆ.
ಹೋಗೋದು ಹೇಗೆ?
ಬೆಂಗಳೂರಿನಿಂದ ಬಸ್ ಪ್ರಯಾಣ ಆರಂಭಿಸುವಿರಾದರೆ ಮೈಸೂರು ಮಾರ್ಗವಾಗಿ ಹುನ್ಸೂರ್, ಗೋಣಿಕೊಪ್ಪಲ್, ವಿರಾಜಪೇಟೆ ಬಸ್ಸ್ಟ್ಯಾಂಡ್ನಲ್ಲಿಳಿದುಕೊಂಡು ಅಲ್ಲಿಂದ ಖಾಸಗಿ ಬಸ್ ಸ್ಟ್ಯಾಂಡ್ಗೆ 10 ನಿಮಿಷ ವಾಕ್. ಅಲ್ಲಿ ಖಾಸಗಿ ಬಸ್ನಲ್ಲಿ ನಾಪೋಕ್ಲುವಿನ ಕಕ್ಕಬೆಗೆ ಬಂದು ಅಲ್ಲಿಂದ ಟ್ರೆಕ್ಕಿಂಗ್ ಆರಂಭಿಸಿ.
ಶ್ರೀದೇವಿ ಅಂಬೆಕಲ್ಲು
ಏಲಗಿರಿ
14 ಹೇರ್ಪಿನ್ ತಿರುವುಗಳನ್ನು ದಾಟಿ ಮುಗಿಲು ಮುಟ್ಟುವ ಸನ್ನಾಹಕ್ಕೆ ಅಣಿಮಾಡುವ ಈ ಪುಟ್ಟ ಆದರೆ, ಚೆಲುವಾದ ಬೆಟ್ಟದ ಹೆಸರು ಯೆಳಗಿರಿ. ಇದು ಇರುವುದು ತಮಿಳುನಾಡಿನಲ್ಲಾದರೂ ಬೆಂಗಳೂರಿನಿಂದ ಬರೀ 145 ಕಿ.ಮೀ. ಅಷ್ಟೆ. ಹಾಗಂತ, ಇಲ್ಲಿ ಎಲ್ಲ ಗಿರಿಧಾಮಗಳಲ್ಲಿರುವ ಗೌಜು, ಗದ್ದಲಗಳಿಲ್ಲ. ದೇವಳದ ಗಂಟೆಯ ಸದ್ದು ಪ್ರಶಾಂತವಾಗಿ ಕೇಳುವ ದಿವ್ಯ ಮೌನ. ಅಂದ ಹಾಗೆ, ಇಲ್ಲಿ ಹಲವಾರು ಸಣ್ಣ, ದೊಡ್ಡ ದೇವಾಲಯಗಳೂ ಇವೆ.
ಸಮುದ್ರ ಮಟ್ಟದಿಂದ 3460 ಅಡಿ ಎತ್ತರದಲ್ಲಿರುವ ಯೆಳಗಿರಿ 14 ಪುಟ್ಟ ಪುಟ್ಟ ಗ್ರಾಮಗಳ 29 ಚ. ಕಿ.ಮೀ. ವಿಸ್ತೀರ್ಣದ ಊರು. ಇಲ್ಲಿಗೆ ಸಾಗುವ ದಾರಿಯ ಪ್ರತಿ ತಿರುವು ಕೂಡಾ ಮನಮೋಹಕ. ನಗರ ಜೀವನದಿಂದ ನಿಧಾನವಾಗಿ ನಮ್ಮನ್ನು ಪ್ರಕತಿಯ ಕಡೆಗೆ ಕರೆದೊಯ್ಯುತ್ತದೆ.
ಏನಿದೆ ಇಲ್ಲಿ?
ಯೆಳಗಿರಿಯಲ್ಲಿ ನೋಡಬೇಕಾದ ಸುಂದರ ಪ್ರದೇಶಗಳಲ್ಲಿ ಪುಂಗನೂರು ಕೆರೆ ಅತ್ಯಂತ ಪ್ರಮುಖ. ಇದಕ್ಕೆ ಬೋಟ್ ಹೌಸ್ ಎಂಬ ಹೆಸರಿದ್ದರೂ ಕೇರಳ ಮಾದರಿಯ ಬೋಟ್ ಹೌಸ್ಗಳು ಇಲ್ಲಿಲ್ಲ. ಕತಕವಾಗಿ ನಿರ್ಮಿಸಿದ ಪುಂಗನೂರು ಕೆರೆ ಬೆಟ್ಟ ಗುಡ್ಡಗಳ ನಡುವೆ ಬಹು ಸುಂದರವಾಗಿ ಹರಡಿಕೊಂಡಿದೆ. ಅದರಲ್ಲಿ ಬೋಟಿಂಗ್ ಅವಕಾಶವಿದ್ದು, ಬೋಟಿಂಗ್ ಮಾಡುತ್ತಾ ಸುತ್ತಲೂ ಎದ್ದು ನಿಂತ ಪರ್ವತಗಳ ಚೆಲುವನ್ನು ಸವಿಯೋದೇ ಸಂಭ್ರಮ.
ನಿಸರ್ಗಧಾಮ: ಇಲ್ಲಿರುವ ರೋಸ್ ಗಾರ್ಡನ್, ಕಾಡಿನ ಚೆಲುವನ್ನು ಅನುಭವಿಸಲು ಇರುವ ಸುವರ್ಣಾವಕಾಶ 'ನಿಸರ್ಗಧಾಮ' ಮನ ಸೆಳೆಯುತ್ತದೆ. ಊಟಿ, ಕೊಡೈಕೆನಾಲ್ಗಳ ಹಾಗೆ ಈ ಹಿಲ್ಸ್ಟೇಷನ್ ಅಭಿವದ್ಧಿ ಹೊಂದಿಲ್ಲವಾದರೂ ಅದಕ್ಕಿಂತಲೂ ಭಿನ್ನವಾದ ಹಲವು ಸ್ಪೆಷಲ್ಗಳು ಇಲ್ಲಿವೆ.
ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್: ಸ್ವಾಮಿ ಮಲೈ ಯೆಳಗಿರಿಯ ಅತ್ಯಂತ ಎತ್ತರದ ಬೆಟ್ಟ ಮತ್ತು ಚಾರಣಿಗರ ಸ್ವರ್ಗ. ದಟ್ಟ ಕಾಡನ್ನು ದಾಟುತ್ತಾ, ಕಲ್ಲುಗಳನ್ನು ಹತ್ತುತ್ತಾ 4438 ಅಡಿ ಎತ್ತರದ ಸ್ವಾಮಿ ಮಲೈ ತುದಿ ಮುಟ್ಟಬಹುದು. ಮಂಗಳಂ ಎಂಬ ಹಳ್ಳಿಯಿಂದ ಇಲ್ಲಿಗೆ ಟ್ರೆಕ್ಕಿಂಗ್ ವ್ಯವಸ್ಥೆ ಮಾಡೋ ತಂಡಗಳೇ ಇವೆ. ಅಲ್ಲದೆ ಸಣ್ಣ ಸಣ್ಣ ಇತರ ಗುಡ್ಡಗಳಿಗೂ ಇಲ್ಲಿ ಚಾರಣ ವ್ಯವಸ್ಥೆ ಇದೆ... ಯಾವುದೇ ಅಪಾಯ-ಭಯಗಳಿಲ್ಲ.
ಪ್ಯಾರಾ ಗ್ಲೈಡಿಂಗ್: ಯೆಳಗಿರಿ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ಯಾರಾ ಗ್ಲೈಡಿಂಗ್, ರಾಕ್ ಕ್ಲೈಂಬಿಂಗ್ ಮೊದಲಾದ ಸಾಹಸ ಕ್ರೀಡೆಗಳನ್ನು ಇಲ್ಲಿ ನಡೆಸುತ್ತದೆ. ಆಕಾಶದಲ್ಲಿ ಹಾರಾಡುತ್ತಾ ಪ್ರಕತಿ ನೋಡೋ ಅಪರೂಪದ ಅವಕಾಶ ಇಲ್ಲಿದೆ. ಇದಕ್ಕಾಗಿ ತರಬೇತಿ ನೀಡುವುದರ ಜತೆ ಪ್ರವಾಸಿಗರಿಗೂ ಮೇಲೇರೋ ಅವಕಾಶ ಇದೆ. ಇದು ಪ್ರಕತಿ ನಡುವೆ ಪ್ಯಾರಾ ಗ್ಲೈಡಿಂಗ್ ಮಾಡೋ ಅವಕಾಶ ಇರುವ ದೇಶದ ಎರಡನೇ (ಮಹಾರಾಷ್ಟ್ರದ ಪಂಚ್ಗಣಿ ನಂತರ) ನ್ಯಾಚುರಲ್ ಸ್ಪಾಟ್.
ಜಲಪಾತ: ಯೆಳಗಿರಿಯಲ್ಲಿ ನಾಲ್ಕೈದು ದಿನ ಉಳಿಯೋರಿಗೆ ಯೆಳಗಿರಿ ಬೆಟ್ಟದಿಂದ ಧುಮುಕುವ ಅತ್ತಾರು ನದಿ ಸಷ್ಟಿಸುವ ಸುಂದರ ಜಲಪಾತವನ್ನು ಆಸ್ವಾದಿಸಬಹುದು. ಆದರೆ, ಇದು ಕೂಡಾ ಕಾಡಿನ ನಡುವೆಯೇ ಇರುವ ಸೌಂದರ್ಯ. ಯೆಳಗಿರಿಯಿಂದ 5 ಕಿಮೀ ಗುಡ್ಡ ಇಳಿಯಬೇಕು.
ಇನ್ನೂ ಏನೇನೋ...
ಯೆಳಗಿರಿಯಲ್ಲಿ ತಾರಾ ವೀಕ್ಷಣಾಲಯವಿದೆ, 1950ರವರೆಗೆ ಈ ಜಾಗದ ಒಡೆಯರಾಗಿದ್ದ ಜಮೀನ್ದಾರ್ ಕುಟುಂಬದ ದೊಡ್ಡ ಮನೆಯಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಪರಿಶುದ್ಧ, ನೈಸರ್ಗಿಕ ಜೇನು ಇಲ್ಲಿ ಸಿಗುತ್ತದೆ.
ಅಚ್ಚರಿ ಎಂದರೆ ಎಲ್ಲ ಗಿರಿಧಾಮಗಳ ಹಾಗೆ ಇಲ್ಲಿ ವಿಪರೀತ ಮಂಜು ಬೀಳುವುದಿಲ್ಲ. ಮನಸು ಬೆಚ್ಚನೆ ಬಯಸೋವಷ್ಟು ಹಿತವಾದ ಚಳಿ ಆವರಿಸಿಕೊಳ್ಳುತ್ತದೆ. ಅಂಥ ಹೊತ್ತಲ್ಲೊಂದು ಬಿಸಿ ಬಿಸಿ ಕಾಫಿ ಕುಡಿದರೆ ಪರಮಾನಂದ!
ದಾರಿ ಯಾವುದಯ್ಯಾ?
ಬೆಂಗಳೂರಿನಿಂದ ದೂರ: 145 ಕಿ.ಮೀ.
ಬೆಂಗಳೂರಿನಿಂದ ಹೊಸೂರು ರೋಡ್ನಲ್ಲಿ ಕೃಷ್ಣಗಿರಿಗೆ ಹೋಗಿ ಸುಮಾರು 110 ಕಿ.ಮೀ ಕ್ರಮಿಸಿದರೆ ಜೋಳರ್ ಪೇಟೆ ಸಿಗುತ್ತದೆ. ಅಲ್ಲಿಂದ ಕೇವಲ 36 ಕಿ.ಮೀ. ದೂರದಲ್ಲಿದೆ ಯೆಳಗಿರಿ.
* ಎಲ್ಲ ಕಡೆಗಳಲ್ಲಿ ಸರಿಯಾದ ಸೈನ್ ಬೋರ್ಡ್ಗಳಿವೆ. ಯೆಳಗಿರಿಯಲ್ಲಿ ಪ್ರವಾಸೋದ್ಯಮ ಕಚೇರಿಯೂ ಇದೆ.
* ಉಳಿದುಕೊಳ್ಳಲು ಹೋಟೆಲ್ಗಳು ಮತ್ತು ಛತ್ರಗಳಿವೆ. ಛತ್ರಗಳು ತುಂಬ ಅಗ್ಗ.
ಎ. ಕೃಷ್ಣ ಭಟ್
Comments
Post a Comment