ಕನ್ನಡದ ಕಾರ್ಬೆಟ್:ಪರಿಸರ ಪ್ರೇಮಿ ಗಂಗಾಧರ ಕಲ್ಲೂರರ ಕಥೆ


70ಕ್ಕೂ ಹೆಚ್ಚು ಬಾರಿ ಹಿಮಾಲಯ ಸುತ್ತಿದ ಪ್ರೊ. ಗಂಗಾಧರ ಕಲ್ಲೂರು, ದೇಶದ ನಾನಾ ಅರಣ್ಯಗಳ ಬಗ್ಗೆ ಸ್ಪಷ್ಟ ಮತ್ತು ನಿಖರ ಮಾಹಿತಿಗಳ ಕಣಜ.
52ರ ಹರೆಯದಲ್ಲೂ ಇವರದ್ದು ಕುಗ್ಗದ ಉತ್ಸಾಹ. ಯುವಕರನ್ನೆ ನಾಚಿಸುವಂಥ ಚಾರಣ ಪ್ರಿಯ. ಹಾವುಗಳನ್ನು ಕ್ಷಣಾರ್ಧದಲ್ಲೆ ಹಿಡಿದು ಅದರ ಜಾತಕ ಹೇಳುವ ಉರಗ ತಜ್ಞ. 1200ಕ್ಕೂ ಹೆಚ್ಚು ಚಾರಣ (ಟ್ರೆಕ್ಕಿಂಗ್), 70ಕ್ಕೂ ಹೆಚ್ಚು ಬಾರಿ ಹಿಮಾಲಯ ಪ್ರವಾಸ ಕೈಗೊಂಡ ಸಾಧನೆ ಇವರದ್ದು.
ಇಂಥ ಅಪರೂಪದ ಸಾಹಸಿ ಧಾರವಾಡದ ಪ್ರೊ. ಗಂಗಾಧರ ಕಲ್ಲೂರು. ಇವರು ಕೇವಲ ಪ್ರವಾಸಿಗ ಅಲ್ಲ. ಹಿಮಾಲಯ ಮತ್ತು ದೇಶದ ವಿವಿಧ ಅಭಯಾರಣ್ಯಗಳ ಬಗ್ಗೆ ಸ್ಪಷ್ಟ ಮತ್ತು ನಿಖರವಾದ ಮಾಹಿತಿ ಹೊಂದಿದ ಮಾಹಿತಿಗಳ ಕಣಜ. ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತರಾದ ಕಲ್ಲೂರು, ಪ್ರಾಣಿಪ್ರಿಯರು. 15ನೇ ವರ್ಷದಿಂದಲೇ ಟ್ರೆಕ್ಕಿಂಗ್ ಟ್ರಿಕ್ಸ್ ಕಲಿತವರು. ಅಲ್ಲಿಂದ ಇಲ್ಲಿವರೆಗೆ ಕಾಡು ಸುತ್ತುತ್ತಲೇ ಇದ್ದಾರೆ.
1990ರಲ್ಲಿ ಇವರು ಕೈಗೊಂಡ ಕನ್ಯಾಕುಮಾರಿಯಿಂದ ಹಿಮಾಲಯದ ಗಡವಾಲ್ ವರೆಗಿನ ಸೈಕಲ್ ಪ್ರವಾಸ ಇವುಗಳಲ್ಲೆಲ್ಲ ಅತಿ ವಿಶಿಷ್ಟ ಮತ್ತು ದೊಡ್ಡದಾದ ಪ್ರವಾಸ. ಅದರ ಉದ್ದ ಬರೋಬ್ಬರಿ 72 ಸಾವಿರ ಕಿಲೋಮೀಟರ್! ದಟ್ಟ ಅಭಯಾರಣ್ಯ, ಪಶ್ಚಿಮ ಘಟ್ಟಗಳ ಬೆಟ್ಟ, ಗುಡ್ಡಗಳ ಅತಿ ಕಡಿದಾದ ಕಾಲುದಾರಿ, ಕಲ್ಲು ಬಂಡೆಗಳು ಇವರಿಗೆ ಅತಿ ಸುಲಭ ದಾರಿಗಳು.
ಇತ್ತೀಚಿಗೆ ಉತ್ತರ ಭಾರತದಲ್ಲಿ ಜಲ ಪ್ರಳಯದ ಸಂದರ್ಭ ಮಾನಸ ಸರೋವರಕ್ಕೆ 33 ಜನರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಯಾವುದೇ ತೊಂದರೆ, ಸಮಸ್ಯೆ ಇಲ್ಲದೆ ಪ್ರವಾಸ ಮುಗಿಸಿ ಬಂದಿದ್ದಾರೆ. ಉತ್ತರಾಖಂಡ್‌ನಲ್ಲಿ ಮಳೆಯಿಂದಾಗಿ ಪ್ರವಾಸ ನಿರ್ಬಂಧಿಸಿದಾಗ ಅದೇ ಸಮಯಕ್ಕೆ ನೇಪಾಳ, ಚೀನಾ ಗಡಿಭಾಗದಲ್ಲೂ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಮಾನಸ ಸರೋವರ ಪ್ರವಾಸ ನಿರ್ಬಂಧಿಸಿದರೂ ಇವರಿಗೆ ಪರಿಚಯವಿದ್ದ ಪರ್ಯಾಯ ರಸ್ತೆ ಮೂಲಕ ಪ್ರವಾಸ ಮಾಡಿದ್ದಾರೆ.
1988ರಲ್ಲಿ ಹಾವೇರಿಯ ಜಿಎಚ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದಾಗಲೂ ವಿದ್ಯಾರ್ಥಿಗಳನ್ನು ಸೈಕಲ್‌ನಲ್ಲೇ ಕಾರವಾರ, ಜೋಗ, ಶಿರಸಿ, ಯಾಣ ಭಾಗದ ಅರಣ್ಯಕ್ಕೆ ಚಾರಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮಹಾರಾಷ್ಟ್ರ, ಕರ್ನಾಟಕ, ಕೇರಳ ರಾಜ್ಯದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ ಸಾಲಿನುದ್ದಕ್ಕೂ ಅತ್ಯಂತ ಯಶಸ್ವಿ ಟ್ರೆಕ್ಕಿಂಗ್ ಮಾಡಿದ್ದಾರೆ. ಕಾಡುಗಳಲ್ಲಿನ ವಿವಿಧ ಜಾತಿಯ ಸಸ್ಯ ಪ್ರಭೇದ, ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಪಕ್ಷಿಗಳ ಬಗ್ಗೆ ತಿಳಿಯಲು ಈಗಲೂ ಇವರನ್ನೇ ಹೆಚ್ಚಿನವರು ಸಂಪರ್ಕಿಸುತ್ತಾರೆ.
ಪಕ್ಷಿಪ್ರಿಯ
2005ರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಆಮ್‌ಗಾಂವ್ ಅರಣ್ಯ ಪ್ರದೇಶದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪತನವಾದಾಗ 7 ಇಲಾಖೆಗಳ ತಜ್ಞರು ಕಾಪ್ಟರ್‌ಗಾಗಿ ಎಷ್ಟೇ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಗಂಗಾಧರ ಅವರು ಅರಣ್ಯದ ನಕ್ಷೆ ಮತ್ತು ದಿಕ್ಸೂಚಿ ಸಹಾಯದಿಂದ ಊಟ, ನಿದ್ರೆಯೆನ್ನದೆ 10 ದಿನಗಳ ನಿರಂತರ ಪ್ರಯತ್ನದಿಂದ ಕಾಪ್ಟರ್ ಹುಡುಕಿಕೊಟ್ಟಿದ್ದನ್ನು ಈಗಲೂ ಮರೆಯುವಂತಿಲ್ಲ. ಕೇವಲ ತಮಗಾಗಿ ಚಾರಣ, ಪ್ರವಾಸ ಕೈಗೊಳ್ಳದ ಇವರು ಪರಿಸರ ಪ್ರಜ್ಞೆ, ಪಕ್ಷಿ ವೀಕ್ಷಣೆ, ವಿವಿಧ ಜಾತಿಗಳ ಉರಗಗಳ ಬಗ್ಗೆ ಮಾಹಿತಿ, ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ಆರೈಕೆ ಮಾಡುವುದು, ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ತೊಂದರೆಯಲ್ಲಿದ್ದ ಒಟ್ಟು 136 ವಿವಿಧ ಪ್ರಾಣಿ, ಪಕ್ಷಿ, ಹಾವುಗಳನ್ನು ಕಾಪಾಡಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಪ್ರಾಣಿ, ಪಕ್ಷಿಗಳ ಬಗ್ಗೆ ಇವರದ್ದು ಆಳವಾದ ಜ್ಞಾನ, ಪರಿಚಯ. ಈ ಭಾಗದಲ್ಲಿ ಮರೆಯಾಗಿದ್ದ ಹತ್ತಾರು ಜಲಪಾತಗಳನ್ನು ಪತ್ತೆಹಚ್ಚಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರ್ಕಾರಿ ಅಧಿಕಾರಿಗಳು ಇವರನ್ನು ಕರೆದೊಯ್ದು ಅರಣ್ಯ ಪ್ರದೇಶ, ಪಕ್ಷಿ ಸಂಕುಲ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. 1981ರಿಂದ ಇದುವರೆಗೆ ಮಹಾದಾಯಿ ನದಿಗೆ 106 ಬಾರಿ ಭೇಟಿ ನೀಡಿದ್ದಾರೆ. ಕಳಸಾ-ಬಂಡೂರಿ ಯೋಜನೆ ಬಗ್ಗೆ ಅಧ್ಯಯನ ಮಾಡಿರುವ ಇವರು ಅದರ ಬಗ್ಗೆ ಆಳವಾದ ಮಾಹಿತಿ ಹೊಂದಿದ್ದಾರೆ.
ಇವರ ಇಷ್ಟೆಲ್ಲಾ ಚಾರಣ ಬದುಕಿಗೆ ಪ್ರೇರಣೆ ನೀಡಿದ್ದು, ನರಹಂತಕ ಹುಲಿಗಳ ಬೇಟೆಗಾರ ಜಿಮ್ ಕಾರ್ಬೆಟ್‌ನ ಜೀವನ ಮತ್ತು 1965ರಲ್ಲಿ ಪ್ರಕಟವಾದ ಹಿಮಾಲಯ ದರ್ಶನ ಎಂಬ ಪುಸ್ತಕ. ಇವರ ಪರಿಸರ ಪ್ರಜ್ಞೆ, ಕಾಳಜಿ ಕಂಡು ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ಪರಿಪಾಲಕ ಎಂದು ಐಡೆಂಟಿಟಿ ಕಾರ್ಡ್ ನೀಡಿದೆ. ಹುಲಿ, ಚಿರತೆ, ಕರಡಿ, ಕಾಡುಕೋಣ ಎಲ್ಲಾದರೂ ದಾಳಿ ಮಾಡಿದಲ್ಲಿ ಅಥವಾ ತಗ್ಗು ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಅವುಗಳ ರಕ್ಷಣೆಗೆ ಈಗಲೂ ಇವರೇ ಮೊದಲಿಗರು.  ಎನ್‌ಜಿಒಗಳು, ಖಾಸಗಿ ಶಾಲಾ-ಕಾಲೇಜುಗಳ ನಡೆಸುವ ಬೇಸಿಗೆ ಶಿಬಿರಗಳಲ್ಲಿ ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಾರಣ, ಪಕ್ಷಿ ವೀಕ್ಷಣೆ, ಹಾವು ಹಿಡಿಯುವುದನ್ನು ಕಲಿಸಿಕೊಟ್ಟಿದ್ದಾರೆ. ಮಾನಸಿಕವಾಗಿ ಖಿನ್ನರಾಗಿರುವ ಇಂದಿನ ಎಷ್ಟೋ ಇಳಿವಯಸ್ಸಿನವರಿಗೆ ಇವರು ನಿಜಕ್ಕೂ ಪ್ರೇರಣೆ, ಮಾರ್ಗದರ್ಶಿ ಕೂಡ.

- ಬಸವರಾಜ ಕರ್ಕಿಹ
ಳ್ಳಿ
  ಕೃಪೆ:ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website