ಸೋತ ಫೈಲಿನ್, ಸಲಾಂ ಹಿಂದುಸ್ಥಾನ್!



ಪ್ರವಾಹ-ದುರಂತಗಳಲ್ಲಿ ನಿರ್ವಹಣೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಸರ್ಕಾರ- ಆಡಳಿತ ವ್ಯವಸ್ಥೆಯನ್ನು ನಾವು ಸಾಕಷ್ಟು ಬಾರಿ ಬಯ್ದುಕೊಂಡಿದ್ದೇವೆ. ಆದರೆ ಮೊನ್ನೆ ಫೈಲಿನ್ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಇಚ್ಛಾಶಕ್ತಿ ಇದ್ದರೆ ನಮ್ಮಲ್ಲೂ ಪವಾಡಗಳು ಸಾಧ್ಯ ಎಂಬುದನ್ನು ಸಾಬೀತಾಗಿಸಿದೆ. ನಕಾರಾತ್ಮಕ ಸಂಗತಿಗಳ ವಿಮರ್ಶೆಗೆ ಸಾಕಷ್ಟು ಸಮಯ ಎತ್ತಿಡುವ ನಾವು, ಇಂಥ ಸಕಾರಾತ್ಮಕ ಸಂಗತಿಗಳನ್ನು ಸಂಭ್ರಮಿಸುವುದೂ ಅಗತ್ಯ. ದೇಶವೊಂದರ ಅಂತಃಶಕ್ತಿಯನ್ನು ಪೊರೆಯುವುದಕ್ಕೆ ಇಂಥ ಪ್ರಶಂಸೆ ಪೂರಕ. ಹಾಗೆಂದೇ ರಾಯಿಟರ್ಸ್ ಸುದ್ದಿಸಂಸ್ಥೆಯ ನೀತಾ ಭಲ್ಲಾ ಅವರ ವಿಶ್ಲೇಷಣೆ ಇಲ್ಲಿದೆ.
ನೈಸರ್ಗಿಕ ದುರಂತವೊಂದನ್ನು ಎದುರಿಸುವುದಕ್ಕೆ ಸಿದ್ದತೆ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಮನಮೆಚ್ಚುವ ಕಾರ್ಯಶೈಲಿಯೊಂದು ಅನಾವರಣಗೊಂಡಿದೆ. 2004ರಲ್ಲಿ ದೇಶಕ್ಕೆ ಅಪ್ಪಳಿಸಿದ್ದ ಸುನಾಮಿ ಸುಮಾರು 10 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿತ್ತು. ಆ ವಿದ್ಯಮಾನವೇ ನಂತರದ ವರ್ಷಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸುವುದಕ್ಕೆ ಪ್ರೇರೇಪಿಸಿತು ಎನ್ನುತ್ತಾರೆ ವಿಪತ್ತು ನಿರ್ವಹಣಾ ಪರಿಣತರು ಮತ್ತು ಕಾರ್ಯಕರ್ತರು.
ಆಂಧ್ರ ಪ್ರದೇಶ ಹಾಗೂ ಒಡಿಶಾವನ್ನು ಅಪ್ಪಳಿಸಿದ ಫೈಲಿನ್ ಚಂಡಮಾರುತವು ಕಳೆದ 14 ವರ್ಷಗಳಲ್ಲಿ ಭಾರತವು ಎದುರಿಸಿದ್ದ ಅತ್ಯಂತ ಅಪಾಯಕಾರಿ ಆಘಾತ. ಕೃಷಿಭೂಮಿಗಳೆಲ್ಲ ನೀರಿನಲ್ಲಿ ಮುಳುಗಿವೆ. ಮಣ್ಣಿನ ಮನೆಗಳೆಲ್ಲ ನಾಮಾವಶೇಷವಾಗಿವೆ. ಆದರೆ ಅಚ್ಚರಿ ಎಂಬಂತೆ ಸಾವಿನ ಸಂಖ್ಯೆ 30 ದಾಟಿಲ್ಲ.
ಐದು ದಿನ ಮುಂಚಿತವಾಗಿ ಫೈಲಿನ್‌ನ ಆಗಮನ ವಿದ್ಯಮಾನ ತಿಳಿಯಿತು. ಆಗಲೇ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಕಟ್ಟಿಡುವ, ಕುಡಿಯುವ ನೀರನ್ನು ಪ್ಯಾಕೆಟ್‌ಗಳಲ್ಲಿ ಸೂಕ್ತವಾಗಿ ಸಂಗ್ರಹಿಸಿಡುವ ಕಾರ್ಯ ನಡೆಯಿತಲ್ಲದೆ, ಬಲವಂತವಾಗಿಯಾದರೂ ಸರಿ ಜನರನ್ನು ಸ್ಥಳಾಂತರಿಸುವ ಕಾರ್ಯ ಸಂಪನ್ನಗೊಂಡಿತು. ಹತ್ತಿರ ಹತ್ತಿರ ಹತ್ತು ಲಕ್ಷ ಜನರನ್ನೇ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಯಿತು. ಈ ಪ್ರಯತ್ನಗಳೇ ಸಾವಿರಾರು ಪ್ರಾಣಗಳನ್ನು ಕಾಪಾಡುವಲ್ಲಿ ಯಶಸ್ಸು ಸಾಧಿಸಿದ್ದು ಎನ್ನುತ್ತಾರೆ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಕೆಲಸಗಾರರು.
ಫೈಲಿನ್ ಬರುವ ಸುದ್ದಿ ಖಾತ್ರಿಯಾಗುತ್ತಿದ್ದಂತೆ, ಸಂಬಂಧಿತ ಪ್ರದೇಶಗಳಲ್ಲಿ ದಸರಾ ಹಬ್ಬಕ್ಕೆ ಸಿದ್ಧವಾಗುತ್ತಿದ್ದ ನಾಗರಿಕ ಸೇವಾ ಅಧಿಕಾರಿಗಳೆಲ್ಲರ ರಜೆ ರದ್ದಾಯಿತು. ವಿಪತ್ತು ಸ್ಪಂದನ ತಂಡಗಳು ಸಮರೋಪಾದಿಯಲ್ಲಿ ಸಿದ್ಧಗೊಂಡವು. ಅವರ ಬಳಿ ಸುಸಜ್ಜಿತ ಉಪಕರಣಗಳಿದ್ದವು, ಪರಿಹಾರ ಕಾರ್ಯಕ್ಕೆ ಬೇಕಿರುವ ಹೆಲಿಕಾಫ್ಟರ್‌ಗಳು, ಬೋಟ್‌ಗಳೆಲ್ಲ ಸಜ್ಜಾದವು. ಅಪಾಯ ಸೂಚನೆಯ ಪ್ರದೇಶಗಳಿಗೆ ರೈಲು ಮತ್ತು ವಿಮಾನಗಳನ್ನು ರದ್ದುಗೊಳಿಸಲಾಯಿತು. ರಸ್ತೆಗಳಿಗೆ ಬ್ಯಾರಿಕೇಡ್‌ಗಳು ಅಡ್ಡವಾದವು. ಸಹಾಯವಾಣಿಗಳು ಹಾಗೂ ಕಂಟ್ರೋಲ್ ರೂಮ್ ಸ್ಥಾಪನೆಯಾಯಿತು. ರಾಜ್ಯ ರಾಜಧಾನಿಯೊಂದಿಗೆ ಸಂಪರ್ಕ ಕಡಿತವಾಗಬಾರದು ಎಂಬ ಕಾರಣಕ್ಕೆ ಸ್ಯಾಟಲೈಟ್ ಫೋನ್‌ಗಳನ್ನು ಮತ್ತು ಜನರೇಟರ್‌ಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಲಾಯಿತು. ಭೂ, ನೌಕಾಮತ್ತು ವಾಯುಪಡೆಗಳನ್ನು ಸಿದ್ಧತೆಯಲ್ಲಿ ಇಟ್ಟು, ಟೆಲಿಕಾಮ್ ಕಂಪನಿಗಳಿಗೆ ಚಂಡಮಾರುತ ತನ್ನ ಪ್ರತಾಪ ಮುಗಿಸುತ್ತಲೇ ಧ್ವಂಸವಾದ ಮೂಲಸೌಕರ್ಯವನ್ನೆಲ್ಲ ರಿಪೇರಿ ಮಾಡುವುದಕ್ಕೆ ಸನ್ನದ್ಧವಾಗಿರುವಂತೆ ಸೂಚಿಸಲಾಯಿತು.
ಆ ಐದು ದಿವಸಗಳಲ್ಲೇ ಜನರ ಜೀವನಾಧಾರ ಕಾಪಿಡಲು ಬೇಕಾಗುವ ಪ್ರಯತ್ನಗಳನ್ನೆಲ್ಲ ಮಾಡಲಾಯಿತು. ಹೊಲದಲ್ಲಿರುವ ಬೆಳೆಯನ್ನು ಕೊಯ್ದುಕೊಳ್ಳಿ ಎಂದು ರೈತರಿಗೆ ಸೂಚಿಸಿದರೆ, ಮೀನುಗಾರರಿಗೆ ಸಮುದ್ರಕ್ಕೆ ಸಾಗಬಾರದೆಂಬ ಎಚ್ಚರಿಕೆ ಜತೆಗೆ ಅವರ ಬೋಟ್‌ಗಳನ್ನು ಇಡಲು ಸಾಧ್ಯವಾದಷ್ಟು ಸುರಕ್ಷಿತ ಜಾಗಗಳನ್ನು ಸೂಚಿಸಲಾಯಿತು.
ಸೇವ್ ದ ಚಿಲ್ಡ್ರನ್ ಸಂಸ್ಥೆಯ ದೇವೇಂದ್ರ ತಕ್ ಹೇಳುತ್ತಾರೆ- 'ಅಷ್ಟೊಂದು ಜನರ ಪ್ರಾಣವನ್ನು ರಕ್ಷಿಸಿದ್ದು ಪವಾಡಕ್ಕಿಂತ ಕಡಿಮೆ ಕಾರ್ಯವೇನಲ್ಲ. ನಾವು ಅತ್ಯಂತ ಕೆಟ್ಟ ವಿಧ್ವಂಸವನ್ನು ನಿರೀಕ್ಷಿಸಿದ್ದೆವು. ಆದರೆ ವಿಪತ್ತು ನಿರ್ವಹಣೆಗೆ ಸಿದ್ಧವಾಗಿದ್ದ ಆಡಳಿತ ವರ್ಗ, ಸಾಮಾಜಿಕ ಸಂಘಟನೆಗಳು ಮತ್ತು ಸಮುದಾಯಗಳ ಜಾಗ್ರತ ಮನಸ್ಥಿತಿ ಉತ್ತಮ ಫಲಿತಾಂಶವನ್ನು ನೀಡಿತು.'
ಭಾರತವು ಜಗತ್ತಿನಲ್ಲೇ ವಿಪತ್ತಿಗೆ ಅತಿಯಾಗಿ ತೆರೆದುಕೊಂಡಿರುವ ದೇಶಗಳಲ್ಲಿ ಒಂದು. ಹತ್ತುಕೋಟಿಗೂ ಹೆಚ್ಚಿನ ಜನಸಂಖ್ಯೆ ಪ್ರವಾಹ, ಚಂಡಮಾರುತ, ಬರ ಹಾಗೂ ಭೂಕಂಪ ಸಂಭವಿಸಬಹುದಾದ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. 1999ರ ಚಂಡಮಾರುತವು ಒಡಿಶಾವನ್ನು ಗಂಟೆಗೆ 300 ಕಿ.ಮೀ. ವೇಗದಲ್ಲಿ ಬಾಧಿಸಿ ಹತ್ತುಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿರ್ಗತಿಕರನ್ನಾಗಿಸಿತ್ತು. ಅದೇ ವಿಪತ್ತು ಪರಿಣತರ, ಆಡಳಿತ ವರ್ಗದವರ ತಾಕತ್ತಿಗೆ ಎಚ್ಚರಿಕೆ ಗಂಟೆಯಾಗಿ ಸೂಚನೆ ನೀಡಿತ್ತು. ವಾತಾವರಣದ ಬದಲಾವಣೆಗಳು ಇನ್ನೂ ಹೆಚ್ಚಿನ ನೈಸರ್ಗಿಕ ವಿಪತ್ತುಗಳನ್ನು ತಂದೊಡ್ಡಲಿವೆ ಎಂದು ಹವಾಮಾನ ಇಲಾಖೆಯ ತಜ್ಞರು ಎಚ್ಚರಿಸುತ್ತಲೇ ಒಡಿಶಾ ಮತ್ತು ಆಂಧ್ರಪ್ರದೇಶಗಳು ವಿಪತ್ತು ನಿರ್ವಹಣೆ ವಿಭಾಗಕ್ಕೆ ಭಾರಿ ಪ್ರಮಾಣದ ಹಣ ಎತ್ತಿಟ್ಟವು. ಉಭಯ ರಾಜ್ಯಗಳೂ ತಮ್ಮದೇ ವಿಪತ್ತು ನಿರ್ವಹಣಾ ವಿಭಾಗಗಳನ್ನು ಹೊಂದಿದ್ದು, ಕರಾವಳಿ ಪ್ರದೇಶದ ಉದ್ದಕ್ಕೂ ನೂರಾರು ಸೈಕ್ಲೋನ್ ಬಿಡಾರಗಳನ್ನು ಕಟ್ಟಿವೆ. ಏಳು ದಿನಗಳ ಪೂರ್ವಭಾವಿ ಹವಾಮಾನ ವರದಿಯನ್ನು ಖಚಿತವಾಗಿ ನೀಡುವ ನಿಟ್ಟಿನಲ್ಲಿ ತಾಂತ್ರಿಕ ಸಾಮರ್ಥ್ಯ ಕೂಡ ವೃದ್ಧಿಸಿದೆ. ಕ್ರೈಸ್ತ ಸಂಘಟನೆಗಳೂ ಈ ರಾಜ್ಯಗಳಲ್ಲಿ ಸಕ್ರಿಯವಾಗಿದ್ದು ಸ್ಥಳೀಯ ಸಂಘಟನೆಗಳೊಂದಿಗೆ ಕೈ ಜೋಡಿಸಿ ಒಂದು ಪ್ರಭಾವಿ ನೆಟ್‌ವರ್ಕ್ ರೂಪಿಸುವಲ್ಲಿ ಮತ್ತು ಜನರನ್ನು ಚಂಡಮಾರುತದಂಥ ಸನ್ನಿವೇಶಗಳಿಗೆ ಸಜ್ಜು ಮಾಡುವಲ್ಲಿ ಕೆಲಸ ಮಾಡಿವೆ ಎಂದು ಇಂಗ್ಲೆಂಡ್ ಮೂಲದ ಕ್ರಿಶ್ಚಿಯನ್ ಏಡ್ ಎಂಬ ಸಂಸ್ಥೆ ಹೇಳಿಕೊಂಡಿದೆ.  
ರೆಡ್ ಕ್ರಾಸ್‌ನಂಥ ಸಹಾಯ ಸಂಸ್ಥೆಗಳ ಪಾತ್ರವೂ ಇಲ್ಲಿ ನಿರ್ಣಾಯಕವಾಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ಅಪಾಯದ ಮುನ್ಸೂಚನೆ ಪ್ರದೇಶಗಳಿಗೆ ಕಳುಹಿಸಿ ಅವರು ಜನರ ಸ್ಥಳಾಂತರ, ಪ್ರಥಮ ಚಿಕಿತ್ಸೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಶ್ರೇಯಸ್ಸು ಆ ಸಂಸ್ಥೆಗಳಿಗೆ ಸಲ್ಲುತ್ತದೆ.
ಭಾರತದ ಶೇಕಡ 76 ಭಾಗದ ಕರಾವಳಿ ಪ್ರದೇಶವು ಚಂಡಮಾರುತದ ಅಪಾಯಕ್ಕೆ ಗುರಿಯಾಗಿದ್ದರೆ, ದೇಶದ ಶೇ. 56ರಷ್ಟು ಭೂಭಾಗ ಭೂಕಂಪದ ಸಾಧ್ಯತೆಗೆ ತೆರೆದುಕೊಂಡಿದೆ. ಇನ್ನು 10 ಶೇ. ಪ್ರವಾಹ ಹಾಗೂ 68 ಶೇ. ಪ್ರದೇಶ ಬರದ ಅಪಾಯಗಳಲ್ಲಿ ಜೀವಿಸುತ್ತಿದೆ. ಆದರೆ ವಿಪತ್ತು ನಿರ್ವಹಣೆ ಪರಿಣತರು ಹೇಳುವಂತೆ ಭಾರತದ ಎಲ್ಲ ರಾಜ್ಯಗಳು ಆಂಧ್ರಪ್ರದೇಶ ಹಾಗೂ ಒಡಿಶಾಗಳಂತೆ ವಿಕೋಪ ಎದುರಿಸುವುದಕ್ಕೆ ಸಜ್ಜಾದ ಸ್ಥಿತಿಯಲ್ಲಿ ಇಲ್ಲ. ಹಲವಾರು ರಾಜ್ಯಗಳು ವಿಪತ್ತು ನಿರ್ವಹಣಾ ಘಟಕವನ್ನೇ ಹೊಂದಿಲ್ಲ. ಇನ್ನು ಕೆಲ ರಾಜ್ಯಗಳಲ್ಲಿ ಆ ವಿಭಾಗ ನಾಮ್‌ಕೆವಾಸ್ತೆ ಎಂಬಂತಿದೆ. ಉದಾಹರಣೆಗೆ ಕೆಲ ತಿಂಗಳುಗಳ ಹಿಂದೆ ಉತ್ತರಾಖಾಂಡದಲ್ಲಿ ಉಂಟಾದ ಅತಿವೃಷ್ಟಿ ಮತ್ತು ಭೂಕುಸಿತಗಳಲ್ಲಿ ಅಪಾರ ಪ್ರಾಣಹಾನಿ ಆಗುವುದಕ್ಕೆ, ಹವಾಮಾನ ಇಲಾಖೆಯ ಎಚ್ಚರಿಕೆಗೆ ತಕ್ಕಂತೆ ಸ್ಥಳೀಯ ಆಡಳಿತ ಸಿದ್ಧತೆಗಳನ್ನು ಕೈಗೊಳ್ಳಲು ವಿಫಲವಾಗಿದ್ದು ಎಂಬುದು ಸ್ಪಷ್ಟ.
'ಬೇರೆ ರಾಜ್ಯಗಳಲ್ಲೂ ಲಕ್ಷಾಂತರ ಮಂದಿ ಇಂಥ ನೈಸರ್ಗಿಕ ವಿಕೋಪಗಳ ಸಾಧ್ಯತೆ ಎದುರಿಗೆ ಅಪಾಯಕಾರಿ ಸನ್ನಿವೇಶದಲ್ಲಿದ್ದಾರೆ. ಆಂಧ್ರ ಮತ್ತು ಒಡಿಶಾಗಳಲ್ಲಿರು ಸಿದ್ಧತಾ ಮನೋಭಾವ ಬೇರೆಡೆಯೂ ವಿಸ್ತರಿಸಬೇಕು' ಅಂತಾರೆ ಚಿಲ್ಡ್ರನ್ ಚಾರಿಟಿ ಪ್ಲಾನ್ ಇಂಟರ್‌ನ್ಯಾಷನಲ್‌ನ ವಿಕೋಪ ಪ್ರತಿಕ್ರಿಯೆ ವಿಭಾಗದ ಮುಖ್ಯಸ್ಥ ಉಣ್ಣಿಕೃಷ್ಣನ್.

ಕೃಪೆ:ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website