ಸೋಮಾರಿಯ ಕೃಷಿ ಕಥನ


ನನ್ನ ಕಥೆ ಬಿ.ಎನ್.ನಂದೀಶ್


ಸ್ವಿಟ್ಜರ್ಲೆಂಡಿನ ಫ್ರಿಕ್ ಎಂಬ ಹಳ್ಳಿಯಲ್ಲಿದ್ದ ಕೃಷಿ ಸಂಶೋಧನಾ ಸಂಸ್ಥೆಯ (ಎಫ್ಐಬಿಎಲ್) ಆಹ್ವಾನದ ಮೇರೆಗೆ ತೆರಳಿದ್ದ ನಾನು, ಸಮೀಪದಲ್ಲಿದ್ದ ಐಷಾರಾಮಿ ಹೋಟೆಲ್‌ನಲ್ಲಿ ವಿಶ್ರಾಂತಿಗೆಂದು ಹಾಗೇ ಕುರ್ಚಿಗೆ ಒರಗಿದಾಗ, ನನ್ನ ಹಳ್ಳಿಯೂ, ನನ್ನನ್ನು ‘ಸೋಮಾರಿ’ ಎಂದು ಮೂದಲಿಸುತ್ತಿದ್ದ ಜನರೂ ನೆನಪಾದರು. ಹತ್ತು ವರ್ಷಗಳ ಅವಧಿಯಲ್ಲಿ ಅನಾಮಧೇಯ ಸ್ಥಿತಿಯಿಂದ ಕೊರಿಯಾ, ಸ್ವಿಟ್ಜರ್ಲೆಂಡ್‌ಗೆ ಕರೆದುಕೊಂಡು ಬಂದ ನನ್ನ ದ್ವಿದಳ ಧಾನ್ಯಕ್ಕೆ ಕೃತಜ್ಞತೆ ಸಲ್ಲಿಸದೇ ಇರಲಿಕ್ಕಾದೀತೆ?
ಸ್ನೇಹಿತರು, ರೈತರು ನನ್ನನ್ನು ಕರೆಯುವುದು ‘ಲೆಗ್ಯೂಮ್ ನಂದೀಶ್’ ಎಂದೇ. ಲೆಗ್ಯೂಮ್ ಅಂದರೆ ಮತ್ತೇನಿಲ್ಲ; ಒಂದೇ ಕಾಳು ಎರಡು ಹೋಳಾಗುವ ಧಾನ್ಯ, ಜೋಳ. ನನ್ನ ಕೃಷಿ ವಿಧಾನದಲ್ಲಿ ದ್ವಿದಳ ಧಾನ್ಯದ್ದೇ ದರ್ಬಾರು. ‘ಭತ್ತ, ಅಡಿಕೆ ಬೆಳೆಯುವ ಈತ ಒಂದಿಲ್ಲೊಂದು ಕೆಲಸ ಮಾಡುತ್ತಿರಬೇಕಾಗಿದ್ದನ್ನು ಬಿಟ್ಟು ಹೀಗೆ ದೇಶ ಸುತ್ತುತ್ತಾನಲ್ಲ!’ ಎಂಬ ಜನರ ಮೆಚ್ಚುಗೆ ಹಾಗೂ ಉದ್ಗಾರದ ಹಿಂದೆ ‘ಲೆಗ್ಯೂಮ್’ ಚಮತ್ಕಾರ ಅಡಗಿದೆ.
ನಾನೇನೂ ಹೊಸತನ್ನು ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿಯೇ ‘ಲೆಗ್ಯೂಮ್ ಮ್ಯಾಜಿಕ್’ನ ರಹಸ್ಯ ಬಿಚ್ಚಿಡುತ್ತೇನೆ.
ನನ್ನದು ಕೃಷಿ ಕುಟುಂಬ. ಏಳನೇ ತರಗತಿವರೆಗೆ ದಾವಣಗೆರೆ ಹಾಗೂ ಅಲ್ಲಿಂದ ಪಿಯುಸಿವರೆಗೆ ಶಿವಮೊಗ್ಗದಲ್ಲಿ ಓದು. ಎಲ್ಲ ಬಿಟ್ಟು 1998ರಲ್ಲಿ ನಮ್ಮ ಹಳ್ಳಿ ಚುರ್ಚಿಗುಂಡಿಗೆ (ಶಿಕಾರಿಪುರ ತಾಲ್ಲೂಕು) ಬಂದೆ. ಕೃಷಿ ಅಧಿಕಾರಿಯಾಗಿದ್ದ ನಮ್ಮ ತಾತನ ಸಂಗ್ರಹದಲ್ಲಿನ ಬೇಸಾಯ ಸಂಬಂಧಿ ಪುಸ್ತಕ ಓದಿದೆ. ಅದರ ಅನುಸಾರ ಕೃಷಿ ಮಾಡಬೇಕು ಎಂದು ನಿರ್ಧರಿಸಿ, ಹೊಲಕ್ಕೆ ಇಳಿದೆ.
ನಿಜಕ್ಕೂ ಅದು ಇಳಿಕೆ. ಯಥೇಚ್ಛ ರಾಸಾಯನಿಕ ಸುರಿದೆ. ಅತ್ಯುಗ್ರ ವಿಷ ಸಿಂಪಡಿಸಿದೆ. ಹೆಚ್ಚು ಇಳುವರಿ ತೆಗೆದು ಬೀಗಿದೆ. ಮೂರನೇ ವರ್ಷ 13 ಎಕರೆಯಲ್ಲಿ ಬೆಳೆದಿದ್ದ ಭತ್ತದ ಪೈಕಿ ಆರು ಎಕರೆಗೆ ಕಂದು ಜಿಗಿಹುಳ ದಾಳಿಯಿಟ್ಟು ಅರ್ಧ ಬೆಳೆ ಹಾಳಾಯಿತು. ನಾಚಿಕೆ, ಹತಾಶೆಯಿಂದಾಗಿ ಏನೂ ತೋಚದೇ ಕುಳಿತುಬಿಟ್ಟೆ.
ನನ್ನ ತಂಗಿ ನಂದಿನಿಗೊಂದು ಹವ್ಯಾಸವಿತ್ತು. ‘ಸುಧಾ’ ವಾರಪತ್ರಿಕೆಯಲ್ಲಿ ಬರುತ್ತಿದ್ದ ಆಯ್ದ ಲೇಖನ ಕತ್ತರಿಸಿ ಜೋಡಿಸಿ ಇಡುತ್ತಿದ್ದಳು. ಅದರಲ್ಲಿ ಜಪಾನಿನ ನೈಸರ್ಗಿಕ ಕೃಷಿಕ ಮಸನೊಬು ಫುಕುವೊಕ ಅವರ ‘ಒಂದು ಹುಲ್ಲಿನ ಕ್ರಾಂತಿ’ ಕುರಿತು ಪಾಂಡುರಂಗ ಹೆಗಡೆ ಬರೆದಿದ್ದ ಲೇಖನ ಅದು. ಒಮ್ಮೆಯಲ್ಲ, ನಾಲ್ಕಾರು ಸಲ ಓದಿದೆ. ನನ್ನ ಸಮಸ್ಯೆಗೆ ಬಂಗಾರದಂಥ ಉತ್ತರ ಸಿಕ್ಕಿತ್ತು!
ಆದರೆ ಆ ಪುಸ್ತಕ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇರಲಿಲ್ಲ. ಆಗ ‘ಪ್ರಜಾವಾಣಿ’ಯ ಕೃಷಿ ಪುರವಣಿಯಲ್ಲಿ ನಾಟಿ ಬೀಜಗಳ ಪರಿಚಯ ‘ಬೀಜ ಬಂಗಾರ’ ಅಂಕಣದಲ್ಲಿ ಪ್ರಕಟವಾಗುತ್ತಿತ್ತು. ಅದರಲ್ಲಿನ ರೈತರ ವಿಳಾಸ ಹಿಡಿದುಕೊಂಡು, ಕನಕಪುರ ಸಮೀಪದ ಥಳಿ ಗ್ರಾಮಕ್ಕೆ ಹೋದೆ. ದೇಸಿ ಬೀಜ ಬಳಕೆಗೆ ಉತ್ತೇಜಿಸುತ್ತಿದ್ದ ಗ್ರೀನ್ ಪ್ರತಿಷ್ಠಾನದಲ್ಲಿ ಜಿ.ಕೃಷ್ಣಪ್ರಸಾದ್, ಶಂಕರನಾಯಕ್ ಇತರರು ಪರಿಚಯವಾದರು. ಅವರ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಫುಕುವೊಕ ಅವರ ಎಲ್ಲ ಪುಸ್ತಕ ಖರೀದಿಸಿ ತಂದು, ಮತ್ತೆ ಮತ್ತೆ ಓದಿದೆ.
ಫುಕುವೊಕ ಕೃಷಿ ತತ್ವವೆಂದರೆ, ಉಳುಮೆ ಹಾಗೂ ಒಳಸುರಿಯಿಲ್ಲದ ಬೇಸಾಯ. ಅವರ ಪುಸ್ತಕ ಓದಿದಾಗ, ಪ್ರಮುಖ ಬೆಳೆ ಜತೆಗೆ ಮೂವತ್ತು ಬಗೆಯ ದ್ವಿದಳ ಧಾನ್ಯ ಬೆಳೆಸುತ್ತಿದ್ದರು ಎಂಬುದು ಗೊತ್ತಾಯಿತು. ನನಗೆ ಆಗ ಗೊತ್ತಿದ್ದುದು ಸೆಣಬು, ಡಯಾಂಚಾ ಮಾತ್ರ.

ಕೂಲಿಕಾರರ ಅಭಾವ, ಒಳಸುರಿ ವೆಚ್ಚದಲ್ಲಿ ಏರಿಕೆ ಇತ್ಯಾದಿ ಗಮನಿಸುತ್ತಿದ್ದರೆ, ಫುಕುವೊಕ ತತ್ವಗಳು ಮುಂದಿನ ದಿನಗಳಲ್ಲಿ ಅನಿವಾರ್ಯ ಅಂತಲೂ ಅನಿಸಿತ್ತು. ಮೊದಲ ಬಾರಿಗೆ ಫುಕುವೊಕ ವಿಧಾನ ಅನುಸರಿಸಲು ತೀರ್ಮಾನಿಸಿದೆ. ಮೂರು ಎಕರೆ ಗದ್ದೆಯಲ್ಲಿ ಸೆಣಬು ಹಾಗೂ ಹೆಸರು ಬಿತ್ತನೆ ಮಾಡಿದೆ. ಸೆಣಬು ಎತ್ತರಕ್ಕೆ ಬೆಳೆದಾಗ, ಟ್ರಾಕ್ಟರ್‌ನಿಂದ ಉಳುಮೆ ಮಾಡಿಸಿ ನೆಲದಲ್ಲಿ ಬೆರೆಸಿಬಿಟ್ಟೆ. ನಂತರ ಭತ್ತ ನಾಟಿ ಮಾಡಿದೆ. 22 ಚೀಲ ಇಳುವರಿ ಬಂದರೆ ನನಗೆ ಲಾಭ ಸಿಕ್ಕಂತೆ ಎಂದು ಭಾವಿಸಿದ್ದೆ. ಕೊನೆಗೆ ಸಿಕ್ಕಿದ್ದು 28 ಚೀಲ! ಅದು ‘ಲೆಗ್ಯೂಮ್ ಮ್ಯಾಜಿಕ್’.
ಅಲ್ಲಿಂದ ಆರಂಭವಾಗಿದ್ದು ದ್ವಿದಳ ಧಾನ್ಯದ ಹುಡುಕಾಟ. ಸಿಕ್ಕಿದ್ದನ್ನು ಬೆಳೆಸಿ– ಬಳಸುವುದು, ಉಪಯೋಗ ಏನೇನು ಎಂಬುದನ್ನು ಹುಡುಕುವುದು. ಈ ಮಧ್ಯೆ ಅಡಿಕೆ ತೋಟದಲ್ಲೂ ‘ವೆಲ್ವೆಟ್ ಬೀನ್ಸ್’ ಎಂಬ ದ್ವಿದಳ ಧಾನ್ಯ ಬೆಳೆಸಿದೆ. ಅದರಿಂದ ಸಿಕ್ಕ ಲಾಭ ಸಾಕಷ್ಟು. ಈಗ ನಾನು ಸೆಸ್ಬೆನಿಯಾ, ವೆಲ್ವೆಟ್ ಬೀನ್ಸ್, ಮುಟ್ಟಿದರೆ ಮುನಿ, ಸಿಟರೊ, ಇಂಡಿಗೊ, ಶಂಖಪುಷ್ಪಿ, ಮ್ಯುಕನಾ, ಕಾಸಿಯಾ, ಕ್ರೊಟಲೇರಿಯಾ ಸೇರಿದಂತೆ ನೂರಾರು ದ್ವಿದಳ ಧಾನ್ಯ ಬಳಸುತ್ತಿದ್ದೇನೆ. ಇವನ್ನೇ ಬಳಸಬೇಕು ಎಂದೇನೂ ಅಲ್ಲ. ಬೇರೆ ಬೇರೆ ನೆಲ ಹಾಗೂ ವಾತಾವರಣಕ್ಕೆ ಪೂರಕವಾಗಿ ಅಗತ್ಯವಾದ ಸಸ್ಯ ಬೆಳೆಸಬೇಕಷ್ಟೇ.
ಇನ್ನು ಇಳುವರಿ ವಿಷಯಕ್ಕೆ ಬಂದರೆ, ಏನೆಲ್ಲ ಗೊಬ್ಬರ ಸುರಿದು ಕೀಟನಾಶಕ, ಪೀಡೆನಾಶಕ ಸಿಂಪಡಿಸಿ ತೆಗೆಯುವ ಇಳುವರಿಗಿಂತ ನನ್ನ ನೆಲದ ಉತ್ಪನ್ನ ತುಸು ಹೆಚ್ಚೇ ಆಗಿದೆ. ಈಗಿನ ಕೃಷಿ ಪದ್ಧತಿಯಲ್ಲಿ ಪ್ರತಿ ಎಕರೆಗೆ 20ರಿಂದ 22 ಕ್ವಿಂಟಲ್ ಭತ್ತ ಬಂದರೆ, ನಾನು 20ರಿಂದ 25 ಕ್ವಿಂಟಲ್ ಪಡೆಯುತ್ತಿದ್ದೇನೆ. ಇತರ ಕೃಷಿಕರು ಪ್ರತಿ ಎಕರೆಗೆ 50–55 ಕ್ವಿಂಟಲ್ ಅಡಿಕೆ ಪಡೆದರೆ, ನನ್ನ ತೋಟದಲ್ಲಿನ ಉತ್ಪಾದನಾ ಪ್ರಮಾಣ 70–75 ಕ್ವಿಂಟಲ್. ಇಷ್ಟಕ್ಕೂ ನನ್ನ ಲಾಭ ಇರುವುದು ಒಳಸುರಿಗಳನ್ನು ಬಳಸದೇ ಇರುವುದರಲ್ಲಿ. ಕೃಷಿ ಕೆಲಸಕ್ಕೆಂದು ‘ವ್ಯಯ’ವಾಗುತ್ತಿದ್ದ ಸಮಯದಲ್ಲಿ ಶೇಕಡ 75ರಷ್ಟು ಈಗ ಉಳಿತಾಯವಾಗುತ್ತಿದೆ.
ದ್ವಿದಳ ಧಾನ್ಯಗಳನ್ನು ಸಾರಜನಕ ಸ್ಥಿರೀಕರಣ ಅಥವಾ ಇನಾವುದೋ ಉದ್ದೇಶಕ್ಕೆಂದು ಬಳಸುತ್ತಿದ್ದರು. ಆದರೆ ಅದನ್ನೇ ಒಂದು ಕೃಷಿ ವಿಧಾನವಾಗಿ ಮಾಡಿಕೊಂಡಿದ್ದೇನೆ. ಇದನ್ನು ಗಮನಿಸಿ, ಬೆಂಗಳೂರಿನಲ್ಲಿ 2009ರಲ್ಲಿ ನಡೆದ ದಕ್ಷಿಣ ಏಷ್ಯಾ ಸಾವಯವ ಸಮಾವೇಶದಲ್ಲಿ ನನಗೆ ಆಹ್ವಾನ ಬಂತು. ಭಾರತದಿಂದ ನಾಲ್ವರು ಮಾತ್ರ ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ವಿಷಯ ಮಂಡನೆಗೆ ಎಲ್ಲರಿಗೂ 20 ನಿಮಿಷ ಕೊಟ್ಟರೆ, ನನ್ನ ವಿಷಯ ಮಂಡನೆಯನ್ನು ಮುಕ್ಕಾಲು ತಾಸು ಎಲ್ಲರೂ ತನ್ಮಯರಾಗಿ ಕೇಳಿಸಿಕೊಂಡರು. ಮುಂದೆ ಕೊರಿಯಾದಲ್ಲಿ 2011ರಲ್ಲಿ ನಡೆದ 17ನೇ ಜಾಗತಿಕ ಸಾವಯವ ಸಮ್ಮೇಳನದಲ್ಲಿ ಭಾರತ ನಾಲ್ವರು ಸದಸ್ಯರ ನಿಯೋಗದಲ್ಲಿ ನಾನೂ ಒಬ್ಬನಾಗಿ ತೆರಳಿದೆ. 2012ರಲ್ಲಿ ಜರ್ಮನಿಯಲ್ಲಿ ನಡೆದ ಜಾಗತಿಕ ಸಾವಯವ ಮಾರಾಟ ಮೇಳಕ್ಕೆ ರಾಜ್ಯ ಸರ್ಕಾರ ನನ್ನನ್ನು ಕಳಿಸಿತು. ಇತರರಿಗಿಂತ ಬೇರೆ ಹಾದಿಯಲ್ಲಿ ನಡೆದ ಕೃಷಿ ಪಯಣ, ನನ್ನನ್ನು ಚುರ್ಚಿಗುಂಡಿಯಿಂದ ಎಲ್ಲೆಲ್ಲಿಗೋ ಕರೆದೊಯ್ದಿದೆ.
ಈ ನನ್ನ ಪಯಣದಲ್ಲಿ ನಾನು ಕಲಿತ ಪಾಠಗಳು ಅನೇಕ. ಬರೀ ಪುಸ್ತಕದಿಂದ ಅಂತಲ್ಲ; ಗಿಳಿ, ಬಾತುಕೋಳಿ, ಏಡಿ, ಕಪ್ಪೆ, ಇಲಿ, ಹುಳು, ಹಾವು, ಕೀಟ, ಹಲ್ಲಿ... ಇವೆಲ್ಲದರಿಂದ ನಾನು ಕಲಿತಿದ್ದೇ ಹೆಚ್ಚು. ಕೃಷಿಯನ್ನು ಕಾಡುತ್ತಿರುವ ಸಮಸ್ಯೆಗೆ ಹಸಿರೆಲೆ ಗೊಬ್ಬರದಲ್ಲಿ (ದ್ವಿದಳ) ಪರಿಹಾರವಿದೆ ಎಂಬುದನ್ನು ಕಂಡುಕೊಂಡಿದ್ದೇನೆ. ಈ ದಾರಿಯಲ್ಲಿ ಹಲವರಿಂದ ಮೂದಲಿಕೆ, ವ್ಯಂಗ್ಯ, ಹಾಸ್ಯಕ್ಕೂ ಈಡಾಗಿದ್ದೇನೆ. ಆದರೆ ಈಗ ಹಾಗಿಲ್ಲ. ಗೇಲಿ ಮಾಡಿದವರೇ ನಂತರ ಮೆಚ್ಚಿದ್ದನ್ನು ಇಲ್ಲಿ ನೆನಪಿಸಿಕೊಳ್ಳುವೆ.
ನನ್ನ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದು, ದೇಶ– ವಿದೇಶಗಳಿಂದ ಆಸಕ್ತರು ನನ್ನೂರಿಗೆ ಬರುತ್ತಾರೆ. ಬೇಸಾಯ ಮಾತ್ರವಲ್ಲ; ಮನೆ ಕೂಡ ನಿಸರ್ಗ ಸ್ನೇಹಿ ಆಗಿರುವುದನ್ನು ಕಂಡು ಅವರಿಗೆ ಅಚ್ಚರಿಯಾಗುತ್ತದೆ. ಏಕೆಂದರೆ ಪೀಠೋಪಕರಣ, ಗೋಡೆಗೆ ಬಣ್ಣ, ಗಾಳಿ–ಬೆಳಕಿನ ವ್ಯವಸ್ಥೆ ಎಲ್ಲವೂ ಪ್ರಕೃತಿಗೆ ಪೂರಕವಾಗಿಯೇ ಇದೆ. ‘ಕೃಷಿಯೆಂದರೆ ಬರೀ ಉತ್ಪಾದಿಸುವುದಷ್ಟೇ ಅಲ್ಲ; ಅದು ಜೀವನ ವಿಧಾನ’ ಎಂಬ ಫುಕುವೊಕ ಅವರ ನುಡಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಲೇ ಅವರನ್ನು ತೋಟಕ್ಕೆ ಕರೆದೊಯ್ಯುತ್ತೇನೆ.
ಕೃಪೆ:ಪ್ರಜಾವಾಣಿ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website