ಸಾಧನೆ, ಕನಸುಗಳಿಗೆ ಮುಗಿಲೇ ಮಿತಿ ಎಂಬ ಮಕ್ತೌಮ್ ಮಾರ್ಗ



'ಸಾಧ್ಯವಾದರೆ ಆ ಪುಸ್ತಕ ಓದಿ. ನಮಗಾಗಿ, ರಾಜ್ಯದ ಜನತೆಗಾಗಿ ಆ ಕೃತಿಯನ್ನು ಓದಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ವಾರಗಳ ಹಿಂದೆ ಒಂದು ಪುಟ್ಟ ಹಾಗೂ ಆಪ್ತ ಸಲಹೆ ನೀಡಿದ್ದೆ. ಆ ಪುಸ್ತಕವನ್ನು ಅವರು ಓದಿದರೋ, ಬಿಟ್ಟರೋ ಗೊತ್ತಿಲ್ಲ. ಒಂದು ವೇಳೆ ಅವರು ಅದನ್ನು ಓದಿದರೆ, ಓದಿದ್ದೇನೆಂದು ಹೇಳಬೇಕಿಲ್ಲ. ಅವರ ಮಾತು, ಕೃತಿ, ಆದ್ಯತೆ, ಚಿಂತನೆ, ಆಲೋಚನೆಗಳೇ ಬದಲಾಗುತ್ತವೆ. ಅದರಲ್ಲಿ ಸಂದೇಹವೇನಿಲ್ಲ. ಮುಖ್ಯಮಂತ್ರಿಯಾದವರಿಗೆ ಪುಸ್ತಕ ಓದಲು, ಬರೆಯಲೂ ಸಮಯ ಸಿಗುವುದಿಲ್ಲ. ಓದಬೇಕೆಂದು ಬಯಸಿದರೂ ಜನ ಬಿಡುವುದಿಲ್ಲ. ಸದಾ ಅವರ ಮನೆಯ ಸುತ್ತಲೂ ನಿಂತಿರುತ್ತಾರೆ. ಮುಖ್ಯಮಂತ್ರಿಯಾದವರಿಗೆ 'ಮನೆಗೆ ಬರಬೇಡಿ' ಎಂದು ಜನರಿಗೆ ಹೇಳಲಾಗುವುದಿಲ್ಲ. ಜನ ಜಂಗುಳಿ, ಕಾರ್ಯಕ್ರಮ, ಭಾಷಣ, ಮೀಟಿಂಗ್, ಗಣ್ಯರ ಭೇಟಿ ನಡುವೆ ಒಂದು ಪುಟ್ಟ ಏಕಾಂತವನ್ನು ಸೃಷ್ಟಿಸಿಕೊಳ್ಳಲಾಗುವುದಿಲ್ಲ.
ಈ ಎಲ್ಲ ಸಂಗತಿಗಳು ಗೊತ್ತಿಲ್ಲ ಎಂದಲ್ಲ. ಆದರೂ ತುಸು ಸವುಡು ಮಾಡಿಕೊಂಡು ದುಬೈ ಎಂಬ ಮಾಯಾನಗರಿ, ಆಧುನಿಕ ದೇಶ, ಪ್ರಯೋಗ ನಗರವನ್ನು ಕಟ್ಟಿದ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಬರೆದ My Vision:Challenges in the Race for Excellence ಎಂಬ ಪುಸ್ತಕವನ್ನು ಓದಿ ಎಂದಿದ್ದೆ.
ಕಾರಣ ಇಷ್ಟೆ. ಒಂದು ಊರನ್ನು ಹೇಗೆ ಕಟ್ಟಬೇಕು, ಜನರ ಚಿಂತನೆಯನ್ನು ಅಣಿಗೊಳಿಸುವುದು ಹೇಗೆ, ಈ ಕೆಲಸಕ್ಕೆ ಜನರನ್ನು ತೊಡಗಿಸುವುದೆಂತು, ಒಂದು ಊರನ್ನು ಅಭಿವೃದ್ಧಿಯ ಪಥದಲ್ಲಿ ನಿಲ್ಲಿಸಲು ಏನೆನೆಲ್ಲ ಮಾಡಬೇಕು, ಈ ಸ್ಪರ್ಧಾತ್ಮಕ ಯುಗದಲ್ಲಿ ಬಾಳೋದು ಹೇಗೆ, ಸದಾ ಗೆಲ್ಲೋದು ಹೇಗೆ... ಈ ಎಲ್ಲ ಅಂಶಗಳ ಬಗ್ಗೆ ದುಬೈಯನ್ನು ಕಟ್ಟಿದ ವ್ಯಕ್ತಿಯೇ ಕತೆ ಹೇಳಿದರೆ, ಆತನ ಬಾಯಿಂದಲೇ ಆ ಯಶಸ್ವೀ ಕತೆಯನ್ನು ಕೇಳುವ ಅವಕಾಶ ಸಿಕ್ಕರೆ ಅದನ್ನು ತಪ್ಪಿಸಿಕೊಳ್ಳಬಾರದೆಂಬ ಆಸ್ಥೆಯಿಂದ ಹಾಗೆ ಹೇಳಿದ್ದೆ. ಅದು ಉಪದೇಶಾಮೃತವಾಗಿರಲಿಲ್ಲ. ಕರ್ಮಯೋಗಿಯ ಕತೆಯದು.
ಆತ ಹೇಳಿದಂತೆ ಮಾಡಬೇಕಿಲ್ಲ. ಆದರೆ ಆತನ ಕಾಯಕಫಲದ ಪ್ರೇರಣೆಯನ್ನು ಪಡೆದುಕೊಂಡರೂ ಸಾಕು. ಅಷ್ಟರಮಟ್ಟಿಗೆ ಮುಖ್ಯಮಂತ್ರಿಯವರ ಆಲೋಚನೆಯಲ್ಲಿ ಗಣನೀಯ ಬದಲಾವಣೆ ಮಾಡಬಹುದು. ಸಿದ್ಧ-ಯಶಸ್ವಿ-ಕಾಲಪಕ್ವ-ಜಾರಿಯೋಗ್ಯ ಅಭಿವೃದ್ಧಿ ಮಾದರಿ ಕಣ್ಣೆದುರಿಗೆ ಇರುವಾಗ ಅದನ್ನು ಎದೆಗಪ್ಪಿಕೊಳ್ಳುವುದಷ್ಟೇ ಚಾಣಾಕ್ಷತನ. ಈ ದೃಷ್ಟಿಯಿಂದಾದರೂ ಸಿದ್ದರಾಮಯ್ಯನವರು ಈ ಕೃತಿ ಓದಬೇಕೆಂಬುದು ಅಪೇಕ್ಷೆಯಾಗಿತ್ತು. ಅಲ್ಲದೇ ಪುಸ್ತಕ ಬರೆದ ಮಕ್ತೌಮ್ ಒಬ್ಬ ರಾಜಕಾರಣಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ, ಪ್ರಧಾನಮಂತ್ರಿ ಹಾಗೂ ದುಬೈಯ ರೂಲರ್. ಬೆಂಗಳೂರನ್ನು ದುಬೈ ಮಾಡಬೇಕಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಆ ನಗರದ ಪ್ರೇರಣೆ, ಸ್ಫೂರ್ತಿ ಪಡೆದ ನಾವು ನಮ್ಮ ನಗರ, ಊರನ್ನು ರೂಪಿಸುವುದು ಖಂಡಿತ ಸಾಧ್ಯವಿದೆ.
ಮಕ್ತೌಮ್ ತಮ್ಮ ಕೃತಿಯಲ್ಲಿ ಒಂದೆಡೆ ಹೇಳುತ್ತಾರೆ-'2010ರಲ್ಲಿ ದುಬೈಗೆ ಐವತ್ತುಲಕ್ಷ ಹೊಸ ಪ್ರವಾಸಿಗರನ್ನು ಸೆಳೆಯಬೇಕೆಂದು ನಿರ್ಧರಿಸಿದೆವು. ತಕ್ಷಣ ನಾನು ಸರ್ಕಾರದ ಹದಿನೆಂಟು ಇಲಾಖೆಗಳ ಅಧಿಕಾರಿಗಳ ಜತೆ ಒಂದೂವರೆ ತಿಂಗಳ ಕಾಲ ಮೀಟಿಂಗ್ ಮಾಡಿದೆ. ದುಬೈ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್, ಹೊಸ ರನ್ ವೇ ನಿರ್ಮಿಸಲು ನಿರ್ಧರಿಸಿದ್ದರಿಂದ ಹಿಡಿದು, ರಸ್ತೆಯನ್ನು ಸುಧಾರಿಸಲು, ಹೊಸ ಹೋಟೆಲ್ ನಿರ್ಮಿಸಲು, ಹೊಸ ಶಾಪಿಂಗ್‌ಮಾಲ್ ಕಟ್ಟಲು, ಹೊಸ ಟ್ಯಾಕ್ಸಿಗಳಿಗೆ ಪರ್ಮಿಟ್ ನೀಡಲು, ಟೆಲಿಫೋನ್ ಕನೆಕ್ಟಿವಿಟಿ ಹೆಚ್ಚಿಸಲು ನಿರ್ಧರಿಸಿದೆವು. ಜತೆಯಲ್ಲಿ ಹಾಸ್ಪಿಟಲ್‌ನಲ್ಲಿ ಹೆಚ್ಚಿನ ಬೆಡ್ ಅಳವಡಿಸಲು ಯೋಚಿಸಿದೆವು. ದುಬೈಗೆ ಬರುವ ಹೊಸ ಐವತ್ತು ಲಕ್ಷ ಪ್ರವಾಸಿಗನೂ ದುಬೈಯ ರಾಯಭಾರಿ. ಆತ ತನ್ನ ದೇಶಕ್ಕೆ ಹೋಗಿ ತನ್ನ ಅನುಭವಗಳನ್ನು ಬಣ್ಣಿಸುತ್ತಾನೆ. ಆದ್ದರಿಂದ ಅವನಿಗೆ ಸ್ವಲ್ಪವೂ ತೊಂದರೆಯಾಗಬಾರದು. ಒಬ್ಬೊಬ್ಬ ಪ್ರವಾಸಿ ಹತ್ತತ್ತು ಜನ ಬರುವುದಕ್ಕೆ ಕಾರಣವಾಗುತ್ತಾನೆ. ಹೀಗಾಗಿ ಆತ ದುಬೈಗೆ ಕಾಲಿಡುವುದರಿಂದ ವಾಪಸು ಹೋಗುವ ತನಕ ಪ್ರತಿಯೊಂದು ಅಂಶಗಳ ಬಗೆಗೂ ಕಾಳಜಿ ವಹಿಸಬೇಕು. ದುಬೈಗೆ ಬಂದ ಪ್ರವಾಸಿಗರಿಗೆ ಸುಲಭ ದರದಲ್ಲಿ ತನ್ನೂರಿಗೆ ಫೋನ್ ಮಾಡಲು, ಇಂಟರ್‌ನೆಟ್ ಬ್ರೌಸ್ ಮಾಡಲು ಸಾಧ್ಯವಾಗಬೇಕು. ಇಂಥ ಸಣ್ಣ ಸಣ್ಣ ವಿಷಯಗಳ ಬಗೆಗೂ ನಿಗಾವಹಿಸಬೇಕು. ಹೊರದೇಶಕ್ಕೆ ಹೋಗಬೇಕೆಂದು ಅನಿಸಿದಾಗಲೆಲ್ಲ ಅವನ ಕಣ್ಣ ಮುಂದೆ ದುಬೈನಗರವೇ ಬರಬೇಕು. ಹಾಗಾಗಬೇಕೆಂದರೆ ನಾವು World Class ಸೌಲಭ್ಯ ಒದಗಿಸಬೇಕು. ಎಲ್ಲೂ ರಾಜಿ ಮಾಡಿಕೊಳ್ಳಬಾರದು.
2010ರಲ್ಲಿ ದುಬೈಗೆ ಅಂದುಕೊಂಡಿದ್ದಕ್ಕಿಂತ ಒಂದೂವರೆ ಪಟ್ಟು ಜಾಸ್ತಿ ಪ್ರವಾಸಿಗರು ಬಂದರು. ಇವರೆಲ್ಲರೂ ಅಕ್ಷರಶಃ ದುಬೈ ರಾಯಭಾರಿಗಳಂತೆ ಕಾರ್ಯನಿರ್ವಹಿಸಿದರು. ಪ್ರವಾಸೋದ್ಯಮ ಇಲಾಖೆ ಹೇಳುವುದಕ್ಕಿಂತ ಪರಿಣಾಮಕಾರಿಯಾಗಿ ದುಬೈಯನ್ನು ತಮ್ಮ ಜನರಿಗೆ ಬಣ್ಣಿಸಿದರು. ಅದರ ಮುಂದಿನ ವರ್ಷ ಅಷ್ಟಾಗಿ ಪ್ರಚಾರ ಮಾಡದಿದ್ದರೂ, ಶೇ.20ರಷ್ಟು ಹೆಚ್ಚು ಪ್ರವಾಸಿಗರು ಬಂದರು. ಅವರಲ್ಲಿ ಅನೇಕರು ರಿಪೀಟ್ ಪ್ರವಾಸಿಗರು. ದುಬೈಗೆ ಒಮ್ಮೆ ಹೋದವರು ಪದೇ ಪದೆ ಹೋಗುತ್ತಾನೆ. ಒಂದೇ ಸಲ ಹೋಗಿ ಸುಮ್ಮನಾಗುವುದಿಲ್ಲ. ಅದೇ ಅದರ ವೈಶಿಷ್ಟ್ಯ. ಯಾಕಾದರೂ ಬಂದೇನೋ, ಯಾವಾಗ ಆದಷ್ಟು ಶೀಘ್ರ ವಾಪಸ್ ಹೋಗುತ್ತೇನೋ ಎಂದು ಯಾವುದಾದರೂ ದೇಶಕ್ಕೆ ಹೋದಾಗ ಅನಿಸಿದರೆ ಆ ದೇಶದ ಕಡೆ ಮತ್ತೊಮ್ಮೆ ಯಾವತ್ತೂ ಮುಖ ಮಾಡಲಾರ. ಇಂಥ ಒಂದು ಸಣ್ಣ ಕಹಿ ಅನುಭವ ದುಬೈನಲ್ಲಿ ಆಗುವುದಿಲ್ಲ. ಆ ರೀತಿಯ ಸೌಕರ್ಯ, ಸೌಲಭ್ಯಗಳನ್ನು ಅಲ್ಲಿ ಕಲ್ಪಿಸಲಾಗಿದೆ.
ಒಮ್ಮೆ ಮಕ್ತೌಮ್ ಅವರನ್ನು ಪತ್ರಕರ್ತರೊಬ್ಬರು ಕೇಳಿದರಂತೆ- 'ದುಬೈ ಅಂದ್ರೆ ಏನು? ಇದರ ಫಿಲಾಸಫಿ ಏನು?' ಅದಕ್ಕೆ ಮಕ್ತೌಮ್ ನೀಡಿದ ಒಂದು ಸಾಲಿನ ಉತ್ತರ -Living the future today.
ಈ ಮಾತಿನಲ್ಲಿ ಎಷ್ಟೆಲ್ಲ ಅರ್ಥಗಳಿವೆ. ನಾಳಿನ ಎಲ್ಲ ಐಷಾರಾಮಿ ಜೀವನ, ಆಧುನಿಕತೆ, ಸವಲತ್ತುಗಳನ್ನೆಲ್ಲ ಇಂದೇ ಅನುಭವಿಸುವುದು ಹಾಗೂ ಯಾವಜ್ಜೀವ ಇದನ್ನು ಕಾಪಾಡಿಕೊಳ್ಳುವುದು. ಕ್ಷಣಕ್ಷಣ, ದಿನದಿನ, ಅನುಗಾಲವೂ ಹೊಸತನಕ್ಕೆ ತೆರೆದುಕೊಳ್ಳುವುದು ದುಬೈ ನಗರದ ಆಶಯ. ಹಾಗಂತ ಅದನ್ನು ಕಟ್ಟಿದ, ಕಟ್ಟುತ್ತಿರುವ ಮನಸ್ಸುಗಳ ಇರಾದೆ.
ದುಬೈ ನಗರ, ಅದರ ಥಳಕು-ಚಮಕು ಒಂದು ಕಡೆ ಇರಲಿ. ವಿಸ್ಮಯವೆನಿಸುವುದು ಅದನ್ನು ನಿರ್ಮಿಸಿದ ವ್ಯಕ್ತಿಯ ಚಿಂತನೆ ಹಾಗೂ ಆಲೋಚನೆಗಳ ಬಗ್ಗೆ. ಮಕ್ತೌಮ್ ಒಂದೆಡೆ ಹೀಗೆ ಹೇಳುತ್ತಾರೆ- 'ಜಾರಿ ಮಾಡದ ಯೋಜನೆಗಳನ್ನಿಟ್ಟು ಕೊಂಡಿರುವವರನ್ನು, ನನಸಾಗಿಸದ ಕನಸುಗಳನ್ನು ಹೊಂದಿರುವವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ. ನಾಯಕನಾದವನಿಗೆ ಆ ದೇಶದ ಜನತೆ ಚರಿತ್ರೆಯನ್ನು ನಿರ್ಮಿಸುವಂಥ ಅಪರಿಮಿತ, ಅನಂತ ಅವಕಾಶಗಳನ್ನು ನೀಡಿರುತ್ತದೆ. ಈ ಸ್ಥಿತಿಯಲ್ಲಿ ಆತ ಎಂಥ ಪವಾಡಗಳನ್ನಾದರೂ ಮಾಡಬಹುದು. ಇದನ್ನು ಸಮರ್ಥವಾಗಿ ಬಳಸಿಕೊಳ್ಳದವನು ತನ್ನನ್ನು ಹಳಿಯುತ್ತಾನೆ ಅಲ್ಲದೇ ಸದಾ ಕೊರಗುತ್ತಾನೆ. ಅಂಥವರಿಂದ ಹೆಚ್ಚಿನದನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ನನ್ನ ತಂದೆಯವರಾದ ಷೇಕ್ ರಶೀದ್ ಅವರಿಗೆ ಅಸಾಧಾರಣ ದೂರದೃಷ್ಟಿಯಿತ್ತು. ಅವರು ಅಂದುಕೊಂಡಿದ್ದೆಲ್ಲವನ್ನೂ ಮಾಡಿದರು. ಅವರ ಈ ಗುಣವೇ ನನಗೆ ಪ್ರೇರಕ ಶಕ್ತಿ. ನಾನೂ ಸಹ ಈ ವಿಶ್ವ ಬೆರಗುಗೊಳ್ಳುವಂಥ ಸಂಗತಿಗಳ ಬಗ್ಗೆ ಕನಸು ಕಾಣುತ್ತೇನೆ. ಅದನ್ನು ಸಾಕಾರಗೊಳಿಸಲು ಹೆಣಗುತ್ತೇನೆ. ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈಯಲ್ಲಿರಬೇಕು ಎಂದು ಕನಸು ಕಂಡು ನನಸಾಗಿ ಮಾಡಿದ ನಂತರ ಎಂಥ ಸವಾಲನ್ನಾದರೂ ಸ್ವೀಕರಿಸಬಹುದು ಎಂದು ಅನಿಸಿದೆ. ನಮ್ಮ ಸಾಮರ್ಥ್ಯದ ಮುಂದೆ ಸವಾಲೇ ಸಣ್ಣದು ಎಂದು ಅನಿಸುತ್ತಿದೆ. ಇದನ್ನು ಮೀರಿದ, ಕಲ್ಪನೆಯನ್ನು ವಿಸ್ತರಿಸುವ ಭಾರೀ ಕನಸನ್ನು ಕಾಣುವುದೇ ಇನ್ನು ಮುಂದಿನ ಸವಾಲು. ಸಣ್ಣ ಪುಟ್ಟವುಗಳಲ್ಲಿ ನನಗೆ ಆಸಕ್ತಿಯಿಲ್ಲ. ಜಗತ್ತು ಸದಾ ಸಾಧಕನ ಜತೆ ನಿಲ್ಲುತ್ತದೆ'.
ನಾವು ಎಷ್ಟೇ ಮುಂದುವರಿದರೂ ಮೂಲಭೂತ ಸಂಗತಿಗಳ ಬಗ್ಗೆ ಗಮನ ಕೊಡಬೇಕು. ಉತ್ತಮ ರಸ್ತೆ ನಿರ್ಮಿಸದೇ, ಸೇತುವೆ ಕಟ್ಟದೇ, ಫುಟ್‌ಪಾತ್, ಚರಂಡಿ, ಮೋರಿ, ಪಾಯಖಾನೆ ನಿರ್ಮಿಸದೇ ಯಾವುದೇ ನಗರವನ್ನೂ ನಿರ್ಮಿಸಲು ಸಾಧ್ಯವಿಲ್ಲ. ವಿಶ್ವದ ನಗರಗಳು ಇನ್ನೂ ಮೂಲಭೂತ ಸೌಕರ್ಯ ಹೊಂದಲು ಕಷ್ಟಪಡುತ್ತಿವೆ. ಅವುಗಳನ್ನು ಹೊಂದದೇ ಸುಂದರ ನಗರವನ್ನು ನಿರ್ಮಿಸಲು ಸಾಧ್ಯವೇ ಇಲ್ಲ. ಈ ದೇಶಗಳು ವರ್ಷ ವರ್ಷವೂ ರಸ್ತೆ ನಿರ್ಮಿಸುತ್ತಿರುತ್ತವೆಯೇ ಹೊರತು, ನಗರವನ್ನು ನಿರ್ಮಿಸುವುದಿಲ್ಲ.' ಮಕ್ತೌಮ್ ಈ ಮಾತುಗಳನ್ನು ಹೇಳುವಾಗ ಅವರ ಮನಸ್ಸಿನಲ್ಲಿ ಬೆಂಗಳೂರೇನಾದರೂ ಇತ್ತಾ? ಗೊತ್ತಿಲ್ಲ. ಕಾರಣ ನಾವು ವರ್ಷವರ್ಷಾ ದುರಸ್ಥಿ ಮಾಡಿದ ರಸ್ತೆಯನ್ನೇ ದುರಸ್ಥಿ ಮಾಡುತ್ತಿರುತ್ತೇವೆ. ಪ್ರತಿ ವರ್ಷವೂ ರಸ್ತೆ ಹೊಂಡ ಬಿದ್ದಿರುತ್ತವೆ. ಇನ್ನೂ ನಮಗೆ ಹೊಂಡವಿಲ್ಲದ, ಚೆಂದದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ನಾವು ರಸ್ತೆಗೆ ಸುರಿದ ಹಣದಲ್ಲಿ ಅದ್ಭುತ ಕಾಂಕ್ರೀಟ್ ರಸ್ತೆ ಹೊಂದಬಹುದಿತ್ತು. ಆದರೆ ನಾವಿನ್ನೂ ರಸ್ತೆಯಲ್ಲಿಯೇ ತೆವಳುತ್ತಿದ್ದೇವೆ ಅಂದ್ರೆ ನಾವು ಎಲ್ಲಿದ್ದೇವೆ ಎಂಬುದನ್ನು ತಿಳಿಯಬಹುದು.
ಮಕ್ತೌಮ್ ಹೇಳಿದ ಒಂದು ಮಾತು ಸಿದ್ದರಾಮಯ್ಯನವರ ಕುರಿತು ಹೇಳಿದಂತಿದೆ. 'ನಮ್ಮ ಹಿಂದಿನವರು ಯಾವ ರೀತಿ ಆಳ್ವಿಕೆ ಮಾಡಿದರೆಂಬುದು ನಮಗೆ ಮುಖ್ಯವಾಗಬಾರದು. ಅವರ ಅನಿಷ್ಟಗಳನ್ನೆಲ್ಲ ನಾವು ಹೊತ್ತುಕೊಳ್ಳಬೇಕಿಲ್ಲ. ಎಂಥ ಅಗಾಧ ಕೆಲಸವನ್ನೇ ಆಗಲಿ, ಅದನ್ನು ನೆರವೇರಿಸಲು ತಡವಾಯಿತು ಎಂಬುದಿಲ್ಲ. ಅದನ್ನು ಈಗಿನಿಂದಲೇ ಮಾಡಬಹುದು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳದವ ಹಾಗೂ ಅವಕಾಶವೇ ಸಿಗದವನ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಒಂದು ದೇಶದ ನಾಯಕನ ಒಂದು ನಿರ್ಧಾರ ಕೋಟ್ಯಂತರ ಜನರಿಗೆ, ಹಲವು ತಲೆಮಾರಿನ ಜನರಿಗೆ ಅನ್ವಯವಾಗುತ್ತದೆ. ಅಲ್ಲದೇ ಅಂದುಕೊಂಡಿದ್ದನ್ನು ನೆರವೇರಿಸಲು ಯಾವ ಸಂಗತಿಯೂ ಅಡ್ಡಬರಬಾರದು.'
'ಒಂದು ದೇಶದ, ರಾಜ್ಯದ ಮುಖ್ಯಸ್ಥನಾದವನು ತನ್ನ ಧೋರಣೆಯೇನು, ಆದ್ಯತೆಯೇನು ಎಂಬುದನ್ನು ಪದೇ ಪದೆ ಬಹಿರಂಗವಾಗಿ ಹೇಳಬೇಕು. ಅದಕ್ಕೆ ಜನರನ್ನು ಅಣಿಗೊಳಿಸಬೇಕು. ನಮ್ಮ ಅಂತರಂಗವನ್ನು ದೇಶವಾಸಿಗಳ ಮುಂದೆ ತೋಡಿಕೊಳ್ಳಬೇಕು. ಯಾಕೆಂದರೆ ದೇಶ ನನ್ನದೊಂದೇ ಅಲ್ಲ. ನನ್ನ ಕನಸುಗಳೇನು ಎಂಬುದನ್ನು ಜನರೊಂದಿಗೆ ಹಂಚಿಕೊಳ್ಳದೇ ಅವನ್ನು ನನಸಾಗಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನಮ್ಮ ಕನಸುಗಳು ಜನರ ಒಪ್ಪಿಗೆ, ಸ್ವೀಕೃತಿಯಿಂದಲೇ ಜಾರಿಗೆ ಬರಬೇಕು. ಜನರನ್ನು ಬದಲಾವಣೆಗೆ ಸಿದ್ಧ ಮಾಡದೇ ಯಾವ ಸುಧಾರಣೆಯನ್ನೂ ತರಲು ಸಾಧ್ಯವಿಲ್ಲ.'
ಸುಧಾರಣೆಗೆ ಅಡಿಯಿಟ್ಟವರ ಮನಸ್ಸು ಹೇಗಿರಬೇಕು. ಅವರು ಯಾವ ರೀತಿ ಯೋಚಿಸಬೇಕು? ಕೆಲವು ವರ್ಷಗಳ ಹಿಂದೆ ಕೆಲವು ದೊಡ್ಡ ಉದ್ದಿಮೆದಾರರು ಮಕ್ತೌಮ್ ಅವರನ್ನು ಭೇಟಿ ಮಾಡಿ, ಅವರ ತಂದೆ ಷೇಕ್ ರಶೀದ್‌ರನ್ನು ಭೇಟಿ ಮಾಡಿಸುವಂತೆ ಕೋರಿದರಂತೆ. ಆಗ ಷೇಕ್ ರಶೀದ್ ಅವರು ದುಬೈಯಿಂದ 35 ಕಿ.ಮಿ. ದೂರದಲ್ಲಿ ಜೆಬೆಲ್ ಅಲಿಯಲ್ಲಿ ಬಂದರು ನಿರ್ಮಾಣದಲ್ಲಿ ತೊಡಗಿದ್ದರು. ಫೋರ್ಟ್ ರಶೀದ್‌ನಲ್ಲಿ ಈಗಾಗಲೇ ಬಂದರು ಇರುವುದರಿಂದ ಮತ್ತೊಂದು ಬಂದರಿನ ಅಗತ್ಯವಿಲ್ಲವೆಂದು ಹೇಳುವುದು ಉದ್ದಿಮೆದಾರರ ಉದ್ದೇಶವಾಗಿತ್ತು. ಅದೇ ದಿನ ಮಕ್ತೌಮ್ ಉದ್ದೇಶಿತ ಜೆಬೆಲ್ ಬಂದರಿನ ತಾಣಕ್ಕೆ ಹೋದರಂತೆ. ಅಲ್ಲಿ ಅವರ ತಂದೆಯವರನ್ನು ಕಂಡು ಬಂದ ಉದ್ದೇಶ ವಿವರಿಸಿದರಂತೆ. ಅದಕ್ಕೆ ಷೇಕ್ ರಶೀದ್ ಏನೇನು ಪ್ರತಿಕ್ರಿಯೆ ನೀಡದೇ, ಮಕ್ತೌಮ್ ಅವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಬರುವಾಗ ಹೇಳಿದರಂತೆ-'ನೋಡು, ಇದರ ಅಗಾಧತೆಯನ್ನು ನಾನು ಬಣ್ಣಿಸಲಾರೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಈ ಬಂದರು ನಿರ್ಮಾಣಕ್ಕಾಗಿ ಒಂದು ವರ್ಷದೊಳಗೆ ಇಡೀ ದುಬೈ ಚಹರೆಯೇ ಬದಲಾಗಿರುತ್ತದೆ. ನಾನು ಸಮುದ್ರವನ್ನೇ ಬಂದರಿನ ಸನಿಹಕ್ಕೆ ತರುತ್ತಿದ್ದೇನೆಂಬುದು ಗೊತ್ತಿರಲಿ. ನಾವು ನಮ್ಮ ಹೆಗಲನ್ನು ಕುತ್ತಿಗೆಗೆ ಮಾತ್ರ ಸೀಮಿತಗೊಳಿಸಬಾರದು. ಬೇರೆ ಭಾರ ಹೊರುವುದಕ್ಕೂ ಕೊಡಬೇಕು.'
ಈ ನಿರ್ಧಾರದ ಬಗ್ಗೆ ಮಕ್ತೌಮ್ ಬರೆದುಕೊಂಡಿದ್ದಾರೆ-'ನನ್ನ ಅಪ್ಪನ ದೂರದೃಷ್ಟಿ ಎಂಥದ್ದು ಎಂಬುದರ ಅರಿವಾಗಿದ್ದೇ ಆಗ. ಆತ ಮೂವತ್ತು ವರ್ಷದ ಮುಂದಿನ ದುಬೈ ಹೇಗಿರಬೇಕೆಂಬ ಬಗ್ಗೆ ಅವರಿಗೆ ಕಲ್ಪನೆಯಿತ್ತು. ನನ್ನ ತಂದೆಯವರ ನಿರ್ಧಾರವನ್ನು ನಾನೂ ಸಹ ಸಂದೇಹದಿಂದಲೇ ನೋಡಿದ್ದೆ. ಅವರು ನನಗೆ ತಮ್ಮ ದೂರದೃಷ್ಟಿಯಿಂದಲೇ ಸನಿಹವಾಗುತ್ತಾ ಹೋದರು.'
ಮಕ್ತೌಮ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾರೆ. ಅದು ರಸ್ತೆಯಾಗಿರಬಹುದು, ರೈಲಿರಬಹುದು, ಬಂದರು, ಸೇತುವೆ, ವಿಮಾನ ನಿಲ್ದಾಣ ಹೀಗೆ ಯಾವುದೇ ಇರಬಹುದು. ಈಗಿನ ದುಬೈ ಮುಂದಿನ ಐವತ್ತು ವರ್ಷಗಳವರೆಗೂ ಪೈಪೋಟಿಯಲ್ಲಿ ಮೊದಲ ಸ್ಥಾನದಲ್ಲಿರಬೇಕೆಂದರೆ, ನೂರು ವರ್ಷಗಳ ದೂರದೃಷ್ಟಿಯನ್ನು ಹೊಂದಿರಬೇಕಾಗುತ್ತದೆ ಅಂತಾರೆ. 'ಒಂದೇ ಒಂದು ದಿನ ಹಿಂದೆ ಬೀಳಲು ತಯಾರಿಲ್ಲ' ಎಂಬುದು ಅವರ ಅನುದಿನದ ಮಂತ್ರ.  'ದಿನದ ಹಿನ್ನಡೆ ತಿಂಗಳ ಪ್ರಗತಿಗೆ ಮಾರಕ' ಎಂಬುದು ಅವರ ಘೋಷ ವಾಕ್ಯ.
ಮಕ್ತೌಮ್ ಇಷ್ಟವಾಗಲು ಹಲವಾರು ಕಾರಣಗಳಿವೆ. ಒಂದು ಕೋನದಿಂದ ಇವರು ವಿಚಾರ, ವೇಗ, ಫಲ, ಹವ್ಯಾಸಗಳೆಲ್ಲ ರಿಚರ್ಡ್ ಬ್ರಾನ್‌ಸನ್‌ನಂತಿವೆ. ಮಕ್ತೌಮ್ ಕುಳಿತಲ್ಲಿ ಕುಳಿತಿರೊಲ್ಲ. ಕುದುರೆ ಷೋಕಿ. ಸ್ವತಃ ಕುದುರೆ ಸವಾರ. ಜಗತ್ತಿನ ಅತ್ಯುತ್ತಮ ಕುದುರೆಗಳ ಮಾಲೀಕ. ಆಡದ ಆಟವಿಲ್ಲ. ಸೇನೆಯಲ್ಲೂ ಕಾರ್ಯನಿರ್ವಹಿಸಿದ ಅನುಭವವಿದೆ. ಹೊಸ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿದಿನವೂ ಸ್ಮರಣೀಯವಾಗಿರಬೇಕೆಂದು ಮಿಡಿಯುವ ಮನಸ್ಸು. ದುಬೈ ಮೊದಲ ಆದ್ಯತೆ. ಅದೇ ಉಸಿರು. ಜಗತ್ತಿನಲ್ಲಿ ಶ್ರೇಷ್ಠವಾದುದು, ಉತ್ಕೃಷ್ಟವಾದುದು ದುಬೈನಲ್ಲಿರಬೇಕು ಎಂಬ ಸ್ವಾರ್ಥ.
ಮಕ್ತೌಮ್ ತಲೆಯಲ್ಲಿ ಮೊಳಕೆಯೊಡೆವ ಪುಟ್ಟ ವಿಚಾರ, ದುಬೈ ಎಂಬ ಮರಳುಗಾಡಿನಲ್ಲಿ ನಂದನವನವಾಗಿ ಅರಳುತ್ತದೆ.
 ನಿಜ!
- ವಿಶ್ವೇಶ್ವರ ಭ
ಟ್
  ಕೃಪೆ:ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website