ಸಿಂಹನಗದ್ದೆಯ ಜ್ವಾಲಾಮಾಲಿನಿ,ಗೇರುಸೊಪ್ಪಾ,ರಾಮನಗಿಂಡಿ


ಸಿಂಹನಗದ್ದೆಯ ಜ್ವಾಲಾಮಾಲಿನಿ
ಮಲೆನಾಡಿನ ತವರೂರೆಂದೇ ಪ್ರಖ್ಯಾತವಾಗಿದೆ ಚಿಕ್ಕಮಗಳೂರು ಜಿಲ್ಲೆ. ಪ್ರವಾಸಿಗರು ಇಷ್ಟಪಡುವ ಅಸಂಖ್ಯಾತ ತಾಣಗಳು ಜಿಲ್ಲೆಯಲ್ಲಿವೆ. ಹಸಿರು ಸಿರಿಯಿಂದ ತುಂಬಿರುವ 'ಕಾಫಿ ಜಿಲ್ಲೆ'ಯಲ್ಲಿ ಧಾರ್ಮಿಕ ಕ್ಷೇತ್ರಗಳೂ ಅಸಂಖ್ಯಾತ. ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠ ಕೂಡ ಅಂಥ ಶಕ್ತಿಕ್ಷೇತ್ರಗಳಲ್ಲಿ ಒಂದು.


ಸಿಂಹನಗದ್ದೆ ಮೂಲತಃ ಜೈನ ಕ್ಷೇತ್ರ. ಬಸದಿಗಳ ಬೀಡು. ಸಾವಿರ ವರ್ಷ ಹಿಂದೆ ಪ್ರತಿಷ್ಠಾಪಿಸಲಾದ ಶಾಂತಿನಾಥ ಸ್ವಾಮಿ, ನಿತ್ಯಪೂಜೆಗೊಳ್ಳುವ ಚಂದ್ರನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಬಸದಿ, ಬ್ರಹ್ಮದೇವರ ಬಸದಿ, ಬಾಹುಬಲಿಸ್ವಾಮಿ ಬಸದಿಗಳಿವೆ. ಆದರೆ ವಿಶೇಷವಾಗಿ ಗಮನ ಸೆಳೆಯುತ್ತಿರುವುದು 'ಯಕ್ಷಿ' ಜ್ವಾಲಾಮಾಲಿನಿ ದೇವಸ್ಥಾನ. ಇದು ಕೂಡ ಜೈನ ಮಠದ ನಿರ್ವಹಣೆಗೆ ಒಳಪಟ್ಟಿದೆ.


ಹಿಂದೆ ರಾಜಮನೆತನಗಳಲ್ಲಿ ಯಕ್ಷಿಯವರನ್ನು ಪೂಜಿಸುವ ಪದ್ಧತಿಯೊಂದು ಗಾಢ ಪ್ರಭಾವ ಬೀರಿದೆ. ಅದರಲ್ಲಿಯೂ ವಿಶೇಷವಾಗಿ ಜ್ವಾಲಾಮಾಲಿನಿ, ಅಂಬಿಕಾ, ಪದ್ಮಾವತಿ, ಚಾಮುಂಡಾ ಯಕ್ಷಿಯರ ಪ್ರಭಾವ ಹಲವು ರಾಜಕುಲದಲ್ಲಿ ಇದ್ದುದಾಗಿ ಶಾಸನಗಳಿಂದ ತಿಳಿದುಬರುತ್ತದೆ. ಜ್ವಾಲಾಮಾಲಿನಿ ದೇವಿಯು ಎಂಟನೆಯ ತೀರ್ಥಂಕರರಾದ ಚಂದ್ರನಾಥರ ಶಾಸನದೇವಿಯಾಗಿದ್ದಳು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ.

ಜ್ವಾಲಾಮಾಲಿನಿ ದೇವಸ್ಥಾನದ ವಿಶೇಷ ಎಂದರೆ ಭಕ್ತಾದಿಗಳ ಅಭೀಷ್ಟ ಪೂರೈಕೆಯಾಗುತ್ತದಯೋ ಇಲ್ಲವೋ ಎಂಬ ಖಚಿತ ಮಾಹಿತಿ ದೇವಿಯ ಅನುಗ್ರಹದಿಂದ ದೊರಕುತ್ತದೆ. ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ತಮ್ಮ ಮನಸ್ಸಿನ ಅಹವಾಲನ್ನು ಆಕೆಯ ಮುಂದಿಟ್ಟರೆ, ಆ ಕಾರ್ಯ ಸಫಲವಾಗುವುದಾದರೆ, ದೇವಿಯ ಬಲಭಾಗದಿಂದ ಹೂವಿನ ಪ್ರಸಾದವಾಗುತ್ತದೆ. ಪ್ರಸಾದ ಕೇಳಲೆಂದೇ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ.

ದೇವಸ್ಥಾನದ ವಾಸ್ತುಶಿಲ್ಪದಂತೆ ಚಂದ್ರಶಾಲೆಯೂ ವಿಶಿಷ್ಟ. ಆಯತಾಕಾರವಾಗಿ ನಿರ್ಮಿಸಿರುವ ಚಂದ್ರಶಾಲೆಯು ಮನಮೋಹಕವಾಗಿದ್ದು ತಂಪಾದ ವಾತಾವರಣದಿಂದ ಕೂಡಿದೆ.


ಸಿಂಹ, ಎತ್ತು ಜತೆಯಾಗಿದ್ದವು!

ಜ್ವಾಲಾಮಾಲಿನಿ ದೇವಿಯು ಮೂಲತಃ ಉತ್ತರ ಕನ್ನಡದ ಗೇರುಸೊಪ್ಪೆ ಕ್ಷೇತ್ರದವಳು. ಹಿಂದೆ ಅಲ್ಲಿ ಸಮಂತಭದ್ರ ಸ್ವಾಮಿಗಳು ಜ್ವಾಲಾಮಾಲಿನಿ ದೇವಿಯ ಆರಾಧಕರಾಗಿದ್ದು, ಮಠ ಸ್ಥಾಪಿಸಿದ್ದರು. ಒಂದು ದಿನ ದೇವಿಯು, ಸ್ವಾಮಿಗಳಿಗೆ ಸ್ವಪ್ನದಲ್ಲಿ ಪ್ರತ್ಯಕ್ಷವಾಗಿ, 'ಈ ಕ್ಷೇತ್ರವು ಕ್ಷೀಣದೆಸೆಯನ್ನು ಹೊಂದುವ ಸಂಭವವಿರುವುದರಿಂದ ನನ್ನನ್ನು ಬೇರೆಡೆಗೆ ಸಾಗಿಸು. ಅದಕ್ಕಾಗಿ ನನ್ನನ್ನು ಎತ್ತಿನ ಬಂಡಿಯಲ್ಲಿ ಕೂಡಿಸಿಕೊಂಡು ಹೋಗು. ಹೋಗುತ್ತಿರುವಾಗ ಯಾವ ಸ್ಥಳದಲ್ಲಿ ಬದ್ಧ ವೈರಿಗಳಾದ ಸಿಂಹ ಮತ್ತು ದನಗಳು ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯವಾಗಿ ಆಡುತ್ತಿರುತ್ತವೆಯೋ, ಅಂತಹ ಸ್ಥಳದಲ್ಲಿ ನನ್ನನ್ನು ಪ್ರತಿಷ್ಠಾಪಿಸು' ಎಂಬುದಾಗಿ ಆಜ್ಞೆಯಿತ್ತಳು. ಅದರಂತೆ ಸಮಂತಭದ್ರ ಸ್ವಾಮಿಯವರು ದೇವಿಯು ಕನಸಿನಲ್ಲಿ ತೋರಿದಂತಹ ಸ್ಥಳವನ್ನು ಆನ್ವೇಷಣೆ ಮಾಡುತ್ತ ಈ ಕ್ಷೇತ್ರದ ಬಳಿ ಬಂದಾಗ ಮನಸ್ಸಿಗೆ ಒಂದು ರೀತಿಯ ಆಹ್ಲಾದ ಉಂಟಾಯಿತು. ಅನತಿ ದೂರ ಸಾಗುತ್ತಿರುವಾಗಲೇ, ಒಂದು ಗದ್ದೆಯಲ್ಲಿ ದನಗಳು ಮೇಯುತ್ತಿದ್ದವು. ಆ ಗುಂಪಿನ ಮಧ್ಯದಲ್ಲಿ ಒಂದು ಸಿಂಹವು ಕರುಗಳೊಡನೆ ಆಟವಾಡುತ್ತಿತ್ತು. ಇದನ್ನು ಕಂಡ ಸ್ವಾಮಿಗಳು ಆನಂದದಿಂದ ಪುಳಕಿತರಾಗಿ, 'ದೇವಿಯು ಅನುಗ್ರಹದಿಂದ ಇಂತಹ ಸನ್ನಿವೇಶವು ಪ್ರಾಪ್ತವಾಯಿತು' ಎಂದುಕೊಂಡು, ಆ ಗದ್ದೆಯಲ್ಲಿಯೇ, ಒಂದು ಶುಭ ಮುಹೂರ್ತದಲ್ಲಿ ಅಮ್ಮನವರನ್ನು ಸ್ಥಾಪನೆ ಮಾಡಿ, ಈ ಸ್ಥಳಕ್ಕೆ ಸಿಂಹನಗದ್ದೆ ಎಂದು ಹೆಸರಿಟ್ಟರು. ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯರು ಸಿಂಹಹನಗದ್ದುಗೆ ಅತಿಶಯ ಕ್ಷೇತ್ರದ ಹಾಲಿ ಜೈನ ಪೀಠಾಧೀಶ್ವರರು. ಶ್ರೀ ಮಠವು ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯನ್ನು ನಡೆಸುತ್ತಿದೆ.


ಹೀಗೆ ಬನ್ನಿ

ಶಿವಮೊಗ್ಗದಿಂದ ಉಂಬ್ಳೆಬೈಲು- ಮುತ್ತಿನಕೊಪ್ಪ ಮಾರ್ಗವಾಗಿ 55 ಕಿಮೀ. ಸಾಗಿ ಬಂದರೆ, ನರಸಿಂಹರಾಜಪುರದ ಮುಖ್ಯ ರಸ್ತೆಯ ಪಕ್ಕದಲ್ಲೇ ಜ್ವಾಲಾಮಾಲಿನಿ ದೇವಸ್ಥಾನವಿದೆ. ಚಿಕ್ಕಮಗಳೂರು ಮಾರ್ಗವಾಗಿ ಬರುವುದಾದರೆ, ಬಾಳೆಹೊನ್ನೂರು ಮುಖಾಂತರ ಸಾಗಿ ನರಸಿಂಹರಾಜಪುರವನ್ನು ತಲುಪಬಹುದು. ಬೆಂಗಳೂರಿನಿಂದ 308 ಕಿ.ಮೀ. ಎಲ್ಲಾ ಭಾಗಗಳಿಂದಲೂ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್‌ಗಳು ಸಾಕಷ್ಟಿವೆ. ಭಕ್ತಾದಿಗಳಿಗೆ ನಿತ್ಯವೂ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ಸಂಜೆಯ ಭೋಜನ ವ್ಯವಸ್ಥೆ, ಉಚಿತ ವಸತಿ ಸೌಲಭ್ಯ ಮಠದಿಂದ ಇದೆ.
- ಭಾಗ್ಯ ನಂಜುಂಡಸ್ವಾಮಿ
  
ಸಾಳ್ವರ ರಾಜಧಾನಿಯ ಸೆಳೆತ
ಗೇರುಸೊಪ್ಪಾಕ್ಕೆ ಬರುವ ಪ್ರವಾಸಿಗರಿಗೆ ಕೊರತೆ ಇಲ್ಲ. ಶರಾವತಿ ಟೇಲ್‌ರೇಸ್ ಯೋಜನೆಯ ಅಣೆಕಟ್ಟು, ವಿದ್ಯುತ್ ಸ್ಥಾವರ ನೋಡುತ್ತಾರೆ. ದಟ್ಟಾರಣ್ಯದ ನೀಡುವ ಅನುಭೂತಿಯಲ್ಲಿ ಮೈಮರೆಯುತ್ತಾರೆ. ಆದರೆ...

ಹೊರಗಿನವರೇಕೆ? ಈ ಗೇರುಸೊಪ್ಪಾ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೇ ಹೆಚ್ಚಿನವರಿಗೆ ತಿಳಿದಿಲ್ಲ, ಹಿಂದೊಮ್ಮೆ ಈ ಪ್ರದೇಶ ವೈಭವದ ಆಡಳಿತ ಕಂಡಿತ್ತು, ರಾಜಧಾನಿಯಾಗಿ ಮೆರೆದಿತ್ತು ಎಂದು!

ಗೇರುಸೊಪ್ಪಾ ಸುಮಾರು 250 ವರ್ಷ ಸಾಳ್ವ ಅರಸರ ರಾಜಧಾನಿಯಾಗಿತ್ತು. ಅವರು ಜೈನಧರ್ಮೀಯರು. ಶರಾವತಿ ಅಣೆಕಟ್ಟೆ ಸನಿಹದಲ್ಲೇ ಇರುವ ಈ ಐತಿಹಾಸಿಕ ತಾಣಕ್ಕೆ ಭೇಟಿ ಕೊಡುವವರು ವಿರಳವೇ. ಕಾಳುಮೆಣಸು ಇತ್ಯಾದಿ ಅತ್ಯಮೂಲ್ಯ ಸಾಂಬಾರ ಪದಾರ್ಥಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆದು ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದ ಈ ರಾಜಧಾನಿ ಈಗ ಸಂಪೂರ್ಣ ಪಾಳು ಬಿದ್ದಿದೆ. ದಟ್ಟಾರಣ್ಯದಲ್ಲಿ ಹೂತು ಬಿದ್ದಿರುವ ಭವ್ಯ ಕಟ್ಟಡಗಳು, ಹೆಬ್ಬಾಗಿಲುಗಳು, ಅಳಿದುಳಿದ ಮನೆ ಮತ್ತು ಜಿನ ಮಂದಿರದ ಅವಶೇಷಗಳು, ಕಲ್ಲಿನಕಂಬಗಳು, ಹೆಜ್ಜೆಹೆಜ್ಜೆಗೂ ಹೆದ್ದಾರಿ ಪಕ್ಕದಲ್ಲೇ ಕಾಣಸಿಗುವ ಸಾವಿರಾರು ಬಾವಿಗಳು, ಗುಡಿಗೋಪುರಗಳ ಅಡಿಪಾಯಗಳು, ಕೇರಿಗಳು, ಒಳಚರಂಡಿ ವ್ಯವಸ್ಥೆ, ತುಂಡಾಗಿ ಬಿದ್ದಿರುವ ಗೋಡೆಗಳು, ಶಿಲಾ ಕಲ್ಲಿನ ವಿಗ್ರಹಗಳು... ಮೊಗೆದಷ್ಟೂ ಸಿಗುವ ಐತಿಹಾಸಿಕ ಕುರುಹುಗಳು.

ಪಾಳು ಬಿದ್ದಿರುವ ಈ 'ರಾಜಧಾನಿ'ಯ ಪ್ರಮುಖ ಆಕರ್ಷಣೆ ಎಂದರೆ ಚತುರ್ಮುಖ ಬಸದಿ. ಅಲ್ಪಸ್ವಲ್ಪ ಶಿಥಿಲಗೊಂಡರೂ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಬಸದಿಯ ಶಿಥಿಲ ಭಾಗಗಳನ್ನು ಪ್ರಾಚೀನ ಶೈಲಿಯಲ್ಲಿಯೇ ದುರಸ್ತಿಗೊಳಿಸುವ ಕಾರ್ಯವನ್ನು ಪ್ರಾಚ್ಯವಸ್ತು ಇಲಾಖೆ ನಡೆಸುತ್ತಿದೆ. ಬಸದಿಯ ನಾಲ್ಕು ದಿಕ್ಕಿಗಳಲ್ಲಿ ನಾಲ್ಕು ಹೆಬ್ಬಾಗಿಲುಗಳಿವೆ. ಗೋಡೆಗಳಲ್ಲಿ ಒಂದೇ ರೀತಿಯ ಶಿಖರಗಳಿರುವ ಮಂಟಪಗಳಿವೆ. ಆನೆ ಮತ್ತು ನವಿಲುಗಳ ಸಾಲು, 20 ಭುಜಗಳ ನಕ್ಷತ್ರಾಕೃತಿಯ ವಿಶಿಷ್ಟ ರಚನೆ ಕಣ್ಮನ ಸೆಳೆಯುವಂತಿದೆ. ಗರ್ಭಗುಡಿಯಲ್ಲಿರುವ ಜಿನ ವಿಗ್ರಹ ಗ್ರಾನೈಟ್ ಶಿಲೆಯಿಂದ ನಿರ್ಮಾಣವಾಗಿದೆ. 3 ಅಡಿ ಎತ್ತರದ 4 ಭವ್ಯ ಮೂರ್ತಿಗಳನ್ನು ಕಪ್ಪು ಹಸಿರು ಮಿಶ್ರಿತ ಶಿಲೆಯಿಂದ ನಿರ್ಮಿಸಲಾಗಿದೆ. ಜೈನರ 24 ತೀರ್ಥಂಕರರ ಪೈಕಿ ಇವು ಮೊದಲ 4 ತೀರ್ಥಂಕರ ಮೂರ್ತಿಗಳಾಗಿವೆ. ದಕ್ಷಿಣ ಮುಖವಾಗಿ ವೃಷಭದೇವ, ಪಶ್ಚಿಮಕ್ಕೆ ಅಜಿತ, ಉತ್ತರಮುಖವಾಗಿ ಶಂಭವ ಮತ್ತು ಪೂರ್ವಕ್ಕೆ ಅಭಿನಂದನ ತೀರ್ಥಂಕರರ ವಿಗ್ರಹಗಳಿವೆ. ಈ ವಿಗ್ರಹಗಳ ಅಕ್ಕಪಕ್ಕ ಆನೆ, ಕುದುರೆ, ಎತ್ತು ಮತ್ತು ಮಂಗಗಳ ಲಾಂಛನವಿದೆ. ಮೇಲ್ನೋಟಕ್ಕೆ 4 ಮೂರ್ತಿಗಳು ಒಂದೇ ರೀತಿಯಾಗಿ ಕಂಡರೂ ಒಂದಕ್ಕಿಂತ ಇನ್ನೊಂದು ಅಪೂರ್ವ ಸೌಂದರ್ಯದಿಂದ ಕೂಡಿದೆ.

ಗೇರುಸೊಪ್ಪೆ ಸಾಮ್ರಾಜ್ಯವನ್ನಾಳಿದ ಚೆನ್ನಭೈರಾದೇವಿ ಈ ಚತುರ್ಮುಖ ಬಸದಿಯನ್ನು ನಿರ್ಮಿಸುವ ಕಾರ್ಯನಡೆಸುತ್ತಿರುವಾಗ ಕೆಳದಿ ಅರಸರ ದಾಳಿಯಾಯಿತು. ಶತ್ರುಗಳೊಡನೆ ಹೋರಾಡಿ ರಾಣಿ ಪರಾಜಯ ಹೊಂದಿದ್ದರಿಂದ ಹಲವು ಶಿಲಾ ಕಟ್ಟಡಗಳ ನಿರ್ಮಾಣ ಅರೆಬರೆಯಾಗಿ ನಿಂತು ಹೋಯಿತು ಎಂಬುದು ಇತಹಾಸಕಾರರ ಅಭಿಮತ.

ನೀವು ಗೇರುಸೊಪ್ಪಾಕ್ಕೆ ಬಂದರೆ ಮರೆಯದೇ ಇಲ್ಲಿಗೆ ಭೇಟಿ ನೀಡುತ್ತೀರಿ ತಾನೆ?

ವೈಭವದ ಉತ್ತುಂಗ

ಗೇರುಸೊಪ್ಪಾಕ್ಕೆ ಹಿಂದೆ ಕ್ಷೇಮಪುರ ಎಂಬ ಹೆಸರಿತ್ತು. ಸುಮಾರು 15 ಕಿ.ಮೀ. ವ್ಯಾಪ್ತಿಯ ಸುತ್ತಳತೆಯನ್ನು ಒಳಗೊಂಡ ರಾಜಧಾನಿ. ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ. ಈ ವಂಶದ ರಾಣಿ ಚೆನ್ನಭೈರಾದೇವಿ 54 ವರ್ಷ ಕಾಲ ಆಳ್ವಿಕೆ ನಡೆಸಿ ವೈಭವದಿಂದ ಅಭಿವೃದ್ಧಿ ಸಾಧಿಸಿದ್ದಳು ಎನ್ನುತ್ತದೆ ಇತಿಹಾಸ. ಸುಮಾರು 108 ಜೈನ ಬಸದಿಗಳು ಇಲ್ಲಿ ಇದ್ದವಂತೆ. ಇದರಿಂದಾಗಿ ಈ ಪ್ರದೇಶವನ್ನು 'ನಗರ ಬಸದಿ ಕೇರಿ' ಎಂದೂ ಕರೆಯಲಾಗುತ್ತಿತ್ತು. ಈಗಲೂ ಸಹ ಗೇರುಸೊಪ್ಪಾದಲ್ಲಿ, ಶರಾವತಿ ನದಿಯ ಆಚೆಗಿನ ದಡದಲ್ಲಿ ನಗರಬಸ್ತಿ ಕೇರಿ ಎಂಬ ಗ್ರಾಮವಿದೆ. ಈಗ ಅಷ್ಟೊಂದು ಬಸದಿಗಳು ಕಾಣುವುದಿಲ್ಲ. ಬಹುತೇಕ ಬಸದಿಗಳು  ಶಿಥಿಲಗೊಂಡಿವೆ.

ಹೀಗೆ ಬನ್ನಿ
ಬೆಂಗಳೂರಿನಿಂದ -ಹೊನ್ನಾವರ ಮಾರ್ಗವಾಗಿ ಬಂದರೆ ಸುಮಾರು 390 ಕಿ.ಮೀ. ದೂರದಲ್ಲಿ ಗೇರುಸೊಪ್ಪೆ ಇದೆ. ಇಲ್ಲಿಂದ ಶರಾವತಿ ಟೇಲ್‌ರೇಸ್ ಡ್ಯಾಂನ ಕೆಳಭಾಗದಲ್ಲಿ ಕೆ.ಪಿ.ಟಿ. ಸಿ.ಎಲ್ ನಿರ್ಮಿಸಿರುವ ಶರಾವತಿ ಸೇತುವೆ ಮೂಲಕ 5 ಕಿ.ಮೀ. ದೂರದಲ್ಲಿ ಈ ಐತಿಹಾಸಿಕ ಸ್ಥಳವಿದೆ. ತಾಲೂಕು ಕೇಂದ್ರದಿಂದ ಹೊನ್ನಾವರದಿಂದ 30 ಕಿ.ಮೀ. ದೂರದಲ್ಲಿರುವ ಗೇರುಸೊಪ್ಪೆ ತಲುಪಿ ಇಲ್ಲಿಗೆ ಬರಬಹುದು. ಬಂಗಾರಮಕ್ಕಿ ದೇವಾಲಯದ ರಸ್ತೆಯಲ್ಲಿ ಕೇವಲ 2 ಕಿ.ಮೀ.ದೂರ ಸಾಗಿ ದೋಣಿಯಲ್ಲಿ ಶರಾವತಿ ನದಿ ದಾಟಿ ಚಾರಣದ ಮೂಲಕ ಸಹ ಈ ಸ್ಥಳವನ್ನು ತಲುಪಬಹುದು.
- ಚಿತ್ರ-ಲೇಖನ: ಎನ್.ಡಿ.ಹೆಗಡೆ ಆನಂದಪುರಂ
  
ಇಲ್ಲೇ ಕಡಲನು ಕಂಡಿ


ಕರಾವಳಿ ತೀರವೇ ಹಾಗೆ. ಪ್ರವಾಸಿಗರ ಸ್ವರ್ಗ. ಅರಬ್ಬಿಸಮುದ್ರ ನಿರ್ಮಿಸಿದ, ರೋಮಾಂಚನ ನೀಡುವ ಕಡಲ ಕಿನಾರೆಗಳಂತೂ ಅದ್ಭುತ. ಕೆಲವೊಂದು ಕಿನಾರೆಗಳಂತೂ ಸಹಜ ಸೌಂದರ್ಯದಿಂದ ಕಂಗೊಳಿಸುತ್ತಿದ್ದರೂ ಪ್ರವಾಸಿಗರಿಂದ ದೂರವೇ ಉಳಿದಿವೆ. ಅಂತಹ ಕಡಲಕಿ ನಾರೆಗಳಲ್ಲಿ ಈ ರಾಮನಗಿಂಡಿ ಕಿನಾರೆಯೂ ಒಂದು. ಸುಮಾರು 300 ಅಡಿಗಳ ಎತ್ತರದ ಗುಡ್ಡದಿಂದ ಕಾಣುವ ಇಲ್ಲಿಯ ಸಮುದ್ರದ ದೃಶ್ಯವಂತೂ ವ್ಹಾವ್... ವರ್ಣನಾತೀತ. ಸೂರ್ಯಾಸ್ತದ ನೋಟ ನಯನಮನೋಹರ. ಗುಡ್ಡವಿಳಿದು ಬೀಚ್ ಪ್ರವೇಶಿಸಿದರೆ ಪ್ರಶಾಂತವಾದ ಕಡಲು ನಮ್ಮೆಲ್ಲ ಚಿಂತೆಯನ್ನೂ ಮರೆಸುವಂತಿದೆ. ಆದರೆ, ಪ್ರಶಾಂತ ಕಡಲೆಂದು ನೀರಿಗಿಳಿಯದಿರಿ, ತುಂಬಾ ಆಳವಿರುವುದರಿಂದ ಅಪಾಯ ಜಾಸ್ತಿ.


ಹೋಗೋದು ಹೇಗೆ?

ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಧಾರೇಶ್ವರದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಬಲಗಡೆ ಬೆತ್ತಗೇರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಗುಡ್ಡವೇರಿದರೆ ಕಾಣಿಸುವುದು ಈ ನಿಸರ್ಗ ರಮಣೀಯ ತಾಣ. ಮುಂದಿನ ನಿಮ್ಮ ಕರಾವಳಿ ತೀರದ ಪ್ರವಾಸ ಪಟ್ಟಿಯಲ್ಲಿ ಈ ರಾಮನಗಿಂಡಿಯೂ ಸೇರಿರಲಿ.


- ಎಲ್.ಎಂ.ಹೆಗಡೆ, ಸಾಗರ
   
ಕೃಪೆ:ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website