ಹಿಮಾಲಯದಲ್ಲಿ ಸಾಧನೆ ಮೆರೆದ ಮಹಿಳೆಯರ ಸ್ಫೂರ್ತಿಗಾಥೆ
ಮಹಾತ್ಮ ಗಾಂಧಿಯವರ ನಿಕಟವರ್ತಿ ಯಾಗಿ ಪರಿವರ್ತಿತರಾದ ಬ್ರಿಟಿಷ್ ನೌಕಾಧಿಕಾರಿಯ ಪುತ್ರಿ ಮೀರಾ ಬೆನ್ ಅವರ ಪರಿಸರ ಸಂಬಂಧಿ ಕೆಲಸಗಳ ಬಗ್ಗೆ ಕಳೆದ ಅಂಕಣದಲ್ಲಿ ಬರೆದಿದ್ದೆ. ಈ ಬಾರಿ ಸುಂದರ ಹಾಗೂ ಸೂಕ್ಷ್ಮವಾದ ಹಿಮಾಲಯದ ಕುರಿತಾಗಿ ಇನ್ನೂ ಹೆಚ್ಚಿನ ಸೂಕ್ಷ್ಮ ಗ್ರಹಿಕೆಗಳಿರುವ ಮತ್ತೊಬ್ಬರು ಇಂಗ್ಲಿಷ್ ಮಹಿಳೆಯ ಬಗ್ಗೆ ಬರೆಯುತ್ತಿದ್ದೇನೆ.
ಜರ್ಮನ್- ಇಂಗ್ಲಿಷ್ ತಂದೆ ತಾಯಿ ಹೊಂದಿದ್ದ ಕ್ಯಾಥೆರಿನ್ ಮೇರಿ ಹೈಲ್ಮನ್ ಜನಿಸಿದ್ದು ಲಂಡನ್ನಲ್ಲಿ 1901ರಲ್ಲಿ. ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದ ಆಕೆಯ ತಂದೆಯನ್ನು ಜನಾಂಗೀಯ ದೃಷ್ಟಿಯಿಂದ `ಪರಕೀಯ' ಎಂದು ಪರಿಗಣಿಸಿ ಮೊದಲ ಮಹಾಯುದ್ಧ ಸಂದರ್ಭದಲ್ಲಿ ಅವರನ್ನು ಗಡಿ ಬಿಟ್ಟು ತೆರಳಬಾರದೆಂದು ನಿರ್ಬಂಧಿಸಲಾಗಿತ್ತು. ಯುದ್ಧದ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ಮಗಳೂ ಕೂಡ ಜನಾಂಗದ್ವೇಷಿ ಜನರಿಂದ ಶತ್ರುತ್ವವನ್ನು ಅನುಭವಿಸಿದ್ದರು. ಆ ನಂತರ, ಕೆಲವು ಭಾರತೀಯ ವಿದ್ಯಾರ್ಥಿಗಳನ್ನು ಅವರು ಭೇಟಿಯಾದರು. ಅವರಿಂದ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಂಡರು. 1932ರಲ್ಲಿ ಭಾರತಕ್ಕೆ ಬಂದು ಉದಯಪುರದ ಶಾಲೆಯಲ್ಲಿ ಸಿಬ್ಬಂದಿಯಾಗಿ ಸೇರಿಕೊಳ್ಳಲು ಕ್ಯಾಥೆರಿನ್ಗೆ ಇದೇ ಪ್ರೇರಣೆಯಾಯಿತು. ಇದಾದ ಎರಡು ವರ್ಷಗಳ ನಂತರ ಮೊದಲ ಬಾರಿಗೆ ಅವರು ಗಾಂಧಿಯನ್ನು ಭೇಟಿಯಾದರು. ನಂತರದ ಕೆಲವು ವರ್ಷಗಳು ಸೇವಾಗ್ರಾಮದಲ್ಲೇ ಇದ್ದು ಗಾಂಧಿತತ್ವಗಳನ್ನು ಆಧರಿಸಿದ ಮೂಲ ಶಿಕ್ಷಣದ ಪ್ರಯೋಗಗಳೊಂದಿಗೆ ಅವರು ಕೆಲಸ ಮಾಡಿದರು. ಗಾಂಧಿಯ ಕುರಿತಾಗಿ ಅವರ ಮೆಚ್ಚುಗೆ ಗಾಢವಾಯಿತು. ಮಹಾತ್ಮರ ಕೆಲಸಕ್ಕೆ ನಿಸ್ವಾರ್ಥದ ಬೆಂಬಲದ ಬಲ ತುಂಬಿದ್ದ ಕಸ್ತೂರ್ ಬಾ ಅವರ ಅಚಲವಾದ ದೃಢತೆಯ ಬಗೆಗಂತೂ ಅವರ ಮೆಚ್ಚುಗೆ ಇನ್ನೂ ಹೆಚ್ಚಾಯಿತು.
ಇಷ್ಟರಲ್ಲಿ ಕ್ಯಾಥೆರಿನ್ ಅವರು ಸರಳಾ ದೇವಿ ಎಂಬ ಭಾರತೀಯ ಹೆಸರು ಪಡೆದುಕೊಂಡಿದ್ದರು. ಗಾಂಧಿಯ ಆಶ್ರಮದಲ್ಲಿ ಅವರಿಗೆ ಪರಿಪೂರ್ಣತೆಯ ಭಾವನೆ ದಕ್ಕುತ್ತಿತ್ತು. ಆದರೆ ಮಧ್ಯ ಭಾರತದ ಹವಾಮಾನ ಅವರಿಗೆ ಒಗ್ಗಿ ಬರಲಿಲ್ಲ. ಅತಿಸಾರ, ಮಲೇರಿಯಾ ಸಮಸ್ಯೆಗಳು ಅವರನ್ನು ಕಾಡಿದವು. ಖಾದಿ ಪ್ರಚಾರಕ್ಕಾಗಿ ಅಲ್ಮೋರಾದಲ್ಲಿ ಸ್ಥಾಪಿಸಲಾಗಿದ್ದ ಆಶ್ರಮದ ಬಗ್ಗೆ ಅವರಿಗೆ ಗಾಂಧಿಯವರ ಸ್ನೇಹಿತ ಹಾಗೂ ಅನುಯಾಯಿಯಾಗಿದ್ದ ಆಚಾರ್ಯ ಜೆ.ಬಿ. ಕೃಪಲಾನಿ ಅವರಿಂದ ತಿಳಿಯಿತು. ಆಗ, ಸರಳಾ ಉತ್ತರದತ್ತ ಹೊರಟರು. ಅಲ್ಮೋರಾದಲ್ಲಿ ಆಶ್ರಮ ನಡೆಸುತ್ತಿದ್ದ ಗುಜರಾತಿ ಗಾಂಧಿವಾದಿ ಶಾಂತಿಲಾಲ್ ತ್ರಿವೇದಿ ಅವರ ಸಂಪರ್ಕಕ್ಕೆ ಬಂದರು. ಅಲ್ಲಿನ ಬೆಟ್ಟಗುಡ್ಡ, ಅರಣ್ಯಗಳಿಂದ ಆಕರ್ಷಿತರಾದ ಅವರು ಬಹುಬೇಗನೇ ಅದಕ್ಕೆ ಹೊಂದಿಕೊಂಡರು.
1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾಯಿತು. ಅಲ್ಮೋರಾ ಜಿಲ್ಲೆಯಲ್ಲಿ ನಿರಂತರ ಪ್ರತಿಭಟನೆಗಳಾದವು.
ರೈತರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಗಳನ್ನು ನಡೆಸಿದರು. ರಾಷ್ಟ್ರಧ್ವಜ ಬಹಿಷ್ಕರಿಸಿದರು. ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರಭುತ್ವ ತೀವ್ರವಾಗಿ ಪ್ರತಿಕ್ರಿಯಿಸಿತು. ನೂರಾರು ಪುರುಷರು ಹಾಗೂ ಕೆಲವು ಮಹಿಳೆಯರೂ ಬಂಧನಕ್ಕೊಳಗಾದರು. ಸರಳಾ ಅವರು ತಾವೇ ಸ್ವತಃ ಬಹಿರಂಗ ಪ್ರತಿಭಟನೆಗೆ ಇಳಿಯಲಿಲ್ಲ. ಆದರೆ ಪ್ರತಿಭಟನಾಕಾರರ ಕುರಿತಂತೆ ಅವರ ಸಹಾನುಭೂತಿ ಎದ್ದುಕಾಣಿಸುವಂತಿತ್ತು. ಪ್ರತಿಭಟನಾಕಾರರನ್ನು ಅವರು ಜೈಲಿನಲ್ಲಿ ಭೇಟಿಯಾದರು. ಅವರ ಕುಟುಂಬಗಳಿಗೆ ಒತ್ತಾಸೆ ನೀಡಿದರು. ಭೂಗತರಾಗಿದ್ದವರು ಹಾಗೂ ಕಾರ್ಯಕರ್ತರ ನಡುವೆ ಸಂದೇಶ ರವಾನೆಗೆ ಕೊಂಡಿಯಾದರು. ಕಡೆಗೆ ಅವರೂ ಬಂಧನಕ್ಕೊಳಗಾಗಿ ಜೈಲಿನಲ್ಲಿ ಎರಡು ಅವಧಿ ಕಳೆಯಬೇಕಾಯಿತು.
ಈ ಜೈಲುವಾಸ ಭಾರತದ ಸ್ವಾತಂತ್ರ್ಯಕ್ಕಾಗಿ ಸರಳಾರ ಕಾಳಜಿಯನ್ನು ಎತ್ತಿ ಹೇಳಿತು. ಬಿಡುಗಡೆಯಾದ ನಂತರ, ಕಸ್ತೂರಬಾ ಗಾಂಧಿ (ಭಾರತ ಬಿಟ್ಟು ತೊಲಗಿ ಚಳವಳಿ ಸಂದರ್ಭದಲ್ಲಿ ಜೈಲಿನಲ್ಲಿ ಜೀವ ತೆತ್ತಿದ್ದರು) ನೆನಪಿನಲ್ಲಿ ಬಾಲಕಿಯರ ಶಾಲೆ ಆರಂಭಿಸಿದರು. ಉತ್ತರಾಖಂಡ ಸಮಾಜ ತೀವ್ರ ಸಂಪ್ರದಾಯಶೀಲವಾಗಿತ್ತು. ಹೆಣ್ಣುಮಕ್ಕಳು ಹೊಲ, ಅಡುಗೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಶಿಕ್ಷಣ ಪಡೆದುಕೊಳ್ಳಲು ಅವರಿಗೆ ಉತ್ತೇಜನ ಇರಲಿಲ್ಲ. ಇದನ್ನು ಬದಲಿಸಲು ಹೊರಟಿದ್ದರು ಈ ಬ್ರಿಟಿಷ್ ಸಂಜಾತೆ ಭಾರತೀಯ ವ್ಯಕ್ತಿ. ಲಕ್ಷ್ಮಿ ಆಶ್ರಮ ಹೆಸರಿನ ತಾಣವನ್ನು ಕೌಸನಿಯಲ್ಲಿ ಪಡೆದುಕೊಂಡ ಅವರು, ತಮ್ಮ ಹೆಣ್ಣುಮಕ್ಕಳನ್ನು ಅಲ್ಲಿಗೆ ಕಳಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರ ಮನ ಒಲಿಸತೊಡಗಿದರು. ಆಗ `ಎಲ್ಲಾ ಸಾಂಪ್ರದಾಯಿಕ ಸಾಮಾಜಿಕ ನಿಯಮಗಳನ್ನು ಮುರಿಯಲಾಗುತ್ತಿದೆ ಎಂದು ಕೆಲವು ಸಂಪ್ರದಾಯಶರಣ ಹಿರಿಯರು ದೂರುತ್ತಿದ್ದರು. ಇದರಿಂದ ನಮ್ಮ ಹೆಣ್ಣುಮಕ್ಕಳನ್ನು ಜಾತಿ ಬಿಟ್ಟವರು ಎಂದು ಪರಿಗಣಿಸಲಾಗುತ್ತದೆ. ಹೀಗಾದಲ್ಲಿ ಅವರಿಗೆ ಮದುವೆಯಾಗುವುದಾದರೂ ಹೇಗೆ?' ಎಂದು ಜನ ಪ್ರಶ್ನಿಸುತ್ತಿದ್ದುದನ್ನು ಸರಳಾ ನೆನಪಿಸಿಕೊಂಡಿದ್ದಾರೆ.
ಲಕ್ಷ್ಮಿ ಆಶ್ರಮದಲ್ಲಿದ್ದ ಹೆಣ್ಣುಮಕ್ಕಳು ತರಕಾರಿ ಬೆಳೆಯುತ್ತಿದ್ದರು. ಹಸು ಸಾಕುತ್ತಿದ್ದರು. ಅಡುಗೆ ಮಾಡುತ್ತಿದ್ದರು. ಆಶ್ರಮವನ್ನು ಶುಚಿಯಾಗಿಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಗಾಂಧಿತತ್ವದಡಿ ಪಾಠಗಳನ್ನೂ ಕಲಿಯುತ್ತಿದ್ದರು. ಭಾಷೆ, ವಿಜ್ಞಾನ, ಸಮಾಜಶಾಸ್ತ್ರಗಳ ಜೊತೆಗೆ ನೇಯ್ಗೆಯಂತಹ ಜೀವನಕೌಶಲಗಳನ್ನೂ ಅವರು ಕಲಿಯುತ್ತಿದ್ದರು. ಆಶ್ರಮದ ಕಚೇರಿ ನಡೆಸುವುದಲ್ಲದೆ ಲೆಕ್ಕಪತ್ರಗಳನ್ನೂ ಈ ಹೆಣ್ಣುಮಕ್ಕಳೇ ನೋಡಿಕೊಳ್ಳುತ್ತಿದ್ದರು.
ಸರಳಾರ ಶಿಷ್ಯೆಯರು ಆತ್ಮವಿಶ್ವಾಸ ಗಳಿಸಿಕೊಂಡ ಸಮರ್ಥ ಸಾಧಕಿಯರಾದರು. ಆಶ್ರಮದ ತರಬೇತಿಯ ನಂತರ ಅವರು ಹೊರಜಗತ್ತಿಗೆ ಕಾಲಿರಿಸಿ ಶಿಕ್ಷಕಿಯರಾಗಿ ಅಥವಾ ಸಮಾಜ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದರು. ಕೆಲವರು ತಮ್ಮದೇ ಶಾಲೆಗಳನ್ನೂ ಆರಂಭಿಸಿದ್ದರು. ಒಟ್ಟಾರೆ ಅವರು ಉತ್ತರಾಖಂಡ ಸಮಾಜದಲ್ಲಿ ಶಾಂತ ರೀತಿಯ ಮೌನ ಕ್ರಾಂತಿಯನ್ನು ಸೃಷ್ಟಿಸಿದ್ದರು. ಗಾಂಧಿ ಚಳವಳಿಗೆ ಸೇರಿಕೊಳ್ಳಲು ಇನ್ನೂ ಕೆಲವು ಸಮರ್ಥರಿಗೆ ಸರಳಾ ಅವರು ಸ್ಫೂರ್ತಿಯಾದರು. ಲಕ್ಷ್ಮಿ ಆಶ್ರಮದಲ್ಲಿ ಕಲಿತವರು ಹಾಗೂ ಅದರ ಜೊತೆ ಸಂಪರ್ಕದಲ್ಲಿದ್ದವರು 1960 ಹಾಗೂ 1970ರ ದಶಕಗಳಲ್ಲಿ ಸಾರಾಯಿ, ಅರಣ್ಯನಾಶ ಹಾಗೂ ಬೃಹತ್ ಅಣೆಕಟ್ಟುಗಳ ವಿರುದ್ಧದ ಹೋರಾಟಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರು.
ವಯಸ್ಸಾಗುತ್ತಾ ಸಾಗಿದಂತೆ, ತಮ್ಮ ರಾಷ್ಟ್ರ ಹಾಗೂ ಪ್ರಪಂಚ ಸಾಗುತ್ತಿರುವ ದಿಕ್ಕಿನ ಬಗ್ಗೆ ಸರಳಾ ಹೆಚ್ಚು ನಿರಾಶಾವಾದಿಯಾಗತೊಡಗಿದರು. 1976ರಲ್ಲಿ ಅವರು ಹೀಗೆ ಬರೆದಿದ್ದರು: `ಪ್ರಕೃತಿಯಿಂದ ದೂರವಾಗುತ್ತಿರುವ ಮನುಷ್ಯ, ಉತ್ಪಾದನೆ ಹಾಗೂ ಮನರಂಜನೆಗಳ ವಲಯದಲ್ಲಿ ಯಂತ್ರಗಳ ದಾಸನಾಗುತ್ತಿದ್ದಾನೆ. ಹೆಚ್ಚುತ್ತಿರುವ ವಾಯು, ಜಲ, ನೈಸರ್ಗಿಕ ಸಂಪನ್ಮೂಲಗಳ ಮಾಲಿನ್ಯ, ಕುಟುಂಬ ಸಂಬಂಧ ಹಾಗೂ ಸಾಮಾಜಿಕ ಕಾಳಜಿಗಳ ಕುಸಿತಗಳಿಂದಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳೆರಡರ ವಿಚಾರದಲ್ಲೂ ಮನುಕುಲ ಇಂದು ಬಿಕ್ಕಟ್ಟು ಎದುರಿಸುತ್ತಿದೆ'.
ಸರಳಾದೇವಿಯವರ ಬದುಕಿನ ಮುಖ್ಯ ಮೈಲುಗಲ್ಲುಗಳನ್ನು 1976ರಲ್ಲಿ ಹಿಂದಿಯಲ್ಲಿ ಮೊದಲು ಪ್ರಕಟವಾದ ಅವರ ನೆನಪುಗಳನ್ನು ಕುರಿತಾದ ಪುಸ್ತಕದಲ್ಲಿ (ಸರಳಾದೇವಿ 1982ರಲ್ಲಿ ತೀರಿಕೊಂಡರು) ದಾಖಲಿಸಲಾಗಿದೆ. ಡೇವಿಡ್ ಹಾಪಕಿನ್ಸ್ ಅವರ ಅನುವಾದದಲ್ಲಿ ಈ ಕೃತಿ ಈಗ ಇಂಗ್ಲಿಷ್ನಲ್ಲೂ ಲಭ್ಯ. `ಎ ಲೈಫ್ ಇನ್ ಟೂ ವರ್ಲ್ಡ್ಸ್' ಶೀರ್ಷಿಕೆಯಲ್ಲಿ ನೈನಿತಾಲ್ನ `ಪಹಾರ್' ಈ ಕೃತಿಯನ್ನು ಪ್ರಕಟಿಸಿದೆ. ಅವರು ಸ್ಥಾಪಿಸಿದ ಪರಂಪರೆಯನ್ನು `ಎಜುಕೇಟಿಂಗ್ ಆ್ಯಕ್ಟಿವಿಸ್ಟ್ಸ್: ಡೆವಲೆಪ್ಮೆಂಟ್ ಅಂಡ್ ಜೆಂಡರ್ ಇನ್ ದಿ ಮೇಕಿಂಗ್ ಆಫ್ ಮಾಡರ್ನ್ ಗಾಂಧಿಯನ್ಸ್' ಎಂಬ ಇತ್ತೀಚಿನ ಪುಸ್ತಕದಲ್ಲಿ ಮಾನವಶಾಸ್ತ್ರಜ್ಞೆ ರೆಬೆಕಾ ಕ್ಲೆಂಕ್ ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದಾರೆ.
ಡಾ ಕ್ಲೆಂಕ್ ಅವರು 1991ರಲ್ಲಿ ಲಕ್ಷ್ಮಿ ಆಶ್ರಮಕ್ಕೆ ಮೊದಲು ಭೇಟಿ ನೀಡಿದರು. ಆ ನಂತರ, ಅವರು ಅನೇಕ ಬಾರಿ ಲಕ್ಷ್ಮಿ ಆಶ್ರಮದಲ್ಲಿನ ಹೆಣ್ಣುಮಕ್ಕಳ ಓದು, ಕೆಲಸವನ್ನು ಕುರಿತು ಅಧ್ಯಯನ ಮಾಡುತ್ತಾ ಅಲ್ಲಿ ಅನೇಕ ವಾರಗಳು ಹಾಗೂ ತಿಂಗಳುಗಳನ್ನು ಕಳೆದಿದ್ದಾರೆ.
ಆಶ್ರಮದಲ್ಲಿ ತಾವು ಕಳೆದ ಜೀವನಕಥೆಗಳನ್ನು ನಿರೂಪಿಸುವಂತಹ ಮಹಿಳೆಯರ ಮೌಖಿಕ ಕಥನಗಳು `ಎಜುಕೇಟಿಂಗ್ ಆ್ಯಕ್ಟಿವಿಸ್ಟ್ಸ್' ಕೃತಿಯ ದೊಡ್ಡ ಬಲ. 1951ರಲ್ಲಿ ಆಶ್ರಮ ಸೇರಿದ ರಾಧಾ ಭಟ್ ಅವರು, ಸರಳಾದೇವಿಯವರು ಸ್ವಯಂಪ್ರೇರಿತವಾಗಿ ತಮ್ಮ ಹೊಣೆಗಾರಿಕೆಗಳನ್ನು ತ್ಯಜಿಸಿದಾಗ ಆಶ್ರಮದ ಪೂರ್ಣ ಹೊಣೆಯನ್ನು ಹೊತ್ತುಕೊಳ್ಳುತ್ತಾರೆ.
ರಾಧಾಭಟ್ ಅವರ ವಿಸ್ತೃತ ಸಂದರ್ಶನಗಳು ಈ ಕೃತಿಯ ವಿಶೇಷ. ರಾಧಾ ಅವರದು ವಿಶೇಷ ಆಕರ್ಷಕ ಶಕ್ತಿ. ಪಿತೋರಗಡ ಜಿಲ್ಲೆಯಲ್ಲಿ ಚಂದಕ್ - ಸಿಖ್ರಾನಾ ಪ್ರದೇಶದಲ್ಲಿ ಅನಿಯಂತ್ರಿತ ಗಣಿಗಾರಿಕೆ ವಿರುದ್ಧ 30 ವರ್ಷಗಳ ಹಿಂದೆ ನಡೆದ ಪ್ರದರ್ಶನಲ್ಲಿ ನಾನು ಭಾಗವಹಿಸಿದ್ದೆ. ಆಗ ಕುಮೌನಿ ಗ್ರಾಮಸ್ಥರನ್ನು ಸಂಘಟಿಸುವ ಅವರ ಸಾಮರ್ಥ್ಯ ಎದ್ದು ಕಾಣುತ್ತಿದ್ದದ್ದು ನನಗಿನ್ನೂ ನೆನಪಿದೆ.
ರೆಬೆಕಾ ಕ್ಲೆಂಕ್ ಅವರ ಕಥನದಲ್ಲಿ ದಾಖಲಾಗಿರುವ ಮತ್ತೊಬ್ಬರು ಪ್ರಮುಖ ಗಾಂಧಿವಾದಿ ಮಹಿಳೆ ವಿಮಲಾ ಬಹುಗುಣ. ಅವರು ಹುಟ್ಟಿಬೆಳೆದದ್ದು ಬಾಲಕಿಯರಿಗೆ ಪ್ರೌಢಶಾಲೆಯನ್ನೂ ಹೊಂದಿರದ ಪಿತೃಪ್ರಧಾನ, ಪ್ರಾದೇಶಿಕ ಸಂಕುಚಿತ ಭಾವನೆ ತೀವ್ರವಾಗಿರುವ ತೆಹ್ರಿ ಗರ್ವಾಲ್ನಲ್ಲಿ. ಅದೃಷ್ಟವಶಾತ್ ಅವರ ತಂದೆ, ಸರಳಾದೇವಿ ಹಾಗೂ ಲಕ್ಷ್ಮಿ ಆಶ್ರಮದ ಬಗ್ಗೆ ಕೇಳಿದ್ದರು. ಓದಲು ಮತ್ತು ತರಬೇತಿ ಪಡೆಯಲು ಅವರನ್ನು ಅಲ್ಲಿಗೆ ಕಳಿಸಲಾಯಿತು.
ನಂತರ, ಅವರು ತಮ್ಮದೇ ತವರು ಜಿಲ್ಲೆಗೆ ವಾಪಸಾಗಿ ತಮ್ಮದೇ ಆಶ್ರಮ ಹಾಗೂ ಶಾಲೆಯನ್ನು ಆರಂಭಿಸಿದರು. ತಮ್ಮ ಪತಿ ಸುಂದರಲಾಲ್ ಬಹುಗುಣ ಅವರೊಂದಿಗೆ ಈ ಬೆಟ್ಟಗುಡ್ಡಗಳ ನಾಡಿನ ಪರಿಸರ ಚಳವಳಿಯಲ್ಲಿ ವಿಮಲಾ ಬಹುಗುಣ ಅವರು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ.
ಉತ್ತರಾಖಂಡದ ಬಗ್ಗೆ ತಿಳಿದಿರುವವರಿಗೆ ರಾಧಾ ಭಟ್ ಹಾಗೂ ವಿಮಲಾ ಬಹುಗುಣ ಅವರು ಆದರ್ಶ ವ್ಯಕ್ತಿಗಳು. ಹೀಗಿದ್ದೂ ಲಕ್ಷ್ಮಿ ಆಶ್ರಮದ ಹೆಚ್ಚು ತಿಳಿದಿರದ ವ್ಯಕ್ತಿಗಳ ವ್ಯಕ್ತಿಗತ ಹಾಗೂ ಬೌದ್ಧಿಕ ಸಾಧನೆಗಳ ಬಗೆಗೂ ಡಾ. ಕ್ಲೆಂಕ್ ಗಮನ ಹರಿಸಿದ್ದಾರೆ. ಬಡಕುಟುಂಬಗಳ ನಾಚಿಕೆಯ, ಹಿಂಜರಿಕೆಯ ಸ್ವಭಾವಗಳ ಹೆಣ್ಣುಮಕ್ಕಳು ಉತ್ತರಾಖಂಡ ಹಾಗೂ ಅದರಾಚೆಗೂ ಪ್ರಗತಿಪರ ಸಾಮಾಜಿಕ ಬದಲಾವಣೆಗಳನ್ನು ರೂಪಿಸುವ ಆತ್ಮವಿಶ್ವಾಸದ ವಾಕ್ಶಕ್ತಿ ಹೊಂದಿದ ಮಹಿಳೆಯರಾಗಿ ಪರಿವರ್ತಿತರಾಗುವ ಕಥಾನಕವನ್ನು ಈ ಕೃತಿ ಬಿಡಿಸಿಡುತ್ತದೆ. ಹಲವು ಪೀಳಿಗೆಗಳ ಕಾರ್ಯಕರ್ತರು, ಈ ಕೃತಿಯ ಕಥನ ನಿರೂಪಣೆಯಲ್ಲಿ ಚಿತ್ರಿತರಾಗಿದ್ದಾರೆ. ಸರಳಾದೇವಿಯಿಂದ ನೇರ ಪ್ರಭಾವಿತರಾದ ವ್ಯಕ್ತಿಗಳಿಂದ ಹಿಡಿದು, ಅವರ ಬಗ್ಗೆ ಏನೇನೂ ಗೊತ್ತಿರದಿದ್ದರೂ ಅವರ ಸಂದೇಶವನ್ನು ಸೃಜನಾತ್ಮಕವಾಗಿ ಬಳಸಿಕೊಂಡ ವ್ಯಕ್ತಿಗಳವರೆಗಿನ ಚಿತ್ರಣಗಳು ಈ ಕೃತಿಯಲ್ಲಿದೆ.
`ಗಾಂಧಿವಾದದ ಆಧುನಿಕತೆ'ಯ ಪ್ರಯೋಗವಾಗಿ ಲಕ್ಷ್ಮಿ ಆಶ್ರಮವನ್ನು ರೆಬೆಕಾ ಕ್ಲೆಂಕ್ ಚಿತ್ರಿಸುತ್ತಾರೆ. `ಅಂಚಿಗೆ ಸರಿದ ಗ್ರಾಮೀಣ ಹುಡುಗಿಯರನ್ನು ಒಳಗೊಳ್ಳುವಂತಹ ಸದ್ಭಾವ, ತುರ್ತು, ಉದ್ದೇಶ ಹಾಗೂ ಪ್ರಾಮುಖ್ಯವನ್ನು ನೀಡಿದ ಪ್ರಯೋಗ ಇದು.
ಸ್ವಾತಂತ್ರ್ಯ ಅಥವಾ ಸ್ವರಾಜ್ಯದ ಗಾಂಧಿಯವರ ಕಾರ್ಯಕ್ರಮವನ್ನು ಗುಡ್ಡಗಾಡುಗಳ ಹಳ್ಳಿಗಳಿಗೆ ವಿಸ್ತರಿಸಲು ಆಧುನಿಕ ನಾಗರಿಕರಾಗುವಂತೆ ಹಾಗೂ ಗ್ರಾಮ ಮುಖಂಡರುಗಳಾಗುವಂತೆ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಉತ್ತರಾಖಂಡದ ಹಿಮಾಲಯವನ್ನು ಹೊಸ ರಾಷ್ಟ್ರದೊಂದಿಗೆ ಸಂಯೋಜಿಸುವ ಪ್ರಯತ್ನ ಇದು' ಎಂದು ಅವರು ವ್ಯಾಖ್ಯಾನಿಸುತ್ತಾರೆ. ಆಶ್ರಮದ ಹುಡುಗಿಯರು ಬ್ರಾಹ್ಮಣ, ರಜಪೂತ್, ಬನಿಯಾ, ದಲಿತ ಹಾಗೂ ಭೋಟಿಯಾ ಎಂಬಂತಹ ಎಲ್ಲಾ ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದವರು. `ಸಾಮಾಜಿಕ ಹೋರಾಟಗಳು, ಬದಲಾವಣೆಗಳು ಹಾಗೂ ರಾಷ್ಟ್ರ ಮತ್ತು ಪ್ರಪಂಚದ ಭಾಗವಾಗುವ' ಪ್ರಕ್ರಿಯೆಯಲ್ಲಿನ ಆಶ್ರಮದ ಕಥಾನಕಳಿಗೇ ಬಹಳಷ್ಟು ಮಂದಿ ದನಿ ನೀಡಿದ್ದಾರೆ. ಕಳೆದ ಆರು ದಶಕಗಳಲ್ಲಿ, ಮಹಿಳಾ ಹಕ್ಕುಗಳು ಹಾಗೂ ಆರ್ಥಿಕ, ಪರಿಸರ ನ್ಯಾಯಕ್ಕಾಗಿ ಗಾಂಧಿ ತತ್ವಗಳನ್ನು ಲಕ್ಷ್ಮಿ ಆಶ್ರಮದಲ್ಲಿ ಕಲಿತ ಮಹಿಳೆಯರು ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಹಾಗೆಯೇ ಎಲ್ಲಾ ಭಾರತೀಯ ನಾಗರಿಕರಿಗೆ ಘನತೆಯ ಬದುಕು ನೀಡುವಲ್ಲಿ ಉದಾರೀಕರಣ ಹಾಗೂ ಪ್ರಜಾಪ್ರಭುತ್ವಗಳ ವೈಫಲ್ಯಗಳ ವಿಶ್ಲೇಷಣೆಗಳಿಗೂ ಗಾಂಧಿ ಸಿದ್ಧಾಂತಗಳನ್ನು ಬಳಸಿಕೊಳ್ಳಲಾಗಿದೆ.
ಗಾಂಧಿಯವರ ತತ್ವ, ಸಂದೇಶಗಳನ್ನು ಈ ಸಾಮಾಜಿಕ ಕಾರ್ಯಕರ್ತರು ಯಾವುದೇ ತತ್ವಸಿದ್ಧಾಂತಗಳ ಕಟ್ಟಾ ಪ್ರತಿಪಾದಕರಾಗದೆ ಮುಕ್ತ ಮನದಿಂದ ವ್ಯಾಖ್ಯಾನಿಸಿರುವ ರೀತಿ `ಎಜುಕೇಟಿಂಗ್ ಆ್ಯಕ್ಟಿವಿಸ್ಟ್ ಓದುತ್ತಿದ್ದಾಗ ಎದ್ದುಕಂಡಿತು. ಸಮಕಾಲೀನ ನಂಬಿಕೆಗಳು ಹಾಗೂ ಆಶಯಗಳಿಗೆ ಅವರು ಇದನ್ನು ಅನ್ವಯಿಸಿದ್ದಾರೆ.
ಉದ್ಯೋಗ ಸೃಷ್ಟಿ ಹಾಗೂ ಜೀವನೋಪಾಯ ಭದ್ರತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸ್ವನಿಯಂತ್ರಣ ಹಾಗೂ ವೈಯಕ್ತಿಕ ಸರಳತೆ. ಸಾಂಸ್ಥಿಕ ನಿರಂತರತೆಯ ಭಾವನೆ ಕೊಂಡಿಯಾಗಿರುವುದೂ ನನಗೆ ವಿಶೇಷವೆನಿಸಿತು. ಸರಳಾದೇವಿ ಅವರು ಆಶ್ರಮವನ್ನು ಸ್ಥಾಪಿಸಿದ 20 ವರ್ಷಗಳ ನಂತರ ಅವರು ಅದರ ಜವಾಬ್ದಾರಿ ತೊರೆದರು. ರಾಧಾ ಭಟ್ ಅವರೂ ಹಾಗೆಯೇ 20 ವರ್ಷ ಆಶ್ರಮವನ್ನು ಮುನ್ನಡೆಸಿ ನಂತರ ಅದರ ಜವಾಬ್ದಾರಿಯನ್ನು ಕಿರಿಯ ಸಹೋದ್ಯೋಗಿಗೆ ಹಸ್ತಾಂತರಿಸಿದರು. ಇದೇ ಬಗೆಯಲ್ಲಿ ಜವಾಬ್ದಾರಿಗಳು ಸುಗಮವಾಗಿ ಹಸ್ತಾಂತರವಾದ ಅಹಮದಾಬಾದ್ನ ಸ್ವ ಉದ್ಯೋಗ ಮಹಿಳಾ ಸಂಘ (ಸೇವಾ) ನನಗೆ ಈ ಸಂದರ್ಭದಲ್ಲಿ ನೆನಪಾಯಿತು. `ಸೇವಾ' ಸಂಸ್ಥಾಪಕಿ ಇಳಾ ಭಟ್ ಅವರೂ ಯುವ ನಾಯಕರು ಜವಾಬ್ದಾರಿ ತೆಗೆದುಕೊಳ್ಳಲು ಅನುಕೂಲವಾಗುವಂತೆ ದಿನನಿತ್ಯದ ಉಸ್ತುವಾರಿ ಜವಾಬ್ದಾರಿಗಳಿಂದ ನಿಧಾನವಾಗಿ ಹಿಂದೆ ಸರಿದಿದ್ದರು. ಇಂತಹ ಸಾಂಸ್ಥಿಕ ಮಾದರಿಗಳು ಅಪರೂಪದವು. ಏಕೆಂದರೆ ಎನ್ಜಿಒ ಸ್ಥಾಪಿಸುವ ಪುರುಷ ಅಥವಾ ಮಹಿಳೆ ಬಹಳ ಸಂದರ್ಭಗಳಲ್ಲಿ ತಮ್ಮ ಅಧಿಕಾರ ಅಥವಾ ನಿಯಂತ್ರಣ ಬಿಟ್ಟುಕೊಡಲು ಬಯಸುವುದಿಲ್ಲ.
ಉತ್ತರಾಖಂಡದ ದುರಂತದ ನಂತರ ಈ ಎರಡೂ ಪುಸ್ತಕಗಳನ್ನು ಓದಿದ್ದು ಹೃದಯಸ್ಪರ್ಶಿ ಅನುಭವ. ಅಷ್ಟೇ ಅಲ್ಲ, ಇದು ಅನೇಕ ಪ್ರಶ್ನೆಗಳನ್ನೂ ಎತ್ತಿತ್ತು. ಇಂತಹ ನಿಸ್ವಾರ್ಥ ಭಾರತೀಯರಿದ್ದಂತಹ ಪ್ರದೇಶದಲ್ಲಿ ಇಂತಹ ಕ್ರೂರ ವಿಧಿಯಾಟ ಸರಿಯೆ? ಮುಂದೆ ನಡೆಯಲಿರುವ ರಿಪೇರಿ ಹಾಗೂ ಪುನರುಜ್ಜೀವನದ ಕಾರ್ಯಗಳಲ್ಲಿ, ಇದೇ ರಾಜ್ಯದಲ್ಲಿ ಬದುಕಿ ಕೆಲಸ ಮಾಡುತ್ತಿರುವ ಇಂತಹ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತರ ಜ್ಞಾನ, ಬೆಂಬಲವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಳಸಿಕೊಳ್ಳುವವೆ? ಅಥವಾ ಸಂಕುಚಿತವಾದ ಅಲ್ಪಾವಧಿ ಪರಿಗಣನೆಗಳೇ ಮೇಲುಗೈ ಪಡೆಯುತ್ತವೆಯೆ?
ರಾಮಚಂದ್ರ ಗುಹಾ
ಕೃಪೆ:ಪ್ರಜಾವಾಣಿ
Comments
Post a Comment