ಕಾಸರಕೋಡ್ ಇಕೋ ಬೀಚ್,ಪೊನ್ಮುಡಿ

ಕಾಸರಕೋಡ್ ಇಕೋ ಬೀಚ್   ದಣಿದ ಮನಸ್ಸಿಗೊಂದು ವಿಶ್ರಾಂತಿಯ ತಾಣ

* ಬಳಕೂರು ವಿ. ಎಸ್ ನಾಯಕ್

ಧರೆಯ ಸೌಂದರ್ಯದ ಮುಕುಟಮಣಿಯಾಗಿ ಮೇಳೈಸಿರುವ ಜಿಲ್ಲೆಯೇ ಉತ್ತರ ಕನ್ನಡ ಒಂದು ಕಾಲದಲ್ಲಿ ಚೆನ್ನಾಬೈರಾದೇವಿ ಆಡಳಿತದ ಸಂದರ್ಭ ಹೊನ್ನಾವರವು ಹೆಚ್ಚಾಗಿ ಕಾಳು ಮೆಣಸನ್ನು ರಫ್ತು ಮಾಡುವ ಪ್ರಮುಖ ಸ್ಥಳವಾಗಿದೆ. ಸರ್ವಧರ್ಮ ಸಮನ್ವಯತೆಗೆ ಒಂದು ಉದಾಹರಣೆಯಾಗಿತ್ತು. ಶಾಂತಿ ಮಂತ್ರವನ್ನು ಉಪದೇಶಿಸುತ್ತಾ ಬಂದ ಜೈನರ ನೆಲೆವೀಡು ಇದಾಗಿತ್ತು. ಇಂದಿನ ಸಂಸ್ಕೃತಿ ಆಧುನಿಕತೆಯ ಭರಾಟೆಯೊಂದಿಗೆ ಸತ್ವ ಕಳೆದುಕೊಂಡರೂ ಹೊನ್ನಾವರವು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಮೀನುಗಾರಿಕೆಯು ಮುಖ್ಯ ಉದ್ಯೋಗವಾಗಿದ್ದು ಕೃಷಿ ಆಧಾರಿತ ಕುಟುಂಬಗಳು ಇಲ್ಲಿ ಹಲವಾರು ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಾಣಬಹುದು.
ಚೌಪದಿ ಬ್ರಹ್ಮ ದಿನಕರ ದೇಸಾಯಿ ಅವರು ಈ ಜಿಲ್ಲೆಯನ್ನು ಈ ರೀತಿಯಾಗಿ ಹಾಡಿ ಹೊಗಳಿದ್ದಾರೆ. 'ಒಂದು ಬದಿ ಸಹ್ಯಾದ್ರಿ ಇನ್ನೊಂದು ಬದಿ ಕಡಲು/ ನಡುಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಲು /ಸಿರಿಗನ್ನಡದ ಚಪ್ಪರವೇ ನನ್ನ ಈ ಜಿಲ್ಲೆ /ಇನ್ನೊಮ್ಮೆ ಇಲ್ಲಿ ಹುಟ್ಟಿ ಬರುವೇ ನಾ ಅಲ್ಲೆ' ಎಂದು ಹೇಳಿದ್ದು ಅವರ ಅಭಿಮಾನಕ್ಕೆ ಸಾಕ್ಷಿ. ಸದಾ ನಗುಮುಖದವರು ಜ್ಞಾನಿಗಳು, ಸಹೃದಯರು ತುಂಬಿರುವ ಈ ಜಿಲ್ಲೆಯಲ್ಲಿ ಸೊಬಗಿದೆ ಸೌಂದರ್ಯವಿದೆ. ಅದೇ ಕಾಸರಕೋಡು ಇಕೋ ಬೀಚ್ ಎಂದರೆ ಅತಿಶೋಯಕ್ತಿಯಲ್ಲ .

ಹೀಗಿದೆ ಹೊನ್ನಾವರ
ಹೊನ್ನಾವರದ ಮೊದಲ ಹೆಸರು ಹೊನ್ನಪುರಿ ನಂತರ ಕಾಲಕ್ರಮೇಣವಾಗಿ ಹೊನ್ನಾವರ ಎಂಬ ಹೆಸರಿನಿಂದ ಜನಪ್ರಿಯವಾಗಿದ್ದು ಈಗ ಇತಿಹಾಸ. ಗತಕಾಲದ ವಿಷಯಗಳನ್ನು ಹುಡುಕಿದಾಗ ನೈಜ ಘಟನಾವಳಿಗಳು ನಮ್ಮ ಮುಂದೆ ಗರಿಗೆದರುತ್ತವೆ. ಎಲ್ಲಿ ನೋಡಿದರತ್ತ ಹಸಿರು ಗಿರಿ ಕಾನನಗಳು ಅವುಗಳ ನಡುವೆ ಭೂದೇವಿಗೆ ಹಸಿರು ಸೀರೆ ಉಡಿಸಿದಂತೆ ಕಾಣುವ ಪ್ರಕೃತಿ ಶರಾವತಿ ನದಿ, ಜಲಪಾತಗಳು ನದಿಗಳ ಉಬ್ಬರ ಇಳಿತ ಲಯಬದ್ಧ ಏರಿಳಿತ ಪಶ್ಚಿಮ ಘಟ್ಟವು ಜೀವವೈವಿಧ್ಯದಿಂದ ಕಂಗೊಳಿಸುವ ಊರೇ ಹೊನ್ನಾವರ.

ಕಾಸರಕೋಡು ಹೀಗೆ....
ಮಾನವನ ನಿತ್ಯಜೀವನ ಒಂದಲ್ಲ ಒಂದು ರೀತಿಯಲ್ಲಿ ಜಂಜಾಟದಲ್ಲಿ ಮುಳುಗಿರುತ್ತದೆ. ಅಂತಹ ಜಂಜಾಟದಿಂದ ದೂರ ಸರಿಯಲು ಒಂದು ಪ್ರಸಕ್ತ ಸ್ಥಳವಿದೆ, ನಿಮಗೆ ಗೊತ್ತೇ? ಇದು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಹೊನ್ನಪುರಿಯ ಹಸಿರು ಹೊನ್ನಸಿರಿಗೆ ಹಸಿರ ಸಿರಿಯ ಮಡಿಲಿನಲ್ಲಿ ಪಯಣಿಸೋಣ ಬನ್ನಿ. ಹೊನ್ನಾವರದಲ್ಲಿ ಶರಾವತಿ ನದಿಯು ಹೊನ್ನಾವರವನ್ನು ಸೇರುತ್ತದೆ. ಅದೇ ನದಿಯ ಎಡದಂಡೆಯಲ್ಲಿ ಇರುವ ಪುಟ್ಟ ಹಳ್ಳಿಯೇ ಕಾಸರಕೋಡು. ಇಲ್ಲಿನ ಸಮುದ್ರ ತೀರದ ಸೂರ್ಯಾಸ್ತದ ದೃಶ್ಯ ರಮ್ಯ ರಮಣೀಯ. ಬೆಳ್ಳಿಯಂತಹ ಮರಳು ಹಾಸಿಕೊಂಡಿರುವ ಈ ಕಾಸರಕೋಡು ವಿಭಿನ್ನವಾದ ನೈಸರ್ಗಿಕ ಸ್ಥಳವಾಗಿದೆ. ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹೊನ್ನಾವರದಿಂದ ಕ್ರಮಿಸಿದರೆ 2 ಕಿ.ಮೀ. ದೂರದಲ್ಲಿರುವುದೇ ಕಾಸರಕೋಡು. ಅಲ್ಲಿ ನಿಮ್ಮನ್ನು ದೊಡ್ಡ ನಾಮಫಲಕವು ಸ್ವಾಗತಿಸುತ್ತದೆ.

'ಕಾಸರಕೋಡು ಇಕೋ ಬೀಚ್‌ಗೆ ಸ್ವಾಗತ' ಎಂದು ಓದಿದ ಯಾವ ಪ್ರವಾಸಿಗನೂ ಅಲ್ಲಿಯ ತಾಣವನ್ನು ನೋಡದೇ ಹೋಗಲಾರ. ಇಕೋ ಬೀಚ್‌ಗೆ ಹೋಗುವ ದಾರಿಯಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಪರಿಸರ ಕಾಳಜಿಯ ನಾಮಫಲಕಗಳು ನಮ್ಮನ್ನು ಸ್ವಾಗತಿಸುತ್ತಾ ಅದರ ಬಗ್ಗೆ ಅರಿವುನ್ನು ತಿಳಿಸುತ್ತದೆ. 'ಮರ ನೆಟ್ಟು , ಬರ ಅಟ್ಟು ', 'ವೃಕ್ಷತೋ ನಾಸ್ತಿ ದುರ್ಭಿಕ್ಷಂ', 'ಮೃಗಗಳಿಗೆ ತನ್ನ ಶಕ್ತಿಯ ಅರಿವಿಲ್ಲ , ಮಾನವನಿಗೆ ತನ್ನ ತಪ್ಪಿನ ಅರಿವಿಲ್ಲ' ಎನ್ನುವುದನ್ನೆಲ್ಲ ಓದುತ್ತಾ ಮುಂದೆ ಸಾಗಿದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಅದನ್ಬನೆಲ್ಲ ಕಣ್ಣು ಮಿಟಕಿಸದೆ ನೋಡುತ್ತಾ ಇರಬೇಕೆನ್ನುವ ಹಸಿರು ವನಗಳ ವಿಶ್ರಾಂತಿ ಕುಟೀರಗಳು, ವಿಶಾಲವಾದ ಹುಲ್ಲುಹಾಸು, ಮಕ್ಕಳ ಆಟದ ಬಯಲು, ಕೃತಕ ಮೊಸಳೆ, ಡಾಲ್ಫಿನ್, ಕೃತಕ ಏಡಿ, ಕೃತಕ ಶಂಖು ಇತ್ಯಾದಿಗಳು ನೈಜವಾಗಿಯೇ ಇಲ್ಲಿ ಬಂದು ನೆಲೆಸಿವೆಯೇನೋ ಎನಿಸುತ್ತದೆ. ಮುಂದೆ ಸಾಗಿದರೆ ಊರ ಹೊನ್ನೆ ಉದ್ಯಾನ (ಎಣ್ಣೆ, ಹೊನ್ನೆಮರದ ತೋಪು) ಎಂತಹರನ್ನು ಕೂಡ ಆಕರ್ಷಿಸದೇ ಇರುವುದಿಲ್ಲ. ಭೋರ್ಗರೆಯುವ ಅರಬ್ಬೀ ಸಮುದ್ರ, ಮಂದವಾಗಿ ಬೀಸುವ ಗಾಳಿ ಎಂತಹವರ ಮನಸ್ಸನ್ನೂ ಒಂದು ಕ್ಷಣ ಹಗುರವಾಗಿಸುತ್ತದೆ.

ಇಂತಹ ಸುಂದರ ಇಕೋ ಬೀಚ್ ಮೂಡಿಬಂದಿರುವುದರ ಹಿಂದೆ ಹೊನ್ನಾವರ ಅರಣ್ಯ ಇಲಾಖೆಯ ಶ್ರಮವಿದೆ.ಇಂತಹ ಉದ್ಯಾನಗಳನ್ನು ರಚಿಸುವುದರ ಮೂಲಕ ಪರಿಸರ ಕಾಳಜಿ ಹಬ್ಬುವಂತೆ ಮಾಡುವುದು ಅದರ ಕನಸು. ಇದು ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿದ್ದು, ಇದನ್ನು ಶರಾವತಿ ಗ್ರಾಮ ಅರಣ್ಯ ಸಮಿತಿ ನಿರ್ವಹಣೆ ಮಾಡುತ್ತಿದೆ.

ಹೀಗೆ ಬನ್ನಿ:
ಬೆಂಗಳೂರಿನಿಂದ ಹೊನ್ನಾವರ 450 ಕಿ.ಮೀ ದೂರದಲ್ಲಿದ್ದು ರಸ್ತೆ ಸಾರಿಗೆ, ಖಾಸಗಿ ಬಸ್ ಸೇವೆ, ಬೆಂಗಳೂರು-ಕಾರವಾರ ರೈಲು ಸೇವೆ ನಿರಂತರವಾಗಿದೆ. ಹೊನ್ನಾವರಕ್ಕೆ ಬಂದರೆ ಅಲ್ಲಿಂದ 2 ಕಿ.ಮೀ ದೂರದಲ್ಲಿರುವುದೇ ಕಾಸರಕೋಡು ಇಕೋ ಬೀಚ್. ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳು ಹೊನ್ನಾವರದಿಂದ ಗೋಕರ್ಣ - 40 ಕಿ.ಮೀ, ಇಡಗುಂಜಿ -15 ಕಿ.ಮೀ, ಮುರ್ಡೇಶ್ವರ - 25 ಕಿ.ಮೀ , ಅಪ್ಸರಕೊಂಡ ಜಲಪಾತ - 8 ಕಿ.ಮೀ, ಯಾಣ - 30 ಕಿ.ಮೀ, ಶಿರಸಿ - 70 ಕಿ.ಮೀ, ಕೊಲ್ಲೂರು - 60 ಕಿ.ಮೀ ದೂರದಲ್ಲಿದ್ದು ಇಲ್ಲಿಗೆ ಬಂದರೆ ಅವನ್ನೂ ನೋಡಿಕೊಂಡು ಹೋಗಬಹುದು.

ಪೊನ್ಮುಡಿಗೊಮ್ಮೆ ಹೋಗಿ ಬರೋಣ...

ಪೊನ್ಮುಡಿಗೊಮ್ಮೆ ಹೋಗಿ ಬರೋಣ...  

ಶಂಶೀರ್ ಬುಡೋಳಿ

ಹಸಿರನ್ನೇ ಮೈದಳೆದುಕೊಂಡಿರೋ ಪ್ರಕೃತಿ. ಆಕಾಶದೆತ್ತರಕ್ಕೆ ಬೆಳೆದಿರೋ ದಟ್ಟವಾದ ಮರಗಳು. ಸೂರ್ಯನಿಗೆ ಸವಾಲು ನೀಡುವಂತೆ ದಟ್ಟವಾಗಿ ಹರಿದಿರುವ ಮಂಜು. ಆಹ್ಲಾದಕರ ವಾತವರಣವನ್ನು ಆಹ್ಲಾದಿಸುತ್ತಿರೋ ಜನರು. ಇವುಗಳನ್ನೆಲ್ಲಾ ಅನುಭವಿಸಬೇಕೆಂದರೆ ಕೇರಳ ಜಿಲ್ಲೆಯ ಫೇಮಸ್ ನಿಸರ್ಗಧಾಮ 'ಪೊನ್ಮುಡಿ'ಗೊಮ್ಮೆ ಹೋಗಲೇಬೇಕು. ದೇಶದಲ್ಲಿ ಅದೆಷ್ಟೋ ಗಿರಿಧಾಮಗಳಿರಬಹುದು. ಆದರೆ ಪೊನ್ಮುಡಿ ಗಿರಿಧಾಮಕ್ಕೆ ಭೇಟಿ ನೀಡಿದರೆ ಜೀವನಪರ್ಯಂತ ಅಲ್ಲೇ ಇದ್ದು ಬಿಡೋಣವೆಂದು ಮನಸ್ಸು ಹಾತೊರೆಯುವುದು ಖಂಡಿತಾ.

ಇಲ್ಲಿ ಟ್ರೆಕ್ಕಿಂಗ್ ಕೈಗೊಳ್ಳಬಹುದು. ಪ್ರಪಾತ, ಮಕ್ಕಳ ಪ್ಲೇಗ್ರೌಂಡ್ ಇಲ್ಲಿದೆ. ಪೆಪ್ಪರ, ನೆಯ್ಯರ್, ಶೆಂದುಮಿ ವೈಲ್ಡ್‌ಲೈಫ್ ಸ್ಯಾಂಚುವರಿ, ಪೊನ್ಮುಡಿ ರೆಸಾರ್ಟ್, ಡೀರ್ ಪಾರ್ಕ್ ಕೂಡಾ ಇದೆ. ಮತ್ತೊಂತು ಆಕರ್ಷಣೆ ಅಂದರೆ ಮೀನ್‌ಮುಟ್ಟಿ ಫಾಲ್ಸ್. 1868 ಮೀ ಉದ್ದದ ಶಿಖರ ಕೂಡಾ ಇಲ್ಲಿದೆ. ಈ ಗಿರಿಧಾಮದಲ್ಲಿ ಗೋಲ್ಡನ್ ವ್ಯಾಲಿ ಸೇರಿದಂತೆ ಹಲವು ಪ್ರಭೇದದ ಪ್ರಾಣಿ ಹಾಗೂ 283 ಪ್ರಭೇದದ ಪಕ್ಷಿ ಸಂಕುಲಗಳಿದೆ. ಕೇರಳದಲ್ಲಿರುವ 483 ಪಕ್ಷಿ ಪ್ರಭೇದಗಳು ಪೊನ್ಮುಡಿಯಲ್ಲೂ ಕಾಣಸಿಗುತ್ತವೆ. ಇನ್ನು 195 ವೆರೈಟಿ ಚಿಟ್ಟೆಗಳಿವೆ.

ಪೊನ್ನುಡಿ ಸುತ್ತಮುತ್ತ...
ಇಲ್ಲಿಗೆ ಹತ್ತಿರವಿರುವ ಕೇರಳ ಲೆಜಿಸ್‌ಲೇಟರ್ ಕಾಂಪ್ಲೆಕ್ಸ್, ಸೈನ್ಸ್ ಆಂಡ್ ಟೆಕ್ನಾಲಜಿ ಮ್ಯೂಸಿಯಂ ಕಾಂಪ್ಲೆಕ್ಸ್, ಪ್ರಿಯದರ್ಶಿನಿ ಪ್ಲಾನೆಟೇರಿಯಂ, ದಿ ನೇಪಿಯರ್ ಮ್ಯೂಸಿಯಂ, ಆರ್ಟ್ ಗ್ಯಾಲರಿ, ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ, ದಿ ಕನಕ್ಕುನ್ನು ಪ್ಯಾಲೇಸ್, ಸೈಂಟ್ ಜೋಸೆಫ್ ಕ್ಯಾಥೆಡ್ರಲ್, ಪಲಯಂ, ವಿಜಿಟೆ ಹಾಲ್, ಪದ್ಮನಾಭ ಸ್ವಾಮಿ ಟೆಂಪಲ್, ಮಿಶನ್ ಮನಿ, ಕುತಿರಾಮಲೀಕಾ ಪ್ಯಾಲೇಸ್ ಮ್ಯೂಸಿಯಂ, ಸಿವಿಎನ್ ಕಲರಿ ಇವೇ ಮೊದಲಾದ ಆಕರ್ಷಣೀಯ ಸ್ಥಳಗಳಿವೆ. ಶಂಕುಮುಗಂ ಬೀಚ್, ಅಕುಲುಮ್ ಟೂರಿಸ್ಟ್ ವಿಲೇಜ್, ವೆಲಿ ಟೂರಿಸ್ಟ್ ವಿಲೇಜ್, ವಲಿಯಥುರಾ, ಭೀಮಪಲ್ಲಿ, ಸಮುದ್ರ ಬೀಚ್, ತಿರುವಲ್ಲಂ, ಪರಸುರಂ ಟೆಂಪಲ್, ತಿರುವಲ್ಲಂ, ಕೊವಾಲಂ ಬೀಚ್, ಲೈಟ್‌ಹೌಸ್, ವರ್ಕಲಂ, ತೆನ್ಮಾಲ ವಕೋ ಟೂರಿಸಂ ಹಾಗೂ ಸ್ಪಲ್ಪ ದೂರದಲ್ಲಿರೋ ಕನ್ಯಾಕುಮಾರಿಗೆ ಕೂಡಾ ಭೇಟಿ ನೀಡಿ ಬರಬಹುದು. ಪೊನ್ಮುಡಿ ನಿಸರ್ಗಧಾಮಕ್ಕೆ ಹೋದ ಮೇಲೆ ಫ್ರೆಶ್‌ವಾಟರ್ ಸ್ಪ್ರಿಂಗ್ಸ್, ಜಿಂಕೆ ಪಾರ್ಕ್, ಲಯನ್ ಸಫಾರಿ, ಅರ್ನಮುಲ ವಾಟರ್ ಕಾರ್ನಿವಲ್, ಗೋಲ್ಡನ್ ವ್ಯಾಲಿ, ಪೊನ್ಮುಡಿ ಕ್ರೆಸ್ಟ್ ನೋಡೋಕೇ ಮರೆಯದಿರಿ. ಅಗಸ್ತ್ಯಾರ್ ಹಿಲ್ಸ್‌ಗೆ ಹೋಗಲು ಪಾಸ್ ಲಭ್ಯ.

ಹೋಗುವುದು ಹೀಗೆ:
ಬೆಂಗಳೂರಿನಿಂದ 472 ಕಿಮೀ. ಇದೆ. ತಿರುವನಂತಪುರಂದಿಂದ 63 ಕಿಮೀ.(ಬಸ್ ಹಾಗೂ ರೈಲಿನ ಮೂಲಕ) ಹಾಗೂ ತಿರುವನಂತಪುರಂ ವಿಮಾನ ನಿಲ್ದಾಣದಿಂದ 71ಕಿಮೀ. ಇದೆ. ಉಳಿದುಕೊಳ್ಳಲು ಸರ್ಕಾರಿ ಅತಿಥಿಗೃಹ ಜತೆಗೆ ಲಾಡ್ಜ್‌ಗಳು ಕೂಡಾ ಹತ್ತಿರದಲ್ಲೇ ಇದೆ.

ಕೃಪೆ:ವಿಜಯಕರ್ನಾಟಕ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website