ಅಂದು ಮತ ಹಾಕುವ ಮುನ್ನ ಇವನ್ನೆಲ್ಲ ಯೋಚಿಸಿ!
ಚುನಾವಣೆ ಘೋಷಣೆಯಾಗಿದೆ. ನಾವು ಇದನ್ನು 'ಮಹಾಯುದ್ಧ' ಎಂದು ಕರೆದಿದ್ದೇವೆ. ಇದಕ್ಕಿಂತ ಪ್ರಬಲವಾದ, ಎಲ್ಲರಿಗೂ ಅರ್ಥವಾಗುವ ಪದವಿದ್ದಿದ್ದರೆ, ಆ ಹೊತ್ತಿನಲ್ಲಿ ಹೊಳೆದಿದ್ದರೆ ಅದನ್ನೇ ಇಡುತ್ತಿದೆ. World war ಗೆ ನಾವು ಮಹಾಯುದ್ಧ ಎಂದು ಕರೆದಿದ್ದೇವೆ. ಭಾರತದಲ್ಲಿನ ಚುನಾವಣೆ ಅಂದ್ರೆ ಯಾವ ದೃಷ್ಟಿಯಿಂದಲೂ ಅದಕ್ಕಿಂತ ಕಡಿಮೆ ಇರುವುದಿಲ್ಲ. ಇದನ್ನು mother of all battles ಅಂತಾನೂ ಕರೆಯುವುದುಂಟು. ಅದೂ ಸಹ ನಿಜ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಇದರ ವಿರಾಟದರ್ಶನ ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಲಿದೆ. ಎಲ್ಲ ರಾಜಕೀಯ ಪಕ್ಷಗಳು, ಆ ಪಕ್ಷಗಳ ನೇತಾರರು, ಹುರಿಯಾಳುಗಳು, ಕಾರ್ಯಕರ್ತರು ತೆರೆಮರೆಯಲ್ಲಿ ಈ ಹೋರಾಟಕ್ಕೆ ಮೌನವಾಗಿ ಸಜ್ಜಾಗುತ್ತಿದ್ದಾರೆ. ಈ ದೇಶ ಕಂಡು ಕೇಳರಿಯದ ಮತ್ತೊಂದು ಮಹಾಯುದ್ಧಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ.
ಹಾಗಾದರೆ ಈ ಚುನಾವಣೆಯಲ್ಲಿ ನನ್ನ ಪಾತ್ರವೇನು, ನಾನು ಏನು ಮಾಡಬೇಕು, ನನ್ನ ಮುಂದಿರುವ ಸವಾಲುಗಳೇನು, ಆಯ್ಕೆಯೇನು, ಹೊಸ ಸರ್ಕಾರ ರಚನೆಯಲ್ಲಿ ನಾನು ಹೇಗೆ ತೊಡಗಿಸಿಕೊಳ್ಳಬೇಕು. ಈ ಎಲ್ಲ ಪ್ರಶ್ನೆಗಳೂ ನಮ್ಮೆಲ್ಲರ ಮುಂದೆ ಮೂಡಲಾರಂಭಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ನಾವೆಲ್ಲ ಈ ಚುನಾವಣೆ ಸುಳಿಯಲ್ಲಿ ಸಿಲುಕಿ ತಿರುಗುತ್ತಿರುವ ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು 'ಫಾರ್ಚೂನ್' ಮ್ಯಾಗಜಿನ್ನ ಹಿರಿಯ ಸಂಪಾದಕ ಹಿಂದೋಲ್ ಸೇನಗುಪ್ತಾ ಅವರು ಬರೆದ ''100 things to know and Debate Before you vote'ಎಂಬ ಪುಸ್ತಕವನ್ನು ಓದುತ್ತಿದ್ದೆ. ಚುನಾವಣೆಗೆ ಸಜ್ಜಾಗಿ ನಿಂತ ಈ ದೇಶದ ಮತದಾರ ಮಹಾಪ್ರಭುಗಳೆಲ್ಲ ಓದಲೇಬೇಕಾದ ಕೃತಿಯಿದು. ಇದರಲ್ಲಿನ ವಿಷಯಗಳು ನಿಮಗೆ ಗೊತ್ತಿಲ್ಲದ್ದು ಎಂದು ಭಾವಿಸಬೇಕಿಲ್ಲ. ಕೆಲವು ನಿಮಗೂ ಗೊತ್ತಿರಬಹುದು. ಆದರೆ ಚುನಾವಣೆ ಸಂದರ್ಭದಲ್ಲಿ ಈ ಕೃತಿಯನ್ನು ಓದಿದರೆ, ಮತದಾರರ ಮೇಲಾಗುವ ಪರಿಣಾಮವೇ ಬೇರೆ. ಹದಿನಾಲ್ಕು ಮಹಾಚುನಾವಣೆಗಳು ಮುಗಿದರೂ, ಈ ದೇಶದ ಪ್ರಜೆಗಳು ಎಂಥ ದೈನೇಸಿ ಸ್ಥಿತಿಯಲ್ಲಿದ್ದಾರೆ, ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆಯೆಂಬುದು ಗೊತ್ತಾಗುತ್ತದೆ. ದೇಶಕ್ಕೆ ದೇಶವೇ ಕೇಳಿಕೊಳ್ಳಬೇಕಾದ, ಸಂಗತಿಗಳನ್ನು, ಸರಿಯಾದ ಸಮಯದಲ್ಲಿ ಸೇನಗುಪ್ತಾ ನಮ್ಮ ಮುಂದಿಟ್ಟಿದ್ದಾರೆ.
ಇಡೀ ಜಗತ್ತಿನಲ್ಲಿರುವ ಎಲ್ಲ ಅನಿಷ್ಟಗಳನ್ನು ಒಂದೇ ದೇಶದಲ್ಲಿ ನೋಡಬೇಕೆನಿಸಿದರೆ ಬೇರೆಲ್ಲೂ ಹೋಗಬೇಕಿಲ್ಲ. ಭಾರತಕ್ಕೆ ಬಂದರೆ ಸಾಕು. ವಿಶ್ವದರ್ಶನವಾಗುತ್ತದೆ. ಭೂಮಿಯ ಮೇಲಿನ ಎಲ್ಲ ದರಿದ್ರ, ನೀಚಾತಿನೀಚ ಕೃತ್ಯಗಳು, ಜನ, ವ್ಯವಸ್ಥೆಗಳೆಲ್ಲ ಇಲ್ಲಿವೆ. ಆಫ್ರಿಕಾದಂಥ ಹಿಂದುಳಿದ ದೇಶಗಳು ಬೆಚ್ಚಿಬೀಳುವಂಥ ಅಕ್ರಮ, ಅವ್ಯವಹಾರ, ಅಧರ್ಮ, ಹೇಯ ಕೃತ್ಯಗಳು ನಮ್ಮ ದೇಶದಲ್ಲಿ ನಡೆಯುತ್ತವೆ. ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ರಸ್ತೆಗಳು, ಶೌಚಾಲಯಗಳನ್ನು ನೋಡಬೇಕೆನಿಸಿದರೆ ಭಾರತಕ್ಕೆ ಬರಬಹುದು. ಈ ದೇಶದ ಜನತೆಯ ದೌರ್ಭಾಗ್ಯವನ್ನು ಅದ್ಯಾವಭಗವಂತ ಬರೆದನೋ ಏನೋ, ನಾವು ಧೂಳು, ವಿಷ ತುಂಬಿದ ಗಾಳಿಯನ್ನು ಕುಡಿಯುತ್ತಿದ್ದೇವೆ. ನಮ್ಮ ದೇಶದ ಎಲ್ಲ ನದಿಗಳು, ಕೆರೆಗಳ ನೀರು ಮಲಿನ ಹಾಗೂ ಕುಡಿಯಲು ಅಯೋಗ್ಯ. ಕೆಲವು ನದಿಗಳ ನೀರಂತೂ ವಿಷವೇ. ಒಲಿಂಪಿಕ್ಸ್ನಲ್ಲಿ ಒಂದೇ ಒಂದು ಚಿನ್ನದ ಪದಕ ಗೆಲ್ಲಲಾಗದಿದ್ದರೆ ಏನಂತೆ, ರೋಗರುಜಿನ, ಅಪ್ರಾಮಾಣಿಕತೆ, ಅದಕ್ಷತೆ, ಬೇಜವಾಬ್ದಾರಿತನಗಳಿಗೆ ಪದಕಗಳನ್ನು ಇಟ್ಟಿದ್ದರೆ ಚಿನ್ನ, ಬೆಳ್ಳಿ, ಕಂಚು, ಕಬ್ಬಿಣ, ತಗಡುಗಳೆಲ್ಲಾ ನಮಗೇ ಸಿಗುತ್ತಿದ್ದವು . ಯಾವುದೇ ಜಾಗತಿಕ ಅಭಿವೃದ್ಧಿ ಮಾಪಕವನ್ನೇ ತೆಗೆದುಕೊಂಡರೂ ಭಾರತದ ಹೆಸರು ಕೆಳಗಡೆಯಲ್ಲಿ ಗೋಚರಿಸಬಹುದು. ಲಕ್ಷಾಂತರ ಮಂದಿ ವೈದ್ಯಕೀಯ ಸೌಲಭ್ಯ ಸಿಗದೇ ಸಾಯುತ್ತಾರೆ. ಅದರ ಎರಡು ಪಟ್ಟು ಜನ ವೈದ್ಯಕೀಯ ಸೌಲಭ್ಯ ಸಿಕ್ಕಿದ್ದಕ್ಕೆ ಸಾಯುತ್ತಾರೆ. ಕಾರಣ ಔಷಧವೆಂಬ ವಿಷ. ಜಗತ್ತಿನ ಬಹುತೇಕ ದೇಶಗಳಲ್ಲಿ ನಿಷೇಧಿಸಿದ, ಸೇವಿಸಲೇಕೂಡದೆಂದು ಎಚ್ಚರಿಸಿದ ಔಷಧಗಳನ್ನು ಈ ದೇಶದಲ್ಲಿ ಮುಕ್ತವಾಗಿ ಮಾರಾಟ ಮಾಡಲಾಗುತ್ತದೆ. ಈ ಔಷಧಿಗಳನ್ನು ಸೇವಿಸಲೇಕೂಡದೆಂದು ವಿಶ್ವ ಆರೋಗ್ಯ ಸಂಸ್ಥೆ 187 ಮಾತ್ರೆ, ಔಷಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವೆಲ್ಲವೂ ನಮ್ಮಲ್ಲಿ ಲಭ್ಯ.
ಉದ್ಘಾಟನೆಗೆ ಮುನ್ನವೇ ಸರ್ಕಾರಿ ಕಟ್ಟಡಗಳು, ಸೇತುವೆಗಳು ಕುಸಿದು ಬೀಳುತ್ತವೆ. ನೂರಾರು ಜನ ಸಾಯುತ್ತಾರೆ. ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಆದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಇಂದು ರಸ್ತೆಗೆ ಹಾಕಿದ ಡಾಂಬರು ಎರಡು ತಿಂಗಳಲ್ಲಿ ಕಿತ್ತು ಹೋಗಿ ಹೊಂಡ ಬೀಳುತ್ತದೆ. ರಸ್ತೆಗೆ ರಸ್ತೆಯೇ ತೊಳೆದು ಹೋಗುತ್ತದೆ. ಆದರೂ ಯಾರೂ ಪ್ರಶ್ನಿಸುವುದಿಲ್ಲ. ಕೆಟ್ಟ ರಸ್ತೆಯಲ್ಲಿ ಕಷ್ಟಪಟ್ಟು ಓಡಾಡಿದರೂ, ವರ್ಷಗಟ್ಟಲೆ ಓಡಾಡಿದರೂ, ಅದನ್ನು ದುರಸ್ತಿ ಮಾಡುವುದಿಲ್ಲ. ಜಗತ್ತಿನ ಯಾವ ದೇಶದಲ್ಲೂ ಇಂಥ ಸ್ಥಿತಿಯನ್ನು ಕಾಣಲು ಸಾಧ್ಯವೇ ಇಲ್ಲ. ಯಾವ ರಸ್ತೆಯೂ ಒಂದು ವರ್ಷಕ್ಕಿಂತ ಹೆಚ್ಚು ಬಾಳಿಕೆ ಬರುವುದಿಲ್ಲ. ವರ್ಷ ವರ್ಷವೂ ಡಾಂಬರು ಹಾಕಬೇಕು. ಅದು ಕಿತ್ತು ಹೋಗುತ್ತಲೇ ಇರುತ್ತದೆ. ಅದ್ಯಾವ ಪಕ್ಷದ ಸರ್ಕಾರವೇ ಇರಲಿ, ಅದು ಕಟ್ಟಿದ ಸೇತುವೆ, ಮೇಲ್ಸೆತುವೆ, ಕಟ್ಟಡ, ಕ್ರೀಡಾಂಗಣ, ಮೆಟ್ರೋ, ಬಸ್ಸು ನಿಲ್ದಾಣ...ಯಾವುದರಲ್ಲೂ ಸೌಂದರ್ಯ, ಶಿಸ್ತು, ಅಚ್ಚುಕಟ್ಟುತನ, ಅಂದ, ಸ್ವಚ್ಛತೆಯನ್ನು ನಿರೀಕ್ಷಿಸುವಂತೆಯೇ ಇಲ್ಲ. ಭಾರತೀಯ ರೈಲಿಗೆ ಒಂದೂವರೆ ಶತಮಾನ ತುಂಬಿದರೂ ನಿಲ್ದಾಣವನ್ನು ಮಲಮೂತ್ರ ಮುಕ್ತ ಪ್ರದೇಶವನ್ನಾಗಿ ಕಾಪಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ.
ಹಿರಿಯ ನಾಗರಿಕರನ್ನು ನಮ್ಮ ದೇಶದಲ್ಲಿ ಕೆಟ್ಟದಾಗಿ ನಡೆಸಿಕೊಂಡಷ್ಟು ಬೇರೆ ಯಾವ ದೇಶಗಳಲ್ಲೂ ನಡೆಸಿಕೊಳ್ಳಲಿಕ್ಕಿಲ್ಲ. ಭಾರತದಲ್ಲಿ ವಿಕಲಚೇತನರಾಗಿ ಹುಟ್ಟಲೇಬಾರದು. ರಸ್ತೆಯಲ್ಲಿ ತೆವಳುತ್ತಾ ಹೋಗುವ ವಿಕಲಚೇತನರನ್ನು ಹಾರ್ನ್ ಮಾಡಿ ಹೆದರಿಸುವ ಜನರಿರುವ ದೇಶವೆಂದರೆ ಭಾರತವೊಂದೇ. ಸಾರ್ವಜನಿಕ ಅಂದ-ಚೆಂದ, ಸ್ವಚ್ಛತೆ, ಶುಚಿತ್ವ, ಆರೋಗ್ಯಕ್ಕೆ ಯಾವ ದೇಶ ಮಹತ್ವ ಕೊಡುವುದಿಲ್ಲವೋ ಆ ದೇಶ ಎಂದೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಈ ದೇಶದಲ್ಲಿ ಇಷ್ಟೆಲ್ಲ ಕಾನೂನುಗಳನ್ನು ಮಾಡಿದ್ದಾರಲ್ಲ, ವಾಹನಗಳ ಹಾರ್ನ್ ಮಾಡಬಾರದು ಎಂಬ ಕಾನೂನನ್ನು ಮಾಡಲು ಏಕೆ ಸಾಧ್ಯವಾಗಿಲ್ಲ? ಅಮೆರಿಕದಲ್ಲಿ ಎಂಟು ವರ್ಷದಲ್ಲಿ ಹಾರ್ನ್ ಸದ್ದಾಗುವಷ್ಟು ಭಾರತದಲ್ಲಿ ಒಂದು ದಿನದಲ್ಲಾಗುತ್ತದೆ. ಅಂದ್ರೆ ನಮ್ಮ ರಸ್ತೆ ಶಿಸ್ತು ಎಷ್ಟರಮಟ್ಟಿಗೆ ಹಾಳಾಗಿರಬಹುದೆಂಬುದನ್ನು ಊಹಿಸಬಹುದು.
ಒಂದು ಕಾಲದಲ್ಲಿ ಆಫ್ರಿಕಾದಲ್ಲಿ ಜನ ಹೇಗೆ ಸತ್ತಿದ್ದಾರೆಂಬುದೇ ಗೊತ್ತಾಗುತ್ತಿರಲಿಲ್ಲ. ಯಾವ ರೋಗದಿಂದ ಸತ್ತಿರಬಹುದೆಂದು ಸಹ ತಿಳಿಯುತ್ತಿರಲಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಆಫ್ರಿಕಾ ಖಂಡದ ದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಹಳದಿ ಚುಚ್ಚುಮದ್ದು ತೆಗೆದುಕೊಂಡವರಿಗೆ ಮಾತ್ರ ಪ್ರವೇಶ ಎಂಬ ನಿಯಮವನ್ನು ಸಡಿಲಿಸುವಂತೆ ಆಫ್ರಿಕಾ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ. ಆಫ್ರಿಕಾದ ಕೋರಿಕೆಯನ್ನು ಮನ್ನಿಸಬಹುದು. ಆದರೆ ಈ 'ಹಳದಿ ಚುಚ್ಚುಮದ್ದು ಸೋಂಕು' ಭಾರತಕ್ಕೆ ಹಿಡಿದರೆ ಅಚ್ಚರಿಯಿಲ್ಲ. ಭಾರತದಲ್ಲಿ ಈ ಬಾಧೆಯ ಭೀತಿ ಆವರಿಸಲಾರಂಭಿಸಿದೆ. 2012ರಲ್ಲಿ ದೇಶದ ರಾಜಧಾನಿಯೊಂದರಲ್ಲೇ 4600 ಡೆಂಗೆ ಪ್ರಕರಣಗಳು ವರದಿಯಾದವು. ಇಡೀ ದೇಶದಲ್ಲಿ 38, 179 ಮಂದಿಗೆ ಈ ರೋಗ ತಗುಲಿತು. ಮನುಷ್ಯನ ಜೀವಕ್ಕೆ ಬೆಲೆ ನೀಡುವ ದೇಶಗಳ ಸಾಲಿನಲ್ಲಿ ಭಾರತಕ್ಕೆ 168ನೇ ಸ್ಥಾನವಿದೆ. ಬಾಂಗ್ಲಾ, ಪಾಕಿಸ್ತಾನ ಈ ನಿಟ್ಟಿನಲ್ಲಿ ನಮಗಿಂತ ವಾಸಿ. ಪ್ರತಿದಿನ ಅಪಘಾತವೊಂದರಲ್ಲೇ ಸಾವಿರಕ್ಕೂ ಹೆಚ್ಚು ಮಂದಿ ಸಾಯುತ್ತಾರೆ. ಆದರೂ ನಮ್ಮ ರಸ್ತೆಗಳು ಮೃತ್ಯುಕೂಪಗಳಾಗುವುದನ್ನು ತಪ್ಪಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಜಗತ್ತಿನ ದೇಶಗಳು ರಸ್ತೆ ಸುರಕ್ಷತೆ ಬಗ್ಗೆ ಗಣನೀಯ ಪ್ರಗತಿ ಸಾಧಿಸಿದರೆ, ಭಾರತದ ಸಾಧನೆ ಸ್ವಲ್ಪವೂ ತೃಪ್ತಿದಾಯಕವಾಗಿಲ್ಲ. ಮನೆಯಿಂದ ಹೊರಹೋದವರು ಸುರಕ್ಷಿತವಾಗಿ ಮನೆ ಸೇರುವುದು ನಮ್ಮಲ್ಲಿನ್ನೂ ಪವಾಡವೇ ಸರಿ.
ಈ ದೇಶದ ಜನರಿಗೆ ಅತ್ಯಂತ ಪ್ರಾಥಮಿಕ ಅಗತ್ಯಗಳಲ್ಲಿ ಒಂದಾದ ಶೌಚಾಲಯವನ್ನು ಒದಗಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಕಳೆದ ನವೆಂಬರ್ನಲ್ಲಿ ಮೂವತ್ನಾಲ್ಕು ದಿನ ಭಾರತದಲ್ಲಿ ಸಂಚರಿಸಿದ ಅಮೆರಿಕನ್ ಪ್ರಜೆಯೊಬ್ಬ 'ನ್ಯೂಯಾರ್ಕ್ ಟೈಮ್ಸ್'ನಲ್ಲಿ ಬರೆದ ಲೇಖನ ಓದಿದರೆ ನಾವು ನಾಚಿಕೆ, ಅವಮಾನದಿಂದ ತಲೆತಗ್ಗಿಸಬೇಕು. 'ಭಾರತವೆಂಬ ಬೃಹತ್ ಬಯಲು ಶೌಚಾಲಯ' ಎಂಬರ್ಥ ಬರುವ ಶೀರ್ಷಿಕೆಯಲ್ಲಿ ಆತ ನಮ್ಮ ದೇಶದ ಮಾನವನ್ನು ಹರಾಜು ಹಾಕಿದ್ದಾನೆ ಅಥವಾ ಶೌಚಾಲಯಕ್ಕೆ ಸಂಬಂಧಿಸಿದಂತೆ ಇಡೀ ದೇಶವನ್ನು ಬೆತ್ತಲುಗೊಳಿಸಿದ ಆತನಿಂದ ನಾವು ಮಾನ ಮರ್ಯಾದೆಯನ್ನೆಲ್ಲ ಹರಾಜು ಹಾಕಿಸಿಕೊಂಡಿದ್ದೇವೆ. ನಮ್ಮ ದೇಶದಲ್ಲಿ ಟಾಯ್ಲೆಟ್ಗಿಂತ ಮೊಬೈಲು ಫೋನುಗಳು ಹೆಚ್ಚಿವೆ. ಗ್ರಾಮೀಣ ಭಾರತದಲ್ಲಿ ಶೇ. 76ರಷ್ಟು ಭಾಗದಲ್ಲಿ ಇಂದಿಗೂ ಶೌಚಾಲಯವಿಲ್ಲ. ಅನಾಗರಿಕ ಸಮಾಜದಲ್ಲಿ ಮಾತ್ರ ಇಂಥ ಸ್ಥಿತ ನೆಲೆಸಿರಲು ಸಾಧ್ಯ ಎಂದು ಅಮೆರಿಕ ಪ್ರವಾಸಿಗ ಬರೆದಿದ್ದಾನೆ. ಬಿಹಾರದಲ್ಲಿ ನೂರಕ್ಕೆ 23 ಜನರಿಗೆ ಮಾತ್ರ ಟಾಯ್ಲೆಟ್ ಇದೆ. ಉಳಿದವರಿಗೆ ಬಯಲೇ ಗತಿ. ಭಾರತೀಯ ರೈಲನ್ನು ಜಗತ್ತಿನ ಅತ್ಯಂತ ಉದ್ದದ ಟಾಯ್ಲೆಟ್ ಎಂದು ಕರೆಯುವಂತೆ ಭಾರತವನ್ನು ಅತ್ಯಂತ ವಿಶಾಲ ಶೌಚಾಲಯ ಎಂದು ಕರೆಯಬಹುದೆಂದು ವಿದೇಶಗಳಲ್ಲಿ ಲೇವಡಿ ಮಾಡುತ್ತಾರೆ.
ನಮ್ಮ ದೇಶದ ಯಾವುದೇ ನಗರಗಳಿಗೆ ಹೋಗಿ, ಅವು ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ವಾಸ ಯೋಗ್ಯವಾಗಿಲ್ಲ. ಅಂತಾರಾಷ್ಟ್ರೀಯ ನೈರ್ಮಲ್ಯ ಸುರಕ್ಷತಾ ಸಂಸ್ಥೆ ಪ್ರಕಾರ, ದೇಶದ ಬಹುತೇಕ ನಗರಗಳಲ್ಲಿ ಕಕ್ಕಸು, ಶೌಚಾಲಯಗಳ ನೀರು ಮುಕ್ತವಾಗಿ ಹರಿದು ಹೋಗುತ್ತವೆ. ಶೇ. 80ರಷ್ಟು ಚರಂಡಿ ನೀರನ್ನು ಸಂಸ್ಕರಿಸುವುದಿಲ್ಲ. ಇದು ಕುಡಿಯುವ ನೀರಿನ ಮೂಲವನ್ನೇ ಕಲುಷಿತಗೊಳಿಸುತ್ತಿದೆ. ದೇಶದ ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ 40,000 ದಶಲಕ್ಷ ಚರಂಡಿ ನೀರಿನ ಪೈಕಿ ಕೇವಲ ಶೇ. 30ರಷ್ಟನ್ನು ಮಾತ್ರ ಸಂಸ್ಕರಿಸಲಾಗುತ್ತದೆ. ದೇಶದ 8000 ಸಾವಿರ ನಗರ, ಪಟ್ಟಣಗಳ ಪೈಕಿ ಬರಿ 160 ಪಟ್ಟಣಗಳಲ್ಲಿ ಮಾತ್ರ ಒಳಚರಂಡಿ ಸಂಸ್ಕರಣ ಘಟಕಗಳಿವೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದನ್ನು ticking health time bomb ಎಂದು ಎಚ್ಚರಿಸಿದೆ. ಜಲಜನ್ಯ ರೋಗಗಳೇ ಭಾರತದ ಬಹು ದೊಡ್ಡ 'ಕೊಲೆಗಾರ' ಎಂದು ಹೇಳಿದೆ. ಬೆಂಗಳೂರಿನಂಥ ನಗರದಲ್ಲಿ ಜನರು ಬಳಸಿ ಚರಂಡಿಗೆ ಬಿಟ್ಟ ನೀರಿನ ಪೈಕಿ ಕೇವಲ ಶೇ. ಹತ್ತರಷ್ಟನ್ನು ಸಂಸ್ಕರಿಸಲಾಗುತ್ತದೆ.
ಇವೆಲ್ಲವುಗಳ ಪರಿಣಾಮ ಎಷ್ಟು ಗಂಭೀರವಾಗಿದೆಯೆಂದರೆ ದೇಶದ 639 ಜಿಲ್ಲೆಗಳ ಪೈಕಿ 158 ಜಿಲ್ಲೆಗಳಲ್ಲಿ ಅಂತರ್ಜಲ ಕ್ಷಾರ ಅಥವಾ ಲವಣಯುಕ್ತವಾಗಿದೆ. 385 ಜಿಲ್ಲೆಗಳಲ್ಲಿ ನೈಟ್ರೇಟ್ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿದೆ. 53 ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಆರ್ಸೆನಿಕ್ (ಶಂಖ ಪಾಷಾಣ) ಇರುವುದು ದೃಢಪಟ್ಟಿದೆ. ಭಾರತದ ಶೇಕಡಾ 78ರಷ್ಟು ಪ್ರದೇಶಗಳಲ್ಲಿ ಜನ ವಿಷಯುಕ್ತ, ಮಲಿನ, ಹೊಲಸು ನೀರನ್ನು ಕುಡಿಯುತ್ತಿದ್ದಾರೆ.
ಶೋಷಿತ, ನೊಂದ, ಅನ್ಯಾಯಕ್ಕೊಳಗಾದ ಜನ ಕೊನೆಯದಾಗಿ ಕೋರ್ಟಿನ ಮೊರೆ ಹೋದರೆ, ಅಲ್ಲಿನ ಪರಿಸ್ಥಿತಿ ಹೇಗಿದೆ ಗೊತ್ತಾ? ದೇಶದ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಮೂರು ಕೋಟಿ ಕೇಸುಗಳಿವೆ! ಹತ್ತು ವರ್ಷಗಳಿಂದ ಇತ್ಯರ್ಥವಾಗದ ಒಂದು ಕೋಟಿ ಎಪ್ಪತ್ತೊಂದು ಲಕ್ಷ ಕೇಸುಗಳಿವೆ. ಸುಪ್ರಿಂಕೋರ್ಟಿನ ಮುಂದೆ 66 ಸಾವಿರ ಇತ್ಯರ್ಥವಾಗದ ವ್ಯಾಜ್ಯಗಳಿವೆ. ಈ ಎಲ್ಲ ಕೇಸುಗಳನ್ನು ಇತ್ಯರ್ಥಪಡಿಸಲು ಕನಿಷ್ಠ 15 ವರ್ಷಗಳಾದರೂ ಬೇಕು. ಅಲ್ಲಿಯ ತನಕ ನ್ಯಾಯ ಅಪೇಕ್ಷಿಸುವ ಜನರ ಪರಿಸ್ಥಿತಿ ಏನಾಗಬಹುದು? ಇದು ನ್ಯಾಯದಾನ ವ್ಯವಸ್ಥೆ ಸಂಪೂರ್ಣ ಕುಸಿತ ಎಂದು ಪರಿಗಣಿಸಲಾಗಿದೆ. ಸಾಕ್ಷಾತ್ ಭಗವಂತನೇ ಬಂದರೂ ಈ ಪರಿಸ್ಥಿತಯನ್ನು ಸುಧಾರಿಸುವುದು ಅಬ್ಬಬ್ಬಾ... ಸಾಧ್ಯವೇ ಇಲ್ಲ.
ನೀವು ಆಫ್ರಿಕಾ ಖಂಡದ ಯಾವುದೇ ದೇಶಕ್ಕೆ ಹೋಗಿ ಈ ಸಂಗತಿಯನ್ನು ಹೇಳಿದರೆ, ಅಲ್ಲಿನ ಜನ ಹೌಹಾರಿ ಹೋಗಬಹುದು. ಅದೇನೆಂದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ ನಾಲ್ಕು ಸಾವಿರ ಮಂದಿ ಬಡತನದಿಂದ ಬೇರೆ ದಾರಿ ಕಾಣದೇ ತಮ್ಮ ಕಿಡ್ನಿಯನ್ನು ಮಾರಾಟ ಮಾಡುತ್ತಾರೆ. ಮೂರು ಲಕ್ಷ ಮಹಿಳೆಯರು ಬಾಡಿಗೆ ತಾಯಂದಿರಾಗುತ್ತಿದ್ದಾರೆ. ಕಿಡ್ನಿ ಮಾರಾಟವನ್ನು ನಿಷೇಧಿಸಿದ್ದರೂ ಒಳಗೊಳಗೆ ಈ ದಂಧೆ ನಡೆಯುತ್ತಿದೆ. ಲೆಕ್ಕಕ್ಕೆ ಸಿಗದ ಸಂಖ್ಯೆ, ಇದಕ್ಕಿಂತ ಮೂರು ಪಟ್ಟಂತೆ!
ಹಿಂದಿನ ವರ್ಷ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಒಂದು ಸಮೀಕ್ಷೆ ನಡೆಸಿತು. ದೇಶದಲ್ಲಿನ ಆಪರೇಶನ್ ಥಿಯೇಟರ್ಗಳ ಗಣತಿ ಮಾಡಿತು. ಅದರಿಂದ ಕಂಡುಬಂದ ಸಂಗತಿಯೇನೆಂದರೆ ಭಾರತದಲ್ಲಿ ಒಂದು ಲಕ್ಷ ಜನರಿಗೆ ಒಂದು ಆಪರೇಶನ್ ಥಿಯೇಟರ್ ಇದೆಯೆಂಬುದು. ಯುರೋಪಿನಲ್ಲಿ ಒಂದು ಲಕ್ಷ ಜನರಿಗೆ 25.1ರಷ್ಟು ಆಪರೇಶನ್ ಥಿಯೇಟರ್ಗಳಿವೆ. ಈ ವಿಷಯದಲ್ಲಿ ಪಾಕಿಸ್ತಾನವೇ ವಾಸಿ. ಅಲ್ಲಿ ಲಕ್ಷ ಜನರಿಗೆ 1.3 ಆಪರೇಶನ್ ಥಿಯೇಟರ್ಗಳಿದೆ. ಏಡ್ಸ್ ರೋಗದ ವಿಷಯದಲ್ಲೂ ಭಾರತದ ಕತೆ ಭಯಾನಕವಾಗಿದೆ. ವಿಶ್ವದಲ್ಲಿ ಎಚ್ಐವಿ ಪೀಡಿತರನ್ನು ಹೊಂದಿದ ಮೂರನೇ ಅತಿದೊಡ್ಡ ದೇಶವೆಂದರೆ ಭಾರತ ಎಂಬ 'ಅಗ್ಗಳಿಕೆ'.
ಇನ್ನೊಂದು ವಿಷಯ ಹೇಳಿದರೆ ಅಚ್ಚರಿಯೆನಿಸಬಹುದು.
ಮುಂಬೈನ ರೈಲ್ವೆ ಹಳಿಯಲ್ಲಿ ಬಿದ್ದು ಪ್ರತಿವರ್ಷ 6 ಸಾವಿರ ಜನ ಸಾಯುತ್ತಾರೆ. ಪ್ರತಿದಿನ ಅಲ್ಲಿನ ಲೋಕಲ್ ಟ್ರೇನಿನಲ್ಲಿ 65 ಲಕ್ಷ ಜನ ಸಂಚರಿಸುತ್ತಾರೆ. ಟ್ರೇನಿನಿಂದ ಇಳಿಯುವಾಗ ಹಾಗೂ ಹತ್ತುವಾಗ ಪ್ರತಿವರ್ಷ ಐನೂರು ಜನ ಸಾಯುತ್ತಾರೆ. ಅಂದರೆ ದಿನಕ್ಕೆ ಒಬ್ಬಿಬ್ಬರಾದರೂ ಮೃತರಾಗುತ್ತಾರೆ ಅಂದಂತಾಯಿತು.
ಇನ್ನು ಒಂದು ತಿಂಗಳಲ್ಲಿ ನೀವು ನಿಮ್ಮ ಪ್ರತಿನಿಧಿ, ನಿಮ್ಮ ಪ್ರಧಾನಿ ಹಾಗೂ ನಿಮ್ಮ ಸರ್ಕಾರವನ್ನು ಆರಿಸುವುದಕ್ಕಾಗಿ ಮತನೀಡಲು ಮತಗಟ್ಟೆ ಮುಂದೆ ನಿಲ್ಲುತ್ತೀರಿ. ಇಷ್ಟು ವರ್ಷ ಮತ ನೀಡದೆಯೇ ತಪ್ಪಿಸಿಕೊಂಡಿರಲೂಬಹುದು. ಈ ಸಲ ಮತ ಚಲಾಯಿಸುವ ಮುನ್ನ ನಮ್ಮ ದೇಶದ ಈ ಎಲ್ಲ ಚಿತ್ರಣಗಳೂ ನಿಮ್ಮ ಮುಂದೆ ಹಾದು ಹೋಗಲಿ. ಇವು ನಿಮ್ಮ ಮನಕಲಕಿದರೆ, ನೀವು ಚಲಾಯಿಸುವ ಆ ಒಂದು ಮತ ಈ ದೇಶದ ಹಣೆಬರಹವನ್ನು ಬದಲಿಸೀತು.
ಹಾಗೆ ಆಗಲಿ.
-ವಿಶ್ವೇಶ್ವರ ಭ
ಟ್
ಕೃಪೆ:ಕನ್ನಡಪ್ರಭ
ಟ್
ಕೃಪೆ:ಕನ್ನಡಪ್ರಭ
ReplyDeleteಲೇಖನ ಉತ್ತಮವಾಗಿದೆ