ಮಕ್ಕಳ ಸಮಸ್ಯೆ ಗೌಣ,ಸಾಕೇ ನೆಹರು ಗುಣಗಾನ?
ಮದ್ದೂರು ಸುಧೀಂದ್ರಬುಧ್ಯ
NOVEMBER 16, 2012
ಎಲ್ಲರೂ ನೆನೆಯುವುದೇ ಬದುಕಿನ ಆ ದಿನಗಳನ್ನು. ತೀರಾ ಜೀವಿತದ ಅಂಚಿಗೆ ಬಂದು, ಸಾವಿಗೆ ಹತ್ತಿರವಾಗಿರುವ ವೃದ್ದರನ್ನು ಕೇಳಿದರೂ, ಬಾಲ್ಯದ ನೆನಪು ಹಸಿರಾಗಿಯೇ ಇರುತ್ತದೆ. ಬಾಲ್ಯವನ್ನು ನೆನೆದಾಗ ಮುಖದಲ್ಲಿ ನಗು ಅರಳುತ್ತದೆ. ಮಾಡಿತ ತಂಟೆಗಳು, ಯಡವಟ್ಟುಗಳು, ಮೊಂಡುತನ, ಆಟ, ಕಿತ್ತಾಟ ಸ್ಮೃತಿಗೆ ಬಂದು ಮನಸ್ಸು ಹಗುರಾಗುತ್ತದೆ. ಉಲ್ಲಾಸ ಕುಡಿಯೊಡೆಯುತ್ತದೆ. ಯಾರಿಗೇ ಆಗಲಿ, ಆಕಸ್ಮಾತ್ ದೇವರು ಪ್ರತ್ಯಕ್ಷನಾಗಿ ವರ ಕೇಳೆಂದರೂ, ಮತ್ತೊಮ್ಮೆ ಬಾಲ್ಯಕ್ಕೆ ಕಳುಹಿಸಿಬಿಡು ಎಂದು ಕೇಳಬೇಕೆನಿಸುತ್ತದೆ. ಕಾರಣವಿಷ್ಟೇ, ಬಾಲ್ಯಕ್ಕೆ ಬೇಲಿಯಿರುವುದಿಲ್ಲ, ಜವಾಬ್ದಾರಿಗಳ ನೊಗ ಹೊರಬೇಕಾದ ಅನಿವಾರ್ಯತೆಯಿರುವುದಿಲ್ಲ. ಅಮ್ಮನ ಆರೈಕೆ, ಅಪ್ಪನ ಕಾಳಜಿ, ಹಿರಿಯರ ಮುದ್ದು, ಧರ್ಮ, ಜಾತಿ, ಬಡವ ಶ್ರೀಮಂತ ಎಂಬ ಯಾವ ಜಾಡ್ಯವನ್ನೂ ಅಂಟಿಸಿಕೊಳ್ಳದ ಸ್ವಚ್ಚಂದ ಮನಸ್ಸು, ಜಿಗಿದಷ್ಟೂ ಉತ್ಸಾಹ, ಬಾಚಿದಷ್ಟೂ ಪ್ರೀತಿ. ಇಂತಹ ದಿನಗಳು ಪುನಃ ಬದುಕಿನ ಯಾವ ಘಟ್ಟದಲ್ಲಿ ತಾನೇ ಸಿಗಲು ಸಾಧ್ಯ? ಹಾಗಾಗಿಯೇ ಬಾಲ್ಯ ಎಲ್ಲರಿಗೂ ಆಪ್ತ ಮತ್ತು ಬದುಕಿನ ’ಸುವರ್ಣ ಕಾಲ’.
ಹಾಗಂತ ಎಲ್ಲರ ಬದುಕಿನಲ್ಲೂ ಇಂತಹ ಸುವರ್ಣ ಕಾಲವಿರುತ್ತದೆಯೇ? ಹೌದೆನ್ನಲು ಸಾಧ್ಯವಿಲ್ಲ. ಕೆಲವು ಮಕ್ಕಳ ವಿಷಯದಲ್ಲಿ ಬಾಲ್ಯ ಕಹಿಯಾಗಿಯೂ ಇರುತ್ತದೆ. ಮುಗ್ಧತೆ, ಸ್ವಾತಂತ್ರ್ಯ, ನಗು, ಆಟ, ಪ್ರೀತಿ ತುಂಬಿರಬೇಕಾದ ಬಾಲ್ಯದಲ್ಲಿ ಜವಾಬ್ದಾರಿ, ದುಡಿಮೆ, ಖಾಯಿಲೆ, ಬಡತನ, ಶೋಷಣೆ ಆವರಿಸಿಕೊಂಡುಬಿಟ್ಟಿರುತ್ತದೆ. ಕೆಲವೊಮ್ಮೆ ಮಕ್ಕಳ ಮನಸ್ಸಿನಲ್ಲಿ ಬಾಲ್ಯ ಮಾಯದ ಗಾಯ ಮಾಡಿರುತ್ತದೆ. ಫ್ರಾನ್ಸ್ ನ ಇತಿಹಾಸಕಾರ ಫಿಲಿಪ್ ಏರಿಸ್ ತನ್ನ ’ಸೆಂಚೂರಿಸ್ ಆಫ್ ಚೈಲ್ಡವುಡ್’ ಕೃತಿಯಲ್ಲಿ ಮಕ್ಕಳನ್ನು ’Miniature of Adults’ ಎಂದು ಕರೆಯುತ್ತಾನೆ. ಕಾರಣವಿಷ್ಟೇ, ಮಕ್ಕಳು ಕೂಡ ದೊಡ್ಡವರ ಹಾಗೆ ಬದುಕುವ ಅನಿವಾರ್ಯತೆ ನಮ್ಮ ಸಮಾಜದಲ್ಲಿದೆ. ತುತ್ತಿನ ಚೀಲತುಂಬಲು, ಪೋಷಕರಿಗೆ ನೆರವಾಗಲು ,ಬದುಕು ದೂಡಲು, ವಯಸ್ಕರಂತೆ ಮಕ್ಕಳು ದುಡಿಮೆಗಿಳಿಯುತ್ತಾರೆ. ಮುಗ್ದತೆಯ ಜಾಗದಲ್ಲಿ ವ್ಯವಹಾರ ಪ್ರಜ್ನೆ ಬಂದು ಕೂರುತ್ತದೆ, ನಗುವನ್ನು ಗಂಭೀರತೆ ನುಂಗುತ್ತದೆ. ಆಟದ ಸಮಯ ದುಡಿಮೆಯಲ್ಲಿ ಕಳೆದು ಹೋಗುತ್ತದೆ.
ಇನ್ನು, ಆಗಷ್ಟೇ ಪ್ರಪಂಚಕ್ಕೆ ತೆರೆದುಕೊಳ್ಳತೊಡಗಿದ ಮಕ್ಕಳು ಅನೇಕರೀತಿಯಲ್ಲಿ ಶೋಷಣೆಗೆ ಒಳಗಾಗುವ ಪ್ರಸಂಗಗಳೂ ಇವೆ. ಸಹಜವಾಗಿ ಬಾಲ್ಯದಲ್ಲಿ ಸಿಗಬೇಕಾದ ವಿದ್ಯೆ, ಪೋಷಕಾಂಶಯುಕ್ತ ಆಹಾರ, ಅಗತ್ಯ ಸೌಲಭ್ಯಗಳು, ಶಾರೀರಿಕ ಮತ್ತು ಬೌದ್ದಿಕ ಬೆಳವಣಿಗೆಗೆ ಪೂರಕ ವಾತವಾರಣ, ಇಲ್ಲದ ಕೋಟ್ಯಾಂತರ ಮಕ್ಕಳು ಭಾರತದಲ್ಲಿದ್ದಾರೆ. ಹಾಗಂತ, ಇವ್ಯಾವುವು ಭಾರತದ ಮಕ್ಕಳಿಗೆ ಸೀಮಿತವಾದ ಸಮಸ್ಯೆಗಳೇನಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಮಕ್ಕಳನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಅವುಗಳ ರೂಪ, ತೀವ್ರತೆ, ಆಯಾಮ ದೇಶದಿಂದ ದೇಶಕ್ಕೆ ಬೇರೆಯಿರುತ್ತದಷ್ಟೇ. ಪಾಶ್ಚಿಮಾತ್ಯ ದೇಶಗಳಲ್ಲಿ ಮುಖ್ಯವಾಗಿ ಮಕ್ಕಳನ್ನು ಕಾಡುವ ಸಮಸ್ಯೆಯೆಂದರೆ ಬಡತನ ಮತ್ತು ಪೋಷಕರ ವಿಚ್ಚೇದನದಿಂದ ಉಂಟಾಗುವ ಅನಾಥ ಪ್ರಜ್ನೆ. ಉಳಿದಂತೆ ಬಾಲ ಕಾರ್ಮಿಕ ಪದ್ದತಿ ಅಷ್ಟಿಲ್ಲದಿದ್ದರೂ, ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವುದು ಇದ್ದೇ ಇದೆ. ಆಫ್ರಿಕಾ, ಕೀನ್ಯಾ ಮುಂತಾದ ದೇಶಗಳಲ್ಲಿ ಮುಖ್ಯವಾಗಿ ಬಡತನ ಮಕ್ಕಳ ಬಾಲ್ಯವನ್ನು ಹೊಸಕಿಹಾಕಿಬಿಡುತ್ತದೆ. ತಿನ್ನಲು ಆಹಾರವಿಲ್ಲದೇ ಎಷ್ಟೋ ಕಂದಮ್ಮಗಳು ಅಸುನೀಗುತ್ತವೆ.
ಹಾಗೆ ನೋಡಿದರೆ, ಮಕ್ಕಳ ಸಮಸ್ಯೆಗಳ ಬಗ್ಗೆ ಮೊದಲಿಗೆ ಜಗತ್ತು ಮಾತನಾಡಲಿಕ್ಕೆ ಶುರುಮಾಡಿದ್ದೇ ಎರಡನೇ ವಿಶ್ವಯುದ್ದದ ನಂತರ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾಗಿ ಯುನಿಸೆಫ್ ಸ್ಥಾಪನೆಯಾಗಿ, ಯುದ್ದಾನಂತರ ಮಕ್ಕಳು ಅನುಭವಿಸುತ್ತಿರುವ ಸಂಕಟ, ಬಡತನ, ರೋಗರುಜಿನುಗಳ ಕಾಟ, ಆಹಾರದ ಅಭಾವದಿಂದ ಮಕ್ಕಳ ಬೆಳವಣಿಗೆಯ ಮೇಲಾಗುತ್ತಿರುವ ಪರಿಣಾಮ, ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಸಮಸ್ಯೆಗಳ ಬಗ್ಗೆ ಅಧ್ಯಯನ ನೆಡೆಸಿ. ಸೂಕ್ತ ಪರಿಹಾರ ಕಾರ್ಯವನ್ನೂ ಅದು ರೂಪಿಸಿತು. ಮೊದಲಿಗೆ ಅಮೇರಿಕಕ್ಕೆ ಸೀಮಿತವಾಗಿದ್ದ ಸಂಸ್ಥೆಯ ಕೆಲಸಗಳು ಜಗತ್ತಿನ ಎಲ್ಲ ರಾಷ್ಟ್ರಕ್ಕೂ ನಂತರ ವಿಸ್ತಾರಗೊಂಡವು. ಆಗಲೇ ಭಾರತದಲ್ಲೂ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು.
ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳ ಭಾಗವಾಗಿ ಮಕ್ಕಳ ಹಕ್ಕಗಳೂ ಸೇರಿದವು. ಎಲ್ಲ ದೇಶಗಳೂ ಒಟ್ಟಾಗಿ ಜಿನಿವಾದಲ್ಲಿ ಸಭೆ ಸೇರಿ, ಮಕ್ಕಳ ಹಕ್ಕನ್ನು ಕಾಯ್ದಿರಿಸುವ ಮತ್ತು ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಣಯ ಕೈಗೊಂಡವು. ಉಚಿತ ಶಿಕ್ಷಣ, ಆಹಾರ ಮತ್ತು ವಸತಿ, ಜೌಷದೋಪಚಾರ, ಲಸಿಕೆ ಎಲ್ಲವೂ ಮಕ್ಕಳಿಗೆ ದೊರೆಯುವಂತಾಗಬೇಕು ಎಂಬ ತೀರ್ಮಾನಕ್ಕೆ ಬಂದವು. ಭಾರತ ಕೂಡ ಅನುಮೋದಿಸಿ, ಸಂವಿಧಾನದ ಪರಿಚ್ಚೇದ 21ಎ ಮತ್ತು 24ರಲ್ಲಿ ಕಡ್ಡಾಯ ಶಿಕ್ಷಣ ಮತ್ತು ಬಾಲಕಾರ್ಮಿಕ ಪದ್ದತಿ ನಿಷೇಧವನ್ನು ಅಳವಡಿಸಿಕೊಂಡಿತು.
ನಂತರ ಬಿಡಿ, ಪಂಚವಾರ್ಷಿಕ ಯೋಜನೆಯ ಭಾಗವಾಗಿ ಅನೇಕ ಸುಧಾರಣಾ ಕ್ರಮಗಳು ಮಕ್ಕಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಯಾದವು. 1974ರಲ್ಲಿ ’ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’,’ಮಕ್ಕಳೇ, ದೇಶದ ಆಸ್ತಿ’ ಎಂಬ ಘೋಷಣೆಯೊಂದಿಗೆ ಸರ್ಕಾರ ಮಕ್ಕಳ ರಾಷ್ಟ್ರೀಯ ಯೋಜನೆಯನ್ನು ರೂಪಿಸಿತು. ಹದಿನಾಲ್ಕು ವರ್ಷದ ವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವುದು, ಮಕ್ಕಳಿಗೆ ಮತ್ತು ತಾಯಂದಿರಿಗೆ ಪೋಷಕಾಂಶ ಯುಕ್ತ ಆಹಾರದ ಮಹತ್ವ ವಿವರಿಸುವುದು, ಅಂಗವಿಕಲ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿ, ಅಗತ್ಯ ಸೌಲಭ್ಯ ಒದಗಿಸುವುದು, ಹಿಂದುಳಿದ ವರ್ಗಗಳ ಮಕ್ಕಳನ್ನು ಶಾಲೆಗಳತ್ತ ಕರೆತರುವುದು, ಆ ಯೋಜನೆಯ ಭಾಗವಾಯಿತು.ಇನ್ನು 1985ರ ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿಯೇ ಖಾತೆತೆರೆದು ಸಚಿವರೊಬ್ಬರನ್ನ, ಇಲಾಖೆಗಳನ್ನ ಪ್ರಾರಂಭಿಸಿ, ಇಂತಿಷ್ಟು ಎಂದು ಮುಂಗಡ ಪತ್ರದಲ್ಲಿ ಹಣವನ್ನು ತೆಗೆದಿಟ್ಟು ಸರ್ಕಾರ ಯೋಜನೆ ರೂಪಿಸಿತಾದರೂ, ಅವು ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಸಮಸ್ಯೆಯ ಜೀವಂತಿಕೆಯನ್ನು ನೋಡಿದರೆ, ಸರ್ಕಾರದ ಯಾವ ಕ್ರಮಗಳು ಯಶಸ್ವಿಯಾಗಿಲ್ಲ, ಸರ್ಕಾರ ಇಚ್ಚಾಶಕ್ತಿ ಮೆರೆದಿಲ್ಲ ಎಂದೆನಿಸುತ್ತದೆ.
ಗಮನಿಸಿ ನೋಡಿ, ಇಂದಿಗೂ ಮಕ್ಕಳ ಸಮಸ್ಯೆಗಳು ಸಮಾಜದಲ್ಲಿ ಢಾಳಾಗಿ ಕಾಣಸಿಗುತ್ತದೆ. ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನೆಡೆದೇ ಇದೆ. ಕರ್ನಾಟಕದಲ್ಲಂತೂ ಪದೇಪದೇ ಇಂತಹ ಪ್ರಕರಣಗಳು ಸುದ್ದಿಯಾಗುತ್ತದೆ. ಮಂಡ್ಯ ಜೆಲ್ಲೆ ಹೆಣ್ಣು ಭ್ರೂಣ ಹತ್ಯೆಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ಗಂಡು, ಹೆಣ್ಣು ಸಮಾನರು ಎಂದು ಸಾರಿ, ಎಲ್ಲ ರಂಗಗಳಲ್ಲೂ ಹೆಣ್ಣು ಗಂಡಿಗಿಂತ ತಾನೇನು ಕಮ್ಮಿಯಿಲ್ಲವೆಂದು ನಿರೂಪಿಸಿದ್ದರೂ, ಹೆಣ್ಣು ಭ್ರೂಣವನ್ನು ಚಿವುಟಿಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. 1986ರಲ್ಲೇ ಬಾಲಕಾರ್ಮಿಕ ಪದ್ಧತಿಯ ನಿಷೇಧವಾದರೂ, ಹೋಟೆಲು, ಢಾಬಾ, ಟ್ರಕ್ಕುಗಳಲ್ಲಿ, ಮನೆಗೆಲಸ, ಕೂಲಿ, ಕಟ್ಟಡ ನಿರ್ಮಾಣ, ಗ್ಯಾರೇಜು ಎಲ್ಲೆಡೆಯೂ ಪುಟ್ಟ ಮಕ್ಕಳು ದುಡಿಯುವುದು ಕಣ್ಣಿಗೆ ರಾಚುತ್ತದೆ. ಮಾಲೀಕರ ದಬ್ಬಾಳಿಕೆ, ದೈಹಿಕ ಹಲ್ಲೆ, ಕೆಲಸಕ್ಕೆ ತಕ್ಕ ಸಂಭಳ ನೀಡದೆ ಶೋಷಣೆ, ಈ ಎಲ್ಲವನ್ನೂ ಎದುರಿಸುತ್ತ, ಶಾಲೆಯನ್ನು ತೊರೆದು ದುಡಿಯಬೇಕಾದ ಬದುಕಿನ ಅನಿವಾರ್ಯತೆ ಆ ಮಕ್ಕಳ ಬಾಲ್ಯವನ್ನೇ ಹೊಸಕಿಹಾಕುತ್ತಿದೆ.
ಇನ್ನು ಉತ್ತರದ ರಾಜ್ಯಗಳಲ್ಲಿ ಹೆಚ್ಚಿರುವ ಬಾಲ್ಯವಿವಾಹ ಪದ್ಧತಿ ಅನಿಷ್ಠವೇ ಸರಿ. ಮತ್ತೊಂದೆಡೆ, ಆಡಿ ನಲಿಯಬೇಕಾದ ಚಿಕ್ಕವಯಸ್ಸಿನಲ್ಲೇ, ವಯಸ್ಸಾದವರಿಗೆ ಮದುವೆಯ ಹೆಸರಿನಲ್ಲಿ ಮಕ್ಕಳನ್ನು ಮಾರಿಬಿಡುವ ಪ್ರಕರಣಗಳು ಕಡಿಮೆಯೇನಿಲ್ಲ. ಜಾರ್ಖಂಡ್, ರಾಜಸ್ಥಾನ್, ಬಿಹಾರಗಳಲ್ಲಿ ಬಾಲ್ಯವಿವಾಹ ಆತಂಕ ಮೂಡಿಸುವಷ್ಟು ಜೀವಂತವಾಗಿದೆ. 18ರ ಒಳಗೆ ಮದುವೆ ಮಾಡಿ, ಆ ಮಕ್ಕಳ ಭವಿಷ್ಯ ಕೊಲ್ಲುವುದಷ್ಟೇ ಅಲ್ಲ, ಆ ಎಳೆ ವಯಸ್ಸಿನಲ್ಲೇ ಗರ್ಭಧರಿಸಿದ ಪರಿಣಾಮದಿಂದ ಗರ್ಭದರಿಸಿದ ಹೆಣ್ಣು ಸಾವನ್ನಪ್ಪುವ ನಿದರ್ಶನಗಳೂ ಹುಲುಸಾಗಿಯೇ ಇವೆ.
ಉಳಿದಂತೆ ಕಡ್ಡಾಯ ಶಿಕ್ಷಣ ಎಂದು ಸರ್ಕಾರ ಅಭಿಯಾನ ನೆಡೆಸುತ್ತಿದೆಯಾದರೂ, ಇನ್ನೂ ಭಾರತದ ಅನೇಕ ಕುಗ್ರಾಮಗಳಲ್ಲಿ ಸರಿಯಾದ ಶಾಲೆಗಳಿಲ್ಲ. ಶಾಲೆಗಳಿದ್ದರೂ, ಎಲ್ಲ ವರ್ಗದ ಮಕ್ಕಳನ್ನೂ ಶಾಲೆಗೆ ಕರೆತರುವ ಪ್ರಯತ್ನ ಸಫಲವಾಗಿಲ್ಲ. ತೀರಾ ಕೆಡುಕೆನಿಸುವುದೆಂದರೆ ಚಿಕ್ಕ ಮಕ್ಕಳನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳುವ ಪೈಶಾಚಿಕ ಕೃತ್ಯಗಳು. ಅದೂ ನಿರಂತರವಾಗಿ ನೆಡೆಯುತ್ತಿದೆ. ಆ ಬಗ್ಗೆ ಮಕ್ಕಳಲ್ಲಿ, ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ. ನಮ್ಮ ಮೂಢನಂಬಿಕೆಗಳು, ಸಂಪ್ರದಾಯದ ಅಸಂಬದ್ಧ ಆಚರಣೆಗಳಿಂದಲೂ ಮಕ್ಕಳು ಶೋಷಣೆಗೊಳಗಾಗುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳ ಕಡೆಗೆ ಅಸಡ್ಡೆ ನೋಟಬೀರಿ ಮತ್ತೊಂದು ಮಕ್ಕಳದಿನ ಆಗಿಹೋಗಿದೆ. ಅನೇಕ ದೇಶಗಳಲ್ಲಿ ಮಕ್ಕಳ ದಿನವೆಂದರೆ, ಮಕ್ಕಳ ಸಮಸ್ಯೆಯ ಬಗ್ಗೆ ಚರ್ಚಿಸುವ, ಪರಿಹಾರಕ್ಕೆ ಕಾರ್ಯೋನ್ಮುಕವಾಗುವ ದಿನವಾಗಿ ಆಚರಣೆಯಾಗುತ್ತದೆ. ನಮ್ಮ ದೇಶದಲ್ಲಿ ಪಂಡಿತ ನೆಹರೂರ ಹುಟ್ಟುಹಬ್ಬ ಮಕ್ಕಳದಿನದ ಮಹತ್ವವನ್ನೇ ಪೊಳ್ಳಾಗಿಸಿಬಿಟ್ಟಿದೆ. ಮಕ್ಕಳದಿನದಂದು ಮಾಧ್ಯಮಗಳು, ಸಿನಿತಾರೆಯರು, ಸಾಧಕರು ಮಕ್ಕಳಾಗಿದ್ದಾಗಿನ ಭಾವಚಿತ್ರ ಪ್ರಕಟಿಸಿ ಪುನೀತಗೊಂಡಿವೆ. ಗಾಂಧಿ ಟೋಪಿಯ ರಾಜಕಾರಣಿಗಳು ನೆಹರು ಭಾವಚಿತ್ರಕ್ಕೆ ಮಾಲೆಯೇರಿಸಿ, ನೆಹರೂರ ಮಕ್ಕಳ ಪ್ರೇಮವನ್ನು ಹೊಗಳಿ ಸಾಷ್ಠಾಂಗ ಹಾಕಿದ್ದಾರೆ. ಮನೆಗೆಲಸದವರ ಮಕ್ಕಳು ಉಗುಳು ನುಂಗುತ್ತಾ, ಶ್ರೀಮಂತರು ತಿಂದು ತೇಗಿದ ಪಾತ್ರೆಯ ಮುಸುರೆ ತಿಕ್ಕಿ ನಿಟ್ಟುಸಿರು ಬಿಟ್ಟಿದ್ದಾರೆ. ಹೋಟೆಲ್ ಮಾಲೀಕನ ಬೈಗುಳಕ್ಕೆ ಬೆದರಿ, ಪುಟ್ಟ ಹುಡುಗರು ಮೂಲೆಯಲ್ಲಿ ಮುದುರಿ ನಿಂತಿದ್ದಾರೆ. ಚಿಂದಿ ಆಯುವ ಮಕ್ಕಳು , ದೀಪಾವಳಿಯ ಕಸದಲ್ಲಿ ಸಿಡಿಯದೆ ಉಳಿದ ಪಟಾಕಿ ಹುಡುಕುವ ಕಾಯಕ ಮುಂದುವರಿಸಿದ್ದಾರೆ. ’ಮಕ್ಕಳೇ ದೇಶದ ಆಸ್ತಿ’ ಎಂಬ ಘೋಷಣೆ ಕೇಳುತ್ತಲೇ ಇದೆ, ಇವರೆಲ್ಲರ ಅಸಹಾಯಕತೆಯ ಅಣಕದಂತೆ.
Comments
Post a Comment