`ಕನಕ ಅರಮನೆ' ಅನಾವರಣ
ವಿಜಯ್ ಹೂಗಾರ
ಸುಮಾರು ಐದು ವರ್ಷಗಳ ಹಿಂದಿನ ಮಾತು. ಭಕ್ತ ಶ್ರೇಷ್ಠ ಕನಕದಾಸರ ಜನ್ಮಭೂಮಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಸಮೀಪದ ಬಾಡದಲ್ಲಿ ಸಂಶೋಧಕ ಡಾ.ಸುಂದರ್ ನಡೆಸಿದ ಉತ್ಖನನ ಸಂದರ್ಭದಲ್ಲಿ ಕಟ್ಟಡವೊಂದರ ಅವಶೇಷಗಳ ಗೋಚರವಾಯಿತು. ಇದು ಪ್ರಾಚೀನ ಕಟ್ಟಡವೊಂದರ ಅವಶೇಷ ಎನ್ನುವುದು ಮೇಲ್ನೋಟಕ್ಕೆ ಸಾಬೀತಾದರೂ ಇದರ ಹಿಂದಿನ ಸತ್ಯ ಅರಿವಾದಾಗ ಸಂಶೋಧಕರಿಗೇ ಅಚ್ಚರಿ!
ಕಾರಣ, ಇದು ಕೇವಲ ಕಟ್ಟಡಗಳ ಅವಶೇಷವಾಗಿರಲಿಲ್ಲ. ಬದಲಿಗೆ ಉತ್ಖನನ ಕಾರ್ಯ ಮುಂದುವರೆದಂತೆ ಅದೇ ಜಾಗದಲ್ಲಿ ಸಿಕ್ಕ ಮಡಿಕೆ ಚೂರುಗಳು, ಬೆಳ್ಳಿ ಹಾಗೂ ಕಲ್ಲಿನ ವಸ್ತು ಸಿಗುತ್ತಾ ಹೋದವು. ಇದರ ಸಂಶೋಧನೆ ನಡೆಸಿದಾಗ ಕಂಡದ್ದೇನೆಂದರೆ ಇದು ಕನಕದಾಸರು ವಿಜಯನಗರದ ಅರಸರ ಕಾಲದಲ್ಲಿ ದಂಡನಾಯಕನಾಗಿದ್ದ ಸಂದರ್ಭದಲ್ಲಿ ನಿರ್ಮಿಸಿದ ಅರಮನೆ ಎಂದು.
ಐದಾರು ಶತಮಾನಗಳ ಕಾಲ ಭೂಗರ್ಭದಲ್ಲಿ ಮರೆಯಾಗಿದ್ದ ಈ ಅರಮನೆಯ ಅವಶೇಷಗಳ ಜೊತೆಗೇ ಕನಕರ ಚರಿತ್ರೆ ಪುಷ್ಠಿಗೊಳಿಸುವ ಹೊಸದೊಂದು ಪುರಾವೆ ಬೆಳಕಿಗೆ ಬಂದಿತ್ತು. ಕನಕದಾಸರ ಇತಿಹಾಸಕ್ಕೆ ಹೊಸದೊಂದು ಮೈಲುಗಲ್ಲು ಇದಾಗಿದ್ದು, ಇದನ್ನು ಹಾಗೆಯೇ ಕಾಪಾಡಿಕೊಂಡು ಬರುವ ಪಣತೊಟ್ಟರು ಸಂಶೋಧಕರು.
2007ರಲ್ಲಿ ಸಿಕ್ಕ ಈ ಪುರಾವೆಗಳು ಈಗ ಸಂಶೋಧಕರ ಅಣತಿಯಂತೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂರಕ್ಷಿತ ತಾಣವನ್ನಾಗಿ ಘೋಷಿಸಿದೆ. ಅದರ ಸುತ್ತಲು ತಂತಿಬೇಲಿಯಿಂದ ರಕ್ಷಣೆ ಮಾಡಿದೆ. ಉತ್ಖನನ ಸಂದರ್ಭದಲ್ಲಿ ಅರಮನೆ ಯಾವ ಸ್ಥಿತಿಯಲ್ಲಿ ಸಿಕ್ಕಿತ್ತೊ, ಇಂದಿಗೂ ಅದೇ ಸ್ಥಿತಿಯಲ್ಲಿ ಕಾಣಸಿಗುತ್ತದೆ.
ಅರಮನೆಯ ಪುನರ್ ಸೃಷ್ಟಿ
ಪ್ರಾಧಿಕಾರವು ಕನಕದಾಸರ ಅರಮನೆಯ ಅವಶೇಷಗಳನ್ನು ರಕ್ಷಣೆ ಮಾಡುವುದರ ಜತೆಗೆ, ಡಾ.ಚಿಕ್ಕಣ್ಣ, ಡಾ.ಸುಂದರ ಸೇರಿದಂತೆ ಕೆಲ ಸಂಶೋಧಕರು, ವಿದ್ವಾಂಸರು ಇರುವ ಸಮಿತಿಯ ಸಲಹೆಯ ಮೇರೆಗೆ ಅದೇ ಮಾದರಿಯಲ್ಲಿ ಕನಕದಾಸರ ಬೃಹತ್ ಅರಮನೆಯ ಪುನರ್ ಸೃಷ್ಟಿ (ನಿರ್ಮಾಣ) ಮಾಡಿದೆ. ಮೂಲ ಅರಮನೆಯ ಅವಶೇಷಗಳು ದೊರೆತ ಕೂಗಳೆತೆ ದೂರದಲ್ಲಿದೆ ಒಂದು ಚಿಕ್ಕ ಗುಡ್ಡ.
ಅದರ ಮೇಲಿನ ಸುಮಾರು 200/100 ಚದರ ಮೀಟರ್ ವಿಶಾಲ ಜಾಗದಲ್ಲಿ ಒಟ್ಟು 4.66 ಕೋಟಿ ರೂ. ವೆಚ್ಚದಲ್ಲಿ ವಿಜಯನಗರ ಶೈಲಿಯ ಅರಮನೆ ನಿರ್ಮಿತಗೊಂಡಿದೆ. ಅರಮನೆ ಸುತ್ತಲೂ ಸುಮಾರು ಎರಡು ಸಾವಿರ ಚದರ ಮೀಟರ್ನಲ್ಲಿ ಅರಬಾವಿಯ ಕೆಂಪು ಕಲ್ಲಿನ ಕೋಟೆಗೋಡೆ ನಿರ್ಮಿತಗೊಂಡಿದೆ. ಮುಂಭಾಗದಲ್ಲಿ ಬದಾಮಿ ಬಿಳಿ ಕಲ್ಲಿನ ಆರು ತೆನೆಗಳ ಜೋಡಣೆ.
ಕೋಟೆಯ ಒಳಗಡೆ ಕಲ್ಲಿನಲ್ಲಿ ಸುಂದರ ಕೆತ್ತನೆಯುಳ್ಳ 28 ಕಂಬಗಳ ಬಳಕೆ, ಅದಕ್ಕೊಂದು ವಿಶಾಲವಾದ ಹಜಾರ, ಹಜಾರಕ್ಕೆ ಹೊಂದಿಕೊಂಡ ದರಬಾರ್ ಹಾಲ್, ಇಡೀ ಕೋಟೆ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ. ಅರಮನೆ ಒಳಗಡೆ ಗೋಡೆಯ ಮೇಲೆ ಕನಕದಾಸರ ಆಯ್ದ 25ಕ್ಕೂ ಹೆಚ್ಚು ಕೀರ್ತನೆಗಳನ್ನು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ.
ಅಲ್ಲಲ್ಲಿ ಕನಕದಾಸರ ಜೀವನ ಚರಿತ್ರೆಯ ಚಿತ್ರಗಳನ್ನು (ಪೇಂಟಿಂಗ್ಸ್), ಜೀವನದ ಕೆಲವು ಪ್ರಮುಖ ಪ್ರಸಂಗಗಳನ್ನು ಉಬ್ಬು ಚಿತ್ರಗಳನ್ನು ಚಿತ್ರಿಸಲಾಗಿದೆ ಎನ್ನುತ್ತಾರೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಸವರಾಜಪ್ಪ.
ಸಂದೇಶಗಳ ಸಾಲು
ಇವೆಲ್ಲವುಗಳ ಜತೆಗೆ ಕನಕದಾಸರ ಕೀರ್ತನೆಗಳಲ್ಲಿನ ಶ್ರೇಷ್ಠ ಸಂದೇಶಗಳಾದ `ಮಾನವರೆಲ್ಲ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. ಕುಲ ಕುಲವೆಂದು ಜಿಗಿದಾಡಬಾರದು, ಮಾನವರೆಲ್ಲ ಒಂದು ಕುಲ..., ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ..?, ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು... ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಗಳ ಕೂಡ ಜಗಳವೇ ಲೇಸು..., ಸತ್ಯವಂತರ ಸಂಗವಿರಲು ತೀರ್ಥವೇತಕೆ..?, ಸಿರಿಬಂದ ಕಾಲಕೆ ಮೆರೆಯಬೇಡ... ಎಂಬಿತ್ಯಾದಿ ಮನಸೂರೆಗೊಳ್ಳುವ ಸಾಲು.
ಅರಮನೆ ಮುಂಭಾಗದಲ್ಲಿ ಆಕರ್ಷಕ ಮೆಟ್ಟಿಲು, ಜತೆಗೆ ಬಂದ ಪ್ರವಾಸಿಗರಿಗೆ ವಿಹಾರಕ್ಕಾಗಿ ಸುಂದರವಾದ ಉದ್ಯಾನ ನಿರ್ಮಿಸಲಾಗಿದೆ. ಉತ್ತಮ ರಸ್ತೆ ಸಂಪರ್ಕವೂ ಇದೆ. ವಿಜಯನಗರ ಶೈಲಿಯಲ್ಲಿ ಕಂಗೊಳಿಸುವ ಈ ಅರಮನೆಯನ್ನು ಒಂದು ಸುತ್ತು ಹಾಕಿ ಹೊರ ಬಂದಾಗ 16ನೇ ಶತಮಾನದ ಕನಕದಾಸರನ್ನು 21ನೇ ಶತಮಾನದಲ್ಲಿ ಸಂದರ್ಶಿಸಿ ಬಂದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಅರಮನೆಗೆ ಇನ್ನಷ್ಟು ಮೆರಗು ತರುವ ಉದ್ದೇಶದಿಂದ ಅದರ ಎದುರಿನಲ್ಲಿ ಸುಂದರವಾದ ಕಮಾನು, ವೃತ್ತದಲ್ಲಿ ಕಲ್ಲಿನ ಕನಕ ಮಂಟಪ ನಿರ್ಮಿಸಲಾಗಿದೆ. ಅದರಲ್ಲಿ ಕುಳಿತು ಬರೆಯುವ ಶೈಲಿಯಲ್ಲಿ ಇರುವ ಕನಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಅರಮನೆ ಎದುರು ಪ್ರವಾಸಿಗರ ವಿಶ್ರಾಂತಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಹಸಿರು ಹುಲ್ಲಿನ ಹಾಸು, ಹೊಟೇಲ್, ವ್ಯಾಪಾರಿ ಮಳಿಗೆಗಳು ಹಾಗೂ ಶೌಚಾಲಯ ನಿರ್ಮಿಸುವ ಉದ್ದೇಶವಿದೆ ಎಂದು ಹೇಳುತ್ತಾರೆ ಅರಮನೆ ನಿರ್ಮಾಣದ ಉಸ್ತುವಾರಿ ಎಂಜಿನಿಯರ್ ದೇಶಪಾಂಡೆ.
Comments
Post a Comment