ಇಸ್ರೇಲ್ ಎಂಬ ಅದ್ಭುತ ‘ಮರುಳು’ ಭೂಮಿ!


ನನಗಂತೂ ನಂಬಿಕೆ ಬರಲಿಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಕೇಳಿದ್ದು ನಿಜ. ಆದರೆ ಸ್ವತಃ ಅಲ್ಲಿಗೆ ಹೋಗಿ ನೋಡಿದರೂ ನಂಬಿಕೆ ಬರುತ್ತಿಲ್ಲ. ಜೋರ್ಡಾನ್ ರಾಜಧಾನಿ ಅಮ್ಮಾನ್್ನಿಂದ ಡೆಡ್ ಸೀ (ಮೃತ ಸಮುದ್ರ) ಮಾರ್ಗವಾಗಿ, ರಸ್ತೆ ಮೂಲಕ ಇಸ್ರೇಲ್ ಗಡಿಯನ್ನು ದಾಟುತ್ತಿದ್ದರೆ, ಕಣ್ಣಿನ ಜೀಕು ಹಾಯುವ ತನಕ ಬರೀ ಮರಳುಗಾಡು. ದುರ್ಬೀನು ಹಿಡಿದು ಹುಡುಕಿದರೂ ಒಂದು ಮರವಾಗಲಿ, ಹಸಿರು ಎಂಬ ವಸ್ತುವಾಗಲಿ ಕಾಣ ಸಿಗುವುದಿಲ್ಲ. ಎಲ್ಲೆಡೆ ನಿರುಪಯುಕ್ತ ಮಣ್ಣು. ಹನಿ ನೀರಿನ ಲವಲೇಶವೂ ಇಲ್ಲದ ನಿರ್ದಯಿ ಭೂಮಿ. ಮುಗಿಲು ಮುಟ್ಟುವ ಮರುಭೂಮಿ. ದಾರಿ ಸಾಗಿದ್ದೇ ತಿಳಿಯದ ಆ ಮರುಳುಗಾಡಿನಲ್ಲಿ ಹಸಿರು ಎಂಬ ಪದದ ಅರ್ಥವೂ ಆಗುವುದಿಲ್ಲ. ಊಹಿಸಿಕೊಳ್ಳಲೂ ಆಗುವುದಿಲ್ಲ.
ಎರಡು ಗಂಟೆ ಪ್ರಯಾಣದ ಬಳಿಕ, ಹತ್ತಿರ ಹತ್ತಿರ ಜೆರುಸಲೆಮ್್ಗೆ ಬರುವ ತನಕವೂ ಇದೇ ದೃಶ್ಯ.
ಇಸ್ರೇಲ್್ನ ಸಾಹಸ, ಪರಾಕ್ರಮ, ವೈರಿಗಳನ್ನು ಮಟ್ಟ ಹಾಕುವ ರೀತಿ, ಭಯೋತ್ಪಾದನೆ ವಿರುದ್ಧ ಸೆಣಸುವ ಛಲ, ನಾಲ್ಕೂ ದಿಕ್ಕಿಗೆ ವೈರಿಗಳನ್ನು ಕಟ್ಟಿಕೊಂಡರೂ ಸದಾ ಅವರಿಗೇ ಸಿಂಹಸ್ವಪ್ನವಾಗಿರುವ ಇಸ್ರೇಲ್ ಕಥೆಗಳನ್ನು ಕೇಳಿದ್ದರೂ, ಕೃಷಿ ರಂಗದಲ್ಲೂ ಇದು ಜಗತ್ತಿನಲ್ಲಿಯೇ ಮುಂದುವರಿದ ದೇಶ ಎಂಬುದನ್ನು ಅಲ್ಲಿಗೆ ಹೋದ ಬಳಿಕವೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು ನಾನೂರು- ಐನೂರು ಕಿಮಿ ಓಡಾಡಿದರೂ ಹಸಿರೇ ಕಾಣದ ದೇಶ, ಬುರುಡೆ ಬರಡುಭೂಮಿ ಹೊಂದಿರುವ ದೇಶ, ಕೃಷಿಯಲ್ಲೂ ಅಗಾಧ ಸಾಧನೆ ಮಾಡಿದೆ ಅಂದ್ರೆ ನಂಬಲು ತಲೆ ಕೆಟ್ಟಿದೆಯಾ?
ಮೊದಲ ದಿನ ನಮ್ಮ ವಿದೇಶಾಂಗ ಸಚವ ಎಸ್.ಎಂ.ಕೃಷ್ಣ ಅವರು ಇಸ್ರೇಲ್್ನ ಅಧ್ಯಕ್ಷ ಸಿಮೋನ್ ಪರೆಸ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಆರಂಭದಲ್ಲಿ ಪೀಠಿಕೆ ಹಾಕುತ್ತಾ, ‘ನಿಮ್ಮ ದೇಶ ಕೃಷಿಯಲ್ಲಿ ವಿಶ್ವಕ್ಕೇ ಮಾದರಿ. ನಾನು ಆಗ ಸೋಷಿಯಲಿಸ್ಟ್ ಪಕ್ಷದಲ್ಲಿದ್ದೆ. ಅರವತ್ತರ ದಶಕದಲ್ಲಿ ನಮ್ಮ ನಾಯಕರಾದ ಜಯಪ್ರಕಾಶ್ ನಾರಾಯಣ್ ಮತ್ತು ರಾಮ ಮನೋಹರ್ ಲೋಹಿಯಾ ನನ್ನನ್ನು ಕರೆದು, ಕೃಷಿಯಲ್ಲಿ ಇಸ್ರೇಲ್ ಮಾಡಿರುವ ಸಾಧನೆ ಮೂಗಿನ ಮೇಲೆ ಬೆರಳಿಡುವಂಥದ್ದು. ಅವರ ಸಾಧನೆಯನ್ನು ಅರಿಯದಿದ್ದರೆ ನಮ್ಮ ರೈತರ ಸ್ಥಿತಿ ಅರ್ಥವಾಗುವುದಿಲ್ಲ. ನೀವೊಮ್ಮೆ ಆ ದೇಶಕ್ಕೆ ಹೋಗಿ ಅವರ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿಕೊಂಡು ಬನ್ನಿ ಎಂದು ಹೇಳಿದ್ದರು.’ ಎಂಬುದನ್ನು ಪ್ರಸ್ತಾಪಿಸಿದರು.
‘ನಮ್ಮ ಮದ್ದೂರಿನಲ್ಲಿ ಪಿಕಾಸಿಯಲ್ಲಿ ಎರಡು ಸಲ ಜೋರಾಗಿ ಮೀಟಿದರೆ ನೀರು ಚಿಮ್ಮುತ್ತದೆ. ಅಂಥ ಫಲವತ್ತಾದ ಜಾಗದಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ. ಆದರೂ ನಾವು ಇವರಿಂದ ಪಾಠ ಕಲಿಯಬೇಕಾದ ಪ್ರಸಂಗ ಬಂದಿದೆ. ಇವರ ಸಾಧನೆ ಹೇಗಿರಬಹುದು ನೋಡಿ’ ಎಂದು ಕೃಷ್ಣ ಚಟಾಕಿ ಹಾರಿಸುತ್ತಾ ಹೇಳಿದ್ದು ನಮ್ಮ ಮತ್ತು ಇಸ್ರೇಲಿಗಳ ಕೃಷಿ ಸಾಧನೆಗೆ ಭಾಷ್ಯ ಬರೆದಂತಿತ್ತು.
ಬರೀ ಸಾಹಸ, ಹೊಡೆದಾಟ, ಭಯೋತ್ಪಾದನೆ ವಿಗ್ರಹ, ವಿಧಂಸಕ ಕೃತ್ಯಗಳಿಗಷ್ಟೇ ಸೀಮಿತವಾಗಿದ್ದರೆ, ಇಸ್ರೇಲ್ ಬಗ್ಗೆ ಅಂಥ ಪ್ರೀತಿ ಮೂಡುತ್ತಿರಲಿಲ್ಲ. ಆದರೆ ಈ ಎಲ್ಲ ಸಾಹಸಗಳ ಹಿಂದೆ ಕಾಣುವುದು ಅವರ ದೇಶಪ್ರೇಮ. ದೇಶಕ್ಕಾಗಿ ಎಂಥ ತ್ಯಾಗಕ್ಕಾದರೂ ಮುಂದಾಗುವ ಅವರು ಕಳೆದ ಐವತ್ತು ವರ್ಷಗಳಿಂದ ಭೀಕರವೆನಿಸುವಂಥ ಯುದ್ಧದಲ್ಲಿ ನಿರತರಾಗಿದ್ದಾರೆ. ಆದರೆ ತಾಯ್ನಾಡಿನ ಒಂದು ಅಂಗುಲ ಜಾಗವನ್ನು ಬಿಟ್ಟು ಕೊಟ್ಟಿಲ್ಲ. ಇಸ್ರೇಲ್್ನ ಖ್ಯಾತ ಚಿಂತಕ ತಮೊರ್ ಅರ್ನಿಚ್ ಒಂದೆಡೆ ಹೇಳುತ್ತಾನೆ – ‘ಇಸ್ರೇಲಿಗಳು ಯಾವುದನ್ನಾದರೂ ಅತಿಯಾಗಿ ಪ್ರೀತಿಸುವುದಿದ್ದರೆ ತಮ್ಮ ದೇಶದ ಮಣ್ಣನ್ನು. ಅದಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಅಂತಾನೇ ನಮ್ಮ ಭಾವನೆ.’
ಪ್ರಾಯಶಃ ಇದೇ ಕಾರಣಕ್ಕಿರಬೇಕು, ಇಸ್ರೇಲಿಗಳು ನಿಜವಾದ ಮಣ್ಣಿನ ಮಕ್ಕಳು!
ಪ್ರಪಂಚದಲ್ಲಿಯೇ ಇಂದು ಇಸ್ರೇಲ್ ಕೃಷಿಯಲ್ಲಿ ಅತ್ಯಂತ ಮುಂದುವರಿದ ದೇಶ ಎಂದು ಕರೆಯಿಸಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಕೃಷಿ ಸಂಶೋಧನಾ ಘಟಕಗಳು ಅಲ್ಲಿವೆ. ಜಗತ್ತಿನಲ್ಲಿಯೇ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಯೋಗಾಲಯಗಳು, ವಿಜ್ಞಾನಿಗಳು ಅಲ್ಲಿದ್ದಾರೆ. ಅಮೆರಿಕದಂಥ ಮುಂದುವರಿದ ದೇಶ ಸಹ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಬಗ್ಗೆ ಸದಾ ಇಸ್ರೇಲ್್ನತ್ತ ನೋಡುತ್ತದೆ. ಕೃಷಿ ರಂಗದಲ್ಲಿ ಮಹತ್್ಸಾಧನೆ ಮಾಡಿದ ಬಹುತೇಕ ಎಲ್ಲಾ ದೇಶಗಳೂ ಒಂದಿಲ್ಲೊಂದು ರೀತಿಯಲ್ಲಿ ಇಸ್ರೇಲ್್ನ ಸಹಯೋಗವನ್ನು ಪಡೆದು ಆ ಸಾಧನೆಗೈದಿವೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಕರ್ನಾಟಕವೊಂದರಿಂದಲೇ ಹದಿನೆಂಟು ನಿಯೋಗ ಅಲ್ಲಿಗೆ ಭೇಟಿ ನೀಡಿದೆ. ಭಾರತ ಸರಕಾರ ಪ್ರತಿ ವರ್ಷ ಇಸ್ರೇಲಿಗೆ ಅಲ್ಲಿನ ಕೃಷಿ ಪದ್ಧತಿಯ ಅಧ್ಯಯನಕ್ಕಾಗಿ ಕನಿಷ್ಠ ಹತ್ತು ನಿಯೋಗಗಳನ್ನು, ಕೇಂದ್ರ ಕೃಷಿ ಇಲಾಖೆ ಏನಿಲ್ಲವೆಂದರೂ 50 ಕೃಷಿ ಪರಿಣತರನ್ನು ಕಳಿಸಿಕೊಡುತ್ತದೆ. ಪ್ರತಿ ವರ್ಷ ಭಾರತದ ಹತ್ತಾರು ಸಂಸದರು ಇಸ್ರೇಲ್್ನ ತೋಟಗಳನ್ನು ಸುತ್ತಿ ಬರುತ್ತಾರೆ. ನಮ್ಮ ರೈತ ಸಂಘದ ಎಂ.ಡಿ.ನಂಜುಂಡಸ್ವಾಮಿಯವರೂ ಅಲ್ಲಿಗೆ ಹೋಗಿ ಬಂದಿದ್ದರು. ಪ್ರತಿ ವರ್ಷ ನಮ್ಮ ಕೃಷಿ ವಿಶ್ವವಿದ್ಯಾಲಯಗಳಿಂದ ಹೋಗುವ ಮೇಷ್ಟ್ರಿಗೆ, ವಿದ್ಯಾರ್ಥಿಗಳಿಗೆ ಲೆಕ್ಕವೇ ಇಲ್ಲ.
ಹಾಗಾದರೆ ಇಸ್ರೇಲ್್ನಲ್ಲಿ ಅಂಥದ್ದೇನಿದೆ? ಹಾಗೆ ಕರೆಯಿಸಿಕೊಳ್ಳಲು ಅದಕ್ಕಿರುವ ಯೋಗ್ಯತೆಯಾದರೂ ಏನು? ಕೃಷಿಕ್ಷೇತ್ರದಲ್ಲಿ ಅದು ಮಾಡಿರುವುದಾದರೂ ಏನು?
ಮನುಷ್ಯ ಪ್ರಯತ್ನವೆಂಬುದು ಇಲ್ಲದಿದ್ದರೆ ಇಸ್ರೇಲಿನ ಮಣ್ಣು ಮಣ್ಣೂ ಅಲ್ಲ, ಮಶಿಯೂ ಅಲ್ಲ. ಬೂದಿಗಿಂತಲೂ ಕಡೆ. ಇಸ್ರೇಲಿನ ಶೇ.ಅರವತ್ತರಷ್ಟು ಭೂ ಪ್ರದೇಶ ಮರುಭೂಮಿ. ಅಲ್ಲಿ ಪಾಪಾಸುಕಳ್ಳಿಯೂ ಬೆಳೆಯುವುದಿಲ್ಲ. ಆ ದೇಶದ ಎರಡು ಕಡೆಗಳಲ್ಲಿ ಸಮುದ್ರ. ಅದರಲ್ಲೂ ತುಸು ಭಾಗಕ್ಕೆ ಆತುಕೊಂಡಿರುವ ಡೆಡ್್ಸೀಯಲ್ಲಿ ಯಾವ ಪ್ರಾಣಿಯಾಗಲಿ, ಜಲಚರಗಳಾಗಲಿ ಬದುಕುವುದಿಲ್ಲ. ದೇಶದ ಇಡೀ ದಕ್ಷಿಣದ ಭೂ ಪ್ರದೇಶವೆಲ್ಲ ಬರಡು ಬೆಂಗಾಡು. ಇಸ್ರೇಲಿನ ಹವಾಮಾನವಂತೂ ಕೃಷಿಗೆ ಸ್ವಲ್ಪವೂ ಲಾಯಕ್ಕಿಲ್ಲ. ವರ್ಷದಲ್ಲಿ ಒಂದು ತಿಂಗಳು ಮಳೆ ಸುರಿದರೆ ಅದೇ ಹೆಚ್ಚು. ನೀರಿನ ಪಸೆಯಾಗಲಿ, ನದಿಗಳ ಹಸೆಯಾಗಲಿ ಇಲ್ಲವೇ ಇಲ್ಲ. ಇರುವ ನೀರೂ ಸವಳು, ಉಪ್ಪುಪ್ಪು. ಕೇವಲ ಇಪ್ಪತ್ತರಷ್ಟು ಪ್ರದೇಶದಲ್ಲಿ ಕೃಷಿಗೆ ಯೋಗ್ಯವೆನಿಸುವ ಮಣ್ಣಿದೆ, ನೀರಿದೆ. ಉಳಿದಿದ್ದೆಲ್ಲ ಬುರ್ನಾಸು.
ಹಾಗೆ ನೋಡಿದರೆ ಇಸ್ರೇಲ್ ಮತ್ತು ಕೃಷಿ ವಿರುದ್ಧಾರ್ಥ ಪದಗಳು. ಯಾವ ದಿಕ್ಕಿನಿಂದ ನೋಡಿದರೂ ಅಲ್ಲಿ ಯಾವ ಬೆಳೆಗೂ ಲಾಯಕ್ಕಾದ ವಾತಾವರಣವಿಲ್ಲ. ಆದರೆ ಅಂಥ ಜಮೀನಿನಲ್ಲಿ ಇಡೀ ಜಗತ್ತೇ ಬೆರಗಾಗುವಂತೆ ಅಲ್ಲಿನ ಮಂದಿ ಬೆಳೆ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಗೆ ಬಂದು, ಅವರಿಂದ ಪಾಠ ಹೇಳಿಸಿಕೊಂಡು ಹೋಗುತ್ತಾರೆ. ಇಸ್ರೇಲಿ ಪದ್ಧತಿಯಂತೆ ತಾವೂ ಕೃಷಿ ಮಾಡುತ್ತಿದ್ದೇವೆಂದು ಬೀಗುತ್ತಾರೆ! ಇದಕ್ಕೇನೆನ್ನೋಣ?
ನೂರಾ ಇಪ್ಪತ್ತು ವರ್ಷಗಳ ಹಿಂದೆ, ಇಸ್ರೇಲಿಗೆ ಭೇಟಿ ಕೊಟ್ಟ ಅಮೆರಿಕದ ವಿಜ್ಞಾನಿಗಳ ತಂಡ, ‘ಮುಂದಿನ ಇಪ್ಪತ್ತು ವರ್ಷಗಳಲ್ಲಿ ಇಸ್ರೇಲ್ ಆಹಾರ ಉತ್ಪಾದನೆಯಲ್ಲಿ ತನ್ನದೇ ಆದ ಮಾರ್ಗ ಕಂಡುಕೊಳ್ಳದಿದ್ದರೆ, ಹಸಿವಿನಿಂದ ಕಂಗಾಲಾಗಲಿದೆ. ಸುತ್ತಲಿನ ದೇಶಗಳನ್ನು ಅವಲಂಬಿಸುವುದು ಅನಿವಾರ್ಯವಾದೀತು’ ಎಂದು ಹೇಳಿತ್ತು. ಆಹಾರ ಪದಾರ್ಥಗಳಿಗಾಗಿ ಸುತ್ತಲಿನ ದೇಶಗಳನ್ನು ಅವಲಂಬಿಸುವ ಪ್ರಸಂಗವೇನಾದರೂ ಬಂದಿದ್ದರೆ, ಇಷ್ಟೊತ್ತಿಗೆ ಇಸ್ರೇಲ್್ನ ಕತೆ ಮುಗಿದಿರುತ್ತಿತ್ತು. ಆದರೆ ಇಸ್ರೇಲಿಗಳು ಅಚ್ಚರಿಯೆಂಬಂತೆ ಆ ಬರಡು ನೆಲವನ್ನೇ ನಂದನವನವನ್ನಾಗಿ ಪರಿವರ್ತಿಸಿಕೊಂಡರು. ಕೃಷಿ ಉತ್ಪನ್ನ, ದವಸ, ಧಾನ್ಯ, ಕಾಳು ಕಡಿ, ಹಣ್ಣು ಹಂಪಲು, ಹೈನು, ಮಾಂಸ, ತರಕಾರಿ… ಇವೆಲ್ಲವನ್ನು ತಾವೇ ಬೆಳೆದು, ಪರದೇಶಗಳಿಗೂ ರಫ್ತು ಮಾಡುತ್ತಾರೆ.
ಇಸ್ರೇಲಿನ ಪ್ರತಿ ರೈತ ವೆಬ್್ಸೈಟ್ ಹೊಂದಿದ್ದಾನೆ. ತಾನು ಬೆಳೆದ ಬೆಳೆಗಳನ್ನು ಆನ್್ಲೈನ್್ನಲ್ಲಿ ಒಳ್ಳೆಯ ರೇಟಿಗೆ ಮಾರಾಟ ಮಾಡುತ್ತಾನೆ. ವಿದೇಶಗಳಲ್ಲಿನ ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ. ಅವರು ಇಸ್ರೇಲಿನ ತೋಟಕ್ಕೆ ಬಂದು ಮಾಲನ್ನು ಒಯ್ಯುತ್ತಾರೆ.
ಜಗತ್ತಿನಾದ್ಯಂತ ಕೃಷಿ ಭೂಮಿ ನಿಧಾನವಾಗಿ ಕ್ಷೀಣಿಸುತ್ತಿದ್ದರೆ, ಕೃಷಿಕರು ನಗರದ ಕಡೆ ಮುಖ ಮಾಡುತ್ತಿದ್ದರೆ, ಕೃಷಿಯೆಂದರೆ ಮೂಗು ಮುರಿಯುತ್ತಿದ್ದರೆ ಇಸ್ರೇಲಿನಲ್ಲಿ ಈ ಟ್ರೆಂಡ್ ಸರಿ ಉಲ್ಟಾ. ಇಸ್ರೇಲ್ 1948ರಲ್ಲಿ ಸ್ವತಂತ್ರವಾದಾಗ ನಾಲ್ಕು ಎಕರೆಯಷ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಇಂದು ಸುಮಾರು ಹತ್ತು ಲಕ್ಷ ಎಕರೆ ಪ್ರದೇಶಗಳಿಗೆ ಇದು ವಿಸ್ತರಿಸಿದೆ. ಕಿಲೋ ಮೀಟರ್ ಆಳಕ್ಕೆ ಬೋರ್ ಹೊಡೆದರೂ ಒಂದು ಹನಿ ಸಿಗದ ಬರಡು ಭೂಮಿ ಹಾಗೂ ಕಣ್ಣೀರಿನ ಹೊರತಾಗಿ ಹನಿ ನೀರಿನ ಪಸೆಯೂ ಇಲ್ಲದ ಬೋಳು ಬೋಳು ಗುಡ್ಡ ಸಹ ಇಂದು ಹಣ್ಣು-ಹಂಪಲು, ದವಸ-ಧಾನ್ಯ ಬೆಳೆಯುವ ಹಿತ್ತಲಾಗಿ ಪರಿವರ್ತಿತವಾಗಿದೆ. ಕೃಷಿಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡವರ ಕತೆ ಬಿಡಿ, ಪದವೀಧರರು, ಅನ್ಯ ಕಸುಬಿನಲ್ಲಿ ತೊಡಗಿದವರೂ ಕೃಷಿ ಭೂಮಿಗೆ ಬರುತ್ತಿದ್ದಾರೆ. ಇವೆಲ್ಲವುಗಳ ಪರಿಣಾಮವಾಗಿ ಇಸ್ರೇಲಿನ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ. 2.5ರಷ್ಟು.
ನೀರಿಲ್ಲದೇ ಯಾವ ಕೃಷಿಯೂ ಇಲ್ಲ ತಾನೆ? ಆದರೆ ಉಪ್ಪು, ಸವಳು ನೀರಿನಿಂದ ಯಾವ ಬೆಳೆ ಬೆಳೆಯಲು ಸಾಧ್ಯ? ಇದಕ್ಕೆ ಇಸ್ರೇಲಿಗಳು ಕಂಡು ಕೊಂಡ ಮಾರ್ಗವೆಂದರೆ ನೀರನ್ನು ಸಂಸ್ಕರಿಸುವ ವಿಧಾನ. ಸವಳು ನೀರನ್ನೂ ಸಿಹಿ ನೀರನ್ನಾಗಿ ಪರಿವರ್ತಿಸಿ, ಹಾಗೇ ಪರಿವರ್ತಿಸಿದ ನೀರನ್ನು ಜೀವಜಲದಂತೆ, ಪ್ರಾಣದ್ರವದಂತೆ, ಜೀವ ಬಿಂದುವಿನಂತೆ ಉಪಯೋಗಿಸುತ್ತಿರುವುದು. ಅದಕ್ಕೆ ಅವರು ಮೊರೆ ಹೋಗಿದ್ದು ತಂತ್ರಜ್ಞಾನಕ್ಕೆ. ಒಂದು ಹನಿ ನೀರನ್ನು ಪೋಲು ಮಾಡದೇ ಹನಿ ನೀರಾವರಿ, ತುಂತುರು ನೀರಾವರಿ (Drip & Sprinkle irrigation) ಮೂಲಕ ತಮ್ಮ ಹೊಲಗಳಿಗೆ ಉಣಿಸುತ್ತಾರೆ.
ಇಂದು ನಮ್ಮ ತೋಟ, ಹೊಲಗದ್ದೆ, ಗಾರ್ಡನ್ ಗಳಲ್ಲಿರುವ ಸ್ಪ್ರಿಂಕ್ಲರ್ ಗಳು ಇಸ್ರೇಲಿನ ಯೋಗದಾನವೇ. ಜಗತ್ತಿನ 130 ದೇಶಗಳು ಈ ನೀರಾವರಿ ವಿಧಾನವನ್ನು ಅನುಸರಿಸುತ್ತಿದ್ದು, ಆ ಎಲ್ಲ ದೇಶಗಳಲ್ಲೂ ಇಸ್ರೇಲಿನ ಕಂಪನಿಗಳು ಈ ನೀರಾವರಿ ಉಪಕರಣಗಳನ್ನು ಮಾರಲು ತಮ್ಮ ಅಂಗಡಿಗಳನ್ನು ತೆರೆದಿವೆ. ಮರಹತ್ತಲು, ಭೂಮಿ ಉಳಲು, ಮಣ್ಣು ಅಗೆಯಲು, ಸಿಪ್ಪೆ ಬಿಡಿಸಲು, ಬೀಜ ಬಿತ್ತಲು, ಫಸಲು ಕುಯ್ಯಲು, ರಾಶಿ ಹಾಕಲು… ಎಲ್ಲವುಗಳಿಗೂ ಇಸ್ರೇಲಿಗಳು ಯಂತ್ರಗಳನ್ನು ಕಂಡು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಬೇರೆ ದೇಶಗಳಿಗೂ ಈ ಯಂತ್ರಗಳನ್ನು ಮಾರುತ್ತಿದ್ದಾರೆ.
ನೀರಿನ ನಿರ್ವಹಣೆ ಇಸ್ರೇಲಿಗೆ ಸದಾ ಸವಾಲು. ಒಂದು ಹನಿ ಸಂಜೀವಿನಿಗೆ ಸಮ ಎಂಬುದು ಅವರ ಧ್ಯೇಯ ವಾಕ್ಯ. ಹನಿ ಹಾಗೂ ತುಂತುರು ನೀರಾವರಿ ತಂತ್ರಜ್ಞಾನದ ಬಳಿಕ, ನೀರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ಭೂಮಿಯ ಒಳಗಿನಿಂದಲೇ ನೇರವಾಗಿ ಬೇರಿಗೆ ನೀರನ್ನು ಪೂರೈಸುವ (root watering) ಪದ್ಧತಿಯನ್ನು ಸಹ ಅಭಿವೃದ್ಧಿಪಡಿಸಿದೆ. ಜೆರುಸಲೇಮ್ ನಿಂದ ಟೆಲ್ ಅವಿವ್ ಗೆ ಹೋಗುವಾಗ ರಸ್ತೆಯ ಎರಡೂ ಕಡೆ ಇರುವ ಗುಡ್ಡಗಳಲ್ಲಿ ದೂರದಿಂದ ಕೇರೆ ಹಾವಿನಂತೆ ಉದ್ದುದ್ದ ಪೈಪುಗಳು ಕಾಣುತ್ತವೆ. ಮೈಲೆತ್ತರದ ಗುಡ್ಡದ ಮೇಲೆ ಈ ನೀರು ಪೈಪುಗಳು ಹಾಸಿಕೊಂಡಿವೆ. ನೀರಿನ ನೆರವು ಸಿಗುವ ಭೂಮಿಯಲ್ಲೆಲ್ಲ ಒಂದಿಲ್ಲೊಂದು ಕೃಷಿ ಚಟುವಟಿಕೆ ಸಾಮಾನ್ಯ. ಖ್ಯಾತ ಕೃಷಿ ವಿಜ್ಞಾನಿ, ಕನ್ನಡಿಗ ಡಾ. ಶಾಂತು ಶಾಂತಾರಾಮ್ ಹೇಳುವಂತೆ, ಇಸ್ರೇಲಿಗರು ಬೆಳೆಯದ ಬೆಳೆಯಿಲ್ಲ. ಹತ್ತಿ, ಜೋಳ, ಗೋಧಿಯನ್ನೂ ಬಿಟ್ಟಿಲ್ಲ. ಬೇರೆ ದೇಶಗಳಿಗೆಲ್ಲ ರಫ್ತು ಮಾಡುವಷ್ಟು ಬೆಳೆಯುತ್ತಾರೆ. ಹಣ್ಣುಗಳಲ್ಲಿ ಯಾವ ಹಣ್ಣು ಬೇಕು ಹೇಳಿ. ಇಂಥ ಹಣ್ಣು ಬೆಳೆಯೊಲ್ಲ ಅಂತಿಲ್ಲ. ಶೀತ ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಹಣ್ಣುಗಳನ್ನೂ ಬೆಳೆಯುತ್ತಾರೆ. ಇದಕ್ಕಾಗಿ ಎಲ್ಲೆಡೆ ಗ್ರೀನ್ ಹೌಸ್್ಗಳನ್ನು ನಿರ್ಮಿಸಿದ್ದಾರೆ. ಬೇಕಾದ ಉಷ್ಣಾಂಶ, ವಾತಾವರಣವನ್ನು ಅದರೊಳಗೆ ನಿರ್ಮಿಸಿಕೊಂಡು ಬೇಕಾದ ಬೆಳೆಯನ್ನು ಬೆಳೆಯುತ್ತಾರೆ. ನಾಲ್ಕೈದು ಕಿ.ಮಿ. ಉದ್ದದ ಗ್ರೀನ್ ಹೌಸ್್ಗಳ ಒಳಗಡೆ ತರಕಾರಿ ತೋಟ, ಹೈಬ್ರಿಡ್ ಗೋಧಿಯನ್ನು ಸಹ ಬೆಳೆಯುತ್ತಾರೆ. ಇಸ್ರೇಲಿನ ಬೀದಿಗಳಲ್ಲಿ ಹೋಗುವಾಗ ಪ್ರತಿ ಮನೆಯ ಮುಂದೆ ನಿಂಬೆ ಹಾಗೂ ಕಿತ್ತಲೆ ಹಣ್ಣುಗಳ ಮರಗಳನ್ನು ನೋಡಬಹುದು.
ಯಾವ ದೇಶ ಕೃಷಿ ಪ್ರಧಾನವಾಗಿರುತ್ತದೋ, ಅದು ಹೈನುಗಾರಿಕೆಗೂ ಅಷ್ಟೇ ಪ್ರಾಧಾನ್ಯ ನೀಡಬೇಕು. ಆಗಲೇ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ. ಅಲ್ಲದೇ ಅದರ ನಿಜವಾದ ಅಸಲಿಯತ್ತು ಇರುವುದೂ ಅಲ್ಲಿಯೇ. ವಿಶ್ವದಲ್ಲಿಯೇ ಇಸ್ರೇಲಿನ ಜಾನುವಾರುಗಳು ಅಧಿಕ ಪ್ರಮಾಣದಲ್ಲಿ ಹಾಲನ್ನು ನೀಡುತ್ತವೆ. ಕುರಿಯ ಹಾಲನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಇಸ್ರೇಲ್ ಕೂಡ ಒಂದು. ಕುರಿ, ಕೋಳಿ, ದನದ ಮಾಂಸಗಳ ರಫ್ತಿಗೂ ಅದು ಹೆಸರುವಾಸಿ.
ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಇಸ್ರೇಲ್ ಪುಷ್ಪೋದ್ಯಮದಲ್ಲಿ ಮಾಡಿದ ಸಾಧನೆ ಅಸಾಮಾನ್ಯ. ಲಿಲ್ಲಿ, ಟುಲಿಪ್, ಆರ್ಕಿಡ್್ನಂಥ ಹೂವುಗಳು ಯುರೋಪಿನ ದೇಶಗಳಿಗೆ ಹೇರಳ ಪ್ರಮಾಣದಲ್ಲಿ ರಫ್ತಾಗುತ್ತದೆ.
ಭಾರತ ಸಹ ಕೃಷಿ ಪ್ರಧಾನ ದೇಶ. ಆದರೆ ಕೃಷಿ ನಮಗಿನ್ನೂ ಲಾಭದಾಯಕವಾಗಿ ಪರಿಣಮಿಸಿಲ್ಲ. ಮಳೆ ಕೈ ಕೊಟ್ಟರೆ, ರೋಗ ಬಡಿದರೆ, ಫಸಲು ಬರದಿದ್ದರೆ, ಫಸಲು ದಂಡಿಯಾಗಿ ಬಂದು ಒಳ್ಳೆಯ ರೇಟು ಸಿಗದಿದ್ದರೆ… ರೈತನ ಗೋಳು ಒಂದೆರಡಲ್ಲ. ರೈತರ ಆತ್ಮಹತ್ಯೆ ಈಗ ಸಾಮಾನ್ಯ. ಬೆಳೆದ ಬೆಳೆಗೆ ರೇಟು ಸಿಗದಿದ್ದಾಗ ಬೀದಿಯಲ್ಲಿ ಚೆಲ್ಲಿ ಪ್ರತಿಭಟಿಸುವುದಾದರೆ ನಮಗೇನೂ ಅನಿಸದಷ್ಟು ನಮ್ಮ ಚರ್ಮ ದಪ್ಪವಾಗಿದೆ. ನಮ್ಮ ರೈತರಿಗೆ ಕೃಷಿ ಅನಿವಾರ್ಯವೇ ಹೊರತು ಅದು ಆದ್ಯತೆಯಾಗಿಲ್ಲ.
ಈಗ ಹೇಳಿ, ಆ ಇಸ್ರೇಲ್ ನ್ನು ಮರುಭೂಮಿ ಅಂದವರಾರು?

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website