ಪಶ್ಚಿಮ ಘಟ್ಟಗಳೇ ದೇಶದ ದಕ್ಷಿಣ ಭಾಗಕ್ಕೆ ಪ್ರಮುಖ ನೀರಿನ ಮೂಲ. ಅದನ್ನು ದಕ್ಷಿಣದ ಹಿಮಾಲಯ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ಹಿಮಾಲಯವಿಲ್ಲದಿದ್ದರೆ, ಗಂಗೆ ಇರುವುದಿಲ್ಲ. ಗಂಗೆ ಇಲ್ಲದಿದ್ದರೆ ಹರಿದ್ವಾರದಿಂದ ಹಿಡಿದು ಕೋಲ್ಕತ್ತಾದವರೆಗೆ ಮಾನವ ವಸತಿಯೇ ಇರುತ್ತಿರಲಿಲ್ಲ. ಅದೇ ರೀತಿ ಪಶ್ಚಿಮ ಘಟ್ಟಗಳಿಲ್ಲದಿದ್ದರೆ ದಕ್ಷಿಣದ ಮಹಾನ್ ನದಿಗಳು ಅಥವಾ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳ ಕರಾವಳಿ ಪ್ರದೇಶಗಳನ್ನು ಉಳಿಸುವ ಮಳೆಯೇ ಇರುತ್ತಿರಲಿಲ್ಲ.
ಇಂತಹ ಜೀವೋತ್ಪಾದಕ ನೈಸರ್ಗಿಕ ಸಂಪತ್ತಿನ ಬೇಜವಾಬ್ದಾರಿಯುತ ನಿರ್ವಹಣೆ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತ್ತು. ಬರಗಾಲ ಮತ್ತು ರೈತರ ಆತ್ಮಹತ್ಯೆ ಹೆಚ್ಚಿದಂತೆಲ್ಲ ಎಲ್ಲರ ದೃಷ್ಟಿಗೆ ನೀರಾವರಿ ಸಚಿವ ಅಜಿತ್ ಪವಾರ್ ಅವರ ಕಪಟತನವೆಲ್ಲ ಸ್ಪಷ್ಟವಾಗಿ ಕಾಣಿಸತೊಡಗಿತು. ಈ ದುರಂತವನ್ನು ಅತ್ಯಂತ ಚಾಣಾಕ್ಷತನದಿಂದ ಮರೆಮಾಚಿ ಕಡೆಗೆ ಸಚಿವರಿಗೆ 'ಕ್ಲೀನ್ ಚಿಟ್' ಕೂಡ ಕೊಡಲಾಯಿತು. ಇಷ್ಟೆಲ್ಲ ಆದರೂ ಕೂಡ ಪವಾರ್ಗೆ ಯಾವ ಪಶ್ಚಾತ್ತಾಪವೂ ಇಲ್ಲದಿರುವುದರಿಂದ ಮತ್ತು ಯಾವ ಸುಧಾರಣೆಗಳನ್ನೂ ಅವರು ಅಳವಡಿಸಿಕೊಳ್ಳದೇ ಇರುವುದರಿಂದ ಈ ದುರಂತ ಇನ್ನೂ ದೈತ್ಯ ರೂಪ ತಾಳುತ್ತಲೇ ಇದೆ.
ಕೇರಳದಿಂದ ಬರುತ್ತಿರುವ ಎಚ್ಚರಿಕೆಯ ಸಂಕೇತಗಳಂತೂ ಇನ್ನಷ್ಟು ಕೆಟ್ಟದಾಗಿವೆ. ಕಳೆದ ಡಿಸೆಂಬರ್ನಲ್ಲಿ, ಕೇರಳದ ಇತಿಹಾಸದಲ್ಲೇ ಮೊದಲ ಬಾರಿಗೆ ಇಡೀ ರಾಜ್ಯವನ್ನು ಬರ ಪೀಡಿತ ಎಂದು ಘೋಷಿಸಲಾಯಿತು. ಹಿಂದೆಯೂ ಕೂಡ ಆ ರಾಜ್ಯದಲ್ಲಿ ಬರ ಎದುರಾಗಿತ್ತಾದರೂ, ಅದು ಕೂಡ ದಶಕಕ್ಕೊಂದು ಬಾರಿಯಂತೆ ಕೇವಲ ಒಂದೆರಡು ಜಿಲ್ಲೆಗಳಿಗಷ್ಟೇ ಸೀಮಿತವಾಗಿತ್ತು. ಪ್ರಾಯಶಃ ಈ ಎಚ್ಚರಿಕೆಯ ಸಂಕೇತಗಳು ಸರಿಯಾದ ವಲಯಕ್ಕೇ ಅರಿವಾಯಿತೇನೋ? ಅದಕ್ಕಾಗಿಯೇ ಕೇಂದ್ರ ಸರ್ಕಾರ, ಪಶ್ಚಿಮ ಘಟ್ಟಗಳನ್ನು ಸಂರಕ್ಷಣಾ ಕೋನದಿಂದ ಪರಿಶೀಲಿಸಲು ಮಾಧವ್ ಗಾಡ್ಗೀಳ್ ನೇತೃತ್ವದ ತಂಡವನ್ನು ನಿಯೋಜಿಸಿತು.
ಭಾರತದ ಅತ್ಯಂತ ವಿಶ್ವಾಸಾರ್ಹ ಪರ್ಯಾವರ್ಣೀಯ ವಿಜ್ಞಾನಿಗಳಾದ ಗಾಡ್ಗೀಳ್ ಅವರು, ಆ ಭಾಗದಲ್ಲಿ ಡ್ಯಾಂ ನಿರ್ಮಾಣದಂತಹ ಅತಿದೊಡ್ಡ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು ಎನ್ನುವುದರ ಜೊತೆಗೆ ಹಲವಾರು ರಕ್ಷಣಾ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರ ಮಾತನ್ನು ಕೇಳುತ್ತಿದ್ದಂತೆಯೇ ಪಟ್ಟಭದ್ರ ಹಿತಾಸಕ್ತಿಗಳೆಲ್ಲ ಬಂಡಾಯವೆದ್ದುಬಿಟ್ಟವು. ಕೂಡಲೇ ಕೇಂದ್ರ ಸರ್ಕಾರ ಇಸ್ರೋದ ಮಾಜಿ ಮುಖ್ಯಸ್ಥ ಕಸ್ತೂರಿರಂಗನ್ ನೇತೃತ್ವದಲ್ಲಿ ಹೊಸ ಸಮಿತಿಯೊಂದನ್ನು ರಚಿಸಿತು. ನಂತರ ಕಸ್ತೂರಿ ರಂಗನ್ ಸರ್ಕಾರಕ್ಕೆ ಬೇಕಾದಂತಹ ವರದಿಯನ್ನೇ ಸಿದ್ಧಪಡಿಸಿದರು! ಗಾಡ್ಗೀಳ್ ಅವರ ಬಹುತೇಕ ಶಿಫಾರಸುಗಳನ್ನು ತಿರಸ್ಕರಿಸುವುದೇ ಆ ವರದಿಯ ಉದ್ದೇಶವಾಗಿತ್ತು. ಈಗಂತೂ ಕಾಡಿನ ನಾಶ ಇನ್ನಷ್ಟು ಹೆಚ್ಚಾಗಲಿದೆ, ನದಿಗಳು ಮರಳು ಮಾಫಿಯಾದ ದಾಳಿಯಿಂದ, ಹೊಲಗಳು ರಿಯಲ್ ಎಸ್ಟೇಟ್ ಮಾಫಿಯಾಗಳಿಂದ ನಲುಗಿಹೋಗಲಿವೆ. ಅದಾಗಲೇ ಕಡಲ ಕಿನಾರೆಯನ್ನೆಲ್ಲ ಅರಬ್ಬಿ ಸಮುದ್ರದ ಉಗ್ರ ಅಲೆಗಳು ಕಬಳಿಸುತ್ತಾ ಹೊರಟಿವೆ.
ಇನ್ನು ಅಂಡಮಾನ್ನ ಪಾಡಂತೂ ಹೇಳುವುದೇ ಬೇಡ. ಪ್ರಧಾನ ಭೂಭಾಗದಿಂದ ದೂರವಿರುವ ಆ ಪ್ರದೇಶಕ್ಕೆ ನಮ್ಮ ಟೆಲಿವಿಷನ್ ವರದಿಗಾರರಿಂದಲೂ ಅಷ್ಟು ಸುಲಭವಾಗಿ ತಲುಪುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಿಂದಾಗಿಯೇ ನಮ್ಮ ರಾಜಕಾರಣಿಗಳು ಅಂಡಮಾನ್ನನ್ನು ನಿರ್ಭಯವಾಗಿ ಅವಸಾನಕ್ಕೆ ದೂಡುತ್ತಿದ್ದಾರೆ. ಪ್ಲೈವುಡ್ ಮಿಲ್ಗಳ ಹೊಟ್ಟೆ ತುಂಬಿಸಲು ಇಡೀ ಕಾಡನ್ನು ಕತ್ತರಿಸಲಾಗುತ್ತಿದೆ. ತಾಮ್ರ ಮತ್ತು ಕ್ರೋಮೈಟ್ ನಿಕ್ಷೇಪದ ಸಲುವಾಗಿ ದಿನವೂ ಅಲ್ಲೆಲ್ಲ ಗುಂಡಿಗಳನ್ನು ತೋಡಲಾಗುತ್ತಿದೆ. ಇದರಿಂದಾಗಿ ಇಡೀ ಪ್ರದೇಶವೆಲ್ಲ ಅಗ್ನಿ ಪರ್ವತದ ಮುಖದಂತೆ ವಿಕಾರವಾಗಿ ಬದಲಾಗಿದೆ.
ದೆಹಲಿಯ ಧಣಿಗಳು ಕಲ್ಲಿದ್ದಲು ಘಟಕಗಳ ಹಂಚಿಕೆ ನಡೆಸಿದ್ದು ದೊಡ್ಡ ಹಗರಣವಾಗಿದ್ದಕ್ಕೆ ಕಾರಣ, ಮಾಧ್ಯಮಗಳು ಆ ವಿಷಯದ ಹಿಂದೆ ನಿರಂತರವಾಗಿ ಬೆನ್ನುಹತ್ತಿದ್ದು. ಆದರೆ ಅಂಡಮಾನ್ನಲ್ಲಿ ನಡೆದ ಹಳವಂಡ ಇದಕ್ಕಿಂತಲೂ ತೀವ್ರ ಸ್ಪರೂಪದ್ದಾಗಿದ್ದರೂ ಸ್ಥಳೀಯರನ್ನು ಬಿಟ್ಟು ಬೇರೆ ಯಾರ ಗಮನವೂ ಅತ್ತ ಹರಿಯಲಿಲ್ಲ. ಕಳೆದ ಡಿಸೆಂಬರ್ನಲ್ಲಿ ಸುಮಾರು 38 ಕಲ್ಲುಗಣಿಗಳನ್ನು ಅಂಡಮಾನ್ನಲ್ಲಿ ಹರಾಜು ಹಾಕಲಾಯಿತು. ಈ 'ಹರಾಜು' ಪ್ರಕ್ರಿಯೆ ಅಲ್ಲಿ ಗುಪ್ತವಾಗಿ ನಡೆಯಿತು. ಅಂದರೆ ಖಾಸಗಿ ಜೇಬುಗಳನ್ನು ತುಂಬಿಕೊಂಡ ಹಣವೆಷ್ಟಿರಬಹುದೆಂದು ಒಮ್ಮೆ ಊಹಿಸಿನೋಡಿ! ಇನ್ನು ಕಲ್ಲುಗಣಿ ಲಾಬಿಗೆ ಅಲ್ಲಿನ ಅಧಿಕಾರವರ್ಗ ಕೊಟ್ಟಿರುವ ರಿಯಾಯತಿ ಮತ್ತು ಸೌಲಭ್ಯಗಳನ್ನೆಲ್ಲ ಪರಿಗಣನೆಗೆ ತೆಗೆದುಕೊಂಡರೆ ಹಣದ ಪ್ರಮಾಣ ನಮ್ಮ ಊಹೆಗೂ ನಿಲುಕದಷ್ಟು ಎತ್ತರಕ್ಕೆ ಏರುತ್ತದೆ. ಒಟ್ಟಿನಲ್ಲಿ ಅಂಡಮಾನ್, ಗೋವಾ ಮತ್ತು ಬಳ್ಳಾರಿಯ ಹಾದಿ ಹಿಡಿಯಲಿದೆ. ಅಂದರೆ ಬರಿ ಧೂಳು ತುಂಬಿಕೊಂಡು, ತಗ್ಗು ಬಿದ್ದ ನೆಲವಾಗಲಿದೆ!
ಸಮುದ್ರ ಎಲ್ಲವನ್ನೂ ನೋಡುತ್ತಿದೆ. ಒಂದು ಕಾಲದಲ್ಲಿ ತಿಳಿ ನೀಲಿ ಬಣ್ಣದಿಂದ ಪುಳಕಿತಗೊಳಿಸುತ್ತಿದ್ದ ಅಲ್ಲಿನ ಬೀಚುಗಳ ಒಡಲೆಲ್ಲ ಈಗ ವಿಷಮಯ. ನೀರಿಗಿಳಿದರೆ ಸಾಕು ಕಣ್ಣು ಉರಿ, ತುರಿಕೆ ಶುರುವಾಗುತ್ತದೆ ಎಂಬ ಕಾರಣಕ್ಕೆ ಪ್ರಖ್ಯಾತ ತೀರಗಳಲ್ಲೂ ಈಗ ಪ್ರವಾಸಿಗರು ಈಜಲು ಹಿಂಜರಿಯುತ್ತಿದ್ದಾರೆ. ಪೋರ್ಟ್ ಬ್ಲೇರ್ನಿಂದ ಹೊತ್ತು ತರುವ ಕಸವನ್ನೆಲ್ಲ ತೀರದಲ್ಲೇ ಎಸೆಯಲಾಗುತ್ತಿದೆ. ಇದರಿಂದಾಗಿ ವಿಷಪೂರಿತ ಅನಿಲ, ವಾತಾವರಣದಲ್ಲಿ ಒಂದಾಗುತ್ತಿದೆ. ಅದರೊಂದಿಗೆ ಸಮ್ಮಿಲಿತವಾಗುವ ಘನ ತ್ಯಾಜ್ಯವೂ ಕೂಡಲೇ ವಿಷಕಾರಿಯಾಗಿ ಬದಲಾಗುತ್ತಿದೆ. ಇನ್ನು ಕಿನಾರೆಗೆ ಅತಿ ಹತ್ತಿರವಿರುವ ಪ್ರದೇಶಗಳಲ್ಲೇ ಕಾಪರ್ ಮತ್ತು ಕ್ರೋಮೈಟ್ಗಾಗಿ ಶೋಧ ನಡೆಯುತ್ತಿದೆ. ಇತ್ತೀಚೆಗೆ 38 ಕಲ್ಲುಗಣಿಗಳಿಗೆ ನೀಡಿದ 'ಗ್ರೀನ್ಸಿಗ್ನಲ್'ನಿಂದಾಗಿ ಈ ಕೆಲಸ ಇನ್ನಷ್ಟು ಹೆಚ್ಚಾಯಿತೆಂದರೆ ಮುಂದಿನ ದಿನಗಳಲ್ಲಿ ಬೃಹತ್ ಗಾತ್ರದ ಅಲೆಗಳು ಬಂದು ಕ್ಷಣಾರ್ಧದಲ್ಲಿ ಇಡೀ ನೆಲವನ್ನೆಲ್ಲ ತಮ್ಮ ಒಡಲೊಳಗೆ ಸೇರಿಸಿಕೊಂಡುಬಿಟ್ಟರೆ ಆಶ್ಚರ್ಯಪಡಬೇಕಿಲ್ಲ.
ನಿಜಕ್ಕೂ ಗೊಂದಲ ಮೂಡಿಸುತ್ತಿರುವುದು ನಮ್ಮ ರಾಜಕಾರಣಿಗಳ ಧೋರಣೆ. ಹಾಗೆ ನೋಡಿದರೆ ಅವರು ಮುಂದಿನ ಹತ್ತು ತಲೆಮಾರುಗಳಿಗೆ ಸಾಕಾಗುವಷ್ಟು ಹಣ ಮಾಡಿಕೊಂಡಿರುತ್ತಾರೆ. ಆದರೂ ಕೂಡ ಆ ನೆಲವನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ತಲೆಮಾರಿನವರಿಗೆ ಆ ಪ್ರದೇಶದ ಸೊಬಗನ್ನು ಸವಿಯಲು ಅವರೇಕೆ ಅವಕಾಶ ಮಾಡಿಕೊಡುವುದಿಲ್ಲವೋ? ರಾಷ್ಟ್ರವೇ ಕಾಣೆಯಾಗಿ ಹೋದಾಗ ಹಣದಿಂದ ಏನು ಪ್ರಯೋಜನ?
ನಿಜಕ್ಕೂ ರಾಜಕಾರಣಿಗಳು ಒಗಟಿನಲ್ಲಿರುವ ನಿಗೂಢ ಸಮಸ್ಯೆಯಂತೆಯೇ ಇದ್ದಾರೆ!
ಕೃಪೆ: ಕನ್ನಡಪ್ರಭ
Comments
Post a Comment