ರೂಪಾಯಿ ಅಪಮೌಲ್ಯ - ಖರೀದಿ ತುಟ್ಟಿ
ಎಲ್ಲದಕ್ಕೂ ದುಬಾರಿ ಬೆಲೆ ನೀಡಿ ಬಸವಳಿದು ಹೋಗಿರುವ ಭಾರತೀಯ ಗ್ರಾಹಕನಿಗೆ ಇದೀಗ ಸತತವಾಗಿ `ರೂಪಾಯಿ ಅಪಮೌಲ್ಯ'ಗೊಳ್ಳುತ್ತಿರುವ ಕಹಿ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಿರಂತರ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಕಾಣದ ಸರಕು ಬಹುಶಃ ದೇಶದ ಮಾರುಕಟ್ಟೆಯಲ್ಲಿ ಯಾವುದೂ ಇರಲಿಕ್ಕಿಲ್ಲ. ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ದಾಖಲೆ ಪ್ರಮಾಣದಲ್ಲಿ ಸೊರಗಿದ್ದಕ್ಕೆ ಕಾರಣ ಏನು? ಇದರ ಪರಿಣಾಮ ಯಾರ ಯಾರ ಮೇಲೆ ಹೇಗೆ? ಪರಿಹಾರವೇನು? ಈ ಕುರಿತಾದ ಸಮೀಕ್ಷೆಗಳು ಏನು ಹೇಳುತ್ತವೆ. ಈ ಕುರಿತು ಒಂದು ಅವಲೋಕನ ಇಲ್ಲಿದೆ...
ಏಪ್ರಿಲ್-ಮೇ ತಿಂಗಳಲ್ಲಿ ಭಾರತೀಯರು ಒಂದು ಅಮೆರಿಕನ್ ಡಾಲರ್ಗೆ ರೂ50ರ ಆಸುಪಾಸಿನಲ್ಲಿ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಆದರೆ, ಜೂನ್ 21ರಂದು 1 ಡಾಲರ್ಗೆ ರೂ60 (59.57) ನೀಡಲೇಬೇಕಾದ ದುಃಸ್ಥಿತಿ ಬಂದ ನಂತರವಂತೂ ಎಲ್ಲ ವರ್ಗದ ಜನರ ಅದರಲ್ಲೂ ಮಧ್ಯಮ ವರ್ಗದವರ, ಬಡವರ ಸಂಕಷ್ಟ ಇಮ್ಮಡಿಯಾಯಿತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವದರಿಂದ ಪೆಟ್ರೋಲಿಯಂ ಉತ್ಪನ್ನಗಳು, ಖಾದ್ಯತೈಲ, ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಳವಾಗುತ್ತದೆ. ಇನ್ನೊಂದೆಡೆ ಬಿಡಿಭಾಗಗಳ ಆಮದು ಅವಲಂಬಿಸಿರುವ ಎಲೆಕ್ಟ್ರಾನಿಕ್ ಮತ್ತಿತರ ಐಷಾರಾಮಿ ವಸ್ತುಗಳೂ ಬಹಳ ದುಬಾರಿಯಾಗಿ ಮಧ್ಯಮ ಪ್ರಮಾಣದ ಆದಾಯವಿರುವ ಗ್ರಾಹಕರ ಖರೀದಿ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಕುಸಿತ ಕಾರಣ
ದೇಶದ ರಫ್ತು ಕಡಿಮೆಯಾಗಿ ಆಮದು ಹೆಚ್ಚಾಗಿರುವುದೇ ರೂಪಾಯಿ ಅಪಮೌಲ್ಯಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದ್ದರೂ, ಆರ್ಥಿಕ, ರಾಜಕೀಯ ಅಸ್ಥಿರತೆಯೂ ಇಂತಹ ಸ್ಥಿತಿಗೆ ಪರೋಕ್ಷ ಕಾರಣ. ಆಮದು ಹೆಚ್ಚಾದಂತೆ ವಿದೇಶಿ ಕಂಪೆನಿಗಳಿಗೆ ಪಾವತಿಸಲು (ವಿನಿಮಯ) ಡಾಲರ್ ಬೇಡಿಕೆ ಹೆಚ್ಚುತ್ತಿದೆ. ಆಗ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಪರಿಣಾಮ ಡಾಲರ್ ಮೌಲ್ಯ ಹೆಚ್ಚುತ್ತಾ ಹೋದರೆ, ಇನ್ನೊಂದೆಡೆ ರೂಪಾಯಿ ಬೆಲೆ ಕಡಿಮೆ ಆಗುತ್ತಾ ಇರುತ್ತದೆ.
ಕಚ್ಚಾತೈಲ ಬಿಟ್ಟರೆ ದೇಶಕ್ಕೆ ಅತಿ ಹೆಚ್ಚು ಆಮದು ಆಗುತ್ತಿರುವ ಸರಕು ಎಂದರೆ ಚಿನ್ನ. ಇತ್ತೀಚಿನ ದಿನಗಳಲ್ಲಿ ಚಿನ್ನ ಆಮದು ಹೆಚ್ಚುತ್ತಲೇ ಇದೆ. ಪರಿಣಾಮ ವಿದೇಶಿ ವಿನಿಮಯಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ರೂಪಾಯಿ ಅಪಮೌಲ್ಯಕ್ಕೆ ಇದೂ ಸಹ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಚಿನ್ನದ ಆಮದು ಪ್ರಮಾಣ ತಗ್ಗಿಸುವ ಮೂಲಕ `ರಫ್ತು-ಆಮದು ನಡುವಿನ ಕೊರತೆ ಅಂತರ'(ಸಿಎಡಿ) ತಗ್ಗಿಸುವ ಮೂಲಕವೂ ರೂಪಾಯಿ ಮೌಲ್ಯ ಕುಸಿತವನ್ನು ಸ್ವಲ್ಪಮಟ್ಟಿಗೆ ತಡೆಯಬಹುದು ಎನ್ನುವುದು ತಜ್ಞರ ಅಭಿಮತ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರೂ `ದೇಶದ ಜನರು ಚಿನ್ನ ಖರೀದಿ ಕಡಿಮೆ ಮಾಡಬೇಕು' ಎಂದು ಮನವಿ ಮಾಡಿದ್ದರು.
ಖರೀದಿ ದುಬಾರಿ
ರೂಪಾಯಿ ಅಪಮೌಲ್ಯದ ಪರಿಣಾಮ ಆಮದು ಚಟುವಟಿಕೆಯನ್ನು ಇನ್ನಷ್ಟು ದುಬಾರಿಗೊಳಿಸಲಿದೆ. ದೇಶದ ಪರಿಕರ ತಯಾರಿಕೆ ಉದ್ಯಮ ವಲಯ ಯಂತ್ರೋಪಕರಣ, ಎಲೆಕ್ಟ್ರಾನಿಕ್ ಪರಿಕರ ಮತು ಬಿಡಿಭಾಗಗಳ ಆಮದು ಮೇಲೆಯೇ ಬಹಳವಾಗಿ ಅವಲಂಬಿಸಿದೆ. ಡಾಲರ್ ಮೌಲ್ಯ ಹೆಚ್ಚುತ್ತಲೇ ಇರುವುದು ಆಮದುದಾರರಿಗೆ, ಉದ್ಯಮಕ್ಕೆ ಹೆಚ್ಚಿನ ಹೊರೆಯಾಗಲಿದೆ. ಪರಿಣಾಮ ಕಂಪೆನಿಗಳು ತಾವು ತಯಾರಿಸಿದ ವಸ್ತುಗಳ ಬೆಲೆಯನ್ನೂ ಅಷ್ಟೇ ಪ್ರಮಾಣದಲ್ಲಿ ಏರಿಸುತ್ತವೆ. ಈಗಾಗಲೇ `ಎಲ್ಜಿ' ಕಂಪೆನಿ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯನ್ನು ಶೇ 5ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ. ಇತರೆ ಕಂಪೆನಿಗಳು ಮುಂದಿನ ದಿನಗಳಲ್ಲಿ ಇದೇ ಕ್ರಮ ಅನುಸರಿಸುವುದು ನಿಶ್ಚಿತ.
ಇದರಿಂದ ಎದುರಾಗುವ ಕಷ್ಟ ಅನುಭವಿಸಬೇಕಾದವರು ಮಧ್ಯಮ ವರ್ಗದವರೇ ಎನ್ನುವುದರಲ್ಲಿ ಅನುಮಾನವಿಲ್ಲ. ಅಷ್ಟೊ ಇಷ್ಟು ಹಣ ಉಳಿಸಿ ಟಿ.ವಿ, ಫ್ರಿಜ್, ಕಾರು ಖರೀದಿಸಲು ಯೋಜನೆ ಹಾಕಿಕೊಂಡಿದ್ದವರು ಈಗ `ದುಬಾರಿ ಖರೀದಿ'ಯ ಪೆಟ್ಟು ತಿನ್ನಬೇಕಾಗಿದೆ.
ವಾರಾಂತ್ಯದ ಇಕ್ಕಟ್ಟು
ರೂಪಾಯಿ ಮೌಲ್ಯ ನಷ್ಟದ ಪರಿಣಾಮಗಳು ಆಹಾರ ಧಾನ್ಯ, ತರಕಾರಿ, ಬಸ್ ಪ್ರಯಾಣ, ಪ್ರವಾಸ, ಹೋಟೆಲ್ ತಿನಿಸು ಎಲ್ಲದರ ಮೇಲೂ ಆಗಿದೆ(ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ-ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಿದೆ ಎಂಬುದು ಗಮನಾರ್ಹ).
ವಾರಾಂತ್ಯದ ರಜೆ ವೇಳೆ ಅಪರೂಪಕ್ಕಾದರೂ ಹೋಟೆಲ್ ಊಟದ ರುಚಿ ಸವಿಯಬೇಕು ಎಂಬ ರೂಢಿ ಇಟ್ಟುಕೊಂಡಿದ್ದವರಿಗೆ ಈಗ ಅದು ದುಬಾರಿ ಅಭಿರುಚಿ ಎನಿಸುವಂತಾಗಿದೆ!
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಮಕ್ಕಳನ್ನು ಕಳುಹಿಸುವ ಪಾಲಕರ ಮಹತ್ವಾಂಕ್ಷೆಯೂ ಈಗ ಹೆಚ್ಚು ಹೊರೆ ಎನಿಸುತ್ತಿದೆ. ಈಗಾಗಲೇ ವಿದೇಶದಲ್ಲಿರುವ ಮಕ್ಕಳಿಗೆ ಕಾಲೇಜು ಶುಲ್ಕ, ನಿತ್ಯದ ಜೀವನ ನಿರ್ವಹಣೆ ಖರ್ಚಿಗೆ ಹೆಚ್ಚಿನ ಹಣ ವೆಚ್ಚ ಮಾಡಬೇಕಾಗಿ ಬಂದಿದೆ. ಅಂದರೆ 1 ಡಾಲರ್ಗೆ 50 ರೂಪಾಯಿ ಸಮವಾಗಿದ್ದಾಗ ರೂ. 50,000 ಕಳುಹಿಸಿಕೊಡುತ್ತಿದ್ದವರು ಈಗ ರೂ. 60,000 ಕಳುಹಿಸಿಕೊಡಬೇಕಿದೆ.
ಬಹುತೇಕ ಕಾರು ತಯಾರಿಕಾ ಕಂಪೆನಿಗಳು ತಿಂಗಳ ಹಿಂದೆ ಕಾರುಗಳ ಬೆಲೆ ಹೆಚ್ಚಿಸಿವೆ. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗದು ಎಂಬ ನಿರೀಕ್ಷೆ ಗ್ರಾಹಕರದು. ಆದರೆ ರೂಪಾಯಿ ಅಪಮೌಲ್ಯ ಮತ್ತಷ್ಟು ಕುಸಿದದ್ದೇ ಆದಲ್ಲಿ ವಾಹನಗಳ ಬೆಲೆಯಲ್ಲಿ ಮತ್ತೆ ಹೆಚ್ಚಳ ಆದರೂ ಆಶ್ಚರ್ಯಪಡಬೇಕಿಲ್ಲ. ಲ್ಯಾಪ್ಟಾಪ್, ಟ್ಯಾಬ್ಲೆಟ್, ಡೆಸ್ಕ್ಟಾಪ್, ಸ್ಮಾರ್ಟ್ಫೋನ್ಗಳ ದರದಲ್ಲಿ ಶೇ 5ರಿಂದ 12 ಹೆಚ್ಚಾಗುವ ಸಾಧ್ಯತೆ ಇದೆ. ತಿಂಗಳಾಂತ್ಯಕ್ಕೆ ಇದರ ಪರಿಣಾಮವನ್ನು ಗ್ರಾಹಕರು ಅನುಭವಿಸಬೇಕಾಗಿ ಬರಬಹುದು.
ಡಾಲರ್ಗೆ ಪ್ರತಿಯಾಗಿ ಹೆಚ್ಚಿನ ರೂಪಾಯಿ ನೀಡಬೇಕಾಗಿ ಬಂದಿರುವುದರಿಂದ ವಿದೇಶಗಳಲ್ಲಿನ ತಾತ್ಕಾಲಿಕ ವಾಸ್ತವ್ಯ ಮತ್ತು ವಿದೇಶ ಪ್ರವಾಸವಂತೂ ದುಬಾರಿ ಎನಿಸಲಿದೆ. ತೈಲೋತ್ಪಾದನೆ ವಿಚಾರದಲ್ಲಿ ವಿದೇಶಗಳ ಮೇಲೆಯೇ ಅವಲಂಬಿತವಾಗಿರುವ ಭಾರತ, ಗರಿಷ್ಠ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಜತೆಗೆ ದೇಶದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಮತ್ತು ಬಳಕೆ ಹೆಚ್ಚುತ್ತಲೇ ಇರುವುದರಿಂದ ಅನಿಲ, ಪೆಟ್ರೋಲ್, ಡೀಸೆಲ್, ಆಯಿಲ್ ಮತ್ತೆ ಗ್ರೀಸ್ ಮೊದಲಾದ ಅಗತ್ಯ ಸಾಮಗ್ರಿಗಳ ಬೇಡಿಕೆಯೂ ದುಪ್ಪಟ್ಟಾಗಿದೆ.
ಕಚ್ಚಾತೈಲ ಆಮದು ಪ್ರಮಾಣವೂ ಏರಿಕೆ ಆಗುತ್ತಲೇ ಇದೆ. ವಿದೇಶಿ ತೈಲ ಕಂಪೆನಿಗಳಿಗೆ ಭಾರಿ ಪ್ರಮಾಣದಲ್ಲಿ ಡಾಲರ್ ಲೆಕ್ಕದಲ್ಲಿಯೇ ಪಾವತಿಸಬೇಕಾಗಿರುವುದರಿಂದ ತೈಲ ಆಮದು ಈಗಿನ ರೂಪಾಯಿ ಅಪಮೌಲ್ಯ ಸಂದರ್ಭದಲ್ಲಿ ದೊಡ್ಡ ಹೊರೆ ಎನಿಸಿಕೊಳ್ಳುತ್ತದೆ.
ಕಳೆದ ವಾರವಷ್ಟೇ ಪೆಟ್ರೋಲ್ ದರ ಲೀಟರ್ಗೆ ರೂ2ರಷ್ಟು ಹೆಚ್ಚಾಗಿದೆ. ಈಗ ರೂಪಾಯಿ ಗರಿಷ್ಠ ಪ್ರಮಾಣದಲ್ಲಿ ಅಪಮೌಲ್ಯಗೊಂಡಿರುವುದರಿಂದ ಕಚ್ಚಾತೈಲ ಆಮದು ವೆಚ್ಚವೂ ಹೆಚ್ಚಿದೆ. ಹಾಗಾಗಿ ದೇಶದ ತೈಲ ಕಂಪೆನಿಗಳು ಈ ಹೊರೆಯನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಖಾದ್ಯತೈಲ ವಿಭಾಗದಲ್ಲಿ ತಾಳೆ ಎಣ್ಣೆ(ಕಚ್ಚಾ ಸರಕು) ಆಮದು ಸಾಕಷ್ಟು ದೊಡ್ಡ ಪ್ರಮಾಣದ್ದೇ ಆಗಿದೆ. ಈಗ ರೂಪಾಯಿ ವಿರುದ್ಧ ಡಾಲರ್ ಮೌಲ್ಯ ಹೆಚ್ಚಾಗಿರುವುದರಿಂದ ತಾಳೆ ಎಣ್ಣೆ ಆಮದು ಸಹ ಬಹಳ ದುಬಾರಿ ಎನಿಸಿದೆ. ಇದರಿಂದ ಆಮದಾದ ತಾಳೆ ಎಣ್ಣೆ ಬೆಲೆ ಹೆಚ್ಚುತ್ತದೆ. ಪರಿಣಾಮ ಇತರೆ ಖಾದ್ಯತೈಲಗಳ ಬೆಲೆಯಲ್ಲೂ ಗಣನೀಯ ಏರಿಕೆಯಾಗುತ್ತದೆ.
ಎಲೆಕ್ಟ್ರಾನಿಕ್ ಸಾಧನ ದರ ಏರಿಕೆ
ಡಾಲರ್ ಎದಿರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಸಂದರ್ಭದಲ್ಲಿಯೇ ಎಲೆಕ್ಟ್ರಾನಿಕ್ ಪರಿಕರಗಳ ತಯಾರಿಕಾ ಕಂಪೆನಿ `ಎಲ್ಜಿ' ತನ್ನ ಉತ್ಪನ್ನಗಳ ಬೆಲೆಯಲ್ಲಿ ಶೇ 5ರಷ್ಟು ಹೆಚ್ಚಳ ಮಾಡಿದೆ. ಕೆನಾನ್ ಸಹ ಕ್ಯಾಮೆರಾಗಳ ಬೆಲೆಯಲ್ಲಿ ಶೇ 8ರಷ್ಟು ಏರಿಕೆ ಮಾಡಿದೆ.
`ಬ್ಲ್ಯೂ ಸ್ಟಾರ್' ಕಂಪೆನಿ ಸಹ ಗೃಹ ಬಳಕೆ ಉತ್ಪನ್ನಗಳ ಬೆಲೆಯನ್ನು ಈಗಾಗಲೇ ಶೇ 7.5 ಹೆಚ್ಚಿಸಿದೆ.
`ಹೈಯರ್ ಇಂಡಿಯಾ' ಕಂಪೆನಿ ಸಹ ಮುಂದಿನ ತಿಂಗಳು ತನ್ನ ಉತ್ಪನ್ನಗಳ ದರದಲ್ಲಿ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದೆ. ಸದ್ಯದ ಮಾರುಕಟ್ಟೆ ಸ್ಥಿತಿ ಗಮನಿಸಿದರೆ ಶೇ 5ರಷ್ಟಾದರೂ ದರ ಹೆಚ್ಚಿಸುವುದು ಅನಿವಾರ್ಯ ಎಂದು ಕಂಪೆನಿಯ ಅಧ್ಯಕ್ಷ ಎರಿಕ್ ಬ್ರಾಗಾಂಜಾ ತಿಳಿಸಿದ್ದಾರೆ.
ನಿರಂತರವಾಗಿ ರೂಪಾಯಿ ಅಪಮೌಲ್ಯಕ್ಕೆ ಒಳಗಾಗುತ್ತಿರುವುದರಿಂದ ಭಾರತದಲ್ಲಿ ನಮ್ಮ ಉತ್ಪನ್ನಗಳ ದರವನ್ನು ಹೆಚ್ಚಿಸುವುದು ಅನಿವಾರ್ಯವಾಯಿತು ಎಂದು `ಎಲ್ಜಿ' ಕಂಪೆನಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.ಸೋನಿ ಹಾಗೂ ಸ್ಯಾಮ್ಸಂಗ್ ಕಂಪೆನಿಗಳು ಸದ್ಯಕ್ಕೆ ಎಲೆಕ್ಟ್ರಾನಿಕ್ಸ್ ಪರಿಕರಗಳ ಬೆಲೆ ಹೆಚ್ಚಳ ಕ್ರಮಕ್ಕೆ ಮುಂದಾಗಿಲ್ಲ.
ಪ್ರತಿಸ್ಪರ್ಧಿ ಕಂಪೆನಿಗಳು ದರ ಹೆಚ್ಚಳ ಮಾಡಿದರೂ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಈ ಕಂಪೆನಿಗಳು ಹೇಳಿವೆ.ಸೋನಿ ಹಾಗೂ ಸ್ಯಾಮ್ಸಂಗ್ನ ಈ ನಿರ್ಧಾರ ಗ್ರಾಹಕರಿಗೆ ಕೊಂಚ ಸಮಾಧಾನ ತರುವಂತಿದ್ದರೂ ಭವಿಷ್ಯದಲ್ಲಿಯೂ ಇದೇ ಸ್ಥಿತಿ ಇರುತ್ತದೆ ಎಂದು ಹೇಳಲಾಗದು.
`ತಕ್ಷಣವೇ ದರ ಹೆಚ್ಚಿಸಿದರೆ ವಹಿವಾಟಿನಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ' ಎಂಬ ಆತಂಕವನ್ನು ಸೋನಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕೆನಿಚಿರೊ ಹಿಬಿ ವ್ಯಕ್ತಪಡಿಸಿದ್ದಾರೆ.
`ರೂಪಾಯಿ ಅಪಮೌಲ್ಯ ನಂತರದ ಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸದ್ಯಕ್ಕಂತೂ ಬೆಲೆ ಹೆಚ್ಚಿಸುವುದಿಲ್ಲ. ನಮ್ಮ ಬಹುತೇಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹ ಬಳಕೆ ಉತ್ಪನ್ನಗಳು ಭಾರತದಲ್ಲಿಯೇ ತಯಾರಾಗುವುದರಿಂದ ರೂಪಾಯಿ ಮೌಲ್ಯ ಕುಸಿತ-ಡಾಲರ್ ಬೆಲೆ ಏರಿಕೆ ಸ್ಥಿತಿಯಿಂದೇನೂ ಹೆಚ್ಚಿನ ಪರಿಣಾಮವಾಗದು' ಎಂದು ಸ್ಯಾಮ್ಸಂಗ್ ಇಂಡಿಯಾದ ವಕ್ತಾರ ಹೇಳಿದ್ದಾರೆ.
ಲ್ಯಾಪ್ಟಾಪ್, ಟ್ಯಾಬ್ಲೆಟ್ ದುಬಾರಿ
ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ತಯಾರಿಕೆ ಉದ್ಯಮ ಕ್ಷೇತ್ರ ರೂಪಾಯಿ ಅಪಮೌಲ್ಯದ ನೇರ ಪರಿಣಾಮಕ್ಕೆ ಒಳಗಾಗಿದೆ. ಈ ವಲಯದ ಕಂಪೆನಿಗಳು ತಮ್ಮ ಉತ್ಪನ್ನಗಳ ದರದಲ್ಲಿ ಶೇ 10ರವರೆಗೂ ಹೆಚ್ಚಳ ಮಾಡುವ ಸುಳಿವು ನೀಡಿವೆ.
ವಿಶ್ವದ ಪ್ರಮುಖ ಕಂಪ್ಯೂಟರ್ ಉತ್ಪಾದಕ ಕಂಪೆನಿಗಳ ಪಟ್ಟಿಯಲ್ಲಿರುವ `ಲೆನೊವೊ' ಹಾಗೂ `ಎಚ್ಪಿ' ಈಗಾಗಲೇ ದರ ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಪರಿಷ್ಕ್ರತ ದರಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. `ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಮುಂದಿನ ವಾರ ನಮ್ಮ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ದರದಲ್ಲಿ ಶೇ 5ರಿಂದ 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚದಲ್ಲಿ ಆಗಿರುವ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದೇ ಬೇರೆ ಮಾರ್ಗವೇ ಇಲ್ಲ' ಎಂದು `ಲೆನೊವೊ ಇಂಡಿಯಾ' ವ್ಯವಸ್ಥಾಪಕ ನಿರ್ದೇಶಕ ಅಮರ್ ಬಾಬು ಹೇಳಿದ್ದಾರೆ.
`ಅಸೋಚಾಂ' ಸಮೀಕ್ಷೆ
ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಪುಣೆ, ಚಂಡೀಗಡ, ಡೆಹರಾಡೂನ್ ಮತ್ತಿತರ ನಗರ, ಪಟ್ಟಣಗಳಲ್ಲಿನ ವಿವಿಧ ಕ್ಷೇತ್ರಗಳ ತಲಾ 200 ಜನರನ್ನು `ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಟನೆ'(ಅಸೋಚಾಂ) ರೂಪಾಯಿ ಅಪಮೌಲ್ಯದ ಪರಿಣಾಮದ ಕುರಿತು ಸಮೀಕ್ಷೆಗೆ ಒಳಪಡಿಸಿದ್ದು ಹಲವು ವಾಸ್ತವ ಸಂಗತಿಗಳನ್ನು ತೆರೆದಿಟ್ಟಿದೆ. ರೂಪಾಯಿ ದರ ಕುಸಿತದ ನೇರ ಪರಿಣಾಮ ಅನುಭವಿಸಬೇಕಾದ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆಯ ಮಾಸಿಕ ವೆಚ್ಚ (ಬಜೆಟ್)ದಲ್ಲಿ ಶೇ 15ರಿಂದ 20ರಷ್ಟು ಹೆಚ್ಚಳವಾಗಿದೆ. ನಗರ ಹಾಗೂ ಚಿಕ್ಕ ನಗರಗಳಲ್ಲಿ ವಾಸ ಇರುವವರು ಹೆಚ್ಚು ತೊಂದರೆಗೆ ಒಳಗಾಗುವಂತಾಗಿದೆ.
`ಅಸೋಚಾಂ'ನ ಈ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ 55 ಮಂದಿ 20ರಿಂದ 29 ವರ್ಷ ವಯೋಮಿತಿಯವರು. 40-49ರ ವಯೋಮಿತಿಯವರು ಶೇ 16ರಷ್ಟು, 50-59ವರ್ಷದವರು ಶೇ 2ರಷ್ಟು ಮಂದಿ ಇದ್ದರು ಎಂದು `ಅಸೋಚಾಂ' ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ವಿವರ ನೀಡಿದ್ದಾರೆ.
ರೂಪಾಯಿ ಅಪಮೌಲ್ಯದಿಂದಾಗಿ ಭಾರತ ಭಾರಿ ಪ್ರಮಾಣದಲ್ಲಿ ಆಮದುಮಾಡಿಕೊಳ್ಳುತ್ತಿರುವ ಕಚ್ಚಾತೈಲ, ಖಾದ್ಯ ತೈಲ, ರಾಸಾಯನಿಕ ಗೊಬ್ಬರ, ಕಬ್ಬಿಣದ ಅದಿರಿಗೆ ಹೆಚ್ಚಿನ ದರ ಪಾವತಿಮಾಡಬೇಕಾಗುವುದರಿಂದ ಇವುಗಳ ಬೆಲೆ ದೇಶದ ಚಿಲ್ಲರೆ ಮಾರಾಟ ವಿಭಾಗದಲ್ಲಿ ಸಹಜವಾಗಿಯೇ ಏರಿಕೆ ಕಾಣಲಿದೆ.
ತೈಲೋತ್ಪನ್ನಗಳ ಬೆಲೆ ಹೆಚ್ಚಿದರೆ ಸರಕು ಸಾಗಣೆ, ಪ್ರಯಾಣ ದರ ಏರಿಕೆ ಆಗುತ್ತದೆ.
ಖಾದ್ಯತೈಲ ತುಟ್ಟಿಯಾದರೆ ಹೋಟೆಲ್ ಉದ್ಯಮ ಸಂಕಷ್ಟ ಎದುರಿಸಬೇಕಾಗುತ್ತದೆ. ತಿಂಡಿ-ತಿನಿಸುಗಳ ಬೆಲೆ ಹೆಚ್ಚಿಸಬೇಕಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆಯ ವರ್ಗಾವಣೆ. ರಾಸಾಯನಿಕ ಗೊಬ್ಬರ ಬೆಲೆ ಹೆಚ್ಚಿದರೆ ಕೃಷಿ ಕ್ಷೇತ್ರಕ್ಕೆ ತಳಮಳ. ಕಬ್ಬಿಣದ ಅದಿರು ತುಟ್ಟಿಯಾದರೆ ವಾಣಿಜ್ಯ ಕಟ್ಟಡ, ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ಕ್ಷೇತ್ರದ ಚಟುವಟಿಕೆ ವೆಚ್ಚವೂ ಹೆಚ್ಚುತ್ತದೆ.
ವಿಮಾನ ಪ್ರಯಾಣ ದರಗಳು ಹೆಚ್ಚಾಗಲಿರುವುದರಿಂದ ವಿದೇಶ ಪ್ರವಾಸ ಮತ್ತು ವಾಸ್ತವ್ಯದ ಖರ್ಚು ಕನಿಷ್ಠ 15ರಿಂದ 20ರಷ್ಟು ಹೆಚ್ಚುತ್ತದೆ. ಹಾಗಾಗಿ ಅಮೆರಿಕದಂತಹ ರಾಷ್ಟ್ರದ ಬದಲಿಗೆ ಡಾಲರ್ ಬಳಕೆ ಇಲ್ಲದ ದುಬೈ, ಶ್ರೀಲಂಕಾದಂತಹ ರಾಷ್ಟ್ರಗಳ ಪ್ರವಾಸದತ್ತ ಪ್ರವಾಸಿಗರು ಮುಖ ಮಾಡುವ ಅನಿವಾರ್ಯತೆ ಎದುರಾಗಲಿದೆ.
ಅಪಮೌಲ್ಯ ಎಂದರೇನು?
ವಿದೇಶಿ ನಗದುಗಳ ವಿನಿಮಯ ಮಾರುಕಟ್ಟೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ದೇಶಗಳ ಕರೆನ್ಸಿ(ಚಲಾವಣೆಯಲ್ಲಿರುವ ಹಣ) ಎದಿರು ಭಾರತದ ರೂಪಾಯಿ ವಿನಿಮಯ ಮೌಲ್ಯ ಇಳಿಯುವುದನ್ನು ರೂಪಾಯಿ ಅಪಮೌಲ್ಯ ಎನ್ನಲಾಗುತ್ತದೆ. ಅಮೆರಿಕದ 1 ಡಾಲರ್ ಎದಿರು ಭಾರತದ ಕರೆನ್ಸಿ ಮೌಲ್ಯ ಕಳೆದ ವರ್ಷ ರೂ50 ಇದ್ದುದು ಈಗ 60ರಷ್ಟಾಗಿದೆ. ಅಂದರೆ 1 ಡಾಲರ್ ಮೌಲ್ಯದ ವಿದೇಶಿ ಸರಕಿಗೆ ರೂ 50 ಖರೀದಿ ಮೌಲ್ಯ ನೀಡುವುದಕ್ಕೆ ಬದಲಾಗಿ ಈಗ ರೂ59.87 ನೀಡಬೇಕಿದೆ. ಇದನ್ನೇ ರೂಪಾಯಿಯ ಮೌಲ್ಯ ಕುಸಿತ ಎಂದು ಅರ್ಥೈಸಲಾಗುತ್ತದೆ.
ಒಂದೊಮ್ಮೆ ಇದಕ್ಕೆ ವ್ಯತಿರಿಕ್ತವಾಗಿ 1 ಡಾಲರ್ ಎದಿರು ರೂಪಾಯಿ ಮೌಲ್ಯ 50 ಇದ್ದುದು 40 ರೂಪಾಯಿಗೆ ತಲುಪಿದರೆ ರೂಪಾಯಿ ಮೌಲ್ಯ (ರೂ10ರಷ್ಟು) ಹೆಚ್ಚಾಯಿತು ಎಂದು ಅರ್ಥ.
`ರಫ್ತುದಾರರಿಗೆ ಅನುಕೂಲವಿಲ್ಲ'
ದಾಖಲೆ ಪ್ರಮಾಣದಲ್ಲಿ ರೂಪಾಯಿ ಅಪಮೌಲ್ಯವಾಗಿ ಡಾಲರ್ ಮೊದಲಾದ ವಿದೇಶಿ ಕರೆನ್ಸಿಗಳಿಗೆ ಮೌಲ್ಯ ಹೆಚ್ಚಿದ್ದರೂ ಭಾರತದ ರಫ್ತುದಾರರಿಗೇನೂ ಇದರಿಂದ ಹೆಚ್ಚಿನ ಅನುಕೂಲ ಆಗುವುದಿಲ್ಲ. ರಫ್ತು ಪ್ರಮಾಣ ಹೆಚ್ಚಾಗಬಹುದು ಅಷ್ಟೆ. ಏಕೆಂದರೆ ರೂಪಾಯಿ ಬೆಲೆ ತಗ್ಗಿರುವುದರಿಂದ ರಫ್ತು ಮಾಡುವ ಸರಕುಗಳಿಗೆ ಭಾರತದ ರಫ್ತುದಾರರು ಶೇ 10ರಿಂದ 15ರಷ್ಟು ರಿಯಾಯಿತಿ ನೀಡಬೇಕು ಎಂದು ಜಾಗತಿಕ ಖರೀದಿದಾರರು ಒತ್ತಾಯಿಸುತ್ತಿದ್ದಾರೆ ಎಂದು `ಭಾರತೀಯ ರಫ್ತುದಾರರ ಸಂಘಟನೆ' (ಎಫ್ಐಇಒ) ಪರಿಸ್ಥಿತಿಯ ವಾಸ್ತವ ಚಿತ್ರಣ ನೀಡಿದೆ.
`ಎಲ್ಲರೂ ನಿರೀಕ್ಷಿಸಿದಂತೆ ಈಗಿನ `ರೂಪಾಯಿ ಕುಸಿತ-ಡಾಲರ್ ಪ್ರಬಲ' ಪರಿಸ್ಥಿತಿ ಭಾರತದ ರಫ್ತುದಾರರಿಗೆ ಲಾಭವನ್ನೇನೂ ತರುವುದಿಲ್ಲ. ಹಾಗಾಗಿ ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಹೊಂದಿರುವುದೇ ನಮಗೆ ಅಗತ್ಯವಾಗಿದೆ' ಎಂಬುದು `ಎಫ್ಐಇಒ' ಮಹಾ ನಿರ್ದೇಶಕ ಅಜಯ್ ಸಹಾಯ್ ಅವರ ಸ್ಪಷ್ಟ ಅಭಿಪ್ರಾಯ.
`ಆಮದು ನಿಯಂತ್ರಣ ಅಗತ್ಯ'
ಪ್ರತಿವರ್ಷ ಹೆಚ್ಚುತ್ತಿರುವ ಆಮದು ಹಾಗೂ ಕುಸಿಯುತ್ತಿರುವ ರಫ್ತು ರೂಪಾಯಿಯ ಅಪಮೌಲ್ಯಕ್ಕೆ ಮುಖ್ಯ ಕಾರಣವಾಗಿದ್ದು, ಸರ್ಕಾರ ಮಧ್ಯಪ್ರವೇಶ ಮಾಡಿ ಅಗತ್ಯವಾದ ದೀರ್ಘಾವಧಿ ಪರಿಣಾಮದ ಕ್ರಮಗಳನ್ನು ಕೈಗೊಳ್ಳಬೇಕಿದೆ. ರಫ್ತುದಾರರನ್ನು ಹೆಚ್ಚು ಉತ್ತೇಜಿಸಬೇಕು. ಆ ಮೂಲಕ ದೇಶದ ವಿವಿಧ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಸಿಗುವಂತಾಗಬೇಕು. ಆರ್ಥಿಕತೆಯ ವಿವಿಧ ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬಹುದು. ಚಿನ್ನದ ಆಮದು ಮೇಲೆ ಕಡಿವಾಣ ಹಾಕಲು ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು.
-ಸಂಪತ್ ರಾಮನ್ ಹಿರಿಯ ಉಪಾಧ್ಯಕ್ಷ, ಎಫ್ಕೆಸಿಸಿಐ
`ಎಫ್ಡಿಐ' ಮಿತಿ ಹೆಚ್ಚಳ ಅಗತ್ಯ
`ರೂಪಾಯಿ ಅಪಮೌಲ್ಯದ ಸಂಕಷ್ಟದ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಇಲ್ಲವೇ ಆರ್ಬಿಐ ತಕ್ಷಣವೇ ಮಧ್ಯಪ್ರವೇಶಿಸಬೇಕು. ಜತೆಗೆ ವಿದೇಶಿ ನೇರ ಹೂಡಿಕೆ(ಎಫ್ಡಿಐ)ಗೆ ಹೆಚ್ಚಿನ ಅವಕಾಶ ನೀಡಬೇಕು. ಖಾದ್ಯ ತೈಲ ಹಾಗೂ ಚಿನ್ನದ ಆಮದು ಮಿತಿಮೀರಿದ್ದು, ಇದನ್ನು ಕಠಿಣ ಕ್ರಮಗಳ ಮೂಲಕ ಆದಷ್ಟೂ ತಗ್ಗಿಸಬೇಕು. ಜನರೂ ಸಹ ಚಿನ್ನವನ್ನೇ ಆಶ್ರಯಿಸುವ ಪ್ರವೃತ್ತಿಯಿಂದ ಹಿಂದೆ ಸರಿದು ಉಳಿತಾಯ ಮತ್ತು ಹೂಡಿಕೆಗೆ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು. ಅಮೆರಿಕದಲ್ಲಿ ಆರ್ಥಿಕ ಸ್ಥಿತಿ ಪುನಶ್ಚೇತನ ಪಡೆದುಕೊಂಡಿರುವುದು ಸಹ ಈಗಿನ (ವಿವಿಧ ದೇಶಗಳ ಕರೆನ್ಸಿ ಎದುರು ಡಾಲರ್ ಬಲಿಷ್ಠಗೊಂಡಿರುವ) ಸ್ಥಿತಿಗೆ ಕಾರಣವಾಗಿದೆ'.
-ಜೆ.ಕ್ರಾಸ್ತಾ `ಅಸೋಚಾಂ' ದಕ್ಷಿಣ ವಲಯ ಮುಖ್ಯಸ್ಥ
ಕೃಪೆ: ಪ್ರಜಾವಾಣಿ
Comments
Post a Comment