ವಿವಾದ ಮತ್ತೆ ಪಶ್ಚಿಮಘಟ್ಟಗಳ ದಟ್ಟಡವಿಯಲ್ಲಿ ಕಾಡ್ಗಿಚ್ಚು ಎಬ್ಬಿಸಿದೆ. ಎರಡು ವರ್ಷಗಳ (2010) ಹಿಂದೆ ಪಶ್ಚಿಮಘಟ್ಟಗಳ ಅಧ್ಯಯನಕ್ಕೆ ಕೇಂದ್ರ ಸರಕಾರ ಪ್ರೊ. ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ವರದಿಯನ್ನು ಸಲ್ಲಿಸಿತ್ತು. ವಸ್ತುನಿಷ್ಠ ಅಧ್ಯಯನ ನಡೆಸಿ ಸಲ್ಲಿಸಿದ ಸಮಿತಿಯ ವರದಿಯನ್ನು ಅರಗಿಸಿಕೊಳ್ಳುವುದು ಸರಕಾರದಿಂದ ಸಾಧ್ಯವಾಗಲಿಲ್ಲ. ಆಗ ಜೈರಾಮ್ ರಮೇಶ್ ಪರಿಸರ ಸಚಿವ. ವರದಿ ಬರುವಷ್ಟರಲ್ಲಿ ಸಚಿವರೂ ಬದಲಾಗಿದ್ದರು. ಪರಿಸರ ಸಚಿವಾಲಯದ ಧೋರಣೆಯೂ ಬದಲಾಗಿತ್ತು.
ಗಾಡ್ಗೀಳ್ ನೇತೃತ್ವದ 13 ಜನರ ವರದಿ ಹೇಳುವ ಪ್ರಕಾರ ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ. ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದವು ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಅಮಾನುಷ ಅತ್ಯಾಚಾರವನ್ನು ವರದಿ ಎತ್ತಿ ತೋರಿತ್ತು. ಇದನ್ನು ಒಪ್ಪಿಕೊಳ್ಳಲು ನಮ್ಮ ಆಳುವ ಮಂದಿ ಸಿದ್ಧರಿಲ್ಲವೇ ಇಲ್ಲ. ಹೀಗಾಗಿಯೇ ಸರಕಾರ ವರದಿಯನ್ನು ಮುಚ್ಚಿಟ್ಟು ಮತ್ತೊಂದು ಸಮಿತಿಯನ್ನು ಕಸ್ತೂರಿರಂಗನ್ ನೇತೃತ್ವದಲ್ಲಿ ರಚಿಸಿತು. ಆ ಸಮಿತಿ ಮೊನ್ನೆ ಮೊನ್ನೆಯಷ್ಟೇ ಸಲ್ಲಿಸಿದ ವರದಿ ಇದಕ್ಕೆ ವ್ಯತಿರಿಕ್ತವಾಗಿರುವುದೇ ವಿವಾದಕ್ಕೆ ಕಾರಣ. ಇಬ್ಬರೂ ತಜ್ಞರು ಪಶ್ಚಿಮಘಟ್ಟವನ್ನು ನೋಡುವ ದೃಷ್ಟಿಕೋನಗಳು ಪರಸ್ಪರ ಸಂಪೂರ್ಣ ಭಿನ್ನ. ಗಾಡ್ಗೀಳರು ಪಶು, ಪಕ್ಷಿ ಸೇರಿದಂತೆ ಜೀವ ಸಂಕುಲವನ್ನು, ಪರಿಸರವನ್ನು ಆದ್ಯತೆಯಾಗಿಟ್ಟು ನೋಡುವವರು. ಕಸ್ತೂರಿರಂಗನ್ ಕನಸು ಏನಿದ್ದರೂ ಗಗನಮುಖಿ. ಅಲ್ಲಿ ಪರಿಸರಕ್ಕಿಂತ ಯೋಜನೆಗಳಿಗೇ ಪ್ರಾಮುಖ್ಯ. ವೈಜ್ಞಾನಿಕ ಸಂಶೋಧನೆಗಳು, ಆಧುನಿಕ ಅಭಿವೃದ್ಧಿ ನಮಗೆ ಬೇಕು ನಿಜ. ಆದರೆ ಅದಕ್ಕಾಗಿ ತೆರಬೇಕಾದ ಬೆಲೆಯೆಷ್ಟು ಎಂಬುದನ್ನು ವಿವೇಚಿಸಲಾಗದ ಮೂರ್ಖತನ ನಮಗೆ, ನಮ್ಮ ಸರಕಾರಕ್ಕೆ ಏಕೆ?
ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್ಸ್ಪಾಟ್ ಎಂಬ ಕಾರಣಕ್ಕೇ ಯುನೆಸ್ಕೋದಂಥ ಸಂಸ್ಥೆ ಇದನ್ನು ಪಾರಂಪರಿಕ ತಾಣವಾಗಿ ಘೋಷಿಸಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ಮನುಷ್ಯನ ಯಾವುದೇ ರೀತಿಯ ಮಧ್ಯಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಅಷ್ಟಕ್ಕೂ ಅಭಿವೃದ್ಧಿ ಎಂದರೆ ಏನು? ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಸುಲಭ ಮಾಡಿಕೊಡುವುದೇ? ಉನ್ನತ ಗಿರಿಶಿಖರಗಳನ್ನು ಸೀಳಿ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುವುದೇ? ಜೀವನದಿಗಳನ್ನು ಅಡ್ಡಗಟ್ಟಿ, ತಿರುಗಿಸಿ ಕಾಡು ಮುಳುಗಿಸಿ ಖಾಸಗಿಯವರ ಮೆರದಾಟಕ್ಕೆ ಅನುವು ಮಾಡಿಕೊಡುವುದೇ? ಅರಣ್ಯದಂಚಿನಲ್ಲಿನ ಒತ್ತುವರಿ ಕೃಷಿಭೂಮಿಗೆ ಇನ್ನಿಲ್ಲದ ಬೆಲೆ ಕೊಟ್ಟು ವಿತ್ತ ವಲಯಗಳನ್ನು, ಕೈಗಾರಿಕೆಗಳನ್ನು ಸ್ಥಾಪಿಸುವುದೇ? ಯಾರಪ್ಪನ ಮನೆಯದ್ದು ಪರಿಸರ ಸಂಪತ್ತೆಂದರೆ? ಪುಕ್ಕಟೆ ಸಿಕ್ಕದ್ದನ್ನು ದೋಚುವುದೊಂದೇ ಅಭಿವೃದ್ಧಿ ಎನ್ನುವುದಾದರೆ ಅದು ಭೂಮಿಯ ಮೇಲೆ ನಡೆಯುವುದಕ್ಕಿಂಥ ಚಂದ್ರನ ಮೇಲೆ ನಡೆಯುವುದೇ ವಾಸಿ. ಹೀಗಾಗಿ ಕೇಂದ್ರ ಸರಕಾರ ಚಂದ್ರಯಾನಕ್ಕೆ ಇನ್ನಷ್ಟು ಸಾವಿರ ಕೋಟಿಗಳನ್ನು ಮೀಸಲಿಟ್ಟು ಕಸ್ತೂರಿರಂಗನ್ ಅಂಥವರನ್ನು ಅಲ್ಲಿಗೇ ನೇಮಿಸುವುದೊಳಿತು. ಅರಣ್ಯ, ಪರಿಸರ ಸೇರಿದಂತೆ ಇಂಥ ವಿಚಾರಗಳಲ್ಲಿ ನೂರೆಂಟು ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ವಿದ್ಯುತ್ ಸೇರಿದಂತೆ ಸಂಪನ್ಮೂಲಗಳ ಕೊರತೆಯೂ ಇನ್ನೊಂದೆಡೆ ನಮ್ಮನ್ನು ಹಿಂಡುತ್ತಿದೆ. ಇವೆರಡನ್ನೂ ಸರಿದೂಗಿಸಲಾರದ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂಥ ಅನಗತ್ಯ ವರದಿಗಳಿಂದ ವಿವಾದ ಸೃಷ್ಟಿಸಿ ಸರಕಾರಗಳು ಭಂಡತನವನ್ನು ಪ್ರದರ್ಶಿಸುತ್ತವೆ.
ಅಭಿವೃದ್ಧಿಯೆಂದರೆ ಕಾಂಕ್ರೀಟ್ ಕಟ್ಟಡ, ಟಾರು ರಸ್ತೆ, ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲು ತಮ್ಮ ರಾಜಕೀಯ ಕಾರ್ಯಕರ್ತರಿಗೆ ಅನುವು ಮಾಡಿಕೊಡುವುದಷ್ಟೇ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ತಮ್ಮ ತಿಳಿವಳಿಕೆಗೆ ಇರುವ ಮಿತಿಯನ್ನು ಜಯಂತಿ ನಟರಾಜನ್ ಅವರಂಥ ರಾಜಕಾರಣಿಗಳಿಗೆ ಕೊನೆಯವರೆಗೂ ಅರ್ಥವೇ ಆಗುವುದಿಲ್ಲ. ಎಲ್ಲೆಂದರಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿಗಳ ನೆಡುತೋಪುಗಳನ್ನು ಬೆಳೆಸುವುದಷ್ಟೇ ಪರಿಸರ ಸಂರಕ್ಷಣೆಯಾಗುವುದಿಲ್ಲ. ಅರಣ್ಯ ಅಭಿವೃದ್ಧಿ ಎಂದರೆ ನೆಡುತೋಪುಗಳು, ಪ್ಲಾಂಟೇಶನ್ಗಳಲ್ಲಿ. ಅಧಿಕಾರಿಗಳಿಗೆ ಕೇವಲ ಇಂಥ ತರಬೇತಿ ನೀಡುವ ಬದಲು ಪಶ್ಚಿಮಘಟ್ಟಗಳಲ್ಲಿನ ಜೈವಿಕ ವೈವಿಧ್ಯದ ಅರಿವು ಮೂಡಿಸುವ ಕೆಲಸ ಮಾಡುವುದೊಳಿತು. 'ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯ' ಎಂಬ ಮಾತು ತಜ್ಞರಿಂದ ಮುಗಿಲುಮುಟ್ಟುವ ಘೋಷಣೆಯಾಗುತ್ತಿದೆ. ಇದು ಸರಕಾರಗಳಿಗೆ ಕೇಳಿಸುವುದೇ ಇಲ್ಲವೇ ಬಂಡವಾಳಶಾಹಿಗಳು ಹಾಗೂ ಗುತ್ತಿಗೆದಾರರೇ ಸರ್ಕಾರವನ್ನು ನಡೆಸಹತ್ತಿದಾಗ ಇಂಥ ಮೂರ್ಖತನಗಳು ಘಟಿಸುತ್ತಲೇ ಇರುತ್ತವೆ. ಕಾಡು ಮರಗಳ ಮೇಲಿನ ಆರ್ಕಿಡ್ಗಳು, ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಲ್ಲಿನ ಅಣಬೆಗಳು, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ನೆಲದಡಿಯ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರಿಸೃಪಗಳು ಇವೆಲ್ಲ ಏನು? ಅವುಗಳ ಮೌಲ್ಯವೆಷ್ಟು ಎಂಬುದು ಹಣದ ದಾಹಕ್ಕೆ ಬಿದ್ದಿರುವ ರಾಜಕೀಯದ, ಜನಸೇವೆಯ ಮುಖವಾಡ ತೊಟ್ಟಿರುವ ಬಂಡವಾಳಶಾಹಿಗಳಿಗೆ ಅರ್ಥವಾದರೂ ಹೇಗಾದೀತು?
ಪಶ್ಚಿಮಘಟ್ಟವನ್ನು ಯಾಕೆ ಉಳಿಸಿಕೊಳ್ಳಬೇಕೆಂಬುದಕ್ಕೆ ನೂರಾರು ಕಾರಣಗಳನ್ನು ನೀಡಬಹುದು. ಯಾವ ವಿತಂಡವಾದಗಳೂ ಇದಕ್ಕೆ ಸರಿ ಸಾಟಿಯಾಗಿ ನಿಲ್ಲಲಿಕ್ಕಿಲ್ಲ. ಜೈವಿಕ ಪರಿಸರ, ಪರಿಸರ ವಿಜ್ಞಾನ, ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮುಂತಾದುವುಗಳ ಬಗ್ಗೆ ಬೇರು ಮಟ್ಟದಲ್ಲಿ ಚರ್ಚೆ ನಡೆಸಲು ಸರಕಾರ ಸಿದ್ಧವಿಲ್ಲ. ಸದ್ಯದ, ಕಣ್ಣಿಗೆ ಕಾಣುವ ಲಾಭವೊಂದಕ್ಕಾಗಿ ಮಿಲಿಯಾಂತರ ವರ್ಷಗಳ ಅಪೂರ್ವ ಸಂಪತ್ತನ್ನು ಬಲಿಕೊಟ್ಟುಕೊಳ್ಳುವುದು ಎಷ್ಟು ಸರಿ?
ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಥಕ್ಕಿಂತ ಹೆಚ್ಚು ಭಾಗವು ಕರ್ನಾಟಕದಲ್ಲಿಯೇ ಇದೆ. ಪಶ್ಚಿಮ ಘಟ್ಟಗಳು ಒಟ್ಟು 60ಸಾವಿರ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ಶೇ. 40 ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು 1200 ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು 5000ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, 139 ಬಗೆಯ ಸಸ್ತನಿಗಳು, 508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.
ಪಶ್ಚಿಮ ಘಟ್ಟಗಳು ನೈಜ ಅರ್ಥದಲ್ಲಿ ಪರ್ವತ ಶ್ರೇಣಿಯಲ್ಲ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನರೂಪದಲ್ಲಿ ಇವು ಹಬ್ಬಿವೆ. ಉತ್ತರದಲ್ಲಿ ಸಾತ್ಪುರ ಶ್ರೇಣಿಯಿಂದ ಆರಂಭವಾಗಿ ದಕ್ಷಿಣಕ್ಕೆ ಹಬ್ಬಿರುವ ಪಶ್ಚಿಮ ಘಟ್ಟಗಳ ಮುಖ್ಯ ಶ್ರೇಣಿಗಳು ಸಹ್ಯಾದ್ರಿ, ಬಿಳಿಗಿರಂಗನ ಬೆಟ್ಟಸಾಲು, ಸರ್ವರಾಯನ್ ಶ್ರೇಣಿ, ಮತ್ತು ನೀಲಗಿರಿ ಬೆಟ್ಟವಾಗಿ ವಿಭಾಗಗೊಂಡಿವೆ. ಬಿಳಿಗಿರಂಗನ ಬೆಟ್ಟಸಾಲು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಸಂಧಿಸ್ಥಾನದಲ್ಲಿದೆ. ಪಶ್ಚಿಮ ಘಟ್ಟಗಳ ಮುಖ್ಯ ಶಿಖರಗಳು - ಸಾಲ್ಹೇರ್, ಕಾಲ್ಸೂಬಾಯಿ, ಮಹಾಬಲೇಶ್ವರ, ಸೋನ್ಸಾಗರ್, ಮುಳ್ಳಯ್ಯನಗಿರಿ(1950 ಮೀ.), ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದುರೆಮುಖ, ಚೆಂಬ್ರ(2100 ಮೀ.), ವೆಲ್ಲರಿಮಲ(2200 ಮೀ.), ಬಾಣಾಸುರ(2073 ಮೀ.), ದೊಡ್ಡಬೆಟ್ಟ(2623 ಮೀ.), ಆನೈ ಮುಡಿ(2695 ಮೀ.) ಮತ್ತು ಮಹೇಂದ್ರಗಿರಿ. ಹಿಮಾಲಯದ ದಕ್ಷಿಣದಲ್ಲಿ ಭಾರತದ ಅತ್ಯಂತ ಎತ್ತರ ಶಿಖರ ತಮಿಳುನಾಡಿನ ಆನೈ ಮುಡಿ. ಪಶ್ಚಿಮ ಘಟ್ಟಗಳ ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ಕಿರಿದಾದ ಕರಾವಳಿಯ ಉತ್ತರ ಭಾಗವು ಕೊಂಕಣ ಪ್ರದೇಶವೆಂದು ಹೆಸರಾಗಿದ್ದರೆ ಮಧ್ಯ ಭಾಗವು ಕೆನರಾ ಮತ್ತು ದಕ್ಷಿಣ ಭಾಗವು ಮಲಬಾರ್ ಪ್ರಾಂತವೆಂದು ಕರೆಯಲ್ಪಡುವುವು. ಪಶ್ಚಿಮ ಘಟ್ಟಗಳು ಮಳೆಯುಂಟುಮಾಡುವ ಪಶ್ಚಿಮದ ಮಾರುತಗಳನ್ನು ತಡೆಯುವುದರಿಂದಾಗಿ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಭಾಗವಾಗಿದೆ. ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತದೆ. ಈ ಪ್ರಕ್ರಿಯೆಗೆ ಪಶ್ಚಿಮ ಘಟ್ಟಗಳ ದಟ್ಟ ಸದಾಹಸಿರು ಕಾಡು ಸಹ ಸಹಕಾರಿಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಊಟಿ, ಕೋಡೈಕೆನಾಲ್ ಮತ್ತು ಬೆರಿಜಮ್ಮು ಮುಂತಾದ ದೊಡ್ಡ ಸರೋವರಗಳಿವೆ.
ಕಂಡಕಂಡದ್ದಕ್ಕೆ ಅನುಕರಣೆ ಮಾಡುವ, ವಿದೇಶೀ ಜೀವನ ಶೈಲಿಯನ್ನು ಮಾದರಿಯಾಗಿಸಿಕೊಳ್ಳುವ ನಮ್ಮ ಸರಕಾರಗಳಿಗೆ ನಮ್ಮದೇ ಪರಿಸರ ಸಂರಕ್ಷಣೆ ಮಾಡಿಕೊಳ್ಳಲು ವಿದೇಶಗಳು ಮಾದರಿಯಾಗುವುದಿಲ್ಲವೇಕೆ? ಕೆರೆ ಹೂಳೆತ್ತಲು, ಗಿಡಬೆಳೆಸಲೂ ವಿಶ್ವಬ್ಯಾಂಕ್ ನೆರವಿಗೆ ಕೈಒಡ್ಡುವ ನಾವು ನಮ್ಮದೇ ಅಮೂಲ್ಯ ಸಂಪತ್ತನ್ನು ರಕ್ಷಿಸಿಕೊಳ್ಳುವ ನಿಟ್ಟನಲ್ಲಿ ಯುನೆಸ್ಕೋದಂಥ ಸಂಸ್ಥೆಯ ನೆರವು ಮುಂದೆ ಬಂದಾಗ ಕುರುಡರಂತೆ ವರ್ತಿಸುತ್ತೇವೆ. ಇದಕ್ಕಿಂಥ ಮೂರ್ಖತನದ, ಹಾಸ್ಯಾಸ್ಪದ ಸಂಗತಿ ಬೇರೆ ಇದೆಯೇ? ಇಲ್ಲಸಲ್ಲದ ಸುಳ್ಳು ಹೇಳಿ, ಆಮಿಷ ಒಡ್ಡಿ ಹಾದಿತಪ್ಪಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟವನ್ನು ಕಾಪಾಡುವತ್ತ ಗಮನ ಹರಿಸುವುದು ಜವಾಬ್ದಾರಿಯುತ ಆಡಳಿತಕ್ಕೆ ಶೋಭೆ ತರುವ ಸಂಗತಿ. ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ತೋರುತ್ತಿರುವ ಜಾಣ್ಮೆ, ಆಸಕ್ತಿ ನಮಗೆ ಪರಿಸರ ಸಂರಕ್ಷಣೆಯಲ್ಲಿಲ್ಲ. ಬಂಡವಾಳಶಾಹಿಗಳೇ ನಮಗೆ ಆಸ್ತಿಯಾಗಿ ತೋರುತ್ತಿರುವಾಗ ಪಶ್ಚಿಮಘಟ್ಟದಂಥ ಅಮೂಲ್ಯ ಆಸ್ತಿ ತೃಣವಾಗಿ ಕಾಣುತ್ತಿರುವುದು ದುರಂತ. ವನಮಹೋತ್ಸವದ ನೆಪದಲ್ಲಿ ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಂಡು ಸಮಾಜಸೇವಕ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದವರಿಗೆ ಪಶ್ಚಿಮಘಟ್ಟದಂಥ ಅಮೂಲ್ಯ ಸಂಪತ್ತಿನ ಮೌಲ್ಯ ತಿಳಿಯಬೇಕು ಹೇಗೆ?
- ರಾಧಾಕೃಷ್ಣ ಎಸ್. ಭಡ್ತಿ
ಕೃಪೆ:ಕನ್ನಡಪ್ರಭ
Comments
Post a Comment