ಗಂಗಾಮಾತೆಯ ಉಳಿಸಲು 'ಕಟ್ಟೆ'ಕಡೆಯ ಪ್ರಯತ್ನ


ನಿಮಗೆ ನೆನಪಿರಬಹುದು, ಕಳೆದ ಜೂನ್ 14ರಂದು ಅನ್ಯಾಯವಾಗಿ ಸಂತರೊಬ್ಬರು ಈ ಪುಣ್ಯಭೂಮಿಯಲ್ಲಿ ಪ್ರಾಣಕಳೆದುಕೊಂಡರು. ಹಾಗೆ ಅವರು ಪ್ರಾಣತ್ಯಾಗ ಮಾಡಿದ್ದು ನಮ್ಮ ಪುಣ್ಯನದಿ ಗಂಗೆಗಾಗಿ. ಅದು ಆತ್ಮಹತ್ಯೆಯಲ್ಲ, ಆತ್ಮಾಹುತಿ. ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮೊದಲಬಾರಿಗೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟ ರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಳು.

ಹೌದು, ಗಂಗಾ ತಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ನದಿಯ ಶುದ್ಧೀಕರಣಕ್ಕೆ ಆಗ್ರಹಿಸಿ  ಸತತ 115 ದಿನ ಉಪವಾಸ ಕುಳಿತ ಉತ್ತರಾಖಂಡ್ ರಾಜ್ಯದ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರಿಗೆ ಸಿಕ್ಕ ಉತ್ತರ ಸಾವು! ನಾಚಿಕೆಯಾಗಬೇಕಿತ್ತು ನಮಗೆ. ಆದರೆ, ಸರಕಾರಕ್ಕೆ ಅದು ದೊಡ್ಡ ವಿಚಾರವಾಗಲೇ ಇಲ್ಲ. ಏಕೆಂದರೆ ಆ ಸಂತನ ಸಾವು ಸ್ವಲ್ಪ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮೊದಲಾಗಲೀ ಆನಂತರವಾಗಲೀ ನಮಗೆ ಏನೂ ಅನ್ನಿಸಲೇ ಇಲ್ಲ. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇವೆ. ಗಣಿಗಾರಿಕೆ, ಗಂಗೆಯ ಹರಿವಿಗೆ ಅಡ್ಡಲಾಗಿ ಮನಬಂದಂತೆ ಒಡ್ಡುಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅತ್ಯಾಚಾರಗಳೂ ಮುಂದುವರಿದೇ ಇವೆ. ಇದಕ್ಕಿಂತ ವಿಪಯರ್ಯಾಸ ಬೇರೇನಿದೆ? ಹಠಕ್ಕೆ ಬೀಳದೇ, ಪ್ರತಿಭಟನೆಗೆ ಇಳಿಯದೇ ಏನೂ ಆಗುವುದಿಲ್ಲವೇ ಅಥವಾ ಕೊನೇಪಕ್ಷ ಒಂದು ಜೀವಕ್ಕೆ ನಾವು ಕಟ್ಟುವ ಬೆಲೆ ಇಷ್ಟೇ ಏನು?
ನಮ್ಮನ್ನು ಆಳುತ್ತಿರುವುದು ಮೂಕ ಪ್ರಧಾನಿ, ಕಿವುಡು ಸರಕಾರ. ಇನ್ನೇನಾದೀತು ಇಂಥ ಆಡಳಿತಗಳಿಂದ? ಇವರಿಗೆ ನಿರಶನಗಳು, ಸತ್ಯಾಗ್ರಹ, ಆಂದೋಲನ ಇಂಥವುಗಳ ಅರ್ಥವಾದರೂ ಗೊತ್ತಿದೆಯೇ? ಗೊತ್ತಿದ್ದರೆಸ್ವಾಮಿ ನಿಗಮಾನಂದರ ಸಾವಿನ ಅನ್ಯಾಯದ ನಂತರವೂ ದೇಶದ ಮತ್ತೊಬ್ಬ ಸಂತರು ಅದೇ ವಿಚಾರಕ್ಕೆ ನಿರಶನಕ್ಕೆ ಕುಳಿತುಕೊಳ್ಳುವ ಪ್ರಮೇಯ ಬರುತ್ತಲೇ ಇರಲಿಲ್ಲ. ಒಂದೊಮ್ಮೆ ನಿರಶನ ಆರಂಭಿಸಿದ್ದರೂ ತಿಂಗಳವರೆಗೆ ಅದು ಮುಂದುವರಿಯಲು ಬಿಡುತ್ತಿರಲಿಲ್ಲ. ಹಾಗೂ ಮುಂದುವರಿದಿದೆ ಮಾತ್ರವಲ್ಲ, ಸರಕಾರ ಹಾಗಿರಲಿ ಕನಿಷ್ಠ ಮಾಧ್ಯಮಗಳ ಗಮನವನ್ನೂ ಇದು ಸೆಳೆಯುತ್ತಿಲ್ಲ. ಎಲ್ಲೋ ತೀರಾ ಸ್ಥಳೀಯ ಪತ್ರಿಕೆಗಳನ್ನು ಬಿಟ್ಟರೆ ಗಂಗೆಗಾಗಿನ ಈ ಸಂತ ನಡೆಸುತ್ತಿರುವ ಮಹಾ ತಪಸ್ಸು ಸುದ್ದಿಯೇ ಆಗಿಲ್ಲ. ಎಷ್ಟರಮಟ್ಟಿಗೆ ನಾವು ಸಂವೇದನೆ ಕಳೆದುಕೊಂಡಿದ್ದೇವೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ ಬೇಕೆ? 
ಹೀಗೆ ನಿರಶನ ಕುಳಿತವರು ಅಂತಿಂಥವರಲ್ಲ. ಇಡೀ ದೇಶದ ಪರಿಸರ ತಜ್ಞರು ಯಾರ ಮುಂದೆ ನಡು ಬಗ್ಗಿಸಿ ನಿಲ್ಲುತ್ತಾರೊ, ಯಾರು ಗಂಗೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿದ್ದಾರೊ, ಅಂಥ ಪವಿತ್ರ ದೇವನದಿಯ ಸಂರಕ್ಷಣೆಗಾಗಿಯೇ ತಮ್ಮ 80ರ ಇಳಿವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿದರೋ ಅಂಥ ಮಹಾನ್ ಚೇತನ, ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ ಸ್ವತಃ ನಿರಶನ ಕುಳಿತು 28 ದಿನಗಳಾದವು. ಒಂದು ವರ್ಷದ ಹಿಂದಿನವರೆಗೂ ಪ್ರೊ.ಜಿ.ಡಿ. ಅಗರ್‌ವಾಲ್ ಎಂದು ಕರೆಸಿಕೊಳ್ಳುತ್ತಿದ್ದ ಸ್ವಾಮೀಜಿಯವರು ಗಂಗೆಯ ಪ್ರಮುಖ ಜಲಮೂಲ 'ಅಲಕಾನಂದ' ಸಂರಕ್ಷಣೆಗಾಗಿ ಹಠ ತೊಟ್ಟು ಅನ್ನಾಹಾರ ತ್ಯಜಿಸಿದ್ದಾರೆ. ವಿಶೇಷವೆಂದರೆ, ಹೀಗೆ ನಿರಶನಕ್ಕೆ ಕೂರುವ ಕೆಲವೇ ದಿನಗಳ ಮುಂಚೆ ಬೆಂಗಳೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿಯೇ ತಮ್ಮ ನಿರಶನದ ಬಗ್ಗೆ ಸುಳಿವುಕೊಟ್ಟಿದ್ದರು. ಇದೇ ಅಂಕಣದಲ್ಲಿ ಅವರ ಬಗ್ಗೆ, ಗಂಗಾ ಹೋರಾಟದ ಬಗ್ಗೆ ಸವಿವರವಾಗಿ ಬರೆಯಲಾಗಿತ್ತು ಸಹ.
ಇಲ್ಲಿಂದ ಹೋದವರೇ ಘೊಷಿಸಿದಂತೆ ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ ಮಧ್ಯಪ್ರದೇಶದ ಅಮರಕಂಟಕ್ ಎಂಬಲ್ಲಿ ಜನವರಿ 26ರಿಂದ ತಮ್ಮ ನಿರಶನ ಆರಂಭಿಸಿದ್ದಾರೆ. ಇದೀಗ ಸ್ವಾಮೀಜಿಯವರ ನಿರಶನ ವಾರಾಣಸಿಗೆ ಸ್ಥಳಾಂತರಗೋಂಡಿದೆ. ಅಗರ್‌ವಾಲ್‌ಜಿಗೆ ಸಂನ್ಯಾಸ ದೀಕ್ಷೆ ನೀಡಿದ ಸ್ವಾಮಿ ಅವಿಮುಕ್ತೇಶ್ವರಾನಂದಜಿ ಸಹ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಉತ್ತರಾಖಂಡ್ ಸರಕಾರ ಅಲಕಾನಂದಕ್ಕೆ ಅಡ್ಡಲಾಗಿ ಅಣೆಕಟ್ಟೆಯೊಂದನ್ನು ನಿರ್ಮಿಸಲು ಹೊರಟಿದ್ದು ಇದರಿಂದ ದೇವನದಿ ಗಂಗೆಯ ಅಸ್ತಿತ್ವಕ್ಕೆ ಧಕ್ಕೆ ಬಂದೊದಗಲಿದೆ ಎಂಬುದು ಈ ಹೋರಾಟಕ್ಕೆ ಕಾರಣ. ಕೇವಲ ಮೀನುಗಾರಿಕೆ ಅಭಿವೃದ್ಧಿಯ ವಾಣಿಜ್ಯಕ ದೃಷ್ಟಿಯನ್ನಿಟ್ಟುಕೊಂಡು ಉತ್ತರಾಖಂಡ್ ಸರಕಾರ ಆಂಧ್ರ ಮೂಲದ ಕಂಪನಿಯೊಂದಕ್ಕೆ ಈ ಯೋಜನೆಯ ಗುತ್ತಿಗೆ ನೀಡಿದೆ. ಒಂದೊಮ್ಮೆ ಇದು ಸಾಕಾರವಾದರೆ ಗೋಮುಖದಿಂದ ಉಗಮಿಸಿ ಬರುವ ಗಂಗೆ ಇಂದಿನ ಮಾಲಿನ್ಯದ ಹೊರತಾಗಿಯೂ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಇದೆ. ಏಕೆಂದರೆ ಗಂಗೆಗೆ ಆಧಾರವಾಗಿರುವ ಜಲಮೂಲಗಳಲ್ಲಿ ಪ್ರಮುಖವೆಂದರೆ ಭಾಗೀರಥಿ ಹಾಗೂ ಅಲಕಾನಂದೆಯರು ಎನ್ನುತ್ತಾರೆ ಸ್ವಾಮೀಜಿಯವರೊಂದಿಗೆ ಹೊರಾಟದ ಕಣಕ್ಕೆ ಧುಮುಕಿರುವ ಆಧುನಿಕ ಭಗೀರಥ, ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪುರಸ್ಕೃತ ರಾಜೇಂದ್ರ ಸಿಂಗ್. 
ಗಂಗೆಯೇ ಬದುಕು. ಜೀವನದ ಆಧಾರ. ಅನೇಕ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ಸೇರಿದಂತೆ ಅನೇಕ ಜೀವಚರಗಳಿಗೆ ಗಂಗೆ ಜೀವನಾಧಾರ. ಎಲ್ಲಿವರೆಗೆ ಪ್ರಕೃತಿ, ಗಂಗೆ ಮತ್ತು ಜನರ ನಡುವೆ ಒಂದು ಒಳ್ಳೆಯ ಸಂಬಂಧ ಇತ್ತೋ ಅಲ್ಲಿವರೆಗೂ ಗಂಗೆ ಚೆನ್ನಾಗಿಯೇ ಇದ್ದಳು. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭದಲ್ಲಿ ನಿಸರ್ಗ ಮತ್ತು ಸಮಾಜದಲ್ಲಿ ಅಡಕವಾಗಿರುವ ವಿಷ ಮತ್ತು ಅಮೃತವನ್ನು ಬೇರೆ ಬೇರೆ ಇಡುವಂಥ ಬಗ್ಗೆ ಗಹನವಾದ ವಿಚಾರ ವಿನಿಮಯಗಳಾಗುತ್ತಿತ್ತು. ಕೆಟ್ಟದ್ದು ಮತ್ತು ಒಳ್ಳೆಯದನ್ನು ಪ್ರತ್ಯೇಕಿಸಲಾಗುತ್ತಿತ್ತು. ಯಾರಿಗೆ ಪುಣ್ಯ ಮಾಡಬೇಕು ಎನಿಸುತ್ತಿತ್ತೋ ಅವರು, ಅಂದರೆ ರಾಜ, ಜನರು ಮತ್ತು ಸನ್ಯಾಸಿಗಳು ಒಟ್ಟಿಗೆ ಬರುತ್ತಿದ್ದರು ಎಂದು ವಿವರಿಸುತ್ತಾರೆ ರಾಜೇಂದ್ರ ಸಿಂಗ್. 
ಇಂದು ಅಲಹಾಬಾದ್‌ನಲ್ಲಿ ಮತ್ತೊಂದು ಮಹಾಕುಂಭ ನಡೆಯುತ್ತಿದೆ. ಆದರೆ, ಬದಲಾಗುತ್ತಿರುವ ಸಮಾಜದೊಂದಿಗೆ ದುರಾಸೆಯೂ ಹೆಚ್ಚಾಗಿ ಗಂಗಾ- ಅಮೃತದ ಮಧ್ಯದಲ್ಲಿ ವಿಷ ಸೇರುತ್ತಿದೆ. ಅಭಿವೃದ್ಧಿ ಲಾಭವನ್ನೇನೋ ಜನರು ಪಡೆದಿದ್ದಾರೆ. ಆದರೆ, ಅದರಿಂದ ಉತ್ಪತ್ತಿಯಾದ ವಿಷವನ್ನು ಮಾತ್ರ ಗಂಗೆಗೆ ಸೇರಿಸುತ್ತಿದ್ದಾರೆ. ಕೆಲವರು ಹೆಚ್ಚು ಪ್ರಯೋಜನ ಪಡೆದರೆ, ಇನ್ನು ಕೆಲವರು ವಿಷ ಪಡೆಯುತ್ತಿದ್ದಾರೆ. ಇಂಥ ದೌರ್ಜನ್ಯ ಇಲ್ಲಿಗೇ ನಿಂತಿಲ್ಲ. ಅಲಕೆಗೆ ಕಟ್ಟುತ್ತಿರುವ ಅಣೆಕಟ್ಟೆ ಸಹ ಇಂಥದ್ದೇ ಒಂದು. ಇದನ್ನು ತಡೆಯುವ ಉದ್ದೇಶದಿಂದ ದೇಶಾದ್ಯಂತದ ಸಮಾನ ಮನಸ್ಕರು, ತಜ್ಞರನ್ನೊಳಗೊಂಡ ಗಂಗಾ ಸಂಸತ್ ಕಳೆದ ಜನವರಿ 23ರಂದು ಅಸ್ತಿತ್ವಕ್ಕೆ ಬಂದಿದೆ. ಅದರಡಿಯಲ್ಲಿ ಗಂಗಾ ಸಂರಕ್ಷಣೆಗೆ ಹೋರಾಟ ಆರಂಭವಾಗಿದೆ.
ಸ್ವಾಮೀಜಿಗಳ ಸಹವರ್ತಿ, ಆಪ್ತರೂ ಆಗಿರುವ ಡಾ.ಎಸ್.ಎನ್ ಗುಪ್ತಾ ಅವರ ಪ್ರಕಾರ ಗಂಗಾ ನದಿಗೆ ಹೆಚ್ಚು ನೀರು ಹರಿದು ಬರುವ ಉತ್ತರಾಖಂಡದಲ್ಲಿ ನದಿಗೆ 268 ಕಟ್ಟೆ(ಬಾಂದಾರ)ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವಕ್ಕೆ ಈಗಾಗಲೇ ಶೇ.90 ಒಪ್ಪಿಗೆ ಕೂಡ ದೊರೆತಿದೆ. ಅಲ್ಲದೆ 8 ಕಟ್ಟೆಗಳ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಇವುಗಳಲ್ಲಿ ಬಹುತೇಕ ಕಟ್ಟೆಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 
ಅಂದರೆ, ಖಾಸಗೀಕರಣದ ತೆಕ್ಕೆಗೆ ಬರುವುದರಿಂದ ಅಮೃತದಂಥ ಗಂಗೆ ಬಿಕರಿಯಾಗುತ್ತಾಳೆ. ಇದೇ ರೀತಿ ಈಗಾಗಲೇ ಬಿಲಾಂಗಣ ನದಿಯನ್ನು ಮಾರಾಟ ಮಾಡಲಾಗಿದೆ! ಈ ಹಿನ್ನೆಲೆಯಲ್ಲಿ 2008 ಮತ್ತು 09ರ ಸಾಲಿನಲ್ಲಿ ಇದೇ ಸ್ವಾಮೀಜಿ ನೇತೃತ್ವದಲ್ಲಿ (ಆಗಿನ್ನೂ ಪ್ರೊ. ಅಗರ್‌ವಾಲ್ ಆಗಿಯೇ ಇದ್ದರು. ಸಂನ್ಯಾಸ ಸ್ವೀಕರಿಸಿರಲಿಲ್ಲ) ಜನಾಂದೋಲನ ರೂಪುಗೊಂಡಿತ್ತು. ಅದರ ಪರಿಣಾಮವಾಗಿ ಭಾಗೀರಥಿ ನದಿಯ ಮೂಲ ಗಂಗೋತ್ರಿ ಕೆಳಗಡೆ ಬರುವ ಭೈರವ ಘಾಟ್, ಲೋಹಾರಿ ನಾಗಪಾಲ್ ಮತ್ತು ಮನೇರಿ ಕಟ್ಟೆಗಳ ನಿರ್ಮಾಣವನ್ನು ರದ್ದು ಮಾಡಲಾಗಿದೆ. ಅದೇ ರೀತಿ ಗೋಮುಖದಿಂದ ಉತ್ತರಕಾಶಿವರೆಗಿನ 135 ಕಿ.ಮೀ. ಭಾಗೀರಥಿ ನದಿ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದ್ದು, ಯಾವುದೇ ನಿರ್ಮಾಣ ಕೆಲಸಗಳನ್ನು ಮಾಡದಂತೆ ಭಾರತ ಸರ್ಕಾರ ಪರಿಸರ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ. ಹೀಗಿದ್ದೂ ಅಲಕನಂದಾದಲ್ಲಿ ನಿರ್ಮಿಸಲಾಗುತ್ತಿರುವ ಶ್ರೀನಗರ ಒಡ್ಡು ಸೇರಿದಂತೆ ಇನ್ನೂ ಅನೇಕ ಒಡ್ಡುಗಳ ವಿರುದ್ಧ ಆಂದೋಲನ ನಡೆಯುತ್ತಿದೆ. 
ನದಿಗೆ ಕಟ್ಟಲು ಉದ್ದೇಶಿಸಿರುವ ಕಟ್ಟೆಗಳಿಗೆ ಸಂಬಂಧಿಸಿದಂತೆ ಪರಿಸರ ಬಾಧ್ಯತಾ ವರದಿ (ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್- ಇಐಎ) ತಯಾರಿಸಲಾಗುತ್ತದೆ. ಬಳಿಕ ಒಪ್ಪಿಗೆ ನೀಡಲಾಗುತ್ತದೆ. ಆದರೆ, ಇಂಥ ಯಾವುದೇ ಕಟ್ಟೆಗಳ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಅದರ ಜೊತೆಗೆ ಇಐಎಗೆ ಅವಕಾಶ ಕೊಡಬಾರದು. ಅಲ್ಲದೆ, ಈಗಾಗಲೇ ಇಐಎ ಆಗಿದ್ದರೆ ಅಂಥವುಗಳನ್ನು ಜನರೇ ನಿರ್ಧರಿಸಬೇಕೆಂಬುದು ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಆಗ್ರಹ. 
ಬಿ.ಕೆ. ಚತುರ್ವೇದಿ ನೇತೃತ್ವದ ಸಚಿವರ ಸಮೂಹ ಗಂಗಾ ಪ್ರವಾಹ ವರದಿಯನ್ನು 2013 ಜನವರಿ 28ರಂದು ಮಂಡಿಸಿದೆ. ಅದರಲ್ಲಿ ತೆಗೆದುಕೊಂಡ ನಿರ್ಣಯ ಪ್ರಕಾರ ನದಿಯ ನೈಸರ್ಗಿಕ ಹರಿವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒಡ್ಡುಗಳ ನಿರ್ಮಾಣ ಬಗ್ಗೆ ಸೂಚಿಸಲಾಗಿದೆ. ಇವುಗಳಲ್ಲಿ ಅಲಕನಂದಾ, ಭಾಗೀರಥಿ, ಪಿಂಡರ್, ಮಂದಾಕಿನಿ, ವಿಷ್ಣುಗಢ ಕೂಡಾ ಸೇರಿವೆ. ಪ್ರತಿ ನದಿಯು ತನ್ನದೇ ನೈಸರ್ಗಿಕ ಗುಣವನ್ನು ಹೊಂದಿದ್ದು, ತನ್ನದೇ ಆದ ಗತಿಯಲ್ಲಿ ಹೇಗೆ ಬೇಕಾದರೂ ಎಲ್ಲಿ ಬೇಕಾದರೂ ಸಾಗುತ್ತದೆ. ಆದರೆ, ಆಧುನಿಕತೆಯಿಂದಾಗಿ ಮಾನವ ಮತ್ತು ನಿಸರ್ಗದ ನಡುವಿನ ಸಂಬಂಧ ಕಳಚಿದೆ. 
ನದಿಯ ಹರಿವನ್ನು ಆಧರಿಸಿ, ಅದರ ವ್ಯಾಪ್ತಿಯನ್ನು ವಿಂಗಡಿಸಲಾಗುತ್ತದೆ. ನೆನಪಿರಲಿ ಎಲ್ಲ ಕ್ಷೇತ್ರಗಳು ಸೇರಿಯೇ ನದಿಯಾಗುತ್ತದೆ ಎಂಬುದು. ಹಾಗಾಗಿಯೇ ಕೋರ್ಟ್ ನದಿಯ 500 ಮೀಟರ್‌ವರೆಗೆ ಯಾವುದನ್ನೂ ನಿರ್ಮಾಣ ಮಾಡದಂತೆ ಆದೇಶ ನೀಡಿದೆ. ದೂರದೃಷ್ಟಿಯ ಕೊರತೆಯಿಂದಾಗಿ ನದಿಯ ಪಾತ್ರವನ್ನೇ ನಾವು ಕಿರಿದು ಮಾಡುತ್ತಾ ಹೋಗುತ್ತಿದ್ದೇವೆ. 
ಈ ಹಿನ್ನೆಲೆಯಲ್ಲಿ ಗಂಗಾ ಸಂಸತ್ ಒತ್ತಾಯಪಡಿಸುವುದೆಂದರೆ, ನಿಸರ್ಗ ಮತ್ತು ಮಾನವನ ನಡುವೆ ಸಹಚರ್ಯವನ್ನು ಮತ್ತೆ ಪ್ರತಿಷ್ಠಾಪಿಸಬೇಕು. ಗಂಗೆಯ ಪವಿತ್ರಗೊಳಿಸುವ ಸಂಬಂಧ ಆಕೆಯ ಭೂಮಿಯನ್ನು ಆಕೆಗೆ ಬಿಟ್ಟುಕೊಡಬೇಕು. ಗಂಗಾ ನದಿ ಮಾತ್ರವಲ್ಲದೆ ಯಾವುದೇ ನದಿಗೂ ಒಡ್ಡುಗಳನ್ನು ನಿರ್ಮಾಣ ಮಾಡುವುದಕ್ಕೆ ಗಂಗಾ ಸಮಿತಿ ವಿರೋಧ ವ್ಯಕ್ತಪಡಿಸುತ್ತದೆ.
ಗಂಗಾ ನದಿ ಪಾತ್ರದಲ್ಲಿ ನಿರ್ಮಿಸಲಾಗುತ್ತಿರುವ ಎಲ್ಲ ಒಡ್ಡುಗಳಿಗೆ ತಕ್ಷಣವೇ ಸರ್ಕಾರ ತಾತ್ಕಾಲಿವಾಗಿ ನಿಲ್ಲಿಸಬೇಕು. ಅಲ್ಲದೆ, ಶ್ರೀನಗರದಲ್ಲಿ ಅಲಕನಂದಾಗೆ ನಿರ್ಮಿಸಲಾಗುತ್ತಿರುವ ಕಟ್ಟೆಯನ್ನು ರದ್ದುಗೊಳಿಸಬೇಕು. ಇಷ್ಟೇ ಅಲ್ಲದೆ, ಗಂಗೆಯ ಉಗಮ ಸ್ಥಾನ ಗಂಗೋತ್ರಿಯಲ್ಲಿ ಓಕ್ ಮರಗಳನ್ನು ಬೆಳೆಸಬೇಕು. ಅಲ್ಲದೆ, ಪಂಚವಟಿ, ಆಲದ ಮರ, ಕದಂಬ ವೃಕ್ಷಗಳನ್ನು ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಕುಂಭದಿಂದಲೇ ಆಂದೋಲನ ಜನ್ಮ ತಳೆಯುವ ಅಗತ್ಯವಿದೆ. ಹಾಗಾಗಿ, ಗಂಗಾ ನದಿಯ ಉನ್ನತಿಗೆ ಸಚಿವರ ಸಮೂಹ ಮುಂದಾಗದಿದ್ದರೆ ಚಳವಳಿ ನಡೆಸಲಾಗುವುದು ಎನ್ನುತ್ತಾರೆ ಗಂಗಾ ಸಂಸತ್‌ನ ಸದಸ್ಯರು.
ಇಷ್ಟೆಲ್ಲದರ ನಡುವೆಯೂ ಸರಕಾರ ಮುಗುಮ್ಮಾಗಿ ಕುಳಿತಿದೆ. ಹಾಗೆಂದು ನಾವೂ ಸುಮ್ಮನುಳಿಯುವುದು ನ್ಯಾಯವೇ? ಒಂದೊಮ್ಮೆ ಉಳಿದರೆ ಗಂಗಾ ಮಾತೆ ನಮ್ಮನ್ನು ಕ್ಷಮಿಸಿಯಾಳೇ? ಈ ಹೋರಾಟಕ್ಕೆ ನಿಮ್ಮದೂ ಬೆಂಬಲ ಇದ್ದರೆ rajendra@tarunbharatsangh.orgಕ್ಕೆ ಮಿಂಚಂಚೆ ಕಳುಹಿಸಲು ಮರೆಯದಿರಿ.

-ರಾಧಾಕೃಷ್ಣ ಎಸ್. ಭಡ್ತಿ

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website