ವೃದ್ಧ ಭಾರತ



ನಮ್ಮ ಭಾರ ಹೊತ್ತವರು ನಮಗೆ ಭಾರವೇ?
ಉದ್ಯೋಗ, ನವಜೀವನದ ನಿರೀಕ್ಷೆಯಲ್ಲಿ ರಾಜಧಾನಿ ಸೇರಿರುವ ಮಕ್ಕಳು. ಹಳ್ಳಿಯಲ್ಲೇ ಉಳಿದು ವರ್ಷಕ್ಕೊಮ್ಮೆ ಮಕ್ಕಳ ಆಗಮನ ಎದುರು ನೋಡುತ್ತಾ ದಿನ ಎಣಿಸುತ್ತಿರುವ ವೃದ್ಧರು. ರಾಜಧಾನಿಯಲ್ಲಿದ್ದರೂ, ಬೇರೆ ಮನೆ ಮಾಡಿ ತಮ್ಮ ಸಂಸಾರದಲ್ಲಿ ಮಗ್ನರಾಗಿರುವ ಮಕ್ಕಳು. ಮನೆ ಮುಂದೆ ಅಪರಿಚಿತರು ಬಂದು ಕ್ಷಣ ನಿಂತರೂ ಭೀತಿಯಿಂದ, ಅಸುರಕ್ಷಿತ ಭಾವನೆಯಿಂದ ತಲ್ಲಣಿಸುವ ಪ್ರಾಯದ ಪೋಷಕರು. ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿರುವ ಜೀವಗಳು. ಇದು ಇಂದಿನ ಭಾರತದ ಚಿತ್ರಣ.
ಆರೋಗ್ಯ ಸೇವೆಗಳ ಹೆಚ್ಚಳದಿಂದಾಗಿ, ಮರಣಗಳ ಅನುಪಾತ ಕಡಿಮೆಯಾಗಿದೆ. ಹೀಗಾಗಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿಯೇ. ಆದರೆ ವೃದ್ಧರನ್ನು ಅನುಪಯುಕ್ತರೆಂದು ಪರಿಗಣಿಸಿ ಮೂಲೆಪಾಲು ಮಾಡುವ ಸಂಸ್ಕೃತಿಯೂ ಹೆಚ್ಚುತ್ತಿದೆ ಎಂಬುದು ಆತಂಕದ ಸಂಗತಿ. ಒಂದು ಸಮೀಕ್ಷೆಯಂತೆ, ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 2010ರಲ್ಲಿ ಒಟ್ಟು ಜನಸಂಖ್ಯೆಯ ಶೇ.8ರಷ್ಟಿತ್ತು. 2050ರಲ್ಲಿ ಅದು ಶೇ.19 ಹೆಚ್ಚಾಗಲಿದೆ. ಸಂಖ್ಯೆ 320 ದಶಲಕ್ಷ ತಲುಪುವ ಸಾಧ್ಯತೆಯಿದೆ. ಇದು ವಿಶ್ವಸಂಸ್ಥೆಯ ಲೆಕ್ಕಾಚಾರ.
ಭಾರತದಲ್ಲಿ ಈಗ 81 ದಶಲಕ್ಷ ವೃದ್ಧರಿದ್ದಾರೆ. ಅದರಲ್ಲಿ ದೆಹಲಿಯಲ್ಲಿಯೇ 11 ಲಕ್ಷ ಜನರಿದ್ದಾರಂತೆ. ಶೇ.40 ರಷ್ಟು ಹಿರಿಯರು ತಮ್ಮ ಕುಟುಂಬಗಳಿಂದ ದೂರ ವಾಸಿಸುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕೇವಲ ನಾಲ್ಕು ಸರ್ಕಾರಿ ವೃದ್ಧಾಶ್ರಮಗಳಿವೆ. ಉಳಿದ 31 ವೃದ್ಧಾಶ್ರಮಗಳನ್ನು ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು ನಡೆಸುತ್ತಿವೆ. ಇಂದು ನಗರಗಳಲ್ಲಿ ಪ್ರತಿ 10 ಮಂದಿ ವೃದ್ಧ ದಂಪತಿಗಳಿದ್ದರೆ ಅವರಲ್ಲಿ 6 ದಂಪತಿ ಮಕ್ಕಳಿಂದ ಬಲವಂತವಾಗಿ ಹೊರಕಳಿಸಲ್ಪಟ್ಟೋ ತಾವೇ ಬಯಸಿಯೋ ದೂರ ಇದ್ದಾರೆ ಎಂದರೆ ನಂಬುತ್ತೀರಾ? ಇವರಲ್ಲಿ ವೃದ್ಧಾಶ್ರಮಕ್ಕೆ ಹೋಗಬಲ್ಲ ಆರ್ಥಿಕ ಬಲವುಳ್ಳವರು ಕೆಲವೇ ಮಂದಿ. ಉಳಿದವರು ಇತರರ ಹಂಗಿನಲ್ಲಿ ಹೇಗೋ ದಿನ ದೂಡಬೇಕಾಗಿದೆ. ಮಕ್ಕಳಿಂದ ಪೋಷಕರಿಗೆ ಕಿರುಕುಳ, ಬಂಧಿಸಿ ಚಿತ್ರಹಿಂಸೆ ನೀಡುವುದು, ಬಲವಂತವಾಗಿ ಅವರ ಆಸ್ತಿಯನ್ನು ಪಡೆದುಕೊಳ್ಳುವುದು ಮುಂತಾದ ಪ್ರಕರಣಗಳು ಹೆಚ್ಚಾಗುತ್ತಿದೆ. ಅನೇಕರು ಮನೆಯ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿರುತ್ತಾರೆ.
ತಂದೆತಾಯಿಗಳೇ ದೇವರೆಂದು ಭಾವಿಸಿಕೊಂಡು ಬಂದಂತಹ ಭಾರತೀಯ ಸಂಸ್ಕೃತಿಯಲ್ಲಿ ಇಂಥ ಪಲ್ಲಟ ಯಾಕೆ ತಲೆದೋರಿತು? ಮಕ್ಕಳ ವಿದ್ಯಾಭ್ಯಾಸದಿಂದ, ಉದ್ಯೋಗ ದೊರೆಯುವರೆಗೂ, ಸಂಪೂರ್ಣ ಬೆಳವಣಿಗೆಯ ಜವಾಬ್ದಾರಿಯನ್ನು ಹೊರುವ ಪೋಷಕರು ವಯಸ್ಸಾದೊಡನೆ ತಮ್ಮ ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗುವುದೇಕೆ? ಇದಕ್ಕೆ ಯುವಜನತೆಯ ಮನೋಭೂಮಿಕೆಯಲ್ಲಿ ಆಗಿರುವ ಸ್ವಾರ್ಥಮಯ ಪಲ್ಲಟ, ಆಧುನಿಕ ಜೀವನಶೈಲಿಗಳೇ ಕಾರಣ ಎನ್ನಬಹುದು.
ವಯೋವೃದ್ಧರ ಜೀವನಾಂಶ ಮತ್ತು ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಹಿರಿಯ ನಾಗರಿಕರ ಹಕ್ಕು ವಿಧಿಯಲ್ಲಿ 'ಯಾವ ಮಕ್ಕಳು ತಮ್ಮ ಪೋಷಕರಿಗೆ ಕಿರುಕುಳ ನೀಡುವ ಮೂಲಕ ಹೊರಗಟ್ಟುತ್ತಾರೋ ಅಂತಹ ಮಕ್ಕಳಿಗೆ ಮೂರು ತಿಂಗಳ ಸೆರೆಮನೆವಾಸ ಅಥವಾ ದಂಡ ವಿಧಿಸುವ' ಬಗ್ಗೆ ರಾಷ್ಟ್ರಪತಿ ಒಪ್ಪಿಗೆ ನೀಡಿದ್ದಾರೆ.
ಇದು ತಿಳಿದಿರಲಿ
ವೃದ್ಧರು ತಮ್ಮ ಕೊನೆಯ ದಿನಗಳನ್ನು ಮಕ್ಕಳೊಂದಿಗೆ ಕಳೆಯಲು ಇಷ್ಟಪಡುತ್ತಾರೆ. ಅವರೊಂದಿಗೆ ಮಾತನಾಡಲು, ತಮ್ಮ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತಾರೆ. ಮಕ್ಕಳ ಯಶಸ್ಸಿಗೆ ಆಸರೆಯಾಗಲು ಬಯಸುತ್ತಾರೆ ಹೊರತು ಮಕ್ಕಳಿಗೆ ಭಾರವಾಗಿರಲು ಎಂದೂ ಇಷ್ಟಪಡುವುದಿಲ್ಲ. ವಯಸ್ಸು ಆಗುತ್ತಿದ್ದಂತೆ ದೇಹದ ಆರೋಗ್ಯ ನಿಯಂತ್ರಣ ತಪ್ಪುತ್ತದೆ. ಇದನ್ನು ಕುಟುಂಬದವರು ಗುರುತಿಸಬೇಕು. ಆಗ ವೃದ್ಧರನ್ನು ನಾವು ಮಕ್ಕಳನ್ನು ಮಾಡಿದಂತೆಯೇ ಜೋಪಾನ ಮಾಡಬೇಕು ಹೊರತು ದೂರೀಕರಿಸುವುದಲ್ಲ. ವಯಸ್ಸಾದ ಪೋಷಕರನ್ನು ದೂರ ತಳ್ಳುವ ಮಕ್ಕಳು ತಮಗೂ ಒಂದು ದಿನ ವಯಸ್ಸಾಗುವುದು ಎನ್ನುವುದನ್ನು ಮರೆತುಬಿಡುತ್ತಾರೆ!
ಮುಖ ನೋಡಲಾರೆ
ನನಗೆ ನಾಲ್ಕು ಮಕ್ಕಳು. ನನ್ನ ಜೀವನವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಬೆಳವಣಿಗೆಗಾಗಿ ಮುಡಿಪಿಟ್ಟೆ. ನಾಲ್ವರೂ ವಿದ್ಯಾವಂತರಾಗಿ ಉತ್ತಮ ನೆಲೆಯನ್ನೇ ಕಂಡುಕೊಂಡಿದ್ದಾರೆ. ಒಬ್ಬ ಮಗ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಯಾರೊಬ್ಬರೂ ನನ್ನ ಜವಾಬ್ದಾರಿ ತಗೆದುಕೊಂಡಿಲ್ಲ. ಪತ್ನಿಯ ನಿಧನದ ನಂತರ ಸಂಬಂಧಿಕರ ನೆರವಿನಿಂದ ವೃದ್ಧಾಶ್ರಮ ಸೇರಿಕೊಂಡೆ. ಒಮ್ಮೆಯೂ ತಂದೆಯನ್ನು ನೋಡಲು ಬಂದಿಲ್ಲ, ಆಶ್ರಮದ ಶುಲ್ಕ ಕಟ್ಟಿಲ್ಲ. ಸಂಬಂಧಿಕರೇ ಅದನ್ನೂ ಕೊಡುತ್ತಿದ್ದಾರೆ. ಮಕ್ಕಳ ಮುಖವನ್ನೂ ನೋಡಲು ಇಷ್ಟವಿಲ್ಲ.   - ಬಸವೇಗೌಡ, ವೃದ್ಧಾಶ್ರಮ ವಾಸಿ
- ಪಾವನ ಎಚ್.ಎಸ್
  ಕೃಪೆ: ಕನ್ನಡಪ್ರಭ 
.

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website