ಸಿದ್ದರಾಮಯ್ಯನವರೇ ನಮಗಾಗಿ ಈ ಪುಸ್ತಕ ಓದುತ್ತೀರಾ?


'ಸಿದ್ದರಾಮಯ್ಯನವರೇ, ಸದಾ ಫಾರಿನ್ ಟೂರ್ ಮಾಡಿ' ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಕಳೆದ ವಾರದ ಅಂಕಣದಲ್ಲಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಹೆಸರನ್ನು ಪ್ರಸ್ತಾಪಿಸಿದ್ದೆನಷ್ಟೆ. ಈ ಹೆಸರನ್ನು ನೀವು ಕೇಳುವ ಸಾಧ್ಯತೆ ತೀರಾ ಕಡಿಮೆ. ಈ ಹೆಸರು ನಿಮ್ಮಲ್ಲಿ ಯಾವುದೇ ಭಾವನೆಯನ್ನು ಮೂಡಿಸಲಾರದು. ಹೆಚ್ಚೆಂದರೆ ಇದು ಒಬ್ಬ ಮುಸ್ಲಿಂ ಅಥವಾ ಅರಬ್ ವ್ಯಕ್ತಿಯ ಹೆಸರು ಎಂದಷ್ಟೇ ನೀವು ಭಾವಿಸಬಹುದು.
ಅದೇ 'ದುಬೈ' ಎಂದು ಹೇಳಿದರೆ, ನಿಮ್ಮ ಮನಸ್ಸಿನಲ್ಲಿ ಹತ್ತಾರು ಚಿತ್ರಣಗಳು ಮೂಡೀತು. ಆ ಹೆಸರನ್ನು ಯಾರು ಕೇಳಿಲ್ಲ ಹೇಳಿ. ದುಬೈಗೆ ಹೋಗಿ ಬಂದವರು ಸಹ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೆಸರನ್ನು ಕೇಳಿರುವ ಸಾಧ್ಯತೆ ಅಷ್ಟಕಷ್ಟೆ. ಆದರೆ ಆಧುನಿಕ ದುಬೈ ಎಂಬ ಮಾಯಾನಗರಿಯ ನಿರ್ಮಾತೃ ಇದೇ ವ್ಯಕ್ತಿ ಎಂದರೆ ಅಚ್ಚರಿಯಾದೀತು. ಒಬ್ಬ ವ್ಯಕ್ತಿಯ ದೂರದರ್ಶಿತ್ವ ಹಾಗೂ ಧೀಮಂತನಾಯಕತ್ವ ಹೇಗೆ ಒಂದು ನಗರವನ್ನು ಜಗತ್ತಿನ ಭೂಪಟದಲ್ಲಿ ಪ್ರಮುಖವಾಗಿ ಸ್ಥಾಪಿಸಬಹುದು ಎಂಬುದಕ್ಕೆ ಮಕ್ತೌಮ್ ಜೀವಂತ ನಿದರ್ಶನ.
ನಾನು ಇತ್ತೀಚೆಗೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಬರೆದ My vision: Challenges in the Race for Excellence ಎಂಬ ಪುಸ್ತಕವನ್ನು ಓದುತ್ತಿದ್ದೆ. ದುಬೈ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಈ ಕೃತಿಯ ಮೈದಡವುತ್ತಿದ್ದಾಗ ಒಂದು ವಾಕ್ಯವನ್ನು ಗಮನಿಸಿದೆ-'ಆಫ್ರಿಕಾದ ಕಾಡಿನಲ್ಲಿರುವ ಕೃಷ್ಣಮೃಗ ಸಿಂಹದ ಕೈಯಿಂದ ತಪ್ಪಿಸಿಕೊಳ್ಳಲು ವೇಗದಿಂದ ಓಡುವುದು ಹೇಗೆ ಎಂದು ಪ್ರತಿದಿನವೂ ಯೋಚಿಸುತ್ತಿರುತ್ತದೆ. ತನಗಿಂತ ಕೃಷ್ಣಮೃಗ ವೇಗವಾಗಿ ಓಡುವುದನ್ನು ರೂಢಿಸಿಕೊಂಡರೆ ತಾನು ಉಪವಾಸ ಬಿದ್ದು ಸಾಯಬೇಕಾಗುತ್ತದೆಂದು ಸಿಂಹ ಸದಾ ಯೋಚಿಸುತ್ತಿರುತ್ತದೆ. ನೀವು ಕೃಷ್ಣ ಮೃಗವೋ, ಸಿಂಹವೋ ಗೊತ್ತಿಲ್ಲ. ಆದರೆ ನಮ್ಮ ನಮ್ಮ ಉಳಿವಿಗಾಗಿ ಬೇರೆಯವರಿಗಿಂತ ವೇಗವಾಗಿ ಓಡುವುದು ಮಾತ್ರ ಅನಿವಾರ್ಯ. ಇದನ್ನು ನಾವು ದುಬೈಯಲ್ಲಿ ಅಕ್ಷರಶಃ ಪ್ರತಿಕ್ಷಣವೂ ಮಾಡುತ್ತಿದ್ದೇನೆ. ಇಂದು ದುಬೈ ವಿಶ್ವದಲ್ಲಿಯೇ ಒಂದು ಅದ್ಭುತ ನಗರವಾಗಿ, ಆರ್ಥಿಕ ಶಕ್ತಿಯಾಗಿ ಬೆಳೆದಿದ್ದರೆ, ಅದಕ್ಕೆ ಈ ಯೋಚನೆಯೂ ಒಂದು ಪ್ರಮುಖ ಕಾರಣ.'
ಮಕ್ತೌಮ್ ಆಗಲೇ ನನ್ನ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದರು. ವಿಮಾನವೇರಿದ ಕೂಡಲೇ ಆ ಪುಸ್ತಕವನ್ನು ಎದೆಗವಚಿಕೊಂಡು ಓದಲಾರಂಭಿಸಿದೆ. ಬೆಂಗಳೂರು ಬರುವ ಹೊತ್ತಿಗೆ ಮೈ ಮನಗಳಲ್ಲಿ ಮಕ್ತೌಮ್ ಆವರಿಸಿಕೊಂಡಿದ್ದರು. ದುಬೈಗಿಂತ ಎತ್ತರವಾಗಿ ಅವರ ವ್ಯಕ್ತಿತ್ವ, ಚಿಂತನೆ ನನ್ನಲ್ಲಿ ಬೆಳೆದು ನಿಂತಿತ್ತು. ಆ ಬರಡು ಮರಳುಗಾಡಿನಲ್ಲಿ, ಕುಡಿಯಲು ಒಂದು ಹನಿ ನೀರು ಸಹ ಇಲ್ಲದ ಆ ಮರುಭೂಮಿಯಲ್ಲಿ, ದುಬೈ ಎಂಬ ನಂದನವನವನ್ನು ಕಟ್ಟಿದ ಸಾಹಸಗಾಥೆಗೆ ನಿಜಕ್ಕೂ ನಾನು ಮರುಳಾಗಿದ್ದೆ.  
'ಸಮಾನ ಅವಕಾಶಗಳಿವೆ. ಈ ಪೈಪೋಟಿಯಲ್ಲಿ ಎಲ್ಲರಿಗೂ ನಂಬರ್ ಒನ್ ಆಗಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಗೆಲ್ಲುವ ಛಾನ್ಸ್ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳದ ದೇಶಗಳು ನಿಜವಾಗಿಯೂ ನತದೃಷ್ಟರಂತೆ ನನಗೆ ಭಾಸವಾಗುತ್ತದೆ. ಇದನ್ನು ನಮ್ಮ ಅನುಭವದ ಮೂಸೆಯಲ್ಲಿ ಹೇಳುತ್ತಿದ್ದೇನೆ. ನೀವು ತಡವಾಗಿ ಆರಂಭಿಸಿದರೂ ಗೆಲ್ಲುವ ಸಾಧ್ಯತೆ ಇದ್ದೇ ಇದೆ ಎಂಬುದಕ್ಕೆ ಆಮೆ, ಮೊಲದ ಕತೆಯೇ ಸಾಕ್ಷಿ. ಆದರೆ ನೀವು ಓಡುವುದೇ ಇಲ್ಲ ಎಂದು ನಿರ್ಧರಿಸಿದರೆ ಆಗ ಯಾರೂ ನಿಮ್ಮನ್ನು ಗೆಲ್ಲಿಸಲಾರರು. ಈ ಸ್ಥಿತಿಯಲ್ಲಿ ಹಲವು ದೇಶಗಳು ಇರುವುದನ್ನು ಸಹ ಗಮನಿಸಿದ್ದೇನೆ. ಅಭಿವೃದ್ಧಿ ಅಂದ್ರೆ ಕೆಲವೇ ಕೆಲವು ದೇಶಗಳು ಮಾತ್ರ ಪ್ರಗತಿ ಸಾಧಿಸುವುದಿಲ್ಲ. ಎಲ್ಲರೂ ಸಮಾನಾಂತರವಾಗಿ ಬೆಳೆಯುವುದು ವಿಶ್ವದ ಕ್ಷೇಮಾಭಿವೃದ್ಧಿಯಿಂದ ಒಳ್ಳೆಯದು.' ಎಂಬ ಮಕ್ತೌಮ್ ಮಾತುಗಳು ಬೆಳಕಿನ ಬೀಜ ಮಂತ್ರದಂತೆ ಗೋಚರಿಸುತ್ತವೆ.
ಈ ಸಂದರ್ಭದಲ್ಲಿ ಮಕ್ತೌಮ್ ದುಬೈ ಉದಾಹರಣೆಯನ್ನೇ ಕೊಡುತ್ತಾರೆ.
- ದುಬೈಯಲ್ಲಿ ನಾವು ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುತ್ತೇವೆಂದು ಹದಿನೈದು ವರ್ಷಗಳ ಹಿಂದೆ ಹೇಳಿದಾಗ ಅನೇಕರು ವ್ಯಂಗ್ಯ ಮಾಡಿದ್ದರು. ವರ್ಷಕ್ಕೆ ಐವತ್ತು ಲಕ್ಷ ಜನ ಪ್ರವಾಸಿಗರು ಬರುವಂತೆ ಮಾಡುತ್ತೇವೆಂದು ಹೇಳಿದಾಗ ನಮ್ಮನ್ನು ಮತ್ತಷ್ಟು ವ್ಯಂಗ್ಯ ಮಾಡಿದ್ದರು. ಇವರು ನಿಜಕ್ಕೂ 'ಮರುಳು'ಗಾಡಿನಲ್ಲಿದ್ದಾರೆಂದು ಕುಹಕವಾಡಿದ್ದರು. 2010ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಎಷ್ಟು ಗೊತ್ತಾ? ಒಂದು ಕೋಟಿ ಐವತ್ತು ಲಕ್ಷ. ಈಗ ಅದೇ ಜನ ದುಬೈ ಪರವಾಗಿ ಮಾತಾಡುತ್ತಾರೆ. ದುಬೈಗೆ ಎರಡು ಕೋಟಿ ಪ್ರವಾಸಿಗರು ಬರುತ್ತಾರೆಂದು ಪ್ರಚಾರ ಮಾಡುತ್ತಾರೆ. ದುಬೈ ಪ್ರಾಮಿಸ್ ಮಾಡಿದರೆ ಮಿಸ್ ಮಾಡುವುದಿಲ್ಲ.
- ಕೆಲವು ವರ್ಷಗಳ ಹಿಂದಿನವರೆಗೆ, ಬಾಹ್ಯಾಕಾಶದಿಂದ ಕೆಳಗೆ ನೋಡಿದರೆ ಚೀನಾದ ಮಹಾಗೋಡೆ ಹಾಗೂ ಅಮೆರಿಕದ ಹೂವರ್ ಡ್ಯಾಮ್ ಕಾಣುತ್ತಿತ್ತು. ನಾವು ಸಹ ಇಂಥದೇ ಕಟ್ಟಡಗಳನ್ನು ಕಟ್ಟುತ್ತೇವೆ, ದುಬೈಯನ್ನು ಸಹ ಬಾಹ್ಯಾಕಾಶದಿಂದ ನೋಡಬಹುದು. ನಾವು ಸಹ ಇಡೀ ವಿಶ್ವವೇ ಬೆರಗಾಗುವಂಥ ಕಟ್ಟಡಗಳನ್ನು ಕಟ್ಟುತ್ತೇವೆ, ನೋಡ್ತಾ ಇರಿ ಅಂತ ಹೇಳಿದರೆ, ಯಾರು ಬೇಕಾದರೂ ಕನಸು ಕಾಣಬಹುದು, ಅಂದ್ರೆ ಹಗಲುಗನಸನ್ನು ಸಹ ಕಾಣಬಹುದು ಎಂದು ಲೇವಡಿ ಮಾಡಿದ್ದರು. ಆದರೆ ನಾವು ವಿಶ್ವದ ಪ್ರಪ್ರಥಮ ಬೃಹತ್ ಮಾನವ ನಿರ್ಮಿತ (ಚೆಬೆಲ್ ಅಲಿ) ಬಂದರನ್ನು ನಿರ್ಮಿಸಿದಾಗ ಜನ ಕಕ್ಕಾಬಿಕ್ಕಿಯಾದರು. ಈ ಬಂದರನ್ನು ಬಾಹ್ಯಾಕಾಶದಿಂದ ನೋಡಬಹುದು. ಅದಾದ ಬಳಿಕ ನಾವು ಕೃತಕ ಅಥವಾ ಮಾನವ ನಿರ್ಮಿತ ದ್ವೀಪ-'ದಿ ಪಾಮ್ ಐಲ್ಯಾಂಡ್ಸ್‌'ನ್ನು ಸೃಷ್ಟಿಸಿದೆವು. ಇದು ವಿಶ್ವದ ಅತ್ಯಂತ ದೊಡ್ಡ ಕೃತಕ ದ್ವೀಪ ಬಡಾವಣೆಯಾಗಿದೆ. ಅದಾದ ತರುವಾಯ ನಾವು ನಿರ್ಮಿಸಿದ ಬುರ್ಜ್ ಖಲಿಫಾ ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಕಟ್ಟಡ. ಈಗ ನಾವೇನೇ ಮಾಡಿದರೂ ಅದು ಒಂದೋ ಜಗತ್ತಿನ ಮೊದಲನೆಯದ್ದಾಗಿರುತ್ತದೆ. ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದಾಗಿರುತ್ತದೆ ಇಲ್ಲವೇ ಉತ್ಕೃಷ್ಟವಾಗಿರುತ್ತದೆ. ಸಾಧಾರಣ, ಸಾಮಾನ್ಯ ಸಂಗತಿಗಳಲ್ಲಿ ನಮಗೆ ಆಸಕ್ತಿಯೇ ಇಲ್ಲ. ಜಗತ್ತಿನ ಹಲವೆಡೆ ಸುಂದರವಾದ ಸಮುದ್ರ ಕಿನಾರೆಯನ್ನು ಬಂದರು ನಿರ್ಮಾಣ ಹಾಗೂ ಇನ್ನಿತರ ಕೈಗಾರಿಕಾ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ನೋಡಿರಬಹುದು. ನಾವು ಅರಬರಿದ್ದೇವಲ್ಲ, ನಮ್ಮ ಮಕ್ಕಳು ಶುದ್ಧ ಹಾಗೂ ಸ್ವಚ್ಛಂದ ಪರಿಸರದಲ್ಲಿ ಬೆಳೆಯಬೇಕೆಂದು ಆಸೆಪಡುತ್ತೇವೆ. ನಮ್ಮ ಬಗ್ಗೆ ಮುಂದಿನ ತಲೆಮಾರಿನವರು ಅಭಿಮಾನ ಪಡಲಾರಂಭಿಸಿದರೆ, ನಾವು ನಿರ್ಮಿಸುವ ಪ್ರತಿಯೊಂದು ಕಟ್ಟಡ, ಬಡಾವಣೆ ಅದ್ಭುತವಾಗಿರಬೇಕು. ಪಾಮ್ ಹಾಗೂ ದಿ ವರ್ಲ್ಡ್ ಐಲ್ಯಾಂಡ್‌ಗಳು ಸಂಪೂರ್ಣವಾದರೆ, ಸಾವಿರಾರು ಕಿ.ಮಿ. ಬೀಚ್ ಇರುವ ವಾಸಯೋಗ್ಯ ಬಡಾವಣೆಯೆಂಬ ಅಭಿದಾನಕ್ಕೆ ಪಾತ್ರವಾಗುತ್ತದೆ. ಇಂಥದೊಂದು ಯೋಜನೆ ಜಗತ್ತಿನಲ್ಲೆಲ್ಲೂ ಇಲ್ಲ.
- ಅಂತಾರಾಷ್ಟ್ರೀಯ ರೇಸ್ ಪಂದ್ಯಗಳಲ್ಲಿ ಓಡುವ ಕುದುರೆಗಳನ್ನು ಯುರೋಪಿನ ದೇಶಗಳಲ್ಲಿ ತರಬೇತುಗೊಳಿಸುವ ಸಂಗತಿ ಗೊತ್ತು ತಾನೆ? ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದು. ರೇಸ್ ಕುದುರೆಗಳನ್ನೇಕೆ ಯುರೋಪಿನಲ್ಲಿ ತರಬೇತಿಗೊಳಿಸಿ, ವಿಮಾನದಲ್ಲೇಕೆ ತರಬೇಕು? ನಾವೇ ಇಲ್ಲಿ ಅವುಗಳನ್ನು ತರಬೇತುಗೊಳಿಸಬಹುದಲ್ಲ? ಅದ್ಯಾವ ಕೆಲಸ? ಇನ್ನು ಮುಂದೆ ನಾವೇ ಆ ಕೆಲಸವನ್ನು ಮಾಡುತ್ತೇವೆ ಅಂದಾಗ ರೇಸು ಆಡುವವರು, ವ್ಯವಸ್ಥಾಪಕರು ಪ್ರತಿಭಟಿಸಿದ್ದರು. 'ಕುದುರೆಗಳನ್ನು ತರಬೇತಿಗೊಳಿಸುವುದೆಂದರೆ ಶಾಪಿಂಗ್ ಮಾಲ್‌ಗಳನ್ನು ಕಟ್ಟಿದಂತಲ್ಲ, ಎತ್ತರದ ಇಮಾರತುಗಳನ್ನು ನಿರ್ಮಿಸಿದಂತಲ್ಲ. ಕುದುರೆಗಳ ತರಬೇತಿಗೆ ಅನುಕೂಲಕರ ವಾತಾವರಣ, ಪರಿಸರ, ಹಸುರು ಬೇಕು. ಅದ್ಯಾವವೂ ದುಬೈನಲ್ಲಿ ಇಲ್ಲ. ಹೀಗಾಗಿ ದುಬೈನಲ್ಲಿ ತರಬೇತಿಗೊಳಿಸಿದ ಕುದುರೆಗಳು ರೇಸಿನಲ್ಲಿ ಗೆಲ್ಲುವುದಿಲ್ಲ' ಎಂದು ಎಲ್ಲರೂ ಹೆದರಿಸಿದರು. ನನಗೆ ಇವರೆಲ್ಲರ ಮನದಲ್ಲಿ ನಂಬಿಕೆ ಇರಲಿಲ್ಲ ಎನ್ನುವುದಕ್ಕಿಂತ ದುಬೈ ಅಂತಃಸತ್ವದಲ್ಲಿ ಹೆಚ್ಚು ನಂಬಿಕೆಯಿತ್ತು. ನಮ್ಮ ಸಾಮರ್ಥ್ಯ, ಪರಿಣತಿ, ಛಾತಿ, ಕತೃತ್ವಶಕ್ತಿ ಬಗ್ಗೆ ನಂಬಿಕೆಯಿತ್ತು. ಎರಡು ವರ್ಷಗಳಲ್ಲಿ ನಾವು 'ಅಸಾಮಾನ್ಯ' ಸಂಗತಿಯನ್ನು ಸಾಧ್ಯ ಮಾಡಿ ತೋರಿಸಿದ್ದೆವು. ಈಗ ಜಗತ್ತಿನ ಅತ್ಯುತ್ತಮ, ಪಂದ್ಯ ಗೆಲ್ಲುವ ಕುದುರೆಗಳನ್ನು ದುಬೈಯಲ್ಲಿ ತರಬೇತುಗೊಳಿಸಲಾಗುತ್ತದೆ. ಯುರೋಪಿನಲ್ಲಿ ನಡೆಯುವ ರೇಸ್‌ಗಳಿಗೆ ಇದೇ ದುಬೈಯಿಂದ ಕುದುರೆಗಳನ್ನು ಕಳಿಸುತ್ತೇವೆ. ನಾವು ತರಬೇತುಗೊಳಿಸಿದ ಕುದುರೆಗಳಿಗೆ ಜಗತ್ತಿನೆಲ್ಲೆಡೆ ನಡೆಯುವ ರೇಸ್‌ಗಳಲ್ಲಿ ಭಾರೀ ಬೇಡಿಕೆಯಿದೆ.
- ಬಹುತೇಕ ಜನ ಭಾವಿಸಿದ್ದರು, ದುಬೈ ಇಂಟರ್‌ನೆಟ್, ಟೆಕ್ನಾಲಜಿ ಹಾಗೂ ಮೀಡಿಯಾ ಪ್ರಾಜೆಕ್ಟ್ ಗೋತಾ ಹೊಡೆಯುತ್ತದೆ ಎಂದು. ದುಸ್ಸ್ಸಾಹಸಕ್ಕೆ ಕೈ ಹಾಕುವುದು ಬೇಡ ಎಂದು ಅನೇಕರು ಎಚ್ಚರಿಸಿದರು. ಆದರೆ ಇಂಥದೊಂದು ಯೋಜನೆಯಲ್ಲಿ ಯಶಸ್ಸು ಸಾಧಿಸದೇ ಮಹತ್ತರ ಸಾಧನೆ ಮಾಡುವುದು ಸಾಧ್ಯವೇ ಇರಲಿಲ್ಲ. ನನಗೆ ಬೇರೆಯವರ ಮಾತುಗಳಿಗಿಂತ ಇಂಟರ್‌ನೆಟ್ ಹಾಗೂ ಅದರ ಪ್ರಭಾವದ ಮೇಲೆ ನಂಬಿಕೆಯಿತ್ತು. ಜಗತ್ತಿನ ಸುಮಾರು 700 ಕಂಪನಿಗಳು ದುಬೈ ಇಂಟರ್‌ನೆಟ್ ಸಿಟಿಯಲ್ಲಿ ತಮ್ಮ ಶಾಖೆಗಳನ್ನು ತೆರೆದಿವೆ. ಈ ಪ್ರಾಜೆಕ್ಟ್‌ನಲ್ಲಿ ಯಶಸ್ಸು ಕಾಣದೇ, ಇದಕ್ಕಿಂತ ಮುಂದಿನ ಪ್ರಾಜೆಕ್ಟ್‌ಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಈಗ ನಮಗೆ 'ಇಂಟರ್‌ನೆಟ್‌ಸಿಟಿ' ಹಲವು ಸಾಧ್ಯತೆಗಳನ್ನು ಸಾಕಾರಗೊಳಿಸುವ ಅವಕಾಶವನ್ನು ತೆರೆದಿಟ್ಟಿದೆ. ಈ ವಿಷಯದಲ್ಲಿ ನಮ್ಮನ್ನು ಸರಿಗಟ್ಟುವವರು ಯಾರೂ ಇಲ್ಲ.
ಇಂದು ದುಬೈ ಹೀಗಾಗಿದ್ದರೆ ಅದಕ್ಕೆ ಅದು ತೆಗೆದುಕೊಂಡ ರಿಸ್ಕ್ ಹಾಗೂ ಆ ರಿಸ್ಕ್‌ಗಳನ್ನು ದಾಟಿ ನಡೆದ ದಾಷ್ಟ್ಯವೇ ಕಾರಣ. ಹೀಗಾಗಿ ನಾವು ಇಂದು ಜಗತ್ತಿನ ಮಾದರಿ ದೇಶವಾಗಿದ್ದೇವೆ. ಇಂದು ತೀರಾ ಹಿಂದುಳಿದ ಪ್ರದೇಶ ಇನ್ನು ಇಪ್ಪತ್ತು ವರ್ಷಗಳಲ್ಲಿ ದುಬೈಯಂತಾಗಲು ಸಾಧ್ಯ. ಅದಕ್ಕೆ ನಿದರ್ಶನ ದುಬೈ. ಇದು ಸಾಧ್ಯವಾಗದ ಮಾತೇನೂ ಅಲ್ಲ. ಏನೂ ಇಲ್ಲದ ದುಬೈಯಿಂದ ಇವೆಲ್ಲ ಸಾಧ್ಯವಾಗಿದ್ದರೆ, ನೈಸರ್ಗಿಕ ಸಂಪನ್ಮೂಲವಿರುವ ದೇಶಗಳಿಗೆ ಯಾಕೆ ಸಾಧ್ಯವಾಗೊಲ್ಲ ಹೇಳಿ.
ಅಂತಾರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್.
ಈ ಪುಸ್ತಕ ಓದಿ ಮುಗಿಸಿದ ಬಳಿಕ, 'ಇದನ್ನು ಸವುಡು ಮಾಡಿಕೊಂಡು ದಯವಿಟ್ಟು ಓದಿ. ಖಂಡಿತವಾಗಿಯೂ ಇದರಿಂದ ನೀವು ಪ್ರಭಾವಿತರಾಗುತ್ತೀರಿ. ಅದರ ಪ್ರಯೋಜನ ರಾಜ್ಯಕ್ಕಾದೀತು. ಪ್ಲೀಸ್ ಓದಿ' ಎಂದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪುಸ್ತಕ ಕೊಟ್ಟು ಬರಲೇ ಎಂದು ಯೋಚಿಸಿ, ಅವರ ಮನೆ ಮುಂದೆ ಸದಾ ನೆರೆದಿರುವ ಜನರನ್ನು ನೆನೆದು ಸುಮ್ಮನಾದೆ.
ಅದೇನೇ ಇರಲಿ, ಸಿದ್ದರಾಮಯ್ಯನವರು ಪುರುಸೊತ್ತು ಮಾಡಿಕೊಂಡು ಈ ಪುಸ್ತಕ ಓದಬೇಕು. ಅದರ ಸಾರವನ್ನಷ್ಟೇ ಹೀರಿ ಅವರಿಗಾಗಿ ಇವನ್ನೆಲ್ಲ ಕೊಟ್ಟಿದ್ದೇನೆ. ಕನಿಷ್ಠ ಇದನ್ನಾದರೂ ಓದುವರಾ?
- ವಿಶ್ವೇಶ್ವರ ಭಟ್
ಕೃಪೆ: ಕನ್ನಡಪ್ರಭ 

Comments

Popular posts from this blog

Why re-examine the Gadgil Committee report on Western Ghats?

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

Important Civil service website