ಸಿದ್ದರಾಮಯ್ಯನವರೇ ಸದಾ ಫಾರಿನ್ ಟೂರ್ ಮಾಡಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಚೀನಾದಿಂದ ವಾಪಸ್ ಬಂದಿದ್ದಾರೆ. ತಮ್ಮ ಪ್ರವಾಸ ಅನುಭವಗಳನ್ನು ಅವರು ಸ್ನೇಹಿತರ ಮುಂದೆ, ಪತ್ರಕರ್ತರ ಮುಂದೆ ರಸವತ್ತಾಗಿ ಬಣ್ಣಿಸಿದ್ದಾರೆ.
ಮೂಲತಃ ಸಿದ್ದರಾಮಯ್ಯ ವಿದೇಶಿ ವ್ಯಾಮೋಹಿಯೇನಲ್ಲ. ಅವರ ಬೇರಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಹಾಗೆಂದು ವಿದೇಶ ಪ್ರವಾಸ ಮಾಡಿಲ್ಲ ಅಂತಲ್ಲ. ಅವರು ಚೀನಾಕ್ಕೆ ಹೊರಡುತ್ತಾರೆ ಎಂದು ಗೊತ್ತಾದಾಗ ಅವರ ರಾಜಕೀಯ ವಿರೋಧಿಗಳು, 'ಮುಖ್ಯಮಂತ್ರಿಗಳು ಇನ್ನೂ ಜಿಲ್ಲಾ ಪ್ರವಾಸವನ್ನೇ ಮಾಡಿಲ್ಲ. ಮುಖ್ಯಮಂತ್ರಿಯಾಗಿ ಇನ್ನೂ ಬೆಂಗಳೂರು ನಗರ ಪ್ರದಕ್ಷಿಣೆಯನ್ನೇ ಮಾಡಿಲ್ಲ. ಆಗಲೇ ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಸಿದ್ದರಾಮಯ್ಯನವರ ಆದ್ಯತೆಗಳೇನು ಎಂಬುದು ಇದರಿಂದ ಗೊತ್ತಾಗುತ್ತದೆ' ಎಂದು ಟೀಕೆ ಮಾಡಿದರು.
ಈ ಟೀಕಾಕಾರರ ಮಾತುಗಳನ್ನು ಕೇಳಿ, ಅದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯನವರು ಈ ವಿದೇಶ ಪ್ರವಾಸವನ್ನು ರದ್ದುಗೊಳಿಸಿ ಬಿಡುತ್ತಾರಾ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ.
ಮುಖ್ಯಮಂತ್ರಿಯವರು ವರ್ಲ್ಡ್ ಎಕನಾಮಿಕ್ ಫೋರಂನ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಹೋಗಿದ್ದರು. ಇದು ನಿಜಕ್ಕೂ ಪ್ರತಿಷ್ಠಿತ ಸಮಾವೇಶ. ಈ ಸಂದರ್ಭದಲ್ಲಿ ಪಾಲ್ಗೊಳ್ಳಲು ಭಾರತದ ಎಷ್ಟು ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿತ್ತೋ ಗೊತ್ತಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳಿಗೆ ಈ ಆಮಂತ್ರಣ ಸಿಕ್ಕಿದ್ದು ಹೆಮ್ಮೆಯ ಸಂಗತಿ.
ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರು, ವಾಣಿಜ್ಯ ರಂಗದ ದಿಗ್ಗಜರು, ನೀತಿ ನಿರೂಪಕರು, ರಾಜಕೀಯ ನಾಯಕರು, ಹಣಕಾಸು ಕ್ಷೇತ್ರದ 'ಮೂವರ್ಸ್ ಆ್ಯಂಡ್ ಶೇಕರ್ಸ್' ಈ ಸಮಾವೇಶದಲ್ಲಿ ಕಾಣಿಸಿಕೊಳ್ಳಲು, ಪಾಲ್ಗೊಳ್ಳಲು ಹಾತೊರೆಯುತ್ತಾರೆ. ಇದರಲ್ಲಿ ಪಾಲ್ಗೊಳ್ಳುವುದೇ ಪ್ರತಿಷ್ಠೆ. ಯಡಿಯೂರಪ್ಪನವರೂ ಮುಖ್ಯಮಂತ್ರಿಯಾಗಿದ್ದಾಗ ಹೋಗಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಈ ಎಲ್ಲ 'ಮಹಾಮಹಿಮ'ರ ಮುಂದೆ ಕರ್ನಾಟಕವನ್ನು ಪರಿಣಾಮಕಾರಿಯಾಗಿ ಷೋಕೇಸ್ ಮಾಡಿರಬಹುದು. ಇಂಥ ಸಮಾವೇಶದಲ್ಲಿ ಪ್ರತಿಷ್ಠಿತರನ್ನು ಭೇಟಿ ಮಾಡಿದಾಗ ಅವರ ಹೆಂಡರು- ಮಕ್ಕಳ ಬಗ್ಗೆ ಮಾತಾಡುವುದಿಲ್ಲವಲ್ಲ. ಅಲ್ಲಿ ಸ್ವಂತ ವಿಚಾರಕ್ಕಿಂತ ರಾಜ್ಯ, ದೇಶದ ಬಗ್ಗೆಯೇ ಮಾತಾಡಬೇಕು ತಾನೆ? ಅದರ ಸಂಪೂರ್ಣ ಪ್ರಯೋಜನವಾಗುವುದು ರಾಜ್ಯಕ್ಕೆ, ರಾಜ್ಯದ ಜನತೆಗೆ.
ಸಿದ್ದರಾಮಯ್ಯನವರು ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಹೋಗುತ್ತಾರೆಂದು ಗೊತ್ತಾದಾಗ ಸಂತಸವಾಗಿದ್ದು ಈ ನೆಪದಲ್ಲಾದರೂ ಅವರು ಡಲಿಯನ್ ಎಂಬ ನಗರವನ್ನು ನೋಡುತ್ತಾರಲ್ಲ ಎಂಬ ಕಾರಣಕ್ಕೆ. ನಿಮಗೆ ಗೊತ್ತಿರಲಿಕ್ಕಿಲ್ಲ, ಡಲಿಯನ್ ನಮ್ಮ ಮುಂದೆಯೇ ಅವತರಿಸಿದ ಪವಾಡ. ನಮ್ಮ ಮನೆಯ ಅಂಗಳದಲ್ಲಿ ನೆಟ್ಟ ಹೂವಿನ ಗಿಡ ನೋಡ ನೋಡುತ್ತಿದ್ದಂತೆ ನಮ್ಮ ಕಣ್ಮುಂದೆ ದೊಡ್ಡದಾಗಿ ಮೊಗ್ಗು ಬಿಟ್ಟು ರಾತ್ರಿ ಬೆಳಗಾಗುವುದರೊಳಗೆ ಹೂವು ಬಿಟ್ಟು ಅಚ್ಚರಿ ಮೂಡಿಸುತ್ತದಲ್ಲ, ಆ ರೀತಿಯಲ್ಲಿ ಡಲಿಯನ್ ಕೂಡ ನಮ್ಮ ಕಣ್ಣೆದುರಿಗೇ ಬೆಳೆದ ನಗರ. ನಾನು ಅಲ್ಲಿಗೆ ಮೂರು ವರ್ಷಗಳ ಹಿಂದೆ ಹೋಗಿದ್ದಾಗ, 'ಹದಿನೈದಿಪ್ಪತ್ತು ವರ್ಷಗಳ ಹಿಂದೆ ಇಲ್ಲಿ ಏನೂ ಇರಲಿಲ್ಲ. ಇಂದು ಇದನ್ನು ಹಿಡಿದು ನಿಲ್ಲಿಸುವವರು ಯಾರೂ ಇಲ್ಲ' ಎಂಬ ಮಾತುಗಳನ್ನು ಕೇಳಿದಾಗ ಮೂಕವಿಸ್ಮಿತನಾಗಿದ್ದೆ. ಡಲಿಯನ್ ಆ ಪ್ರಮಾಣದಲ್ಲಿ ಬೆಳೆದಿತ್ತು. ಒಂದು ವಿಶ್ವದರ್ಜೆಯ ನಗರ ಯಾವ್ಯಾವ ಸಂಗತಿಗಳನ್ನು ಅಪೇಕ್ಷಿಸುವುದೋ ಆ ಎಲ್ಲ ಸಂಗತಿಗಳೂ ಡಲಿಯನ್ನಲ್ಲಿದ್ದವು. ಆ ನಗರವನ್ನು ನೋಡುವುದೇ ಒಂದು ಅಭಿಮಾನದ ಅಂಶ ಎಂದು ಅಲ್ಲಿಗೆ ಭೇಟಿ ನೀಡಿದ ಯಾರಿಗಾದರೂ ಅನಿಸದೇ ಇರದು.
ಚೀನಾದ ಈಶಾನ್ಯ ಭಾಗದಲ್ಲಿರುವ ಡಲಿಯನ್ ಪೂರ್ವ ಏಷಿಯಾದ ಹೆಬ್ಬಾಗಿಲು. ಒಂದು ಕಾಲಕ್ಕೆ ಹಾಂಗ್ಕಾಂಗ್ ಅನುಭವಿಸುತ್ತಿದ್ದ ಎಲ್ಲ ಪ್ರಶಂಸೆ, ಶಹಬಾಷ್ಗಿರಿಗಳೆಲ್ಲ ಇಂದು ಡಲಿಯನ್ ಪಾಲಾಗಿವೆ. ಆ ನಿಟ್ಟಿನಲ್ಲಿ ಹಾಂಗ್ಕಾಂಗ್ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಹಾಗೆ ನೋಡಿದರೆ ಡಲಿಯನ್ನ್ನು ನಿಜವಾಗಿ ಕಟ್ಟಿದವರು ಜಪಾನಿಯರು. ಹಾಂಗ್ಕಾಂಗ್ಗಿಂತ ಡಲಿಯನ್ ತಮಗೆ ಹತ್ತಿರವಾಗುವುದೆಂದು ಆಲೋಚಿಸಿದ ಜಪಾನಿನ ಅರವತ್ತಕ್ಕೂ ಹೆಚ್ಚಿನ ಕಂಪನಿಗಳು, ಡಲಿಯನ್ನ್ನು 'ಬಂದರು ನಗರ'ವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಅಲ್ಲಿ ದಕ್ಷಿಣ ಹಾಗೂ ಉತ್ತರ ಕೊರಿಯಾಕ್ಕೆ ಸನಿಹದಲ್ಲಿರುವ ಡಲಿಯನ್ನ್ನು ಅಭಿವೃದ್ಧಿಪಡಿಸಿದರೆ, ಆ ದೇಶಗಳಲ್ಲೂ ವ್ಯಾಪಾರ ವಡಾಯಿಸಲು ಅನುಕೂಲವಾಗುವುದೆಂದು ಜಪಾನಿಯರು ಯೋಚಿಸಿದರು. ಅದರ ಫಲವೇ ಡಲಿಯನ್.
ಮುಂದಿನ ಐವತ್ತು ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ನಗರವನ್ನು ರೂಪಿಸಲಾಗಿದೆ. ಅಲ್ಲಿ ನೀವು ಯಾವುದೇ ಓರೆ-ಕೋರೆಗಳನ್ನು ಕಾಣುವುದು ಸಾಧ್ಯವಿಲ್ಲ. ಗಂಜಿ ಹಾಕಿ ಇಸ್ತ್ರಿ ಹೊಡೆದ ಬಿಳಿ ಬಟ್ಟೆಯಂತೆ ಗರಿಗರಿಯಾಗಿದೆ. ಅತ್ಯಂತ ಶ್ರದ್ಧೆ, ಪ್ರೀತಿ, ಕಳಕಳಿ, ಪರಿಶ್ರಮ, ಯೋಜನೆ, ಚಿಂತನೆಯುಂದ ಕಟ್ಟಿದ ನಗರವಿದು ಎಂದು ಅಲ್ಲಿಗೆ ಹೋದ ಯಾರಿಗಾದರೂ ಅನಿಸದೇ ಇರದು. ಈ ಕಾರಣದಿಂದ ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ತಮ್ಮ ಶಾಖೆಗಳನ್ನು ಡಲಿಯನ್ನಲ್ಲಿ ಹೊಂದಿದ್ದಾರೆ. ಚೀನಾದ ಇತರ ನಗರಗಳೊಂದಿಗೂ ಪೈಪೋಟಿಗೆ ಬಿದ್ದಿರುವ ಡಲಿಯನ್ನಿಂದ ನಾವು ಕಲಿಯುವುದು ಬೇಕಾದಷ್ಟಿವೆ. ಆ ಊರಿನ ಸುಂದರ ಬೀದಿಗಳಲ್ಲಿ ಅಡ್ಡಾಡುವಾಗ ಸಿದ್ದರಾಮಯ್ಯನವರಿಗೂ ಹೀಗೆಲ್ಲ ಅನಿಸಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಈ ಕಾರಣದಿಂದ ಅವರು ಅಲ್ಲಿಗೆ ಹೋಗಿದ್ದು ಒಳ್ಳೆಯದೇ ಆಯಿತು.
ಸಿದ್ದರಾಮಯ್ಯನವರು ಚೀನಾದ ಶಾಂಘೈ ನಗರಕ್ಕೂ ಭೇಟಿ ನೀಡಿದ್ದರು. ಅಲ್ಲಿನ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣ ನೋಡಿ ಅವರು ದಂಗಾಗಿದ್ದರು. ಬರೀ ಹತ್ತು ತಿಂಗಳಲ್ಲಿ ನಿರ್ಮಿಸಿದ ಆ ಸಭಾಂಗಣದ ನಿರ್ಮಿತಿ ಅವರಲ್ಲಿ ಹೊಸ ಪ್ರೇರಣೆಯನ್ನು ಹುಟ್ಟು ಹಾಕಿತ್ತು. ಶಾಂಘೈ ನಗರದ ಯಶಸ್ಸಿನದೇ ದೊಡ್ಡ ಕತೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಈ ನಗರಕ್ಕೆ ಹೋಗಿದ್ದರಂತೆ. ತಾವು ಉಳಿದುಕೊಂಡ ಹೋಟೆಲ್ನ ಲಿಫ್ಟ್ನಲ್ಲಿ ಇಳಿದು ಬರುವಾಗ ಶಾಂಘೈ ನಗರ ಕುರಿತು ತಮ್ಮೊಂದಿಗಿದ್ದವರೊಂದಿಗೆ ಮಾತಾಡುತ್ತಾ, 'ಇದು ಕನಸೋ, ನಗರವೋ ಗೊತ್ತಾಗುತ್ತಿಲ್ಲ. ಇನ್ನು ಇಪ್ಪತ್ತೈದು ವರ್ಷಗಳಾದರೂ ಇಂಥ ಒಂದು ನಗರವನ್ನು ನಮ್ಮಿಂದ ನಿರ್ಮಿಸಲು ಸಾಧ್ಯವಾ?' ಎಂದು ಕೇಳಿದ್ದರಂತೆ.
ಅದಿರಲಿ. ಇದೀಗ ತಾನೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರು ಆರಂಭದ ದಿನಗಳಲ್ಲಿ ಚೀನಾಕ್ಕೆ ಹೋಗಿದ್ದು ಒಳ್ಳೆಯದೇ ಆಯಿತು. ಈ ಭೇಟಿಯಿಂದ ಅವರು ಪ್ರಭಾವಿತರಾಗಿದ್ದಾರೆಂಬುದಕ್ಕೆ ಅವರು ಹೊತ್ತುಕೊಂಡು ಬಂದಿರುವ ಕೆಲವು ಯೋಜನೆಗಳೇ ಸಾಕ್ಷಿ. ಮುಖ್ಯಮಂತ್ರಿಗಳು ಬೆಂಗಳೂರಿಗೆ ಬರುತ್ತಲೇ, 'ಗಂಟೆಗೆ 250 ಕಿಮಿ ವೇಗದಲ್ಲಿ ಚಲಿಸುವ ಬುಲೆಟ್ ರೈಲು ಯೋಜನೆ ನಮ್ಮಲ್ಲೂ ಜಾರಿಗೊಳಿಸಬೇಕಿದೆ. ಅದೇನಾದರೂ ಜಾರಿಯಾದರೆ, ಬೆಂಗಳೂರಿನಿಂದ ಮೈಸೂರಿಗೆ ಬರೀ 30 ನಿಮಿಷಗಳಲ್ಲಿ ತಲುಪಲು ಸಾಧ್ಯ. ಕ್ರಮೇಣ ಈ ಯೋಜನೆಯನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸಬಹುದು' ಎಂದು ಹೇಳಿದ್ದಾರೆ. ಅಲ್ಲದೇ ಶಾಂಘೈ ನಗರದಲ್ಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದ ಮಾದರಿಯಲ್ಲಿ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪ 400 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲು ನಿರ್ಧರಿಸಿದ್ದೇನೆ ಎಂದೂ ಹೇಳಿದ್ದಾರೆ. ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ, ಮುಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬರುವಂತೆ ಸಿದ್ದರಾಮಯ್ಯ ಆಮಂತ್ರಣ ಕೊಟ್ಟು ಬಂದಿದ್ದಾರೆ. ಅಷ್ಟರಮಟ್ಟಿಗೆ ಅವರ ಚೀನಾ ಪ್ರವಾಸ ಫಲಪ್ರದವಾಗಿದೆ.
ವಿರೋಧಿಗಳು, ಟೀಕಾಕಾರರು ಇದ್ದೇ ಇರುತ್ತಾರೆ. ಅವರು ಮಾತಾಡುತ್ತಿರಲಿ. ಮುಖ್ಯಮಂತ್ರಿಯಾದವರು ಕಾಲಕಾಲಕ್ಕೆ, ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ವಿದೇಶಗಳಿಗೆ ಅಧ್ಯಯನ ಪ್ರವಾಸ ಹೋಗಬೇಕು. ಯಡಿಯೂರಪ್ಪನವರು ಚೀನಾಕ್ಕೆ ಹೋಗಿ ಬಂದ ನಂತರ, ಅವರ ಉತ್ತರಾಧಿಕಾರಿಗಳಾದ ಸದಾನಂದಗೌಡರಾಗಲಿ, ಜಗದೀಶ ಶೆಟ್ಟರ್ ಆಗಲಿ ವಿದೇಶಗಳಿಗೆ ಹೋಗಲಿಲ್ಲ. ಅಂದರೆ ಈ ಐದು ವರ್ಷಗಳಲ್ಲಿ ವಿದೇಶಗಳಲ್ಲಾದ ಬದಲಾವಣೆ, ಸುಧಾರಣೆಯನ್ನು ನಮ್ಮ ಮುಖ್ಯಮಂತ್ರಿಗಳಾದವರು ನೋಡಿಯೇ ಇಲ್ಲ ಎಂದಂತಾಯಿತು. ರಾಜ್ಯಕ್ಕೆ ಮುಖ್ಯಮಂತ್ರಿಗಿಂತ ದೊಡ್ಡ ರಾಯಭಾರಿ, ಈಊಕ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಇಲ್ಲವೇ ಇಲ್ಲ. ನಮ್ಮ ರಾಜ್ಯವನ್ನು ಅವರಿಗಿಂತ ಪರಿಣಾಮಕಾರಿಯಾಗಿ ಬೇರೆ ಯಾರೂ 'ಮಾರ್ಕೆಟ್' ಮಾಡಲಾರರು. ಚೀನಾದಲ್ಲಿನ ಒಂದು ರೈಲು ಪ್ರಯಾಣದ ಅನುಭವದಿಂದಾಗಿ ಪ್ರಭಾವಿತರಾಗಿ ಸಿದ್ದರಾಮಯ್ಯನವರು ನಾವೂ ಇಲ್ಲಿ ಅಂಥ ರೈಲನ್ನು ಆರಂಭಿಸೋಣ ಎನ್ನುವುದಾದರೆ, ಮುಖ್ಯಮಂತ್ರಿಗಳ ವಿದೇಶ ಪ್ರಯಾಣಕ್ಕೆ ಬೇರೆ ಆಯಾಮವೇ ಕಲ್ಪಿಸಬೇಕಾಗುತ್ತದೆ.
ನಮ್ಮಲ್ಲಿ ರಾಜಕಾರಣಿಗಳು, ಮಂತ್ರಿಗಳು, ಮುಖ್ಯಮಂತ್ರಿಗಳು ವಿದೇಶ ಪ್ರಯಾಣಕ್ಕೆ ಹೊರಟರೆ, ಅವರನ್ನು ನಾವು ನೋಡುವ ದೃಷ್ಟಿಯೇ ಬೇರೆ. ಅವರು ಮಜಾ ಉಡಾಯಿಸಲಿಕ್ಕೆ ಹೋಗುತ್ತಾರೆಂದೇ ಭಾವಿಸುತ್ತೇವೆ. ಆ ಉದ್ದೇಶಕ್ಕೆ ಹೋಗುವವರೂ ಇದ್ದಾರೆ, ಅದು ಬೇರೆ ಮಾತು. ಆದರೆ ಮುಖ್ಯಮಂತ್ರಿಯಾದವರು ಕಾಲಕಾಲಕ್ಕೆ ವಿದೇಶಗಳಿಗೆ ಹೋಗುವುದರಿಂದ, ಅಧ್ಯಯನ ಪ್ರವಾಸ ಕೈಗೊಳ್ಳುವುದರಿಂದ, ನೋಡಿದ ಉತ್ತಮ ಸಂಗತಿಗಳನ್ನು ಇಲ್ಲಿ ಅನುಷ್ಠಾನಗೊಳಿಸುವುದರಿಂದ ಅದರಿಂದಾಗುವ ಲಾಭ ಅಷ್ಟಿಷ್ಟಲ್ಲ. ಸಿಂಗಾಪುರ ಹಾಗೂ ಚೀನಾದ ಅಧ್ಯಕ್ಷರು, ಪ್ರಧಾನಿಗಳು ಕಾಲಕಾಲಕ್ಕೆ ವಿದೇಶ ಪ್ರವಾಸ ಮಾಡುತ್ತಾರೆ. ಹೋಗುವಾಗ ತಮ್ಮ ದೇಶದ ಖಾಸಗಿ ಕಂಪನಿಗಳ ಮುಖ್ಯಸ್ಥರನ್ನೂ ಕರೆದುಕೊಂಡು ಹೋಗುತ್ತಾರೆ. ಅವರ ಪರವಾಗಿಯೂ ಲಾಬಿ ಮಾಡುತ್ತಾರೆ. ಎಲ್ಲವನ್ನೂ ಸರ್ಕಾರವೇ ಮಾಡಲಾಗುವುದಿಲ್ಲ.
ಉದಾಹರಣೆಗೆ ನಮ್ಮ ಮುಖ್ಯಮಂತ್ರಿ ಚೀನಾಕ್ಕೆ ಹೋಗುವಾಗ ಹತ್ತಾರು ಸಾಫ್ಟ್ವೇರ್ ಕಂಪನಿಗಳ ಮುಖ್ಯಸ್ಥರು, ಬಿಪಿಒ ಕಂಪನಿಗಳ ಪ್ರಮುಖರನ್ನು ಕರೆದುಕೊಂಡು ಹೋಗಿ ಅವರಿಗೆ ಅಲ್ಲಿನ ಬಿಜಿನೆಸ್ ಧುರೀಣರ ಜತೆ ಕೈ ಜೋಡಿಸುವಂತೆ ಮಾಡಿದರೆ, ಅವರ ನಡುವೆ ಒಪ್ಪಂದವೋ ಮೈತ್ರಿಯೋ ಏರ್ಪಟ್ಟು ವ್ಯಾಪಾರ ಕುದುರಬಹುದು. ಅದರಿಂದ ನಮ್ಮ ಹತ್ತಾರು ಸಾವಿರ ಹುಡುಗರಿಗೆ ಕೆಲಸ ಸಿಗಬಹುದು. ಹೊಸ ಕಂಪನಿಗಳು ಬರುವುದರಿಂದ, ನಮ್ಮವರೇ ಹೊಸ ಕಂಪನಿಗಳನ್ನು ಶುರು ಮಾಡುವುದರಿಂದ ಸರ್ಕಾರಕ್ಕೂ ತೆರಿಗೆ ಮೂಲಕ ಹೆಚ್ಚಿನ ಸಂಪನ್ಮೂಲ ಹರಿದು ಬರಲು ಸಹಾಯಕವಾಗಬಹುದು. ಇದರಿಂದ ಆರ್ಥಿಕ ಪ್ರಗತಿ, ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬಹುದು. ನಮ್ಮ ರಾಜ್ಯದಲ್ಲಿ ಸಾಫ್ಟ್ವೇರ್ ಕಂಪನಿ ಬರುವುದಕ್ಕೆ ಮುನ್ನ ಹೇಗಿತ್ತು, ಈಗ ಹೇಗಿದೆಯೆಂಬುದನ್ನು ತುಲನಾತ್ಮಕವಾಗಿ ನೋಡಬಹುದು. ಅಮೆರಿಕ ಅಧ್ಯಕ್ಷರು ವಿದೇಶ ಪ್ರಯಾಣಕ್ಕೆ ಹೋದಾಗಲೂ ಇದನ್ನೇ ಮಾಡುತ್ತಾರೆ. ಇಂದು ಚೀನಾ ಇಡೀ ಜಗತ್ತನ್ನು ವ್ಯಾಪಿಸಿದ್ದರೆ, ಚೀನಾದ ಉತ್ಪನ್ನಗಳು ಮನೆಮನೆಯನ್ನು ತಲುಪಿದ್ದರೆ, ಅದಕ್ಕೆ ಚೀನಾ ಸರ್ಕಾರದ ಯೋಗದಾನ ಬಹಳ ದೊಡ್ಡದು.
ಮುಖ್ಯಮಂತ್ರಿಯಾದವರು ವಿಧಾನಸೌಧದಲ್ಲಿ ಕುಳಿತುಕೊಳ್ಳಬೇಕು. ಸರಿ, ಆದರೆ ಅಲ್ಲಿಯೇ ಗೂಟ ಹೊಡೆದುಕೊಂಡು ಕುಳಿತಿರಬಾರದು. ದೇಶ-ದೇಶ ಸುತ್ತಬೇಕು. ಹೊಸ ನಾಯಕರ ಹೆಗಲ ಮೇಲೆ ಕೈ ಹಾಕಬೇಕು. ಹೊಸ ಅವಕಾಶಗಳಿಗೆ ತೆರೆದುಕೊಳ್ಳಬೇಕು.
ನಾನು ಇತ್ತೀಚೆಗೆ ದುಬೈಯನ್ನು ಕಟ್ಟಿದ ಮಹಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಬರೆದ My Vision: challenges in the Race for Excellence ಎಂಬ ಅವರ ಆತ್ಮಕತೆಯನ್ನು ಓದುತ್ತಿದ್ದೆ. ಇದು ಬರೀ ಅವರ ಕತೆ ಮಾತ್ರ ಅಲ್ಲ, ದುಬೈ ಕತೆಯೂ ಹೌದು. ಕೆಲ ವರ್ಷಗಳ ಹಿಂದೆ ಮಕ್ತೌಮ್ ಅವರು ಸಿಂಗಾಪುರಕ್ಕೆ ಹೋಗಿದ್ದರು. ಸುತ್ತಲೂ ಸಮುದ್ರವನ್ನೇ ಹೊಂದಿರುವ ಸಿಂಗಾಪುರ ಕುಡಿಯುವ ನೀರಿನ ಪೂರೈಕೆಗೆ ಯಾವ ವ್ಯವಸ್ಥೆ ಮಾಡಿಕೊಂಡಿದೆಯೆಂಬುದನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಅದನ್ನು ದುಬೈಯಲ್ಲೂ ಜಾರಿಗೆ ತರಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಸಿಂಗಾಪುರಕ್ಕೆ ಕೆಲವು ವರ್ಷಗಳ ಹಿಂದಿನವರೆಗೆ ಕುಡಿಯುವ ನೀರು ಪಕ್ಕದ ಮಲೇಷಿಯಾದಿಂದ ಬರುತ್ತಿತ್ತು. ಕುಡಿಯುವ ನೀರಿಗೆ ನೆರೆಯ ದೇಶವನ್ನು ಅವಲಂಬಿಸುವುದು ಒಳ್ಳೆಯ ಸೂಚನೆ ಅಲ್ಲವೆಂದು, ಸಮುದ್ರದ ನೀರನ್ನು ಸೋಸಿ ಅದನ್ನೇ ಕುಡಿಯಲು ಬಳಸುವ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿತು. ಇಂದು ಎಂಥ ಸ್ಥಿತಿಯಿದೆಯೆಂದರೆ, ಸಿಂಗಾಪುರ ಕುಡಿಯುವ ನೀರಿಗೆ ಮಲೇಷಿಯಾವನ್ನು ಅವಲಂಬಿಸುವ ಮಾತು ದೂರವೇ ಉಳಿಯಿತು, ಮಲೇಷಿಯಾಕ್ಕೆ ಬೇಕಾದರೆ ಕುಡಿಯುವ ನೀರನ್ನು ಕೊಡಬಲ್ಲುದು. ಸಮುದ್ರ ಬತ್ತುವ ತನಕ ಸಿಂಗಾಪುರಕ್ಕೆ ನೀರಿನ ಸಮಸ್ಯೆ ಎಂಬುದಿಲ್ಲ.
ಮಹಮದ್ ಬಿನ್ ರಶೀದ್ ಅಲ್ ಮಕ್ತೌಮ್ ಇದನ್ನೇ ದುಬೈಯಲ್ಲಿ ಮಾಡಿದರು. ಇಂದು ದುಬೈ ಕುಡಿಯುವ ನೀರಿಗೆ ಸಮುದ್ರವನ್ನು ಅವಲಂಬಿಸಿದೆ. ಸಮುದ್ರದ ನೀರಿನಲ್ಲಿರುವ ಲವಣದ ಅಂಶವನ್ನು ಸೋಸಿ ನೀರು ಕೊಡುವ (Build, operate, Transfer) ಘಟಕಗಳನ್ನು ಸ್ಥಾಪಿಸಿದೆ. ಹೀಗಾಗಿ ದುಬೈಯಲ್ಲಿ ನೀರಿನ ಸಮಸ್ಯೆ ಇಲ್ಲ. ಕೆಲವೊಮ್ಮೆ ಸಮುದ್ರದಿಂದ ಪಡೆದ ನೀರು ಹೆಚ್ಚಾಗಿ ಪುನಃ ಸಮುದ್ರಕ್ಕೆ ಬಿಡಲಾಗುತ್ತದೆ. ಪಕ್ಕದಲ್ಲಿ ಸಮುದ್ರವಿರುವಾಗ ಉಪ್ಪಿಗೊಂದೇ ಅಲ್ಲ, ನೀರಿಗೂ ಬರವಿಲ್ಲ. ತಾವು ಸಿಂಗಾಪುರದಲ್ಲಿ ಕಂಡಿದ್ದನ್ನು ದುಬೈಯಲ್ಲಿ ಮಕ್ತೌಮ್ ಜಾರಿಗೊಳಿಸಿದ್ದರು. ಈ ಕೃತಿಯಲ್ಲಿ ಮಕ್ತೌಮ್ ಒಂದು ಮಾತು ಹೇಳುತ್ತಾರೆ- ಇಂದು ನಾವು ಪೈಪೋಟಿ ಯುಗದಲ್ಲಿದ್ದೇವೆ. ಒಂದು ತಿಂಗಳು ಹಿಂದೆ ಬಿದ್ದರೆ, ಎಷ್ಟೋ ವರ್ಷಗಳ ಕಾಲ ಮುಂದೆ ಬರಲು ಆಗುವುದಿಲ್ಲ. ಆಫ್ರಿಕಾದ ಕಾಡಿನಲ್ಲಿರುವ ಕೃಷ್ಣಮೃಗ ಸಿಂಹದ ಕೈಯಿಂದ ತಪ್ಪಿಸಿಕೊಳ್ಳಲು ವೇಗದಿಂದ ಓಡುವುದು ಹೇಗೆ ಎಂದು ಪ್ರತಿದಿನವೂ ಯೋಚಿಸುತ್ತಿರುತ್ತದೆ. ತನಗಿಂತ ಕೃಷ್ಣಮೃಗ ವೇಗವಾಗಿ ಓಡಿದರೆ ತಾನು ಉಪವಾಸ ಬೀಳಬೇಕಾಗುತ್ತದೆಂದು ಸಿಂಹ ಅದಕ್ಕಿಂತ ವೇಗವಾಗಿ ಓಡುವ ಬಗ್ಗೆ ಯೋಚಿಸುತ್ತಿರುತ್ತದೆ. ನೀವು ಕೃಷ್ಣ ಮೃಗವೋ, ಸಿಂಹವೋ ಗೊತ್ತಿಲ್ಲ ಆದರೆ ನಿಮ್ಮ ಉಳಿವಿಗಾಗಿ ಬೇರೆಯವರಿಗಿಂತ ವೇಗವಾಗಿ ಓಡುವುದು ಅನಿವಾರ್ಯ. ಅದನ್ನು ದುಬೈಯಲ್ಲಿ ನಾವು ಮಾಡುತ್ತಿದ್ದೇವೆ.'
ಈ ರೀತಿಯ ವೇಗದ ಓಟವನ್ನು ಜಗತ್ತಿನ ಎಲ್ಲಾ ದೇಶಗಳಲ್ಲೂ ಕಾಣಬಹುದು. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ, ಬೆಂಗಳೂರಿನ ಸ್ಥಿತಿ ಕಂಡು ದಿಗ್ಭ್ರಮೆಯಾಗುತ್ತದೆ. ಮೂಲಸೌಕರ್ಯವೇ ಇಲ್ಲದೇ ಬೆಂಗಳೂರು ತತ್ತರಿಸುತ್ತಿದೆ. ಮೇಲ್ಸೇತುವೆ ನಿರ್ಮಿಸುತ್ತಿದ್ದೇವೆ, ಆದರೆ ಕೆಳಗಿನ ರಸ್ತೆಗಳೆಲ್ಲ ಹೊಪ್ಪಳಿಕೆಯೆದ್ದು, ಹೊಂಡ ಬಿದ್ದು ಅಧೋಗತಿಗಿಳಿದಿದೆ. ಈ ರಸ್ತೆಯಲ್ಲಿ ಸಂಚರಿಸುವುದೇ ಸಾಹಸ. ನಮಗಿನ್ನೂ ಹೊಂಡವಿಲ್ಲದ ರಸ್ತೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಲು ಸಾಧ್ಯವಾಗಿಲ್ಲ.
ಹಾಗೆಂದು ನಿರಾಶವಾದಿಗಳಾಗಬೇಕಿಲ್ಲ. ಸಾವಿರಾರು ಕೋಟಿ ರೂಪಾಯಿ ಯೋಜನೆಗಳಿಗೆ ವಿದೇಶಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಹಾಯ ಮಾಡುತ್ತವೆ. ದೊಡ್ಡ ಯೋಜನೆಗಳನ್ನು ಜಾರಿಗೊಳಿಸಿ, ನಿಶ್ಚಿತ ಕಾಲದವರೆಗೆ ನಿರ್ವಹಣೆ ಮಾಡಿ, ಆನಂತರ ಸರ್ಕಾರಕ್ಕೆ ಒಪ್ಪಿಸುವ (Build, operate, Transfer) ಯೋಜನೆಯಡಿ ಎಂಥಾ ಬೃಹತ್ ಕಾಮಗಾರಿಯನ್ನಾದರೂ ಕೈಗೆತ್ತಿಕೊಂಡು ಸಾಕಾರಗೊಳಿಸಬಹುದು. ದುಬೈನಗರ ಇಂದು ಈ ಉನ್ನತಿಗೆ ಬಂದಿದ್ದರೆ ಅದಕ್ಕೆ ಕಾರಣ ಅಲ್ಲಿನ ನಿವಾಸಿಗಳ ಹೂಡಿಕೆ ಅಲ್ಲ. ಆ ನಗರವನ್ನು ಇಡೀ ವಿಶ್ವಕ್ಕೆ ತೆರೆದಿಟ್ಟು, ಹೂಡಿಕೆಗೆ ಎಲ್ಲ ಬಾಗಿಲುಗಳನ್ನು ತೆರೆದಿದ್ದು. ಸಿಂಗಾಪುರ, ಶಾಂಘೈ, ಡಲಿಯನ್ ಹೀಗೆ ಬೆಳೆಯುವ ನಗರಗಳು ಹೇಳುವ ಕತೆ ಇದೇ.
ಸಿದ್ದರಾಮಯ್ಯನವರು ಮುಕ್ತವಾಗಿ ತೆರೆದುಕೊಂಡರೆ, ರಾಜ್ಯವೂ ತೆರೆದುಕೊಳ್ಳುತ್ತದೆ. ಒಂದು ಲೀಟರ್ ಹಾಲಿಗಾಗಿ ವಿಮಾನದಲ್ಲಿ ಆರು ತಾಸು ದೂರದಲ್ಲಿರುವ ನಾರ್ವೆಯನ್ನು ನೆಚ್ಚಿಕೊಂಡಿದ್ದ ಐಸ್ಲ್ಯಾಂಡ್ ಎಂಬ ದೇಶ ಇಂದು ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ರವಾಂಡಾದಂಥ ದೇಶ ದೇಶದೆಲ್ಲೆಡೆ ಪ್ಲಾಸ್ಟಿಕ್ನ್ನು ನಿಷೇಧಿಸಿ ಸ್ವಚ್ಛತೆಯಲ್ಲಿ ಬೆರಗು ಮೂಡಿಸಿದೆ. ಎಲ್ಲೋ ಇದ್ದ ಚೀನಾ, ನಮ್ಮ ಪಕ್ಕದ ಚೀನಾ ಇಂದು ಅಮೆರಿಕಕ್ಕೆ ಸೆಡ್ಡು ಹೊಡೆಯುವಷ್ಟು ಬಲಿಷ್ಠವಾಗಿ ಬೆಳೆದಿದೆ. ಇವೆಲ್ಲವೂ ನಮಗೂ ಸಾಧ್ಯವಿದೆ. Definitely, we deserve better life. ಸಿದ್ದರಾಮಯ್ಯನವರೇ, ವಿದೇಶ ಪ್ರಯಾಣ ಮಾಡಿ. ಅದರಿಂದ ಹೆಚ್ಚು ಹಣ ಖರ್ಚಾಗುವುದಿಲ್ಲ. ನೀವು ರಾಜ್ಯದಲ್ಲಿದ್ದರೇ ಹೆಚ್ಚು ಹಣ ಬೇಕಾದೀತು. ನಮ್ಮ ರಾಜ್ಯವನ್ನು ಸರಿಯಾಗಿ 'ಮಾರ್ಕೆಟ್' ಮಾಡಿ. ನೀವೇ ನಮ್ಮ ರಾಯಭಾರಿ. ಈ ಕೆಲಸ ನೀವೇ ಮಾಡಬೇಕು. ಅದರ ಫಲ ಮಾತ್ರ ರಾಜ್ಯಕ್ಕೆ ಸಿಗಲಿ.
- ವಿಶ್ವೇಶ್ವರ ಭಟ್
ಕೃಪೆ: ಕನ್ನಡಪ್ರಭ
- ವಿಶ್ವೇಶ್ವರ ಭಟ್
ಕೃಪೆ: ಕನ್ನಡಪ್ರಭ
Comments
Post a Comment